Sunday, 21 January 2024

ಮತ್ತೆ ಆಯಿಯನ್ನು ಕಳೆದುಕೊಂಡೆ


ಅವರು ನನ್ನ ಎರಡನೆಯ ತಾಯಿ ಆಗಿದ್ದವರು. ಅಂದರೆ ನನ್ನ ಅರ್ಧಾಂಗಿಯ ದೊಡ್ಡಮ್ಮ. ನನಗೂ ಹಾಗೆಯೇ. ಕಳೆದ ವರ್ಷ ಹೆಚ್ಚೂ ಕಡಿಮೆ ಇದೇ ವೇಳೆಗೆನನ್ನ ಹೆತ್ತ ತಾಯಿ ಹೇಗೆ ಉಸಿರುಚೆಲ್ಲಿದ್ದರೋ ಹಾಗೆಯೇ ಇವರೂ ಚೆಲ್ಲಿದರು. ಯಾರನ್ನೂ ಕಾಡದೇ ಬೇಡದೇ. ಕೇಳಿಕೊಂಡು ಬಂದ ಸಾವು ಇದೂ ಕೂಡ. ಆದರೆ ಸ್ವಲ್ಪ ಅವಸರ ಪಟ್ಟರು. ದಾಸರು ಸುಮ್ಮನೇ ಅಂದಿಲ್ಲ. ಬದುಕು ಅಂದ್ರೆ ನೀರ ಮೇಲಿನ ಗುಳ್ಳೆ. ಯಾವಾಗ 'ಫಟ್' ಎಂದು ಒಡೆಯುತ್ತದೋ ಯಾರಿಗೂ ಊಹಿಸಲು ಆಗದು. ಹೀಗೆ ಹೇಳಲು ಕಾರಣವಿದೆ. ಅವರ ದೇಹ ಇದ್ದುದು ದೂರದ ಅಮೆರಿಕದಲ್ಲಿ ಆದರೆ ಅವರ ಮನಸ್ಸು ಸದಾ ಕಾಲ ಭಾರತದಲ್ಲಿ, ಅದರಲ್ಲೂ ನಮ್ಮ ಕರ್ನಾಟಕದಲ್ಲಿ. ವಾರಕ್ಕೊಮ್ಮೆ ಕರೆ ಮಾಡಿ ಸಾಮಾಜಿಕ, ಇಲ್ಲಿನ ರಾಜಕೀಯ, ಸಾಂಸ್ಕೃತಿಕ ವಿಷಯಗಳನ್ನು ಬಿಟ್ಟೂ ಬಿಡದೇ ತಿಳಿದುಕೊಳ್ಳುತ್ತಿದ್ದರು. ನುಭವಿಸಬೇಕಲ್ಲ. ಅಂದಿದ್ದೆ ಇನ್ನೊಂದೆರಡು ತಿಂಗಳು. ನಿಮ್ಮಲ್ಲಿ ಬಂದು ನಿಮಗೆ ಶಾಕ್ ಆಗುವಂತೆ ನಿಮ್ಮನೆ ಬಾಗಿಲು ಬಡಿಯುತ್ತೇನೆ ನೋಡ್ತಿರಿ ಅಂದಿದ್ದೆ.  ಐ ವಿಲ್ ಬಿ ವೇಯ್ಟಿಂಗ್‌ ಈಚೆಗೆ ಯಾಕೋ ಕರೆ ಮಾಡಿದಾಗಲೆಲ್ಲ ನಾವು ಮತ್ತೆ ಭೇಟಿ ಆಗ್ತೀವೋ ಇಲ್ವೋ ಎಂದು ಮಾತಾಡಿ ಸದಾ ನನ್ನಿಂದ ಬೈಸಿಕೊಳ್ಳುತ್ತಿದ್ದರು. ನಿನ್ನಿ ತಾನೇ ಮತ್ತೆ ಬೈದಿದ್ದೆ ಇನ್ನೂ ಇಪ್ಪತ್ನಾಲ್ಕು ಗಂಟೆ ಆಗಿಲ್ಲ. ಆಗಲೇ ಅವರು ಅನ್ನು ತ್ತಿದ್ದ ಮಾತು ಮತ್ತೆ ಕಾಣುವುದಿರಲಿ, ಮತ್ತೆ ಮಾತಾಡುವುದೂ ಇಲ್ಲ ಅನಿಸಿಬಿಟ್ಟಿತ್ತು. ಥತ್ ಅಂದುಕೊಂಡೆ, ಜೀವನ ಅಂದ್ರೆ ಅನಿಶ್ಚಿತತೆಯನ್ನು ಅರಗಿಸಿಕೊಳ್ಳುವುದೇ ಆಯ್ತು. ಆಯಿ ಹೋಗಿದ್ದು ಇನ್ನೂ ಅರಗಿಲ್ಲ. ಅಷ್ಟರಲ್ಲಿ ಇನ್ನೊಬ್ಬ ತಾಯಿ ಹೋದರು. ಅಪ್ಪಾ ದೇವಾ ಇಷ್ಟೇನಾ ನಿನ್ನ ಮಹತ್ತು. ಇಂಥ ಕಷ್ಟ ನಮಗೆ ಅಭ್ಯಾಸ ಆದ ಮೇಲೆ ಏನು ಮಾಡ್ತೀಯ ಅಂದುಕೊಂಡೆ. ಆದರೆ ಈಗಲಂತೂ ‘ಐ ವಿಲ್ ವೇಯ್ಟ್ ಫಾರ್ ಇಟ್’ ಅಂದಿದ್ದರು. ಆಯ್ತು ಅಂದಿದ್ದೆ. ಇಬ್ಬರೂ ಮಾತು ಉಳಿಸಿಕೊಳ್ಳಲಾಗಲಿಲ್ಲ. ಇಬ್ಬರೂ ಮೂರ್ಖರಾದೆವು-ಪ್ರಕೃತಿಯ ಮುಂದೆ.   

ಅವರು ಬೆಳಗಾವಿ ಮೂಲದವರು. ೭೦ರ ದಶಕದಲ್ಲಿ ಮದುವೆಯಾಗಿ ಅಲ್ಲಿ ಕೆಲಸದಲ್ಲಿದ್ದ ಗಂಡನ ಜೊತೆ ಅರೆಮನಸ್ಸಿನಲ್ಲೇ ಹಾರಿದರಂತೆ. ಅರೆ ಮನಸ್ಸು ಏಕೆಂದರೆ ಎಂದಾದರೂ ಒಂದು ದಿನ ಗಂಡನನ್ನು ಮನವೊಲಿಸಿ ಮರಳಿ ಭಾರತಕ್ಕೆ ಬರುತ್ತೇನೆ ಎಂಬ ನಂಬಿಕೆ ಇತ್ತಂತೆ,ಪಾಪ, ಅದೂ ಕೈಗೂಡಲಿಲ್ಲ. ಸಾಮಾನ್ಯವಾಗಿ ನಮ್ಮ ದೇಶದವರು ಒಮ್ಮೆ ಅಮೆರಿಕಕ್ಕೆ ಹೋದರೆ ಮತ್ತೆ ವಾಪಸು ಬರುವ ಮನಸ್ಸು ಮಾಡುವುದಿಲ್ಲವಲ್ಲ, ಅವರ ಗಂಡನೂ ಹಾಗೆಯೇ ಆಗಿಬಿಟ್ಟರು. ಅದೊಂದು ದುರಂತ. ಅವರ ಗಂಡನಿಗೆ ಹಿಂದಿನ ಹಿಂದುಳಿದ ಬ್ರಿಟಿಷ್ ಕಾಲದ ದೇಶವೇ ಆಗಿತ್ತು. ಇವರು ಪ್ರತೀ ಬಾರಿ ಇಲ್ರೀ ಈಗ ಹಂಗಿಲ್ಲವೆAದು ಅರಿವು ಮೂಡಿಸಲು ಹೆಣಗುತ್ತಿದ್ದರು. ಪುಣ್ಯಕ್ಕೆ ಅದು ಹೇಗೋ ಮನಸ್ಸು ಮಾಡಿ ನನ್ನ ಮದುವೆ ಸಂದರ್ಭದಲ್ಲಿ ಬಂದಿದ್ದರು, ಒಳ್ಳೆಯ ಮನುಷ್ಯ. ಆದರೆ ಬ್ರಿಟಿಷರ ಪ್ರಭಾವ ಅವರ ಮೇಲೆ ಹಾಗೆ ಆಗಿತ್ತು, ಅವರ ತಪ್ಪಲ್ಲ. 

ಕನ್ನಡ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅವರಿಗೆ ಅದೆಂಥ ಪ್ರೀತಿ. ಅವರು ಕನ್ನಡವನ್ನು ಎಂದೂ ಮರೆಯಲಿಲ್ಲ.ಮಾತ್ರವಲ್ಲ, ಅಲ್ಲಿ ದೂರದ ಅಮೆರಿಕದಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಕನ್ನಡಿಗರನ್ನು ಮನವೊಲಿಸಿ ಆಗಾಗ ಸಾಹಿತ್ಯ ಓದುವ ಹವ್ಯಾಸ ಬೆಳೆಸಿದ್ದರಂತೆ. ಅವರಿಂದಲೇ ಒಮ್ಮೆ ತಿಳಿದೆ. ಕನ್ನಡದ ಪುಸ್ತಕ ಖರೀದಿ ಮಾಡಲೆಂದೇ ಅವರು ಒಂದೆರಡು ವರ್ಷಕ್ಕೊಮ್ಮೆ ಇಲ್ಲಿ ಬರುತ್ತಿದ್ದರು. ನನಗೆ ಕನ್ನಡ ಪುಸ್ತಕಗಳೇ ನೋಡ್ರಿ ಇಲ್ಲಿ ಸಂಬಂಧ ಬಿಗಿ ಇಟ್ಟಿದ್ದು ಅನ್ನುತ್ತಿದ್ದರು. ಕುವೆಂಪು ಕಾರಂತ, ಭೈರಪ್ಪ ಆದಿಯಾಗಿ ನನ್ನಂಥ ಪುಟಗೋಸಿ ಕನ್ನಡ ಬ್ಲಾಗ್ ಬರಹಗಾರರ ಬರೆಹವನ್ನೂ ಓದಿ ಅಭಿಪ್ರಾಯ ಹೇಳುತ್ತಿದ್ದರು. ಅಷ್ಟಲ್ಲ, ಅಲ್ಲಿ ಪರಿಚಯಸ್ಥರಿಗೂ ಕೊಟ್ಟು ಓದಿಸುತ್ತಿದ್ದರು. ಒಮ್ಮೆ ಅಲ್ಲಿನ ಅವರ ಪರಿಚಿತರು  ನಾನು ನನ್ನ ಆಯಿ ಬಗ್ಗೆ ಬರೆದ ಲೇಖನ ಓದಿ ಚೆನ್ನಾಗಿ ಬರೆದಿದ್ದೀರಿ ಎಲ್ಲರ ತಾಯಂದಿರೂ ಹೀಗೆಯೇ ನೋಡಿ ಎಂದು ಅಚ್ಚರಿ ಹುಟ್ಟಿಸಿದ್ದರು. ನನ್ನ ಲೇಖನ ಓದುವವರು ಅಮೆರಿಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಏರಿದ್ದು ಇವರಿಂದ ಎಂದು ತಿಳಿದು ಹೆಮ್ಮೆ ಪಟ್ಟಿದ್ದೆ. ಅವರಂಥ ಅವರು ಒಮ್ಮೆಯೂ ನನ್ನನ್ನು ಅಲ್ಲಿಗೆ ಕರೆಸಿಕೊಳ್ಳದೇ ಕೊಟ್ಟ ಮಾತು ಅರ್ಧ ಮಾಡಿ ಎಲ್ಲೋ ದೂರ ಹೋಗಿಬಿಟ್ಟರು. ಎಷ್ಟು ಸಂಕಟವಾಗಬೇಡ? ಅಷ್ಟೇ. ನಿನ್ನೆ ಮಧ್ಯಾಹ್ನ ಅಲ್ಲಿ ತುಂಬ ಚಳಿ ಅನ್ನುತ್ತ ಬೆಚ್ಚಗೆ ಹೊದ್ದು ಅವರ ಮಗಳ ಮನೆಯಲ್ಲಿ ಮಲಗಿದರಂತೆ. ಮತ್ತೆ ಏಳಲಿಲ್ಲ ಎಂದು ಫೋನ್ ಬಂತು. ಕಳವಳಿಸಿದೆ, ಕಣ್ತುಂಬ ಅತ್ತೆ. ಇನ್ನೇನು ಮಾಡಲಿ? 

 ಇದನ್ನು ನೆನೆದು ಮತ್ತೆ ಮತ್ತೆ ನೀರ ಮೇಲಿನ ಗುಳ್ಳೆ ಎಂಬ ದಾಸರ ಪದ ನೆನೆಯುತ್ತ ಕುಳಿತಿದ್ದೇನೆ.

Saturday, 13 January 2024

ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕಥೆ


ವೃತ್ತಿಯಿಂದ ಇಂಜಿನಿಯರ್ ಆಗಿ ದೇಶ ವಿದೇಶಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಸಾಹಿತ್ಯ ಸಂಸ್ಕೃತಿ ಆಸಕ್ತರಾದ ಬಿ. ಎನ್. ಯಳಮಳ್ಳೀಯವರು ಇದೀಗ ತುಂಬ ಶ್ರಮವಹಿಸಿ ಇತಿಹಾಸದಹೊಟ್ಟೆ ಬಗೆದು ನಮ್ಮ  ಹೋರಾಟದ ಕಥೆಯನ್ನು ಬಿಡಿಸಿಹೇಳುವ ತೊಂದರೆ ತೆಗೆದುಕೊಂಡಿದ್ದಾರೆ. ಆದರೆ ಅವರು ಇಲ್ಲಿ ಹೇಳಿರುವ ಕಥೆ ನಾವೆಲ್ಲ ಶಾಲೆ, ಕಾಲೇಜುಗಳಲ್ಲಿ ಓದಿಕೊಂಡುಬಂದ ಇತಿಹಾಸ ಅನ್ನಲಾದ ಕಥೆಯನ್ನಲ್ಲ. ಆದರೆ ಅಲ್ಲೆಲ್ಲ ಹೇಳದೇ ಮುಚ್ಚಿಟ್ಟ ಕಥೆಯ ಸಾಲು. ಹೌದು. ನಮ್ಮ ದೇಶವನ್ನು ಕುರಿತಂತೆ ಯೋರೋಪಿನ ಇತಿಹಾಸಕಾರರು ಕಟ್ಟಿಕೊಟ್ಟ ಕಥೆಗಳೆಲ್ಲವನ್ನು ಇತಿಹಾಸ ಹಾಗೂ ಭಾರತ ಕುರಿತ ನೈಜ ವಿವರಣೆ ಎಂದು ನಂಬಿಸುತ್ತಲೇ ಬರಲಾಗುತ್ತಿದೆ. ಇದರಲ್ಲಿ ತೊಡಗಿಕೊಂಡವರಲ್ಲಿ ಬರೀ ವಿದೇಶಿಗರಷ್ಟೇ ಅಲ್ಲ. ನಮ್ಮ ದೇಶದವರೆಂದು ಹೇಳಿಕೊಂಡ ಆದರೆ ತಮ್ಮ ವ್ಯಕ್ತಿತ್ವವನ್ನು ಯೋರೋಪಿಗೆ ಸಂಪೂರ್ಣ ಮಾರಿಕೊಂಡ ನಮ್ಮವರೂ ಸೇರಿದ್ದಾರೆ. ಇವರೆಲ್ಲ ಬ್ರಿಟಿಷರು ಕೊಟ್ಟ ಆಧುನಿಕ ಶಿಕ್ಷಣ ಪಡೆದ ಹಾಗೂ ಆ ಶಿಕ್ಷಣದಲ್ಲಿ ಅವರು ಹೇಳಿಕೊಟ್ಟ ಪಾಠಗಳನ್ನು ಸತ್ಯವೆಂದು ಕಣ್ಣುಮುಚ್ಚಿ ನಂಬಿದವರು ಹಾಗೂ ತಮ್ಮ ನಂಬಿಕೆಯೇ ಶ್ರೇಷ್ಠವೆಂದು ಉಳಿದವೆಲ್ಲ ಮೌಢ್ಯವೆಂದು ಮೂಢತನ ರೂಢಿಸಿಕೊಂಡವರು. ನಮ್ಮ ದೇಶದ ಎಲ್ಲ ನಂಬಿಕೆಗಳು, ಆಚರಣೆಗಳೆಲ್ಲ ಮೂಢನಂಬಿಕೆಗಳೆಂದು ಯೂರೋಪಿನವರ ಮಾತನ್ನು ಗಾಢವಾಗಿ ನಂಬಿದವರು. ಯೂರೋಪಿನವರ ಪ್ರಕಾರ ಅವರ ನಂಬಿಕೆ ಮಾತ್ರ ಸರಿ. ಉಳಿದವೆಲ್ಲ ಅಂಧ. ಮೌಢ್ಯ. ಅದನ್ನವರು ಆಧುನಿಕ ಶಿಕ್ಷಣದ ಮೂಲಕ ಕಲಿಸಿದರು. ಇಲ್ಲಿನವರು ಅದರ ಹಿನ್ನೆಲೆ ಮುನ್ನೆಲೆ ತಿಳಿಯದೇ ನಂಬಿದರು. ಹೀಗೆ ನಂಬುವುದೇ ಮೂಢನಂಬಿಕೆ ಅನ್ನುವುದು ಇಂದಿಗೂ ನಮ್ಮ ಬಹುತೇಕ ಜನರಿಗೆ ಅರ್ಥವಾಗಿಲ್ಲ. ಇಂಥ ಮೂಢನಂಬಿಕೆಯಲ್ಲಿ ನಮ್ಮ ದೇಶದ ಇತಿಹಾಸವೂ ಸೇರಿದೆ. ಆದರೆ ಯೂರೋಪಿನ ಜನರ ಮಾತನ್ನು ಕಣ್ಣು ಮುಚ್ಚಿ ನಂಬದ ಸಾಕಷ್ಟು ಜನ ಈಗ ಕಾಣತೊಡಗಿದ್ದಾರೆ. ಅಂಥವರಲ್ಲಿ ಯಳಮಳ್ಳೀಯವರೂ ಒಬ್ಬರು. ಅವರು ಬ್ರಿಟಿಷರು ನಮಗೆಕಲಿಸಿದ ಇತಿಹಾಸಕ್ಕೆ ಅದರಲ್ಲೂ ನಮ್ಮ ಸ್ವಾತಂತ್ರ್ಯ ಹೋರಾಟದ ಕಥೆಗೆ ಕೈ ಹಾಕಿದ್ದಾರೆ. ಸಾಕಷ್ಟು ಶ್ರಮವಹಿಸಿ ಯಶಸ್ಸನ್ನೂ ಕಂಡಿದ್ದಾರೆ. 

ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಇತಿಹಾಸವೆಂದು ಈಗ ನಮಗೆ ಕಲಿಸಲಾಗುತ್ತಿರುವ ಪಾಠಗಳಲ್ಲಿ ಅನೇಕ ಸುಳ್ಳುಗಳಿವೆ, ಸತ್ಯವನ್ನು ಮರೆಮಾಚಲಾಗಿದೆ. ಇದಕ್ಕೆ ಬ್ರಿಟಿಷರ ಹಾಗೂ ನಮ್ಮವರ ಸ್ವಾರ್ಥ ಕಾರಣ ಎಂಬುದು ಈ ಕೃತಿಯನ್ನು ಓದಿದರೆ ಅರಿವಾಗುತ್ತದೆ. ನನಗೇ ತಿಳಿದಂತೆ ಬ್ರಿಟಿಷ್ ವಿರುದ್ಧ ಹೋರಾಡಿದ ಸಾಕಷ್ಟು ಜನ ಗಂಡಸರು-ಹೆಂಗಸರು ಎಲ್ಲಿಯೂ ದಾಖಲಾಗದೇ ಹೋಗಿದ್ದಾರೆ. ಇವರು ಭಗತ್ ಸಿಂಗ್ ರಂತೆ, ಮಂಗಲಪಾಂಡೆಯಂತೆ ದೊಡ್ಡ ಹೋರಾಟ ಮಾಡಿದವರಲ್ಲ. ನಿಜವಾದ ಹೋರಾಟಮಾಡುವವರಿಗೆ ಅನೇಕ ರೀತಿಯಲ್ಲಿ ನೆರವಾದವರು, ಕಷ್ಟಪಟ್ಟವರು. ಬ್ರಿಟಿಷರ ವಿರುದ್ಧ ಹೋರಾಡಲು ಸ್ಥಳೀಯವಾಗಿ ಲಭ್ಯವಿದ್ದ ಸಾಮಗ್ರಿಗಳನ್ನು ಬಳಸಿ ನಾಡಬಾಂಬ್ ತಯಾರಿಸಿ, ಪಿಸ್ತೂಲು ಇತ್ಯಾದಿ ತಯಾರಿಸಿ ಸಶಸ್ತ್ರ ಹೋರಾಟ ಮಾಡಿದವರು ಲೆಕ್ಕವಿಲ್ಲದಷ್ಟಿದ್ದಾರೆ. ಆದರೆ  ಬ್ರಿಟಿಷ್ ವಿರುದ್ಧ ಹೋರಾಡಿದ ಹಲ ಕೆಲವರಿಗೆ ಮಾತ್ರ ಕೆಲವು ಕಾರಣಕ್ಕೆ ಗೌರವಾದರಗಳು ದೊರೆತು ಬೇರೆ ಯಾರೂ ದೇಶದ ಸ್ವಾತಂತ್ರ್ಯಕ್ಕೆ ಅಷ್ಟಾಗಿ ಹೋರಾಡಿಲ್ಲ ಅನ್ನುವಂತೆ ಲಾಗಾಯ್ತಿನಿಂದಲೂ ಬಿಂಬಿಸಲಾಗುತ್ತಿದೆ. 

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವರ ಹೆಸರು ಮಾತ್ರ ಮುಂಚೂಣಿಯಲ್ಲಿದ್ದು ಅಷ್ಟಕ್ಕೇ ಅದು ನಿಲ್ಲುತ್ತದೆ. ಫಡ್ಕೆ, ಸಾವರ್ಕರ್ ಮೊದಲಾದ  ಬಹುತೇಕರ ಹೆಸರುಗಳು ಸದಾ ವಿವಾದದಲ್ಲೇ ಇರುವಂತೆ ಮಾಡಲಾಗಿದೆ. ಇದಕ್ಕೆ ಆಧಾರವಾಗಿ ಬ್ರಿಟಿಷ್ ಪ್ರಣೀತ ಇತಿಹಾಸದ ಪುಟಗಳನ್ನು ತೋರಿಸಲಾಗುತ್ತದೆ. ಈ ಸಾಲಿನಲ್ಲಿ ನಮ್ಮವರೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ. ತಮಾಷೆ ಅಂದ್ರೆ ಪ್ರಪಂಚದಲ್ಲಿ ಭಾರತವನ್ನು ಬಿಟ್ಟರೆ ಬೇರೆ ಯಾವ ದೇಶದಲ್ಲೂ ತಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ವಿಷಯದಲ್ಲಿ ಪರ-ವಿರೋಧಗಳಿಲ್ಲ. ನಮ್ಮಲ್ಲಿ ಏಕೆ ಹೀಗೆ ಅಂದರೆ ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರಾದ ಕೊಟ್ರೇಶ್ ಹೇಳುವಂತೆ ನಮ್ಮ ಈ ಇತಿಹಾಸ ಬರೆದುಕೊಟ್ಟವರೆಲ್ಲ ವಿದೇಶಿಗರು ಹಾಗೂ ಅವರ ಶಿಷ್ಯರು ಆದ ಕಾರಣ. ಮತ್ತೊಂದು ಕಾರಣ ಕುವೆಂಪು ವಿವಿಯ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ರಾಜಾರಾಮ ಹೆಗಡೆಯವರು ಹೇಳುವಂತೆ ಬ್ರಿಟಿಷ್ ವಿರುದ್ಧ ಹೋರಾಡುವಾಗ ನಮ್ಮಲ್ಲಿ ಎರಡು ದೇಶಗಳಿಗೆ ಹೋರಾಟ ನಡೆಯಿತು. ಮುಸ್ಲಿಂ ಹಾಗೂ ಹಿಂದೂ ಪರ. ಉಳಿದ ದೇಶಗಳಲ್ಲಿ ಇಂಥ ಸಮಸ್ಯೆ ಬೇರೆ ರೀತಿಯಲ್ಲಿದೆ ಅಮೆರಿಕದಲ್ಲಿ ಬ್ಲಾಕ್ ಅಂಡ್ ವೈಟ್ ಎಂದು ಕಾಣುವಂತೆ. ಆದರೆ ನಮ್ಮಲ್ಲಿ ಇದರ ನಡುವೆ ಸೆಕ್ಯೂಲರ್ ಎಂಬ ಕಲ್ಪನೆ ಸೇರಿಕೊಂಡು ಸಮಸ್ಯೆಯನ್ನು ಸದಾ ಜೀವಂತ ಇಟ್ಟಿದೆ ಮಾತ್ರವಲ್ಲ ಬ್ರಿಟಿಷರು ಇಲ್ಲಿಂದ ಹೋದರೇ ವಿನಾ ಅಂದಿನ ಸಮಸ್ಯೆ ಇಂದಿಗೂ ಹಾಗೇ ಇದೆ.ಇವು ಹೆಚ್ಚು ಸ್ವೀಕಾರಾರ್ಹ ವಿವರಗಳು ಅನಿಸುತ್ತದೆ. 

ಆದರೆ ಬ್ರಿಟಿಷರು ಭಾರತ ಕುರಿತಂತೆ ಕೊಟ್ಟ ಚಿತ್ರಣಕ್ಕೆ ಅವರೇ ಕೊಡುವ ಆಧಾರಗಳು ಕೆಲವೊಮ್ಮೆ ವಿರುದ್ಧವಾಗಿ ಕಾಣಿಸುತ್ತವೆ. ಭಾರತದಲ್ಲಿ ಶಿಕ್ಷಣ ಎಲ್ಲರಿಗೂ ಇರಲಿಲ್ಲ ಎಂದು ಅವರೇ ಒಂದೆಡೆ ಪ್ರಚಾರಮಾಡಿ ಇನ್ನೊಂದೆಡೆ  ಎಲ್ಲರಿಗೂ ಶಿಕ್ಷಣ ಸಿಗುತ್ತಿತ್ತು ಎಂದು ಅವರೇ ದಾಖಲೆ ಕೊಡುತ್ತಾರೆ. ಇದನ್ನು ಧರ್ಮಪಾಲ್ ತಮ್ಮ ಪ್ರಸೊದ್ಧ ಕೃತಿ 'ದಿ ಬ್ಯೂಟಿಫುಲ್ ಟ್ರೀ'ಯಲ್ಲಿ ಸಾಧಾರವಾಗಿ ತೋರಿಸಿದ್ದಾರೆ. ಇಂಥದ್ದೇ ಬ್ರಿಟಿಷರ ವಿರೋಧಾಭಾಸ ಕಾಣಿಸುವ ಕೃತಿ ಯಳಮಳ್ಳೀಯವರ ಈ ಕೃತಿ ಇದರಲ್ಲಿ ಯಶಸ್ವಿಯಾಗಿದೆ.

ಏನೇ ಆದರೂ ವೃತ್ತಿ ಬೇರೆಯಾದರೂ ಪ್ರವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರನ್ನೂ ಕಾಡುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅದನ್ನು ಬೆನ್ನತ್ತಿ ಕಷ್ಟಪಟ್ಟು ಇಂಥ ಕೃತಿ ರಚಿಸಿದ ಯಳಮಳ್ಳೀಯವರಿಗೆ ಸೆಲ್ಯೂಟ್ ಮಾಡಲೇಬೇಕಿದೆ. ಇದನ್ನು ಆಸಕ್ತರು ಅದರಲ್ಲೂ ಇತಿಹಾಸದ ವಿದ್ಯಾರ್ಥಿಗಳು ಶಿಕ್ಷಕರು ಕೊಂಡು ಓದಿ ಚರ್ಚಿಸಬೇಕಿದೆ. 


ಪುಸ್ತಕ: ಸ್ವಾತಂತ್ರ್ಯ ಹೋರಾಟದ ಅಸಲಿ ರೂವಾರಿಗಳು. ಬಿ ಎನ್ ಯಳಮಳ್ಳೀ, ಸಮೃದ್ಧ ಸಾಹಿತ್ಯ ಪ್ರಕಾಶನ, ತಿಲಕ್ ನಗರ ಬೆಂಗಳೂರು. ಮೊಬೈಲ್: ೯೮೮೦೭೭೩೦೨೭

Saturday, 6 January 2024

ಭಗವದ್ಗೀತೆ ಹೇಳುವ ಆಹಾರ ಆದರ್ಶ


ಪ್ರಪಂಚದಲ್ಲಿ ಆಗಾಗ ಆಹಾರವನ್ನು ಕುರಿತು ಸಸ್ಯಾಹಾರ ಶ್ರೇಷ್ಠ ಮಾಂಸಾಹಾರ ಕನಿಷ್ಟ ಇತ್ಯಾದಿ ಮೇಲು-ಕೀಳು ಚರ್ಚೆಗಳು ನಡೆಯುತ್ತವೆ. ಆಹಾರದ  ವಿಷಯದಲ್ಲಿ ಇವೆಲ್ಲ ಅರ್ಥಹೀನ ಚರ್ಚೆಗಳು. ಸಸ್ಯಾಹಾರದಲ್ಲೂ ಕೂಡ ಕೆಲವರು ಪ್ರಾಣಿ ಮೂಲವಾದ ಹಾಲು ಮೊಟ್ಟೆಗಳ ಸೇವನೆ ತಪ್ಪಿಲ್ಲ ಎಂದು ತಿಳಿಯುತ್ತಾರೆ. ಇದನ್ನೂ ಮೀರಿ ‘ವೇಗನ್’ ಎಂಬ ಪಕ್ಕಾ ಸಸ್ಯಾಹಾರಿ ಗುಂಪು ಪ್ರಪಂಚದಲ್ಲಿದೆ. ಇವರು ಹಾಲನ್ನೂ ಕೂಡ ಸೇವಿಸುವುದಿಲ್ಲ ಇವರ ಪ್ರಕಾರ ಆಹಾರ ಸೇವಿಸುವರಲ್ಲಿ ತಾವೇ ಶ್ರೇಷ್ಠರು. ಇದೀಗ ಭಾರತದಲ್ಲಿ ಕೂಡ ವೇಗನ್ನರು ಹೆಚ್ಚುತ್ತಿದ್ದಾರೆ. ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕಂಪನಿಗಳು ವೇಗನ್ನರ ಆಹಾರದ ಹೆಸರಿನಲ್ಲಿ ಮೋಸಮಾಡುತ್ತಿವೆ. ಇದಕ್ಕಾಗಿ ಭಾರತೀಯ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಸಂಸ್ಥೆ (ಎಫ್ ಎಸ್ ಎಸ್ ಎ ಐ) ಸಂಸ್ಥೆ ಇದೇ ಜೂನ್‌ನಲ್ಲಿ ವೇಗನ್ ಆಹಾರದ ಬಗ್ಗೆ ಕಂಪನಿಗಳಿಗೆ ನಿರ್ಧಿಷ್ಟ ಮಾರ್ಗ ಸೂಚಿಗಳನ್ನು ನೀಡಿ ಆಹಾರದಲ್ಲಿ ಮೋಸ ನಡೆಯದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ.  ನಿಜವಾಗಿ ಇವೆಲ್ಲ ಅರ್ಥಹೀನ ವಾದಗಳು. ಭಾರತದ ಶ್ರೇಷ್ಠ ಕೃತಿಯೆನಿಸಿದ ಭಗವದ್ಗೀತೆ ಆಹಾರವನ್ನು ಕುರಿತು ಕೆಲವು ಸೂಕ್ಷ್ಮ ಸಂಗತಿಗಳನ್ನು ಹೇಳುತ್ತದೆ. ಇದನ್ನು ಈ ಸಂದರ್ಭದಲ್ಲಿ ಅವಲೋಕಿಸಬಹುದು.

