Sunday, 23 June 2024

ಭಾಷೆಯ ವೈಚಿತ್ರ್ಯ


ಈಚೆಗೆ ಕಾಟೀರ ದರ್ಶನ್ ಸ್ವಂತ ಹೆಂಡತೆಗೆ ಕೆಟ್ಟದಾಗಿ ಬೈದ ವಿಡಿಯೋ ವೈರಲ್ ಆಗಿ ನನ್ನ ಕಿವಿಗೂ ಬಿತ್ತು. ಅದರಲ್ಲಿ ಆತ ಬರೀ ಹೆಣ್ಣನ್ನು ಹೀನಾಯವಾಗಿ ಬೈಯ್ದಿದ್ದಾನೆ. ಏಕೆಂದು ತಲೆ ಕೆರೆದುಕೊಂಡಾಗ ಒಂದಷ್ಟು ಸಂಗತಿಗಳು ಧುತ್ತೆಂದು ಮುಂದೆ ಬಂದವು. ಈ ಲಹರಿ ನಿಮ್ಮ ಮುಂದೆ. ಸಂಸ್ಕೃತ ಅತ್ಯಂತ ಪುರಾತನ ಭಾಷೆ, ಅದರಲ್ಲಿ ಅನೇಕ ಅದ್ಭುತ ಸಂಗತಿಗಳು ಅಡಗಿವೆ, ಬಗೆದಷ್ಟೂ ಅವು ಸಿಗುತ್ತವೆ. ಸಾಮಾನ್ಯವಾಗಿ ಜನರ ಆಡುಭಾಷೆಯಲ್ಲಿ ಬೈಗುಳ ಸಹಜವಾಗಿರುತ್ತದೆ. ಸಂಸ್ಕೃತ ಎಂದೂ ಸಾಮಾನ್ಯಜನರ ಆಡುಭಾಷೆ ಆಗಿರದ ಕಾರಣ ಅದರ ಪಠ್ಯಗಳಲ್ಲಿ ಬೈಗುಳಗಳೇ ಇಲ್ಲ. ಹೆಚ್ಚೆಂದರೆ ಮಹಾಭಾರತದಲ್ಲಿ ಕರ್ಣನನ್ನು ತೆಗಳುವ ಜಾತಿ ಆಧಾರಿತ 'ಸೂತಪುತ್ರ' ಎಂಬುದೇ ದೊಡ್ಡ ಬೈಗುಳ. ಆಧುನಿಕ ಸಂಸ್ಕರತ ಪಂಡಿತರು ಕನ್ನಡದ ಕಳ್ಳ ನನ್ಮಗ ಎಂಬುದನ್ನು ಚೋರಪುತ್ರ ಎಂದು ಅನುವಾದಿಸಿದ್ದಿದೆ. ಬಿಟ್ಟರೆ ಕನ್ನಡ ಸೇರಿದಂತೆ ಇತರೆ ಆಡುಭಾಷೆಗಳಲ್ಲಿ ಇರುವಂತೆ 'ಅಂತಾ ಮಗನೇ', 'ಇಂತಾ ಮಗನೆ' ಎಂಬಂಥ ಬೈಗುಳ ಆ ಭಾಷೆಯಲ್ಲಿ ಇಲ್ಲವೇ ಇಲ್ಲ. ಹೆಚ್ಚೆಂದರೆ ಜಾತಿ ಮೂಲವುಳ್ಳ ಪದವೇ ಅಲ್ಲಿನ ಬೈಗುಳ. ಹೊರತಾಗಿ ಹೆಣ್ಣನ್ನು ಆಧರಿಸಿದ ಬೈಗುಳವಂತೂ ಅದರಲ್ಲಿಲ್ಲವೇ ಇಲ್ಲ. ಉಳಿದಂತೆ ಎಲ್ಲ ಭಾಷೆಗಳ ಬೈಗುಳಗಳೂ ಹೆಣ್ಣನ್ನು ಆಧರಿಸಿವೆ. ಸಂಸ್ಕೃತ ಶಿಷ್ಟವಾಗಿ ಕೇವಲ ಬರೆಹ ಭಾಷೆಯಾಗಿ ಉಳಿದದ್ದು, ಆಡುಮಾತಿಗೆ ಪ್ರಾಕೃತವಿದ್ದುದು ಇದಕ್ಕೆ ಕಾರಣವೆನಿಸುತ್ತದೆ.

ಆದರೆ ಸಂಸ್ಕೃತದಲ್ಲಿ ಬೈಗುಳ ಇರಲೇ ಇಲ್ಲ ಅನ್ನುವುದೂ ಕಷ್ಟ. ಒಂದು ದಂತಕಥೆ ಹೇಳುವಂತೆ ಒಮ್ಮೆ ಕಾಳಿದಾಸನಿಗೂ ದಂಡಿಗೂ ಯಾರು ಶ್ರೇಷ್ಠರೆಂಬ ಜಗಳವಾದಾಗ ಇಬ್ಬರೂ ಸರಸ್ವತಿಯ ಬಳಿ ಹೋದರಂತೆ ಆಕೆ ದಂಡಿಯೇ ಕವಿ ಶ್ರೇಷ್ಠ ಅಂದಾಗ ಕಾಳಿದಾಸನಿಗೆ ಸಿಟ್ಟುಬಂದು 'ಕೋಹಂ ರಂಡಿ ಕ್ಷಿಪ್ರಂವದ' (ಹಾಗಾದ್ರೆ ನಾನೇನು ಬೇಗ ಹೇಳು ರಂಡೆ)  ಅಂದನಂತೆ.

