Thursday, 15 June 2023

3.ಸದಾ ಕಾಡುವ ಅಪ್ಪನ ನೆನಪು – ೩


ಒಮ್ಮೆ ಮನೆ ಮುಂದೆ ರಾಮ ಸೀತೆ, ಹನುಮಂತನ ವೇಷ ಹಾಕಿದ ಹಗಲು ವೇಷದವರು ಕುಣಿಯುತತಾ ಬಂದರು. ಅವರು ಧರಿಸಿದ್ದ ಕಿರೀಟ ಕೆಂಪು, ಹಸಿರು  ಬಣ್ಣದ ಚೀಟಿಗಳಿಂದ ಆಕರ್ಷಕವಾಗಿತ್ತು. ಯಕ್ಷಗಾನದಲ್ಲಿ ಇಂಥವನ್ನು ನೋಡಿದ್ದರೂ ಅವನ್ನು ಇಷ್ಟು ಹತ್ತಿರದಿಂದ ಕಾಣಲು ಸಾಧ್ಯವಿರಲಿಲ್ಲ. ಅದನ್ನು ಮುಟ್ಟುವ ಆಸೆಯಾಗಿ ಅವರ ಬಳಿ ಹೋದೆ. ಕಿರೀಟ ಮುಟ್ಟಬಹುದಾ ಎಂದು ಅಳುಕುತ್ತಲೇ ರಾಮನನ್ನು ಕೇಳಿದೆ. ತಕೋ ಮರಿ ಅನ್ನುತ್ತ ಕಿರೀಟ ಮುಟ್ಟಲು ಅವಕಾಶ ಕೊಟ್ಟ. ಬಳಿಗೆ ಬಂದ ಅಪ್ಪ ಅದರ ಮೇಲಿದ್ದ ಬಣ್ಣದ ಚೀಟಿಗಳನ್ನು ತೋರಿಸಿ ಇದೇನು ಹೇಳ್ತೀಯಾ ಅಂದ. ನಾನು ಬಣ್ಣದ ಚೀಟಿ ಅಂದೆ. ದಡ್ಡ, ಇದು ಜೀರುಂಡೆ ರೆಕ್ಕೆ. ಆವತ್ತು ನೋಡಿದ್ದು ಮರೆತೆಯಾ ಎಂದು ಕೇಳಿದ. ತಟ್ಟನೆ ನೆನಪಾಯ್ತು. ಇದಕ್ಕೆಲ್ಲ ಇವರು ಅಂಗಡಿ ಬಣ್ಣ ಹಾಕುವುದಿಲ್ಲ, ನಮ್ಮ ಸುತ್ತ ಮುತ್ತ ಸಿಗುವ ಜೀರುಂಡೆ ರೆಕ್ಕೆ ಬಣ್ಣದ ಕಲ್ಲುಗಳ ಬಣ್ಣಗಳೇ ಇಲ್ಲಿರುವುದು ಅಂದ. ಹೌದು. ಅಲ್ಲಿ ಯಾವುದೇ ಕೃತಕತೆ ಈಗಲೂ ಇರುವುದಿಲ್ಲ.

