ಅವರು ಬೆಳಗಾವಿ ಮೂಲದವರು. ೭೦ರ ದಶಕದಲ್ಲಿ ಮದುವೆಯಾಗಿ ಅಲ್ಲಿ ಕೆಲಸದಲ್ಲಿದ್ದ ಗಂಡನ ಜೊತೆ ಅರೆಮನಸ್ಸಿನಲ್ಲೇ ಹಾರಿದರಂತೆ. ಅರೆ ಮನಸ್ಸು ಏಕೆಂದರೆ ಎಂದಾದರೂ ಒಂದು ದಿನ ಗಂಡನನ್ನು ಮನವೊಲಿಸಿ ಮರಳಿ ಭಾರತಕ್ಕೆ ಬರುತ್ತೇನೆ ಎಂಬ ನಂಬಿಕೆ ಇತ್ತಂತೆ,ಪಾಪ, ಅದೂ ಕೈಗೂಡಲಿಲ್ಲ. ಸಾಮಾನ್ಯವಾಗಿ ನಮ್ಮ ದೇಶದವರು ಒಮ್ಮೆ ಅಮೆರಿಕಕ್ಕೆ ಹೋದರೆ ಮತ್ತೆ ವಾಪಸು ಬರುವ ಮನಸ್ಸು ಮಾಡುವುದಿಲ್ಲವಲ್ಲ, ಅವರ ಗಂಡನೂ ಹಾಗೆಯೇ ಆಗಿಬಿಟ್ಟರು. ಅದೊಂದು ದುರಂತ. ಅವರ ಗಂಡನಿಗೆ ಹಿಂದಿನ ಹಿಂದುಳಿದ ಬ್ರಿಟಿಷ್ ಕಾಲದ ದೇಶವೇ ಆಗಿತ್ತು. ಇವರು ಪ್ರತೀ ಬಾರಿ ಇಲ್ರೀ ಈಗ ಹಂಗಿಲ್ಲವೆAದು ಅರಿವು ಮೂಡಿಸಲು ಹೆಣಗುತ್ತಿದ್ದರು. ಪುಣ್ಯಕ್ಕೆ ಅದು ಹೇಗೋ ಮನಸ್ಸು ಮಾಡಿ ನನ್ನ ಮದುವೆ ಸಂದರ್ಭದಲ್ಲಿ ಬಂದಿದ್ದರು, ಒಳ್ಳೆಯ ಮನುಷ್ಯ. ಆದರೆ ಬ್ರಿಟಿಷರ ಪ್ರಭಾವ ಅವರ ಮೇಲೆ ಹಾಗೆ ಆಗಿತ್ತು, ಅವರ ತಪ್ಪಲ್ಲ.
ಕನ್ನಡ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅವರಿಗೆ ಅದೆಂಥ ಪ್ರೀತಿ. ಅವರು ಕನ್ನಡವನ್ನು ಎಂದೂ ಮರೆಯಲಿಲ್ಲ.ಮಾತ್ರವಲ್ಲ, ಅಲ್ಲಿ ದೂರದ ಅಮೆರಿಕದಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಕನ್ನಡಿಗರನ್ನು ಮನವೊಲಿಸಿ ಆಗಾಗ ಸಾಹಿತ್ಯ ಓದುವ ಹವ್ಯಾಸ ಬೆಳೆಸಿದ್ದರಂತೆ. ಅವರಿಂದಲೇ ಒಮ್ಮೆ ತಿಳಿದೆ. ಕನ್ನಡದ ಪುಸ್ತಕ ಖರೀದಿ ಮಾಡಲೆಂದೇ ಅವರು ಒಂದೆರಡು ವರ್ಷಕ್ಕೊಮ್ಮೆ ಇಲ್ಲಿ ಬರುತ್ತಿದ್ದರು. ನನಗೆ ಕನ್ನಡ ಪುಸ್ತಕಗಳೇ ನೋಡ್ರಿ ಇಲ್ಲಿ ಸಂಬಂಧ ಬಿಗಿ ಇಟ್ಟಿದ್ದು ಅನ್ನುತ್ತಿದ್ದರು. ಕುವೆಂಪು ಕಾರಂತ, ಭೈರಪ್ಪ ಆದಿಯಾಗಿ ನನ್ನಂಥ ಪುಟಗೋಸಿ ಕನ್ನಡ ಬ್ಲಾಗ್ ಬರಹಗಾರರ ಬರೆಹವನ್ನೂ ಓದಿ ಅಭಿಪ್ರಾಯ ಹೇಳುತ್ತಿದ್ದರು. ಅಷ್ಟಲ್ಲ, ಅಲ್ಲಿ ಪರಿಚಯಸ್ಥರಿಗೂ ಕೊಟ್ಟು ಓದಿಸುತ್ತಿದ್ದರು. ಒಮ್ಮೆ ಅಲ್ಲಿನ ಅವರ ಪರಿಚಿತರು ನಾನು ನನ್ನ ಆಯಿ ಬಗ್ಗೆ ಬರೆದ ಲೇಖನ ಓದಿ ಚೆನ್ನಾಗಿ ಬರೆದಿದ್ದೀರಿ ಎಲ್ಲರ ತಾಯಂದಿರೂ ಹೀಗೆಯೇ ನೋಡಿ ಎಂದು ಅಚ್ಚರಿ ಹುಟ್ಟಿಸಿದ್ದರು. ನನ್ನ ಲೇಖನ ಓದುವವರು ಅಮೆರಿಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಏರಿದ್ದು ಇವರಿಂದ ಎಂದು ತಿಳಿದು ಹೆಮ್ಮೆ ಪಟ್ಟಿದ್ದೆ. ಅವರಂಥ ಅವರು ಒಮ್ಮೆಯೂ ನನ್ನನ್ನು ಅಲ್ಲಿಗೆ ಕರೆಸಿಕೊಳ್ಳದೇ ಕೊಟ್ಟ ಮಾತು ಅರ್ಧ ಮಾಡಿ ಎಲ್ಲೋ ದೂರ ಹೋಗಿಬಿಟ್ಟರು. ಎಷ್ಟು ಸಂಕಟವಾಗಬೇಡ? ಅಷ್ಟೇ. ನಿನ್ನೆ ಮಧ್ಯಾಹ್ನ ಅಲ್ಲಿ ತುಂಬ ಚಳಿ ಅನ್ನುತ್ತ ಬೆಚ್ಚಗೆ ಹೊದ್ದು ಅವರ ಮಗಳ ಮನೆಯಲ್ಲಿ ಮಲಗಿದರಂತೆ. ಮತ್ತೆ ಏಳಲಿಲ್ಲ ಎಂದು ಫೋನ್ ಬಂತು. ಕಳವಳಿಸಿದೆ, ಕಣ್ತುಂಬ ಅತ್ತೆ. ಇನ್ನೇನು ಮಾಡಲಿ?
ಇದನ್ನು ನೆನೆದು ಮತ್ತೆ ಮತ್ತೆ ನೀರ ಮೇಲಿನ ಗುಳ್ಳೆ ಎಂಬ ದಾಸರ ಪದ ನೆನೆಯುತ್ತ ಕುಳಿತಿದ್ದೇನೆ.

No comments:
Post a Comment