Monday, 20 June 2022

ಕುಲಪತಿನೇಮಕಾತಿ ನಿಯಮ ಬದಲಾವಣೆ ಖಂಡಿತ ಸರಿಯಲ್ಲ

ಮೊದಲು ಕೇರಳ ಕುಲಪತಿ ನೇಮಕಾತಿ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡುವ ಯತ್ನ ಮಾಡಿ ಸೋತಿತು. ಈಗ ಪಶ್ಚಿಮ ಬಂಗಾಳ ಇದರಲ್ಲಿ ಯಶಸ್ವಿ ಕಂಡಿದೆ. ಹೀಗೆ ಮಾಡುವ ಲಾಭ ನಷ್ಟಗಳೇನು? ನಷ್ಟ ಶಿಕ್ಷಣಕ್ಕೆ, ಲಾಭ ರಾಜಕೀಯಕ್ಕೆಹೇಗೆಅಂತೀರಾ?

ವಿಶ್ವ ವಿದ್ಯಾನಿಲಯದ ಆವರಣ ರಾಜಕೀಯ ಕೇಂದ್ರವಾಗಲು ಇದು ಆದ್ಯತೆ ಕೊಡುತ್ತದೆ. ಎಡ ಕಕ್ಶಗಳು ಅಧಿಕಾರದಲ್ಲಿರುವ ಕಡೆ ಇಂಥ ಚಿಂತನೆ ಏಕೆ ಬರುತ್ತಿದೆ? ಏಕೆಂದರೆ, ಸದ್ಯ ಚಾಲ್ತಿಯಲ್ಲಿರುವ ವಿವಿ ಮಾದರಿ ಹಂಬೋಲ್ಟನ ನಿಂದ ಬಂದುದು, ರಾಜಕೀಯ ವ್ಯವಸ್ತೆಯೇ ಅದರ ಆಶಯವಾಗಿತ್ತು. ಬರುಬರುತ್ತ ಕೇವಲ ಶಿಕ್ಷಣಕ್ಕೆ ಆದ್ಯತೆ ಇರುವಂತೆ ಅದು ರೂಪುಗೊಂಡು ಆಡಳಿತ ಪಕ್ಷಗಳಿಂದ ದೂರವಾಗುವಂತೆ ಮಾಡಲಾಯ್ತು, ಈಗ ಮತ್ತೆ ಅದೇ ಸ್ಥಿತಿಗೆ ಮರಳುವಂತೆ ಕಾಣುತ್ತಿದೆ.

ಒಂದು ದೃಷ್ಟಿಯಲ್ಲಿ ಇಂದಿನ ನಮ್ಮ ವಿವಿಗಳು ಪದವೀಧರ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿವೆ, ಇವರಿಗೆ ಪಕ್ಷಗಳು ಆಸರೆ ಕೊಡುತ್ತಿವೆ, ಹೀಗೆ ವಿವಿಗಳಿಗೂ ರಾಜಕೀಯಕ್ಕೂ ನಂಟು ಬಿದ್ದಿದೆ. ನಿರುದ್ಯೋಗಿ ಯುವಕರು ಪಕ್ಷಗಳ ಮೂಲ ಬಂಡವಾಳ. ಅವರನ್ನು ತಮ್ಮತ್ತ ಸೆಳೆದುಕೊಳ್ಳುವ ಜಾಗ ವಿವಿಗಳು. ಅಲ್ಲಿಯೂ ವಿದ್ಯಾರ್ಥಿ ಚುನಾವಣೆ, ಯುವ ನಾಯಕರನ್ನು ಬೆಳೆಸುವ ನೆಪ ಇತ್ಯಾದಿ ಒಳ್ಳೆಯ ಕಾರಣ ಕೊಟ್ಟು ಸಾಕಷ್ಟು ರಾಜಕಾರಣ ಮಾಡಲಾಗುತ್ತದೆ. ಯುವಕರು ಓದುವುದು ಬಿಟ್ಟು ಮರಿ ಪುಡಾರಿಗಳಾಗಿ ಅಲ್ಲಿ ರೂಪುಗೊಳ್ಳುತ್ತಾರೆ. ಅಷ್ಟಕ್ಕೂ ರಾಜಕಾರಣಿಯಾಗಲು ಓದು ಬರೆಹ ಏಕೆ? ಅದಕ್ಕೆ ಹಾಲಿ ಬೇಕಾದ ಯೋಗ್ಯತೆ ಕೊಲೆ ಸುಲಿಗೆ ಅತ್ಯಾಚಾರಗಳ ದಾಖಲೆ ಅನ್ನುವ ಸ್ಥಿತಿ ನಿರ್ಮಾಣವಾಗಿದೆ.

ಸಾಮಾನ್ಯವಾಗಿ ಎಲ್ಲ ಕಡೆಯೂ ರಾಜಕೀಯವಿದೆ ಅನ್ನಲಾಗುತ್ತದೆ. ಆದರೆ ರಾಜಕೀಯವೇ ಎಲ್ಲ ಕಡೆ ಮೂಗು ತೂರಿಸಿಕೊಂಡು ಹೋಗಿ ಎಲ್ಲವನ್ನೂ ಕುಲಗೆಡಿಸುತ್ತದೆ. ವಿವಿಗಳನ್ನೇ ನೋಡಿ ಸ್ವಾತಂತ್ರ್ಯದ ಕಾಲದಲ್ಲಿದ್ದ ನಮ್ಮ ರಾಜಾಜಿ, ನೆಹರೂ  ಬೋಸ್, ಗಾಂಧೀ, ಮಾಳವೀಯ, ಅಂಬೇಡ್ಕರ್ ಮೊದಲಾದವರು ಅಸಾಮಾನ್ಯ ಶಿಕ್ಷಣವೇತ್ತರಾಗಿದ್ದರು. ಅಂತೆಯೇ ಅಸಾಧಾರಣ ರಾಜಕಾರಣಿಗಳೂ ಆಗಿದ್ದರು. ಅನಂತರ ಆದ ಬದಲಾವಣೆಯೇ ಬೇರೆ. ಇದಕ್ಕೆ ಕಾರಣ ಕೇವಲ ಮತಗಳಿಕೆಯೇ ರಾಜಕಾರಣ ಆದುದು!