ಆಹಾರ ಎಂದರೆ ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುವ ಯಾವುದೇ ಪದಾರ್ಥ “ಪೋಷಕಾಂಶ (ಪ್ರೊಟೀನು), ಶರ್ಕರಪಿಷ್ಟ (ಕಾರ್ಬೊಹೈಡ್ರೇಟು) ಮತ್ತು ಕೊಬ್ಬು (ಫ್ಯಾಟ್)ಗಳನ್ನು ಅಗತ್ಯವಾಗಿ ಒಳಗೊಂಡ, ದೇಹದ ಪೋಷಣೆ, ಬೆಳವಣಿಗೆ, ಸುಭದ್ರತೆಗೆ ಕಾರಣವಾಗುವ ವಸ್ತು” ಎಂದು ವಿಶ್ವಕೋಶ ಹೇಳುತ್ತದೆ. ಆಹಾರ ವಸ್ತು ಮೂಲತಃ ಸಸ್ಯ ಅಥವಾ ಪ್ರಾಣಿ ಮೂಲದ್ದಿರಬಹುದು. ಅದರಲ್ಲಿ ಜೀವಿಗಳ ಬೆಳವಣಿಗೆಗೆ ಅಗತ್ಯವಾದ ಮೇಲ್ಕಂಡ ಧಾತುಗಳ ಜೊತೆಗೆ ವಿಟಮಿನ್ ಮತ್ತು ಖನಿಜಾಂಶಗಳು ಇದ್ದಾಗ ಮಾತ್ರ ಅಂಥ ವಸ್ತುವನ್ನು ಆಹಾರ ಎನ್ನಲಾಗುತ್ತದೆ. ಆಹಾರ ಸೇವಿಸಿದ ದೇಹದ ವ್ಯವಸ್ಥೆ ಆಹಾರದಲ್ಲಿನ ಮೂಲವಸ್ತುಗಳನ್ನು ಬೇರ್ಪಡಿಸಿ, ತನ್ನ ಕೋಶಗಳ ಮೂಲಕ ದೇಹದ ವಿವಿಧ ಭಾಗಗಳಿಗೆ ಧಾತುಗಳನ್ನು ಪ್ರವಹಿಸಿ ದೇಹದಲ್ಲಿ ಶಕ್ತಿ ಸಂಚಯನವಾಗುವAತೆ ಮಾಡುತ್ತದೆ, ದೇಹದ ಬೆಳವಣಿಗೆಗೂ ಕಾರಣವಾಗುತ್ತದೆ. ಇದು ಆಹಾರದ ಬಗ್ಗೆ ಆಧುನಿಕ ವಿಜ್ಞಾನ ಹೇಳುವ ಮಾತು. 

ಆಹಾರ ಜೀವನಾಧಾರ. ಆಹಾರವಿಲ್ಲದೇ ಬದುಕಿಲ್ಲ. ಮೂಲತಃ ಎಲ್ಲ ಜೀವಿಗಳಿಗೂ ಉದಾರವಾಗಿ ದೊರೆಯಬೇಕಿದ್ದ ಆಹಾರ ಇಂದು ಮಹಾನ್ ವಹಿವಾಟಿನ ವಸ್ತುವಾಗಿದೆ. ಆರ್ಥಿಕ ಸಂಗತಿಗೆ ಮಹತ್ವ ನೀಡಿದ್ದು ಹಾಗೂ ಬದಲಾದ ರಾಜಕೀಯ ನೀತಿ-ನಿಯಮಗಳು ಇದಕ್ಕೆ ಕಾರಣವೆನಿಸುತ್ತದೆ. ಆಹಾರ ಎಂದರೆ ದೇಹ ಪೋಷಣೆಯ ಮೂಲವಸ್ತು ಎಂದು ಆಧುನಿಕ ಸಮಾಜ ತಿಳಿದಿದೆ. ಹೀಗಾಗಿಯೇ ಇಂದಿನ ಆಧುನಿಕ ಸಮಾಜದಲ್ಲಿ ಆಹಾರ ಸಂಗ್ರಹಣೆ, ಸುರಕ್ಷತೆ, ವಿತರಣೆ ಇತ್ಯಾದಿಗಳೆಲ್ಲ ಅಂತಾರಾಷ್ಟ್ರೀಯ  ಆಹಾರ ಭದ್ರತಾ ಸಂಸ್ಥೆ (International Association for Food Protection), ಜಾಗತಿಕ ಸಂಪನ್ಮೂಲ ಸಂಸ್ಥೆ (World Resources Institute), ಜಾಗತಿಕ ಆಹಾರ ಕಾರ್ಯಕ್ರಮ (World Food Programme), ಆಹಾರ ಮತ್ತು ಕೃಷಿ ಸಂಘಟನೆ (Food and Agriculture Organisation) ಮತ್ತು ಅಂತಾರಾಷ್ಟ್ರೀಯ ಆಹಾರ ಮಾಹಿತಿ ಪರಿಷತ್ತು (International Food Information Council) ಮೊದಲಾದ ಏಜನ್ಸಿಗಳ ಹಿಡಿತದಲ್ಲಿವೆ. ಈ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಆಹಾರ ಸುಸ್ಥಿರತೆ, ಜೈವಿಕ ವೈವಿಧ್ಯ, ಹವಾಮಾನ ಬದಲಾವಣೆ, ಪೌಷ್ಟಿಕಾಂಶ ಸಂಬಂಧಿ ಆರ್ಥಿಕತೆ, ಜನಸಂಖ್ಯಾ ಏರಿಕೆ, ನೀರಿನ ವಿತರಣೆ ಹಾಗೂ ಆಹಾರ ಲಭ್ಯತೆ ಇತ್ಯಾದಿ ಸಂಗತಿಗಳ, ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತವೆ. ಈ ಸಂಸ್ಥೆಗಳ ದೃಷ್ಟಿ ಮೂಲತಃ ಆರ್ಥಿಕ ಸಂಗತಿಯನ್ನೇ ಅವಲಂಬಿಸಿದ ಯೂರೋಪ್ ಮತ್ತು ಅಮೆರಿಕದ ಆಹಾರ ನೀತಿಯನ್ನು ಹಾಗೂ ದೃಷ್ಟಿಯನ್ನು ಆಧರಿಸಿವೆ. ಜಾಗತಿಕ ಆಹಾರ ನೀತಿಯನ್ನು ರೂಪಿಸಿ ಅವುಗಳನ್ನು ಎಲ್ಲೆಡೆ ಹೇರುವ ಯತ್ನವನ್ನು ಇವು ಮಾಡುತ್ತವೆ. ಈ ಕಾರಣದಿಂದಾಗಿಯೇ ಪ್ರಪಂಚದ ಜನಸಮುದಾಯಗಳು ಪರಂಪರೆಯ ಮೂಲಕ ಕಲಿತ, ಅಳವಡಿಸಿಕೊಂಡ ಆಹಾರ ಸಂಬಧಿ ಪರಿಕಲ್ಪನೆಯನ್ನು ಕೈಬಿಡಬೇಕಾಗಿ ಬಂದಿದೆ. ತಲೆತಲಾಂತರದಿಂದ ಕಲಿತ ಆಹಾರ ಪದ್ಧತಿಗೆ ಬದಲಾಗಿ ಹೊಸ ಪದ್ಧತಿಯನ್ನು ಅಳವಡಿಸಿಕೊಂಡು ಬದುಕುವುದು ಜನಪದ ಸಮುದಾಯಗಳಿಗೆ ಕಷ್ಟವಾಗುತ್ತಿದೆ. ಇಲ್ಲಿ ಆಹಾರ ಎಂದರೆ ತಾವು ಸೇವಿಸುವ ಆಹಾರವನ್ನು ಬೆಳೆಯುವುದು ಅಥವಾ ಸಂಗ್ರಹಿಸುವುದು, ಸಂರಕ್ಷಿಸುವುದು ಮತ್ತು ಬಳಸುವುದು, ಇವೆಲ್ಲ ಸೇರುತ್ತವೆ. ಭಾರತೀಯರ ಆಹಾರ ಪರಿಕಲ್ಪನೆ ಯೂರೋಪ್ ಅಥವಾ ಅಮೆರಿಕದ ದೃಷ್ಟಿಕೋನಕ್ಕಿಂತ ಸಂಪೂರ್ಣ ಭಿನ್ನವಾದುದು. 

ಭಾರತೀಯ ಪರಂಪರೆಯಲ್ಲಿ ಆಹಾರ ಎಂದರೆ ಅದು ಕೇವಲ ದೇಹ ಪೋಷಣೆಯ ಮೂಲವಸ್ತುವಷ್ಟೇ ಅಲ್ಲ. ಅದು ಮನುಷ್ಯನ ವ್ಯಕ್ತಿತ್ವ ರೂಪಿಸುವ ಮೂಲ ಸಾಮಗ್ರಿ. ಹೀಗಾಗಿ ಆಧ್ಯಾತ್ಮಿಕ ಸ್ಪರ್ಶ ಅದಕ್ಕಿದೆ. ಮಾನವನ ಆರೋಗ್ಯ, ಪರಿಸರ ಸಂರಕ್ಷಣೆ, ಮಾಲಿನ್ಯ ಮೊದಲಾದ ಕಾರಣಗಳಿಂದ ಪ್ರಾಚೀನ ಹಾಗೂ ಸಾಂಪ್ರದಾಯಿಕ ಆಹಾರ ಬೆಳೆ ಪದ್ಧತಿ ಹಾಗೂ ಆಹಾರ ಸಂಗ್ರಹಣೆ, ಸಂರಕ್ಷಣೆ ಮತ್ತು ವಿತರಣೆ ಮೊದಲಾದ ವಿಷಯಗಳಲ್ಲಿ ಆಧುನಿಕ ಯೂರೋಪ್ ಮಾದರಿಯ ಪದ್ಧತಿಗಿಂತ ಶ್ರೇಷ್ಠ ಎಂಬುದನ್ನು ಸಾಬೀತುಪಡಿಸುವ ಹತ್ತಾರು ಸಂಶೋಧನ ಕೆಲಸಗಳು ನಡೆದಿವೆ. ಅಲ್ಲದೇ ಈಚಿನ ದಿನಗಳಲ್ಲಿ ನೈಸರ್ಗಿಕ, ವಿಶ್ವಾಸಾರ್ಹ ಹಾಗೂ ಸುಸ್ಥಿರ ಆಹಾರ ಉತ್ಪಾದನೆ ಹಾಗೂ ಸಂರಕ್ಷಣೆಯ ಕಾರಣಕ್ಕೆ ವಿಷಪೂರಿತ ಕೃತಕ ರಾಸಾಯನಿಕ ದ್ರವ್ಯಗಳ ಬಳಕೆಯ ಬದಲಾಗಿ ಸಾಂಪ್ರದಾಯಿಕ ಪದ್ಧತಿಯತ್ತಲೇ ಒಲವು ಹೆಚ್ಚುತ್ತಿದೆ. ಇದು ಜಾಗತಿಕ ಪ್ರವೃತ್ತಿಯಾಗಿ ಕಾಣಿಸತೊಡಗಿದೆ. ಆಹಾರ ಬೆಳೆ, ಸಂರಕ್ಷಣೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಆಯಾ ಭೂ ಪ್ರದೇಶ ಮತ್ತು ಜನಸಮುದಾಯಗಳಲ್ಲಿ ಪಾರಂಪರಿಕವಾಗಿ ಹರಿದುಬಂದ ಜ್ಞಾನ ಅವಿಚ್ಛಿನ್ನವಾಗಿದೆ ಎಂಬುದನ್ನು ಈ ಅಧ್ಯಯನಗಳು ತೋರಿಸುತ್ತವೆ. ನಿರ್ದಿಷ್ಟ ಭೂಪ್ರದೇಶದಲ್ಲಿ ವಾಸಿಸುವ ಜನ ವರ್ಗ ಅನೇಕ ಶತಮಾನಗಳ ಅನುಭವದಿಂದ ತಮಗೆ ಒಗ್ಗುವ ಆಹಾರ ಹಾಗೂ ನಿರ್ದಿಷ್ಟ ಹವಾಮಾನಕ್ಕೆ ಸರಿಹೋಗುವ ಬೆಳೆ, ಅದರ ಸಂರಕ್ಷಣೆಯ ವಿಧಾನವನ್ನು ಕಂಡುಕೊಂಡಿರುತ್ತದೆ. ಇಂಥ ವಿಧಾನಗಳು ಕೈಗಾರಿಕಾ ಕ್ರಾಂತಿ ನಡೆದ ಶತಮಾನಗಳಿಗಿಂತ ಬಹಳ ಹಿಂದಿನವಾದ ಕಾರಣ ಇವುಗಳಲ್ಲಿ ಕೃತಕ ರಾಸಾಯನಿಕ ಬಳಕೆಯಾಗಲೀ ಅಂಥ ಬಳಕೆಯಿಂದಾಗುವ ಪರಿಸರಾತ್ಮಕ ಪರಿಣಾಮಗಳಾಗಲೀ ಇಲ್ಲದೇ ಪರಿಸರ ಪ್ರೇಮಿಯಾಗಿರುತ್ತವೆ. ಆಹಾರ ಉತ್ಪಾದನೆ ಮತ್ತು ಸಂರಕ್ಷಣೆ ಮಾತ್ರ ಇಂಥ ವಿಧಾನಗಳ ಉದ್ದೇಶವೇ ವಿನಾ ಅನ್ಯ ಜೀವಿಗಳಿಗೆ ಹಾನಿಮಾಡುವುದಲ್ಲ. ಅಲ್ಲದೇ ಆಹಾರದಿಂದ ಲಾಭ ಮಾಡಿಕೊಳ್ಳುವ ಉದ್ದೇಶವೂ ಇದರಲ್ಲಿಲ್ಲ. 

ಇದಕ್ಕೆ ಉದಾಹರಣೆಯಾಗಿ ಉತ್ತರ ಪ್ರದೇಶದ ಸೋಹಗೌರ ಎಂಬ ಊರಿನಲ್ಲಿ ದೊರೆತ ಕ್ರಿ.ಶ ೬ನೆಯ ಶತಮಾನದ್ದೆಂದು ಒಂದು ಶಾಸನವನ್ನು ಗಮನಿಸಬಹುದು. ಈ ತಾಮ್ರ ಶಾಸನದಲ್ಲಿ ಬರಗಾಲ ಬಿದ್ದಾಗ ಜನರ ಬಳಕೆಗಾಗಿ ಆಹಾರ ಧಾನ್ಯಗಳನ್ನು ಮೂರು ಸ್ತರಗಳ ನೆಲದೊಳಗಿನ ಉಗ್ರಾಣದಲ್ಲಿ ಶೇಖರಿಸಿದ್ದಾಗಿಯೂ ಇದನ್ನು ಮಾಥುರ್, ಚಂಚು, ಮಯುದಾಮ್, ಭಲ್ಲಕ್ ಗ್ರಾಮಗಳ ಜನರಿಗೆ ಮಾತ್ರ ಕೊಡಬೇಕು, ಅನ್ಯರು ಇದನ್ನು ಪಡೆಯುವಂತಿಲ್ಲ ಎಂದು ಬರೆಯಲಾಗಿದೆ. 

ಈ ಬಗೆಯ ಶಾಸನಗಳು ಕರ್ನಾಟಕದಲ್ಲೂ ಇವೆ. ಕೆಲವೊಮ್ಮೆ ವ್ಯಾಪಾರಿಗಳ ನಡುವೆ ಆಹಾರಕ್ಕಾಗಿ ಗಲಾಟೆ ನಡೆದದ್ದೂ ಇದೆ. ವಿಜಯನಗರ ಕಾಲದ ಈ ಶಾಸನದಲ್ಲಿ ಸಕ್ಕರೆ ವ್ಯವಹಾರಕ್ಕಾಗಿ ಎರಡು ವ್ಯಾಪಾರಿ ತಂಡದ ನಡುವೆ ಗಲಭೆ ನಡೆದು, ಸಕ್ಕರೆಯನ್ನು ಮಾಳಿಗೆಯಲ್ಲಿಟ್ಟು ಬೆಲೆ ಬಂದಾಗ ಗ್ರಾಹಕರಿಗೆ ವಿತರಿಸಬೇಕು ಎಂದು ಸಂಧಾನ ಮಾಡಲಾಯಿತು ಎಂಬ ಉಲ್ಲೇಖವಿದೆ. ಇಂಥ ಉಲ್ಲೇಖಗಳು ಆಹಾರದ ಮಹತ್ವವನ್ನು ತಿಳಿಸುತ್ತವೆ. ಬಹುಶಃ ಇದು ಇಂದಿನ ಸಕ್ಕರೆ ರೂಪದಲ್ಲಿರದೆ, ಕಲ್ಲು ಸಕ್ಕರೆ ರೂಪದಲ್ಲಿದ್ದಿರಬೇಕು. ಇದೇ ಕಾಲದ ಪುರಂದರದಾಸರು ‘ಕಲ್ಲುಸಕ್ಕರೆ ಕೊಳ್ಳಿರೋ’ ಎಂದು ಹೇಳಿರುವುದನ್ನು ಗಮನಿಸಬಹುದು.

ಈ ಬಗೆಯ ಉಲ್ಲೇಖಗಳು ಶಾಸನಾದಿಗಳಲ್ಲಿ ದೊರೆಯುವುದಕ್ಕಿಂತ ಬಹು ಹಿಂದಿನಿಂದಲೇ ಆಹಾರದ ಬಗ್ಗೆ ಮಾನವನ ಕಲ್ಪನೆ ಬೆಳೆದಿತ್ತು. ೧೫,೦೦೦ ವರ್ಷಗಳ ಹಿಂದೆ ಮಾನವ ಆಹಾರ ಸಂಗ್ರಹಣೆ ಆರಂಭಿಸಿದನಲ್ಲದೇ ತರುವಾಯ ಆಹಾರ ಬೆಳೆಯಲು ಆರಂಭಿಸಿದ. ಆರಂಭಿಕ ಹಂತದಲ್ಲಿ ಮಾನವನ ಪ್ರಮುಖ ಆಹಾರ ಹಣ್ಣುಹಂಪಲಗಳೇ ಆಗಿದ್ದವು. ಮಂಗನಿಂದ ಮಾನವನಾಗಿ ಪರಿವರ್ತನೆಯಾದ ನಂತರ “ಹೋಮೋಸ್ಟೆಬಿಲಿಸ್” ಮಾಂಸಾಹಾರವನ್ನು ಸೇವಿಸತೊಡಗಿದ. ಸುಮಾರು ೧.೮ ದಶಲಕ್ಷ ವರ್ಷಗಳ ಹಿಂದೆ “ಹೋಮೋ ಎರೆಕ್ಟಸ್” ಕಾಣಿಸಿಕೊಂಡ ನಂತರ ಕಲ್ಲಿನ ಒರಟು ಆಯುಧಗಳನ್ನು ಮಾಡಿಕೊಳ್ಳತೊಡಗಿದ. ಇವುಗಳ ಮೂಲಕ ಹೆಚ್ಚು ಪ್ರಮಾಣದಲ್ಲಿ ಮಾಂಸ ಸಂಗ್ರಹಣೆ ಸಾಧ್ಯವಾಯಿತಲ್ಲದೇ ಶಿಲಾಯುಗ ಕಾಲದ ಮಾನವ ವಸತಿ ಸ್ಥಳಗಳಲ್ಲಿ ದೊರೆತ ಅಪಾರ ಪ್ರಮಾಣದ ಪ್ರಾಣಿ ಎಲುಬುಗಳು ಆತ ಹೆಚ್ಚಿನ ಪ್ರಮಾಣದಲ್ಲಿ ಮಾಂಸಾಹಾರ ಸೇವಿಸುತ್ತಿದ್ದ ಎಂಬುದನ್ನು ದೃಢಪಡಿಸುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದರ ಜೊತೆಗೆ ಕಾಡಿನ ಗಡ್ಡೆ ಗೆಣಸುಗಳನ್ನೂ ಸಂಗ್ರಹಮಾಡತೊಡಗಿದ. ಕ್ರಿ.ಪೂ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೃಷಿ ಕಾಣಿಸಿಕೊಂಡ ಮೇಲೆ ಆಹಾರಕ್ಕಾಗಿ ಪ್ರಾಣಿ ಬೇಟೆಯ ಅಗತ್ಯ ಕಡಿಮೆಯಾಯಿತು. ಕೆಲವು ಪ್ರಾಣಿಗಳನ್ನು ಆತ ಕೃಷಿ ಉಪಯೋಗಕ್ಕಾಗಿ ಸಾಕತೊಡಗಿದ. ಕೆಲವು ಸಾವಿರ ವರ್ಷಗಳ ನಂತರ ಪ್ರಾಣಿ ಆಹಾರ ಪ್ರಮಾಣ ಇನ್ನೂ ಕಡಿಮೆಯಾಯಿತು. ಇದರ ಜಾಗವನ್ನು ಕೃಷಿಮೂಲ ದವಸ ಧಾನ್ಯಗಳು ಆಕ್ರಮಿಸಿದವು. ಮಾನವನ ವಿಕಾಸ ನಡೆಯುತ್ತ ಬಂದಂತೆಯೆ ಅವನ ಆಹಾರ ಪದ್ಧತಿಯೂ ಬದಲಾಗುತ್ತ ಬಂದಿರುವುದನ್ನು ಪ್ರಾಕ್ತನ ಶಾಸ್ತ್ರಜ್ಞರು ನಡೆಸಿದ ಸಂಶೋಧನೆಗಳಿಂದ ತಿಳಿದುಬರುತ್ತದೆ. ಶಿಲಾಯುಧಗಳು, ಗುಹೆಗಳೊಳಗಿನ ಕೆತ್ತನೆ ಮತ್ತು ವರ್ಣಶಿಲ್ಪಗಳು ಹಾಗೂ ಪುರಾತನ ಅವಶೇಷಗಳು ಇಂಥ ಸಂಶೋಧನೆಗಳಲ್ಲಿ ಮುಖ್ಯವಾದವು. ಆಹಾರ ವಿಧಾನ ಬದಲಾದಂತೆಲ್ಲ ಅದರ ಕಲ್ಪನೆ ಹಾಗೂ ಆಹಾರ ಕುರಿತ ಚಿಂತನೆಗಳು ಕೂಡ ಬೆಳೆಯುತ್ತ ಬಂದವು. ಭಾರತೀಯ ಪರಂಪರೆಯಲ್ಲಿ ಇದಕ್ಕೆ ಬಹು ದೊಡ್ಡ ಇತಿಹಾಸವೇ ಇದೆ. 

