ವಾರಾಣಸಿಯ ನ್ಯಾಯಾಲಯದ ಆದೇಶದಂತೆ ಜ್ಞಾನವ್ಯಾಪಿ ಮಸೀದಿಯ ಪ್ರದೇಶದಲ್ಲಿ ಸರ್ವೇಕ್ಷಣೆ ನಡೆದು ಅಲ್ಲಿ ಹಿಂದೂ ಸಮುದಾಯದ ದೇವರುಗಳ ಪ್ರತಿಮೆಗಳು ಮತ್ತು ಭಾವನಾತ್ಮಕ ಅವಶೇಷಗಳು ದೊರೆತಿವೆ ಎಂದು ಹೇಳಲಾಗಿದೆ. ಇದರಿಂದ ಒಂದು ಗುಂಪು ವಿಜಯೋತ್ಸವ ಆಚರಿಸುತ್ತಲೇ ಇದ್ದರೆ ಮತ್ತೊಂದು ಗುಂಪು ಏನನ್ನೋ ಕಳೆದುಕೊಂಡ ಶೋಕದಲ್ಲಿದೆ. ಇಂಥ ಘಟನೆಗಳು ನಡೆಯಬಾರದು ನಾಗರೀಕ ಸಮಾಜದಲ್ಲಿ ನಮಗೆಲ್ಲಾ ಮಾಡಲು ಬೇರೆ ಬೇಕಾದಷ್ಟು ಕೆಲಸಗಳಿವೆ. ಹೀಗೆಲ್ಲಾ ಇತಿಹಾಸದ ಘಟನೆಗಳನ್ನು ತಿದ್ದುತ್ತಾ ಕುಳಿತರೆ ಅದಕ್ಕೆ ಅಂತ್ಯವಿಲ್ಲ ಹಾಗೂ ಅದರ ಪರಿಣಾಮಕ್ಕೂ ಕೊನೆಯಿಲ್ಲ.
ಪ್ರಸ್ತುತ ಅತ್ಯಂತ ಪ್ರಸಿದ್ಧವೆನಿಸಿರುವ ಕೆಲವು ಸ್ಥಳಗಳನ್ನು ನಿದರ್ಶನವಾಗಿ ಗಮನಿಸೋಣ. ಉದಾಹರಣೆಗೆ ಪುರಿಯ ಜಗನ್ನಾಥ, ಪಂಢರಾಪುರದ ವಿಠ್ಠಲ, ಧರ್ಮಸ್ಥಳದ ಮಂಜುನಾಥ, ಉಡುಪಿ ಕೃಷ್ಣ, ತಿರುಪತಿಯ ತಿಮ್ಮಪ್ಪ, ಬಿಳಿಗಿರಿ ರಂಗನಾಥ, ಮಲೆಮಾದೇಶ್ವರ ಮೊದಲಾದ ಸ್ಥಳಗಳು ಹೊಂದಿರುವ ಪುರಾಣೇತಿಹಾಸಗಳನ್ನು ಆಧಾರ ಸಹಿತ ಹುಡುಕಲು ಅಥವಾ ಕೆದಕಲು ಆರಂಭಿಸಿದರೆ ಅವುಗಳಿಂದ ಹೊರಬರುವ ಪುರಾವೆಗಳು ಎಂದಿಗೂ ಮುಗಿಯದ ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ತರತ್ತವೆ. ಉದಾಹರಣೆಗೆ ತಿರುಪತಿಯ ತಿಮ್ಮಪ್ಪ ವೈಷ್ಣವರ ಆರಾಧ್ಯದೈವ, ವಿಷ್ಣುವಿನ ಅವತಾರವೆಂದು ಹೇಳಲಾಗುತ್ತದೆ. ಆದರೆ ಈ ತಿಮ್ಮಪ್ಪನ ವೆಂಕಟರಮಣ, ವೆಂಕಟೇಶ, ಬಾಲಾಜಿ ಮೊದಲಾದ ಜನಪ್ರಿಯ ಹೆಸರುಗಳು ಅತ್ಯಂತ ಪ್ರಸಿದ್ಧ ವಿಷ್ಣು ಸಹಸ್ರನಾಮದಲ್ಲಿ ಬರುವುದೇ ಇಲ್ಲ. ಅದಿರಲಿ ಆದರೆ 13ನೆಯ ಶತಮಾನದ ವೇಳೆಗೆ ರಾಮಾನುಜಾಚಾರ್ಯರು ಬಂದು ಇದಕ್ಕೊಂದು ನೆಲೆ ಕಾಣಿಸುವವರೆಗೆ ಇದಕ್ಕೆ ಹೇಳಿಕೊಳ್ಳುವ ಮಹತ್ವ ಇದ್ದಂತೆ ಕಾಣಿಸುವುದಿಲ್ಲ. ಆದರೆ ಅದಕ್ಕಿಂತ ಮುಂಚೆ ಶಂಕರಾಚಾರ್ಯರು ಅಲ್ಲಿ ಶ್ರೀಚಕ್ರ ಸ್ಥಾಪಿಸಿದ್ದರೆಂದು ಹೇಳಲಾಗುತ್ತದೆ. ಇದಕ್ಕೂ ಮುಂಚೆ ಅದು ಶೈವಕ್ಷೇತ್ರವಾಗಿತ್ತು ಅದಕ್ಕೂ ಮೊದಲು ಇಂದಿನ ವೆಂಕಟೇಶ ಮೂರ್ತಿ ಒಬ್ಬ ಜೈನ ತೀರ್ಥಕರನ ವಿಗ್ರಹವೆಂದು ವಾದಗಳಿವೆ. ಇದಕ್ಕೆ ಪೂರಕವಾಗಿ ಅಲ್ಲಿನ ಕೆಲವು ಸಂಪ್ರದಾಯ, ಆಚರಣೆಗಳನ್ನು ನಿದರ್ಶನವಾಗಿ ಕೊಡಲಾಗುತ್ತದೆ. ಕೆಲವು ಪೂರಕ ಕುರುಹುಗಳು ಕೂಡ ಇದಕ್ಕೆ ಲಭಿಸುತ್ತವೆ. ಅಂತೆಯೇ ಜಗನ್ನಾಥ, ವಿಠ್ಠಲ, ಮಾದೇಶ್ವರ, ಬಿಳಿಗಿರಿ ರಂಗ ಇವರೆ¯್ಲ ಆದಿವಾಸಿ ಸಮುದಾಯಗಳ ಮೂಲದೈವಗಳೆಂಬ ಪ್ರತೀತಿ ಇದೆ. ಇಂದು ನಮ್ಮೆದುರು ಇರುವ ಅನೇಕಾನೇಕ ಶೈವ ದೇವಾಲಯಗಳು ಮೂಲತಃ ಜೈನ ಬಸದಿಗಳೆಂದು ಹೇಳಲಾಗುತ್ತದೆ.
ಇದಕ್ಕೆ ಪೂರಕವಾಗಿ ಅನೇಕ ಸಾಹಿತ್ಯಕ ಮತ್ತು ಐತಿಹಾಸಿಕ ದಾಖಲೆಗಳು ದೊರೆಯುತ್ತವೆ. ಹನ್ನೆರಡು ಮತ್ತು ಹದಿಮೂರನೆಯ ಶತಮಾನಗಳಲ್ಲಿ ವೀರಶೈವ ಮತದ ಚಳವಳಿ ತೀವ್ರವಾಗಿ ನಡೆದಿತ್ತು. ಜೈನ ಮತ್ತು ವೀರಶೈವ ಮತಗಳ ನಡುವೆ ಘರ್ಷಣೆಗಳೂ ನಡೆಯುತ್ತಿದ್ದವು. ವಿಜಾಪುರ ಜಿಲ್ಲೆಯ ತಾಳಿಕೋಟೆಯ ಶಾಸನದಲ್ಲಿ (ಪಗರಟಿಗೆ 300 ಹಾಗೂ ವಿರೂಪರಸನ ಶಾಸನಗಳು) ಜೈನರ ರಕ್ತ ಕಕ್ಕಿಸಿದ, ನಾಲಗೆ ಕಿತ್ತ, ಚರ್ಮ ಸುಲಿದ, ಜೈನ ದೇಗುಲಗಳನ್ನು ನೆಲಸಮ ಮಾಡಿದ ವಿವರಗಳಿವೆ. (ಈ ಬಗ್ಗೆ ಹಂಪನಾ ಅವರ ಲೇಖನ ಗಮನಿಸಬಹುದು- ಜನ್ನ- ಒಂದು ಮರು ಚಿಂತನೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2008, ಪುಟ 1-10)ವೀರಶೈವರ ದಾಳಿಗೆ ಸಿಲುಕಿ ತತ್ತರಿಸಿದ ಜೈನರು ಉತ್ತರ ಭಾಗವನ್ನು ತೊರೆದು ದಕ್ಷಿಣದ ಹೊಯ್ಸಳರ ಆಶ್ರಯಕ್ಕೆ ಬಂದರು.
