
ಮಳೆಗಾಲದ ಆರಂಭದಲ್ಲೇ ಇದನ್ನು ಬರೆಯಬೇಕೆಂದಿದ್ದೆ. ಈಗ ಆಗುತ್ತಿದೆ. ಸಹ್ಯಾದ್ರಿ ಕಾಡುಗಳಲ್ಲಿ ಕಾಣಸಿಗುವ ಅನೇಕ ವಿಚಿತ್ರ ಜಂತುಗಳಲ್ಲಿ ದಾಟು ಬಳ್ಳಿ ಅಥವಾ ದಿಕ್ಕುಬಳ್ಳಿ ಎಂದು ಸ್ಥಳೀಯರು ಕರೆಯುವ, ಇಂಗ್ಲಿಷ್ ನಲ್ಲಿ ಹಾರ್ಸ ಹೇರ್ ಅನ್ನಲಾಗುವ ಜಂತುವೂ ಒಂದು. ಜೀವ ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿದ್ದರೂ ಸಹ್ಯಾದ್ರಿ ಕಾಡುಗಳಲ್ಲಿ ಇದರ ಬಗ್ಗೆ ಚಾಲ್ತಿಯಲ್ಲಿರುವ ಕತೆಗಳಿಗೆ ಅಲ್ಲಿ ಜಾಗವಿಲ್ಲ, ಈ ಬಗ್ಗೆ ಆಧುನಿಕ ಆಧುನಿಕ ವಿಜ್ಞಾನ ಏನೂ ಹೇಳುವುದಿಲ್ಲ. ಸಾಮಾನ್ಯವಾಗಿ ಸಿಹಿ ನೀರಿನ ಜೌಗು ಜಾಗಗಳಲ್ಲಿ ಕಂಡುಬರುವ ದಾಟುಬಳ್ಳಿ ಅಥವಾ ದಿಕ್ಕು ಬಳ್ಳಿಯ ಬಗ್ಗೆ ಸಹ್ಯಾದ್ರಿ ಒಡಲಿನ ಜನರಲ್ಲಿ ಬಂಡಿಗಟ್ಟಲೆ ಅನುಭವ ಕಥನಗಳು ಸಿಗುತ್ತವೆ. ನಾನೇ ಕಂಡ ಅನುಭವದಂತೆ ನಮ್ಮ ಊರಿನ ಮನೆಯ ಸಮೀಪದಲ್ಲಿದ್ದ ವ್ಯಕ್ತಿಯೊಬ್ಬ ಒಮ್ಮೆ ನಮ್ಮ ಮನೆಯ ದಿಬ್ಬದ ಬಳಿ ನಾಲ್ಕಾರು ತಾಸುಗಳಿಂದ ಒಮ್ಮೆ ಗರ ಬಡಿದವರಂತೆ ಮೂಕನಂತೆ ಕುಳಿತಿದ್ದ. ಅಷ್ಟರಲ್ಲಿ ಅವನ ಮನೆಯವರು ನೆಂಟರು ಊರೆಲ್ಲ ಹುಡುಕಿ ಸುಸ್ತಾಗಿದ್ದರು. ನಮ್ಮ ಅಪ್ಪ ಅವನ ವರ್ತನೆ, ಮಾತು ಕೇಳಿ ಇವನು ಅದೆಲ್ಲೋ ದಿಕ್ಕು ಬಳ್ಳಿ ದಾಟಿರಬೇಕೆಂದು ಅವನನ್ನು ಕೇಳಿದರು. ಇಲ್ಲೇ ಬಂದಿದ್ದೆ, ಮನೆಗೆ ಹೋಗುತ್ತಿದ್ದೇನೆ ಅಂದು ಮತ್ತೆ ಕುಳಿತಿದ್ದ. ಅಲ್ಲಾ ಮಾರಾಯ ಅಷ್ಟು ಹೊತ್ತಿನಿಂದ ಸುಮ್ಮನೇ ಕುಕುಳಿತಿದ್ದೀಯಾ ಏನು ದಿಕ್ಕು ಬಳ್ಳಿ ದಾಟಿದ್ಯಾ ಎಂದು ಕೇಳಿದ್ದೇ ತಡ, ಹೌದಾ, ಹೊರಟೆ ಅಂದವನೇ ಜಾಗ ಖಾಲಿ ಮಾಡಿದ್ದ. ಇಂಥ ನೂರಾರು ಕತೆಗಳು ನಿಮಗೆ ಸಹ್ಯಾದ್ರಿ ತಪ್ಪಲಿನಲ್ಲಿ ಎಲ್ಲೇ ಹೋಗಿ ಕೇಳಿ, ಸಹಜವಾಗಿ ಸಿಗುತ್ತದೆ, ಮಾತ್ರವಲ್ಲ ಜೊತೆಗೆ ಹೌದು ಒಮ್ಮೆ ಏನಾಯ್ತು ಗೊತ್ತ ಎಂಬ ಕತೆಯೂ ಹೊರಬರುತ್ತದೆ.