ಆಡುಭಾಷೆಯಲ್ಲಿ ಬಳಕೆಯಲ್ಲಿದ್ದಿರಬಹುದಾದ ಶಬ್ದಗಳು ಬರೆಹ ರೂಪದಲ್ಲಿ ಸಂಸ್ಕೃತ ಪಠ್ಯವಾಗುವಾಗ ಅಂಥ ಪದಗಳು ಜರಡಿಹಿಡಿದುಹೋಗುತ್ತಿದ್ದವು ಅನಿಸುತ್ತದೆ.ಇಷ್ಟಾದರೂ ಪ್ರಾಕೃತದಲ್ಲಿ ಕೂಡ ಹಾ ಮ ಧ ಎಂಬ ಮೂರು ಧ್ವನಿಗಳು ಮಾತ್ರ ತೀವ್ರ ರೂಪದ  ಬೈಗುಳಗಳಾಗಿದ್ದವೆಂದು ತಿಳಿದುಬರುತ್ತದೆ. ಹಾ ಕೆಳ ಹಂತದ ಬೈಗುಳ. ಮ ಮಧ್ಯಮ ಹಾಗೂ ಧ ತೀವ್ರ ರೂಪದ ಬೈಗುಳವಾಗಿತ್ತು. ಯಾರನ್ನಾದರೂ ಹಾಮಧ ಅಂದರೆ ಅದು ಅತಿರೇಕದ ಬೈಗುಳ.  ಬಿಟ್ಟರೆ ಅಲ್ಲಿ ಕೂಡ ದೊಡ್ಡ ದೊಡ್ಡ ಪದಪುಂಜಗಳು ಬೈಗುಳವಾಗಿರಲಿಲ್ಲಎಂಬುದು ವಿಶೇಷ. ಇಂದು ತಾನು ಅತ್ಯಂತ ಶಿಷ್ಟ ಭಾಷೆ ಅಂದುಕೊಳ್ಳುವ ಇಂಗಿಷ್ ನಲ್ಲಿ ಕೂಡ ಕೆಟ್ಟ ಬೈಗುಳ ಅಥವಾ ಸ್ಲಾಂಗ್ ಹೆಣ್ಣನ್ನೇ ಆಧರಿಸಿದೆ. ಇದೊಂದು ಕುತೂಹಲಕಾರಿ ಸಂಗತಿ. ಪುರುಷಪ್ರಧಾನ ಸಮಾಜದಿಂದ ಹೀಗಾಗಿದೆ ಎಂದು ಸ್ರ್ತೀವಾದಿಗಳು ಹೇಳಬಹುದು. ಆದರೆ ನಿಜವಾಗಿ ಪುರುಷಪ್ರಧಾನ ಸಮಾಜದಲ್ಲಿ ಪುರುಷ ನಿಂದನೆಯೇ ಹೆಚ್ಚಿನದಾಗಿರಬೇಕಾಗಿತ್ತು. 

