Tuesday, 22 August 2023

ಆದರ್ಶ ವನಿತೆ ಡಾ. ಸುಧಾ ಮೂರ್ತಿ


ಮುಂಬೈ ವಿವಿಯ ಕನ್ನಡ ವಿಭಾಗ ಈಚೆಗೆ  'ಸಾಹಿತ್ಯ ಸಿದ್ಧಿ ಸಿರಿ ಸೇವೆಯ ಸಾಕಾರ - ಡಾ. ಸುಧಾ ಮೂರ್ತಿ ಎಂಬ ಕಿರು ಹೊತ್ತಿಗೆ ಪ್ರಕಟಿಸಿದೆ. ಕನ್ನಡ ಮನೆ ಮನಗಳ ನಿತ್ಯ ಮಾತಾಗಿರುವ ಸಾಧಕಿ ಡಾ. ಸುಧಾ ಮೂರ್ತಿಯವರು ಅವರ ಬಗ್ಗೆ ನಿತ್ಯ ಒಂದಲ್ಲ ಒಂದು ಮಾಧ್ಯಮದಲ್ಲಿ ಏನಾದರೂ ಗುಣಾತ್ಮಕ ಸುದ್ದಿ ಬರುತ್ತಲೇ ಇರುತ್ತದೆ. ಅಷ್ಟು ಪರಿಚಿತರು ಅವರು. ಸುದ್ದಿ ಆಗುವುದು ಮುಖ್ಯವಲ್ಲ, ಏಕೆ, ಯಾವ ಕಾರಣಕ್ಕೆ ಎಂಬುದು ಮುಖ್ಯ. ಹಾಗೆ ನೋಡಿದರೆ ಮಾಧ್ಯಮಗಳು ಸುದ್ದಿಗಳನ್ನು ಸೃಷ್ಟಿಸುತ್ತವೆ. ಸುಧಾ ಮೂರ್ತಿಯವರಿಗೆ ಇವೆಲ್ಲ ಅಗತ್ಯವಿಲ್ಲ. ಅವರು ಇರುವಲ್ಲಿ ಮಾಧ್ಯಮಗಳು ಹೋಗುತ್ತವೆ. ಅವರ ನಡೆ ನುಡಿಗಳೇ ಸುದ್ದಿಗೆ ಗ್ರಾಸವಾಗುತ್ತವೆ. ಅವರು ಇರುವುದೇ ಹಾಗೆ, ಅತ್ಯಂತ ಸಾಮಾನ್ಯ ಮನೆತನದಲ್ಲಿ ಜನಿಸಿ ತಮ್ಮ ಪ್ರಾಮಾಣಿಕತೆ, ಸರಳತೆ ಮತ್ತು ಸತ್ಯ ನಡೆಗಳಿಂದಲೇ ಜನರನ್ನು ಸೆಳೆಯುವವರು ಅವರು. ಅವರು ಸತ್ಕಾರ್ಯಕ್ಕೆ ಕೊಡುಗೈ ದಾನ ಮಾಡುತ್ತಾರೆ ಎಂಬುದು ಇನ್ನೊಂದು ಪೂರಕ ಸಂಗತಿ. ಕೇವಲ ದುಡ್ಡಿನಿಂದ, ಪ್ರಚಾರದಿಂದ ದೊಡ್ಡವರಾಗುವವರು ಬಹಳ ಜನರಿದ್ದಾರೆ, ಆದರೆ ಸುಧಾ ಅವರು ತಮ್ಮ ಕೆಲಸಗಳಿಂದ ದೊಡ್ಡವರಾದವರು.

