ವಿಷಯ ಏನೆಂದರೆ ಇವರೊಂದಿಗಿನ ನನ್ನ ಒಡನಾಟದ ಸಂಗತಿ ನನಗೆ ಒಂದಿಷ್ಟು ಕಲಿಸಿದೆ. ಮೊದಲನೆಯದಾಗಿ ಅದೊಂದು ಅನುಭವ ಮತ್ತು ಆಧುನಿಕ ವಿಜ್ಞಾನದ ಭಾಗ. ಯಾವುದೇ ಆಧುನಿಕ ವಿಜ್ಞಾನದ ಮೊದಲ ಸಾಲು ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು- ಅದಕ್ಕೆ ಮಿತಿ ಇಲ್ಲ ಎಂಬುದು. ಇದುಕೂಡ ಈ ಸಾಲನ್ನು ಫಿಸಿಯೋತೆರಪಿ ಯಜ್ಞರಿಗೆ ತಿಳಿದಿರುತ್ತದೆ. ತಮ್ಮ ತರಬೇತಿಯಲ್ಲಿ ಅವರ ತರಬೇತಿಯಿಂದ ಸರಿಯಾದ ಅನೇಕರನ್ನು ಅವರು ಕಂಡಿರುತ್ತಾರೆ. ಆದರೆ ಪಾರ್ಶ್ವದಲ್ಲಿ ಎಲ್ಲರ ಸಮಸ್ಯೆಗಳು ಒಂದೇ ಆಗಿರುವುದಿಲ್ಲ, ಬರೀ ಪಾರ್ಶ್ವ, ಹಾಗೂ ಅದರ ತೀವ್ರತೆ, ಮೆದುಳಿನ ನರಸಿಡಿತದಿಂದ ಉಂಟಾದ ಪಾರ್ಶ್ವ ಮತ್ತು ಅದರ ತೀವ್ರತೆ ಮೊದಲಾದ ಸಂಗತಿಗಳಿರುತ್ತವೆ, ಇದರಲ್ಲಿ ಯಾವುದನ್ನೂ ಮತ್ತೊಂದು ಅಂಥ ಪ್ರಕರಣದೊಂದಿಗೆ ಹೋಲಿಕೆ ಮಾಡಲಾಗದು. ಆದರೆ ಜನ ಸಾಮಾನ್ಯರು ಸಾಮಾನ್ಯವಾಗಿ ಹೀಗೆ ಮಾಡುತ್ತಾರೆ ನಮ್ಮೂರಲ್ಲಿ ಒಬ್ಬರಿಗೆ ಹೀಗೆ ಆಗಿತ್ತು ಒಂದು ವರ್ಷದಲ್ಲಿ ಸರಿಹೋದರು, ನಿಮಗೇಕೆ ಆಗುವುದಿಲ್ಲ? ಸರಿಯಾಗಿ ಪ್ರಯತ್ನಪಡಿ ಇತ್ಯಾದಿ. ಇವರು ಸಾಮಾನ್ಯರು. ಬಿಡಿ. ಆದರೆ ತಜ್ಞರು ಕೂಡ ಹೀಗೆ ಮಾತಾಡುವುದಿದೆ. ಕೆಲವೊಮ್ಮೆ ತಮ್ಮ ಬಳಿಗೆ ಬಂದ ರೋಗಿ ಗುಲಾಮ ಎಂಬಂತೆ ಹೀಗೆ ಮಾಡಿ ಹಾಗೆ ಮಾಡಿ ಎಂದು ಕೆಟ್ಟದಾಗಿ ಗದರಿಸುವುದಿದೆ. ಯಾಕೆ ಆಗಲ್ಲ? ನಾನು ಡಾಕ್ಟರ್ ನನಗೆ ಗೊತ್ತಾಗಲ್ವಾ ಎಂದು ಕೇಳುವುದೂ ಇದೆ. ಇದನ್ನು ಕೇಳಿಸಿಕೊಂಡ ಇತರರು ನೋಡಿ ಡಾಕ್ಟ್ರೇ ಹೇಳ್ತಾರೆ ಇವರಿಗೆ ಎಲ್ಲ ಆಗುತ್ತಂತೆ, ಆದ್ರೂ ಮಾಡಲ್ಲ ನೋಡಿ ಎಷ್ಟು ಸೋಮಾರಿ. ನಾವು ಬಿಡಿ ಗೊತ್ತಾಗಲ್ಲ, ಡಾಕ್ಟ್ರು ಹೇಳಿಲ್ವಾ? ಇತ್ಯಾದಿ. ಇನ್ನು ಕೆಲವು ಫಿಸಿಯೋಗಳಿರುತ್ತಾರೆ. ಅವರಿಗೆ ರೋಗಿಗಳು ಹೀಗೆಯೇ ಇರುತ್ತಾರೆ ಎಂಬ ನಿಲುವು. ಬೇರೆ ಇರಲು ಸಾಧ್ಯವೇ ಇಲ್ಲ ಎಂದೂ ಅವರು ಭಾವಿಸುತ್ತಾರೆ. ಅವರ ಪ್ರಕಾರ ರೋಗಿಗಳು ಸುಸ್ತು ಇತ್ಯಾದಿ ಕಾರಣ ಕೊಡುವುದು ' ಲೇಮ್ ಎಕ್ಯೂಸ್. ಇರುವ ಎಲ್ಲ ಶಕ್ತಿ ಒಗ್ಗೂಡಿಸಿ ಅವರು ಹೇಳಿದ ವ್ಯಾಯಾಮದಲ್ಲಿ ಅರ್ಧ ಮಾಡಿದರೆ ಮಾಡಿ ಮಾಡಿ ಇನ್ನೂ ಮಾಡಿ ಅನ್ನುತ್ತಾರೆ. ಯಾಕೆ ಸುಳ್ಳು ಹೇಳ್ತೀರಾ ಅರ್ಧ ಮಾಡಿದ್ದೀರಲ್ಲಾ, ಇನ್ಬರ್ಧ ಮಾಡಕಾಗಲ್ವಾ ಎಂಬುದು ಅವರ ಪ್ರಶ್ನೆ. ತಾರ್ಕಿಕವಾಗಿ ಅವರ ಪ್ರಶ್ನೆ ಸರಿ. ಆದರೆ ತರ್ಕಕ್ಕೆ ಅಂತ್ಯ ಇಲ್ಲ. ರೋಗಿ ಹೇಳುವ ಯಾವ ಮಾತಿಗೂ ಬೆಲೆ ಇರುವುದಿಲ್ಲ. ಏಕೆಂದರೆ ಅವರು ಮೊದಲೇ ವೈದ್ಯರು, ಮೇಲಿಂದ ರೋಗಿ ಅರ್ಧ ಕೆಲಸ ಮಾಡಿಬಿಟ್ಟಿದ್ದಾನೆ. ಇಂಥ ಅಸಹಾಯಕಪರಿಸ್ಥಿತಿಯಲ್ಲಿ ರೋಗಿ ಏನು ಮಾಡಬೇಕು?
ಒಟ್ಟಿನಲ್ಲಿ ಮೊದಲೇ ದೈಹಿಕವಾಗಿ ಅಸಹಾಯಕನಾದ ರೋಗಿ ಈಗ ಮಾನಸಿಕವಾಗಿಯೂ ಕುಸಿದುಹೋಗುತ್ತಾನೆ ಮತ್ತೆ ಪ್ರದರ್ಶನ ಮಾಡುವ ತಾಕತ್ತೇ ಅವನಲ್ಲಿ ಉಳಿದಿರುವುದಿಲ್ಲ. ಏನೂ ಮಾಡಲಾಗದ ರೋಗಿಗೆ ಎಲ್ಲರಿಂದ ಉಗಿಸಿಕೊಳ್ಳುವುದು ಬಿಟ್ಟರೆ ಅನ್ಯ ಮಾರ್ಗ ಇರುವುದಿಲ್ಲ. ಏಕೆಂದರೆ ಆತ ತನ್ನ ಮಾರ್ಗವನ್ನು ತಾನೇ ಕಟ್ಟಿಕೊಂಡಿದ್ದಾಗಿದೆ. ಹೀಗೆ ಏಕ ಕಾಲಕ್ಕೆ ವಿಚಿತ್ರವಾದ ಮನೋದೈಹಿಕ ಹಿಂಸೆಯನ್ನು ಪಾರ್ಶ್ವ ಕೊಡುತ್ತದೆ. ಇದಕ್ಕೆಲ್ಲ ಅಂತ್ಯಕೊಡುವುದು ಕಾಲ ಮಾತ್ರ. ಅದುವರೆಗೆ ಬೇಕಿರುವುದು ರೋಗಿಯ ಯಥಾಶಕ್ತಿ ಪ್ರಯತ್ನ ಮತ್ತು ತಾಳ್ಮೆ ಬೇರೆಯದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು.
ಪಾರ್ಶ್ವದವರ ಕಷ್ಟ ಕಂಡು ಸಮಾಧಾನ ಮಾಡುವ ಇನ್ನೊಂದು ಬಗೆ ಇದೆ. ಅದೇ ಅಯ್ಯೋ ಸುಮ್ನಿರಿಯಪ್ಪಾ. ದೇವರಿಗೂ ಕಷ್ಟ ತಪ್ಪಿಲ್ಲ. ಶ್ರೀರಾಮನೇ ಹದಿನಾಲ್ಕು ವರ್ಷ ಎಷ್ಟು ಕಷ್ಟ ಪಟ್ಟಿಲ್ಲ ಅಲ್ವಾ? ಪಾಪ ರಾಮ ಹೆಂಡ್ತಿ ಹುಡುಕಿಕೊಂಡು ಅಷ್ಟು ವರ್ಷ ಓಡಾಡಿದ. ಅದು ಕಷ್ಟವಾದರೆ ನಿತ್ಯ ನೂರಾರು ಡಿವೋಸ ಪ್ರಕರಣಗಳು ದಾಖಲಾಗುತ್ತಿರಲಿಲ್ಲ ಅನಿಸುತ್ತದೆ. ಪಾರ್ಶ್ವದ ಮುಂದೆ ಅದು ಲೆಕ್ಕಕ್ಕೇ ಇಲ್ಲ. ಇಲ್ಲಿ ಅನುಕ್ಷಣವೂ ಮನೋದೈಹಿಕ ನರಕ. ರಾಮನಿಗೆ ಅಂಥ ಹಿಂಸೆ ಆಗಿದ್ದರೆ ಅದು ಸುಳ್ಳು ಎಂದಷ್ಟೇ ಹೇಳಬಹುದು. ಪಾರ್ಶ್ವ ಮಿದುಳಿಗೆ ಸಂಬಂಧಿಸಿದ್ದ ಕಾಹಿಲೆ. ಅಷ್ಟಕ್ಕೂ ಮಿದುಳಿಗೆ ಸಂಬಂಧಿಸಿ ಪ್ರಪಂಚಾದ್ಯಂತ ಇದುವರೆಗೆ ನಡೆದ ಸಂಶೋಧನೆಯೇ ಶೇ. ಹತ್ತರಷ್ಟು. ಈಗೀಗ ಏನೇನೋ ಅಧ್ಯಯನಗಳು ಶುರುವಾಗಿವೆ.