Saturday, 3 August 2024

ಒಂದು ಸ್ತುತ್ಯರ್ಹ ಪ್ರಯತ್ನ

ಒಂದು ಸ್ತುತ್ಯರ್ಹ ಪ್ರಯತ್ನ

ಡಾ. ವೆಂಕಟೇಶಯ್ಯ ಕೆ.ಎಂ

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ

ಆಚಾರ್ಯ ಪಾಠಶಾಲಾ ವಾಣಿಜ್ಯ ಕಾಲೇಜು

ನರಸಿಂಹರಾಜ ಕಾಲೋನಿ, ಬೆಂಗಳೂರು-೧೯.

ಮೊಬೈಲ್ ಸಂಖ್ಯೆ : ೯೯೮೦೨೮೫೩೬೫


ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರವು ನವೆಂಬರ್ ೨೦೨೩ರಲ್ಲಿ ಯು.ಜಿ.ಸಿ ಪ್ರಾಯೋಜಿತ ಪುನರ್ ಮನನ ಶಿಬಿರವನ್ನು ವಿಶ್ವವಿದ್ಯಾನಿಲಯದ ಮತ್ತು ಪದವಿ ಕಾಲೇಜುಗಳ ಅಧ್ಯಾಪಕರಿಗೆ ಹಮ್ಮಿಕೊಂಡಿತು. ಇಂಥ ಶಿಬಿರದಲ್ಲಿ ನಿರ್ದಿಷ್ಟ ವಿಷಯವನ್ನು ಕುರಿತಂತೆ ಶಿಬಿರಾರ್ಥಿಗಳು ಪ್ರಬಂಧವನ್ನು ಮಂಡಿಸಬೇಕಾಗುತ್ತದೆ. ಇದು ಶಿಬಿರದ ಚಟುವಟಿಕೆಯ ಒಂದು ಭಾಗ. ಇಷ್ಟಾದರೆ ಶಿಬಿರದ ಕೆಲಸ ಮುಗಿದಂತೆ. ಮಂಡಿಸಿದ ಪ್ರಬಂಧ ಇನ್ನೆಲೋ ಹೋಗುತ್ತದೆ, ಮತ್ತೆ ಅದು ಉಪಯುಕ್ತ ಆಗುವುದಿಲ್ಲ. ಆದರೆ ಅನೇಕ ಹೊಸ ಕೆಲಸಗಳನ್ನು ಮತ್ತು ತೊಡಗುವಿಕೆಯನ್ನು ತೋರಿಸಿಕೊಟ್ಟ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಈ ಮೂಲಕ ಮತ್ತೊಂದು ಹೊಸ ಪ್ರಯತ್ನ ಮಾಡಿ ಶಿಬಿರಾರ್ಥಿಗಳ ಎಲ್ಲ ಪ್ರಬಂಧಗಳನ್ನು ಸಂಕಲಿಸಿ ಸಂಪಾದನೆಯ ರೂಪದಲ್ಲಿ ಉಪಯುಕ್ತ ಕನ್ನಡ ಕೃತಿಯೊಂದನ್ನು ಹೊರತಂದಿದೆ. ಇದು ಉಪಯುಕ್ತ ಏಕೆಂದರೆ ಇದರಲ್ಲಿ ಹಳಗನ್ನಡದಿಂದ ಹಿಡಿದು ಹೊಸಗನ್ನಡದ ವಿವಿಧ ಸಾಹಿತ್ಯ ಪ್ರಕಾರಗಳನ್ನು ಕುರಿತ ವಿಚಾರ ವಿಮರ್ಶೆ ಲೇಖನಗಳು ಇವೆ. ಈ ದೃಷ್ಟಿಯಿಂದ ಕನ್ನಡ ಸಾಹಿತ್ಯದ ಹಳೆಯ ಮತ್ತು ಹೊಸ ಎಲ್ಲಾ ಬಗೆಯ ಸಾಹಿತ್ಯ ಪ್ರಕಾರಗಳ ಪರಿಚಯ ಮೇಲ್ನೋಟಕಕ್ಕೆ ಒಂದೇ ಕಡೆ ಸಿಗುವಂತಾಗಿದೆ. ಇದರಿಂದಾಗಿ ಈ ಕೃತಿ ಕನ್ನಡ ಸಾಹಿತ್ಯ ಆಸಕ್ತರಿಗೆ, ಅಧ್ಯಾಪಕರಿಗೆ, ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂಗ್ರಹ ಯೋಗ್ಯ ಪರಾಮರ್ಶನ ಕೃತಿಯಾಗಿ ಪರಿಣಮಿಸಿದೆ. ಈ ಕೃತಿಯಲ್ಲಿ ೩೧ ಸಂಶೋಧನಾ ಲೇಖನಗಳಿದ್ದು, ೨೬೦ ಪುಟಗಳಲ್ಲಿ ಹರಡಿಕೊಂಡಿವೆ. ಕೆಲವು ಲೇಖನಗಳು ನಮ್ಮನ್ನು ಹೊಸ ರೀತಿಯಲ್ಲಿ ಯೋಚಿಸುವಂತೆ ಮಾಡುತ್ತವೆ. ಉದಾಹರಣೆಗೆ ಪಂಪನ 'ಆರ್ ಅಂಕುಸ(ರ?) ವಿಟ್ಟೊಡಂ' ಎಂಬ ಪ್ರಸಿದ್ಧ ಪದ್ಯವನ್ನು ಕನ್ನಡ ನಾಡು-ನುಡಿಯ ಅನುಮಾನದ ಹಿನ್ನೆಲೆಯಲ್ಲಿ ಯಾವಾಗಲು ಪ್ರಸ್ತುತ ಪಡಿಸಲಾಗುತ್ತದೆ. ಆದರೆ ಈ ಸಂಕಥನದಲ್ಲಿರುವ ಈ ಪದ್ಯ ಭಾಗ ಕುರಿತ ವಿಮರ್ಶೆ ನಮ್ಮನ್ನು ಹೊಸ ರೀತಿಯಲ್ಲಿ ಯೋಚಿಸುವಂತೆ ಮಾಡುತ್ತದೆ. ಇಲ್ಲಿನ ಈ ಪ್ರಬಂಧ ನಿಜಕ್ಕೂ ಕಣ್ತೆರೆಸುವಂಥದ್ದು, ಏಕೆಂದರೆ ಈ ಪದ್ಯ ಭಾಗ ಕನ್ನಡ ನಾಡು-ನುಡಿಗೆ ಮತ್ತು ಅದರ ಪ್ರೇಮಕ್ಕೆ ಸಂಬAಧಿಸಿದ ವಿಷಯದಲ್ಲಿ ಬನವಾಸಿ ತನಗೆ ಯಾವ ಯಾವ ಸಂದರ್ಭದಲ್ಲಿ ನೆನೆಪಾಗುತ್ತದೆ ಎಂದು ಕವಿ ಇಲ್ಲಿ ಹೇಳಿದ್ದಾನೆ. ಆರ್ ಎಂಬ ಮರ ಚಿಗುರಿದಾಗ ಅಥವಾ ಹೂ ಬಿಟ್ಟಾಗ ಬನವಾಸಿ ನೆನಪಾಗುತ್ತದೆ ಎಂದು ಕವಿ ಹೇಳಿರುವುದಾಗಿ ಪ್ರಬಂಧಕಾರರು ಮನ ಮುಟ್ಟುವಂತೆ ಪ್ರತಿಪಾದಿಸಿದ್ದಾರೆ. ಇದೇ ರೀತಿ ಹಳಗನ್ನಡಕ್ಕೆ ಸಂಬಂಧಿಸಿದಂತೆ ಹರಿಹರನ ಪುಷ್ಪರಗಳೆ, ಚಂದ್ರಮತಿಯ ವಿಲಾಪ, ವಚನಕಾರರು, ಸರ್ವಜ್ಞ ಮುಂತಾದ ಇನ್ನೂ ಕೆಲವು ಲೇಖನಗಳಿದ್ದು ಅವು ಕೂಡ ಗಮನಾರ್ಹವಾಗಿವೆ.