ಸಾಮಾನ್ಯ ಮನೆತನದಲ್ಲಿ ಜನಿಸಿ ನಮ್ಮ ಸಾಂಪ್ರದಾಯಿಕ ರೀತಿಯಲ್ಲಿ ಜೇವಿಸಿದರೆ ಅದು ಎಷ್ಟು ಆದರ್ಶಪ್ರಾಯವಾಗಬಲ್ಲುದು ಎಂಬುದಕ್ಕೂ ನಮ್ಮ ಪರಂಪರೆಯಲ್ಲಿ ಹೆಣ್ಣಿಗೆ ಹೇಳಿ ಕೇಳುವ ಸ್ಥಾನವಿಲ್ಲ ಅನ್ನುವವರಿಗೂ ಬಹುದೊಡ್ಡ ಪ್ರಶ್ನೆ ಹಾಗೂ ಉತ್ತರ ಸುಧಾ ಅವರು. ಅವರ ಜೇವನ ರೇಖೆ ನಾವು ಅಂದುಕೊಂಡಷ್ಟು ಸುಖಮಯವಾಗಿರಲಿಲ್ಲ, ಅವರು ಬಂಗಾರದ ಚಮಚೆಯನ್ನು ಬಾಯಲ್ಲಿಟ್ಟುಕೊಂಡು ಜನಿಸಿದವರಲ್ಲ,  ಬಾಲ್ಯದಲ್ಲಿ ಸಾಕಷ್ಟು ಕಷ್ಟ ಕಂಡವರು. ನೋವು ಉಂಡವರು. ಆದರೆ ಕಷ್ಟಕ್ಕೆ ಜಗ್ಗದೇ ನಂಬಿದ ಮೌಲ್ಯಗಳನ್ನು ಬಿಡದೇ ನಿಷ್ಠರಾಗಿದ್ದರೆ ಅದು ಎಂಥ ಕೊಡುಗೆ ಕೊಡುತ್ತದೆ ಎಂಬುದನ್ನು ಅವರ ಜೇವನ ಮನಗಾಣಿಸುತ್ತದೆ. ಅವರು ಸದ್ಯದ ಭಾರತೀಯ ಮಾತ್ರವಲ್ಲ, ಜಾಗತಿಕ ಮಟ್ಟದ ಯಾವುದೇ ಸಮಾಜದಲ್ಲಿ ಸಾಕಷ್ಟು ಗೌರವ ಹೊಂದಿದ್ದಾರೆ, ಮನೆಯವರು, ಬಂಧು ಬಳಗದವರು ಸಾಕಷ್ಟು ಸಾಧನೆ ಮಾಡಿದವರು. ಸಣ್ಣ ಪುಟ್ಟ ಸಾಧನೆ ಮಾಡಿದವರು ಇಂದು ನಮ್ಮ ನಡುವೆ ತಾವುಂಟೋ ಮೂರು ಲೋಕವುಂಟೋ ಎಂಬಂತೆ ವರ್ತಿಸುವುದನ್ನು ನೋಡಿದಾಗ ಸುಧಾ ಅವರ ಬಗ್ಗೆ ಗೌರವ ನೂರ್ಮಡಿಯಾಗುತ್ತದೆ. ಅವರು ಇಂದು ಸಮಾಜದಲ್ಲಿ ಹೆಸರಾಗಿರುವುದೇ ಸರಳತೆಯಿಂದ. ಅವರ ಜೊತೆ ಫೋಟೋ ತೆಗೆಯಿಸಿಕೊಂಡು ಸುಧಾ ಅವರು ತಮಗೆ ತುಂಬ ಪರಿಚಯ ಎಂಬಂತೆ ಅಷ್ಟರಿಂದಲೇ ಸ್ಥಾನ ಮಾನ ಗಿಟ್ಟಿಸಲು ಯತ್ನಿಸುವುದು ಸುಳ್ಳಲ್ಲ. ಅಂಥಾದ್ದರಲ್ಲಿ ಸ್ವತಃ ಸುಧಾ ಅವರು ತಾವು ಏನೂ ಅಲ್ಲ, ತೀರಾ ಸಾಮಾನ್ಯರು ಎಂಬಂತೆ, ವರ್ತಿಸುವುದು ನಿಜಕ್ಕೂ ಅನುಕರಣೀಯ. ಆದರೆ ಸಮಾಜದಲ್ಲಿ ಇಂಥ ಸಂಗತಿಯನ್ನು ಬದಿಗಿಟ್ಟು ಸುಧಾ ಅವರ ಅಂತಸ್ತು, ಐಶ್ವರ್ಯಗಳನ್ನೇ ಆರಾಧಿಸುವ ವರ್ತನೆ ಸುತ್ತಲಿನ ಜನರಲ್ಲಿ ಕಾಣಿಸುತ್ತದೆ. 53 ಪುಟಗಳ ಪುಟ್ಟ ಕೃತಿ ಇದು, ಇದರಲ್ಲಿನ ಆರು ಕಿರು ಅಧ್ಯಾಯಗಳು ಹಾಗೂ ಪೂರಕ ಮಾಹಿತಿ ಕೊಡುವ ಅನುಬಂಧಗಳು ಸುಧಾ ಅವರ ಸರಳ ಜೇವನದ ಹತ್ತಾರು ಸಂಗತಿಗಳ ಅವಲೋಕನ ಮಾಡುತ್ತವೆ. ಸುಧಾ ಅವರ ಸಾಹಿತ್ಯ ಸೃಷ್ಟಿ, ಪ್ರಶಸ್ತಿಗಳ ವಿವರವನ್ನೂ ಕೊಡಲಾಗಿದೆ. ಒಟ್ಟಿನಲ್ಲಿ ಈ ಕೃತಿ ಕನ್ನಡಿಯಲ್ಲಿ ಕರಿಯನ್ನು ತೋರಿಸುವ ಯತ್ನವನ್ನು ಯಶಸ್ವಿಯಾಗಿ ಮಾಡಿದೆ. ಅವರ ಅಳಿಯ ಈಗ ಬ್ರಿಟನ್ ಪ್ರಧಾನಿ. ಅದರ ಹಮ್ಮು ಅವರಲ್ಲಿ ಕಿಂಚಿತ್ತೂ ಇಲ್ಲ. ಕೀರ್ತಿ, ಪ್ರತಿಷ್ಠೆಗಳೆಲ್ಲ ಬರುತ್ತವೆ, ಹೋಗುತ್ತವೆ, ನಾವು ಉಳಿಸಿಕೊಳ್ಳಬೇಕಾದುದು ಮನುಷ್ಯತ್ವವನ್ನು ಮಾತ್ರ ಎಂಬುದು ಅವರ  ಜೀವನ ಮೌಲ್ಯ. ಇದು ಅವರನ್ನು ಎಲ್ಲರಿಂದ ಭಿನ್ನವಾಗಿಸುತ್ತದೆ. ನಮ್ಮ ಇಂದಿನ ಸಮಾಜದಲ್ಲಿ ಎಲ್ಲರೂ ಹಣ ಅಂತಸ್ತು ಪ್ರತಿಷ್ಠೆಯ ಹಿಂದೆ ಓಡುತ್ತಿದ್ದರೆ ಸುಧಾ ಅವರು ಇದಕ್ಕೆ ವಿರುದ್ಧವಾಗಿ ಹೋಗುತ್ತಾ ಅದರಲ್ಲೇ ಸಾರ್ಥಕತೆಯನ್ನು ಕಂಡಿದ್ದಾರೆ, ಆದರ್ಶ ಸ್ಥಾಪಿಸಿದ್ದಾರೆ. 

