Sunday, 29 September 2024

ದಸರಾ ಮತ್ತು ಮಹಿಷ ಮಂಡಲೋತ್ಸವ - ವೈರುಧ್ಯಗಳು


ಈಚೆಗೆ ಪ್ರತೀ ವರ್ಷ ಮೈಸೂರಿನಲ್ಲಿ ನಾಡಿನ ಹೆಮ್ಮೆಯ ದಸರಾ ಶುರುವಾಗುವಾಗ ಪ್ರತಿಯಾಗಿ ಮಹಿಷ ಮಂಡಲೋತ್ಸವ ಹೆಸರಲ್ಲಿ ಸಾಂಪ್ರದಾಯಿಕ ಉತ್ಸವದ ವಿರುದ್ಧ ಕೂಗು ಕೇಳುತ್ತಿದೆ. ಆದರೆ ಈ ಬಾರಿ ಅದು ತೀವ್ರ ಸ್ವರೂಪ ಪಡೆಯುವ ನಿರೀಕ್ಷೆಗಳು ಮಹಿಷ ಮಂಡಲೋತ್ಸವ ಆಯೋಜಕರಿಂದ ಇದೀಗ ದೊರೆತಿದೆ. ಹಿಂದೆ ನಡೆದ ಪುರಾಣೋಕ್ತ ಸಮರ ಮತ್ತು ಘರ್ಷಣೆ ಮೈಸೂರಲ್ಲಿ ಮತ್ತೆ ನಡೆಯುವ ಸೂಚನೆಗಳು ಸಿಗುತ್ತಿವೆ. ನಿಜ. ಪುರಾಣಗಳಲ್ಲಿ ಅಸುರ ಶಕ್ತಿ ಸದಾ ಇರುತ್ತದೆ, ಅದು ಆಗಾಗ ಜಾಗೃತವಾಗುತ್ತದೆ ಎಂದು ಹೇಳಲಾಗಿದೆ. ಇವೆರಡೂ ಶಕ್ತಿಗಳಿಗೆ ಅಂತ್ಯವಿಲ್ಲ. ಅವುಗಳ ಅಂತ್ಯವೆAದರೆ ಅದು ಸೃಷ್ಟಿಯ ಅಂತ್ಯ. ಹಾಗಾಗಿ ಜೀವನ ಮುನ್ನಡೆಯಲು ಇಂಥ ಘರ್ಷಣೆ ನಡೆಯುತ್ತಿರುತ್ತದೆ.  ಇದನ್ನು ಶಿಷ್ಟ- ದುಷ್ಟ ಶಕ್ತಿಗಳ ಯುದ್ಧವೆಂದೂ ಕೊನೆಯಲ್ಲಿ ಗೆಲ್ಲುವುದು ಶಿಷ್ಟವೆಂದೂ ಪ್ರತಿಯಾಗಿ ಇವೆಲ್ಲ ಆರ್ಯ-ದ್ರಾವಿಡರ ಹೋರಾಟದ ಅಥವಾ ಪುರೋಹಿತಶಾಹಿಯ ಸೃಷ್ಟಿ ಎಂದೂ ಬೇರೆ ಬೇರೆ ರೀತಿಯ ವಾಗ್ವಾದಗಳಿವೆ. ಅದಿರಲಿ. ಆದರೆ ಇಂಥ ಚರ್ಚೆಗಳು ಹುಟ್ಟಿದ್ದು ನಮ್ಮ ದೇಶಕ್ಕೆ ವಸಾಹತುಶಾಹಿಗಳು ಕಾಲಿಟ್ಟ ಮೇಲೆ ಎಂಬುದನ್ನು ಗಮನಿಸಬೇಕು. ವಸಾಹತುಶಾಹಿಗಳು ಇಂಥ ಮಾತನ್ನು ನಮಗೆ ಕಲಿಸುವವರೆಗೆ ನಮ್ಮಲ್ಲಿ ಎಲ್ಲವೂ ಸರಿಯಾಗಿತ್ತಾ ಎಂಬುದಕ್ಕೂ ಇಂಥ ಮಾತು ಕಲಿತ ಮೇಲೆ ಎಲ್ಲ ಸರಿ ಆಯ್ತಾ ಎಂಬುದಕ್ಕೂ ಅಸಮಾಧಾನಕರ ಉತ್ತರವೇ ಸಿಗುತ್ತದೆ. 

ಸಾಂಪ್ರದಾಯಿಕ ದಸರಾ ಉತ್ಸವವನ್ನೇ ನೋಡಿ. ಅದಕ್ಕೆ ಪುರಾಣ ಮತ್ತು ಸಾವಿರಾರು ವರ್ಷಗಳ ಅಸಂಖ್ಯ ತಲೆಮಾರುಗಳ ನಂಬಿಕೆಯ ಬಲವಿದೆ. ಆದರೆ ಇದಕ್ಕೆ ಪ್ರತಿಯಾಗಿ ಸಾಧಿಸುತ್ತಿರುವ ಮಹಿಷ ಮಂಡಲೋತ್ಸವ ಎನ್ನಲಾದ ಪ್ರತಿಭಟನೆಗೆ ವಸಾಹತುಗಳು ಬಿಟ್ಟುಹೋದ ಮನಸ್ಸುಗಳನ್ನು ಛಿದ್ರಮಾಡುವ ಒಣ ತರ್ಕದ ಬಲವಷ್ಟೇ ಇದೆ. ಮುಖ್ಯವಾಗಿ ಈ ತರ್ಕ ಎಲ್ಲದಕ್ಕೂ ಇಂದ್ರಿಯ ಲಭ್ಯವಾದ ಸಾಕ್ಷಿಗಳನ್ನು ಕೇಳುತ್ತದೆ. ಮೂಲತಃ ನಂಬಿಕೆಗಳಿಗೆ ಇಂಥ ಸಾಕ್ಷಿ ಕೊಡಲು ಸಾಧ್ಯವಿಲ್ಲ ಎಂಬ ಕನಿಷ್ಠ ಜ್ಞಾನ ಇದಕ್ಕೆ ಇನ್ನೂ ದಕ್ಕಿಲ್ಲ. ಅಷ್ಟಕ್ಕೂ ನಂಬುವುದಿಲ್ಲ ಅನ್ನುವುದು ಕೂಡ ಒಂದು ನಂಬಿಕೆ ಎಂಬ ಅರಿವು ಕೂಡ ಈ ತರ್ಕಕ್ಕಿಲ್ಲ. ಇದನ್ನು ಇಲ್ಲಿ ಅವಲೋಕಿಸುವ ಯತ್ನವಿದೆ.

ನಮ್ಮ ಜಗತ್ತಿನಲ್ಲಿ ಸಮೃದ್ಧ ನಾಗರಿಕತೆಯ ಹಿನ್ನೆಲೆಯುಳ್ಳ ಎಲ್ಲ ಸಮುದಾಯಗಳಲ್ಲೂ ಪುರಾಣ ಕಥೆಗಳಿವೆ. ಅವು ನಮ್ಮ ಬದುಕನ್ನು ಹಸನುಗೊಳಿಸುತ್ತವೆ. ಜೊತೆಗೆ ಮಾನವ ಬದುಕಿನ ಅನೇಕ ಮಗ್ಗಲುಗಳ ಮೇಲೆ ಅಪಾರ ಪ್ರಭಾವ ಬೀರುತ್ತವೆ. ಮನುಷ್ಯ ಜೀವನ ಕೇವಲ ಉಂಡು ತಿಂದು ಮಲಗುವುದಕ್ಕಿರುವುದಲ್ಲ. ಆತನ ಸೃಜನ ಶೀಲತೆ ಅನೂಹ್ಯ. ಕಲೆ, ನೃತ್ಯ, ಸಂಗೀತ ಸಾಹಿತ್ಯ ಏನೆಲ್ಲ ರೂಪದಲ್ಲಿ ಅದು ಕಾಣಿಸಿಕೊಳ್ಳುತ್ತದೆ. ಮತ್ತೆ ಇವೆಲ್ಲ ಅಸಂಖ್ಯ ಉಪವಿಭಾಗ ಹೊಂದುತ್ತವೆ. ಮನುಷ್ಯನ ಜೀವನ ಇದರಲ್ಲಿ ಸಂಪೂರ್ಣ ತೊಡಗಿಸಿಕೊಂಡು ಸಾರ್ಥಕತೆ ಪಡೆಯುತ್ತದೆ. 

ಸಾಂಪ್ರದಾಯಿಕ ದಸರಾ ನಮ್ಮ ದೇಶಾದ್ಯಂತ ಬೇರೆ ಬೇರೆ ರಾಜ್ಯಗಳಲ್ಲಿ ಸಮುದಾಯಗಳಲ್ಲಿ ಕಲೆ ಸಂಸ್ಕೃತಿಯನ್ನು ಇನ್ನಿಲ್ಲದಂತೆ ಬೆಳೆಸಿದೆ, ಇದನ್ನು ಕುರಿತ ಅಸಂಖ್ಯ ಕತೆ ಪುರಾಣಗಳಿವೆ. ನೂರಾರು ರೀತಿಯ ರಮಾಯಣ ಇರುವಂತೆಯೇ ಅಸಂಖ್ಯ ವಿಧದಲ್ಲಿ ದೇವೀ ಕತೆಯೂ ಇದೆ. ಆದರೆ ಸಾಮಾನ್ಯವಾಗಿ ನಮಗೆ ಪರಿಚಿತವಾದುದು ವಾಲ್ಮೀಕಿ ರಾಮಾಯಣ ಹಾಗೂ ವೇದವ್ಯಾಸರು ಸಂಕಲಿಸಿದರೆಂದು ಹೇಳಲಾದ ದೇವೀಭಾಗವತ. ಇವಲ್ಲದೇ ಇವುಗಳ ಪಠ್ಯ ಉಪ ಪಠ್ಯಗಳು ಎಷ್ಟಿವೆ ಎಂಬ ಲೆಕ್ಕಾಚರವಿಲ್ಲ. ಆದರೆ ಇವೆಲ್ಲ ಸೇರಿ ನಮ್ಮ ದೇಶದಲ್ಲಿ ಸಮೃದ್ಧ ಸಂಪ್ರದಾಯ, ಆಚರಣೆ, ಕಲೆ ಸಂಗೀತಗಳನ್ನು ಸೃಷ್ಟಿಸಿವೆ ಎಂಬುದು ಸುಳ್ಳಲ್ಲ. ಇವೆಲ್ಲವುಗಳನ್ನು ನೆನಪಿಸಿಕೊಳ್ಳುವ ಸಂದರ್ಭ ಮೈಸೂರಿನ ಉತ್ಸವ. ಬಿಟ್ಟರೆ ಎಂದೋ ಬಿದ್ದುಹೋದ ಆರ್ಯ, ದ್ರಾವಿಡ ಸಿದ್ಧಾಂತ ಸ್ಥಾಪಿಸುವುದಲ್ಲ.

ಪಾಶ್ಚಾತ್ಯ ಸಂಪ್ರದಾಯ ವಿರೋಧಿ ಧೋರಣೆಯೇ ವೈಚಾರಿಕತೆ ಎಂದು ಭ್ರಮಿಸುವ ಚಿಂತಕರು ಒಂದು ವಿಷಯವನ್ನು ಗಮನಿಸುವುದಿಲ್ಲ. ಕೇವಲ ವಿರೋಧ ದಿಂದ ಪ್ರತಿ ಸೃಷ್ಟಿ ಆಗುವುದಿಲ್ಲ. ಅವರೆಲ್ಲ ತಮ್ಮ ವಿರೋಧದ ನಿಲುವಿಗೆ ಇದು ಮುರಿದು ಕಟ್ಟುವ ಕೆಲಸ ಎಂದು ಕರೆದುಕೊಳ್ಳುತ್ತಾರೆ. ಆದರೆ ಸದ್ಯ ಅವರು ಮಾಡುತ್ತಿರುವುದು ಕೇವಲ ಮುರಿಯುವ ಕೆಲಸವೇ ವಿನಾ ಕಟ್ಟುವುದು ಅಲ್ಲೇನೂ ಕಾಣುವುದಿಲ್ಲ. ಕಟ್ಟುವುದೆಂದರೆ ಅದು ಸೃಜನಶೀಲ ಕೆಲಸವಾಗಬೇಕು. ದೇವನೂರರ ಸಾಹಿತ್ಯವನ್ನು ನೋಡಿ. ಅವರು ಕೇವಲ ಸ್ಥಾಪಿತ ಪುರಾಣ ಪಠ್ಯಗಳನ್ನು ವಿರೋಧಿಸುವ ಬದಲಾಗಿ ದಲಿತ ಪುರಾಣಗಳನ್ನು ಕುಸುಮಬಾಲೆ ಹಾಗೂ ಒಡಲಾಳಗಳ ಮೂಲಕ ನೀಡಿದರು. ಅಂತೆಯೇ  ಕೆ. ಬಿ. ಸಿದ್ದಯ್ಯನವರು ಗಲ್ಲೆಬಾನಿ, ಬಕಾಲ, ದಕ್ಕಲ ಕಥೆ  ಮತ್ತಿತರ ಸಾಹಿತ್ಯಗಳ ಮೂಲಕ ಕಟ್ಟುವ ಕೆಲಸ ಮಾಡಿದರು. ಕಟ್ಟುವುದೆಂದರೆ ಇಂಥ ಸೃಜನಶೀಲ ಕೆಲಸ. ಚಿಂತನೆಯ ಹೆಸರಲ್ಲಿ ಎಲ್ಲ ಸ್ಥಾಪಿತ ಕ್ರಮಗಳನ್ನು ಮುರಿಯುವ ಕಡೆ ಹೀಗೆ ಕಟ್ಟುವ ಕೆಲಸ ನಡೆಯುತ್ತದೆಯಾ ಇಲ್ಲ. ಅಲ್ಲಿ ನಡೆಯುವುದು ಕೇವಲ ಮುರಿಯುವ ಇದ್ದುದನ್ನು ಹಾಳುಮಾಡುವ ಕೆಲಸ. ನಮ್ಮಿಂದಾದುದು ಇಷ್ಟು. ಉಳಿದುದನ್ನು ಮುಂದಿನವರು ಮಾಡಬೇಕು ಅನ್ನುವುದು ಅಂಥವರ ಸಹಜ ಉತ್ತರ. ಸಮಾಜಕ್ಕೆ, ಸಂಸ್ಕೃತಿಗೆ ಇಷ್ಟು ಸಾಕಾಗುವುದಿಲ್ಲ.