ಜನಪದ ಸಾಹಿತ್ಯದಲ್ಲಿ ಬೈಗುಳ ಹೇರಳ. ಕೆಲವೊಮ್ಮೆ ಇವು ಶಾಪದ ರೂಪದಲ್ಲಿರುತ್ತವೆ. ಉದಾಹರಣೆಗೆ ಮಹದೇಶ್ವರ ಕಾವ್ಯದಲ್ಲಿ ಅಂತೆಯೇ ಸಿರಿಚಾಮುಂದಿ ಕಾವ್ಯದಲ್ಲಿ ಬರುವಂತೆ ನಿಂಗೆ ಹಾವಾದ್ರೂ ಕಚ್ಚಬಾರ್ದ, ಚೇಳಾದ್ರೂ ಕಡಿಯಬಾರ್ದಇತ್ಯಾದಿ. ಇದೇ ರೀತಿ ಸಂಸ್ಕೃತದಲ್ಲೂ ಹೆಚ್ಚು ಬೈಗುಳಗಳು ಶಾಪದ ರೂಪದಲ್ಲಿವೆ. ಇಂಥ ಕಡೆ ಮಹಿಳೆಯನ್ನು ಆಧರಿಸಿ ಬೈಗುಳವಿಲ್ಲ ಎಂಬುದು ವಿಶೇಷ. ಕನ್ನಡದ 'ನಿಮ್ಮನೆ ಎಕ್ಕುಟ್ಟಿಹೋಗಾ', ನಿನ್ನ ಮನೆಗೆ ಬೆಂಕಿ ಬೀಳಾ,  ನಿನ್ನ ಸಂತಾನ ನಾಶವಾಗ್ಲಿ ಇತ್ಯಾದಿ. ಮರಾಠಿಯ ವಾಘ್ ಖಾಯ್ಲೆ ತುಕಾ (ನಿನ್ನ ಹುಲಿ ತಿನ್ನಲಿ) ಇತ್ಯಾದಿ. ನಿನ್ನ ಸಂತಾನ ನಾಶವಾಗಲಿ ಎಂಬುದಂತೂ ಭಯಂಕರ ಶಾಪ. ಮೈಸೂರು ಅರಸರಿಗೆ ಮಾತಂಗಿ ಎಂಬ ಹೆಣ್ಣು ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಸಾಯುವಾಗ ಶಾಪ ಕೊಟ್ಟಳೆಂದೂ ಇದರ ಫಲವಾಗಿ ೧೬ನೆಯ ಶತಮಾನದ ಸುಮಾರಿನಿಂದ ಮೈಸೂರು ಒಡೆಯರ ದತ್ತು ಮಗನಿಗೆ ಮಾತ್ರ ಸಂತಾನವಾಗುತ್ತದೆ ಎಂದೂ ಹೇಳಲಾಗುತ್ತದೆ. ಇದು ವಿಚಿತ್ರ ಎಂಬಂತೆ ನಿಜವೂ ಆಗಿಬಿಟ್ಟಿದೆ. ಹೀಗೆ ಕೆಲವರು ಬೈದುದು ಅಥವಾ ಶಪಿಸಿದ್ದು ನಿಜವಾಗುವುದಿದೆ. ಇಂಥ ಜನರ ನಾಲಗೆ ಮೇಲೆ ಮಚ್ಚೆ ಇರುತ್ತದೆ ಎಂದೂ ಹೇಳುತ್ತಾರೆ. ಕೆಲವು ಬೈಗುಳಗಳು ಅಪ್ಪ ಅಮ್ಮ ತಲೆಮಾರು ಜಾತಿ ಇತ್ಯಾದಿಗಳ ಗೊಡವೆಗೇ ಹೋಗದೆ ಆಯಾ ವ್ಯಕ್ತಿಯನ್ನು ಮಾತ್ರ ಕುರಿತಿರುತ್ತವೆ. ನಿನ್ನ ಬಾಯಿಗೆ ಹುಳ ಬೀಳಾ, ಮೈಗೆಲ್ಲ ಹುಣ್ಣು ಬೀಳಾ, ನಿಂಗೆ ಲಕ್ವಾ ಹೊಡೆಯಾ ಇತ್ಯಾದಿ ಈ ವರ್ಗದವು. ಆದರೂ ಬೈಗುಳಗಳು ವ್ಯಕ್ತಿಗಿಂತಲೂ ಅವನ ತಂದೆ ತಾಯಿ ಮನೆತನ ಧರ್ಮ, ಜಾತಿ ಇತ್ಯಾದಿ ಕುರಿತಾಗಲೇ ತೀವ್ರ ರೂಪ ಪಡೆಯುತ್ತವೆ. ನೀನೊಬ್ಬ ಕತ್ತೆ ಎಂದು ಯಾರನ್ನಾದರೂ ಬೈದರೆ ಆತ ಇರಬಹುದು ಎಂದು ಸುಮ್ಮನಾಗುತ್ತಾನೆ ಆದರೆ ಅವನ ಅಪ್ಪ ಅಮ್ಮನನ್ನು ಕುರಿತು ಞದರ್ಮ, ಭಾಷೆಯನ್ನು ಕುರಿತು ಬೈದರೆ ನನ್ನ ಅಪ್ಪ ಅಮ್ಮನಿಗೆ ಅಂತೀಯಾ ಎಂದು ಜಗಳ ತೀವ್ರತೆ ಪಡೆಯುತ್ತದೆ. ಹೀಗೆ ಭಾಷೆ ಧರ್ಮದ ವಿಷಯದಲ್ಲೂ. ನನ್ನನ್ನು ಏನಾದರೂ ಅನ್ನು ಆದರೆ ಇವುಗಳ ವಿಷಯಕ್ಕೆ ಬರಬೇಡ ಎಂದು ಎಚ್ಚರಿಸಲಾಗುತ್ತದೆ. ಬಹುಶಃ ಇವು ಸಾರ್ವತ್ರಿಕ ಸ್ವರೂಪದಲ್ಲಿರುವುದು ಇವುಗಳ ತೀವ್ರತೆಗೆ ಕಾರಣವೆನಿಸುತ್ತದೆ. ನಾಡು ನುಡಿಯ ವಿಷಯದಲ್ಲಿ ಇದು ಹೆಚ್ಚು ಸರಿ. ಕಾವೇರಿ ನದಿ ಕುರಿತು ಯಾರಾದರೂ ಕೆಟ್ಟ ಮಾತನಾಡಿದರೆ ಪರಿಣಾಮ ಏನಾಗಬಹುದು ಊಹಿಸಿ. ಇದು ಮನುಷ್ಯ ಸ್ವಭಾವದ ಸಮಸ್ಯೆಯೂ ಗುಣದ್ದೋ ಭಾಷೆಯ ವೈಚಿತ್ರö್ಯವೋ ಅರ್ಥವಾಗುವುದಿಲ್ಲ. ಸಂಸ್ಕೃತದ ಜನನಿ ಸರಸ್ವತಿ ಎಂದು ಹೆಣ್ಣನ್ನೇ ಆ ಸ್ಥಾನದಲ್ಲಿಟ್ಟ ಕಾರಣ ಅದರಲ್ಲಿ ಸ್ತ್ರೀ ಆಧಾರಿತ ಬೈಗುಳ ಇರಲಿಕ್ಕಿಲ್ಲ ಎಂಬುದು ಅಷ್ಟು ತಾರ್ಕಿಕ ಅನಿಸದು. ಕನ್ನಡದ ಆಡು ನುಡಿಯಲ್ಲಿನ  ಬೈಗುಳಗಳ ಸ್ಯಾಂಪಲ್ಲು ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ಗೈಯಾಳಿಗಳು ಕೃತಿಯಲ್ಲಿ ದೊರೆಯುತ್ತದೆ. ಬೈಗುಳ ಕುರಿತ ಸಾಕಷ್ಟು ಸಂಶೋಧನೆಗಳೂ ಆಗಿವೆ. ಯಾರೋ ಒಬ್ಬರು ಅರ್ಥ ಕೋಶವನ್ನೂ ಮಾಡಿದ್ದಾರೆ ಅನಿಸುತ್ತದೆ. ಶಿಷ್ಟವೇ ಆಗಲಿ ಜನಪದವೇ ಆಗಲಿ ತೀವ್ರ ರೂಪದ ಬೈಗುಳಗಳಲ್ಲಿ ಹೆಣ್ಣೇ ಇರುತ್ತಾಳೆಂಬುದಕ್ಕೆ  ಹೆಣ್ಣಿನಬಗ್ಗೆ ಇರುವ ಕೀಳು ದೃಷ್ಟಿ ಕಾರಣವೋ ಅಥವಾ ನಮ್ಮ ಹೆಣ್ಣನ್ನು ಕೀಳಾಗಿ ನೋಡಲಾಗುತ್ತಿದೆ ಎಂಬ ಗೌರವಕ್ಕೆ ಧಕ್ಕೆ ಅನಿಸಿದ ಕೇಳುಗ ಇನ್ನಷ್ಟು ಉರಿದುಕೊಳ್ಳಲಿ ಎಂಬ ಉದ್ದೇಶವಿರುತ್ತದೋ ಸುಲಭಕ್ಕೆ  ಹೇಳಲಾಗದು. ಒಟ್ಟಿನಲ್ಲಿ ಬೈಗುಳದಲ್ಲಿ ಭಾಷೆಯ ಬ್ರಹ್ಮಾಂಡ ಅಡಗಿರುವುದು ಸುಳ್ಳಲ್ಲ.