ಇದಕ್ಕಾಗಿ ಬೇಕಾದ ಜನರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಆಗತೊಡಗಿತು, ರಾಜಕೀಯದಲ್ಲಿ  ವ್ಯಕ್ತಿಯ ಯೋಗ್ಯತೆಯ ತೀರ್ಮಾನ ಇದರಿಂದ ಆಗತೊಡಗಿತು. ಪರಿಣಾಮವಾಗಿ ಸೋಕಾಲ್ಡ್ ನೇತಾಗಳ ಗಮನ ಸಮುದಾಯಗಳ ಮತ ಬೇಟೆಗೆ ತಿರುಗಿತು, ಪ್ರಗತಿ ಚಿಂತನೆಗಳ ಮೂಲಕ ಜನಮನ ಗೆಲ್ಲುವ ಬದಲಾಗಿ ಹೇಗಾದರೂ ಒಂದಿಷ್ಟು ಜನರನ್ನು ಸೆಳೆದಿಟ್ಟುಕೊಳ್ಳುವ ಪೈಪೋಟಿ ನಡೆಯತೊಡಗಿತು, ಇದರಿಂದ ಜಾತಿ, ಸವಲತ್ತುಗಳ ಆಮಿಷ ಮೊದಲಾದವು ಮುನ್ನೆಲೆಗೆ ಬಂದವು. ಅಪರಾಧಗಳ ಮೂಲಕ ಭೀತಿ ಹುಟ್ಟಿಸಿ ಕೂಡ ಜನರನ್ನು ಹಿಡಿದಿಡುವ ಯತ್ನಗಳೂ ಮುಂದಾದವು. ಇದು ಸುಲಭವಾದ್ದರಿಂದ ರಾಜಕೀಯ ಪ್ರವೇಶಕ್ಕೆ ಇದೇ ಮೊದಲ ಸೋಪಾನ ಎಂಬ ಕೆಟ್ಟ ಮಾದರಿ ರೂಪುಗೊಂಡಿತು. ಸಿನಿಮಾದಂಥ ಜನಪ್ರಿಯ ಮಾಧ್ಯಮ ಇದನ್ನು ವೈಭವೀಕರಿಸಿದ ಪರಿಣಾಮ ಯುವ ಜನತೆಗೆ ಅದೇ ಆದರ್ಶ ಎಂಬಂತಾಯಿತು. ೭೦ರ ದಶಕದಿಂದ ಈಚೆಗೆ ಇದು ಅತಿರೇಕ ತಲಪಿತು. ತುರ್ತು ಪರಿಸ್ಥಿತಿ ಕೂಡ ಇದಕ್ಕೆ ತುಪ್ಪ ಸುರಿಯಿತು. ಸ್ವಾತಂತ್ರ್ಯ ಹೋರಾಟ ಕಾಲದಲ್ಲೇ ಶಾಲೇ ಕಾಲೇಜುಗಳಿಗೆ ರಾಜಕೀಯ ಪ್ರವೇಶ ಪಡೆದಿತ್ತಾದರೂ ಅಂದು ಅದೊಂದು ಆದರ್ಶವಾಗಿತ್ತು. ಅನಂತರ ಅದು ಬಂಡವಾಳವಾಯ್ತುಬೇರೆ ಬೇರೆ ಕಾರಣಕ್ಕೆ ಪಕ್ಷಗಳು ಅದನ್ನು ಪೋಷಿಸುತ್ತ ಬಂದವು. ಶಿಕ್ಷಣದ ಸಂಸ್ಥೆಯಾದ ವಿಶ್ವವಿದ್ಯಾನಿಲಯ ಹಾಗೂ ಅದನ್ನು ನಿಯಂತ್ರಿಸುವ ಕುಲಪತಿಯನ್ನೇ ನಿಯಂತ್ರಣದಲ್ಲಿಟ್ಟುಕೊಂಡರೆ, ಅಲ್ಲಿನ ವಿದ್ಯಾರ್ಥಿಗಳೆಲ್ಲ ತಮ್ಮ ನಿಯಂತ್ರಣಕ್ಕೆ ಬರುತ್ತಾರೆಂಬುದನ್ನು ಕಂಡುಕೊಳ್ಳಲು ಪಕ್ಷಗಳಿಗೆ ಬಹುಕಾಲ ಬೇಕಾಗಲಿಲ್ಲ. ನೇರವಾಗಿ ಅಲ್ಲದಿದ್ದರೂ ವಿವಿಯನ್ನು ನಿಯಂತ್ರಿಸುವ ಜನತಂತ್ರದ ವ್ಯ್ವಸ್ಥೆಯ ಹೆಸರಿನ ಸಿಂಡಿಕೇಟ್ ಮತ್ತು ಕೌನ್ಸಿಲ್ ಗಳ ಹೆಸರಲ್ಲಿ ಕುಲಪತಿಯನ್ನು ಹಿಡಿತದಲ್ಲಿಟ್ಟುಕೊಳ್ಳುವ ಪರೋಕ್ಷ ವ್ಯವಸ್ಥೆ ಜಾರಿಗೆ ಬಂತು. ನೇರವಾಗಿ ಅಲ್ಲಿ ರಾಜಕೀಯ ಬಾರದಂತೆ ರಾಜ್ಯಪಾಲರ ಮೂಲಕ ಕುಲಪತಿಯ ನೇಮಕ ವ್ಯವಸ್ಥೆ  ಬಂತು. ಅಲ್ಲಿಯೂ ಕೊರತೆಗಳೆದ್ದು ನೇಮಕಾತಿ ಸಮಿತಿಗಳು ಬಂದವು. ಅಲ್ಲಿಯೂ ರಾಜಕೀಯ ಹೊಕ್ಕು ಇದೀಗ ನೇರ ಪ್ರವೇಶವೇ ಸರಿ ಎಂಬ ಸೂತ್ರಕ್ಕೆ ರಾಜ್ಯಗಳು ಬರತೊಡಗಿವೆ. ಇದು ಸರಿಯಾದ ಬೆಳವಣಿಗೆಯಲ್ಲ. ವಿವಿಗಳು ಕೇವಲ ಶಿಕ್ಷಣ ಕೇಂದ್ರಗಳಾಗಿರಬೇಕು. ವಿದ್ಯೆ ಪಡೆದ ವಿದ್ಯಾರ್ಥಿ ಅನಂತರ ತನ್ನ ಇಷ್ಟದಂತೆ ಸಮಾಜದಲ್ಲಿ ಏನಾದರೂ ಆಗುವ ಸ್ವಾತಂತ್ರ್ಯ ಕೊಡಬೇಕು. ಬದಲಾಗಿ ವಿವಿಗಳ ಆವರಣ ರಾಜಕೀಯ ದೊಂಬರಾಟಕ್ಕೆ ಸ್ಥಳವಾಗುವಂತೆ ಮಾಡಬಾರದು. ಸದ್ಯ ಕುಲಪತಿಯ ನೇಮಕಾತಿ ಅಧಿಕಾರ ಮುಖ್ಯಮಂತ್ರಿಗೆ ಬರುವುದರಿಂದ ಪರಿಣಾಮ ಇದೇ ಆಗುವುದು.

೮೦ರ ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ಎಡ ಪಕ್ಷಗಳ ಹಿಡಿತ ಕ್ರಮೇಣ ಕುಸಿಯತೊಡಗಿತು. ಅದುವರೆಗೆ ಆಧುನಿಕ ಶಿಕ್ಷಣ ಅಂದರೆ ತಾವೇ ತಿಳಿದು ಬಡಿಸಿದ್ದು ಎಂಬಂತೆ ಶಿಕ್ಷಣದ ಎಲ್ಲ ನೇಮಕಾತಿಗಳಲ್ಲೂ ತಮ್ಮ ಧೋರಣೆ ಉಳ್ಳವರನ್ನೇ ನೇಮಿಸುತ್ತಿದ್ದ ವ್ಯವಸ್ಥೆ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರಣದಿಂದ ನೇಮಕಾತಿ ಪ್ರಕ್ರಿಯೆ ಬದಲಾಗಿ ರಾಜಕೀಯ ಪ್ರವೇಶ ಹಿನ್ನಡೆಗೆ ಹೋಯಿತು. ಹೀಗಾಗಿ ಯುವ ಜನರ ಗಮನ ತಮ್ಮ ಭವಿಷ್ಯ  ರಾಜಕೀಯ ಒಡನಾಟದಲ್ಲಿಲ್ಲ ಎಂಬ ಅರಿವು ಪಡೆದು ಬೇರೆಡೆಗೆ ಹೊರಳಿತು. ಇದರಿಂದ ವಿವಿ ಆವರಣಗಳಲ್ಲಿರಾಜಕೀಯ ಆರ್ಭಟ ಮೂಲೆಗೆ ಸರಿಯಿತು. ಹೀಗಾಗಿ ಕ್ಯಾಂಪಸ್ ಗಳಲ್ಲಿ ಪಕ್ಷಗಳ ಹಿಡಿತ ಸಡಿಲವಾಯಿತು. ನೇಮಕಾತಿ ಮಾತ್ರವಲ್ಲದೇ ಅಲ್ಲಿ ಏನು ಬೋಧಿಸಬೇಕು ಎಂಬುದನ್ನೂ ಪಕ್ಷಗಳು ನಿರ್ಧರಿಸುತ್ತಿದ್ದವು. ಒಂದೊಂದು ಕ್ಯಾಂಪಸ್ ಗಳಿಂದ ಒಂದೊಂದು ಪಕ್ಷಗಳು ಪ್ರಾಬಲ್ಯ ಸಾಧಿಸತೊಡಗಿದವು. ಇದರ ಪರಿಣಾಮ ಜೆ ಎನ್ ಯು ವಿನಿಂದ ಕೊಟ್ಟಾಯಂ ತನಕ ಎಲ್ಲ ಕಡೆ ಸಮವಾಯಿತು. ಶಿಕ್ಷಣದ ಆದ್ಯತೆ ಕುಸಿಯಿತು. ವಿದ್ಯಾರ್ಥಿಗಳು ಯುವ ನಾಯಕ ಪಟ್ಟಕ್ಕೆ ಮುಗಿಬೀಳತೊಡಗಿದರು. ಅಲ್ಲಿಗೆ ವಿವಿಗಳ ಆಶಯ ಸಂಪೂರ್ಣ ಕುಲಗೆಟ್ಟಿತು. ಅನಂತರದ ದಶಕಗಳ ಸಾಮಾಜಿಕ ಆರ್ಥಿಕ ಪರಿಸ್ಥಿತಿಯ ಬದಲಾವಣೆ ವಿದ್ಯಾರ್ಥಿಗಳ ಧೋರಣೆಯನ್ನೂ ಬದಲಿಸಿ ಕ್ಯಾಂಪಸ್ ಗಳಲ್ಲಿ ಪಕ್ಷಗಳ ಅಸ್ತಿತ್ವವನ್ನೇ ಇಲ್ಲವಾಗುವಂತೆ ಮಾಡಿತು. ಕಂಗೆಟ್ಟ ಪಕ್ಷಗಳಿಗೆ ಬೇರೆ ದಾರಿ ತಿಳಿದಿರಲಿಲ್ಲ, ಪ್ರಗತಿಯ ಮೂಲಕ ಜನಾಕರ್ಷಿಸುವ ವಿಧಾನ ಮೊದಲೇ ಗೊತ್ತಿರಲಿಲ್ಲ. ಹೀಗಾಗಿ ಪಕ್ಷಗಳು  ಮೂಲೆಗೆ ಸರಿದವು. ಅನೇಕ ಕಡೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಡಿತ ಹೊಂದಿದ್ದ ಎಡ ಪಕ್ಷಗಳು ಕಕ್ಕಾಬಿಕ್ಕಿಯಾಗಿ ಈಗ ನೇರವಾಗಿ ಹಿಡಿತ ಸಾಧಿಸಿ ಹಳೆಯ ಪರಿಸ್ಥಿತಿಗೆ ಮರಳುವ ಯತ್ನವನ್ನು ಕಾನೂನು ಬದಲಾವಣೆ ಮೂಲಕ ಸಾಧಿಸಲು ಹೊರಟಿವೆ. ಎಲ್ಲ ಪಕ್ಷಗಳಿಗೂ ರಾಜಕೀಯವಾಗಿ ತಮ್ಮ ಹಿಡಿತ ಇರುತ್ತದೆ ಎಂಬ ಕಾರಣಕ್ಕೆ ಇಂಥ ಮಾರ್ಗ ಸದ್ಯ ಸರಿ ಎನಿಸಿರಬೇಕು. ಹಾಗಾಗಿ ಯಾರೂ ಇದರ ವಿರುದ್ಧ ದನಿ ಎತ್ತುತ್ತಿಲ್ಲ. ಆಗಲಿ, ನಿಜವಾದ ಶಿಕ್ಷಣ ಕಾಳಜಿ ಇರುವ ಜನ ಭವಿಷ್ಯ ಏನಾಗುತ್ತದೆ ಎಂದು ಹೇಳಬೇಡವೇ? ಇಲ್ಲ, ಅವರೂ ಸುಮ್ಮನಿದ್ದಾರೆ. ಶಿಕ್ಷಣದ ಮೂಲ ಆಶಯಕ್ಕೆ ಭಂಗ ತರುವ ಇಂಥ ಕಾನೂನು ಬದಲಾವಣೆ ಸರಿಯಲ್ಲ. ಇದರಿಂದ ವಿವಿಗಳ ಆವರಣ ರಾಜಕೀಯ ಸಮಾವೇಶದ ತಾಣವಾಗುತ್ತದೆ, ಪಕ್ಷಗಳ ಪ್ರಣಾಳಿಕೆ ಪಥ್ಯವಾಗುತ್ತದೆ, ವಿದ್ಯಾರ್ಥಿಗಳು ಯಾವುದೋ ಪಕ್ಷದ ಕಾರ್ಯಕರ್ತರಾಗಿ ತಯಾರಾಗುತ್ತಾರೆ. ಈಗಲೂ ಕಾಲ ಮಿಂಚಿಲ್ಲ ಕುಲಪತಿಗಳ ನೇಮಕಾತಿಯ ಪರಮಾಧಿಕಾರ ಆಡಳಿತ ನಡೆಸುವ ರಾಜಕೀಯ ಮುಖಂಡರಾದ ಮುಖ್ಯಮಂತ್ರಿಗೆ ಹೋಗುತ್ತಿರುವ ಬೆಳವಣಿಗೆಯನ್ನು ತಡೆಯಬೇಕು. ಇಲ್ಲವಾದಲ್ಲಿ ವಿವಿಯೂ ಒಂದು ಪಂಚಾಯ್ತಿಕಟ್ಟೆಯಾಗುತ್ತದೆ.