ಈಗ ಈ ಮಹಿಷ ಮಂಡಲೋತ್ಸವದ ಕತೆ ನೋಡಿ. ಇಲ್ಲಿರುವುದು ಬರೀ ವಿರೋಧ, ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಏನಾದರೂ ಅವರ ಬಳಿ ಇದೆಯಾ? ಇರುವುದೆಲ್ಲ. ಪಾಶ್ಚಾತ್ಯರ ತರ್ಕ ಸರಣಿ. ಸಂಪ್ರದಾಯ ವಿರೋಧಕ್ಕೆ ಬೇಕಾದ ಒಂದಿಷ್ಟು ಸಂಗತಿಗಳು. ಸಾಂಪ್ರದಾಯಿಕ ದಸರಾ ನೋಡಿ. ಅದರ ಆಚರಣೆ, ಕಲೆ ಸಂಗೀತಗಳ ವ್ಯಾಪ್ತಿ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್ ಹೀಗೆ ಎಲ್ಲ ಕಡೆಯಲ್ಲೂ ಭಿನ್ನ ಭಿನ್ನ ವೈಭವೋಪೇತ, ಅಲ್ಲಿನ ಜನ ಇವಕ್ಕೆ ಸಾವಿರಾರು ವರ್ಷಗಳ ಸಂಪ್ರದಾಯ ತೋರಿಸುತ್ತಾರೆ. ಆದರೆ ಇವನ್ನು ವಿರೋಧಿಸುವವರ ದೃಷ್ಟಿಯಲ್ಲಿ ಇವೆಲ್ಲ ಕೇವಲ ಮೌಢ್ಯ. ಆಗಲಿ ನೀವು ಕೂಡ ಇಂಥ ಮೌಢ್ಯಗಳನ್ನೇ ಜನ ಪರಿಪಾಲಿಸುವಂತೆ ರೂಪಿಸಿಕೊಡಿ ಅಂದರೆ ಇಲ್ಲ. ಸಮಸ್ಯೆ ಇರುವುದೇ ಇಲ್ಲಿ. ನಂಬಿಕೆ ಮತ್ತು ಮೌಢ್ಯಗಳನ್ನು ನಾವು ನಮ್ಮ ಬುದ್ಧಿಯ ನೇರಕ್ಕೆ ಹೇಳಿಕೊಳ್ಳಬಹುದು. ಒಬ್ಬನ ನಂಬಿಕೆ ಮತ್ತೊಬ್ಬನಿಗೆ ಮೌಢ್ಯವಾಗಬಹುದು. ಇದಕ್ಕೆ ಸಾರ್ವತ್ರಿಕ ನಿಯಮವಿಲ್ಲ. ಸಮಾಜ-ಸಂಸ್ಕೃತಿಯ ವಿಷಯದಲ್ಲಿ ವೈವಿಧ್ಯ ಬರುವುದೇ ಇಲ್ಲಿ. ಅದೇ ಸಾಂಸ್ಕೃತಿಕ ಸಮೃದ್ಧಿ. ಅದರ ಕೊರತೆ ವಿರೋಧಿಗಳಲ್ಲಿದೆ. ಇಂಥ ಬಲಿಷ್ಠ ಸಿದ್ಧತೆ ಮಾಡಿಕೊಂಡು ಸಂಪ್ರದಾಯವನ್ನು ಮುರಿಯಲು ಮುಂದಾಗಬೇಕು ಆಗ ಅದಕ್ಕೆ ಅರ್ಥ ಬರುತ್ತದೆ. ಸುಮ್ಮನೇ ವಿರೋಧ ಅಂದರೆ ಸಮಾಜ ಅದಕ್ಕೆ ಪರ್ಯಾಯ ಕೇಳುತ್ತದೆ. ಅದನ್ನು ಕೊಡುವವರು ಯಾರು? ಮೈಸೂರು ಗಸರಾದಲ್ಲಿ ನಡೆಯುವ ಸಾಂಸ್ಕೃತಿಕ ವೈವಿಧ್ಯವನ್ನು ಗಮನಿಸಿ. ಅಂಥ ಪರ್ಯಾಯವನ್ನು ವಿರೋಧಿಗಳು ಕೊಡಬಲ್ಲರಾ? ಆಗ ಮತ್ತೆ ಅವರು ನಮ್ಮ ಸಂಪ್ರದಾಯಕ್ಕೆ ಹಿಂದಿರುಗಬೇಕಾಗುತ್ತದೆ. ಸಾಂಪ್ರದಾಯಿಕ ದಸರಾ ಹಿಂದುಳಿದವರ, ಶೋಷಿತರ ಮೇಲಿನ ದೌರ್ಜನ್ಯದ ವೈಭವೀಕರಣ ಅನ್ನುತ್ತಾ ಆರ್ಯ ದ್ರಾವಿಡ ವಾದ ಮುಂದೆ ಮಾಡುವವರು ಆ ವಾದ ಈ ಪ್ರಪಂಚದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡು ಬಹಳ ಕಾಲವಾಯ್ತು ಎಂಬುದರ ಅರಿವಿಲ್ಲ, ಸದ್ಯ ನಾವೆಲ್ಲ ವೈಜ್ಞಾನಿಕ ದಾಖಲೆಗಳ ಆಧಾರದಲ್ಲಿ ಬದುಕುತ್ತಿದ್ದೇವೆ. ಅದೇ ವಿಜ್ಞಾನ ಆರ್ಯ-ದ್ರಾವಿಡ ವಾದಕ್ಕೆ ಅರ್ಥವಿಲ್ಲ ಎಂದು ಸಾಧಿಸಿದೆ. ಬಹಳ ಕಾಲವಾಯ್ತು. ಆದರೂ ಆರ್ಯ-ದ್ರಾವಿಡ ವಾದದ ಮೂಲಕ ತಮ್ಮ ಅಸ್ತಿತ್ವ ಕಂಡುಕೊಂಡವರು ಇವನ್ನೆಲ್ಲ ಕೇಳಿಸಿಕೊಳ್ಳಲು ತಯಾರಿಲ್ಲ.ವ್ಯಂಗ್ಯ ನೋಡಿ- ಸಂಸ್ಕೃತ ಆರ್ಯ ಭಾಷೆ. ಅದು ದ್ರಾವಿಡ ಭಾಷೆಗಳ ಮೇಲೆ ದಬ್ಬಾಳಿಕೆ ಮಾಡಿದೆ ಅನ್ನುವ ಈ ಚಿಂತಕರು ತಮ್ಮ ಪರ್ಯಾಯ ಅನ್ನಲಾದ ಉತ್ಸವಕ್ಕೆ ಮಹಿಷ ಮಂಡಲೋತ್ಸವ ಎಂಬ ಪಕ್ಕ ಸಂಸ್ಕೃತ ಹೆಸರು ಕೊಟ್ಟುಕೊಂಡಿದ್ದರೆ, ಸಂಪ್ರದಾಯಕ್ಕೆ ವಿರುದ್ಧ ದಸರಾ ಮಾಡುತ್ತೇವೆ ಅನ್ನುವ ಇವರಿಗೆ ಕಳೆದ ನಾಲ್ಕಾರು ವರ್ಷಗಳಿಂದ ವಿರೋಧಿಸುವ ಉತ್ಸಾಹ ಮಾತ್ರವಿದೆಯೇ ವಿನಾ ಸಾಂಪ್ರದಾಯಿಕ ದಸರಾ ಕೊಡುವಂತೆ ಅದಕ್ಕೆ ಪರ್ಯಾಯವಾದ ಕಲೆ ಸಂಸ್ಕೃತಿಗಳ ವೈಭವ ಕೊಡಲು ಸಾಧ್ಯವಾಗಿಲ್ಲ. ತಮಗೆ ಸಮಾಜ- ಜನತೆ ಬೆಂಬಲ ಕೊಡುತ್ತಿಲ್ಲವೆಂದರೆ ಅದಕ್ಕೆಲ್ಲ ಪುರೋಹಿತಶಾಹಿ ಕಾರಣ ಎಂಬುದಷ್ಟೇ ಗೊತ್ತಿದೆಯೇ ವಿನಾ ಉಪಯುಕ್ತ ಪರ್ಯಾಯವೆನಿಸಿದರೆ ಸಮಾಜ ಯಾವಾಗಲೂ ತನ್ನ ತೋಳು ಬಿಚ್ಚಿ ಆ ವಿಷಯವನ್ನು ಸ್ವಾಗತಿಸುತ್ತದೆ ಎಂಬುದು ತಿಳಿದಿಲ್ಲ. ಉದಾಹರಣೆಗೆ ಹೆಚ್ಚು ಸಂಕೀರ್ಣ ವಿಷಯ ಬೇಡ. ನಮ್ಮ ಬಟ್ಟೆ ಬರೆಯನ್ನೇ ನೋಡಿ. ಶತಮಾನಗಳ ಕಾಲ ಸೀರೆ ಪಂಚೆ ತೊಡುತ್ತಿದ್ದ ಸಮಾಜದ ಜನ ಅಗತ್ಯಕ್ಕೆ ತಕ್ಕಂತೆ ಪ್ಯಾಂಟು-ಶರಟು, ಚೂಡಿದಾರ್ ಗಳನ್ನು ಧರಿಸುತ್ತಿದೆ. ಸಾಂಪ್ರದಾಯಿಕ ದಸರಾ ಉತ್ಸವಕ್ಕೆ ಭವ್ಯವಾದ ಇತಿಹಾಸ ಇರುವಂತೆ ಭವ್ಯ ಆಧುನಿಕತೆಯೂ ಸೇರಿಕೊಂಡಿದೆ. ಒಮ್ಮೆ ದಸರಾ ಉತ್ಸವ ಕಂಡು ಅನುಭವಿಸಿದವರು ಕೇಳುವ ಮಾತು ಇಷ್ಟೇ-ಇಲ್ಲಿ ಏನುಂಟು ಏನಿಲ್ಲ ಎಂದು. ಈ ಕಾರಣಕ್ಕಾಗಿ ಯಾರು ಏನೇ ಹೇಳಿದರೂ ಸಮಾಜ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಈ ಪರ್ಯಾಯ ಉತ್ಸವದಲ್ಲಿ ಅಸೂಯೆ ಬಿಟ್ಟರೆ ಅದಕ್ಕೆ ಬೇರೇನೂ ಕಾಣುತ್ತಿಲ್ಲ. ಸಾಂಪ್ರದಾಯಿಕ ದಸರಾಕ್ಕೆ ಪರ್ಯಾಯವಾಗಿ ಅದಲ್ಕೆ ಸಮಾನ ಅನಿಸುವ ಅಥವಾ ಪುಆðಯ ಭವ್ಯ ಸಂಸ್ಕೃತಿ ಕಲೆಗಳನ್ನು ಇತ್ಯಾದಿಗಳನ್ನು ತೆರೆದು ತೋರಿಸಲಿ. ಆಗ ಸಮಾಜ ಸಹಜವಾಗಿ ಯಾವ ಕಡೆ ಹೋಗುತ್ತದೆ ನೋಡೋಣ. 

 

 




Wednesday, 25 September 2024

ಎಲ್ಲರೊಳಗೊಂದಾಗಿಯೂ ತಮ್ಮತನ ಮರೆಯದ ಹವ್ಯಕರು


ಇದೀಗ ಬೆಂಗಳೂರಿನಲ್ಲಿ ಹವ್ಯಕ ಸಮಾವೇಶ ನಡೆದಿದೆ. ಮುಂಬರುವ ಡಿಸೆಂಬರ್ ೨೭, ೨೮ ಮತ್ತು ೨೯ ರಂದು ಜಾಗತಿಕ ಸಮಾವೇಶ ಜರುಗಲಿದೆ. ಈ ಹಿನ್ನೆಲೆಯಲ್ಲಿ ಹವ್ಯಕರ ಪರಿಚಯದ ಒಂದು ಯತ್ನ.

ಈಗಾಗಲೇ ಅಮೆರಿಕ ಮೊದಲಾದ ಕಡೆ ಜಾಗತಿಕ ಸಮ್ಮೇಳನ ಹಿಂದೆ ನಡೆದಿದೆ. ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಹವ್ಯಕ ಸಮುದಾಯದ ಜನ ತಮ್ಮದೇ ಸಾಹಿತ್ಯ, ಸಂಸ್ಕೃತಿಗಳನ್ನು ಇಂದಿಗೂ ಕಾಪಿಟ್ಟುಕೊಂಡು ಬಂದಿರುವುದಲ್ಲದೇ ಆಧುನಿಕ ಸಮಾಜದ ಮುಂಚೂಣಿ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ. ಇಂಥದ್ದೊಂದು ಕ್ಷೇತ್ರದಲ್ಲಿ ಹವ್ಯಕರು ಇನ್ನೂ ಇಲ್ಲ ಎಂದಿಲ್ಲ. ಅಷ್ಟರ ಮಟ್ಟಿಗೆ ಆ ಸಮುದಾಯ ಬೆಳೆದಿದೆ. ಸದ್ಯ ಹವ್ಯಕರ ಜನಸಂಖ್ಯೆ ಪ್ರಪಂಚಾದ್ಯಂತ ೧೧ ಲಕ್ಷದಷ್ಟಿದೆ ಎಂದು ಲೆಕ್ಕಹಾಕಲಾಗಿದೆ. ಮೂಲತಃ ಹವ್ಯಕರು ೩ನೆಯ ಶತಮಾನದ ವೇಳೆಗೆ ಮಯೂರ ವರ್ಮನ ಆಡಳಿತ ಸಂದರ್ಭದಲ್ಲಿ (೩೪೫-೩೬೫) ಧಾರ್ಮಿಕ ಚಟುವಟಿಕೆ ನಡೆಸಲು ಕಾಶ್ಮೀರದಿಂದ ಕರೆತಂದ ಜನ ಎಂದು ಹೇಳಲಾಗುತ್ತದೆ. ಹವ್ಯಕರಿಗೆ ಸಂಬಂಧಿಸಿದ ಪ್ರಾಚೀನ ಉಲ್ಲೇಖಗಳು ಪುರಾಣೋಕ್ತ ಸಹ್ಯಾದ್ರಿ ಕಾಂಡದಲ್ಲಿ ಸಿಗುತ್ತದೆ. ವಿದ್ವಾಂಸರಾದ ಸೇಡಿಯಾಪು ಕೃಷ್ಣ ಭಟ್ ಹಾಗೂ ಎನ್ ರಂಗನಾಥ ಶರ್ಮರು ಹವ್ಯಕ ಎಂಬ ಶಬ್ದವನ್ನು ಸಂಸ್ಕೃತದ ಅಹಿಚ್ಛತ್ರ ಮೂಲಕ್ಕೂ ಹವ್ಯಕ ಎಂಬುದು ಪವಿತ್ರ ಯಜ್ಞದಲ್ಲಿ  ಹವಿಸ್ಸನ್ನು ಅರ್ಪಿಸುವವರು ಎಂಬುದರಿಂದ ಬಂದಿದೆ ಎಂದು ಹೇಳುತ್ತಾರೆ. ಸದ್ಯ ಎಲ್ಲರೂ ವ್ಯಾಪಕವಾಗಿ ಒಪ್ಪಿದ ಮಾತು ಇದು. ಹವ್ಯಕ ಸಮುದಾಯ ಭಾರತದಲ್ಲಿರುವ ೪೩೦ಕ್ಕೂ ಹೆಚ್ಚು ಬ್ರಾಹ್ಮಣ ಪಂಗಡಗಳಲ್ಲಿ ಒಂದಾಗಿದೆ. ಮಾತ್ರವಲ್ಲ, ಈ ಸಮುದಾಯಕ್ಕೆ ಅದರದೇ ಆದ ಭಾಷೆಯೂ ಇದೆ.ಈ ಭಾಷೆಯ ಶಬ್ದಕೋಶವೂ ಇದೆ. ಅಂತರ್ಜಾಲದಲ್ಲಿ ಹವ್ಯಕ ಇಂಗ್ಲಿಷ್ ಶಬ್ದಕೋಶವೂ ಲಭ್ಯವಿದೆ. ಹೀಗೆ ಅತ್ಯಂತ ಶ್ರೀಮಂತ ಪರಂಪರೆಯ ಈ ಸಮುದಾಯ ಪ್ರಪಂಚಾದ್ಯಂತ ಹರಡಿದ್ದು ಆಗಾಗ ಸಮ್ಮೇಳನಗಳ ನೆಪದಲ್ಲಿ ಒಂದು ಕಡೆ ಸೇರುತ್ತದೆ. ಹವ್ಯಕರ ಆಹಾರ ವಿಧಾನಕೂಡ ವಿಶಿಷ್ಟವಾದುದು. ಪ್ರಾಥಮಿಕವಾಗಿ ಸಸ್ಯಾಹಾರಿಗಳಾದ ಇವರು ಅದರಲ್ಲೂ ಅತ್ಯಂತ ಸರಳ ಎನಿಸುವ ಆಹಾರ ಪದಾರ್ಥಗಳನ್ನು ಬಳಸುತ್ತಾರೆ. ಮುಖ್ಯವಾಗಿ ಹಸಿರು ತರಕಾರಿ ಅಥವಾ ಸೊಪ್ಪಿನ ಪದಾರ್ಥ ಇವರಿಗೆ ಅಚ್ಚುಮೆಚ್ಚು. ಸಾಮಾನ್ಯವಾಗಿ ಇವರು ತಮ್ಮ ಅಡುಗೆಗೆ ಬೇಕಾದ ಬಹುತೇಕ ಪದಾರ್ಥಗಳನ್ನು ತಮ್ಮ ಮನೆಯ ಹಿತ್ತಿಲಲ್ಲೇ ಬೆಳೆದುಕೊಳ್ಳುತ್ತಾರೆ. ಪ್ರಧಾನವಾಗಿ ಕುಲಕಸುಬು ಎಂಬಂತೆ ಬಹುತೇಕ ಹವ್ಯಕ ಕುಟುಂಬಗಳು ಕೃಷಿಯನ್ನು ನೆಚ್ಚಿಕೊಂಡಿವೆ. ಅದರಲ್ಲೂ ಉತ್ತರ , ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಮುಖವಾಗಿರುವ ಅಡಕೆ ಹಾಗೂ ಬತ್ತದ ಕೃಷಿಯನ್ನು ಹೆಚ್ಚಾಗಿ ಮಾಡುತ್ತಾರೆ. ಅಡಕೆಯ ಜೊತೆಗೆ ಅದಕ್ಕೆ ಪೂರಕವಾಗುವ ಹಲಸು, ಏಲಕ್ಕಿ, ಕಾಳುಮೆಣಸು, ಬಾಳೆ, ತೆಂಗು ಮುಂತಾದ ಉಪ ಬೆಳೆಗಳನ್ನೂ ತೆಗೆಯುತ್ತಾರೆ. ಹವ್ಯಕರಲ್ಲಿ ಪ್ರಧಾನವಾಗಿ ಶೈವ ಪಂಥ ಅನುಸರಿಸುವ ಸ್ಮಾರ್ತರಿದ್ದು ಇವರು ಋಗ್ವೇದ, ಯಜುರ್ವೇದ ಹಾಗೂ ಸಾಮವೇದ ಕ್ರಮದವರಿದ್ದಾರೆ. ಶೃಂಗೇರಿ ಹಾಗೂ ಸೋಂದಾ, ರಾಮಚಂದ್ರಾಪುರ ಮಠ ಮುಂತಾದ  ಶ್ರೀಮಠಗಳಿಗೆ, ಅಂತೆಯೇ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳ ಕಾಸರಗೋಡು ಭಾಗದವರು ಉಡುಪಿ ಮಠಗಳಿಗೆ ಹೆಚ್ಚಾಗಿ ನಡೆದುಕೊಳ್ಳುವರು.

ಇವರು ಆರ್ಥಿಕವಾಗಿ ಸಬಲರು, ಶ್ರಮಜೀವಿಗಳು. ದಿನದ ಎರಡು ಹೊತ್ತು ಊಟಮಾಡುವರು. ಬೆಳಿಗ್ಗೆ ಉಪಾಹಾರ ಮಾಡುವರು. ಕೆಲವರು ಸಂಜೆಯ ವೇಳೆ ಕೂಡ ಉಪಾಹಾರ ಸೇವಿಸುವುದುಂಟು. ಸಸ್ಯಾಹಾರಿಗಳೂ ಸಂಪ್ರದಾಯನಿಷ್ಠರೂ ಆದ ಈ ಸಮುದಾಯದವರಲ್ಲಿ ಆಹಾರ ವೈವಿಧ್ಯಗಳಿಂದ ಕೂಡಿದೆ. ಸಾಮಾನ್ಯ ಆಹಾರ ಪದ್ಧತಿ ಸಸ್ಯಾಹಾರಿಗಳ ಆಹಾರ ಕ್ರಮದಂತೆ ಇರುತ್ತದೆ. ಆದರೆ ಕೆಲವು ಹಬ್ಬಗಳಲ್ಲಿ, ಸಮಾರಂಭಗಳಲ್ಲಿ ಮತ್ತು ಋತುಮಾನಕ್ಕನುಸಾರವಾಗಿ ಆಹಾರಗಳ ಬಳಕೆ ಭಿನ್ನವಾಗುತ್ತದೆ. 

ಇವರ ವೃತ್ತಿ ವ್ಯವಸಾಯ. ಸಾಂಪ್ರದಾಯಿಕ ಶೈಲಿಯಲ್ಲಿ ಬತ್ತ, ಕಬ್ಬು, ಅಡಕೆಗಳನ್ನು ಬೆಳೆಯುತ್ತಾರೆ. ಬತ್ತದ ಕೊಯ್ಲು ಜನವರಿ - ಫೆಬ್ರವರಿ ವೇಳೆಯಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಹೊಸಕ್ಕಿ (ಹೊಸ+ ಅಕ್ಕಿ) ಹಬ್ಬವನ್ನು ಆಚರಿಸುವರು. ಬೆಳೆದು ಕೊಯ್ಲಿಗೆ ಬಂದ ಬತ್ತದ ತೆನೆಯನ್ನು ಪ್ರತ್ಯೇಕವಾಗಿ ತಂದು ಕೈಯಲ್ಲಿ ಕುಟ್ಟಿ ಅಕ್ಕಿಯನ್ನು ಮಾಡಿ ಆ ಅಕ್ಕಿಯನ್ನು ಹಳೆ ಅಕ್ಕಿಯೊಂದಿಗೆ ಬೆರೆಸಿ ಚುರು ಮತ್ತು ಅಕ್ಕಿ ಪಾಯಸವನ್ನು ಮಾಡಿ ಕುಲದೇವರಿಗೆ ಪೂಜಿಸಿ ಸೇವಿಸುವರು. ಅಕ್ಕಿಯ ಪಾಯಸಕ್ಕೆ ಸಣ್ಣಕ್ಕಿ ಶ್ರೇಷ್ಠವೆಂದು ತಿಳಿಯಲಾಗುತ್ತದೆ. ಆ ಅಕ್ಕಿಯಿಂದ ಮಾಡುವ ಒಂದು ಬಗೆಯ ಸುವಾಸನೆ ಪಾಯಸಕ್ಕೆ ಸಹಜ ರುಚಿಯನ್ನು ತರುತ್ತದೆ. ಅಕ್ಕಿ ಪಾಯಸಕ್ಕೆ ಬೆಲ್ಲವನ್ನು ಬೆರೆಸಲಾಗುತ್ತದೆ. ಸಕ್ಕರೆಯನ್ನು ಬಳಸುವುದು ನಿಷಿದ್ಧ. ಪಾಯಸವನ್ನು ತಯಾರಿಸಲು ಸಣ್ಣಕ್ಕಿ ದೊರಕದಿದ್ದಲ್ಲಿ ಸಣ್ಣಕ್ಕಿ ಎಲೆಯನ್ನು ಪಾಯಸಕ್ಕೆ ಬಳಸುವರು. ಸಣ್ಣಕ್ಕಿ ಎಲೆ ಸಾಮಾನ್ಯವಾಗಿ ತೋಟದ ಬದಿಯ ಜೌಗು ಮಣ್ಣಿನಲ್ಲಿ ಸಹಜವಾಗಿ ಬೆಳೆದುಕೊಂಡಿರುತ್ತದೆ. ಅದು ಬೆಳೆಯದಿದ್ದಲ್ಲಿ ಉದ್ದೇಶಪೂರ್ವಕವಾಗಿ ತಂದು ಬೆಳೆಸಲಾಗುತ್ತದೆ. ಇದು ಒಂದು ಬಗೆಯ ಕೇದಗೆ ಜಾತಿಯ ಪುಟ್ಟ ಗಿಡ. ಮುಳ್ಳಿಲ್ಲದ ಅನಾನಸ್ ಗಿಡದಂತಿರುತ್ತದೆ. ಎಲೆಯ ಆಕಾರ, ಬಣ್ಣ, ಒಟ್ಟೂ ಸ್ವರೂಪ ಅನಾನಸನ್ನು ಹೋಲುತ್ತದೆ. ಎಲೆ ಅತ್ಯಂತ ಸುವಾಸಿತವಾಗಿದ್ದು, ಬೆಳೆದ ಎಲೆಯ ಒಂದೆರಡು ಚೂರುಗಳು ಸಾಮಾನ್ಯ ಅಕ್ಕಿಯೊಂದಿಗೆ ಬೆಂದಾಗ ಸಣ್ಣಕ್ಕಿಯ ಸುವಾಸನೆಯನ್ನು, ರುಚಿಯನ್ನು ತರುತ್ತದೆ. ಹೊಸಕ್ಕಿ ಹಬ್ಬದಲ್ಲಿ ಇನ್ಯಾವ ವಿಶೇಷ ತಿಂಡಿ ತಿನಿಸುಗಳನ್ನು ಮಾಡದಿದ್ದರೂ ಅಕ್ಕಿ ಪಾಯಸವಂತೂ ಕಡ್ಡಾಯ. ಕೃಷಿಕರಾದ ಇವರಿಗೆ ಹೊಸಕ್ಕಿ ಹಬ್ಬವೇ ವರ್ಷದ ಮೊದಲ ಹಬ್ಬ. 