ಅತ್ಯಂತ ಪ್ರಾಚೀನ ಜಾಗತಿಕ ಸಾಹಿತ್ಯ ಕೃತಿಗಳೆನಿಸಿದ ವೇದಗಳಲ್ಲಿ ಆಹಾರ ಕುರಿತ ಗಂಭೀರ ಚಿಂತನೆ ಕಾಣಿಸುತ್ತದೆ. ಎಲ್ಲ ಬಗೆಯ ಆಹಾರವನ್ನು ವೇದಗಳು ‘ಅನ್ನ’ ಎಂದು ಕರೆಯುತ್ತವೆ. ತೈತ್ತರೀಯ ಉಪನಿಷತ್ತಿನಲ್ಲಿ “ಆಕಾಶಾದ್ವಾಯುಃ, ವಾಯೋರಾಪಃ, ಆಪಃ ಪೃಥಿವೀ, ಪೃಥಿವ್ಯಾ ಓಷಧಯಃ, ಓಷಧೀಭ್ಯೋನ್ನಂ, ಅನ್ನಾತ್ ಪುರುಷಃ, ಅನ್ನಂ ಬಹುಕುರ್ವೀತ...” (ಆಕಾಶದಿಂದ ವಾಯು, ವಾಯುವಿನಿಂದ ನೀರು, ನೀರಿನಿಂದ ಭೂಮಿ, ಭೂಮಿಯಿಂದ ಸಸ್ಯಗಳು, ಸಸ್ಯಗಳಿಂದ ಆಹಾರ, ಆಹಾರದಿಂದ ಮಾನವ) ಎಂದು ಹೇಳಲಾಗಿದೆ. ಹೀಗಾಗಿ ಮನುಷ್ಯನಲ್ಲಿ ಆಹಾರವೇ ಅಡಗಿದೆ... ಆಹಾರದಿಂದ ಎಲ್ಲ ಜೀವಿಗಳೂ ಉತ್ಪನ್ನವಾಗುತ್ತವೆ, ಆಹಾರದಿಂದಲೇ ಅವು ಬೆಳೆಯುತ್ತವೆ... ಆತ್ಮ, ಮನಸ್ಸು, ಉಸುರಿನಲ್ಲೂ ಅನ್ನವಿದೆ” ಎಂದು ಹೇಳಿದೆ. ಈ ಕಾರಣದಿಂದ ಆಹಾರ ಎಂಬುದು ಭಾರತೀಯರ ದೃಷ್ಟಿಯಲ್ಲಿ ಕೇವಲ ದೇಹಕ್ಕೆ ಸಂಬಂಧಿಸಿದ ಬಾಹ್ಯ ವಸ್ತು ಅಥವಾ ದ್ರವ್ಯವಲ್ಲ. ಅದು ಆದಿಭೌತಿಕ ದ್ರವ್ಯ. ದೇಹ ಮತ್ತು ಆತ್ಮಗಳ ಬೆಸುಗೆ ಮಾಡುವ ದಿವ್ಯ ತತ್ತ್ವ.

ಆಹಾರ, ಆಹಾರ ಸೇವಿಸುವಾತ ಹಾಗೂ ಇಡೀ ವಿಶ್ವ-ಇವೆಲ್ಲ ಸಾಮರಸ್ಯದಿಂದ ಇರಬೇಕು ಎಂಬುದು ಉಪನಿಷತ್ತುಗಳ ಸಾರ. ಯಾವುದೇ ಆಹಾರದಿಂದ ಮೂರು ಉತ್ಪನ್ನಗಳು ಕಾಣಿಸುತ್ತವೆ, ಇದರಲ್ಲಿ ಘನರೂಪ ತ್ಯಾಜ್ಯವಾಗಿ ಹೊರಹೋಗುತ್ತದೆ. ಮಧ್ಯಮ ರೂಪದ ದ್ರವ್ಯ ಮಾಂಸವಾಗಿ ಪರಿವರ್ತನೆಯಾಗುತ್ತದೆ. ಆಹಾರದ ಅಂತಿಮ ಮತ್ತು ಅಗೋಚರ ಉತ್ಪನ್ನ ಉತ್ಕೃಷ್ಟವಾದುದು. ಅದೇ ಮನಸ್ಸು. ಇದೇ ಬುದ್ಧಿ ಅಥವಾ ಚಿಂತನೆ. ದೇವರಿಗೆ ಸಮರ್ಪಿಸಿ ಉಳಿದ ಆಹಾರವನ್ನು ‘ಪ್ರಸಾದ’ ಎಂದು ಶಿಷ್ಟ ಸಾಹಿತ್ಯದಲ್ಲಿ ಕರೆಯಲಾಗುತ್ತದೆ. ಇದು ಶುದ್ಧವಾದುದು ಹಾಗೂ ಮನುಷ್ಯರಲ್ಲಿ ಅಧ್ಯಾತ್ಮದ ಹೊಳಹು ಉಂಟುಮಾಡುತ್ತದೆ ಎಂದು ಬಗೆಯಲಾಗಿದೆ. ಇದಷ್ಟೇ ಅಲ್ಲದೇ ಅನ್ನದಿಂದ ಏನೆಲ್ಲ ಆಗುತ್ತವೆ ಎಂಬುದಕ್ಕೆ ಛಾಂದೋಗ್ಯ ಉಪನಿಷತ್ತಿನಲ್ಲಿ ನಿದರ್ಶನವೊಂದು ದೊರೆಯುತ್ತದೆ. 

ತನ್ನ ಗುರು ಮತ್ತು ತಂದೆಯ ಬಳಿ ಶ್ವೇತಕೇತು ಆಹಾರ ಸ್ವೀಕರಿಸದಿದ್ದರೆ ಏನಾಗುತ್ತದೆ ಎಂದು ಕೇಳುತ್ತಾನೆ. ನೀನೇ ಅನುಭವಿಸಿ ನೋಡು ಎಂದು ಉತ್ತರ ಬರುತ್ತದೆ. ಶ್ವೇತಕೇತು ಹದಿನೈದು ದಿನ ಉಪವಾಸ ಇದ್ದು ನನ್ನ ನೆನಪಿನ ಶಕ್ತಿ ಕುಂದಿದೆ ಎನ್ನುತ್ತಾನೆ. ಆಹಾರ ಸೇವಿಸಿದಾಗ ಅವನ ನೆನಪು ಮರಳುತ್ತದೆ. ಛಾಂದೋಗ್ಯ ಮತ್ತು ತೈತ್ತರೀಯ ಉಪನಿಷತ್ತುಗಳಲ್ಲಿ ಆಹಾರ ಕುರಿತ ಗಂಭೀರ ಚಿಂತನೆಗಳಿವೆ. “ಆಹಾರ ಸ್ವೀಕರಿಸುವವನನ್ನೇ ಆಹಾರ ಸೇವಿಸುತ್ತದೆ” ಎನ್ನುವ ವಿಚಿತ್ರ ಎನಿಸುವ ಮಾತು ಕೂಡ ವೇದಗಳಲ್ಲಿದೆ. ಇದನ್ನು ಆಧುನಿಕ ಸೂಕ್ಷ್ಮ ಜೀವಶಾಸ್ತ್ರ ಕೂಡ ಅನುಮೋದಿಸುತ್ತದೆ. ಉದಾಹರಣೆಗೆ, ಮಾನವ ದೇಹದಲ್ಲಿ ಶೇ.೮೦ ಭಾಗ ಉಪಕಾರಿ ಬ್ಯಾಕ್ಟೀರಿಯಾಗಳಿವೆ. ದೇಹ ಪ್ರವೇಶಿಸಿದ ಆಹಾರವನ್ನಷ್ಟೇ ಅಲ್ಲದೇ ಇವು ದೇಹ ಸಂಪರ್ಕವುಳ್ಳ ವಸ್ತುಗಳನ್ನೂ ಸ್ವೀಕರಿಸುತ್ತವೆ. ಹೀಗಾಗಿ ನಾವು ಆಹಾರ ಸ್ವೀಕರಿಸುತ್ತಿರುವಾಗಲೇ ನಮ್ಮನ್ನೂ ಅವು ಸ್ವೀಕರಿಸುತ್ತವೆ! ಹೀಗಾಗಿ ಆಹಾರವನ್ನು ನಾವು ಸ್ವೀಕರಿಸಬಹುದು ಅಥವಾ ದಾನ ಮಾಡಬಹುದು. ಆಹಾರ ಸ್ವೀಕರಿಸುವವನನ್ನು ಅದು ಸ್ವೀಕರಿಸುತ್ತದೆ; ಆಹಾರ ರಕ್ಷಿಸುವವನನ್ನು ಅದು ರಕ್ಷಿಸುತ್ತದೆ. ಇದು ನಿಸರ್ಗದ ನಿಯಮ. ಅತಿಥಿಗಳಿಗೆ ಆಹಾರ ಕೊಡುವುದು ಕೇವಲ ಔದಾರ್ಯ ಮಾತ್ರವಲ್ಲ. ಈ ಕಾರಣದಿಂದ ಆಹಾರವನ್ನು ಹಾಳು ಮಾಡಬಾರದು ಎಂದು ಹೇಳುವುದು.

