Wednesday, 23 August 2023

ಸಮಾನ ನಾಗರಿಕ ಸಂಹಿತೆ - ಒಂದು ಸ್ತುತ್ಯರ್ಹ ಪ್ರಯತ್ನ

 


ಇದೀಗ ದೇಶಾದ್ಯಂತ ನಡೆಯುತ್ತಿರುವ ಪ್ರಮುಖ ಚರ್ಚೆ ಅಂದರೆ ಅದು ಏಕರೂಪ ನಾಗರಿಕ ಸಂಹಿತೆಯ ಪರ ವಿರೋಧ ವಿಷಯ. ಮಾಧ್ಯಮಗಳಿಂದ ಹಿಡಿದು ಊರಿನ ಅರಳೀ ಕಟ್ಟೆಯವರೆಗೆ ಎಲ್ಲ ಕಡೆ ಇದು ಹರಿದಾಡುತ್ತಿದೆ. ಆದರೆ ಮಾಧ್ಯಮದಲ್ಲಿ ಚರ್ಚೆಗೆ ಬರುವವರಿಂದ ಹಿಡಿದು ಊರ ಗೌಡರವರೆಗೆ ಯಾರಿಗೂ ಈ ಸಂಹಿತೆಯ ಆಮೂಲಾಗ್ರ ಮಾಹಿತಿ ಇದ್ದಂತೆ ಕಾಣುವುದಿಲ್ಲ. ಇರುವ ಒಂದೆರಡು ಮಾಹಿತಿಯನ್ನೇ ಹಿಂದೆ ಮುಂದೆ ಮಾಡಿ ಅಥವಾ ಸಂಹಿತೆಯ ಪರ ಇಲ್ಲವೇ ವಿರೋಧ ಪಕ್ಷ ವಹಿಸಿ ವಕಾಲತ್ತು ಮಾಡುವುದೇ ಎಲ್ಲ ಕಡೆ ಕಾಣುತ್ತದೆ. ಆದರೆ ಇದರ ಹಿಂದೆ ಮುಂದೆ, ಹಾಗೂ ಮುನ್ನೋಟಗಳ ಆಳ ವಿವರ ಎಲ್ಲಿಯೂ ಸಿಗುವುದಿಲ್ಲ. ಇಂಥ ಸಂದರ್ಭದಲ್ಲಿ ಚಾಣಕ್ಯ ವಿಶ್ವವಿದ್ಯಾಲಯದ ಮಿತ್ರರು ಸೇರಿ 'ಸಮಾನ ನಾಗರಿಕ ಸಂಹಿತೆ, ನಿನ್ನೆ ಮೊನ್ನೆ, ಇಂದು-ನಾಳೆ' ಎಂಬ ಕೃತಿಯನ್ನು ಪ್ರಕಟಿಸಿ ಉಪಕರಿಸಿದ್ದಾರೆ. ಉಪಕಾರ ಏಕೆಂದರೆ, ಈ ಸಂಹಿತೆ ಬಗ್ಗೆ ಮಾತಾಡುವ ಎಲ್ಲರಿಗೂ ಪೂರಕ ಮಾಹಿತಿಯನ್ನು ಅಧಿಕೃತವಾಗಿ ಇದು ಕೊಡುತ್ತದೆ. ನಮ್ಮ ರಾಜ್ಯದಲ್ಲಿ ಸಾಕಷ್ಟು ಏಕ ವಿಷಯಕ ವಿಶ್ವವಿದ್ಯಾಲಯಗಳಿವೆ, ಕಾನೂನು ವಿವಿಯೂ ಇದೆ. ಸಾಕಷ್ಟು ಕಾನೂನು ಕಾಲೇಜುಗಳಿವೆ, ಅಸಂಖ್ಯ ಕಾನೂನು ಪಂಡಿತರಿದ್ದಾರೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಮಗ್ರ ಸ್ವರೂಪದ ಕೃತಿಯೊಂದರ ಅಗತ್ಯ ಹಾಗೂ ಅನಿವಾರ್ಯತೆ ಇದೆ ಎಂಬುದು ಇವರ್ಯಾರಿಗೂ ಹೊಳೆಯಲೇ ಇಲ್ಲ ಎಂಬುದು ಅಚ್ಚರಿಯ ಸಂಗತಿ. ನಮ್ಮ ದೇಶದಲ್ಲಿ ಬಹಳ ಪ್ರಾಚೀನ ಕಾಲದಿಂದಲೂ ನ್ಯಾಯವಿತ್ತು, ಕಾನೂನು