Friday, 17 June 2022

ಬೆಂಗಳೂರು: ಶಿಥಿಲಾವಸ್ಥೆಗೆ ಜಾರುತ್ತಿದೆಯೇ?

ಪ್ರಪಂಚದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಸುಸ್ಥಿರ ಆರ್ಥಿಕ ವ್ಯವಸ್ಥೆ, ಸಾಕಷ್ಟು ಮೂಲಸೌಕರ್ಯ, ಆರೋಗ್ಯ ಮತ್ತು ಶಿಕ್ಷಣ ಅಭಿವೃದ್ಧಿಯ ಮಾನದಂಡಗಳು. ಆಡಳಿತ ವ್ಯವಸ್ಥೆಗೆ ಲಭ್ಯ ಸಂಪನ್ಮೂಲ ಮತ್ತು ಸಾಮಾಜಿಕ ಪರಿಸ್ಥಿತಿಯ ದೂರದೃಷ್ಟಿ ಇಲ್ಲದೇ ಅಭಿವೃದ್ಧಿಯ ಯೋಜನೆ ಹಮ್ಮಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿಯೇ ಇನ್ನು ದಶಕದ ಒಪ್ಪತ್ತಿನಲ್ಲಿ ನಮ್ಮ ಊರು ಅಥವಾ ರಾಜ್ಯ ಅಥವಾ ದೇಶ ಹೇಗಿರಬಹುದು ಎಂಬ ಕಲ್ಪನೆ ಆಡಳಿತ ವ್ಯವಸ್ಥೆಗೆ ಇರಬೇಕಾದುದು ಅಗತ್ಯ. ಪ್ರಸ್ತುತ ಕೃಷಿ, ಕೈಗಾರಿಕೆ, ಸಂವಹನ, ಸಂಪರ್ಕ ಉದ್ಯೋಗ, ಶಿಕ್ಷಣ ಆರೋಗ್ಯ ಮೊದಲಾದ ವಿಷಯಗಳಲ್ಲಿ ಖಾಸಗಿ ಪಾಲುದಾರಿಕೆಯಿಂದ ಜನ ಸಾಮಾನ್ಯರು ತಮಗೆ ಏನು ಬೇಕೋ ಅದನ್ನು ತಮ್ಮ ಪಾಡಿಗೆ ತಾವು ವ್ಯವಸ್ಥೆ ಮಾಡಿಕೊಳ್ಳುತ್ತ ಹೋಗುತ್ತಿದ್ದಾರೆ. ಈ ವಿಷಯದಲ್ಲಿ ಸರ್ಕಾರ ಅಥವಾ ಆಡಳಿತ ವ್ಯವಸ್ಥೆ ಖಾಸಗಿ ಪಾಲುದಾರರಿಗೆ ಅಥವಾ ಜನಸಾಮಾನ್ಯರಿಗೆ ಅಗತ್ಯ ಅನುಮತಿ ಕೊಡುವ ಕೆಲಸವನ್ನಷ್ಟೇ ಮಾಡುತ್ತಿದೆ. ತನ್ನ ನೌಕರ ವರ್ಗಕ್ಕೆ ಸಂಬಳ ಕೊಡುವುದು, ತೆರಿಗೆ ಸಂಗ್ರಹ, ಪೊಲೀಸ್ ವ್ಯವಸ್ಥೆ, ತಕ್ಕ ಮಟ್ಟಿಗೆ ನೀರು ಮತ್ತು ವಿದ್ಯುತ್ ಸರಬರಾಜು ಹಾಗೂ ಸಾರಿಗೆ ಸಂಪರ್ಕ ಇಷ್ಟು ಬಿಟ್ಟರೆ ಯಾವುದೇ ಸರ್ಕಾರ ಜನರ ಜೀವನ ಮಟ್ಟ ಸುಧಾರಣೆಗೆ ಕೊಡುತ್ತಿರುವ ಸೇವೆ ಅಷ್ಟರದ್ದೇ. ಒಂದು ಕ್ಷಣ ಶಿಕ್ಷಣ, ಆರೋಗ್ಯ, ದೂರವಾಣಿ ಮೊದಲಾದ ಕ್ಷೇತ್ರಗಳಲ್ಲಿ ಖಾಸಗಿ ಸೇವೆ ಸಂಪೂರ್ಣ ನಿಂತರೆ ಅರಾಜಕತೆ ಉಂಟಾಗಲು ಇನ್ನೇನೂ ಬೇಕಿಲ್ಲ. ಇಷ್ಟು ಅಧ್ವಾನವಾಗಿದೆ ನಮ್ಮ ಸರ್ಕಾರಿ ವ್ಯವಸ್ಥೆ. ವಸತಿ ಸೌಕರ್ಯದ ವಿಷಯದಲ್ಲಿಯೂ ಈ ಮಾತು ಅಕ್ಷರಶಃ ಸತ್ಯ. 