ಚೌತಿ ಹಬ್ಬ ಇನ್ನೊಂದು ಪ್ರಮುಖ ಹಬ್ಬ.  ಹವ್ಯಕರ ಆರಾಧ್ಯ ದೈವಗಳಲ್ಲಿ ಗಣೇಶನೂ ಒಬ್ಬ. ಗಣೇಶನನ್ನು ಬಿಟ್ಟು ಹವ್ಯಕರ ಯಾವುದೇ ಕರ್ಮಕಾಂಡೋಕ್ತಿಗಳಿಲ್ಲ. ತಮ್ಮ ಜೀವಿತವೇ ಗಣೇಶನ ಅವಲಂಬನೆಯಲ್ಲಿದೆ ಎಂದು ಹವ್ಯಕ್ರು ನಂಬುತ್ತಾರೆ. ಜೀವಕ್ಕೆ ಜಲವೇ ಮೂಲ. ಜಲತತ್ತ್ವದ ಅಧಿಪತಿ ಗಣಪತಿ. ಜೀರ್ಣಾಂಗ ವ್ಯೂಹಕ್ಕೂ ಅವನೇ ಅಧಿಪತಿ. ರೋಗಗಳ ಚಿಕಿತ್ಸೆಗೆ ಮುನ್ನ ಮತ್ತು ಅನಂತರ ಗಣಪತಿಯನ್ನು ಸ್ತುತಿಸಲಾಗುತ್ತದೆ. ಆಹಾರವೇ ಆರೋಗ್ಯಕ್ಕೂ ಅನಾರೋಗ್ಯಕ್ಕೂ ಕಾರಣ. ಇದನ್ನು ನಿಗ್ರಹಿಸುವವ ಗಣೇಶ ಅಥವಾ ಗಣಪತಿ. ಹೀಗಾಗಿ ಗಣಪತಿಯ ಆರಾಧನೆಯಲ್ಲಿ ಸಮಗ್ರ ಆಹಾರ ವಿಜ್ಞಾನವಿದೆ ಎಂಬುದು ಹವ್ಯಕರ ನಂಬಿಕೆ.

ಇದರಿAದಾಗಿ ಚೌತಿ ಹಬ್ಬವನ್ನು ಅತ್ಯಂತ ಸಡಗರ ಸಭ್ರಮಗಳಿಂದ ಆಚರಿಸಲಾಗುತ್ತದೆ. ಗಣೇಶನ ಹಬ್ಬಕ್ಕೆ ಒಂದು ತಿಂಗಳು ಇರುವಂತೆಯೇ ಹಬ್ಬಕ್ಕೆ ತಯಾರಿ ನಡೆಯುತ್ತದೆ. ಮನೆಯನ್ನು, ಮನೆಯ ಆವರಣವನ್ನು ಚೊಕ್ಕಟಗೊಳಿಸುವುದು ಇತ್ಯಾದಿಗಳು  ಒಂದೆಡೆ ನಡೆಯುತ್ತಿರುತ್ತವೆ. ಮನೆಯ ಅಲಂಕರಣ ಗಂಡಸರಿಗೆ ಬಿಟ್ಟ ಜವಾಬ್ದಾರಿ. ಇದೇ ಸಂದರ್ಭದಲ್ಲಿ ಮಹಿಳೆಯರು ಚಕ್ಕುಲಿಯನ್ನು ತಯಾರಿಸುವ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಹಬ್ಬಕ್ಕೆ ಒಂದುವಾರ ಇರುವಷ್ಟರಲ್ಲಿ ಚಕ್ಕುಲಿಯನ್ನು ಭದ್ರವಾಗಿ ಡಬ್ಬ ತುಂಬಿ ಇಡಲಾಗುತ್ತದೆ. ಹಬ್ಬದ ದಿನ ಮಡಿಯುಟ್ಟ ಮಹಿಳೆಯರು ಪೂಜೆಗಾಗಿ ಪ್ರತ್ಯೇಕವಾಗಿ ಚಕ್ಕುಲಿ, ಕರ್ಜಿಕಾಯಿ, ಕಡಬು, ಅತ್ರಾಸ, ಪಂಚಕಜ್ಜಾಯ, ಪಾಯಸ, ಮೋದಕ ಇತ್ಯಾದಿಯಾಗಿ ಇಪ್ಪತ್ತೊಂದು ಬಗೆಯ ತಿಂಡಿ ತಿನಿಸುಗಲನ್ನು ಸಿದ್ಧಪಡಿಸುತ್ತಾರೆ. ಇವುಗಳನ್ನು ಬಿಟ್ಟು ಅನ್ನ ಮತ್ತು ಇತರೆ ನೆಂಚಿಕೆಗಳು ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಇಪ್ಪತ್ತೊಂದು ಬಗೆಯ ವಿಶೇಷಗಳನ್ನು ತಯಾರಿಸುವುದು ರೂಢಿ ತಪ್ಪುತ್ತಿದ್ದರೂ ತೀರ ಸಂಪ್ರದಾಯಸ್ಥರು ಪ್ರಾಚೀನ ಕ್ರಮವನ್ನು ಕೈಬಿಟ್ಟಿಲ್ಲ. 

ಹಬ್ಬದ ಹಿಂದಿನ ದಿನ ತದಿಗೆಯಂದು ತಮ್ಮ ಮನೆಯ ಹಿತ್ತಲು, ಗದ್ದೆ, ತೋಟಗಳಲ್ಲಿ ಬೆಳೆದ ಯಾವುದೇ ಹೊಸ ಫಲವನ್ನು ದೇವರ ಮುಂದೆ ಕಟ್ಟುತ್ತಾರೆ. ಇದನ್ನು ಫಲಾವಳಿ ಎಂದು ಕರೆಯುವರು. ತಾವು ಬೆಳೆದ ಯಾವುದೇ ಹೊಸ ಫಲವನ್ನು ಫಲಾವಳಿಗೆ ಹಾಕಿದ ತರುವಾಯವೇ ಬಳಸುವುದು ಒಂದು ಕ್ರಮ. ಫಲಾವಳಿಯಲ್ಲಿ ಬಾಳೆ, ತೆಂಗು, ಸೌತೆಕಾಯಿಗಳು ಸಾಮಾನ್ಯವಾಗಿರುತ್ತವೆ. ಮಾರನೆಯ ದಿನ ಬೆಳಿಗ್ಗೆ ಉಪವಾಸ ಆಚರಿಸುವ ಗಂಡಸರು ಮಡಿಯಲ್ಲಿ ಗಣೇಶನಿಗೆ ಪೂಜಿಸಿದ ತರುವಾಯ ಎಲ್ಲ ಇಪ್ಪತ್ತೊಂದು ಬಗೆಯ ಖಾದ್ಯಗಳ ನೈವೇದ್ಯ ನಡೆಯುತ್ತದೆ. ತರುವಾಯ ಮನೆಯ ಸದಸ್ಯರು ನೆಂಟರು ಇಷ್ಟರು ಊಟ ಮಾಡುತ್ತಾರೆ. ನೆಂಚಿಕೆಗೆ ಕೆಸುವಿನ ಪಲ್ಯ ಮತ್ತು ಮೋಡ ಹಾಗಲಕಾಯಿ ಹಸಿ ಕಡ್ಡಾಯವಾಗಿರುತ್ತದೆ. 

ಚೌತಿಯ ದಿನದ ಊಟಕ್ಕೆ ಅಂದೆ ಮಡಿಯುಟ್ಟು ತಯಾರಿಸಿದ ಖಾದ್ಯಗಳು ಪ್ರಸಾದ ರೂಪದಲ್ಲಿರುತ್ತವೆ. ಕರ್ಜಿಕಾಯಿ ಮತ್ತು ಚಕ್ಕುಲಿಗಳನ್ನು ವಾರದ ಹಿಂದೆ ಸಿದ್ಧವಾಗಿಟ್ಟರೂ ಪೂಜೆ ನೈವೇದ್ಯಗಳ ತರುವಾಯವೇ ಅವುಗಳನ್ನು ಬಳಸಲಾಗುವುದು. ಮಾರನೆಯ ದಿನ ಪಂಚಮಿಯಂದು ಅಕ್ಕಿಯ ರೊಟ್ಟಿ (ಸಪ್ಪೆ) ಮತ್ತು ಕಾಯಿ ಕಡುಬುಗಳನ್ನು ತಯಾರಿಸುವರು. ಅಂದು ಮಧ್ಯಾಹ್ನದ ವೇಳೆಯಿಂದ ಭಿಕ್ಷಾಟನೆಗೆ ಬರುವವರು ಬಂದು ಚಕ್ಕುಲಿ, ಕರ್ಜಿಕಾಯಿಗಳನ್ನು ಪಡೆದು ಹೋಗುತ್ತಾರೆ. ಚೌತಿಯ ವೇಳೆ ಯಾರಿಗಾದರೂ ಆಹಾರ ದಾನ ಮಾಡದಿದ್ದರೆ ಪೂಜೆಯ ಫಲವಿಲ್ಲ ಎಂದು ನಂಬುತ್ತಾರೆ.  

ನಾಗರ ಪಂಚಮಿಯಂದು ಅಕ್ಕಿಯ ಸಪ್ಪೆರೊಟ್ಟಿಯನ್ನು ನಾಗದೇವರಿಗೆ ಎಡೆ ಇಡುವರು. ಅಕ್ಕಿಯ ಹಿಟ್ಟು ಮತ್ತು ಆಕಳ ಹಸಿ ಹಾಲನ್ನು ಹುತ್ತಕ್ಕೆ ಸುರಿಯುವರು. ನೈವೇದ್ಯವಾದ ಸಪ್ಪೆ ರೊಟ್ಟಿಯನ್ನು ಊಟದ ಜೊತೆ ಪ್ರಸಾದ ರೂಪದಲ್ಲಿ ಸೇವಿಸುವರು. ಅಕ್ಕಿ ಪಾಯಸದ ಊಟವನ್ನು ಅಂದು ಮಾಡಲಾಗುತ್ತದೆ. 

ದೀಪಾವಳಿ ಹಬ್ಬದಂದು ಹೋಳಿಗೆ, ಸಿಹಿ ಕಡಬು ಮತ್ತು ಪಾಯಸಗಳನ್ನು ಮಾಡಿ ಸೇವಿಸುವರು. ನೆಂಚಿಕೆಗೆ ಕೆಸುವಿನ ದಂಟಿನ ಸಾಸಿವೆ ಮತ್ತು ಬಾಳೆಕಾಯಿಯ ಪಲ್ಯ ಕಡ್ಡಾಯವಾಗುರುತ್ತದೆ. 

ಭೂಮಿ ಹುಣ್ಣಿಮೆ ಇನ್ನೊಂದು ಪ್ರಮುಖವಾದ ಸಂದರ್ಭ. ಸಿಹಿ ಊಟದ ಜೊತೆಗೆ ಹತ್ತಂಬರವೆ (ದಂಟಿನ ಸೊಪ್ಪಿನಂಥ ಸಸ್ಯ ಎಲೆಯ ಮುಂಬಾಗ ದಟ್ಟ ಹಸಿರು ಹಾಗೂ ಹಿಂಭಾಗ ದಟ್ಟ ಕೆಂಪು ವರ್ಣದಿಂದ ಕೂಡಿರುತ್ತದೆ) ಸೊಪ್ಪಿನ ಸಾಸಿಮೆ, ಪಲ್ಯದ ಬಳಕೆ ಕಡ್ಡಾಯ. ಅನ್ನ, ಅಕ್ಕಿ, ಹತ್ತಂಬರವೆ ಸೊಪ್ಪು ಮತ್ತು ಬೆಲ್ಲ ಬೆರೆಸಿದ ಕಡುಬನ್ನು ಕಾಗೆಗೆ ಎಡೆ ಹಾಕಲಾಗುತ್ತದೆ. ಗೋವೆಕಾಯಿ (ಸಿಹಿ ಕುಂಬಳ) ಮತ್ತು ಮೊಗೆಕಾಯಿ (ಮಂಗಳೂರು ಸೌತೆಕಾಯಿ)ಗಳ ಕಡಬು ಕಡ್ಡಾಯ.

ಮೇಲೆ ಉಲ್ಲೇಖಿಸಿದ ಹಬ್ಬಗಳನ್ನು ಬಿಟ್ಟರೆ ಹವ್ಯಕರಲ್ಲಿ ಆಹಾರ ನಿಷೇಧಗಳಿರುವ ಪ್ರಮುಖ ಹಬ್ಬಗಳು ಕಂಡುಬರುವುದಿಲ್ಲö. ಕೃಷ್ಣ ಜನ್ಮಾಷ್ಟಮಿ, ನವರಾತ್ರಿ, ಯುಗಾದಿ ಮುಂತಾದ ಸಂದರ್ಭಗಳಲ್ಲಿ ಯಾವುದೇ ಬಗೆಯ ಸಿಹಿಯೂಟವನ್ನು ಮಾಡಬಹುದು. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಅವಲಕ್ಕಿಯ ಸೇವನೆ ಕಡ್ಡಾಯ. ಯುಗಾದಿಯಂದು ಬಯಲು ಸೀಮೆಯಿಂದ ತರಿಸಿದ ಬೇವಿನ ಎಲೆ ಅಥವಾ ಜಂತಲೆ ಮರದ ಚಕ್ಕೆಯನ್ನು (ತೊಗಟೆ) ಬೆಲ್ಲದೊಂದಿಗೆ ಬೆರೆಸಿ ಊಟಕ್ಕೆ ಮೊದಲು ತುಸು ಸೇವಿಸುವುದು ಕೂಡ ಕಡ್ಡಾಯ.

ತಿಥಿ ಅಥವಾ ಶ್ರಾದ್ಧಗಳಂದು ತೊಂಡೆಕಾಯಿ, ಬಾಳೆಕಾಯಿ, ಬಾಳೆಯ ಒಳ ತಿರುಳಿನ ಪಲ್ಯ, ಕುಂಬಳ, ಬದನೆ, ಎಳ್ಳು, ಹೆಸರುಕಾಳು, ಉದ್ದು ವಿಶೇಷವಾಗಿ ಬಳಕೆಯಾಗುತ್ತವೆ. ಟೊಮೆಟೋ ಬಳಕೆ ಶ್ರಾದ್ಧಾದಿ ಸಂಪ್ರದಾಯಗಳಲ್ಲಿ ನಿಷಿದ್ಧ. ತೊಂಡೆಕಾಯನ್ನು  ಸಾಮಾನ್ಯ ದಿನಗಳಲ್ಲಿ ಸಂಪ್ರದಾಯಸ್ಥರು ಬಳಸುವುದಿಲ್ಲ. ನುಗ್ಗೆಕಾಯಿ, ನೀರುಳ್ಳಿ, ಬೆಳ್ಳುಳ್ಳಿ ಕೂಡ ಇದೇ ಗುಂಪಿಗೆ ಸೇರುತ್ತವೆ. 

ಸಾಮಾನ್ಯ ದಿನಗಳಲ್ಲಿ ಸೇವಿಸುವ ವಿಶೇಷ ಖಾದ್ಯಗಳಲ್ಲಿ ಪುಟ್ಟು ಅಥವಾ ಬಾಳೆ ಮಂಡಿಗೆ ಪ್ರಮುಖವಾದುದು. ಬಾಳೆ ಎಲೆಯನ್ನು ಕೊಳವೆಯಂತೆ ಮಾಡಿ ಉಪ್ಪು, ಜೀರಿಗೆ ಮತ್ತು ಮೆಣಸನ್ನು ಬೆರೆಸಿ ಹದಮಾಡಿದ ಅಕ್ಕಿ ಹಿಟ್ಟನ್ನು ಕೊಳವೆಯಲ್ಲಿ ಹಾಕಿ ಅದರ ಮೇಲೆ ತುರಿದ ತೆಂಗಿನಕಾಯಿ ಹಾಕಿ ಕೊಳವೆ ತುಂಬುವರು. ಒಂದು ಕೊಳವೆಯಲ್ಲಿ ನಾಲ್ಕು ಭಾಗಗಳಿರುತ್ತವೆ. ಕಟ್ಟಿದ ಕೊಳವೆಯನ್ನು ಅವಿಯಲ್ಲಿ ಬೇಯಿಸುವರು. ಕೊಳವೆಯನ್ನು ಕಟ್ಟಲು ಬಾಳೆಯ ನಾರನ್ನು ಬಳಸುವರು. ಒಂದು ಗೊತ್ತಾದ ಪ್ರಮಾಣದಲ್ಲಿ ಬೆಂದ ತರುವಾಯ ಕಾಯಾಲು (ತೆಂಗಿನಕಾಯಿಯ ಹಾಲು) ವಿನಲ್ಲಿ ಅದ್ದಿ ಸೇವಿಸುವರು. ಇದೇ ಬಗೆಯಲ್ಲಿ ತಯಾರಾಗುವ ಇನ್ನೊಂದು ಖಾದ್ಯ ವಿಶೇಷ ಕೊಟ್ಗೆ ಅಥವಾ ಕೊಟ್ಟಿಗೆ. ಇದನ್ನು ಮೆಣಸು ರಹಿತವಾಗಿ ಸಿದ್ಧಗೊಳಿಸಿ ಬೆಂದ ಮೇಲೆ ಕಾಯಲು ಮತ್ತು ಬೆಲ್ಲವನ್ನು ಸೇರಿಸಿ ನೆಂಚಿಕೊAಡು ಸೇವಿಸಲಾಗುವುದು. ಇವೆರಡು ಖಾದ್ಯ ವಿಶೇಷಗಳು ಹಾಲಕ್ಕಿ ಒಕ್ಕಲಿಗರು ಮತ್ತು ಹರಿಕಾಂತರಲ್ಲಿ ಬಳಕೆಯಲ್ಲಿವೆ. 

ದಿನನಿತ್ಯದ ಊಟೋಪಚಾರಗಳಿಗೆ ಬಳಕೆಯಾಗುವ ನೆಂಚಿಕೆಗಳು (ನೆಂಚಿಕೆಯನ್ನು ಆಸೆ, ಪದಾರ್ಥ ಎಂಬ ಹೆಸರುಗಳಿಂದ ಕರೆಯುವ ರೂಢಿಯಿದೆ) ಬಗೆ ಬಗೆಯ ಸಸ್ಯಗಳಿಂದ ಸಿದ್ಧವಾಗುತ್ತದೆ. ಇವುಗಳಲ್ಲಿ ಬೆಟ್ಟ ಬಸಲೆ, ಅಮಟೆ, ಸಾಂಬಾರ ಸೊಪ್ಪು (ದೊಡ್ಡಿ ಪತ್ರೆ), ಜೌತಿ ಅಥವಾ ಆರತಿ ಕುಂಡಿಗೆ, ಎಲೆಯುರಿಕೆ, ತಗಟೆ, ವಂದೆಲಗ, ಇಲಿಕಿವಿಗಳನ್ನು ಮುಖ್ಯವಾಗಿ ಗುರುತಿಸಬಹುದು. ಒಗ್ಗರಣೆಗಾಗಿ ಕರಿಬೇವಿನ ಸೊಪ್ಪನ್ನು ಬಳಸುವರು. ಇದನ್ನು ಕರಮಂಗಲ ಸೊಪ್ಪು, ಒಗ್ಗರಣೆ ಸೊಪ್ಪುಗಳೆಂದೂ ಕರೆಯುವರು. 

ಬೇಸಗೆಯ ದಿನಗಳಲ್ಲಿ ಹಲಸು ಮತ್ತು ಮಾವಿನಕಾಯಿಗಳು ಹೇರಳವಾಗಿ ದೊರಕುವುದರಿಂದ ಇವುಗಳನ್ನು ಬಳಸಿ ಬಗೆ ಬಗೆಯ ಆಹಾರಗಳನ್ನು ತಯಾರಿಸಲಾಗುವುದು. ಹಲಸಿನ ಕಾಯಿಯಲ್ಲಿ ವೈವಿಧ್ಯಮಯ ಜಾತಿಗಳಿವೆ. ಬೇರು ಹಲಸು, ನೀರು ಹಲಸು, ಹೆಬ್ಬಲಸುಗಳ ಹಣ್ಣನ್ನು ಸೇವಿಸುವುದಿಲ್ಲ. ಆದರೆ ಎಳೆಯ ಕಾಯಿಯಾಗಿದ್ದಾಗ ಇವುಗಳನ್ನು ಬೇಯಿಸಿ ಪಲ್ಯ, ಸಾರು, ಚಟ್ನಿ, ಗೊಜ್ಜುಗಳ ರೂಪದಲ್ಲಿ ಸೇವಿಸುವರು. ಹಲಸು ಮತ್ತು ಗಟ್ಟಿ ತೊಳೆಯ ಹಲಸು (ಬೊಕ್ಕೆ/ ಬಕ್ಕೆ)ಗಳಿಂದ ಕಡುಬು, ದೋಸೆ, ಸಿಹಿ ಮುಳುಕ (ಅಂಬೊಡೆ ಅಕಾರದ ಸಿಹಿ ತಿಂಡಿ)ಗಳನ್ನು ತಯಾರಿಸುವರು. ಆರಿದ್ರಾ ಮಳೆಯ ಸಂದರ್ಭದಲ್ಲಿ ನಡೆಯುವ ಮಳೆ ಪೂಜೆಯ ಸಂದರ್ಭದಲ್ಲಿ ಹಲಸಿನ ಹಣ್ಣನ್ನು ತೊಳೆ ಬಿಡಿಸಿ ಅಕ್ಕಿ ಹಿಟ್ಟಿನೊಂದಿಗೆ ರುಬ್ಬಿ ಹದವಾದ ಹಿಟ್ಟು ಮಾಡಿ ಬಾಳೆ ಎಲೆಯಲ್ಲಿ ಹಿಟ್ಟು ಸುರಿದು ಕೊಟ್ಟೆ ಆವಿಯಲ್ಲಿ ಬೇಯಿಸಿ ಕಡುಬು ತಯಾರಿಸುವರು. ನೆಟರು, ಇಷ್ಟರನ್ನು ಕರೆದು ಹಬ್ಬದ ಊಟ ಬಡಿಸುವರು. ಹಲಸಿನ ಹಣ್ಣಿನ ತೊಳೆಯನ್ನು ಅಕ್ಕಿ ಹಿಟ್ಚಿನೊಂದಿಗೆ ರುಬ್ಬಿ ಹದವಾದ ಹಿಟ್ಟಿನಿಂದ ದೋಸೆಯನ್ನು ತಯಾರಿಸುವರು. ಹಲಸಿನ ಹಣ್ಣು ದೊರೆಯುತ್ತಿರುವವರೆಗೂ ಬೆಳಗಿನ ಉಪಾಹಾರಕ್ಕೆ ಹಲಸಿನ ಹಣ್ಣಿನ ದೋಸೆ ಸಾಮಾನ್ಯವಾಗಿರುತ್ತದೆ. ಅಕ್ಕಿಯ ರೊಟ್ಟಿ, ಮೊಗೆಕಾಯಿ ದೋಸೆಗಳು ಉಳಿದ ದಿನಗಳಲ್ಲಿ ಬಳಕೆಯಾಗುತ್ತವೆ. ಮಾವಿನ ಕಾಯಿಯ ಗೊಜ್ಜು, ಚಟ್ನಿಗಳು ಬೇಸಿಗೆಯಲ್ಲಿ ಸಾಮಾನ್ಯವಾದ ಊಟದ ನೆಂಚಿಕೆಗಳು. ಅಪ್ಪೆ ಹುಳಿ ಇನ್ನೊಂದು ವಿಶಿಷ್ಟ ನೆಂಚಿಕೆ ಹಾಗೂ ಪಾನೀಯ. ವಿಶೇಷವಾಗಿ ಹುಳಿ ಇರುವ ಮಾವಿನ ಕಾಯಿಗಳನ್ನು ತಕ್ಕ ಪ್ರಮಾಣದಲ್ಲಿ ಬೇಯಿಸಿ ಸಿಪ್ಪೆ ತೆಗೆದು ರಸವನ್ನು ಹಿಂಡಿ, ಅಗತ್ಯ ಪ್ರಮಾಣದಲ್ಲಿ ನೀರು ಬೆರೆಸಿ ಕುದಿಸಿ, ಉಪ್ಪು, ಒಣ ಮೆಣಸಿನಕಾಯಿ, ತುಸು ಬೆಲ್ಲ, ಜೀರಿಗೆ, ಸಾಸುವೆಗಳನ್ನು ಹದವಾಗಿ ಸೇರಿಸಿ ಒಗ್ಗರಣೆ ಹಾಕುವರು. ಮಧ್ಯಾಹ್ನದ ಊಟದ ವೇಳೆಗೆ ಅಪ್ಪೆ ಹುಳಿ ನೆಂಚಿಕೆಗೆ  ಹಾಗೂ ಪಾನೀಯಕ್ಕೆ ಯೋಗ್ಯವಾಗುತ್ತದೆ. ಸೆಕೆಯಲ್ಲಿ ಬಿಸಿ ಬಿಸಿ ಸಾರುಗಳಿಗಿಂತ ಭಿನ್ನ ರುಚಿಯನ್ನು ದೇಹಕ್ಕೆ ತಂಪನ್ನು ನೀಡುವ ಅಪ್ಪೆ ಹುಳಿ ಮೇಲೆಂದು ಅವರು ತಿಳಿಯುತ್ತಾರೆ. ಅಪ್ಪೆಮಿಡಿಯ ಉಪ್ಪಿನಕಾಯಿಗೆ ಜಿಲ್ಲೆ ಹೆಸರುವಾಸಿ. ಅಪ್ಪೆಮಿಡಿ ಒಂದು ಜಾತಿಯ ಮಾವಿನಕಾಯಿ. ಅತ್ಯಂತ ಕಟುವಾದ ಮತ್ತು ಸುವಾಸಿತವಾದ ಸೊನೆಯನ್ನು ಇದು ಸೂಸುತ್ತದೆ. ಹದವಾದ ಹುಳಿ ಇದರ ವೈಶಿಷ್ಟ್ಯತೆ ಹಣ್ಣಾದ ಮೇಲೆ ಇದನ್ನು ಬಳಸಲಾಗುವುದಿಲ್ಲ. ಓಟೆ ಹದವಾಗಿ ಬೆಳೆಯುತ್ತಿದ್ದಂತೆಯೇ ಕಾಯಿಯನ್ನು ನೆಲಕ್ಕೆ ಬೀಳಿಸದಂತೆ ಜೋಪಾನವಾಗಿ ಕಿತ್ತು, ತೊಟ್ಟುಗಳನ್ನು ನಾಜೂಕಾಗಿ ತೆಗೆದು ಸೊನೆಯನ್ನು ಒರೆಸಿ ಉಪ್ಪಿನ ನೀರಿನಲ್ಲಿ ಕಾಯಿಗಳನ್ನು ಹಾಕಿಡುತ್ತಾರೆ. ಅಥವಾ ಕಾಯಿಗಳನ್ನು ಹೋಳುಗಳನ್ನಾಗಿ ಮಾಡಿ ಮೆಣಸು ಒಗ್ಗರಣೆ ಇತ್ಯಾದಿಗಳನ್ನು ಒಂದು ಹದದಲ್ಲಿ ಹಾಕಿ ಉಪ್ಪಿನಕಾಯಿ ತಯಾರಿಸಿ ಗಾಜಿನ ಭರಣಿಯಲ್ಲಿ ತುಂಬಿ ಭದ್ರವಾಗಿ ಮುಚ್ಚಳ ಹಾಕಿ ಇಡಲಾಗುತ್ತದೆ. ಅನೇಕ ವರ್ಷಗಳವರೆಗೆ ಇದು ಕೆಡದಂತೆ ಇಡುತ್ತದೆ. ಅಗತ್ಯವಾದ ಉಪ್ಪಿನಕಾಯನ್ನು ತೆಗೆಯುವಾಗ ಒಬ್ಬರೇ ತೆಗೆಯಬೇಕು. ನೀರಿನ ಸ್ಪರ್ಶ ಆಗಕೂಡದು ಮತ್ತು ಮಾತಾಡಬಾರದು ಎಂಬ ವಿಧಿಗಳಿವೆ. ಮನೆಯ ಹಿರಿಯ ಮಹಿಳೆ ಈ ಕೆಲಸವನ್ನು ನಿರ್ವಹಿಸುತ್ತಾಳೆ. 

