ಹಿರಿಯರಾದ ಎ ಎನ್ ಮೂರ್ತಿರಾವ್, ಗೊರೂ ರಾಮಸ್ವಾಮಿ ಅಯ್ಯಂಗಾರ್ ಅವರಂಥವರು ಬೆಳೆಸಿದ ಕನ್ನಡ ಲಲಿತ ಪ್ರಬಂಧ ಪ್ರಕಾರವನ್ನು ಮತ್ತಷ್ಟು ಬೆಳೆಸಿ ವಿಸ್ತರಿಸಿದವರು ಅ. ರಾ ಮಿತ್ರರು. ಇದು ಇವರ ಹೆಚ್ಚುಗಾರಿಕೆ. ಲಲಿತ ಪ್ರಬಂಧಕ್ಕೆ ಅವರು ತೆಗೆದುಕೊಳ್ಳುವ ವಸ್ತುಗಳು ಬೆರಗು ಹುಟ್ಟಿಸುತ್ತವೆ, ೧೯೩೫ ಫ಼ೆಬ್ರವರಿ ೨೫ರಂದು ಜನಿಸಿದ ಮಿತ್ರವರಿಗೆ ಈಗ ತೊಂಬತ್ತು. ಅದು ಕೇವಲ ಅವರ ಜನನ ದಿನದಿಂದ ಇಲ್ಲಿಯವರೆಗಿನ ವರ್ಷಗಳ ಲೆಕ್ಕ. ಆದರೆ ಅವರು ಮಾನಸಿಕವಾಗಿ ಯುವಕರು, ಯುವಕರು ನಾಚುವಂಥ ಯೌವ್ವನ ಅವರದು. ಅವರು ಹಳ್ಳಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಕಷ್ಟಕಪಟ್ಟು ಓದಿ ಅಲ್ಲಿಯೂ ಮಿತ್ರರನ್ನು ಸಂಪಾದಿಸಿ ಕನ್ನಡ ಉಪನ್ಯಾಸಕರಾಗಿ, ಪಾಚಾರ್ಯರಾಗಿ, ಅನೇಕ ಕಡೆ ದುಡಿದು, ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳಿಸಿ ಹಲವರನ್ನು ಬೆಳೆಯಿಸಿ ಧನ್ಯರಾದರು. ಇಂದಿಗೂ ಅವರು ಹಿಂದೆ ಬಿಟ್ಟುಹೋದ ಎಲ್ಲ ಕಡೆಯವರು ಇಂದಿಗೂ ಛೆ. ಮಿತ್ರವರು ನಮ್ಮೊಂದಿಗೆ ಈಗಲೂ ಇದ್ದಿದ್ದರೆ ಅನ್ನುತ್ತಾರೆಂದರೆ ಇದು ಒಬ್ಬ ವ್ಯಕ್ತಿ ಗಳಿಸ ಬೇಕಾದುದು, ಹುಟ್ಟಿದ ಮೇಲೆ ಸಾರ್ಥಕ ಅನಿಸಿಕೊಳ್ಳಲು ಅಗತ್ಯವಾದುದು. ಇದನ್ನು ಅವರು ಮಾಡಿಸಾಧಿಸಿದ್ದಾರೆ, ಅವರು ಹೋದಲ್ಲೆಲ್ಲ ಅರ್ಜಿಸಿದ್ದು ಇದನ್ನೇ, ನಾನಂತೂ ಅವರ ಸಂಪರ್ಕ ಪಡೆದು ಅವರನ್ನು ಅರ್ಜಿಸಿಕೊಂಡಿದ್ದೇನೆ. (ಸಂಪಾದಿಸಿಕೊಂಡಿದ್ದೇನೆ). ಇಷ್ಟು ಸಾಕು ನನಗೆ. ನಿಮಗೆ? ಜೊತೆಗೆ ಮಿತ್ರಾರ್ಜಿತವನ್ನೂ ಅರ್ಜಿಸಿಕೊಂಡಿದ್ದೇನೆ. ನೀವು?
ಅವರು ಅ ರಾ ಮಿತ್ರರು. ಅವರ ಹೆಸರೇ ಹೇಳುವಂತೆ ಎಲ್ಲರ ಮಿತ್ರರು ಅವರು ಅರಿ ಮಿತ್ರರು ಕೂಡ. ಅಷ್ಟಕ್ಕೂ ಅವರಿಗೆ ಅರಿಗಳೇ ಇಲ್ಲ ಅನಿಸುತ್ತದೆ, ಮೊದಲನೆಯದಾಗಿ ಅವರ ಸ್ವಭಾವ ಅಂಥದ್ದಲ್ಲ, ಎರಡನೆಯದಾಗಿ ಅವರ ವೃತ್ತಿ ಪ್ರವೃತ್ತಿ ಕೂಡ ಎಲ್ಲರನ್ನೂ ಬೆಸೆಯುವಂಥದ್ದು, ಅದು ೨೦೧೧ರ ಅವಧಿ. ತುಮಕೂರು ವಿಶ್ವವಿದ್ಯಾನಿಲಯ ಕನ್ನಡದ ಖ್ಯಾತ ಕವಿ ಕುಮಾರ ವ್ಯಾಸನನ್ನು ಕುರಿತ ಅಧ್ಯಯನಕ್ಕಾಗಿ ಪೀಠವೊಂದನ್ನು ಸ್ಥಾಪಿಸಿ ಅದಕ್ಕೆ ನನ್ನನ್ನು ಸಂಯೋಜಕನನ್ನಾಗಿ ನೇಮಿಸಿತ್ತು.ನನಗೆ ಆಗ ಸೂಕ್ತ ಮಾರ್ಗದರ್ಶನದ ಅಗತ್ಯವಿತ್ತು, ಗುರುಗಳಾದ ಪ್ರೊ. ಟಿ ವಿ ವೆಂಕಟಾಚಲ ಶಾಸ್ತ್ರಿಗಳು ಬೆನ್ನ ಹಿಂದೆ ಇದ್ದರು, ಜೊತೆಗೆ ಬಹು ಪ್ರಮುಖವಾದ ಯೋಜನೆಯೊಂದನ್ನು ಸಿದ್ಧಪಡಿಸಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದಾಗ ಅದಕ್ಕೆ ಅನುಮತಿ ಸಿಕ್ಕಿತು. ಅದು ಕುಮಾರವ್ಯಾಸ ಭಾರತದ ಪರಿಷ್ಕೃತ ಸಂಪುಟ ಹೊರತರುವುದು, ಇದಕ್ಕಾಗಿ ಒಂದು ತಜ್ಞ ಸಮಿತಿ ಮಾಡಬೇಕಿತ್ತು, ಶಾಸ್ತ್ರಿಗಳು ಅಧ್ಯಕ್ಷರು ಇದರಲ್ಲಿ ಮಾನ್ಯ ಅ ರಾ ಮಿತ್ರರು ಕೂಡ ಒಬ್ಬ ಪ್ರಮುಖ ಸಲಹಾಗಾರರು. ಆಗ ಹೆಚ್ಚೂಕಡಿಮೆ ವಾರಕ್ಕೊಮ್ಮೆ ಗಣಕ ಪರಿಷತ್ತಿನಲ್ಲಿ ಕುಮಾರವ್ಯಾಸ ಕೃತಿ ಕುರಿತು ಚರ್ಚೆ, ಸಭೆ ಈ ಸಮಯ ನನ್ನ ಜೀವನದ ಸೌಭಾಗ್ಯ. ಎಂತೆಂಥ ಸಭೆ-ಚರ್ಚೆ!. ಇದನ್ನು ಕುರಿತೇ ಪ್ರತ್ಯೇಕ ಬರೆಯಬೇಕಿದೆ. ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ಆರರವರೆಗೆ ನಡೆಯುತ್ತಿತ್ತು. ಊಟ ತಿಂಡಿ, ಕಾಫಿ ಎಲ್ಲ ಅಲ್ಲೇ. ಆದರೆ ತರಿಸಿದ ಅನ್ನಾಹಾರಗಳೆಲ್ಲ gಆರಿಹೋಗಿರುತ್ತಿದ್ದವು. ಸಭೆಯ ಸ್ವಾರಸ್ಯ, ರುಚಿ ಹಾಗೆ ಇರುತ್ತಿತ್ತು, ಒಂದೊಂದು ಪದ್ಯದ ಪದಗಳ ಅರ್ಥ, ಹಿಂದಿನ ವ್ಯಾಖ್ಯಾನಕಾರರು ಕೊಟ್ಟ ಅರ್ಥ ಪರಿಶೀಲನೆ ಮಧ್ಯೆ ಮಧ್ಯೆ ಹರಟೆ, ಸಲ್ಲಾಪ, ಹಳೆಯ ಹಿರಿಯ ಸಾಹಿತಿಗಳೊಂದಿಗಿನ ಒಡನಾಟದ ನೆನಪು ಹೊರಹಾಕುತ್ತಿದ್ದ ಶಾಸ್ತ್ರಿಗಳು ಮತ್ತು ಮಿತ್ರರು. ನಾವೆಲ್ಲ ಆಸಕ್ತಿ, ಕುತೂಹಲದಿಂದ ಮುಂದೆ ಎಂದು ಕಾದಿರುತ್ತಿದ್ದ ಸಂದರ್ಭ.ಅಬ್ಬಬ್ಬಾ! ಮತ್ತೆ ಮುಂದಿನ ಸಭೆಗೆ ಕಾಯುವ ಮೊದಲೇ ಅಲ್ಲೇ ದಿನಾಂಕ ನಿಗದಿ ಆಗುತ್ತಿತ್ತು. ಆ ಸಮಯದಲ್ಲಿ ಮಾನ್ಯ ಮಿತ್ರರ ಹಾಸ್ಯದ ಜೊತೆಗೆ ವಿದ್ವತ್ತಿನ ಪರಿಚಯ ಹತ್ತಿರದಿಂದ ಆಯಿತು. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಕುಮಾರವ್ಯಾಸ ಏನು ಹೇಳೈ ಕರ್ಣ ಚಿತ್ತ ಪದ್ಯದಿಂದ ಪರಿಚಿತನಾಗಿ ಪ್ರಿಯನಾಗಿದ್ದ, ಕಾಲೇಜು ದಿನಗಳಲ್ಲಿ ಸಂಕಲ್ಪಗಳು ಮತ್ತಿತರ ಪ್ರಬಂಧಗಳಿಂದ ಮಿತ್ರರು ಪ್ರಿಯರಾಗಿ ಹೋಗಿದ್ದರು. ಯೋಗಾಯೋಗ ಇವೆರಡೂ ಈ ಪೀಠದ ನೆಪದಲ್ಲಿ ನನ್ನ ಜೀವನದಲ್ಲಿ ಕೂಡಿದವು. ಅಷ್ಟರಲ್ಲಿ ಮಿತ್ರರ ಕುಮಾರವ್ಯಾಸ ಭಾರತ ಕುರಿತ ಕೃತಿ ಹೊರಬಂದಿತ್ತು. ಅದೊಂದೇ ಅಲ್ಲ, ಆ ಕೃತಿ ಹೊರತರುವಾಗ ಅವರು ಮಾಡಿದ್ದ ಅಧ್ಯಯನ ಮಾಡಿದ್ದ ಪ್ರತೀ ಕೃತಿಗಳ ಪುಟ ಪುಟದ ಶಬ್ದಗಳೂ ಅವರ ಬಾಯಲ್ಲಿತ್ತು. ಸಂದ?ರ್ಭ ಬಂದಾಗಲೆಲ್ಲ ಹಾಗೆಯೇ ಉದುರುತ್ತಿದ್ದವು. ಅದರ ಅರ್ಥ- ವಿರುದ್ಧಾರ್ಥ ಆ ಪದ ಬಳಸಿ ರಚಿತವಾದ ಇತರರ ಕೃತಿಗಳು- ಅದರ ವಿಶೇಷ- ಒಂದೇ ಎರಡೇ.ಅವರು ಕನ್ನಡ ಸಾಹಿತ್ಯದ ಶಬ್ದಕೋಶ ವಿಶ್ವಕೋಶ ಎರಡೂ ಹೌದು ಅನಿಸಿತು. ನನ್ನ ಇನ್ನೊಂದು ಭಾಗ್ಯ ಮಾನ್ಯ ಶಾಸ್ತ್ರಿಗಳು ಜೊತೆಗಿದ್ದುದು, ಅವರು ಕೂಡ ಹಳೆಗನ್ನಡ, ವ್ಯಾಕರಣ, ಛಂದಸ್ಸು, ಶಾಸನ ಇತ್ಯಾದಿಗಳ ವಿಶ್ವಕೋಶ, ಇಂಥ ಒಡನಾಟ ಸಿಕ್ಕಿದ್ದು ಸುಕೃತ. ಅದಾಯಿತು. ಕೃತಿ ಕೂಡ ಸೊಗಸಾಗಿ ಕನ್ನಡ ಗಣಕ ಪರಿಷತ್ತಿನ ವತಿಯಿಂದ ಹೊರಬಂದು ಜನಮನ್ನಣೆ ಪಡೆಯಿತು. ಅದು ಕುಮಾರವ್ಯಾಸ ಭಾರತ ಕೃತಿ ಕುರಿತ ಬರೀ ಪರಿಷ್ಕಾರವಲ್ಲ. ಸಮಗ್ರ ವಿಶ್ವಕೋಶ. ಆ ಎರಡು ಸಂಪುಟಗಳನ್ನು ಗಮನಿಸಿದವರು ಹೇಳುವ ಮಾತು ಇದು, ಕನ್ನಡದಲ್ಲಿ ಅಂಥ ಕೃತಿ ಇದೇ ಮೊದಲಬಾರಿ ಬಂದಿದೆ ಅನ್ನುವಷ್ಟರ ಮಟ್ಟಿಗೆ ಅದು ಆಧುನಿಕ ಸಿಡಿ ರೂಪದಲ್ಲೂ, ಗಾಯನಗಳ ಜೊತೆಗೂ ಹೊರಬಂದಿದೆ.