ಮಾನವ ನಾಗರಿಕತೆಗೆ ವಿನಾಶವಿದೆ. ಇದನ್ನು ನಾಶವಾಗಿಹೋದ ಅನೇಕ ನಾಗರಿಕತೆಗಳೇ ಹೇಳುತ್ತವೆ. ನಾಗರಿಕತೆಯೇ ನಾಶವಾದ ಮೇಲೆ ನಗರಗಳ ಮಾತೇನು? ಅವೂ ನಾಶವಾಗುತ್ತವೆ. ಹೌದು. ಉತ್ತರ ಅಮೆರಿಕ ಮತ್ತು ಯೂರೋಪಿನ ಬಹಳಷ್ಟು ದೇಶಗಳಲ್ಲಿ “ಅರ್ಬನ್ ಡಿಕೇ’’ ಎಂಬ ಪರಿಕಲ್ಪನೆ ಇದೆ. ಜನವಸತಿ ಹೀನತೆ, ಅರ್ಥವ್ಯವಸ್ಥೆಯ ಬದಲಾವಣೆ, ನಿರ್ಗತಿಕ ಆಸ್ತಿ, ನಿರುದ್ಯೋಗ ಹೆಚ್ಚಳ, ಒಡೆದ ಕುಟುಂಬ, ರಾಜಕೀಯ ಅಭದ್ರತೆ, ಅಪರಾಧ ಹೆಚ್ಚಳ, ಅನನುಕೂಲಕರ ನಗರ ವಿನ್ಯಾಸಗಳಿಂದ ನಗರವೊಂದು ಶಿಥಿಲಾವಸ್ಥೆ ತಲುಪುತ್ತದೆ ಎಂದು ಈ ಪರಿಕಲ್ಪನೆ ಹೇಳುತ್ತದೆ. 19ನೇ ಶತಮಾನದ ಅಂತ್ಯದಲ್ಲಿ ಹಾಗೂ 1970 ಮತ್ತು 1980ರ ದಶಕಗಳಲ್ಲಿ ಉತ್ತರ ಅಮೆರಿಕ ಮತ್ತು ಯರೋಪಿನ ಬಹಳಷ್ಟು ಕಡೆಗಳಲ್ಲಿ ಈ ವಿದ್ಯಮಾನ ಹೆಚ್ಚಾಗಿ ಕಂಡುಬಂದಿತ್ತು. ಗ್ಲಾಸ್ಗೋ, ಸೌತ್ ವೇಲ್ಸ್, ಬರ್ಮಿಂಗ್‍ಹ್ಯಾಂ, ಮಾಂಚೆಸ್ಟರ್, ಲಿವರ್‍ಪೂಲ್ ಮೊದಲಾದ ನಗರಗಳು ಈ ಅನುಭವವನ್ನು ಕಂಡಿವೆ. ಶಿಥಿಲಾವಸ್ಥೆ ಕಂಡ ನ್ಯೂಯಾರ್ಕಿನ ಬ್ರಾಂಕ್ಸ್ ನಗರದ ದಕ್ಷಿಣ ಭಾಗವನ್ನು ಮತ್ತೆ ಕಟ್ಟುವ ಉದ್ದೇಶದಿಂದ ಅಮೆರಿಕದ ಅಧ್ಯಕ್ಷರಾದ ಜಿಮ್ಮಿ ಕಾರ್ಟರ್ ಮತ್ತು ರೊನಾಲ್ಡ್ ರೀಗನ್ ಭೇಟಿ ನೀಡಿದ್ದರು. 1990ರ ನಂತರ ಈ ನಗರ ಮತ್ತೆ ಸುಸ್ಥಿತಿಯತ್ತ ಬಂದಿತು. 1960 ಮತ್ತು 70ರ ದಶಕದಲ್ಲಿ ಈ ನಗರದ ಜೀವನ ಮಟ್ಟ ಕುಸಿದು ಹೇಗೆ ಶಿಥಿಲತೆಯತ್ತ ಜಾರಿತು ಎಂಬ ವಿಸ್ತøತ ವಿವರಣೆಯನ್ನು ರಾಬರ್ಟ್ ಕಾರೋನ ಜೀವನ ಚರಿತ್ರೆ “ದಿ ಪವರ್ ಬ್ರೋಕರ್’’ನಲ್ಲಿ ಕಾಣಬಹುದು.