ಈ ರೀತಿ ಇತಿಹಾಸದಲ್ಲಿ ಆಯಾ ಕಾಲದಲ್ಲಿ ಪ್ರಬಲವಾಗಿದ್ದ ಸಮುದಾಯಗಳು ಮತಧರ್ಮ ಅನುಸರಿಸುತ್ತಿದ್ದ ರಾಜರು ದುರ್ಬಲ ಸಮುದಾಯ ಮತ್ತು ಮತಧರ್ಮಗಳ ಮೇಲೆ ಸಾಕಷ್ಟು ದಬ್ಬಾಳಿಕೆ ಮಾಡಿದ್ದು ಇತಿಹಾಸದಲ್ಲೇ ದಾಖಲೆ ಸಮೇತ ಲಭಿಸುತ್ತದೆ. ಇವುಗಳನ್ನೆಲ್ಲ ಮೂಲರೂಪಕ್ಕೆ ತರುತ್ತೇವೆ ಎಂದು ಹೊರಟರೆ ಸಮಾಜದ ಶಾಂತಿ ಮತ್ತು ನೆಮ್ಮದಿಯ ಕಥೆ ಏನಾಗಬೇಕು? ಇದಕ್ಕೆ ಕೊನೆಯಾದರೂ ಎಂದು?
ಭಾರತೀಯ ಪರಂಪರೆ ಮತ್ತು ಸಂಪ್ರದಾಯದಲ್ಲಿ ಅನೇಕ ಆಧ್ಯಾತ್ಮಿಕ ಧಾರೆಗಳು ಮತ್ತು ಚಿಂತನೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಆಚರಣೆಗಳು ಶತಮಾನಗಳಿಂದ ಹಾಸುಹೊಕ್ಕಾಗಿ ಮುಂದುವರೆದುಕೊಂಡು ಬರುತ್ತಿವೆ. ಇವುಗಳಿಗೆ ಬೇಕಾದಷ್ಟು ಪರ-ವಿರೋಧ ದಾಖಲೆಗಳು ಲಭಿಸಬಹುದು. ಆದರೆ ಇವೆಲ್ಲವುಗಳ ಉದ್ದೇಶ ಸಂತೋಷ ಮತ್ತು ಆನಂದವನ್ನು ಪಡೆಯುವುದೇ ಆಗಿದೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಇದನ್ನು ಮೂಲಾಧಾರವಾಗಿಟ್ಟುಕೊಂಡು ಭಾರತೀಯ ಸಮುದಾಯಗಳು ಪರಂಪರೆಯನ್ನು ರೂಪಿಸಿಕೊಂಡಿವೆ. ಈ ಸಮಾಜದಲ್ಲಿ ಸೇರಿಹೋದ ಸಮುದಾಯಗಳು ಕೂಡ ಇದೇ ಮನಃಸ್ಥಿತಿಯನ್ನು ರೂಪಿಸಿಕೊಂಡಿವೆ. ಉದಾಹರಣೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ಸಿದ್ಧಿ ಸಮುದಾಯ ಮೂಲತಃ ಮೂಜಾಂಬಿಕದಿಂದ ಪೋರ್ಚುಗಿಸರ ಕಾರಣದಿಂದ ಭಾರತಕ್ಕೆ ಬಂದಿತೆಂದು ಹೇಳಲಾಗುತ್ತದೆ. ಈಗ ಆ ಸಮುದಾಯ ತನ್ನ ಮೂಲ ಭಾಷೆ, ಮೂಲದೈವ, ಆಚರಣೆ ಇತ್ಯಾದಿಗಳನ್ನು ಉಳಿಸಿಕೊಂಡಿಲ್ಲ ಅದು ಸಂಪೂರ್ಣ ಭಾರತೀಯ ಸಮುದಾಯಗಳ ಅನುಕರಣೆಯನ್ನೇ ತನ್ನದಾಗಿಸಿಕೊಂಡಿದೆ. ತಾನಿರುವ ಪರಿಸರದ ಭಾಷೆ ಸಂಪ್ರದಾಯಗಳನ್ನು ತನ್ನದಾಗಿಸಿಕೊಂಡು ಸಂತೋಷದಿಂದಿದೆ. ಉದಾಹರಣೆಗೆ ಒಂದು ಸಿದ್ಧಿ ಕುಟುಂಬ ತನ್ನ ಸಂಪರ್ಕಕ್ಕೆ ಬಂದ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಾಚಾರಗಳನ್ನು ಆನಂದದಿಂದ ಒಪ್ಪಿಕೊಂಡು ಯಾವಾಗ ಯಾವುದು ಸರಿ ಅನಿಸುತ್ತದೆಯೋ ಅದನ್ನು ಅನುಸರಿಸಿ ಆನಂದದಿಂದ ಬದುಕುತ್ತಿದೆ. ಉದಾಹರಣೆಗೆ ಗಣಪಾಸಿದ್ಧಿಯ ಮಗ ಮಹಮ್ಮದ ಸಿದ್ಧಿ ಎಂದು, ಮಗಳು ಪಾತಿಮಾ ಸಿದ್ಧಿ ಎಂದು ಹೆಸರು ಇಟ್ಟುಕೊಂಡಿರಬಹುದು. ಅವರು ತಮಗೆ ಇಷ್ಟವಾದವರನ್ನು ಮದುವೆಯೂ ಆಗಬಹುದು. ಇಂಥ ಅನೇಕ ಮದುವೆಗಳು ಈಗಲೂ ಅವರಲ್ಲಿ ನಡೆಯುತ್ತದೆ. ಆ ಪ್ರದೇಶದ ಬ್ರಾಹ್ಮಣ ಮಹಿಳೆಯರು ಕೂಡ ಸಿದ್ಧಿಗಳೊಂದಿಗೆ ಸಂತೋಷದಿಂದ ಸಂಸಾರಮಾಡಿಕೊಂಡು ಇರುವ ನಿದರ್ಶನಗಳಿಗೆ ಕೊರತೆಯಿಲ್ಲ.
ಹೀಗೆ ನಮ್ಮ ಸಮುದಾಯ ಎಲ್ಲ ಕಾಲದಲ್ಲೂ ಸಂತೋಷದ ಮತ್ತು ಆಯಾ ಸಂದರ್ಭಕ್ಕೆ ಸರಿಎನಿಸಿದ ಘಟನೆಗಳನ್ನು ಆಧರಿಸಿ ಬರುತ್ತಿದೆ. ಇವುಗಳನ್ನು ಇನ್ನಯಾವುದೋ ಕಾಲದಲ್ಲಿಟ್ಟು ಸರಿಪಡಿಸಲು ಹೋಗುವುದು ಹೇಗೆ ಸಮಂಜಸವಾಗುತ್ತದೆ? ಹಾಗೂ ಇವುಗಳಿಂದ ಆಗುವ ಪ್ರಯೋಜನವಾದರೂ ಏನು? ನಮಗೆ ಅಶಾಂತಿಯೊಂದನ್ನು ಬಿಟ್ಟು ಬೇರೆ ಲಭಿಸುವುದಾದರೂ ಏನು? ಹೀಗಾಗಿ ಇತಿಹಾಸದ ಘಟನೆಗಳನ್ನು ಅಲ್ಲಿಗೇ ಬಿಟ್ಟು ಮುಂದೆ ಸಾಗುವುದು ಸರಿ ಅನಿಸುತ್ತದೆ.

