Sunday, 20 August 2023

ಅನೇಕ ವಿಶೇಷಗಳ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ


ಆಧುನಿಕ ಕನ್ನಡ ಸಾಹಿತ್ಯಕ್ಕೆ ಅನೇಕ ಪ್ರಕಾರಗಳು ಪಾಶ್ಚಾತ್ಯ ಸಾಹಿತ್ಯ ಸಂಪರ್ಕದಿಂದ ಬಂದವು. ಸಾಮಾಜಿಕ ನಾಟಕ ಕೂಡ ಇದರಲ್ಲಿ ಒಂದು. ಆದರೆ ನಾಟಕ ಪ್ರಕಾರ 16ನೆಯ ಶತಮಾನದ ವೇಳೆಗಾಗಲೇ ಸಂಸ್ಕೃತದ ಪ್ರಭಾವದಿಂದ ಮಿತ್ರವಿಂದಾ ಗೋವಿಂದದ ಮೂಲಕ ನಮಗೆ ಪರಿಚಯವಾಗಿತ್ತು. ಪ್ರಸ್ತುತ ಕೃತಿ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ ಅಥವಾ ಕನ್ಯಾ ವಿಕ್ರಯದ ಪರಿಣಾಮವು ಎಂಬುದು 1879 ವೇಳೆಗೆ ಪ್ರಕಟವಾಗಿದ್ದು ಇದರ ಪ್ರತಿಗಳಾಗಲೀ ಅದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳಾಗಲೀ ಸದ್ಯ ಲಭ್ಯವಿಲ್ಲ. ಇಂಥ ಕೊರತೆಯನ್ನು ನಮ್ಮ ಮುಂಬೈ ವಿವಿಯ ಕನ್ನಡ ವಿಭಾಗ ತುಂಬುವ ಕೆಲಸ ಮಾಡಿದೆ. ಇದು ಮೊದಲು ಮುಂಬೈನಲ್ಲೇ ಪ್ರಕಟವಾಗಿತ್ತು ಎಂಬುದು ಒಂದು ವಿಶೇಷವಾದರೆ, ಇದು ಕನ್ಡದ ಉಪಭಾಷೆಯಲ್ಲಿ ರಚಿತವಾದ ಮೊದಲ ಕೃತಿ ಎಂಬುದು ಮತ್ತೊಂದು. ಸಾಮಾನ್ಯವಾಗಿ ದಲಿತ ಬಂಡಾಯ ಚಳವಳಿ ಶುರುವಾದ ಮೇಲೆ ಕನ್ನಡದ ಉಪ ಭಾಷೆಗಳಲ್ಲಿ ಸಾಹಿತ್ಯ ರಚನೆ ಆರಂಭವಾತಿತೆಂಬ ಅಭಿಪ್ರಾಯವಿದೆ. ಇದು ಸರಿಯಲ್ಲ ಎಂಬುದಕ್ಕೂ ಇದು ನಿದರ್ಶನ ಒದಗಿಸುತ್ತದೆ. ಪ್ರಸ್ತುತ ಕೃತಿಯಲ್ಲಿ ನಾಟಕಕ್ಕೆ ಸಂಬಂಧಿಸಿದಂತೆ ಹವ್ಯಕ ಭಾಷೆ, ಸಮಾಜ-ಸಂಸ್ಕೃತಿಗಳ ಸಂಕ್ಷಿಪ್ತ ನೋಟವಿದ್ದರೂ ಈ ಸಂಗತಿಯನ್ನು ಪ್ರಸ್ತಾಪಿಸದೇ ಇರುವುದು ಅಚ್ಚರಿಯನ್ನುಂಟುಮಾಡುತ್ತದೆ. 