ಕಟ್ಟಳೆಗಳಿದ್ದವು ಎಂದು ಹೇಳುವವರು ಅಧಿಕ. ಆದರೆ ಕಾನೂನು ಎಂಬ ಪರಿಕಲ್ಪನೆ ಬಂದಿದ್ದೇ ಹೊರಗಿನಿಂದ ಎಂಬುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ, ಇದನ್ನು ಓದುವವರೆಗೆ ನನಗೂ ಗೊತ್ತಿರಲಿಲ್ಲ. ಸ್ಮೃತಿ ಗ್ರಂಥಗಳಿವೆಯಲ್ಲಾ ಅವೇ ನಮ್ಮ ಭಾರತದ ಪ್ರಾಚೀನ ಕಾನೂನು ಕೃತಿಗಳು ಎಂಬ ಭ್ರಮೆಯಲ್ಲಿದ್ದೆ. ಇದನ್ನು ಓದಿದ ಮೇಲೆ ಈ ಗುಳ್ಳೆ ಒಡೆಯಿತು. ನಮ್ಮ ಸಮಾಜ, ನ್ಯಾಯದ ಪರಿಕಲ್ಪನೆ ಇತ್ಯಾದಿ ಕುರಿತ ಇಂಥ ಅನೇಕ ಹುಳ್ಳೆಗಳನ್ನು ಈ ಕೃತಿ ಪಟಾಪಟ್ ಎಂಬಂತೆ ಒಡೆಯುತ್ತದೆ. ಆದರೆ ಓದುಗ ಮುಕ್ತ ಮನಸ್ಸಿನಿಂದ ಓದಬೇಕು ಅಷ್ಟೇ.  ತಮ್ಮ ಪೂರ್ವಗ್ರಹವನ್ನು ಬದಿಗಿಟ್ಟು ಸುಮ್ಮನೇ ಕೃತಿಗೆ ಒಪ್ಪಿಸಿಕೊಳ್ಳುವ ಓದುಗರಿಗೆ ಮಾತ್ರ ಈ ಕೃತಿ ಹೊಸ ವಿಷಯ ಹಾಗೂ ವಿಷಯವನ್ನು ಕೊಡುತ್ತದೆ. ಇದುವರೆಗೆ ನಾವು ತಿಳಿದುಕೊಂಡ ಮಾಹಿತಿ ಎಲ್ಲ ಸತ್ಯ ಎಂಬ ಭ್ರಮೆಯೊಂದಿಗೇ  ಪುಸ್ತಕ ತೆರೆದರೆ ಏನೂ ಪ್ರಯೋಜನವಿಲ್ಲ. ಮೂಲತಃ ಸಮಾನ ನಾಗರಿಕ ಸಂಹಿತೆ ಎಂದರೇನು, ಅದರ ಮೂಲಚೂಲಗಳೇನು, ಇಂಥ ಸಂಹಿತೆ ಜಾರಿಯಾದರೆ ಆಗುವ ಪರಿಣಾಮ ಏನು? ಸಮಾನ ಸಂಹಿತೆ ಇರುವ ಸಮಾಜಗಳೆಲ್ಲ ಸೊಗಸಾಗಿವೆಯಾ? ಅಷ್ಟಕ್ಕೂ ಇಂಥ ಸಂಹಿತೆ ಕಾಣಿಸಿಕೊಂಡ ಕಾಲಘಟ್ಟ ಯಾವುದು ವರ್ತಮಾನದ ಸಂದರ್ಭದಲ್ಲಿ ಇದು ಎಲ್ಲ ಸಮಸ್ಯೆಗಳಿಗೂ ಪರಿಹಾರ ಕೊಡುತ್ತದಾ ಇತ್ಯಾದಿ ವಿಷಯಗಳನ್ನು ಆಮೂಲಾಗ್ರವಾಗಿ ಪರಿಶೀಲನೆಗೆ ಇದು ಒಡ್ಡುತ್ತದೆ. ಸಂಹಿತೆಯೊಂದಕ್ಕೆ ಸಂಬಂಧಿಸಿದ  ಪರಿಪೂರ್ಣ ಸಂಶೋಧನ ಕೃತಿ ಇದಾಗಿದೆ. ಸಂಹಿತೆಯ ಪರ ಅಥವಾ ವಿರುದ್ಧದ ನಿಲುವನ್ನು ಮೊದಲೇ ರೇಖಿಸಿಕೊಂಡು ಕೃತಿ ತಯಾರಾಗಿಲ್ಲ ಎಂಬುದು ಇದರ ಮೌಲ್ಯ ದುಪ್ಪಟ್ಟಾಗುವಂತೆ ಮಾಡಿದೆ. 