ಭಾರತೀಯ ಚಿಂತನೆಯ ಸಮಸ್ತ ಸಾರ ಸಂಗ್ರಹ ಅನ್ನಬಹುದಾದ ಭಗವದ್ಗೀತೆಯಲ್ಲಿ ಜೀವಿಗಳ ಆಹಾರಕ್ಕೆ ಸಂಬಂಧಿಸಿದ ಗಂಭೀರ ಚಿಂತನೆಗಳು ಕಾಣಿಸುತ್ತವೆ. ಎಲ್ಲ ಜೀವಿಗಳ ಅಸ್ತಿತ್ವ ಇರುವುದೇ ಅನ್ನದಿಂದ ಎಂದು ಭಗವದ್ಗೀತೆ ಹೇಳುತ್ತದೆ. ಭಗವದ್ಗೀತೆಯ ಮೂರು ಮತ್ತು ಹದಿನೇಳನೆಯ ಅಧ್ಯಾಯಗಳಲ್ಲಿ ಆಹಾರ ಕುರಿತ ಮಾತುಗಳು ಸ್ಪಷ್ಟವಾಗಿವೆ. “ಯಜ್ಞದ ಶೇಷವನ್ನು ಉಣ್ಣುವ ಸಂತರು ಸರ್ವದೋಷಗಳಿಂದ ಮುಕ್ತರಾಗುತ್ತಾರೆ. ಆದರೆ ತಮಗೋಸ್ಕರವಾಗಿಯೇ ಪಾಕ ಮಾಡಿಕೊಳ್ಳುವವರು ಪಾಪವನ್ನು ಉಣ್ಣುತ್ತಾರೆ” (೩-೧೩) ಎಂದು ಹೇಳುವ ಗೀತೆ, ಅನ್ನ ಹಾಗೂ ಜೀವಜಂತುಗಳ ಅವಿನಾ ಸಂಬಂಧವನ್ನು ಹೀಗೆ ಹೇಳಿದೆ: “ಅನ್ನದಿಂದ ಪ್ರಾಣಿಗಳು ಉತ್ಪನ್ನವಾಗುತ್ತವೆ. ಮಳೆಯಿಂದ ಅನ್ನದ ಉತ್ಪತ್ತಿಯಾಗುತ್ತದೆ. ಯಜ್ಞದಿಂದ ಮಳೆಯಾಗುತ್ತದೆ. ಯಜ್ಞವು ಕರ್ಮದಿಂದ ಉದ್ಭವಿಸುತ್ತದೆ” (೩-೧೪). ಯಜ್ಞಕ್ಕೂ ಆಹಾರಕ್ಕೂ ಇರುವ ನಂಟು ಇಲ್ಲಿ ಸ್ಪಷ್ಟ. ‘ಯಜ್ಞ’ ಎಂದರೇನೆಂದು ನಾಲ್ಕನೆಯ ಅಧ್ಯಾಯ ಬಗೆಬಗೆಯಾಗಿ ವಿವರಿಸಿದೆ. ಇಷ್ಟಲ್ಲದೇ ವ್ಯಕ್ತಿಯ ಗುಣಕ್ಕೂ ಆತ ಸೇವಿಸುವ ಆಹಾರಕ್ಕೂ ನೇರ ಸಂಬಂಧವಿದೆ ಎಂಬುದನ್ನು ಮೊದಲು ಪ್ರತಿಪಾದಿಸಿದ್ದು ಭಗವದ್ಗೀತೆ. ಇದು ಅತ್ಯಂತ ಸೂಕ್ಷ್ಮ ಸಂಗತಿ. ಹದಿನೇಳನೆಯ ಅಧ್ಯಾಯದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣದ ಜನರ ವಿಭಾಗದ ಬಗ್ಗೆ ವಿವರಿಸುತ್ತ ಈ ಗುಣ ಬರುವುದು ಆಹಾರದಿಂದ ಎನ್ನಲಾಗಿದೆ. “ಸತ್ವದ ಕಾರಣದಿಂದ ಆಹಾರದಲ್ಲಿ ಮೂರು ವಿಧ. ಆಯಸ್ಸು, ಸತ್ವ, ಬಲ, ಆರೋಗ್ಯ, ಸುಖ ಮತ್ತು ಪ್ರೀತಿಗಳನ್ನು ವೃದ್ಧಿಸುವ ರಸಯುಕ್ತವೂ ಸ್ನಿಗ್ಧವೂ ಸ್ಥಿರವೂ ಹೃದಯಪ್ರಿಯವೂ ಆದವು ಸಾತ್ವಿಕ ಆಹಾರ; ಅತಿ ಕಹಿ, ಅತಿ ಹುಳಿ, ಅತಿ ಉಪ್ಪು, ಅತಿ ಉಷ್ಣವಾಗಿದ್ದು, ತೀಕ್ಷ್ಣವೂ ಒಣಕಲೂ ಆಗಿದ್ದು ದಾಹವನ್ನುಂಟುಮಾಡುವಂಥವು ರಾಜಸಿಕ ಆಹಾರಗಳು. ಇವು ದುಃಖ, ಶೋಕ ಹಾಗೂ ರೋಗಗಳನ್ನುಂಟುಮಾಡುತ್ತವೆ. ರಸಹೀನವಾದ, ಸ್ವಲ್ಪ ಪಕ್ವವಾದ, ಹಳಸಿದ ದುರ್ಗಂಧಯುಕ್ತವಾದ ಆಹಾರ ತಾಮಸಿಕ. ಇದು ಸೇವನೆಗೆ ಅರ್ಹವಲ್ಲ (೧೭-೭, ೮, ೯ ಮತ್ತು ೧೦). 

ಹೀಗೆ ಆಹಾರ ಮತ್ತು ವ್ಯಕ್ತಿತ್ವಗಳ ಪರಸ್ಪರ ಸಂಬಂಧವನ್ನು ಸೂಕ್ಷ್ಮವಾಗಿ ಹೇಳುವ ಭಗವದ್ಗೀತೆ ಇವುಗಳನ್ನು ಹೆಚ್ಚು ವಿಶ್ಲೇಷಿಸುವುದಿಲ್ಲ. ಈ ಮೂರು ಬಗೆಯ ಆಹಾರಗಳಾವುವು, ಈ ವರ್ಗಗಳಲ್ಲಿ ಯಾವ್ಯಾವ ಆಹಾರ, ಪಾನೀಯಗಳು ಸೇರುತ್ತವೆ, ಇವುಗಳ ಸೇವನೆಯಿಂದ ಆಗುವ ಪರಿಣಾಮಗಳೇನು ಇತ್ಯಾದಿ ವಿವರಗಳು ಆಯುರ್ವೇದ ಕೃತಿಗಳಲ್ಲಿ ವಿಶೇಷವಾಗಿ ಲಭಿಸುತ್ತದೆ. ವ್ಯಕ್ತಿಗೂ ಆತನ ಆಹಾರಕ್ಕೂ ವಿಚಿತ್ರ ನಂಟು ಹುಟ್ಟಿನಿಂದಲೇ ಬರುತ್ತದೆ ಎನ್ನುತ್ತದೆ ಗೀತೆ. ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣದ ವ್ಯಕ್ತಿ ಅಂಥ ಆಹಾರವನ್ನೇ ಬಯಸುತ್ತಾನೆ. “ಯಾವನು ಯಾವ ಶ್ರದ್ಧೆಯುಳ್ಳವನೋ ಅವನು ಆ ಶ್ರದ್ಧೆಗೆ ಅನುರೂಪನಾಗುತ್ತಾನೆ” (೧೭-೩) ಎನ್ನುವ ಮಾತು ನಾವು ಬದುಕಲು ಬಯಸುವ ಜೀವನ ಶೈಲಿಗೂ ನಾವು ತಿನ್ನಲು ಬಯಸುವ ಆಹಾರಕ್ಕೂ ಅನ್ವಯ. ವ್ಯಕ್ತಿಯಲ್ಲಿನ ಸಾತ್ವಿಕ ಗುಣ ಸಾತ್ವಿಕ ಆಹಾರವನ್ನು ಬಯಸಿದರೆ, ರಾಜಸಿಕ ಗುಣ ರಾಜಸಿಕ ಆಹಾರವನ್ನೂ ತಾಮಸಿಕ ಗುಣ ತಾಮಸಿಕ ಆಹಾರವನ್ನೂ ಬಯಸುತ್ತದೆ. ಅಷ್ಟೇ ಅಲ್ಲ, ಆಯಾ ಆಹಾರಗಳು ಮತ್ತೆ ಅದೇ ಗುಣವನ್ನು ವ್ಯಕ್ತಿಯಲ್ಲಿ ವೃದ್ಧಿಸುತ್ತವೆ. ಅಂದರೆ ಇದೊಂದು ವರ್ತುಲ. ಒಂದು ಅರ್ಥದಲ್ಲಿ ಭಗವದ್ಗೀತೆ ಆಹಾರದ ಆಯ್ಕೆ ವೈಯಕ್ತಿಕ ಇಷ್ಟಾನಿಷ್ಟದ್ದು ಎಂದು ಹೇಳಿದೆ. ರಾಜಸಿಕ ಹಾಗೂ ತಾಮಸಿಕ ಆಹಾರಗಳು ದುಃಖವನ್ನೂ ಅನಾರೋಗ್ಯವನ್ನೂ ಸಂಕಟವನ್ನೂ ತರುತ್ತವೆ. ಯಾವ ಆಹಾರ ಬೇಕೋ ಎಂಥ ಗುಣ ಬೇಕೋ ಅದೂ ಮನುಷ್ಯನ ವಿವೇಕಕ್ಕೆ ಬಿಟ್ಟಿದ್ದು ಎನ್ನುವ ಮುಕ್ತ ಚಿಂತನೆ ಇದರಲ್ಲಿದೆ. ಸಾತ್ವಿಕ ಆಹಾರ ಸಂತೋಷವನ್ನೂ ಆರೋಗ್ಯ, ತೃಪ್ತಿಯನ್ನೂ ನೀಡುತ್ತದೆ. ಅಂತಿಮವಾಗಿ ಜೀವನದಲ್ಲಿ ನಾವು ಬಯಸುವುದೂ ಇದನ್ನೇ.

ನಿಸರ್ಗ ಸಹಜವಾಗಿ ಲಭಿಸುವ ಬೇಳೆ ಕಾಳುಗಳು, ತರಕಾರಿ, ಹಣ್ಣು, ಸೊಪ್ಪು, ಹಾಲು ಮೊದಲಾದವು ಸಾತ್ವಿಕ ಆಹಾರಗಳು. ಇವುಗಳನ್ನು ಪರಸ್ಪರ ಬೆರೆಸಿ, ಉಪ್ಪು, ಹುಳಿ, ಖಾರ ಮೊದಲಾದವನ್ನು ಸೇರಿಸಿ, ಬೇಯಿಸಿದರೆ, ಹುರಿದರೆ, ಸುಟ್ಟರೆ ಅವು ರಾಜಸಿಕವಾಗುತ್ತವೆ. ಎಲ್ಲ ಬಗೆಯ ಮಾಂಸಾಹಾರಗಳನ್ನು ತಾಮಸಿಕ ಎಂದು ವರ್ಗೀಕರಿಸಲಾಗಿದೆ. ಆದರೆ ಸಸ್ಯಮೂಲದಿಂದಲೂ ತಾಮಸಿಕ ಆಹಾರ ಪಡೆದುಕೊಳ್ಳಬಹುದು. ಆಹಾರದ ಸ್ಥೂಲ ರೂಪ ದೇಹವಾದರೆ, ಅದರ ಸೂಕ್ಷ್ಮರಸಾದಿಗಳು ಮನಸ್ಸಾಗುತ್ತದೆ ಎನ್ನುತ್ತದೆ ಛಾಂದೋಗ್ಯ ಉಪನಿಷತ್ತು. ಇದನ್ನೇ ಗೀತೆ ಸಂಗ್ರಹವಾಗಿ ಹೇಳಿದೆ.