ಇದಕ್ಕೆ ಕಾರಣಕತೃರು ಈ ಇಬ್ಬರು ಹಿರಿಯರು ಕಾರಣ. ಈ ನೆಪದಲ್ಲಿ ಮಿತ್ರರ ಜೊತೆ ಅನೇಕಾನೇಕ ದಿನ ಕಳೆಯುವಂತಾಯ್ತಲ್ಲ, ಅಷ್ಟು ಸಾಜು ನನ್ನ ಭಾಗ್ಯಕ್ಕೆ. ಉಳಿದಂತೆ ಗಣಕ ಪರಿಷತ್ತಿನ ಶ್ರೀ ನರಸಿಂಹ ಮೂರ್ತಿ, ಶಬ್ದಕೋಶ ಪಂಡಿತರಾದ ಶ್ರೀ ಕೃಷ್ಣ, ಸಂಯೋಜಕ ನಾನು, ಹಾಗೂ ಗಮಕಿಗಳಾದ ಡಾ. ಎ ವಿ ಪ್ರಸನ್ನ, ಶಾಸನ ತಜ್ಞರಾದ ಡಾ. ಗಣೇಶ್. ಆ ಸಭೆಗಳು ಹೇಗೆ ಇರುತ್ತಿದ್ದವೆಂದರೆ ಇದರಲ್ಲಿ ಪಾಲ್ಗೊಂಡಿದ್ದೇ ಪೂರ್ವಜನ್ಮ ಸುಕೃತ. ಈ ಬಗ್ಗೆ ಮತ್ತೆ ಬರೆಯುವೆ, ಆ ಹರಟೆ, ವಿದ್ವತ್ ಚರ್ಚೆ ಗೋಷ್ಠಿ, ತಮಾಷೆ, ಸ್ವಾರಸ್ಯ ಬಣ್ಣಿಸಲು ಕಷ್ಟ. ಸುಮ್ಮನೇ ಪದ್ಯಗಳ ಮೇಲೆ ಕಣ್ಣಾಡಿಸುತ್ತ ಕುಳಿತಿರುತ್ತಿದ್ದ ಮಿತ್ರರು ದಿಢೀರನೆ ಇಲ್ಲಿ ನೋಡಿ ಈ ಕುಮಾರ ವ್ಯಾಸ ಎಂಥ ಕಿಡಿಗೇಡಿ ಅನ್ನುತ್ತ ಒಂದು ಪದ ಹಿಡಿದು ಅರೆಯುತ್ತಿದ್ದರು ಇದಕ್ಕೆ ಶಾಸ್ತ್ರಿಗಳ ಪೂರಕ ಸೇರ್ಪಡೆಗಳು, ಪ್ರಸನ್ನರ ವ್ಯಾಖ್ಯಾನ, ಕೃಷ್ಣ ಅಥವಾ ಗಣೇಶರ ಸಾಹಿತ್ಯದಒಗ್ಗರಣೆ- ಮೂರ್ತಿಗಳ ಮೇಲೋಗರ. ಆಗಾಗ ಬಂದು ವೀಕ್ಷಿಸುತ್ತಿದ್ದ ಮೈಸೂರಿನ ಪ್ರೊ. ಪಂಡಿತಾರಾಧ್ಯ, ಪರಿಷತ್ತಿನ ಶ್ರೀನಿವಾಸ ಶಾಸ್ತ್ರಿಗಳ ಮೆಲುಕಾಟ. ಒಂದಕ್ಕಿಂತ ಒಂದು, ಹೊತ್ತು ಹೋಗಿದ್ದೇ ತಿಳಿಯುತ್ತಿರಲಿಲ್ಲ. ಇಂಥ ಸಭೆಗಾಗಿ ಮತ್ತೆ ಇಂಥ ಸಾಹಿತ್ಯಕ ಯೋಜನೆ ರೂಪಿಸಬೇಕಿದೆ. ಆಗ ಅನಿಸಿದ್ದು ಕನ್ನಡದಲ್ಲಿ ಇಂಥ ಗೋಷ್ಠಿ- ಸಭೆಗಳು ಸಾರ್ವಕಾಲಿಕ ದಾಖಲೆಯಾಗಿ ಡಿಜಿಟಲ್ ರೂಪದಲ್ಲಿರಬೇಕು ಅನಿಸಿದ್ದಿದೆ, ನೋಡುವಾ ಮೂರ್ತಿಗಳು ಮನಸ್ಸು ಮಾಡಿದರೆ ಆಗಬಹುದು. ಇದರಿಂದ ಹಿರಿಯರ ವಾದಗಳ ಸ್ವರೂಪ ಕನ್ನಡ ವಿದ್ವತ್ ಪರಂಪರೆಯ ಸ್ವರೂಪ ದಾಖಲಾಗುತ್ತದೆ, ಮುಂದಿನ ತಲೆಮಾರಿಗೆ ಮಾದರಿಯಾಗುತ್ತದೆ.