ಮುಂಬೈ ಕನ್ನಡ ವಿಭಾಗದಲ್ಲಿ ಈಚೆಗೆ ನಡೆದ ಸಮ್ಮೇಳನದ್ದಿ ಸುಧಾ ಅವರು ಉಪನ್ಯಾಸ ನೀಡಿದ ನೆಪದಲ್ಲಿ ಅವರ ಮಾತನ್ನು ಅಕ್ಷರ ರೂಪಕ್ಕೆ ಇಳಿಸುವ ಜೊತೆಗೆ ಕೆಲವು ಪೂರಕ ಮಾಹಿತಿಗಳನ್ನೂ ಕಲೆ ಹಾಕಿ ಒಂದು ಸ್ತುತ್ಯರ್ಹ ಕೃತಿಯನ್ನು ಮುಂಬೈ ಕನ್ನಡ ವಿಭಾಗ ಮಾಡಿದೆ. ಈಗಾಗಲೇ ಹೇಳಿದಂತೆ ಸುಧಾ ಅವರ ಬಗ್ಗೆ ಸಾಕಷ್ಟು ಬರೆಹಗಳು ಈಗಾಗಲೇ ಬಂದಿವೆ, ಸಂಶೋಧನೆಗಳೂ ನಡೆಯುತ್ತಿವೆ. ಆದರೆ ಈ ಕೃತಿ ಕಿರಿದರಲ್ಲಿ ಹಿರಿದನ್ನು ಹೇಳುವ ಕಾರಣಕ್ಕೆ ಹಾಗೂ ಅನಗತ್ಯ ವೈಭವ, ಹೊಗಳಿಕೆಗಳಿಲ್ಲದೇ ಸುಧಾ ಅವರಂತೆ ಸರಳತೆಯನ್ನು ಕಟ್ಟಿಕೊಡುವ ಕಾರಣಕ್ಕೆ ಹಾಗೂ ಕನ್ನಡದಲ್ಲಿನ ಅಪರೂಪದ ವ್ಯಕ್ತಿ ಚಿತ್ರಣಕ್ಕೆ ನಿದರ್ಶನವಾಗುವ ಕಾರಣಕ್ಕೆ ಆತ್ಮೀಯ ಅನಿಸುತ್ತದೆ. ಇಂಥದೊಂದು ಕೃತಿಯನ್ನು ಹೊರತಂದ ಮುಂಬೈ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ ಎನ್ ಉಪಾಧ್ಯ ಹಾಗೂ ಅವರ ಸಿಬ್ಬಂದಿ, ವಿದ್ಯಾರ್ಥಿ ವೃಂದಕ್ಕೆ ಅಭಿನಂದನೆಗಳು. ಸುಧಾ ಅವರ ಬಗ್ಗೆ ಕುತೂಹಲ ನಿತ್ಯ ನೂತನ. ಅದು ಇರುವವರೆಗೂ ಅಂಥ ನೂರಾರು ಪುಸ್ತಕಗಳು ಬಂದರೂ ಈ ಕೃತಿ ಪ್ರಸ್ತುತವಾಗುತ್ತದೆ. ಇಂಥ ಕೃತಿ ಕೊಟ್ಟ ಉಪಾಧ್ಯ ಅವರಿಗೆ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳು.  


No comments:

Post a Comment