Saturday, 15 June 2024

ಒಗ್ಗದ ಲೆಕ್ಕಾಚಾರ


ಸದ್ಯ ಮುಂಗಾರು ಪ್ರವೇಶ ಮಾಡಿ ಜನರ ಹಾಗೂ ರ‍್ಕಾರದ ಮೊಗದಲ್ಲಿ  ಮಂದಹಾಸ ತರಿಸಿದೆ. ಬಿರು ಬೇಸಿಗೆಯಿಂದ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದವು. ಸಮಸ್ಯೆ ಎಲ್ಲಿದೆ ನೋಡುವಾ.

ಭಾರತದಲ್ಲಿ ಸದ್ಯ ೫,೩೩೪ ಬೃಹತ್ ಅಣೆಕಟ್ಟುಗಳಿದ್ದು ಇನ್ನೂ ೪೪೭ ಅಣೆಕಟ್ಟುಗಳು ಸಿದ್ಧವಾಗುತ್ತಿವೆ. ನಮ್ಮಲ್ಲಿ ಪರಿಸರ, ಒಟ್ಟೂ ವಾತಾವರಣದ  ಬಗ್ಗೆ ಸರಿಯಾದ ಸ್ವಂತ ಕಲ್ಪನೆ ಇಲ್ಲ. ನಮ್ಮಲ್ಲಿರುವುದು ಏನಿದ್ದರೂ ಅಲ್ಲಿ ಇಲ್ಲಿಂದ ಆಮದು ಮಾಡಿಕೊಂಡ ತತ್ವಗ್ಳು. ವಿಶೇಷವಾಗಿ ಅಮೆರಿಕ ಮತ್ತು ಯೂರೋಪ್ ನಿಂದ. ಅಲ್ಲಿನ ಹವಾಗುಣ, ಪರಿಸರ ಎಲ್ಲ ಭಿನ್ನ. ಅಲ್ಲಿನ ಮಾದರಿ ನಮ್ಮ ಸಮಾಜಕ್ಕೆ ಹೇಗೆ ಸೀದಾ  ತಂದುಹಾಕಲು ಸಾಧ್ಯವಿಲ್ಲವೂ ಹಾಗೆಯೇ ಅಲ್ಲಿನ ಪರಿಸರ ಕಲ್ಪನೆಯನ್ನು ಕೂಡಾ. ಏಕೆಂದರೆ ಅಲ್ಲಿನ ಬೇಸಗೆ, ಮಳೆಗಾಲ ಮತ್ತು ಚಳಿಗಾಲಗ್ಳ ಅವಧಿ ಸ್ವರೂಪ ಎಲ್ಲ ಬೇರೆ. ಅವರಿಗೆ ಹೊಂದುವ ಅಣೆಕಟು,ಚೆಕ್ ಡ್ಯಾಂ ಮೊದ್ಲಾದವು ಅಲ್ಲಿಗೆ ಸರಿ. ನಮ್ಮ ದೇಶದ ಹವಾಗುಣ, ವಾತಾವರಣ ತೀರಾ ಭಿನ್ನ.ಸಹಜವಾಗಿ ಹರಿಯುವ ನದಿ ನೀರನ್ನು ಎಲ್ಲೆಂದರೆ ಅಲ್ಲಿ ಕಟ್ಟುವುದರಿಂದ ನದಿ ಮತ್ತು ನದಿ ಪಾತ್ರದ ಜೀವ ಜಂತುಗಳಿಗೆ. ಪರಿಸರಕ್ಕೆ ಆಗುವ ಹಾನಿ ಅಪಾರ. ಯೂರೋಪಿನ ಪ್ರಭಾವದಿಂದಲೋ ಏನೋ ನಮ್ಮಲ್ಲಿ ಒಂದು ಭ್ರಮೆ ಹುಟ್ಟಿದೆ. ಗಿಡಮರಗಳೇ ಪರಿಸರ. ಬಯಲು ಕಲ್ಲು ಗುಡ್ಡಗಳು ಪರಿಸರಕ್ಕೆ ಪೂರಕವಲ್ಲ ಇತ್ಯಾದಿ.  ಇದು ಸರಿಯಲ್ಲ. ಕಾಡು ಅಂದರೆ ಅದು ಕೇವಲ ಗಿಡಮರಗಳ ಸಂದಣಿ ಅಲ್ಲ. ಅದರೊಳಗೆ ಸೆಗಣಿ ಹುಳದಿಂದ ಹಿಡಿದು ಆನೆಯವರೆಗೆ ಎಲ್ಲದಕ್ಕೂ 