ಅಪ್ಪನ ಮಿತ್ರರ ಬಳಗದ ಪರಿಚಯ ಆಗಿದೆ. ಅವರಲ್ಲಿ ಹೆಚ್ಚು ಒಡನಾಟ ಬೇರೆ ಬೇರೆ ಕಾರಣಕ್ಕೆ ಇದ್ದುದು ಹರಿಕಾಂತ ನಾರಾಯಣನೊಂದಿಗೆ. ಹಿತ್ತಲಿನ ಬಾವಿಗೆ ಬಿದ್ದ ಕೊಡ ಎತ್ತುವುದರಿಂದ ಹಿಡಿದು ಆಲೆಮನೆ ಉಸ್ತುವಾರಿ ಮದುವೆ ಮುಂಜಿಗಳ ಆವರಣ ಕೆಲಸ ಕಾರ್ಯಗಳಲ್ಲಿ ಆತ ತೆಗೆದುಕೊಳ್ಳುತ್ತಿದ್ದ ಜವಾಬ್ದಾರಿಗಳೆಲ್ಲ ಇದಕ್ಕೆ ಕಾರಣ. ಬಿಡು ಚಿಂತೆ ಇಲ್ಲ, ಮೀಸೆ ನಾರಾಯಣ ಇದ್ದಾನೆ ಅಂತಿದ್ದ.  ಆತ ಇದ್ದರೆ ಅಪ್ಪನಿಗೆ ನೂರಾನೆ ಬಲ. ಕೆಲವೊಮ್ಮೆ ಅವರಿಬ್ಬರೇ ತೃಪ್ತಿ ಆಗುವಷ್ಟು ಇಸ್ಪೀಟು ಆಡುತ್ತ ಕುಳಿತಿರುತ್ತಿದ್ದರು. ಅನೇಕ ಬಾರಿ ಮಾರನೇದಿನ ಬೆಳಕು ಹರಿಯುತ್ತಿತ್ತು. ಆಯಿ ಬೈದರೆ ಹಿಂಗೆ ಆಗ್ತು ಬಿಡು ಎಂದು ಸುಮ್ಮನಿರಿಸುತ್ತಿದ್ದ.ಆ ನಾರಾಯಣ ಮುಖ ತುಂಬಿಕೊಳ್ಳುವಂತೆ ದೊಡ್ಡ ಮೀಸೆ ಬಿಟ್ಟಿದ್ದ ಕಾರಣ ಅವನಿಗೆ ಆ ಹೆಸರಿತ್ತು. ಅಲ್ಲದೆ ಆ ಹೆಸರು ಊರಲ್ಲಿ ತೀರಾ ಸಾಮಾನ್ಯವಾದ್ದರಿಂದ ಇದು ಅವನಿಗೊಂದು ಅನನ್ಯತೆ ಕೊಟ್ಟಿತ್ತು.ನಾರಾಯಣ ಬಡವನಾದರೂ ನಮ್ಮನೆಗೆ ಬರುವಾಗ ಎಂದೂ ಬರಿಗೈಲಿ ಬರುತ್ತಿರಲಿಲ್ಲ. ನನ್ನನ್ನು ಕಂಡರೆ ಅವನಿಗೇನೋ ಅಕ್ಕರೆ. ನಾನು ತುಸು ಬೆಳ್ಳಗೆ ಇದ್ದುದರಿಂದ ಬೆಳ್ಳಂಭಟ್ರೆ ಅನ್ನುತ್ತಿದ್ದ. ಪೇಟೆಯಿಂದ  ಪೆಪ್ಪಮಿಂಟು ತಾರದಿದ್ದರೆ ಆತನ ಮನೆಮುಂದೆ ಸದಾ ಹಣ್ಣು ಕೊಡುತ್ತಿದ್ದ ಸೀಬೆ ಹಣ್ಣು ಕಿತ್ತು ತಂದಿರುತ್ತಿದ್ದ. ಆತನ ಮನೆ ನಮ್ಮ ಮನೆಯಿಂದ ಒಂದೆರಡು ಕಿಮೀ ದೂರದಲ್ಲಿ ಕಾಡಲ್ಲಿತ್ತು. ಅವನ ಮನೆ ನಮಗೆ ಬೇಸರ ಕಳೆಯುವ ಜಾಗವಾಗಿತ್ತು