ನಮ್ಮ ಪ್ರಧಾನಿ ಬೆಂಗಳೂರಲ್ಲಿ ಮಿದುಳಿನ ಅಧ್ಯಯನಕ್ಕೆ ಮೀಸಲಾದ ಕೇಂದ್ರ ಶುರುಮಾಡಿದ್ದಾರೆ. ಕೆಲವು ಖಾಸಗಿ ಸಂಶೋಧಕರು, ಆಸಕ್ತರು ಬಗೆಬಗೆಯ ಅಧ್ಯಯನ ಮಾಡುತ್ತಿದ್ದಾರೆ. ಎಲಾನ್ ಮಸ್ಕ್ ಮಿದುಳಿನಲ್ಲಿ ಮೈಕ್ರೋ ಚಿಪ್ ಅಳವಡಿಸಿ ಮಿದುಳಿನ ಸಂದೇಶಗಳು ಅಂಗಾಂಗಗಳಿಗೆ ತಲುಪುವಂತೆ ಮಾಡುವ ನವೀನ ಸಂಶೋಧನೆಗೆ ಕೈ ಹಾಕಿದ್ದಾನೆ. ಇದು ಸಾಧ್ಯವಾದರೆ ಪಾರ್ಶ್ವ ಪೀಡಿತರಿಗೆ ವರವಾಗಲಿದೆ. ಆದರೆ ಇದು ಇನ್ನೂ ಕೆಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅದುವರೆಗೆ ಲಭ್ಯ ಮಾರ್ಗವನ್ನೇ ಸವೆಸುತ್ತಿರಬೇಕು. ಇನ್ನೊಂದು ಮರೆತ ಸಂಗತಿ. ಸಂಶೋಧನೆಗಳ ಪ್ರಕಾರ ಮಿದುಳಿನ ನರ ಸಿಡಿತ (ಬ್ರೇನ್ ಹ್ಯಾಮರೇಜ್) ಉಂಟಾಗಲು ನೂರಾರು ಕಾರಣಗಳಿವೆ. ಕೆಲವುಮ್ಮೆ ಈ ಪಟ್ಟಿಗೆ ಸೇರದೆ ಸಿಡಿತಾಗುವುದೂ ಇದೆ. ಆಗ ಸಮಾಧಾನಕ್ಕಿರುವ ದಾರಿ ಎಂದರೆ ಹಣೆಬರೆಹ. ಆಗಿದ್ದಾಯಿತು. ಮುಂದೆ ನೋಡುವ ಎಂಬ ಮನೋಧರ್ಮ. ರೋಗಿಗೆ ಧೈರ್ಯ ತುಂಬುವ ವಿಷಯ ಇದೇ. ರೋಗಿಗೆ ವ್ಯವಸ್ಥೆ ಏನಾದರೂ ಇರಲಿ. ಆದರೆ ಇಷ್ಟಬಂದಲ್ಲಿ ಸ್ವತಂತ್ರವಾಗಿ ಓಡಾಡುವ ಶಕ್ತ ಇಲ್ಲದಿದ್ದರೆ ಅಂಥ ಜೀವನಕ್ಕೆ ಅರ್ಥವಿಲ್ಲ. ಎಂದಾದರೂ ಒಂದು ದಿನ ದಡಸಿಗುತ್ತದೆ ಎಂದು ಪ್ರಯತ್ನ ಮಾಡುತ್ತಿರುವುದು ಮಾತ್ರ ನಮ್ಮ ಕೆಲಸ ಅಂದುಕೊಳ್ಳಬೇಕು. ಇನ್ನೇನೂ ಇಲ್ಲ. ರೋಗಿಗೆ ವ್ಯವಸ್ಥೆ ಏನಾದರೂ ಇರಲಿ. ಆದರೆ ಇಷ್ಟಬಂದಲ್ಲಿ ಸ್ವತಂತ್ರವಾಗಿ ಓಡಾಡುವ ಶಕ್ತ ಇಲ್ಲದಿದ್ದರೆ ಅಂಥ ಜೀವನಕ್ಕೆ ಅರ್ಥವಿಲ್ಲ. ಎಂದಾದರೂ ಒಂದು ದಿನ ದಡಸಿಗುತ್ತದೆ ಎಂದು ಪ್ರಯತ್ನ ಮಾಡುತ್ತಿರುವುದು ಮಾತ್ರ ನಮ್ಮ ಕೆಲಸ ಅಂದುಕೊಳ್ಳಬೇಕು. ಇನ್ನೇನೂ ಇಲ್ಲ.