 ಅವುಗಳದ್ದೇ ಆದ ಹೊಣೆಗಾರಿಕೆ ಇದೆ. ಇವುಗಳಲ್ಲಿ ಯಾವುದಾದರೂ ಒಂದು ಏರುಪೇರಾದರೂ ಪರಿಸರಕ್ಕೆ ಧಕ್ಕೆ. ಕಲ್ಲು ಕುರುಚಲು ತುಂಬಿದ ಪ್ರದೇಶ ಹಾವುಗಳಂಥ ಸರೀಸೃಪಗಳಿಗೆ, ಕೃಷ್ಣಮೃಗದಂಥ ಪ್ರಾಣಿಗಳಿಗೆ ಆವಾಸ. ಎಲ್ಲಕಡೆ ದಟ್ಟ ಕಾಡಿದ್ದರೆ ಇಂಥ ಜೀವಿಗಳಿಗೆ ಜಾಗವಿಲ್ಲ, ಉಳಿಗಾಲವಿಲ್ಲ. ಹಾಗಾಗಿ ಪರಿಸರದ ಬಗೆಗಿನ ನಮ್ಮ ತಿಳಿವಳಿಕೆ ಸರಿಯಾಗಬೇಕಿದೆ. ಅಣೆಕಟ್ಟುಗಳ ಹಣೆಬರೆಹ ನೋಡಿ. ಅವು ನೀರು ಹಿಡಿದಿಡುತ್ತವೆ ಸರಿ. ಆದರೆ ಬೇಸಗೆಯಲ್ಲಿ ಹಿಡಿದಿಟ್ಟ ಇಂಥ ನೀರು ಶೇ, ೫೦ ಆವಿಯಾದರೆ  ಹರಿಯುವ ನೀರು ಆವಿಯಾಗುವ ಪ್ರಮಾಣ ಬಹಳ ಕಡಿಮೆ.ಆಗ ಸಮಸ್ಯೆಗಳೂ ಕಡಿಮೆ ಆಗುತ್ತವೆ, ಬೇಸಗೆಯಲ್ಲಿ ಮಾತ್ರವಲ್ಲ, ಮಳೆಗಾಲದಲ್ಲೂ ಪ್ರವಾಹ ಸ್ಥಿತಿಯ ಅಪಾಯ ಕೂಡ ಅಣೆಕಟ್ಟುಗಳಿಂದ ಹೆಚ್ಚು. ಹೀಗಾಗಿ ಪಾಶ್ಚಾತ್ಯ ಪರಿಸರ ಮಾದರಿಯಿಂದ ನಮಗೆ ಅಪಾಯವೇ ಹೆಚ್ಚು. ಇದರ ಜೊತೆಗೆ ನಾವು ಆಹಾರ ವಾಣಿಜಯ ಮೊದಲಾದ ಬೆಳೆಗಳನನುಪರಿಗಣಿಸುವ ದೃಅಶಹಥಿ ಕೂಡ ಪರಿಸರಕಕೆ ಪೂರಕವಲ್ಲ, ಯಾವ ಭೌಗೋಳಿಕ ವಾತಾವರಣದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬ ಪ್ರಾಥಮಿಕ ಜ್ಞಾನವನ್ನೇ ನಾವು ಕಳೆದುಕೊಂಡು ತಿನ್ನಲು ಆಹಾರವಿಲ್ಲದೇ ಕುಡಿಯಲು ನೀರಿಲ್ಲದಂತೆ ಮಾಡಿಕೊಂಡು ಪರದಾಡುತ್ತೇವೆ. ಈ ಸಮಸ್ಯೆಗೆ ಪರಿಹಾರ ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿದೆ. ನಮ್ಮ ಪೂರ್ವಜರು ಯಾವ ಪ್ರದೇಶ ಕ್ಕೆ ಯಾವ ಬೆಳೆ ಸೂಕ್ತ ಎಂದು ಅನುಭವದಿಂದ ಕಂಡುಕೊAಡು ಆಯಾ ಸ್ಥಳಗಳಲ್ಲಿ ಅವನ್ನು ಬೆಳೆಯುತ್ತಿದ್ದರು. ಇದರಿಂದ ಎಲ್ಲ ಬಗೆಯ ಬೆಳೆಯೂ ಇರುತ್ತಿತ್ತಲ್ಲದೇ ನಷ್ಟವೂ ಆಗುತ್ತಿರಲಿಲ್ಲ. ಆದರೆ ಇಂದು ಚಿತ್ರದುರ್ಗ, ರಾಯಚೂರಿನಂಥ ಬಿರುಬೇಸಗೆಯ ಜಾಗದಲ್ಲಿ ವಾಣಿಜ್ಯ ಬೆಳೆಯಾದ ಅಡಕೆಯನ್ನು ಬೆಳೆಯಲು ಹಣ ಹಾಕಿ ಕಷ್ಟ ಪಡಲಾಗುತ್ತಿದೆ. ಈ ಪ್ರದೇಶಕ್ಕೆ ಇದು ಸೂಕ್ತವಲ್ಲ ಎಂದು ತಿಳಿ ಹೇಳುವವರೂ ಇಲ್ಲ. ಇದ್ದರೂ ಯಾಕೆ ಬೆಳೆಯಬಾರದು ಇಲ್ಲಿಯೂ ಮೇಲು ಕೀಳು ಭಾವನೆ, ಇತ್ಯಾದಿ ವಿಚಾರಗಳು ಬರುತ್ತವೆ. ನೀರು ಕಡಿಮೆ ದೊರೆಯುವ ಬಯಲು ಸೀಮೆಯಲ್ಲಿ ಸಿರಿಧಾನ್ಯಗಳನ್ನು ಬೆಳೆvಯುವುದು ಸೂಕ್ತ. ಮಳೆ ಹೆಚ್ಚು ಬೀಳುವ ಮಲೆನಾಡಲ್ಲಿ ಅಡಕೆ, ಬತ್ತ, ಕಬ್ಬಿನಂಥ ಬೆಳೆ ಸರಿ. ಆದರೆ ನಮ್ಮ ಜಮೀನು ನಮ್ಮ ಇಷ್ಟ ಎಂಬ ಮನೋಧರ್ಮ ರೈತರಲ್ಲಿ ಮೂಡಿ ಕಷ್ಟ ಹೆಚ್ಚಾಗುತ್ತಿದೆ.ಇದರಿಂದ ಕೆಲವಞೆ ಕೆಲವು ಬೆಳೆಗಳನ್ನು ಎಲ್ಲ ಕಡೆಗೂ ಬೆಳೆಯುವಂತಾಗಿ ಕೆಲ ಧಾನ್ಯಗಳ ಲಭ್ಯತೆಯೇ ಇಲ್ಲವಾಗಿದೆ. ಉದಾಹರಣೆಗೆ ಅಗಸೆ, ಹುಚ್ಚೆಳ್ಳಿನ ಬೆಳೆ ತೀರಾ ಅಪರೂಪವಾಗಿದೆ.ಇಂಥ ಅಸಮತೋಲನದಿಂದ ದನಕರುಗಳ ಮೇವಿಗೂ ಪ್ರಾಣಿ ಪಕ್ಷಿಗಳ ಉಳಿವಿಗೂ ಸಂಚಕಾರ ಒದಗಿದೆ. ಇದಕ್ಕೆಲ್ಲ ಪ್ರಕೃತಿ ಕಾರಣವಲ್ಲ.