ಈ ನೆಪದಲ್ಲಿ ಭಾರತಕ್ಕೆ ಕಾನೂನು ಪ್ರವೇಶಪಡೆದ ಹಿನ್ನೆಲೆ ಸಮಾನ ಸಂಹಿತೆ ಭಾರತದಲ್ಲಿ ಕಾನೂನು ಬೆಳೆದುಬಂದ ಇತಿಹಾಸ, ಅದರ ವಿಕಾಸ, ವಿವಿಧ ಆಯಾಮಗಳು, ರಿಲಿಜನ್ ಮತ್ತು ಕಾನೂನುಗಳು ತಳಕು ಹಾಕಿಕೊಂಡ ಬಗೆ ಇತ್ಯಾದಿಗಳೆಲ್ಲ ಯಾವ ಕಥೆ ಕಾದಂಬರಿಗಳಿಗೂ ಕಡಿಮೆ ಇಲ್ಲದಂತೆ ಕುತೂಹಲ ಕರವಾಗಿ ನೀಡಲಾಗಿದೆ. ಗಂಭೀರ ವಿಷಯವೊಂದನ್ನು ವಿಷಯ ಪ್ರತಿಪಾದಿಸುವ ರೀತಿಯಿಂದ ಹೇಗೆ ಸ್ವಾರಸ್ಯಗೊಳಿಸಬಹುದು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. ಕೃತಿಯನ್ನು ಓದುತ್ತ ಹೋದಂತೆ ತಾನಾಗಿಯೇ ಓದಿಸಿಕೊಂಡು ಹೋಗುತ್ತದೆ. ಇಷ್ಟು ಗಂಭೀರ ವಿಷಯ ಮತ್ತೆ ಮತ್ತೆ ಓದಿಸಿಕೊಳ್ಳುವ ಆತ್ಮೀಯ ಕಥಾನಕದ  ಸ್ವರೂಪ ಪಡೆಯುತ್ತದೆ. ಕೃತಿಯ ಶೀರ್ಷಿಕೆ ಹೇಳುವಂತೆ ಸಮಾನ ನಾಗರಿಕ ಸಂಹಿತೆಯ ನಿನ್ನೆಗಳ ಜೊತೆಗೆ ಇಂದಿನ ಸಮಸ್ಯೆ ಹಾಗೂ ನಾಳಿನ ಸವಾಲುಗಳ ನೋಟದೊಂದಿಗೆ ಸಮಗ್ರತೆಯ ರೂಪವನ್ನು ಕೊಡಲಾಗಿದೆ. ಸಮೃದ್ಧ ಪೂರಕ ಗ್ರಂಥಗಳ ವಿವರ ನೀಡಲಾಗಿದ್ದು ಕಾನೂನಿನ ಬಗ್ಗೆ ಆಸಕ್ತಿ ಇರುವವರಿಗೆ  ಸಮೃದ್ಧ ಗ್ರಾಸ ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ ಸಮಾಜದಲ್ಲಿ ಆಗಾಗ ಕಾಣಿಸಿಕೊಳ್ಳುವ ಗಂಭೀರ ವಿಷಯವನ್ನು ನಾವು ಹೇಗೆ ಮತ್ತು ಯಾವ ದೃಷ್ಟಿಯಲ್ಲಿ ಸ್ವೀಕರಿಸಿ ಅರ್ಥ ಮಾಡಿಕೊಳ್ಳಬೇಕು ಎಂಬುದನ್ನು ಇದು ತೋರಿಸುತ್ತದೆ. ಸದ್ಯ ನಮ್ಮ ಸಮಾಜದಲ್ಲಿ ಉರಿಯುತ್ತಿರುವ ಅನೇಕ ಸಮಸ್ಯೆಗಳಲ್ಲಿ ಜ್ಞಾನವ್ಯಾಪಿ ಮಸೀದಿ ಕುರಿತ ವಿವಾದವೂ ಒಂದು, ಇಂಥ ವಿಷಯಗಳು ಆಗಾಗ ಏಳುತ್ತಲೇ ಇರುತ್ತವೆ, ಇದು ಜೀವಂತ ಸಮಾಜದ ಲಕ್ಷಣ. ಆದರೆ ಇವುಗಳಿಗೆ ಪ್ರತಿಕ್ರಿಯಿಸುವಾಗ ಭಾವನಾತ್ಮಕ ನಿಲುವಿಗೆ ಅಂಟಿಕೊಂಡು ಅಪಾಯ ಸ್ವಾಗತಿಸುವ ಸಂದರ್ಭವೇ ಹೆಚ್ಚು. ಅಂಥ ಅಪಾಯಗಳಿಗೆ ಎಡೆಕೊಡದೇ ಒಂದು ಸಂಗತಿಯನ್ನು ಶುದ್ಧ ಶೈಕ್ಷಣಿಕ ರೀತಿಯಲ್ಲಿ ನೋಡುವುದು ಹೇಗೆ ಎಂಬುದನ್ನು ಇದು ಮನಗಾಣಿಸುತ್ತದೆ. ನಮ್ಮಲ್ಲಿ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾನಿಲಯಗಳಿಗೆ ಕೊರತೆ ಇಲ್ಲ. ಆದರೆ ಆಗಾಗ ಮೇಲೇಳುವ  ಸಾಮಾಜಿಕ ಸಮಸ್ಯೆಗಳಿಗೆ ಶುದ್ಧ ಶೈಕ್ಷಣಿಕ ನಿಲುವಿನ ಮಾರ್ಗವನ್ನು ಸಮಾಜಕ್ಕೆ ತೋರಿಸುವ ನಿದರ್ಶನಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ, ಇಂಥ ಸಂದರ್ಭದಲ್ಲಿ ಇದು ಗಮನ ಸೆಳೆಯುವ ಕೃತಿಯಾಗಿದೆ. ಮುಂಬರುವ ಎಲ್ಲ ಇಂಥ ಸಂಗತಿಗಳಿಗೂ ಉನ್ನತ ಶಿಕ್ಷಣ ಸಂಸ್ಥೆಗಳು ಇದೇ ಮಾದರಿಯಲ್ಲಿ ಪ್ರತಿಕ್ರಿಯಿಸಿ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಕೊಡಲು ಉಳಿದ ಸಂಸ್ಥೆಗಳಿಗೆ ಇದು ಮಾರ್ಗದರ್ಶಿಯಾಗಲಿ ಎಂದಷ್ಟೇ ಹೇಳಬಹುದು. ಉಳಿದಂತೆ ಕೃತಿ ಓದಿ ತಿಳಿಯುವುದು ಲೇಸು.

ಅಂದಹಾಗೆ ಈ ಕೃತಿಯನ್ನು ಯಾವುದೋ ಪ್ರಸಿದ್ಧ ಪ್ರಕಾಶನ ಸಂಸ್ಥೆ ಪ್ರಕಟಿಸಿಲ್ಲ. ಸಮಾನ ಆಸಕ್ತಿಯ ಒಂದಿಷ್ಟು ಜನ ಸೇರಿ ಕಟ್ಟಿಕೊಂಡ ಸಮನ್ವಿತ ಎಂಬ ಸಂಸ್ಥೆ ಇದನ್ನು ಹೊರತಂದಿದೆ. ಈ ಕೃತಿಯೇ ಸಂಸ್ಥೆಗೆ ದೊಡ್ಡ ಹೆಸರು ಮತ್ತು ಖ್ಯಾತಿಯನ್ನು ತರುವುದರಲ್ಲಿ ಅನುಮಾನವಿಲ್ಲ. ಆದರೆ ಈ ಜವಾಬ್ದಾರಿ ಇರುವುದು ಮುಕ್ತ ಮನಸ್ಸಿನ ಕನ್ನಡ ಓದುಗರ ಮೇಲೆ. ಈ ಕೃತಿಯನ್ನು ಶ್ರದ್ಧೆ ಹಾಗೂ ಶ್ರಮದಿಂದ ಸಂಪಾದಿಸಿದ ಚಾಣಕ್ಯ ವಿವಿಯ ಪ್ರೊ. ಎಂ. ಎಸ್. ಚೈತ್ರ ಹಾಗೂ ಕುವೆಂಪು ವಿವಿಯ ಪ್ರೊ. ಷಣ್ಮುಖ ಇವರನ್ನು ತುಂಬು ಹೃದಯದಿಂದ ನಾವೆಲ್ಲ ಅಭಿನಂದಿಸಬೇಕಿದೆ. ಹೇಳಲೇಬೇಕಿದ್ದ ಒಂದು ಮಾತನ್ನು ಮರೆಯುವ ಮುನ್ನ ಹೇಳುವೆ. ಈ ಕೃತಿಯಲ್ಲಿ 170 ಪುಟಗಳ ಸಮಗ್ರ ಕಾನೂನು ಮಾಹಿತಿಗಳಿದ್ದು ಒಂದೇ ಒಂದು ಪುಟವನ್ನೂ ಒಬ್ಬ ನ್ಯಾಯವಾದಿ ಅಥವಾ ನ್ಯಾಯ ಪಂಡಿತ ಬರೆದಿಲ್ಲ. ಬದಲಿಗೆ ಓದು ಮತ್ತು ಶಿಕ್ಷಣ ಹಾಗೂ ಯಾವುದೇ ವಿಷಯದ ಬಗ್ಗೆ ಗಂಭೀರ ಚಿಂತನೆ ಮಾಡುವ ಮನಸ್ಸಿನ ಯುವ ಉತ್ಸಾಹಿ ಮನಸ್ಸುಗಳು ಪ್ರಾಮಾಣಿಕವಾಗಿ ಬರೆದಿದ್ದಾವೆ, ಸಂಪಾದಕರೂ ಇದಕ್ಕೆ ಅಷ್ಟೇ ಶ್ರಮ ಹಾಕಿದ್ದಾರೆ. ಒಂದು ಸಸೂತ್ರತೆ, ಬದ್ಧತೆ ಇಡೀ ಕೃತಿಯಲ್ಲಿ ಇರುವಂತೆ ಸಂಪಾದಕರು ನೋಡಿಕೊಂಡಿದ್ದಾರೆ. ಇಡೀ ಕೃತಿ ತನ್ನ ಓಘದಿಂದ ಒಂದೇ ಓದಿಗೆ ಓದಿ ಮುಗಿಸುವ ಉತ್ತೇಜನ ಕೊಡುತ್ತದೆಯಾದರೂ ಕೃತಿಯ ಅಧ್ಯಾಯಗಳನ್ನು ಇಡಿಯಾಗಿಯೂ ಬಿಡಿಯಾಗಿಯೂ ಓದಿ ಆನಂದಿಸಬಹುದಾಗಿದೆ. ಇಂಥ ಗಂಭೀರ ಕೃತಿಯಲ್ಲಿ ಈ ಬಗೆಯ ಗುಣ ಇರುವುದು ಕಡಿಮೆ.

ಒಟ್ಟಿನಲ್ಲಿ ಸಮಾಜ, ಶಿಕ್ಷಣ ಹಾಗೂ ಸುತ್ತಲಿನ ವಿದ್ಯಮಾನಗಳ ಬಗ್ಗೆ ಕಿಂಚಿತ್ತಾದರೂ ಕಳಕಳಿ ಇರುವ ಸಮಸ್ತರೂ ಇದನ್ನು ಒಮ್ಮೆಯಾದರೂ ಓದಬೇಕು ಅನಂತರ ಅನೇಕ ಬಾರಿ ಕೃತಿಯೇ ಓದಿಸಿಕೊಳ್ಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಥ ಕೃತಿ ದೇಶದ ಬಹುಭಾಷೆಗಳಲ್ಲಿ ಬರಬೇಕು. ಕನಿಷ್ಠಪಕ್ಷ ಬಹುಜನರನ್ನು ತಲಪುವ ಇಂಗ್ಲಿಷ್ ನಲ್ಲಾದರೂ ಬರಬೇಕು ಅಂಥ ಅಗತ್ಯವಿದೆ.  ಸಂಪಾದಕರು ಹಾಗೂ ಪ್ರಕಾಶಕರು ಈ ಬಗ್ಗೆ ಅವಲೋಕಿಸುವ ಅನಿವಾರ್ಯತೆ ಇದೆ. ಇದರಿಂದ ಇಂಥದೊಂದು ಕೃತಿ ಕನ್ನಡದಲ್ಲಿ ಮೊದಲು ಬಂದು ದೇಶವನ್ನು ಸುತ್ತುವಂತಾಯಿತು ಎಂಬ ಹೆಗ್ಗಳಿಕೆ ನಮ್ಮದಾಗುತ್ತದೆ. ಆದಷ್ಟು ಬೇಗ ಅದು ಸಾಧ್ಯವಾಗಲಿ ಎಂದಷ್ಟೇ ನಾವು ಬಯಸಬಹುದು.

No comments:

Post a Comment