ಅದೇನೇ ಇರಲಿ, ನಗರವೊಂದು ತಾಳಿಕೊಳ್ಳಲಾರದಷ್ಟು ಜನಂಸಂಖ್ಯೆ ಹೊಂದಿದ್ದು, ಮೂಲಸೌಕರ್ಯ ಕೊರತೆ, ಸಾಮಾಜಿಕ ಮತ್ತು ಸಾಂಸ್ಕøತಿಕ ಪರಕೀಯತೆ, ಸಾರ್ವಜನಿಕ ಕುಂದು ಕೊರತೆ ನಿರ್ವಹಣೆಯ ಕೊರತೆ, ಕಾನೂನು ಮತ್ತು ಸುವ್ಯವಸ್ಥೆಯ ಕೊರತೆ ಮೊದಲಾದ ಸಮಸ್ಯೆಗಳು ಹುಟ್ಟಿದಾಗ ಆ ನಗರದಲ್ಲಿ ಅಪರಾಧ ಹೆಚ್ಚಳವೂ ಆಗುತ್ತದೆ. ಮಾನವಂತರು, ಸಭ್ಯರು ಊರು ತೊರೆಯಲಾರಂಭಿಸುತ್ತಾರೆ. ನಗರ ಶಿಥಿಲಾವಸ್ಥೆಯತ್ತ ಜಾರತೊಡಗುತ್ತದೆ. ಬೆಂಗಳೂರು ಇದೇ ದಾರಿಯಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಕಾರಣವಿಲ್ಲದಿಲ್ಲ. ಮೊದಲನೆಯದಾಗಿ ನಗರ ಶೈಥಿಲ್ಯಕ್ಕೆ ಇರಬೇಕಾದ ಎಲ್ಲ ಕಾರಣಗಳನ್ನೂ ಬೆಂಗಳೂರು ಹೆಚ್ಚೂ ಕಡಿಮೆ ಈಗಾಗಲೇ ಪೂರೈಸಿದೆ. ಸಾಕಷ್ಟು ನೀರು, ವಿದ್ಯುತ್ ಇಲ್ಲ, ನಿವೇಶನದ ಬೆಲೆ ಅಪಾರ ಏರಿ ಅವುಗಳನ್ನು ಕೊಳ್ಳುವವರಿಲ್ಲ, ನಗರ ಸಾಮಥ್ರ್ಯವನ್ನೂ ಮೀರಿ ಜನ, ಜನರನ್ನೂ ಮೀರಿ ವಾಹನಗಳಿವೆ. ಶುದ್ಧ ಹವೆ ಇಲ್ಲ, ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ. ಅಪರಾಧದ ಬಗ್ಗೆ ಹೇಳದಿರುವುದು ವಾಸಿ, ಹೆಚ್ಚೂ ಕಡಿಮೆ ನಿತ್ಯಕ್ಕೊಂದು ಕೊಲೆ ಸಾಮಾನ್ಯ. ಸಾರ್ವಜನಿಕ ಕುಂದು ಕೊರತೆಗೆ ಸ್ಪಂದಿಸುವವರಿಲ್ಲ. ಇಷ್ಟಾದ ಮೇಲೆ ಜನ ಗುಳೆ ಹೋಗುವುದೊಂದೇ ಬಾಕಿ ಇದೆ. 

ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯೆಯ ಸ್ಥಿತಿಗತಿ ಕುರಿತ 2007ರ ವರದಿಯನ್ನು ನೋಡಿದರೆ ಬೆಂಗಳೂರು ಪಾಲಿಗೆ ಶಿಥಿಲಾವಸ್ಥೆ ಬಹಳ ದೂರವೇನೂ ಇಲ್ಲ ಎನಿಸುತ್ತದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ, ಹೆಚ್ಚು ಜನಸಂಖ್ಯೆಯುಳ್ಳ ಮೂರನೇ ಅತಿ ದೊಡ್ಡ ನಗರ ಬೆಂಗಳೂರು. 2020-30ರ ವೇಳೆಗೆ ಗ್ರಾಮಗಳಿಗಿಂತ ನಗರಗಳಲ್ಲಿ ವಾಸ ಮಾಡುವ ಜನಸಂಖ್ಯೆಯೇ ಅಧಿಕವಾಗಿರುತ್ತದೆ ಎಂದು ವರದಿ ಹೇಳುತ್ತದೆ. ಇದಕ್ಕೆ ಬೆಂಗಳೂರು ಕೂಡ ಹೊರತಲ್ಲ. ಪ್ರಸ್ತುತ ಪ್ರಪಂಚದಲ್ಲಿ 6.6 ಶತಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ನಗರಗಳಲ್ಲಿದ್ದಾರೆ. ಇದರಲ್ಲಿ ಬಹುಪಾಲು ಜನ ಅಭಿವೃದ್ಧಿಶೀಲ ದೇಶಗಳಲ್ಲಿದ್ದಾರೆ. ಈ ಪ್ರಮಾಣ 2050ರ ವೇಳೆಗೆ ಶೇ.37ರಷ್ಟು ಹೆಚ್ಚುತ್ತದೆ. ಅಂದರೆ 6.616 ಶತಕೋಟಿ ಜನಸಂಖ್ಯೆ 9.076 ಶತಕೋಟಿಗೇರುತ್ತದೆ. ಇದರಲ್ಲಿ ಬಹುಪಾಲು ಏಷ್ಯಾ ಮತ್ತು ಆಫ್ರಿಕಾಗಳಲ್ಲಿರುತ್ತದೆ. ದಕ್ಷಿಣ ಏಷ್ಯಾದ ಮುಂಬೈ, ಕೊಲ್ಕೊತಾ, ದೆಹಲಿ ಮತ್ತು ಢಾಕಾ ಜನರಿಂದ ಕಿಕ್ಕಿರಿಯುತ್ತವೆ. ಪ್ರಪಂಚದ ಶೇ.37ರಷ್ಟು ಕೊಳೆಗೇರಿ ಭಾರತ ಮತ್ತು ಚೀನಾದಲ್ಲಿರುತ್ತದೆ. ಅಲ್ಲದೇ ಈ ಎರಡು ದೇಶಗಳ ಶೇ.56ರಷ್ಟು ಜನಸಂಖ್ಯೆ ಕೊಳಗೇರಿಯಲ್ಲಿ ವಾಸಮಾಡುತ್ತದೆ. 

ಭಾರತದ ನಗರ ಪ್ರದೇಶದಲ್ಲಿರುವ ಜನಸಂಖ್ಯೆ ಶೇ.30ರಷ್ಟು. ಈ ಪ್ರಮಾಣ 2030ರ ವೇಳೆಗೆ ಶೇ.40.7ರಷ್ಟು ಹೆಚ್ಚುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಜೊತೆಗೆ ಇನ್ನೂ ಭಯಾನಕ ಸಂಗತಿಯನ್ನೂ ಅದು ಹೇಳಿದೆ. ಚೆನ್ನೈಯಲ್ಲಿ ಸುಧಾರಿಸಲು ಸಾಧ್ಯವೇ ಇಲ್ಲದ ರೀತಿಯಲ್ಲಿ ಸಂತಾನೋತ್ಪತ್ತಿ ಪ್ರಮಾಣ ಕುಸಿದಿದ್ದು, ಹತ್ತಕ್ಕೂ ಹೆಚ್ಚು ಪ್ರಸೂತಿ ಚಿಕಿತ್ಸಾಲಯಗಳನ್ನು ವೃದ್ಧಾಪ್ಯ ಚಿಕಿತ್ಸಾ ಘಟಕಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದೆ. ಇದೇ ಬೆಳವಣಿಗೆ ಬೆಂಗಳೂರಿನಲ್ಲೂ ಕಾಣತೊಡಗಿದೆ. 