ಕಳಲೆ (ಕಳಿಲೆ) ಸಂಪ್ರದಾಯಸ್ಥರಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಎಳೆಯ ಬಿದಿರನ್ನು ಕಳಲೆ ಎಂದು ಕರೆಯುವರು. ಇದು ಬೇಗನೆ ಬೇಯುವುದಿಲ್ಲ. ನೀರಿನಲ್ಲಿ ಎರಡು ದಿನಗಳ ಕಾಲ ನೆನೆಹಾಕಿ ಬೇಯಿಸಿ, ಸಾರು ಅಥವಾ ಪಲ್ಯಗಳನ್ನು ಮಾಡಿ ಇದನ್ನು ಬಳಸುವರು. ಕಳಿಲೆ ಎಲೆಯನ್ನು ಮನೆಯ ಸುತ್ತ ಮತ್ತು ಕೊಟ್ಟಿಗೆಯ ಬಳಿ ಎಲ್ಲೂ ಹಾಕಬಾರದೆಂದು ನಿಷೇಧವಿದೆ. 

ಕಳಿಲೆಯನ್ನು ಸಂಪ್ರದಾಯಸ್ಥರು ಬಳಸಿದರೂ ಮೃಗಶಿರಾ ಮತ್ತು ಅರಿದ್ರಾ ನಕ್ಷತ್ರಗಳ ವೇಳೆಯಲ್ಲಿ ಯಾವ ನಿಷೇಧವಿಲ್ಲ. ಆದರೆ ವಿಶಾಖಾ ನಕ್ಷತ್ರದ ತರುವಾಯ ಅಂದರೆ ಕಾರ್ತಿಕ ಹುಣ್ಣಿಮೆ ಆದ ಮೇಲೆ ಕಳಿಕೆಯನ್ನು ಬಳಸಕೂಡದೆಂದು ನಿರ್ಬಂಧವಿದೆ. 

ಕಳಿಲೆ ಅತ್ಯಂತ ಪುಷ್ಟಿಕರವಾದ ಆಹಾರ ಪದಾರ್ಥ. ಇದರ ಬಗ್ಗೆ ಆಧುನಿಕ ಆಹಾರ ವಿಜ್ಞಾನದಲ್ಲಿ ಸಾಕಷ್ಟು ಅಧ್ಯಯನಗಳಾಗಿವೆ. ವ್ಯಾಪಾರ ವಹಿವಾಟು ಕೂಡ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಕಳಿಲೆ ಕಿತ್ತವರಿಗೆ ದಂಡ, ಕಿರುಕುಳ ಇತ್ಯಾದಿ ಅರಣ್ಯ ಇಲಾಖೆಯವರ ಕಾಟದಿಂದ ಜನರು ತಮ್ಮ ಇಷ್ಟದ ಈ ಆಹಾರ ಬಳಸದಂತಾಗಿದೆ. 

ಋತುಮಾನಕ್ಕನುಗುಣವಾಗಿ ಕೆಲವು ಸಸ್ಯಗಳ ಬಳಕೆಯನ್ನು ವಿಶೇಷವಾಗಿ ಮಾಡುತ್ತಾರೆ. ಬೇಸಗೆಯಲ್ಲಿ ಕಳ್ಳಂಗಟ್ಲೆ ಸಸ್ಯದ ನಾರನ್ನು ಎತ್ತಿ ನೀರಿನಲ್ಲಿ ಕುದಿಸಿ ಸೇವಿಸುವರು. ಇದರಿಂದ ತಯಾರಿಸಿದ ತುಂಬುಳಿ ಊಟಕ್ಕೆ ಬಳಕೆಯಾಗುತ್ತದೆ. ಪಾನಕದ ರೂಪದಲ್ಲಿ ಕಾಮಕಸ್ತಿç ಬೀಜ, ಎಳ್ಳು, ಸೊಪ್ಪು, ಮುರುಗಲ ಹುಳಿಗಳನ್ನು ನೀರಿಗೆ ಬೆರೆಸಿ, ಬೆಲ್ಲ ಸೇರಿಸಿ ಸೇವಿಸುವರು. ಮೊಗೆ ಬೀಜ ಮತ್ತು ಬೆಲ್ಲವನ್ನು ರುಬ್ಬಿ ಹದವಾಗಿ ನೀರು ಸೇರಿಸಿ ಪಾನಕದಂತೆ ಕುಡಿಯುವುದು ಇನ್ನೊಂದು ಜನಪ್ರಿಯ ವಿಧಾನ.

ಮಳೆಗಾಲದಲ್ಲಿ ಕನ್ನೆಕುಡಿ, ಎಲೆಯುರಿಗೆ ಸೊಪ್ಪುಗಳ ತಂಬುಳಿ, ವಿಶೇಷವಾಗಿ ಬಳಕೆಯಾಗುತ್ತದೆ. ಚಳಿಗಾಲದಲ್ಲಿ ತಗಟೆಸೊಪ್ಪಿನ ತಂಬುಳಿ, ಪಲ್ಯ, ಕಟ್ನೆಗಳ (ಕಷಾಯ) ಸೇವನೆ ಇರುತ್ತದೆ. ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದ ಅಡುಗೆಗಳಲ್ಲಿ ಬಳಕೆಯಾಗುವ ಸಸ್ಯಗಳು ಒಂದೇ ಬಗೆಯವು. 

ಅಡುಗೆಯಲ್ಲಿ ಬಳಸುವ ಪಾತ್ರೆಗಳಲ್ಲಿ ಉಪ್ಪು, ಉಪ್ಪಿನಕಾಯಿ ಮೊರಟೆಗಳು, ತೆಂಗಿನ ಕರಟದಿಂದ ಮಾಡಿದ ಚಿಪ್ಪು (ಸೌಟು), ಕೈಎಣ್ಣೆ ಮರದಿಂದ ಮಾಡಿದ ಯಶ ಮುಚ್ಚಲು (ಪಾತ್ರೆಗಳ ಮುಚ್ಚಳ), ಬಿದಿರಿನಿಂದ ತಯಾರಿಸಿದ ಜರಡಿ, ಅನ್ನ ಬಸಿಯುವ ಮರಿಗೆ (ಪುಟ್ಟ ತೊಟ್ಟಿ) ಹಲಸಿನ ಮರದಿಂದ ತಯಾರಿಸಿದ ಸೌಟು, ಸಾಂಬಾರ ಪದಾರ್ಥಗಳನ್ನು ಇಡಲು ತಯಾರಿಸಿದ ಕೈಎಣ್ಣೆ ಮರದ ಸಾಂಬಾರ ಬಟ್ಟಲು, ಬರಲು ಮರದಿಂದ ತಯಾರಿಸಿದ ಕಡೆಗಿಲುಗಳು ವಿಶೇಷವಾದವು. ಇವು ಕಲಾತ್ಮಕ ಕೆತ್ತನೆಗಳಿಂದ ಕೂಡಿರುತ್ತವೆ. ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳ ಬಳಕೆ ಚಾಲ್ತಿಯಲ್ಲಿ ಬರುತ್ತಿದ್ದರೂ ಇಂದಿಗೂ ಮೇಲ್ಕಾಣಿಸಿದ ವಸ್ತುಗಳ ಬಳಕೆ ನಿಂತಿಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಇವು ಇದ್ದೇ ಇರುತ್ತವೆ.

ಆಹಾರ ಸೇವನೆಯ ಕ್ರಮ:

ಹವ್ಯಕರಲ್ಲಿ ಆಹಾರ ಸೇವನೆಗೆ ಸಂಬಂಧಿಸಿದಂತೆ ಹೆಚ್ಚಿನ ಕಟ್ಟುಪಾಡುಗಳು ಕಂಡುಬರುತ್ತವೆ. ಅನ್ನಾಹಾರ ಸೇವನೆಯ ವಿಷಯದಲ್ಲಿ ಹವ್ಯಕರು ಕೆಲವು ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯೊಳಗೆ ಮತ್ತು ರಾತ್ರಿ ಏಳು ಗಂಟೆಯಿಂದ ಹತ್ತುಗಂಟೆಯೊಳಗೆ ಊಟ ಮಾಡುವುದು ಸಾಮಾನ್ಯ ಕ್ರಮ. ಅನ್ನಾಹಾರ ಸೇವನೆಯನ್ನು ಮಾತ್ರ ಊಟ ಎಂದು ಇವರು ಕರೆಯುವುದು. ಉಳಿದಂತೆ ಚಪಾತಿ, ರೊಟ್ಟಿ, ಉಪ್ಪಿಟ್ಟು ಇತ್ಯಾದಿ ಏನನ್ನೇ ಹೊಟ್ಟೆ ತುಂಬ ಸೇವಿಸಿದರೂ ಅದು ಊಟವಲ್ಲ. 

ಊಟಕ್ಕೆ ಬಾಳೆ ಎಲೆಯ ಕುಡಿಯೇ ಆಗಬೇಕು. ಎಲೆಯನ್ನು ಸ್ವಚ್ಛವಾಗಿ ತೊಳೆದು ಬಳಸಲಾಗುತ್ತದೆ, ಮಳೆಗಾಲದ ವೇಳೆ ಅದನ್ನು ಬೆಂಕಿಯಲ್ಲಿ ತುಸು ಬಾಡಿಸಿ ಬಳಸುತ್ತಾರೆ. ಮಳೆಗಾಲದ ಸಮಯದಲ್ಲಿ ಬಾಳೆ ಎಲೆಯನ್ನು ಆಶ್ರಯಿಸಿ ಅನೇಕ ಕ್ರಿಮಿ ಕೀಟಗಳು ಇರುವುದರಿಂದ ಈ ಕ್ರಮ ಅನುಸರಿಸುತ್ತಾರೆ. ಊಟಕ್ಕೆ ಎಲೆ ಹಾಕಿದ ಮೇಲೆ ಊಟ ಮಾಡುವವರನ್ನೆಲ್ಲ ಸಾಲಾಗಿ ಕೂರಿಸಿದ ಮೇಲೆ ಊಟ ಬಡಿಸಲಾಗುತ್ತದೆ. ಬಾಳೆ ಎಲೆಯ ತುದಿ ಭಾಗ ಊಟಕ್ಕೆ ಕುಳಿತವನ ಎಡಭಾಗಕ್ಕೆ ಬರಬೇಕು. ಈ ಎಲೆಯ ಎಡ ಮೇಲ್ಭಾಗದಲ್ಲಿ ಉಪ್ಪು, ಉಪ್ಪಿನಕಾಯಿ ಬಡಿಸಬೇಕು. ನಂತರ ಎಡಭಾಗದಿಂದ ಬಲಕ್ಕೆ ಎಲೆಯ ಮೇಲ್ತುದಿಯಲ್ಲಿ ಕೋಸಂಬರಿ, ಪಲ್ಯ, ಗೊಜ್ಜು, ಚಟ್ನಿ ಇತ್ಯಾದಿ ನೆಂಚಿಕೆಗಳನ್ನು ಬಡಿಸಬೇಕು. 

ಎಲೆಯ ಬಲಭಾಗದ ಕೆಳತುದಿಯಲ್ಲಿ ಪಾಯಸ ಬಡಿಸಬೇಕು. ಎಲೆಯ ಎಡಬದಿಯ ಕೆಳಭಾಗದಲ್ಲಿ ಚಿತ್ರಾನ್ನ, ಹಪ್ಪಳ, ಸಂಡಿಗೆಗಳನ್ನು ಬಡಿಸಬೇಕು. ಮಧ್ಯಭಾಗದಲ್ಲಿ ಅನ್ನವನ್ನು ಬಡಿಸಬೇಕು. ಊಟಕ್ಕೆ ಸಿದ್ಧಪಡಿಸಿದ ಎಲ್ಲ ಆಹಾರ ಬಗೆಗಳನ್ನೂ ಎಲೆಯಲ್ಲಿ ಸ್ವಲ್ಪ ಸ್ವಲ್ಪವೇ ಈ ಕ್ರಮದಲ್ಲಿ ಮೊದಲು ಬಡಿಸಿದ ನಂತರ ಮಧ್ಯಭಾಗದಲ್ಲಿ ಅನ್ನ ಬಡಿಸಬೇಕು. ಅನ್ನದ ಮೇಲೆ ತುಪ್ಪವನ್ನು ಬಡಿಸಿದ ಮೇಲೆ ತೊಗರಿ ಬೇಳೆಯ ತೊವ್ವೆ ಬಡಿಸಬೇಕು. 

ಇಷ್ಟಾದ ಮೇಲೆ ದೇವರ ಪ್ರಾರ್ಥನೆ ನಡೆಯುತ್ತದೆ. ಆನಂತರವಷ್ಟೇ ಊಟ ಆರಂಭ. ಒಂದೆಡೆಯಿಂದ ಬಡಿಸಲು ಆರಂಭಿಸುತ್ತಿದ್ದಂತೆಯೇ ಯಾರೂ ತಿನ್ನಲು ಆರಂಭಿಸುವಂತಿಲ್ಲ. ಎಲ್ಲವನ್ನೂ ಬಡಿಸಿ ದೇವರ ಪ್ರಾರ್ಥನೆ ಆದ ಮೇಲಷ್ಟೇ ಬಡಿಸಿದ ಆಹಾರಕ್ಕೆ ಕೈಹಾಕಬೇಕು. ಉಪನಯನವಾದವರು ಚಿತ್ರಾವತಿಯನ್ನು ಇಟ್ಟ ಮೇಲಷ್ಟೇ ಊಟ ಮಾಡಬೇಕು. ಮೊದಲು ಸಾರು, ನಂತರ ಹುಳಿ, ನಂತರ ಬಜ್ಜಿ, ಹಸಿ ಇತ್ಯಾದಿ ಪದಾರ್ಥಗಳು ಕ್ರಮವಾಗಿ ಬರುತ್ತವೆ. ಸಿಹಿ ಪದಾರ್ಥಗಳು ಬಂದ ಮೇಲೆ ಕೊನೆಯಲ್ಲಿ ಮಜ್ಜಿಗೆ ಅಥವಾ ಮೊಸರನ್ನ ಊಟಮಾಡಬೇಕು. ಬಡಿಸಿಕೊಂಡ ಏನನ್ನೂ ಚೆಲ್ಲಬಾರದು, ವ್ಯರ್ಥ ಮಾಡಬಾರದು. ಹಾಗೇನಾದರೂ ಅನಿವಾರ್ಯವಾಗಿ ಆಹಾರ ಬಿಡಬೇಕಾಗಿ ಬಂದರೆ ತ್ಯಜಿಸಿದ ಅನ್ನಾಹಾರಕ್ಕೆ ನೀರು ಬೆರೆಸಬೇಕು. ಚಿತ್ರಾವತಿ ಇಟ್ಟವರು ಉಪ್ಪಿಗೆ ತುಸು ನೀರು ಸೇರಿಸಿ ಅದನ್ನು ಸೇವಿಸಿ ನಂತರ ಆಪೋಶನ ತೆಗೆದುಕೊಂಡು ನೆಲಕ್ಕೆ ಕೈಒತ್ತಿ ಮೇಲೇಳಬೇಕು. ದೇವರ ಪ್ರಾರ್ಥನೆ ಅಥವಾ ಶ್ಲೋಕಗಳನ್ನು ಬಿಟ್ಟು ಊಟ ಮಾಡುವಾಗ ಬೇರೇನೂ ಮಾತಾಡಬಾರದು, ಹರಟಬಾರದು. ಆಪೋಶನ ತೆಗೆದುಕೊಂಡ ಮೇಲೆ ಕೈತೊಳೆದುಕೊಳ್ಳಬೇಕು. ಊಟವಾದ ಮೇಲೂ ಖಾಲಿ ಎಲೆಯ ಮುಂದೆ ಹೆಚ್ಚು ಹೊತ್ತು ಕೂತಿರುವುದು ಅಥವಾ ನೀರು ಮತ್ತೇನೋ ಸೇವಿಸುವುದು ನಿಷಿದ್ಧ. ಮಕ್ಕಳಿರಲಿ, ವಿವಾಹಿತರಿರಲಿ, ಸ್ತ್ರೀಯರಿರಲಿ ಎಲ್ಲರಿಗೂ ಊಟದ ಸಾಮಾನ್ಯ ನಿಯಮಗಳು ಅನ್ವಯ.

ಅಕ್ಕಿಯನ್ನು ಬೇಯಿಸಿದಾಗ ಅದನ್ನು ಮುಸುರೆ ಎಂದು ತಿಳಿಯಲಾಗುತ್ತದೆ. ಅನ್ನವನ್ನು ಮುಟ್ಟುವ ಮೊದಲು ಅಥವಾ ಮುಟ್ಟಿದ ಅನಂತರ ಕೈ ತೊಳೆದುಕೊಳ್ಳಬೇಕು. ಅನ್ನವಿಟ್ಟ ಸ್ಥಳವನ್ನೂ ಸ್ವಚ್ಛಗೊಳಿಸಬೇಕು. ದೇವರಿಗೆ ಮಡಿಯಲ್ಲಿ ನೈವೇದ್ಯಕ್ಕೆ ಮಾಡಿದ ಪದಾರ್ಥಗಳನ್ನು ಬಿಟ್ಟರೆ ಬೇರೆ ಯಾವ ಪದಾರ್ಥವನ್ನೂ ಈ ಸ್ಥಾನವನ್ನು ನೀಡಿಲ್ಲ. ಈ ಸಮುದಾಯದ ಪ್ರಧಾನ ಆಹಾರ ಅನ್ನವಾದ ಕಾರಣದಿಂದ ಹಾಗೂ ಪವಿತ್ರತೆಯ ಕಾರಣದಿಂದ ಇಂಥ ಗೌರವ ಭಾವನೆಯನ್ನು ನೀಡಲಾಗಿದೆ ಅನಿಸುತ್ತದೆ.  

ಉಪವಾಸದ ಕ್ರಮ: 

ಹವ್ಯಕರು ಹರಿ, ಹರರನ್ನು ಸಮಾನವಾಗಿ ಕಾಣುತ್ತಾರೆ. ದೇವರಲ್ಲಿ ಯಾವ ಭೇದವನ್ನೂ ಇವರು ಕಾಣುವುದಿಲ್ಲ. ಕೃಷ್ಣಜನ್ಮಾಷ್ಟಮಿಯೂ ಶಿವರಾತ್ರಿಯೂ ಇವರ ಪಾಲಿಗೆ ಒಂದೇ. ಎರಡರಲ್ಲೂ ಸಮಾನ ಶ್ರದ್ಧೆ ಮತ್ತು ಕಟ್ಟುನಿಟ್ಟಿನ ಆಚರಣೆ ಮಾಡುತ್ತಾರೆ. ಏಕಾದಶಿಯಂದು ದಿನವಿಡೀ ಉಪವಾಸ ಇರುತ್ತಾರೆ. ಬಹುತೇಕ ಜನ ರಾತ್ರಿ ವೇಳೆ ಮಾತ್ರ ಅವಲಕ್ಕಿ ಅಥವಾ ಉಪ್ಪಿಟ್ಟಿನಂಥ ಲಘು ಆಹಾರ ಸೇವಿಸುತ್ತಾರೆ. ಶಿವರಾತ್ರಿ ಮತ್ತು ಶ್ರೀಕೃಷ್ಣಜನ್ಮಾಷ್ಟಮಿಗಳಂದು, ಶ್ರಾದ್ಧಾದಿಗಳಂದು ಉಪವಾಸ ಆಚರಿಸುತ್ತಾರೆ. ಇದು ಸಾಮುದಾಯಿಕವಾದುದು. ಉಪವಾಸ ಆಚರಣೆ ಎಂದು ಹೇಳುತ್ತ ಲಘು ಆಹಾರ ಸೇವಿಸುತ್ತಿದ್ದರೆ ಹಾಸ್ಯಕ್ಕೆ “ಮಂಗನ ಉಪವಾಸ” ಎಂದು ಛೇಡಿಸುತ್ತಾರೆ. ಇದಲ್ಲದೇ ವೈಯಕ್ತಿಕವಾಗಿಯೂ ಕೆಲವರು ವಾರದ ಉಪವಾಸ ಮಾಡುತ್ತಾರೆ. ಈಚಿನ ದಿನಗಳಲ್ಲಿ ಉಪವಾಸದ ಪದ್ಧತಿ ಹೊಸ ತಲೆಮಾರಿನವರಲ್ಲಿ ಕಡಿಮೆಯಾಗುತ್ತಿದೆ ಎಂಬುದು ಹಿರಿಯರ ಅಂಬೋಣ. 


ಹವ್ಯಕರ ಸಮಾಜ ಹಾಗೂ ಸಂಸ್ಕೃತಿ ವಿಶಿಷ್ಟವಾಗಿದ್ದು ಇದರ ಕಿರು ನೋಟವನ್ನು ಅವರ ಆಹಾರ ಕ್ರಮವನ್ನು ಗಮನಿಸುವ ಮೂಲಕ ಅವಲೋಕಿಸಬಹುದು. ಆಹಾರ ಕ್ರಮವನ್ನು ಗಮನಿಸಿದರೆ ಉಳಿದ ಸಂಗತಿಗಳ ಸ್ಥೂಲ ಚಿತ್ರಣ ಲಭಿಸುತ್ತದೆ. ಹಾಗಾಗಿ ಇಲ್ಲಿ ಹವ್ಯಕರ ಆಹಾರ ಕ್ರಮದ ನೋಟವನ್ನು ನೋಡಲಾಗಿದೆ. ಕಲೆ ಸಾಹಿತ್ಯದಲ್ಲೂ ಹವ್ಯಕರ ಹೆಸರು ಉತ್ತುಂಗದಲ್ಲಿದೆ. ಮಹಾನ್ ಯಕ್ಷಗಾನ ಕಲಾವಿದರಾಗಿದ್ದ ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಆ ಪರಂಪರೆಯನ್ನು ಮುಂದುವರೆಸಿದ ಕೆರೆಮನೆ ಶಿವಾನಂದ ಹೆಗಡೆ , ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮನೆತನ, ಕೊಂಡದಕುಳಿ ಶ್ರೀಪಾದ ಹೆಗಡೆಯವರ ಮನೆತನ ಮೊದಲಾದವು ಹವ್ಯಕರ ಪ್ರೀತಿಯ ಯಕ್ಷಗಾನ ಕಲೆಯ ಪ್ರಸಿದ್ಧ ಹೆಸರುಗಳಾಗಿವೆ, ಇನ್ನೂ ಹತ್ತು ಹಲವು ಕುಟುಂಬಗಳೇ ಈ ಕಲೆಗೆ ತೊಡಗಿಸಿಕೊಂಡಿವೆಯಲ್ಲದೇ ಯಕ್ಷಗಾನ ತಾಳಮದ್ದಲೆಯಲ್ಲೂ ಸಾಕಷ್ಟು ಹೆಸರು ಮಾಡಿದ ಕುಟುಂಬಗಳಿವೆ. ಇನ್ನು ಚಿತ್ರಕಲೆ, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲೂ ಅಪಾರವಾಗಿ ದುಡಿದವರಿದ್ದಾರೆ. ಇತಿಹಾಸ, ಸಾಹಿತ್ಯ, ಶಾಸನ ಕ್ಷೇತ್ರಗಳಲ್ಲಿ, ವಿಜ್ಞಾನ-ತಂತ್ರಜ್ಞಾನಗಳಲ್ಲಿ, ಕ್ರೀಡೆ, ರಾಜಕಾರಣದಲ್ಲೂ ದೇಶದ ಸೇನೆಯೂ ಸೇರಿದಂತೆ ರಾಷ್ಟç, ಅಂತಾರಾಷ್ಟçದ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿದ ಜನರಿದ್ದಾರೆ. ಎಷ್ಟೇ ಆಧುನಿಕ ಜೀವನಕ್ಕೆ ತೆರೆದುಕೊಂಡಿದ್ದರೂ ಸಂಪ್ರದಾಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳದವರು ಹವ್ಯಕರು.


ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ದುಡಿದ ಮಹನೀಯರಿದ್ದಾರೆ. ಹವ್ಯಕರ ಸಂಘಟನೆ, ಏಳಿಗೆಗೆ ಶ್ರಮಿಸುವ ಹವ್ಯಕ ಮಹಾಸಭಾ ಎಂಬ ಬೃಹತ್ ಸಂಘಟನೆಯೂ ಸಕ್ರಿಯವಾಗಿದೆ.

 ಒಟ್ಟಿನಲ್ಲಿ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಗುಣದಲ್ಲಿ ಇತರರಿಗೆ ಮತ್ಸರ ಹುಟ್ಟಿಸುವಲ್ಲಿ ಹವ್ಯಕ ಸಮುದಾಯ ಯಶಸ್ವಿಯಾಗಿದೆ.




            

 

 