ಶಾಲೆಗೆ ರಜಾ ಇದ್ದಾಗ ಅಥವಾ ಚಕ್ಕರ್ ಹೊಡೆದು ಅವನ ಮನೆ ಬಳಿ ಹೋಗಿ ಸೀಬೆ ಮರ ನೇತಾಡುವುದು ಅಭ್ಯಾಸವಾಗಿಹೋಗಿತ್ತು. ಅವನೆಂದೂ ಇದಕ್ಕೆ ತಕರಾರು ಎತ್ತುತ್ತಿರಲಿಲ್ಲ. ಅದು ಅವನ ಸ್ವಂತ ಜಮೀನು ಆಗಿರಲಿಲ್ಲ. ಆತ ನಮ್ಮ ಬಂಧುಗಳೊಬ್ಬರ ಜಮೀನು ಗೇಣಿಗೆ ಮಾಡುತ್ತಿದ್ದ.ಆದರೆ ತುಂಬ ಅಕ್ಕರೆಯಿಂದ ನೋಡಿಕೊಂಡಿದ್ದ.ಆತ ನಮ್ಮ ಹಿತ್ತಲ ಬಾವಿಯಲ್ಲಿ ಕೊಡಬಿದ್ದರೆ ಯಾವಾಗಲೂ ಬಾವುಗೆ ಧುಮುಕಿ ಎತ್ತಿಕೊಡುತ್ತಿದ್ದ. ಅತನಿಗೆ ನೀರು, ಬಾವಿ ಹಳ್ಳ ಕೊಳ್ಳಗಳೆಲ್ಲ ಲೆಕ್ಕಕ್ಕೆ ಇರಲಿಲ್ಲ. ಅವನ ಕುಲ ಧರಮವೇ ಮೀನುಗಾರಿಕೆ. ಸಮುದ್ರ, ನದಿಗಳೇ ಮನೆಯಂತೆ ಇದ್ದವ. ನಮ್ಮಬಾವಿ ಯಾವ ಲೆಕ್ಕ? ಬಾವಿಯನ್ನೊಮ್ಮೆ ನೋಡಿದವನೇ ಧುಡುಮ್ಮನೇ ಹಾರಿಬಿಡುತ್ತಿದ್ದ. ಆತ ಹಾರುತ್ತಿದ್ದಂತೆ ನಾನು ಅಳಲು ಶುರುವಿಟ್ಟುಕೊಳ್ಳುತ್ತಿದ್ದೆ. ಕೆಲವೊಮ್ಮೆ ಆತ ಹತ್ತಾರು ನಿಮಿಷ ನೀರಲ್ಲಿ ಮುಳುಗುಹಾಕಿರುತ್ತಿದ್ದ. ಮೇಲೆ ಬರುತ್ತಿರಲಿಲ್ಲ. ಆಗಂತೂ ನನ್ನ ಕೂಗು ಮೇರೆ ಮೀರುತ್ತಿತ್ತೆಂದು ಆಯಿ ಹೇಳುತ್ತಿದ್ದರು.ಇನ್ನು ಆಲೆಮನೆ ವೇಳೆಯಲ್ಲಿ ಆತ. ಕಬ್ಬಿನ ಹಾಲು, ಬೆಲ್ಲದ ಬದಲು ಕುದಿ ಕೆಸರಿನ ಮೇಲೆ ಹೆಚ್ಚು ನಿಗಾ ಇಟ್ಟಿರುತ್ತಿದ್ದ. ಬೆಲ್ಲ ಕುದಿಯುವಾಗ ಅದರ ಕೆಸರನ್ನು ಜಾಗ್ರತೆಯಿಂದ ಎತ್ತಿಒಂದು ಬಟ್ಟಲಲ್ಲಿ ಸಂಗ್ರಹಿಸುತ್ತಿದ್ದ. ಅದನ್ನು ಅನಂತರ ದೊಡ್ಡ ಮಣ್ಣಿನ ಕುಡಿಕೆಯಲ್ಲಿ ಹಾಕಿ ಎತ್ತಿಕೊಂಡು ತೋಟದ ಹಾದಿ ಹಿಡಿಯುತ್ತಿದ್ದ. ಅಲ್ಲಿ ಒಂದೆಡೆ ನಾಲ್ಕಾರು ಅಡಿ ಆಳದ ಹೊಂಡ ತೆಗೆದು ಕೆಸರಿನ ಕೊಡವನ್ನು ಅದರಲ್ಲಿ ಹೂತಿಟ್ಟು ಏನೂ ಗೊತ್ತಿಲ್ಲದವನಂತೆ ಮನೆಗೆ ಬರುತ್ತಿದ್ದ. ಇದನ್ನು ಏನೂ ಮಾಡಬಾಎದೆಂದು ನಮಗೆಲ್ಲ ತಾಕೀತು ಮಾಡುತ್ತಿದ್ದ. ಒಂದುವಾರ ಅತ್ತ ಸುಳಿಯುತ್ತಿರಲಿಲ್ಲ. ಆದರೆ ಕೊಡ ಕ್ಷೇಮವಾಗಿದೆಯೇ ಎಂದು ನಿಗಾವಹಿಸುತ್ತಿದ್ದ. ಆಮೇಲೆ ಒಂದು ದಿನ ಕೊಡ ಎತ್ತಿ ಹೆಗಲ ಮೇಲೆ ಹೊತ್ತುಕೊಂಡು ಭಟ್ರೆ ಒಂದೆರಡು ದಿನ ನಾ ಬತ್ನಿಲ್ಲೆ ಅನ್ನುತ್ತ ಹಾಗೆಯೇ ಗದೆ ಬದು ಹಾದು ಹೋಗುತ್ತಿದ್ದ. ನಾಲ್ಕು ದಿನ ಬಿಟ್ಟು ಮತ್ತೆ ಬಂದವ ಮತ್ತೆ ಕೆಸರು ಸಂಗ್ರಹಕ್ಕೆ ತೊಡಗುತ್ತಿದ್ದ. ಆದರೆ ಬೆಲ್ಲ ಇಳಿಸುವ, ಕೊಪ್ಪರಿಗೆಗೆ ಹಾಲು ತುಂಬಿಸಿ ಅದಕಕ್ಕೆ ಉರಿ ಹಾಕುವ ಕೆಲಸಕ್ಕೆ ಚ್ಯುತಿ ತರುತ್ತಿರಲಿಲ್ಲ. ಅವನು ಕೆಸರನ್ನು ಏಕೆ ಚೆಲ್ಲುವುದಿಲ್ಲ ಎಂದು ಅಪ್ಪನನ್ನು ಕೇಳಿದರೆ ಅದೆಲ್ಲ ನಿನಗೆ ಈಗ ಬೇಡ ಸುಮ್ನಿರು ಅಂತಿದ್ದ. ಈ ಗುಟ್ಟು ಅರಥವಾಗಲು ಹತಾರು ವರ್ಷಗಳೇ ಬೇಕಾದವು. ಆತ ಅದನ್ನು ಭಟ್ಟಿ ಇಳಿಸಿ ಶುದ್ಧ ದೇಸೀ ಹೆಂಡ ಮಾಡಿಕೊಳ್ಳುತ್ತಿದ್ದ. ಅವನಿಗೆ ಇದು ವರ್ಷಗಟ್ಟಲೆ ಬಾಳಿಕೆ ಬರುತ್ತಿತ್ತು. ಅದೇನೇ ಇರಲಿ. ಆತನಷ್ಟು ಹತ್ತಿರವಾದ ಮಿತ್ರರು ಅಪ್ಪನಿಗೆ ಇರಲಿಲ್ಲ. ಅವನಿಗೂ ಅಪ್ಪಯ್ಯನೆಂದರೆ ಅದೇನೋ ಅಭಿಮಾನ. ತನ್ನೆಲ್ಲ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದ. ಅಪ್ಪನ ಮತ್ತೊಬ್ಬ ಮಿತ್ರ ಅಮ್ಮದ ಸಾಬ. ಆತ ಬೇಸರವಾದಾಗ ಎಲೆ ಅಡಕೆ ಮೆಲ್ಲುವ ನೆಪದಲ್ಲಿ ಅಪ್ಪನನ್ನು ಮಾತಾಡಿಸಲು ಬರುತ್ತಿದ್ದ. ಒಮ್ಮೆ ಅವನಿಗೆ ರಂಜಾನ್ ಉಪವಾಸವಿತ್ತೆನಿಸುತ್ತದೆ. ಅಪ್ಪ ಎಂದಿನಂತೆ ಎಂತಾಸುದ್ದಿ? ಬಾ ಅಂದವನೇ ಸಂಚಿ ಬಿಚ್ಚತೊಡಗಿದ. ಬೇಡ ಭಟ್ರೆ, ನಂಗೆ ಉಪಾಸ ಆನು ಇಂದು ಕವಳ ಎಲೆ ಅಡಿಕೆಗೆ ಇರುವ ಹೆಸರು)ಹಾಕಲ್ಲ ಅಂದ. ಎಂತಕ್ಕೆ ಕೇಳಿದ. ಆತ ರಂಜಾನ್ ಬ್ಬೆ ಹೇಳಿದ್ದು ಕೇಳಿಸಿಕೊಂಡು ನಾನೂ ಏಕಾದಶಿ ದಿನ ಏನೂ ತಿನ್ನಲ್ಲ ಅಂದ. ನಿಮ್ಮದು ವರ್ಷಕ್ಕೆ ಒಂದು ದಿನ ಉಪವಾಸವಾ ನಮ್ಮದು ಹದಿನೈದು ದಿನಕ್ಕೊಮ್ಮೆ ನೋಡು ಅಂದಾಗ ಒಂದಿನ ಅಲ್ಲ, ಒಂದು ತಿಂಗಳು ಎಂದು ಆತ ಕರೆಕ್ಷನ್ ಹಾಕಿದ್ದ. ಅಡ್ಡಿ ಇಲ್ಲೆ ಮಾರಾಯ ಅಂದ. ನಮಗೂ ನಿಮಗೂ ಬರೀ ವರ್ಷದ ಫರಕ್ಕು ಅಷ್ಟೇ ಅಂದ. ಅವನೂ ಹೌದು ಅಂದ. ನಾನಿನ್ನು ಬತ್ತೆ ಅನ್ನುತ್ತ ಆತ ಹೊರಡಲು ಅನುವಾದ. ಎಂತಾ ಅರ್ಜೆಂಟು ಕೂರುಅಂದಾಗ ಇಲ್ಲ, ನನ್ನ ನಮಾಜು ಹೊತ್ತಾತು ಅಂದ. ಅದೆಂತಾ ಕೂರಲು ಕಂಬಳಿ ಕೊಡ್ತೆ. ಅಲ್ಲೇ ಗೋಡೆಹತ್ರ ಕೋರು ಅದಕ್ಕೆ ನಿನ್ನ ಮನೆಯೇ ಆಗಬೇಕಾ? ನೋಡು ನಿನ್ನ ದೇವ್ರು ಇಲ್ಲೇ ಇದ್ದಾನೆ ಅನ್ನುತ್ತ ಗೋಡೆಯತ್ತ ಬೆರಳು ಮಾಡಿದ. ಅದು ನಿಮ್ಮ ದೇವರು, ಶಿವನ ಪೊಟೋ ಅಂದ ಅಮ್ಮದ. ಅದರ ಹಿಂದೆ ಇರೋದೇ ನಿಮ್ಮ ದೇವರಲ್ವಾ ಸರಿಯಾಗಿ ನೋಡು ಮಳ್ಳ ಅಂದ. ಗೋಡೆ ಮೇಲೆ ಶಿವನ ಕ್ಯಾಲೆಂಡರ್ ನೇತುಹಾಕಿದ್ದಕ್ಕೆ ಇಷ್ಟೆಲ್ಲ ಮಾತುಕತೆ ನಡೆದಿತ್ತು. ಹಂಗಾರೆ ನೀನು ಮತ್ತೆ ಯಾವಾಗ ಕವಳಾ ಹಾಕಂವ ಅನ್ನುತ್ತ ಅಪ್ಪ ಒಳ ಮನೆಗೆ ಹೋದರೆ ಅಮ್ಮದ ನೋಡ್ವ ಅನ್ನುತ್ತ ತನ್ನ ಮನೆದಾರಿ ಹಿಡಿದಿದ್ದ. 

No comments:

Post a Comment