ಕನ್ನಡದ ಅಪೂರ್ವ ಸಾಹಿತಿಗಳಲ್ಲೊಬ್ಬರಾದ ಮಿತ್ರರು ಇದೀಗ ತೊಂಬತ್ತು ಸಾರ್ಥಕ ವಸಂತಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಶಿಷ್ಯಕೋಟಿ ಮತ್ತು ಅವರು ಅರ್ಜಿಸಿದ ಅಪಾರ ಸ್ನೇಹ ಹಾಗೂ ಅಭಿಮಾನ ವರ್ಗ ಅವರಿಗೆ 'ಮಿತ್ರಾರ್ಜಿತ ಎಂಬ ಕೃತಿಯನ್ನು ಈಚೆಗೆ ಸಮರ್ಪಿಸಿದೆ, ಒಬ್ಬ ಸಜ್ಜನ ತಾನು ಬಾಲ್ಯದಲ್ಲಿ ಪಡೆದ ಮೌಲ್ಯವನ್ನು ಶಿಸ್ತಿನಿಂದ ಪಾಲಿಸಿದರೆ ಏನೆಲ್ಲ ಅರ್ಜಿಸಬಹುದು ಎಂಬುದು ಈ ಸಾರ್ಥಕ ಕೃತಿಯಿಂದ ತಿಳಿಯುತ್ತದೆ. ಈ ಕೃತಿಯಲ್ಲಿ ಅವರು ಅರ್ಜಿಸಿದ ಭೌತಿಕ ಆಸ್ತಿಪಾಸ್ತಿಗಳ ವಿವರ ಕಿಂಚಿತ್ತೂ ಇಲ್ಲ, ನಮಗೆ ಅದರ ಅಗತ್ಯವೂ ಇಲ್ಲ, ಆದರೆ ಒಬ್ಬ ಸಜ್ಜನ ವ್ಯಕ್ತಿ ಏನನ್ನು ಅರ್ಜಿಸಬಹುದು, ಅದರ ಫಲವೇನು ಎಂಬ ಪಾಠ ಇಲ್ಲಿದೆ. ಈ ಕೃತಿಯಲ್ಲಿ ಅವರ ವ್ಯಕ್ತಿತ್ವದ ಹತ್ತುಮುಖ ತೋರಿಸುವ ೮೪ ಲೇಖನಗಳಿವೆ, ಒಂದೊಂದೂ ಮಾಹಿತಿಪೂರ್ಣ. ಮಿತ್ರರ ವ್ಯಕ್ತಿತ್ವ ತೋರಿಸುವ ಸ್ತುತ್ಯರ್ಹ ಪ್ರಯತ್ನ. ಇದರಲ್ಲಿ ಶತಾವಧಾನಿ ಗಣೇಶರ ಲೇಖನ ಮಿತ್ರರ ವ್ಯಕ್ತಿತ್ವವನ್ನು ಕನ್ನಡಿಯಲ್ಲಿ ಕರಿಯನ್ನು ತೋರಿಸುವ ಪ್ರಯತ್ನದಂತಿದೆ, ಉಳಿದವು ಇದನ್ನು ವಿಸ್ತರಿಸುವ ದಾಖಲೆ ಕೊಡುತ್ತವೆ. ಈ ಕೃತಿಯ ಇನ್ನೊಂದು ಮುಖ್ಯ ವಿಶೇಷವೆಂದರೆ ಬಹುತೇಕ ಇಂಥ ಕೃತಿಗಳು ಅಭಿನಂದಿತರ ಕುಟುಂಬ ವರ್ಗ ಹಾಗೂ ಶಿಷ್ಯವರ್ಗದಿಂದ ಜೈಕಾರ ಹಾಕಿಸುವ ಕೆಲಸ ಮಾಡಿ ಇಂಥ ಕೆಲಸ ಮಾಡಿದ ಪ್ರಪಂಚದಲ್ಲಿ ಬೇರೆ ಇಲ್ಲದವರು ಇವರೇ ಅನ್ನುವ ಕೆಲಸ ಮಾಡುವುದೇ ಹೆಚ್ಚು. ಒಂದು ರೀತಿಯಲ್ಲಿ ಅಭಿನಂದನ ಗ್ರಂಥಗಳು ವ್ಯಕ್ತಿಯ ಭಜನೆ ಮಾಡುತ್ತವೆ, ಆದರೆ ಇದು ಹಾಗಲ್ಲ, ಮಿತ್ರರ ವ್ಯಕ್ತಿತ್ವದ ವಸ್ತುನಿಷ್ಠ ಪರಿಚಯವನ್ನು ಮಾಡಿಕೊಡುತ್ತದೆ, ಇದನ್ನು ಓದಿದ ಅವರ ಪರಿಚಿತರು ಇಷ್ಟೇ ಅಲ್ಲ, ಇನ್ನೂ ಇದರಲ್ಲಿರಬೇಕಾದ ಸಂಗತಿಗಳು ಬೇಕಾದಷ್ಟಿವೆ, ಅನ್ನುವ ಅಸಮಾಧಾನ ಹುಟ್ಟುವಂತೆಯೂ ಬೇಕಾದರೆ ಮಿತ್ರರ ಅಭಿನಂದನಾ ಕೃತಿಯ ಮತ್ತಷ್ಟು ಸಂಪುಟಗಳನ್ನು ಹೊರತರುವಂತೆಯೂ ಆಸೆ ಹುಟ್ಟಿಸುತ್ತದೆ. ಇದು ಇದರ ವಿಶೇಷ, ಹೀಗೆ ಯಾವುದೇ ಕೃತಿ ಓದುಗನಲ್ಲಿ ಓದಿನ ಅತೃಪ್ತಿಯನ್ನು ಉಂಟುಮಾಡಬೇಕು ಆಗ ಅದು ಉತ್ತಮ ಕೃತಿಯಾಗುತ್ತದೆ, ಈ ಸಾಲಿಗೆ ಸೇರುವ ಅಭಿನಂದನ ಗ್ರಂಥ ಇದು. ಮಿತ್ರರ ಪಾಲಿಗೆ ನಾನು ಒಬ್ಬ ಏಕಲವ್ಯನಂಥ ಶಿಷ್ಯ. ನನ್ನಂಥವರು ಅವರಿಗೆ ಸಹಸ್ರ ಸಂಖ್ಯೆಯಲ್ಲಿರಬಹುದು, ಆದರೆ ನಾನು ಈ ಕೃತಿಯನ್ನು ಓದುವಾಗ ಛೆ ಇದರಲ್ಲಿ ಬರೆಯುವ ಅವಕಾಶ ನನಗೆ ಸಿಗಲಿಲ್ಲವಲ್ಲಾ ಹೂವಿನ ಜೊತೆ ನಾರು ಕೂಡ ಸ್ವರ್ಗ ಸೇರಬಹುದಿತ್ತಲ್ಲಾ ಎಂದು ಪುಟ ಪುಟ ತಿರುಗಿಸಿದಾಗಲೂ ಅನಿಸಿದೆ, ಆದರೆ ಹೂವಿನ ಜೊತೆ ಸೇರಲೂ ನಾರು ಪುಣ್ಯಮಾಡಿರಬೇಕು. ನಿಜ. ನನ್ನ ಅನುಭವಕ್ಕೆ ಬಂತು. ಮಿತ್ರರ ಬರೆಹವನ್ನು ಒಮ್ಮೆ ಓದಿದರೆ ಅಲ್ಲಿ ವಿವರಿಸಿದಂಥ ಸಂದರ್ಭ ಬಂದಾಗಲೆಲ್ಲ ಓದುಗರು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ, ಇದು ಮಿತ್ರರ ಹೆಚ್ಚುಗಾರಿಕೆ, ಅವರು ಎಂಥ ಕಡೆಯಲ್ಲೂ ಹಾಸ್ಯ ಹುಡುಕಿ ಇದ್ಯಾಕೆ ನಮಗೆ ಹೊಳೆಯಲಿಲ್ಲ ಎಂದು ಹೊಟ್ಟೆ ಉರಿಯುವಂತೆ ಮಾಡಬಲ್ಲರು. ಕನ್ನಡದ ಪ್ರಸಿದ್ಧ ಗಾದೆ - ನಾರಿ ಮುನಿದರೆ ಮಾರಿ ಎಂಬುದು. ಇದರಲ್ಲೂ ಅವರಿಗೆ ಹಾಸ್ಯಕಂಡಿದೆ, ಆಯ್ತಪ್ಪಾ,ನಾನು ಮಾರಲು ತಯಾ ರು ಕೊಳ್ಳುವವತು ಯಾರು ಎಂಬುದು ಅವರ ಪ್ರಶ್ನೆ. ಇದನ್ನು