ಆಧುನಿಕ ಕನ್ನಡಕ್ಕೆ ಸಂಬಂಧಿಸಿದಂತೆ ಕಾದಂಬರಿಗಳು ಮತ್ತು ಕಾವ್ಯಗಳ, ದಲಿತ ಬಂಡಾಯ ಚಿಂತನೆಗಳ ಅವಲೋಕನ ಕೂಡ ಇದರಲ್ಲಿ ಸೇರ್ಪಡೆಯಾಗಿವೆ. ಮುಖ್ಯವಾಗಿ ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯ ಚಿಂತನೆ, ಗೋಪಾಲಕೃಷ್ಣ ಅಡಿಗ, ಕೆ.ವಿ ತಿರುಮಲೇಶ ಇವರ ಕಾವ್ಯಗಳನ್ನು ಕುರಿತ ಪ್ರಬಂಧಗಳು ಗಮನಾರ್ಹವಾಗಿವೆ. ಅದೇ ರೀತಿ ಹೊಸಗನ್ನಡದ ಕಾದಂಬರಿಗಳ ಬಗ್ಗೆ ಉತ್ತಮ ವಿವೇಚನೆಗಳಿವೆ. ಇದರಲ್ಲಿ ನಂಜನಗೂಡು ತಿರುಮಲಾಂಬ, ತ್ರಿವೇಣಿ, ಎಚ್. ನಾಗವೇಣಿ ಕಾದಂಬರಿಗಳ ಬಗ್ಗೆ ವಿಮರ್ಶೆಗಳಿವೆ. ಜೊತೆಗೆ ಜನಪದ ವೈದ್ಯ, ಆಚರಣೆ, ನಂಬಿಕೆ ಕುರಿತ ವಿಶ್ಲೇಷಣೆಗಳಿವೆ. ಈ ಎಲ್ಲ ಕಾರಣಕ್ಕೆ ಪ್ರಸ್ತುತ ಕೃತಿ ಎಲ್ಲ ಗ್ರಂಥಾಲಯಗಳಲ್ಲಿ ಮತ್ತು ಸಾಹಿತ್ಯ ಆಸಕ್ತರ ಪುಸ್ತಕ ಸಂಗ್ರಹದಲ್ಲಿ ಅನಿವಾರ್ಯವಾಗಿ ಸೇರಿಕೊಳ್ಳುವ ಅರ್ಹತೆಯನ್ನು ಪಡೆದುಕೊಂಡಿದೆ. ಕನ್ನಡ ಸಾಹಿತ್ಯ ಆಸಕ್ತರು ಈ ಕೃತಿಯನ್ನು ಗಮನಿಸದೇ ಹೋದಲ್ಲಿ ಅವರ ಸಾಹಿತ್ಯಾಧ್ಯಯನ ಅಪೂರ್ಣಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಇದರಲ್ಲಿ ಸೇರ್ಪಡೆಯಾಗಿರುವ ಲವಕುಮಾರ ಅವರ ರುಡಾಲಿ ಕುರಿತ ಪ್ರಬಂಧ ಗಮನಾರ್ಹವಾಗಿದೆ. ಹಿಂದಿ ಭಾಷೆಯ ಪರಿಸರದ ಸಂದರ್ಭವನ್ನು ಅಚ್ಚುಕಟ್ಟಾಗಿ  ಅವರು ಕನ್ನಡದಲ್ಲಿ ಮೂಡಿಸಿದ್ದಾರೆ. ಎಚ್. ನಾಗವೇಣಿ, ನಂಜನಗೂಡು ತಿರುಮಲಾಂಬ, ತ್ರಿವೇಣಿ, ಕಂಬಾರ, ಪಿ. ಲಂಕೇಶ್, ಮೊದಲಾದವರ ಕೃತಿಗಳ ವಿಮರ್ಶೆ ಇದೆ. ಈ ದೃಷ್ಟಿಯಿಂದ ಈ ಕೃತಿ ಕನ್ನಡ ಸಾಹಿತ್ಯ ಆಸಕ್ತರಿಗೆ, ಅಧ್ಯಾಪಕರಿಗೆ ಮತ್ತು ಸಂಶೋಧಕರಿಗೆ ಪರಾಮರ್ಶನ ಕೃತಿಯಂತೆ ಹೊರಬಂದಿದೆ. ಇದು ಗಮನಿಸಬೇಕಾದ ಸಂಗತಿ. ಈ ಕೃತಿಯನ್ನು ಗಮನಿಸಿದಾಗ ಒಂದು ಚಿಂತೆ ಕಾಡುತ್ತದೆ. ಕಳೆದ ಐದಾರು ದಶಕಗಳಿಂದ ಕರ್ನಾಟಕದ ಕೆಲವು ವಿಶ್ವವಿದ್ಯಾಲಯಗಳು ಅಧ್ಯಾಪಕರಿಗೆ ಇಂಥ ಶಿಬಿರಗಳನ್ನು ಏರ್ಪಡಿಸಿ ಅವರಿಂದ ಪ್ರಬಂಧಗಳನ್ನು ಮಂಡಿಸಿ ಪ್ರಮಾಣ ಪತ್ರ ಕೊಟ್ಟು ಕಳುಹಿಸುತ್ತಿವೆ. ಅಂಥ ಪ್ರಬಂಧಗಳು ಹೀಗೆ ಪುಸ್ತಕ ರೂಪದಲ್ಲಿ ಆಗಾಗ ಪ್ರಕಟವಾಗಿದ್ದರೆ ಕನ್ನಡ ಸಾಹಿತ್ಯ ಲೋಕಕ್ಕೆ ನಿಜವಾಗಲೂ ಅಪೂರ್ವ ಕೊಡುಗೆ, ಜೊತೆಗೆ ಆಯಾ ಕಾಲದ ಸಾಹಿತ್ಯ ಆಸಕ್ತರ ವಿಮರ್ಶೆಯ ದೃಷ್ಟಿಕೋನ ನಮಗೆ ಲಭಿಸುತ್ತಿತ್ತು. ಆದರೆ ಅದೆಲ್ಲ ಮುಗಿದ ಕಾಲ ಈಗ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಇಂಥದೊಂದು ಅಪೂರ್ವ ಕೆಲಸಕ್ಕೆ ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರ ಮುಂದಾಗಿ ಯಶಸ್ಸನ್ನು ಕಂಡಿದೆ. ಈ ಪ್ರಯತ್ನ ಉಳಿದ ವಿಶ್ವವಿದ್ಯಾನಿಲಯಗಳ ತರಬೇತಿ ಕೇಂದ್ರಗಳಿಗೆ ಮಾದರಿಯಾಗಲಿ ಜೊತೆಗೆ ಇಂಥ ಪ್ರಬಂಧಗಳನ್ನು ಈ ರೀತಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಪ್ರಯತ್ನ ಕಡ್ಡಾಯವಾಗಲಿ ಎಂದು ಹಾರೈಸಬಹುದು. ಇಂಥ ಪ್ರಯತ್ನದಿಂದ ಶಿಬಿರಾರ್ಥಿಗಳಲ್ಲಿ ಒಂದಿಬ್ಬರಾದರೂ ನಿರಂತರ ಬರವಣಿಗೆ ಮತ್ತು ಪ್ರಕಟಣೆಯಲ್ಲಿ ತೊಡಗಿಸಿಕೊಳ್ಳುವ ಪ್ರೇರೇಪಣೆ ದೊರಕಿದರೆ ಇದು ಸಾರ್ಥಕ ಪ್ರಯತ್ನ. ಇದರಿಂದ ಶಿಬಿರಾರ್ಥಿಗಳಿಗೆ ಶಿಬಿರದಲ್ಲಿ ಪ್ರಬಂಧ ಮಂಡಿಸಿದ ಹೆಗ್ಗಳಿಕೆಯ ಜೊತೆಗೆ ಅದು ಪುಸ್ತಕ ರೂಪದಲ್ಲಿ ಹೊರಬಂದ ಸಂತೋಷ ಕೂಡ ದೊರೆಯುತ್ತದೆ. ಈ ಕಾರಣದಿಂದ ಇದು ಶಿಬಿರಾರ್ಥಿಗಳಿಗೆ ಒಂದು ಅರ್ಥದಲ್ಲಿ 'ಡಬಲ್ ಧಮಾಕ' ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲ.