ಹುರಿದ, ಬೇಯಿಸಿದ, ಷಡ್ರಸಗಳಿಂದ ಕೂಡಿದ, ಬಾಯಿ ಚಪಲ ತಣಿಸುವ ಆಹಾರವನ್ನು ನಮ್ಮ ಮನಸ್ಸು ಮತ್ತು ದೇಹಗಳು ಸಹಜವಾಗಿಯೇ ಬೇಡುತ್ತವೆ. ಇದನ್ನೇ ಗೀತೆ ಇಂದ್ರಿಯ ಚಾಪಲ್ಯ ಎನ್ನುವುದು. ಜ್ಞಾನಿಯಾದವನು ದುಃಖ ಮತ್ತು ಅನಾರೋಗ್ಯಕ್ಕೆ ಕಾರಣವಾಗುವ ಇಂಥ ಚಪಲಕ್ಕೆ ಆಸ್ಪದ ನೀಡುವುದಿಲ್ಲ, ಇವುಗಳಲ್ಲಿ ರಮಿಸುವುದಿಲ್ಲ (೫-೨೨) ಎನ್ನುತ್ತದೆ ಗೀತೆ.

“ಆಹಾರ ಏಕೆ ಸ್ವೀಕರಿಸುತ್ತೀರಿ” ಎಂದು ಯಾರನ್ನೇ ಕೇಳಿದರೂ ಸಾಮಾನ್ಯವಾಗಿ ದೊರೆಯುವ ಉತ್ತರ ‘ಬದುಕುವುದಕ್ಕಾಗಿ’ ಎಂದೇ ಇರುತ್ತದೆ. ಬದುಕಲು ಆಹಾರವೇ ಬೇಕಿಲ್ಲ. ಯಾವುದನ್ನು ತಿಂದರೂ ಬದುಕಬಹುದು. ಏನೂ ತಿನ್ನದೇ ಅನೇಕ ವರ್ಷಗಳಿಂದ ಬದುಕುತ್ತಿರುವವರೂ ಇದ್ದಾರೆ. ಅಂದರೆ ಆಹಾರಕ್ಕೂ ಬದುಕುವುದಕ್ಕೂ ಸಂಬಂಧವಿಲ್ಲ. ಆಹಾರ ಸೇವನೆ ಕೇವಲ ಬದುಕುವುದಷ್ಟೇ ಅಲ್ಲ. ಆಹಾರದ ಉದ್ದೇಶ ಆಯಸ್ಸು ಹೆಚ್ಚಿಸುವುದು, ಮನಸ್ಸನ್ನು ಶುದ್ಧಗೊಳಿಸುವುದು, ದೇಹ ಮತ್ತು ಮನಸ್ಸಿನ ಶಕ್ತಿಯನ್ನು ವೃದ್ಧಿಸುವುದು. ಇದೊಂದೇ ಅದರ ಉದ್ದೇಶ. ಆಹಾರ ಸೇವನೆಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಇದನ್ನೇ ಭಗವದ್ಗೀತೆ ಹೇಳುತ್ತಿದೆ ಎಂಬುದು ಅರಿವಾಗುತ್ತದೆ.

ಆಹಾರ ಸೇವನೆ ಕೂಡ ಭಾರತೀಯ ಪರಂಪರೆಯಲ್ಲಿ ಬದುಕಿನ ಪರಮೋಚ್ಚ ಉದ್ದೇಶವಾದ ಆನಂದವನ್ನು ಹೊಂದುವುದೇ ಆಗಿದೆ. ಹಸಿವಿನಿಂದಲೋ ಬಾಯಿಚಪಲಕ್ಕೋ ಏನನ್ನೋ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಕ್ರಿಯೆ ಅಲ್ಲ ಅದು. ಈ ದೃಷ್ಟಿ ಇರುವುದರಿಂದಲೇ ಸಂಪ್ರದಾಯ, ಆಚರಣೆ, ನಿತ್ಯ ಜೀವನದಲ್ಲಿ ಆಹಾರ ವೈವಿಧ್ಯ ಕಾಣಿಸುವುದು. ಭಾರತೀಯ ಸಂಪ್ರದಾಯ ಆಹಾರಕ್ಕೂ ಅಧ್ಯಾತ್ಮದ ಸ್ಪರ್ಶ ನೀಡಿದೆ. ಹೀಗಾಗಿಯೇ ತಿಥಿ ಊಟದ ಆಹಾರವನ್ನು ಮದುವೆ ಊಟಕ್ಕೆ ತಯಾರಿಸುವುದಿಲ್ಲ, ವಿಶೇಷ ಹಬ್ಬ, ಹರಿದಿನಗಳ ಆಹಾರ ಸಿದ್ಧತೆ, ಬಗೆಗಳೇ ಬೇರೆ ಇರುತ್ತವೆ. ಊಟ ತಿಂಡಿಗಳ ವಿಷಯದಲ್ಲಿ ದೇಶದ ಅಸಂಖ್ಯಾತ ಸಮುದಾಯಗಳಲ್ಲಿ ಅಸಂಖ್ಯಾತ ವಿಧಿ ನಿಷೇಧಗಳಿವೆ. ಆಹಾರ ‘ಕೇವಲ ತಿನ್ನುವುದಕ್ಕಾಗಿ’ ಅಥವಾ ‘ಬದುಕುವುದಕ್ಕಾಗಿ’ ಎಂದಾಗಿದ್ದರೆ ಇಷ್ಟೆಲ್ಲ ಸಂಗತಿಗಳು ಆಹಾರವನ್ನು ಸುತ್ತಿಕೊಳ್ಳುತ್ತಿರಲಿಲ್ಲ. 

ಆಹಾರದ ಮೂಲಕ ಆನಂದ ದೊರೆಯುತ್ತದೆ, ಆದರೆ ಆನಂದ ದೊರೆಯಲು ಎಂಥ ಆಹಾರ ಸೇವನೆ ಅಗತ್ಯ ಎಂಬುದನ್ನು ಭಗವದ್ಗೀತೆ ಮನುಷ್ಯನಿಗೆ ತಿಳಿ ಹೇಳುತ್ತದೆಯಾದರೂ ‘ಹೀಗೇ ಮಾಡಬೇಕು’ ‘ಇದನ್ನೇ ತಿನ್ನತಕ್ಕದ್ದು’ ‘ಹೀಗೇ ತಿನ್ನತಕ್ಕದ್ದು’ ಎಂದೆಲ್ಲ ವಿಧಿ ಹೇರುವುದಿಲ್ಲ. ಆಹಾರದ ಗುಣಧರ್ಮವನ್ನು ಪಟ್ಟಿ ಮಾಡಿ ಇಂತಿಂಥ ಆಹಾರ ಸೇವನೆಯಿಂದ ಹೀಗೆಲ್ಲ ಆಗುತ್ತದೆ ಎಂದಷ್ಟೇ ಜ್ಞಾನ ನೀಡುತ್ತದೆ. ಹಾಗೆಂದು ಅದು ಪಟ್ಟಿ ಮಾಡುವ ಉತ್ತಮ, ಮಧ್ಯಮ ಹಾಗೂ ಅಧಮ ಆಹಾರಗಳ ಸೇವನೆಯನ್ನು ಕೂಡ ಖಂಡಿಸುವುದಿಲ್ಲ ಎಂಬುದು ಇನ್ನೂ ವಿಶೇಷ. ಆರನೆಯ ಅಧ್ಯಾಯದ ೧೮ನೆಯ ಶ್ಲೋಕ ಇದಕ್ಕೆ ನಿದರ್ಶನ. ಇದರಲ್ಲಿ “ಪಂಡಿತ ಅಥವಾ ಜ್ಞಾನಿಯಾದವನಿಗೆ ಬ್ರಾಹ್ಮಣ, ಗೋವು, ಆನೆ, ನಾಯಿ ಮತ್ತು ನಾಯಿ ಮಾಂಸ ತಿನ್ನುವವರಲ್ಲಿ ಯಾವ ಭೇದವೂ ಇಲ್ಲ” ಎಂದು ಹೇಳಲಾಗಿದೆ. ಆದರೆ ಯೂರೋಪ್ ಅಥವಾ ಅಮೆರಿಕದ ಕ್ರಿಶ್ಚಿಯನ್ ಸಮಾಜದಲ್ಲಿ ಆಹಾರ ಸೇವನೆಗೂ ಸಾಮಾಜಿಕ ವರ್ಗಕ್ಕೂ ನೇರ ಸಂಬಂಧವಿದೆ. ಇಸ್ಲಾಂನಲ್ಲಂತೂ ಆಹಾರ ಸೇವನೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳೇ ಇವೆ.

ಆರೋಗ್ಯಕರ ಸಮಾಜ ರೂಪಿಸಲು ಆರೋಗ್ಯಕರ ವ್ಯಕ್ತಿಗಳ ನಿರ್ಮಾಣ ಅಗತ್ಯ. ಇದರ ಮೂಲ ನಾವು ಬಳಸುವ ಆಹಾರದಲ್ಲಿದೆ. ಮೂರು ಗುಣಗಳ ಆಹಾರವೇ ಮೂರು ಗುಣಗಳ ವ್ಯಕ್ತಿಗಳನ್ನು ನಿರ್ಮಿಸುತ್ತದೆ ಎನ್ನುತ್ತಲೇ ಉತ್ತಮ ಸಮಾಜಕ್ಕೆ ಯಾವುದು ಸೂಕ್ತ ಎಂದೂ ಸೂಚಿಸುವಭಗವದ್ಗೀತೆ ಆಹಾರ ಸ್ವಾತಂತ್ರ್ಯದ ಜೊತೆಗೆ ಅದಕ್ಕೆ ಸಂಬಂಧಿಸಿದ ಎಚ್ಚರಿಕೆಯನ್ನೂ ನೀಡುತ್ತ, ವ್ಯಕ್ತಿ ವಿವೇವಕ್ಕೆ ಹೆಚ್ಚಿನ ಮಹತ್ತ್ವ ನೀಡಿ ತನಗೆ ಯಾವುದು ಬೇಕು ಎಂಬುದರ ಆಯ್ಕೆಯನ್ನು ವ್ಯಕ್ತಿಯ ಆಯ್ಕೆಗೇ ಬಿಡುತ್ತದೆ. ಇದು ಭಗವದ್ಗೀತೆ ತೋರಿಸುವ ಆಹಾರದ ಆದರ್ಶ.