ಓದಿದ ಮೇಲೆ ಯಾವುದೇ ಗಾದೆ, ನುಡಿಗಟ್ಟು ಓದಿದಾಗಲೂ ನಾನು ಹೀಗೆ ನೋಡಲು ಸಾಧ್ಯವೇ ಎಂದು ನೋಡುತ್ತೇನೆ. ಇಲ್ಲ ಇದುವರೆಗೆ ಒಂದೂ ಸಿಕ್ಕಿಲ್ಲ, ಇಂಥ ಇನ್ನೆಷ್ಟು ಅಸ್ತçಗಳು ಅವರ ಬತ್ತಳಿಳಿಕೆಯಲ್ಲಿವೆಯೋ? ಯಾವಾಗ ಹೊರಬರುತ್ತವೋ ನೋಡಬೇಕು, ಅವರ ಎಲ್ಲ ಬರೆಹಗಳೂ ಅಪೂರ್ವ, ಆದರೆ ಅವರ ಲಲಿತ ಪ್ರಬಂಧಗಳು, ಅದರಲ್ಲೂ ಸಂಕಲ್ಪಗಳು ಎಂಬ ಕೃತಿ ನನ್ನ ಪ್ರಕಾರ ಎವರ್ ಗ್ರೀನ್. ಅದು ನನ್ನ ಪಾಕಿಗೆ ಭಗವದ್ಗೀತೆಯಿದ್ದಂತೆ. ಮನಸ್ಸು ಭಾರ ಅನಿಸಿದಾಗಲೆಲ್ಲ ಇದು ನನ್ನ ನೆರವಿಗೆ ಬಂದಿದೆ, ಹೊಸ ಉತ್ಸಾಹ ತುಂಬಿದೆ. ಅವರ ಎಲ್ಲ ಕೃತಿಗಳೂ ನನ್ನ ಬಳಿ ಭದ್ರವಾಗಿವೆ ಎಂದು ಹೆಮ್ಮೆಯಿಂದ ಹೇಳುವೆ.ವಕನ್ನಡ ಸಹಿತ್ಯದಲ್ಲಿ ಕಥೆ, ಕಾದಂಬರಿ ಕಾವ್ಯ ಇತ್ಯಾದಿ ಬೇರೆ ಬೇರೆ ಪ್ರಕಾರಗಳಿವೆ, ಇವುಗಳಲ್ಲಿ ಹೆಚ್ಚು ಜನಪ್ರಿಯವಾದುದು ಕಾದಂಬರಿ, ಹೊಸ ಕಾದಂಬರಿ ಯಾವುದು ಬಂದಿದೆ ಎಂದು ಓದುಗರು ಸಾಮಾನ್ಯವಾಗಿ ಕಾಯುತ್ತಾರೆ, ಆದರೆ ಇಷ್ಟೇ ಗರಿಷ್ಠ ಸ್ಥಾನವನ್ನು ಲಲಿತ ಪ್ರಬಂಧಕ್ಕೆ ತಂದುಕೊಟ್ಟವರು ಮಿತ್ರರು. ಇzದು ಸಾಮಾನ್ಯ ಸಾಧನೆಯಲ್ಲ. ಕನ್ನಡ ಲಲಿತ ಪ್ರಬಂಧಕ್ಕೆ ಅರಾಮಿತ್ರ ಪರ್ಯಾಯವಾಗಿದ್ದಾರೆ. ಅವರ ಪ್ರಭಾವದಿಂದ ಬರವಣಿಗೆಗೆ ತೊಡಗಿದವರು ಅಸಂಖ್ಯ. ಇದು ಕೂಡ ಅವರಿಗೆ ಗಮನಕ್ಕೆ ಬಾರದ ಸಾಧನೆ.ಒಟ್ಟಿನಲ್ಲಿ ಖರೀದಿಸಿ ಓದಿದ ಅನಂತರ ಎದೆಗೆ ಅವುಚಿಕೊಳ್ಳುವ ಕೃತಿಯೊಂದು ಕನ್ನಡಕ್ಕೆ ಸಿಕ್ಕಿದೆ, ಇದರ ಸಂಪಾದಕರಾದ ರಾಮನಾಥ್ ಹಾಗೂ ಸೌಮ್ಯ ಮಿತ್ರ ಅವರು ಹಾಗೂ ಪ್ರಕಟಣೆ ಮಾಡಿದ ಬೆಂಗಳೂರಿನ ತೇಜು ಪಬ್ಲಿಕೇಶನ್ಸ್ ಬವರು ಕನ್ನಡಿಗರ ಅಭಿನಂದನೆಗೆ ಅರ್ಹರು.