ಹೀಗಾದಾಗ ವಲಸೆ ಬಂದ ಜನರೇ ನಗರದ ಜನರಾಗುತ್ತಾರೆ. ಅಲ್ಲೇ ಹುಟ್ಟಿ ಬೆಳೆಯುವ ಜನರ ಪ್ರಮಾಣ ಕುಸಿಯುತ್ತದೆ. ಸಾಮಾಜಿಕ ಮತ್ತು ಸಾಂಸ್ಕøತಿಕ ಪರಕೀಯತೆ ಜನ ಸಮುದಾಯದಲ್ಲಿ ಕಾಣಿಸುತ್ತದೆ. ಇಷ್ಟಾದರೂ ನಗರಕ್ಕೆ ಬರುವ ಜನರನ್ನು ತಡೆಯುವ ಯತ್ನ ಮಾಡಬೇಡಿ. ಅಗತ್ಯ ಸೌಲಭ್ಯವನ್ನು ಒದಗಿಸಿ. ಇದರಿಂದ ಉದ್ಯೋಗ ಮತ್ತು ಸಾಂಸ್ಕøತಿಕ-ಸಾಮಾಜಿಕ ಲಾಭವಿದೆ ಎಂದು ವಿಶ್ವಸಂಸ್ಥೆ ಹೇಳಿದೆಯಲ್ಲದೇ ಚೀನಾದಲ್ಲಿ ನಗರಕ್ಕೆ ವಲಸೆ ಬರುವುದನ್ನು ತಡೆಯುತ್ತಿರುವುದು ಸರಿಯಲ್ಲ ಎಂದು ಹೇಳಿದೆ. ಇದು ಭಾರತಕ್ಕೂ ಅನ್ವಯಿಸುವ ಮಾತು. ಹಳೇ ಬೆಂಗಳೂರಿನ ಸುತ್ತ ಒಂದೆರಡು ದಶಕಗಳಿಂದ ಈಚೆಗೆ ನಿರ್ಮಾಣವಾದ ಬಡಾವಣೆಗಳು ಉದ್ಯಾನ, ಗಿಡಮರಗಳು ಮತ್ತು ಸಾಕಷ್ಟು ಅಗಲ ರಸ್ತೆಗಳಿಂದ ತಕ್ಕಮಟ್ಟಿಗೆ ವಾಸಯೋಗ್ಯವಾಗಿವೆ. ನಗರ ಸುಭಾಷ್‍ನಗರ, ಚಿಕ್ಕಪೇಟೆ, ಬಳೇಪೇಟೆ ಮುಂತಾದ ಬೆಂಗಳೂರು ಸೆಂಟ್ರಲ್ ಪ್ರದೇಶ, ಶಿವಾಜಿನಗರ, ವಸಂತನಗರ, ಕಂಟೋನ್ಮೆಂಟ್ ಮೊದಲಾದ ದಟ್ಟ ವಾಣಿಜ್ಯ ವಹಿವಾಟಿನ ಪ್ರದೇಶಗಳಲ್ಲಿ ವಾಸ ಇರುವ ಜನರಿಗೆ ಈ ನಗರ ಜೀವನ ವೈರಾಗ್ಯವನ್ನೇ ಹುಟ್ಟಿಸಿದ್ದರೆ ಅಚ್ಚರಿ ಇಲ್ಲ. 

ಉತ್ತಮ ಜನವಸತಿ ಸೌಕರ್ಯ ಕೊರತೆ ನಗರ ಶಿಥಿಲಾವಸ್ಥೆಗೆ ಮೊದಲ ಕಾರಣ. ಆರ್ಥಿಕ ಹಿಂಜರಿತದ ಹೊಡೆತದಿಂದ ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರ ಶೇ.40ರಷ್ಟು ಕುಸಿದಿದೆ ಎನ್ನುತ್ತಾರೆ ವಹಿವಾಟುದಾರರು. ಸಾಫ್ಟ್‍ವೇರ್ ತಂತ್ರಜ್ಞರು ನೆಲಕ್ಕೆ ಇಡುತ್ತಿದ್ದ ಬೇಡಿಕೆ ಕುಸಿದ ಪರಿಣಾಮ ಇದು. ಸಾಫ್ಟ್‍ವೇರ್ ತಂತ್ರಜ್ಞಾನ ಕೇಂದ್ರವಾಗುವ ಮೊದಲು ಅಂದರೆ 1990 ದಶಕಕ್ಕಿಂತ ಮುಂಚೆ ಬೆಂಗಳೂರು ನಗರ ವ್ಯಾಪ್ತಿಯ ನೆಲದ ಬೇಡಿಕೆ ಅಸಹಜವಾಗಿರಲಿಲ್ಲ. ಬೇಡಿಕೆ ಹೆಚ್ಚಳ ಬೆಲೆ ಇಳಿಸುತ್ತದೆ ಎಂಬ ಕೇನ್ಸ್ ಸಿದ್ಧಾಂತ ಇಲ್ಲಿ ತಲೆಕೆಳಗಾಗಿದೆ. ಈಗಲೂ ಬೆಂಗಳೂರು ವ್ಯಾಪ್ತಿಯ ನೆಲದ ಬೆಲೆ ಕಡಿಮೆ ಏನಲ್ಲ. ವರ್ತುಲ ರಸ್ತೆಯ ಆಸುಪಾಸಿನಲ್ಲಿ ಕೆರೆ ಕೊಳ್ಳಗಳಿದ್ದ ಜಾಗದ ಸಾವಿರಾರು ವಸತಿ ಸಂಕೀರ್ಣಗಳು ನಾಲ್ಕಾರು ವರ್ಷಗಳಿಂದ ಖಾಲಿ ಹೊಡೆಯುತ್ತಿವೆ. ರಿಯಲ್ ಎಸ್ಟೇಟುದಾರರ ದುರಾಸೆ ಮತ್ತು ಸರ್ಕಾರದ ಸ್ಟಾಂಪ್ ಡ್ಯೂಟಿ ನೆಲದ ಬೆಲೆಯನ್ನು ಗಗನಕ್ಕೇರಿಸಿದೆ. ನಿಜವಾದ ನೆಲದ ಬೆಲೆಗಿಂತ ನಾಲ್ಕಾರು ಪಟ್ಟು ಏರಿದ್ದ ಬೆಲೆ ಈಗ ಶೇ.40ರಷ್ಟು ಇಳಿದಿದ್ದರೂ ಅದು ದುಬಾರಿಯೇ. ಬೆಂಗಳೂರಿನಲ್ಲಿ ಸದ್ಯ ಇದ್ದುದರಲ್ಲಿಯೇ ಕಡಿಮೆ ನೆಲದ ಬೆಲೆ ಇರುವುದು ಬನ್ನೇರುಘಟ್ಟ ರಸ್ತೆ ಆಸುಪಾಸಿನಲ್ಲಿ. ಇಲ್ಲಿ ವಸತಿ ಉದ್ದೇಶದ ಪ್ರತಿ ಚದರ ಅಡಿಗೆ 1100-1600ರೂ. ಬೆಲೆ ಇದ್ದರೆ, ವಾಣಿಜ್ಯೋದ್ಯೇಶದ ಜಾಗಕ್ಕೆ ಪ್ರತಿ ಚದರ ಅಡಿಗೆ 2000-3000ರೂ. ಇದೆ. ಅತ್ಯಂತ ದುಬಾರಿ ಜಾಗ ಎಂ.ಜಿ. ರಸ್ತೆ. ಇಲ್ಲ ಪ್ರತಿ ಚದರ ಅಡಿ ವಸತಿ ಜಾಗದ ಬೆಲೆ 2800-4000 ರೂ. ವಾಣಿಜ್ಯ ಜಾಗದ ಬೆಲೆ 4000-9000 ರೂ. ಇಷ್ಟಾದರೂ ಇಲ್ಲಿ ಜಾಗ ಕೊಳ್ಳುವರಿಲ್ಲ, ಕೊಂಬುವರಿಲ್ಲ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ. ಬೆಲೆ ಇನ್ನೂ ಏರುತ್ತದೆ ಎಂಬ ದುರಾಶಾವಾದ ಇದಕ್ಕೆ ಕಾರಣ. 