ಈ ಕೃತಿಯನ್ನು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ. ಮುನಿಯಪ್ಪ ಅವರು ಪ್ರಧಾನ ಸಂಪಾದಕರಾಗಿ ಹಾಗೂ ಬೆಳಗಾವಿ ವಿವಿಯ ಡಾ. ಪಿ ನಾಗರಾಜ ಮತ್ತು ಡಾ. ಗಜಾನನ ನಾಯ್ಕ ಅವರು ತುಂಬಾ ಶ್ರಮಪಟ್ಟು ದೋಷವಿಲ್ಲದಂತೆ ಅಚ್ಚುಕಟ್ಟಾಗಿ ಹೊರತಂದಿದ್ದಾರೆ. ಇವರನ್ನು ಸಾಹಿತ್ಯಾಸಕ್ತರು ಅಭಿನಂದಿಸಬೇಕಿದೆ. ಈ ಕೃತಿ ಕೇವಲ ಸಂಪಾದನಾ ಕೃತಿಯಲ್ಲ. ಇದಕ್ಕೆ ಗುಣಮಟ್ಟದ ಐಎಸ್‌ಬಿಎನ್ ಸಂಖ್ಯೆಯನ್ನು ಕೂಡ ಹಾಕಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಇದನ್ನು ಮೈಸೂರಿನ ರಚನಾ ಪ್ರಕಾಶನಕ್ಕೆ ಕನ್ನಡಿಗರು ಅಭಿನಂದನೆಯನ್ನು ಸಲ್ಲಿಸಬೇಕಿದೆ.

ಪುಸ್ತಕ ವಿವರ :

ಹೆಸರು : ಪ್ರಕಾರ ಕಥನ : ವಸ್ತು ಮತ್ತು ಬೆಳಕು

ಲೇಖಕರು: ಸಂಪಾದಕರು : ಡಾ. ಪಿ. ನಾಗರಾಜ ಮತ್ತು ಡಾ. ಗಜಾನನ ನಾಯ್ಕ

ಪ್ರಕಾಶಕರು : ರಚನ ಪ್ರಕಾಶ

ಪುಟ : ೨೬೦

ಬೆಲೆ : ೩೪೫

No comments:

Post a Comment