Friday, 7 June 2024

ಅಳವಿಗೆ ಸಿಗದ ಮತದಾರ


ಇದೀಗ ಭಾರತದ ೧೮ನೇ ಲೋಕಸಬೆಗೆ ಏಳು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಇದೀಗ ಫಲಿತಾಂಶ ಕೂಡ ಹೊರಬಿದ್ದಿದೆ. ತಿಂಗಳುಗಳ ಹಿಂದೆ ಚುನಾವಣೆಯ ಪ್ರಕ್ರಿಯೆ ಶುರುವಾದಾಗಿನಿಂದ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳು, ಜ್ಯೋತಿಷಿಗಳು ಮತ್ತು ಚುನಾವಣಾ ಪಂಡಿತರು(ಸೆಫಾಲೀಜಿಸ್ಟ್)  ಮುಂತಾದವರು ಅವಿರತವಾಗಿ ಯಾವ ಪಕ್ಷ ಯಾವ ವ್ಯಕ್ತಿ ಗೆಲ್ಲುತ್ತಾನೆ ಎಂಬ ಬಗ್ಗೆ ತಮ್ಮದೇ ಆದ ಲೆಕ್ಕಾಚಾರಗಳನ್ನು ಮಂಡಿಸುತ್ತಲೇ ಬಂದಿದ್ದರು. ಆದರೆ ಈ ಯಾವ ಲೆಕ್ಕಚಾರಗಳು ಸಂಪೂರ್ಣವಾಗಿ ಸರಿಯಾಗಿಲ್ಲ.ಭಾರತದಲ್ಲಿ ಈ ಬಾರಿ ಲೋಕಸಭೆಯ ೫೪೩ ಸ್ಥಾನಗಳಿಗೆ ಒಂಭತ್ತು ಕೋಟಿಗೂ ಹೆಚ್ಚು ಜನ ತಮ್ಮ ಮತ ಚಲಾಯಿಸಿದ್ದಾರೆ. ತಮಾಷೆ ಏನೆಂದರೆ ಭಾರತೀಯ ಮತದಾರರ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಜೈಲಿನಲ್ಲಿರುವ ಶಂಕಿತ ಉಗ್ರಗಾಮಿಯೊಬ್ಬ ಆಯ್ಕೆಯಾಗಿದ್ದಾನೆ. ತಮಿಳುನಾಡಿನಲ್ಲಿಮಾಜಿ ಐ.ಪಿ.ಎಸ್ ಅಧಿಕಾರಿ ಸೋಲುಂಡಿದ್ದಾರೆ. ಬಹಳಷ್ಟು ಕಡೆ ಅತ್ಯಾಚಾರಿಗಳು ಅನೇಕ ಆರೋಪಗಳಿರುವವರು ಆಯ್ಕೆಯಾಗಿದ್ದಾರೆ. ಅನೇಕ ಕಡೆ ಸ್ಪರ್ಧಿಸಿದ ಉತ್ತಮ ಚಿಂತಕರು, ಪಂಡಿತರು ಸೋಲು ಕಂಡಿದ್ದಾರೆ. ಭಾರತದಲ್ಲಿ ಈ ಪ್ರಕ್ರಿಯೆ ಹೊಸದಲ್ಲ.ಹಿಂದೊಮ್ಮೆ ಕನ್ನಡದ ಪ್ರಸಿಧ್ಧ ಸಾಹಿತಿಗಳಾದ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಶಿವರಾಮ ಕಾರಂತರು ಸೋಲು ಕಂಡಿದ್ದರು. ಅದೇ ರೀತಿ ಮತ್ತೊಬ್ಬ ಸಾಹಿತಿ ಗೋಪಾಲಕೃಷ್ಣ ಅಡಿಗರು ಚುನಾವಣೆಯಲ್ಲಿ ಸೋತಿದ್ದರು. ಇವರಿಬ್ಬರೂ ಕನ್ನಡಿಗರಿಗೆಲ್ಲ ಪರಿಚಿತರು ಮತ ಹಾಕಿದವರಿಗೂ ಗೊತ್ತಿದೆ. ಆದರೂ ಸೋತರು. ಅಂದರೆ ಭಾರತೀಯ ಜನಮಾನಸಕ್ಕೆ ಯಾವುದು ಬೇಕು ಯಾವುದು ಬೇಡವಾಗುತ್ತದೆ ಎಂಬುದು ಸುಲಭಕ್ಕೆ ಅರ್ಥವಾಗುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ಉಚಿತ ಸವಲತ್ತು ಕೊಟ್ಟವರು, ಏನೇನೋ  ದಾನ ಮಾಡಿದವರು ಸೋತಿದ್ದಾರೆ. ಪ್ರಚಾರ ಸಭೆಗಳಲ್ಲಿ ಭಾಗವಹಿಸುವ ಲಕ್ಷಾಂತರ ಜನ ಆ ವ್ಯಕ್ತಿಗೆ ಮತಹಾಕುವ ಗ್ಯಾರಂಟಿ ಇಲ್ಲ. ಒಬ್ಬ ವ್ಯಕ್ತಿ ಒಬ್ಬ ರಾಜಕಾರಣಿಯನ್ನು ಹೊಗಳಿ ಇನ್ನೂಬ್ಬನಿಗೆ ಮತಹಾಕಬಹುದು.ಪುಗ್ಸಟ್ಟೆ ಸಿಗುವ ಎಲ್ಲ ಸವಲತ್ತು, ಸಾವiಗ್ರಿಗಳನ್ನು ಪಡೆದು ಅವರು ಹಾಕಿದ ಊಟವನ್ನೂ ಮಾಡಿ ಮತಹಾಕದಿರಬಹುದು. ಮ್ಮ ಜಾತಿ ಮತಗಳನ್ನು ಮೀರಿ ವ್ಯಕ್ತಿಯನ್ನು ಗೆಲ್ಲಿಸಬಹುದು. ಇವೆಲ್ಲಾ ಮುಕ್ತ ಪ್ರಜಾಪ್ರಭುತ್ವದಲ್ಲಿ ಸರಿ. ಆದರೆ ಜನರು ಇಂಥ ಆಮಿಷಗಳಿಗೆ ಪಕ್ಕಾಗಿ ಮತಹಾಕುತ್ತಾರೆ ಎಂದು ತಿಳಿದ ಪುಡಾರಿಗಳು ಈ ಬಗೆಯ ಸರ್ಕಸ್ ಗಳಲ್ಲಿ ತೊಡಗುತ್ತಾರೆ. ಇಂಥವರಿಗೆ ಜನ ಮಣ್ಣು ತಿನಿಸುತ್ತಾರೆ. ಒಂದು ದೃಷ್ಟಿಯಲ್ಲಿ ಜನಸಾಮಾನ್ಯರ ನಾಡಿಮಿಡಿತ ಸಣ್ಣಪುಟ್ಟ ಹೋಟೆಲ್ ಗಳಲ್ಲಿ, ಚಹಾ ಅಡ್ಡೆಗಳಲ್ಲಿ, ಕ್ಷೌರದ ಅಂಗಡಿಗಳಲ್ಲಿ, ಪಂಚಾಯ್ತಿ ಕಟ್ಟೆಗಳಲ್ಲಿ ಗಂಬೀರವಾಗಿ ಚರ್ಚೆ ಆಗುವಾಗ ತಿಳಿಯುತ್ತದೆ. ಸಮಾನ್ಯವಾಗಿ ಹೆಚ್ಚು ಮಾತಾಡದೇ ತನ್ನಪಾಡಿಗೆ ತಾನು ಕೆಲಸ ಮಾಡುವ ವ್ಯಕ್ತಿಯನ್ನು ಜನ ಕೈಬಿಡುವುದಿಲ್ಲ. ಇಲ್ಲಿ ಜಾತಿ ಮತಗಳು ಅಡ್ಡ ಬರುವುದಿಲ್ಲ. ಆತ ವೈಯಕ್ತಿಕವಾಗಿ ಏನೇ ಅನಾಚಾರ ಮಾಡಿದ್ದರೂ ಅದೆಲ್ಲ ಅಲಕ್ಷವಾಗುತ್ತದೆ. 