ಈ ಕೃತಿಯಲ್ಲಿ ಒಂದು ನ್ಯೂನ ಕಾಣಿಸಿತು, ಅದು ಮಿತ್ರರ ಕೃತಿಗಳ ಪಟ್ಟಿ ಹಾಗೂ ಅವರ ಕಿರು ಪರಿಚಯ ಮಾಡುವ ಮಾಹಿತಿಯ ಪಟ್ಟಿ. ಹೊರತಾಗಿ ಇದೊಂದು ಮನೆ ಮನೆಯಲ್ಲಿ ಇರಬೇಕಾದ ಅಭಿನಂದನ ಕೃತಿ. ನೀವು ಸಾಹಿತ್ಯ ಪ್ರಿಯರಾಗಿದ್ದರೆ ಈ ಕೃತಿ ಇಲ್ಲದಿದ್ದರೆ ನಿಮ್ಮ ಗ್ರಂಥ ಸಂಗ್ರಹ ನಿಜಕ್ಕೂ ಅಪೂರ್ಣ ಎಂದಷ್ಟೇ ಹೇಳಬಹುದು.
ಇಂಥ ಕೃತಿಯನ್ನು ಓದದವರ ಜೀವನ ವ್ಯರ್ಥ ಎಂದು ಸದ್ಯಕ್ಕೆ ಹೇಳಲು ಅಡ್ಡಿ ಇಲ್ಲ.ಈ ಕೃತಿ ಸಾಂಪ್ರದಾಯಿಕ ಪುಸ್ತಕ ಅಂಗಡಿಗಳಲ್ಲಿ ಮಾತ್ರವಲ್ಲದೇ ಅಂತರ್ಜಾಲದಲ್ಲೂ ಆನ್ ಲೈನ್ ನಲ್ಲಿ ಕೂಡಲೇ ಲಭ್ಯವಾಗಲಿ, ಜಗದಗಲ ಮಿತ್ರರ ಕಂಪು ಹರಡಲಿ.
ನಿಮ್ಮ ಬಳಿ ಪಿತ್ರಾರ್ಜಿತ ಇರಲಿ ಬಿಡಲಿ, ಆದರೆ ಮಿತ್ರಾರ್ಜಿತ ಇಲ್ಲದಿದ್ದರೆ ಅದು ಬಹುದೊಡ್ಡ ನಷ್ಟ. ಇದಕ್ಕೆ ಅವಕಾಶ ಕೊಡಬೇಡಿ.
ಪುಸ್ತಕ ವಿವರ- ಮಿತ್ರಾರ್ಜಿತ
ಅರಾ ಮಿತ್ರ ಅಭಿನಂದನ ಗ್ರಂಥ
ಸಂಪಾದಕರು-ಎನ್ ರಾಮನಾಥ್ ಮತ್ತು ಸೌಮ್ಯ ಮಿತ್ರ.
ತೇಜು ಪಬ್ಲಿ ಕೇಶನ್ಸ, ಬನಶಂಕರಿ ಎರಡನೇ ಹಂತ, ಬೆಂಗಳೂರು
ಬೆಲೆ- ರೂ ೪೫೦, ಮೊದಲ ಮುದ್ರಣ- ೨೦೨೫
ಪ್ರತಿಗಳಿಗೆ- ೯೪೪೮೦೫೦೫೬೩