ಇದೇ ದುರಾಸೆಯಿಂದ ಬೆಂಗಳೂರಿಲ್ಲಿ ಒಂದೆಡೆ ಬಾಡಿಗೆಗಾಗಿ ಕಾದಿರುವ ಮನೆಗಳು ಖಾಲಿ ಹೊಡೆಯುತ್ತಿವೆ. ಮತ್ತೊಂದೆಡೆ ಸ್ವಂತ ಸೂರೇ ಇಲ್ಲದೆ ಪರದಾಡುತ್ತಿರುವ ಜನರೂ ಹೆಚ್ಚುತ್ತಿದ್ದಾರೆ. ನಗರದ ವಿವಿಧೆಡೆಯಲ್ಲಿ ನೂರಾರು ಸೈಟು ಇರುವ ಜನರೂ ಇದ್ದಾರೆ. ಒಂದಕ್ಕಿಂತ ಹೆಚ್ಚು ಸೈಟು ಹೊಂದಿರುವ, ದಶಕಗಳಿಂದ ಅದನ್ನು ಖಾಲಿ ಬಿಟ್ಟಿರುವ ಜನರಿಗೆ ಲೆಕ್ಕವಿಲ್ಲ. ಇಂಥ ಖಾಲಿ ನಿವೇಶನಗಳ ಖಚಿತ ಸಂಖ್ಯೆಯನ್ನು ಅನ್ಯ ಕಾರಣಕ್ಕೆ ಬಿಬಿಎಂಪಿ ಈಗ ಲೆಕ್ಕಹಾಕತೊಡಗಿದೆ!

ನಮ್ಮಲ್ಲಿ ಖಚಿತ ನಗರ ವಿನ್ಯಾಸ ಮತ್ತು ಅಭಿವೃದ್ಧಿ ಯೋಜನೆಯೂ ಇಲ್ಲ, ಅದರ ಉಸ್ತುವಾರಿ ಹೊತ್ತ ನಿರ್ದಿಷ್ಟ ಅಧಿಕಾರಿಯೂ ಇಲ್ಲ. ಹೀಗಾಗಿ ಇಂಥ ಅವ್ಯವಸ್ಥೆ ತಲೆದೋರಿದೆ. ನಗರದ ಅಮೂಲ್ಯ ಜಾಗದ ಇಂಥ ಅವ್ಯವಸ್ಥೆಯನ್ನು ತಡೆಯಲು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ನಗರ ಶಿಥಿಲಾವಸ್ಥೆ ತಲುಪಲು ಹೆಚ್ಚು ಕಾಲ ಬೇಕಿಲ್ಲ. “ಇನ್ನು ಮುಂದೆ ತನ್ನ ಯೋಜನೆ ಜಾರಿಗೆ ಸರ್ಕಾರಕ್ಕೇ ನೆಲದ ಕೊರತೆ ಕಾಣಿಸುತ್ತದೆ” ಎಂದು ರಾಜ್ಯದ ಮುಖ್ಯಮಂತ್ರಿಯವರೇ ಈಚೆಗೆ ಹೇಳಿದ ಮಾತಿನಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಇಂಥ ಪರಿಸ್ಥಿತಿ ತಡೆಯಲು ಅಡುಗೆ ಅನಿಲ ವಿತರಣೆಗೆ ಮಾಡಿದಂತೆ “ಒಬ್ಬರಿಗೆ ಒಂದು” ಎನ್ನುವ ನಿವೇಶನ ಪಡಿತರ ವ್ಯವಸ್ಥೆಯನ್ನೇಕೆ ಜಾರಿ ಮಾಡಲು ಸರ್ಕಾರ ಮುಂದಾಗಬಾರದು? ಹಣವಂತರ ಏಕಸ್ವಾಮ್ಯವೂ ಕೊನೆಯಾಗಿ ಉತ್ತಮ ಸೌಕರ್ಯ ಒದಗಿಸಲೂ ಇದರಿಂದ ಮಾರ್ಗವಾಗಬಹುದು. ಮುಂದಿನ ದಿನಗಳಲ್ಲಿ ನಗರದ ಮೇಲೆ ಉಂಟಾಗುವ ಒತ್ತಡ ತಡೆಯಲು ಈ ಬಗೆಯ ಕ್ರಮ ಕೈಗೊಳ್ಳಲು ಮುಂದಾಗದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಖಂಡಿತ ಕ್ಷಮಿಸದು. 




ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298