ಇದು ದಿಕ್ಕು ಬಳ್ಳಿಯ ಪೀಠಿಕೆ.
ನೆಮಾಟೋಮಾರ್ಫಾ ವರ್ಗಕ್ಕೆ ವೈಜ್ಞಾನಿಕವಾಗಿ ಸೇರುವ ಇದರ ಫೈಲಂ ಎಂಬ ನೆಂಟರ ಗುಂಪಲ್ಲಿ ಸುಮಾರು ೧೫೦ ಬಗೆಯನ್ನು ಗುರುತಿಸಲಾಗಿದ್ದು ಇನ್ನೂ ಸುಮಾರು ೨೦೦೦ಬಗೆಗಳು ಪ್ರಪಂಚದಲ್ಲಿರಬಹುದೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಮೊಟ್ಟೆ ಇಟ್ಟು ಮರಿ ಮಾಡುವ ಇದು ೫೦ರಿಂದ ಸುಮಾರಿ ೧೦೦ ಮಿಲಿಮೀಟರ್ ಉದ್ದ ಬೆಳೆಯುತ್ತದೆ. ೨ ರಿಂದ ೩ ಮಿಮೀ ಡಯಾಮೀಟರ್ ದಪ್ಪವಿದ್ದು ಒಮ್ಮೆಲೇ ಒತ್ತು ಶ್ಯಾವಿಗೆಯ ಒಂದು ಎಳೆಯಂತೆ ಕಾಣುತ್ತದೆ.
ರಸ್ತೆ ಅಥವಾ ಮಣ್ಣಿನ ಕಾಲುದಾರಿಯಲ್ಲಿ ಎಲೆಯೊಳಗೆ ಸುಮ್ಮನೇ ಸುತ್ತಿಕೊಂಡು ಬಿದ್ದಿರುತ್ತದೆ. ಯಾವುದಾದರೂ ಜೀವಿ ಅಕ್ಕ ಪಕ್ಕ ಓಡಾಡಿದರೆ ಅಥವಾ ಅದನ್ನು ದಾಟಿದರೆ ಸ್ವಲ್ಪ ತಲೆ ಎತ್ತಿ ಅತ್ತಿತ್ತ ನೋಡಿ ಮತ್ತೆ ಬಿದ್ದುಕೊಳ್ಳುತ್ತದೆ. ಹೀಗೆ ಅದನ್ನು ದಾಟಿದ ಯಾವುದೇ ಜೀವಿಗೆ ಇದ್ದಕ್ಕಿದ್ದಂತೆ ಮರೆವು ಆವರಿಸುತ್ತದೆ. ಮನುಷ್ಯನಿಗೆ ಮಾತ್ರವಲ್ಲ, ಎಷ್ಟೋ ಬಾರಿ ಕಾಡಿಗೆ ಮೇಯಲು ಹೋದ ಜಾನುವಾರುಗಳು ಕೂಡ ಒಂದೆರಡು ದಿನ ಕೊಟ್ಟಿಗೆಯತ್ತ ಸುಳಿಯದಿದ್ದರೆ ಅವೆಲ್ಲೋ ದಾಟುಬಳ್ಳಿ ದಾಟಿವೆ ಎಂದೇ ಮೊದಲು ತಿಳಿಯಲಾಗುತ್ತದೆ, ಅನಂತರ ಹುಲಿ, ಚಿರತೆಗಳ ವಿಷಯ. ಅನಂತರ ಹುಡುಕಾಟ. ಹೀಗೆ ಗುಂಪು ತಪ್ಪಿಸಿಕೊಂಡ ಜಾನುವಾರುಗಳು ಒಂದೇ ಜಾಗದಲ್ಲಿ ಇರುತ್ತವೆ ಅಥವಾ ಸ್ವಲ್ಪ ಆಚೀಚೆ ಅಡ್ಡಾಡುತ್ತವೆ ಅಷ್ಟೇ. ತಮ್ಮ ಗುಂಪಿನ ಇತರ ಸದಸ್ಯರು ಬಂದರೆ ಅಥವಾ ಮನೆಯ ಯಜಮಾನರು ಬಂದು ಕರೆದರೆ ಬರುತ್ತವೆ. ಈ ದಾಟು ಬಳ್ಳಿ ಕುರಿತು ಇಷ್ಟೆಲ್ಲ ವಿಚಿತ್ರ ಸಂಗತಿಗಳು ಬೇಕಾದಷ್ಟಿದ್ದರೂ ಆಧುನಿಕ ವಿಜ್ಞಾನ ಈ ಬಗ್ಗೆ ಗಮನಹರಿಸದೇ ಇದೆಲ್ಲ ಸುಳ್ಳು ಎಂದು ಭಾವಿಸಿ ಕುಳಿತಿದೆ. ವಿದೇಶಗಳಲ್ಲೂ ಈ ವರ್ಗದ ಜೀವಿಗಳಿದ್ದರೂ ಅವುಗಳ ಸುತ್ತ ನಮ್ಮಲ್ಲಿರುವಂತೆ ದಂತ ಕತೆಗಳು ಕಂಡುಬರುವುದಿಲ್ಲ, ಹಾಗೇನಾದರೂ ಇದ್ದಿದ್ದರೆ ಆಧುನಿಕ ವಿಜ್ಞಾನದಲ್ಲಿ ಇದರ ಬಗ್ಗೆ ಒಂದಿಷ್ಟಾದರೂ ವಿವರ ಸಿಗುತ್ತಿತ್ತು. ನಮ್ಮ ದೇಶದ ಜೀವ ವಿಜ್ಞಾನಿಗಳು ಸೂಕ್ಷ್ಮ ಜೀವ ವಿಜ್ಞಾನಿಗಳು ಇನ್ನಾದರೂ ಈ ಬಗ್ಗೆ ಗಮನಹರಿಸುವುದೊಳಿತು.
ಜೊತೆಗೆ ಈ ವರ್ಗದಲ್ಲಿ ಕಾಣುವ ಪ್ರಭೇದಗಳನ್ನು ಕೂಡ ನಮ್ಮವರು ಗುರುತಿಸಬೇಕು. ಕೇವಲ ಪಾಶ್ಚಾತ್ಯರ ನುಕರಣೆ ಮಾಡುವುದಲ್ಲ.ಹೀಗೆ ನಮ್ಮಲ್ಲಿನ ಅಧ್ಯಯನ ಭಿನ್ನವಾಗಿ ನಡೆದರೆ ಅದರಿಂದ ನಮ್ಮ ಜನಸಾಮಾನ್ಯರಿಗೂ ಸಮಾಜಕ್ಕೂ ತುಂಬ ಉಪಯೋಗವಾಗುತ್ತದೆ. ಆ ಜಂತುವನ್ನು ದಾಟುವುದಕ್ಕೂ ಮರೆವಿಗೂ ಏನು ಸಂಬಂಧ ಎಂಬ ಸಣ್ಣ ಪ್ರಶ್ನೆಯೇ ಅಧ್ಯಯನಕ್ಕೆ ದೊಡ್ಡ ಆಧಾರವಾಗಬಲ್ಲುದು. ಜೀವಿ ಅದನ್ನು ದಾಟಿದಾಗ ಆ ಜೀವಿ ಯಾವುದಾದರೂ ರಾಸಾಯನಿಕವನ್ನು ವಿಸರ್ಜಿಸಿ ತಾತ್ಕಾಲಿಕ ಮರೆವು ಬರುವಂತೆ ಮಾಡುತ್ತದಾ ಎಂಬ ಅಧ್ಯಯನ ನಿಜಕ್ಕೂ ಯಾವ ಬಾಂಡ್ ಸಿನಿಮಾಗಿಂತ ಕಡಿಮೆ ಆಗುವುದಿಲ್ಲ. ನಮ್ಮಲ್ಲಿ ಅಸಂಖ್ಯ ಹೆಸರಾಂತ ಜೀವ ವಿಜ್ಞಾನಿಗಳೂ ಸಂಶೋಧಕರೂ ಇದ್ದಾರೆ ಅಚರೆಲ್ಲ ಇಂಥದ್ದೊಂದು ಅಧ್ಯಯನ ಕೈಗೊಂಡು ಹೆಚ್ಚಿನದನ್ನು ಸಾಧಿಸಲಿ.