ಶತಮಾನಗಳ ಹಿಂದಿನ ಕನ್ನಡ ಸಮಾಜದಲ್ಲಿ ಗಂಡು ಹೆಣ್ಣುಗಳ ಕುರಿತ ಸಮಾಜದ ದೃಷ್ಟಿ ಹೇಗಿತ್ತು ಎಂಬುದಕ್ಕೆ ಈ ನಾಟಕ ಪುರಾವೆ ಒದಗಿಸುತ್ತದೆ. ಮೇಲ್ನೋಟಕ್ಕೆ ಇದು ಹವ್ಯಕ ಸಮಾಜವನ್ನು ತೋರಿಸಿದರೂ ಒಟ್ಟಾರೆ ಕನ್ನಡ ಸಮಾಜದ ದೃಷ್ಟಿಯೇ ಇಲ್ಲಿ ಪ್ರತಿಪಾದಿತವಾಗಿದೆ ಎಂಬುದು ನಾಟಕದಲ್ಲಿ ಬರುವ ನ್ಯಾಯಾಲಯದ ಸನ್ನಿವೇಶ ಕಾಣಿಸುತ್ತದೆ. ಆದರೆ ಈ ನೋಟದಲ್ಲಿರುವ ಚಿಂತನಾ ದಾಟಿ ಪಾಶ್ಚಾತ್ಯ ದೃಷ್ಟಿಯದೇ ಆಗಿದೆ, ಪುರುಷ ಪ್ರಧಾನ, ಸ್ತ್ರೀ ಕೀಳರಿಮೆ ಇತ್ಯಾದಿ ದೃಷ್ಟಿಯಿಂದಲೇ ನಾಟಕದ ವಸ್ತು ಕಾಣುತ್ತದೆ. ವಸಾಹತು ಕಾಲದಲ್ಲಿ ಭಾರತದ ಸಂಪ್ರದಾಯಮ ಆಚರಣೆ ಮೊದಲಾದವನ್ನು ಪ್ರಶ್ನಿಸುವ ಕೆಲಸ ಬ್ರಿಟಿಷ ಜನರಿಂದ ನಡೆಯಿತು. ಇದನ್ನು ಆಧುನಿಕ ಶಿಕ್ಷಣದ ಮೂಲಕ ನಮ್ಮ ಜನರಿಗೂ ನೀಡಲಾಯಿತು. ಹೀಗಾಗಿ ಅವರೊಂದಿಗೆ ನಮ್ಮ ಜನರೂ ಕೈ ಜೋಡಿಸುವಂತಾಯಿತು. ಇದು ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಆ ದೃಷ್ಟಿಯೇ ಸರಿ ಎಂದು ನಮಗೆ ಸಹಜವಾಗಿ ಅನಿಸುವಷ್ಟು. ಏಕೆಂದರೆ ಅದನ್ನುಳಿದು ನಮಗೆ ಬೇರೆ ಮಾರ್ಗವಾಗಲೀ ಚಿಂತನಾ ಕ್ರಮವಾಗಲೀ ತಿಳಿದಿಲ್ಲ. ಮಾತ್ರವಲ್ಲ, ಈ ಕೃತಿ ಇನ್ನೊಂದು ವಿಷಯವನ್ನೂ ಮನಗಾಣಿಸುತ್ತದೆ- ಇದರಲ್ಲಿ ಬರುವ ಹೆಣ್ಣನ್ನು ಕುರಿತ ಮಾತುಗಳು  ನಮಗೆ ಇಂದು ಸಹಜ ಎಂಬಂತೆ ಕಾಣುತ್ತವೆ, ಆದರೆ ಇವು ನಮ್ಮ ಪರಂಪರೆಯ ಹಿನ್ನೆಲೆಯಲ್ಲಿ ಮೂಡಿಬಂದ ಕಾರಂತರ ಮೂಕಜ್ಜಿಯಂಥ ಅಥವಾ ಮೊಗಸಾಲೆಯವರ ಪಾರ್ವತಿಯಂಥ ಪಾತ್ರಗಳಲ್ಲ, ಭಾರತೀಯ ಸಮಾಜದಲ್ಲಿ ಹೆಣ್ಣನ್ನು ಹೀಗೆ ಕಾಣುತ್ತ ಬರಲಾಗಿದೆ ಹಾಗೂ ಅದೇ ಅಂತಿಮ ಸತ್ಯ ಎಂದು ಹೇಳುತ್ತ ಶಿಕ್ಷಣದ ಮೂಲಕ ಕಲಿಸುತ್ತ ಬಂದ ಕಾರಣ ಅನ್ಯ ಸಾಧ್ಯತೆ ನಮಗೆ ಗೋಚರಿಸುವುದೇ ಇಲ್ಲ. ಇದು ಬಿಟಿಷ್ ಶಿಕ್ಷಣ ನಮ್ಮ ಮೇಲೆ ಸಾಧಿಸಿದ ಯಶಸ್ಸು. ಇದು ಅಷ್ಟು ಬೇಗನೇ ನಮ್ಮಿಂದ ದೂರ ಹೋಗುವುದಿಲ್ಲ. ಅವರು ಕಟ್ಟಿಕೊಟ್ಟ ಭಾರತೀಯ ಸಮಾಜದ ಕಲ್ಪನೆಯೇ ನಮಗೆ ಅಂತಿಮ ಅನಿಸುವಂತೆ, ಅದಕ್ಕೆ ಭಿನ್ನವಾದುದನ್ನು ಹೇಳಿದರೆ ಅನುಮಾನ ಮೂಡುವಂತೆ ಶತಮಾನಗಳ ಈ ಪ್ರಯತ್ನ ನಮ್ಮಲ್ಲಿ ಯಶಸ್ವಿಯಾಗಿ ಮಾಡಿದೆ. ಈ ನಾಟಕದಲ್ಲಿ ಮಂಡಿಸುವ ನ್ಯಾಯಾಲಯ ಕಲಾಪದ ಮಾತುಗಳು ಶತಮಾನದ ಹಿಂದೆಯೇ ಇಂದಿನ ಮಾತುಗಳಂತೆ ಏಕೆ ಕಾಣುತ್ತದೆ ಎಂಬ ಸಂಶಯ ನಮಗೆ ಸ್ವಲ್ಪವಾದರೂ ಮೂಡಬೇಕು. ಆಗ ಈ ಕೃತಿಯ ಪ್ರಕಟಣೆ ಸಾರ್ಥಕ. ಇಂಥದೊಂದು ಸಾಧ್ಯತೆಯನ್ನು ನಮ್ಮ ಮುಂದೆ ಮುಂಬೈ ಕನ್ನಡ ವಿಭಾಗ ಮಾಡಿದ್ದಕ್ಕೆ ನಾವು ಆಭಾರಿಗಳು. ಹೀಗೆ ವಸಾಹತು ಕಾಲದಲ್ಲಿ ಪ್ರಕಟವಾದ ಕನ್ನಡ ಕೃತಿಗಳ ಮರು ಮುದ್ರಣ ಮಾತ್ರವಲ್ಲ, ಮರು ನೋಟವೂ ನಡೆಯಬೇಕಿದೆ. ಪ್ರಸ್ತುತ ಕೃತಿ ದಲಿತ ಬಂಡಾಯ ಚಳವಳಿ ಶುರುವಾಗುವ ಸಾಕಷ್ಟು ಮುಂಚೆಯೇ ಕನ್ನಡದ ಆಡು ಭಾಷೆ ಅಥವಾ ಒಂದು ಉಪಭಾಷೆಯಲ್ಲಿ ಸಾಹಿತ್ಯ ರಚನೆ ನಡೆದಿತ್ತು ಎಂಬ ಸತ್ಯವನ್ನು ಇದು ಕಾಣಿಸುತ್ತದೆ. ಪ್ರಸ್ತುತ ಕೃತಿಯಲ್ಲಿ ನಾಟಕ ಸಂಬಂಧಿಯಾದ ಅನೇಕ ಸಂಗತಿಗಳ ವಿಶ್ಲೇಷಣೆಗಳು ಇವೆಯಾದರೂ ಈ ಬಗ್ಗೆ ಒಂದು ಮಾತು ಕೂಡ ಇಲ್ಲದಿರುವುದು ಅಚ್ಚರಿ ಹುಟ್ಟಿಸುತ್ತದೆ. ಆದರೆ ಇಂಥದ್ದೊಂದು ಚರ್ಚೆಯ ಸಾಧ್ಯತೆಯನ್ನು ಶುರುಮಾಡಿದ ಮುಂಬೈ ಕನ್ನಡ ವಿಭಾಗಕ್ಕೆ ಧನ್ಯವಾದ ಹೇಳಬೇಕಿದೆ.

No comments:

Post a Comment