ಅಂದರೆ ಜನಕ್ಕೆ ಅದರಲ್ಲೂ ಗ್ರಾಮೀಣ ಮತ್ತು ನಗರದ ಜನಕ್ಕೆ ಅಗತ್ಯವಾದ ಬೇರೆ ಬೇರೆ ಸೌವಲತ್ತುಗಳನ್ನು ಸರ್ಕಾರದಮೂಲಕ ಒದಗಿಸಿ ಕೊಡುವ ಪ್ರತಿನಿಧಿ ಅಗತ್ಯವಾಗುತ್ತಾನೆ. ಗ್ರಾಮೀಣ ಬಾಗದಲ್ಲಿ ಯಾವುದೇ ಉಚಿತ ಆಮಿಷಗಳ ಮೂಲಕ ಮತ ಪಡೆಯಲಾಗದು. ಅವರಿಗೆ ಸ್ವಾಭಿಮಾನಕ್ಕೆ ಅಡ್ಡಬರದಂತೆ ಅನುಕೂಲ ಮಾಡಿಕೊಡಬೇಕು ಆಗ ಮಾತ್ರ ಅವರು ಒಪ್ಪುತ್ತಾರೆ. ಆದರೆ ನಗರ ಪ್ರದೇಶದ ಪರಿಸ್ಥಿತಿ ಸ್ವಲ್ಪ ಭಿನ್ನ. ಸ್ವಯಂ ಉದ್ಯೋಗಕ್ಕೆ ಜನ ಇಲ್ಲಿ ಆದ್ಯತೆ ಕೊಡುತ್ತಾರೆ. ಉಳಿದಂತೆ ರೊಟಿ, ಕಪಡ ಮತ್ತು ಮಕಾನ್ ಎಲ್ಲರಿಗೂ ಮುಖ್ಯವಾಗುತ್ತದೆ. ಇತ್ತಿಚ್ಚೀನ ದಿನಗಳಲ್ಲಿ ವಿಜ್ಞಾನ ತಂತ್ರಜ್ಞಾನ ಸೌಲಭ್ಯಗಳು ಇಂಧನ ಪೊರೈಕೆಗಳನ್ನು ಕೈಗೆಟಕುವ ರೀತಿಯಲ್ಲಿ ಜನ ಬಯಸುತ್ತಿದ್ದಾರೆ. ಇವೆಲ್ಲವನ್ನು ಒಳಗೊಳ್ಳುವ ಪಕ್ಷದ ಉದ್ದೇಶ ವ್ಯಕ್ತಿಯ ನಿಷ್ಟೆ ಇವೆಲ್ಲಾ ಮತ ಪಡೆಯಲು ಮಾನದಂಡಗಳಾಗುತ್ತವೆ ಎಂದು ಹೇಳಬಹುದು.

ಭಾರತದಲ್ಲಿ ಹತ್ತಾರು ಚುನಾವಣೆಗಳು ನಡೆಯುತ್ತವೆ. ಗ್ರಾಮ ಪಂಚಾಯ್ತಿ ಮಟ್ಟದಿಂದ ಹಿಡಿದು ಲೋಕಸಭೆಯವರೆಗೆ ಜನರ ಆದ್ಯತೆಗಳು ಬದಲಾಗುತ್ತವೆ. ಇಲ್ಲೆಲ್ಲ ಯಾವುದೇ ಸಿದ್ಧಾಂತ, ಪಕ್ಷ ಯಾವುದೂ ಮುಖ್ಯವಾಗುವುದಿಲ್ಲ. ಗ್ರಾಮೀಣ ಭಾಗದ ನೀರಿನ ಸೌಕರ್ಯ ಗಮನಾರ್ಹವಲ್ಲ. ಇಂಥವನ್ನೆಲ್ಲ ಎಲ್ಲರೂ ಚಿಂತಿಸಿ ಮತ ಹಾಕುತ್ತಾರೆಂದಲ್ಲ. ಇವೆಲ್ಲ ಸಾಮಾನ್ಯ ವಿಚಾರಗಳು. ಮತ ಚಲಾಯಿಸುವಾಗ ಜನರ ತಲೆಯಲ್ಲಿ ಇವೆಲ್ಲ ಕೆಲಸ ಮಾಡುತ್ತವೆ ಎಂಬುದು ಸುಳ್ಳಲ್ಲ. ಒಟ್ಟಿನಲ್ಲಿ ಚುನಾವಣೆಯ ಸ್ವರೂಪವನ್ನು ಆಧರಿಸಿ ಜನ ಮತ ಹಾಕುತ್ತಾರೆ ಆದರೂ ಜನರ ಯೋಚನೆ ಇದೇ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಭಾರತದಂಥ ಬೃಹತ್ ಪ್ರಮಾಣದ ಮತದಾರರ ಯೋಚನೆಯನ್ನು ಒಂದೇ ಸೂತ್ರದಲ್ಲಿ ಹಿಡಿದುಹಾಕುವುದು ಸುಲಭವಲ್ಲ ಎಂಬುದು ಈ ಚುನಾವಣೆ ಮತ್ತೊಮ್ಮೆ ಸಾಬೀತುಮಾಡಿದೆ.