Wednesday, 18 September 2024

ಕನ್ನಡ ಸಾರಸ್ವತಲೋಕಕ್ಕೊಂದು ಹೊಸ ಓದು


ಈಗ ಲೇಖಕರಾದ, ಬ್ಲಾಗರ್ ಆದ ಮಿತ್ರ ರಾಕೇಶ ಶೆಟ್ಟರು ಹೊಸ ಓದನ್ನು ಕೊಟ್ಟಿದ್ದಾರೆ. ಕೃತಿಯ ಹೆಸರು' ಮುಚ್ಚಿಟ್ಟ ಕರ್ನಾಟಕದ ಚರಿತ್ರೆ'. ಯಾಕೆ ಇದು ಹೊಸ ಓದು ಅಂದರೆ - ಇದು ಇತಿಹಾಸದ ಹೊಸ ಓದು. ಇದುವರೆಗೆ ಶಾಲೆ ಕಲಿತ ನಾವು ಯಾರೂ ಕೇಳಿರದ ಇತಿಹಾಸದ ಸಂಗತಿಗಳು ಇರುವುದರಿಂದ ನಮ್ಮಲ್ಲಿನ ಅಂದರೆ ನಮ್ಮ ದೇಶದ ಸಮಸ್ಯೆ ಇರುವುದೇ ಇಲ್ಲಿ- ಇತಿಹಾಸದಲ್ಲಿ. ನಮ್ಮ ದೇಶಕ್ಕೆ ಆಧುನಿಕ ಇತಿಹಾಸ ಅಥವಾ ಚರಿತ್ರೆ ಕೊಟ್ಟವರು ಬ್ರಿಟಿಷರು. ಅದನ್ನು ಹೇಗೆ ನೋಡಬೇಕು, ಯಾವುದು ಇತಿಹಾಸ ಅನಿಸಿಕೊಳ್ಳುತ್ತದೆ. ಅದಕ್ಕೆ ಆಧಾರಗಳು ಯಾವುವು ಎಂಬುದನ್ನೂ ತಿಳಿಸಿದವರೂ ಅವರೇ. ಅದನ್ನೇ ನಾವು ಉರು ಹೊಡೆದು ಮುಂದುವರೆಸಿಕೊಂಡು ಶಿರಸಾವಹಿಸಿ ಪಾಲಿಸಿಕೊಂಡುಬರುತ್ತಿದ್ದೇವೆ. ಅದಕ್ಕೆ ವಿರುದ್ಧವಾದ ಅಥವಾ ಪ್ರತಿಯಾದ ಸಾಲುಗಳನ್ನು ನಾವು ಒಪ್ಪಲು ತಯಾರಿಲ್ಲ ಎಂಬಂತೆ ನಮ್ಮನ್ನು ನಮ್ಮ ಶಾಲಾ ವ್ಯವಸ್ಥೆ ಅಣಿಗೊಳಿಸಿ ಕೃತಾರ್ಥವಾಗಿದೆ.ಆದರೆ ಈಚೆಗೆ ಈ ದೃಷ್ಟಿಕೋನ ಬದಲಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಕಾರಣದಿಂದ ಸಾಮಾಜಿಕ ಜಾಲ ತಾಣಗಳ ಪ್ರಾಚುರ್ಯದಿಂದ ಜನರ ವಿವಿಧ ಬಗೆಯ ಅಭಿಪ್ರಾಯಗಳಿಗೆ ವೇದಿಕೆಗಳು ಸಾರ್ವಜನಿಕವಾಗಿ ದೊರೆಯುತ್ತಿದೆ. ಈ ಮೊದಲು ಪರಿಸ್ಥಿತಿ ಹೀಗೆ ಇರಲಿಲ್ಲ. ಸಾರ್ವಜನಿಕ ವೇದಿಕೆಯ ಜೊತೆಗೆ ಅಲ್ಲಿ ಹೇಳಬೇಕಾದ ವಿಷಯಗಳಿಗೂ ನಿರ್ದಿಷ್ಟ ದಿಕ್ಕು ದೆಸೆ, ನಿಯಂತ್ರಣ ಇರುತ್ತಿತ್ತು. ಈ ನಿಯಂತ್ರಣವನ್ನು ಕೂಡ ಯಾರು ಹೇಗೆ ಎಂಬುದೂ ನಿರ್ಧಾರವಾಗಿರುತ್ತಿತ್ತು. ಅಭಿಪ್ರಾಯ ಸ್ವಾತಂತ್ರ್ಯ ಮುಕ್ತತೆಗಳು ಮಾತಲ್ಲಿ ಮಾತ್ರ ಇತ್ತು ಅಂದರೂ ತಪ್ಪಿಲ್ಲ. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಿಯಂತ್ರಿತ ಮಾಧ್ಯಮಗಳು ಮೂಲೆ ಸೇರಿವೆ. ಸಾಮಾಜಿಕ ಮಾಧ್ಯಮ ಮುಕ್ತತೆ ಕೊಟ್ಟಿದೆ. ಹೀಗಾಗಿ ಜನರ ಅಭಿಪ್ರಾಯಕ್ಕೆ ಒಂದಲ್ಲ ಒಂದು ವೇದಿಕೆ ಸಾರ್ವಜನಿಕವಾಗಿ ಲಭಿಸಿ ಮುಕ್ತ ಚರ್ಚೆ ಆಗುತ್ತದೆ. ಲೆಕ್ಕವಿಲ್ಲದಷ್ಟು ಜನ ತಮ್ಮ ಮಾತನ್ನು ಹೇಳಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಹಿಂದೆ ಹತ್ತಿಕ್ಕಿದ್ದ ಮಾತು, ವಿಷಯಗಳೆಲ್ಲ ಎಲ್ಲ ಕ್ಷೇತ್ರಗಳಿಂದಲೂ ಹೊರಬರುತ್ತಿವೆ. ನಮ್ಮೆಲ್ಲರನ್ನೂ ಬೇಗ ಪ್ರಭಾವಿಸುವ ಹಾಗೂ ಕಾಡುವ ಇತಿಹಾಸ ಇಂಥ ವಿಷಯಗಳಲ್ಲಿ ಒಂದು. ಬೇರೆ ಬೇರೆ ಈ ಮೊದಲು ಚರಿತ್ರೆ ಅಥವಾ ಇತಿಹಾಸದ ಬಗ್ಗೆ ಅದರ ಪಂಡಿತರು ಅನಿಸಿಕೊಂಡವರು ಅದರಲ್ಲೂ ಎಲ್ಲವನ್ನೂ ತಮ್ಮ ನಿಲುವು, ಸಿದ್ಧಾಂತಗಳ ಮೂಲಕ ಪ್ರತಿಪಾದಿಸುತ್ತಿದ್ದ ರೋಮಿಲಾಥಾಪರ್ ಅವರಂಥವರು ಮಾತ್ರ ಮಾತನಾಡಬಹುದಿತ್ತು. ಆದರೆ ಇಂದು ಇತಿಹಾಸದ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಯಾರು ಬೇಕಾದರೂ ಮಾತನಾಡಬಹುದು. ಏಕೆಂದರೆ ಇಂದು ಯಾರು ಮಾತನಾಡುತ್ತಾರೆಂಬುದಕ್ಕಿಂತಲೂ ಏನು ಮಾತನಾಡುತ್ತಿದ್ದಾರೆಂಬುದು ಮುಖ್ಯವಾಗುತ್ತದೆ. ಆದ್ದರಿಂದಲೇ ಇತಿಹಾಸದಂಥ ವಿಷಯದ ಬಗ್ಗೆ ಇಂದು ಹೊಸ ತಲೆಮಾರಿನ ವಿಕ್ರಂ ಸಂಪತ್, ಅಭಿಜಿತ್ ಚಾವ್ಡಾರಂಥ ಹೊಸ ಯುವ ವಿದ್ವಾಂಸರು ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಜೊತೆಗೆ ನಮ್ಮ ಯಾವುದೇ ವಿಷಯದ ಬಗ್ಗೆ ಹತ್ತಾರು ಮೂಲಗಳಿಂದ ವಿಷಯ ಹೊರತೆಗೆದು ಚರ್ಚಿಸಬಹುದಾಗಿದೆ. ಇಲ್ಲಿ ರಾಕೇಶ್ ಶೆಟ್ಟರು ಕೂಡ ಇಂಥ ಯತ್ನವನ್ನು ಮಾಡಿದ್ದಾರೆ. ಅವರ ವೃತ್ತಿ ತಂತ್ರಜ್ಞಾನ, ಆಸಕ್ತಿ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಇತ್ಯಾದಿ. ತಮ್ಮ ಆಸಕ್ತಿಯನ್ನು ಈ ಕೃತಿಯಲ್ಲಿ ಸಾಧಿಸಿಕೊಳ್ಳಲು ಏನೆಲ್ಲ ಶ್ರಮಪಡಬೇಕಾಯಿತು ಎಂಬುದನ್ನು ಲೇಖಕರು ಇದರಲ್ಲಿ ದಾಖಲಿಸಿದ್ದಾರೆ. ತಾವು ಯಾವ ಕಾರಣಕ್ಕೆ ಈ ಕೆಲಸಕ್ಕೆ ಕೈ ಹಾಕಬೇಕಾಯಿತು ಎಂಬುದನ್ನೂ ಹೇಳಿದ್ದಾರೆ. ಅಷ್ಟೇ ನಮ್ರವಾಗಿ ಇದು ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯೇ ವಿನಾ ಇದೇ ಸಂಪೂರ್ಣ ಸತ್ಯ ಎಂದಲ್ಲವೆಂದು ಹೇಳಿದ್ದಾರೆ. ಹೌದು. ನಿಸರ್ಗದಲ್ಲಿ ಎಲ್ಲವೂ ಬದಲಾಗುವಂತೆ ನಮ್ಮ ದೃಷ್ಟಿಯೂ ಬದಲಾಗುತ್ತದೆ. ಇತಿಹಾಸದ ಬಗ್ಗೆ ಇಂದು ಆಗಿರುವುದೂ ಅದೇ.ನಮಗೆ ಪಾಶ್ಚಾತ್ಯರು ಹೇಳಿಕೊಟ್ಟ ಇತಿಹಾಸ ಕಾಲಿಟ್ಟ ಕಡೆಯಲ್ಲೆಲ್ಲ ಘರ್ಷಣೆ ಆಗುತ್ತದೆ, ಶಾಂತಿ ನೆಲೆಸುವುದು ಕಷ್ಟವಾಗುತ್ತದೆ. ದಾಖಲೆಗಳು ದೊರೆತಂತೆ ಇತಿಹಾಸ ಮಾತಾಡುತ್ತಲೇ ಹೋಗುತ್ತದೆ. ಅಲ್ಲಿ ಮೌನ ಇರುವುದಿಲ್ಲ. ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಬ್ರಿಟಿಷ್ ಪೂರ್ವದಲ್ಲಿ ನಮ್ಮ ಸಮಾಜದಲ್ಲಿ ಗತ ಇತ್ತು. ಅದು ಕಾಲಾತೀತವಾಗಿದ್ದು ಅದನ್ನು ನಾವು ಜೀವಿಸುತ್ತಿದ್ದೆವು. ಅದರಲ್ಲಿ ನಂಬಿಕೆ ಮತ್ತು ಶ್ರದ್ಧೆಗಳಿದ್ದವು, ಆಚರಣೆ, ಸಂಪ್ರದಾಯಗಳನ್ನು ಅದು ಬೆಳೆಸಿತ್ತು. ಆದರೆ ಪಾಶ್ಚಾತ್ಯ ಹಿಸ್ಟರಿಯ ಚಿಂತನೆ ಹಾಗೂ ದೃಷ್ಟಿಕೋನ ಬಂದಮೇಲೆ ಎಲ್ಲವನ್ನೂ ಪ್ರಶ್ನಿಸುವ, ಶ್ರದ್ಧೆಯನ್ನು ಅಲುಗಾಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯತೊಡಗಿತು. ಇದರಿಂದ ಸಾಮಾಜಿಕ ಶಾಂತಿ ಮತ್ತು ನೆಮ್ಮದಿಗಳು ಇಲ್ಲವಾದವು. ಪಾಶದಚಾತ್ಯ ಹಿಸ್ಟರಿಯ ದೃಷ್ಟಿ ನಮ್ಮಲ್ಲಿ ನುಸುಳುವವರೆಗೂ ರಾಮಾಯಣ ಮತ್ತು ಮಹಾಭಾರತಗಳಂಥ ಗ್ರಂಥಗಳ ಯಾವ ವಿವರಗೂ ವಿವಾದಕ್ಕೆ ಆಸ್ಪದ ಮಾಡಿರಲಿಲ್ಲ. ಆದರೆ ಇಂದು ಅವುಗಳ ಸಣ್ಣಪುಟ್ಟ ವಿಚಾರಗಳೂ ಗದ್ದಲಕ್ಕೆ ಕಾರಣವಾಗುತ್ತಿವೆ. ಅದು ರಾಮಸೇತು, ಮಹಾಭಾರತ ಯುದ್ಧ ನಡೆದಿದ್ದು ನಿಜವಾ ಇತ್ಯಾದಿ ಆಗಿರಬೇಕಿಲ್ಲ. ಗಾಂಧಾರ, ಥುರಾ ಇವೆಲ್ಲ ಇಂದು ಎಲ್ಲಿವೆ ಕುರುಕ್ಷೇತ್ರ ಯುದ್ಧದಲ್ಲಿ ಅಷ್ಟುಜನ ಹೊಡೆದಾಡುವಷ್ಟು ಜಾಗ ಎಲ್ಲಿತ್ತು ಇತ್ಯಾದಿ ಏನು ಬೇಕಾದರೂ ಆಗಬಹುದು. ಪಾಶ್ಚಾತ್ಯ ಹಿಸ್ಟರಿ ದೃಷ್ಟಿ ನಮ್ಮ ಶ್ರದ್ಧೆ ಮತ್ತು ನಂಬಿಕೆಗಳನ್ನು ಮತ್ತೆ ಮತ್ತೆ ಘಾಸಿಗೊಳಿಸುತ್ತಿದೆ.ಅದು ಅಯೋಧ್ಯೆ ಆಗಲಿ, ಆಗ್ರಾ ಆಗಲಿ, ಯಾವುದೇ ಜಾಗವಾಗಲಿ, ವ್ಯಕ್ತಿ ಆಗಲಿ ಇವೆಲ್ಲಕ್ಕೂ ಹಿಸ್ಟರಿಯಲ್ಲಿ ಎರಡೂ ಕಡೆ ಮಾತನಾಡಬಹುದಾದ ದಾಖಲೆಗಳು ದೊರೆಯುತ್ತವೆ. ನಮ್ಮ ರಾಜ್ಯದಲ್ಲಿ ಈಚೆಗೆ ಇಂಥ ದೃಷ್ಟಿಯಿಂದ ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿ ಅಂದರೆ ಅದು ಟಿಪ್ಪು ಸುಲ್ತಾನ. ಒಂದಿಷ್ಟು ಜನ ಆ ಕಡೆ ನಿಂತರೆ ಮತ್ತಷ್ಟು ಜನ ಈ ಕಡೆ ನಿಂತು ಹೊಡೆದಾಡುತ್ತರೆ, ಇಬ್ಬರ ಬಳಿ ಇರುವ ಅಸ್ತ್ರ ಒಂದೇ. ಅದು ಹಿಸ್ಟರಿ ಕೇಳುವ ದಾಖಲೆ. ಸಾಲದ್ದಕ್ಕೆ ಆಧುನಿಕ ಹಿಸ್ಟರಿ ಒಂದು ನಿರ್ದಿಷ್ಟ ವಾದಕ್ಕೆ ಬದ್ಧವಾಗಿ ಹಿಸ್ಟರಿ ಅಂದರೆ ಇಷ್ಟೇ ಹೇಳಬೇಕು ಎಂಬುದನ್ನೂ ಕಲಿಸಿ ತಾನು ಪ್ರತಿಪಾದಿಸುವ ದಾಖಲೆ ಆಧಾರಿತ ಸತ್ಯದ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ರಾಕೇಶ್ ಶೆಟ್ಟರು ಈ ಕೃತಿಯಲ್ಲಿ ಆಧುನಿಕ ಹಿಸ್ಟರಿಯ ದೃಷ್ಟಿಯನ್ನೇ ಬಳಸಿಕೊಂಡು ಇದುವರೆಗೆ ಅದು ಏನೆಲ್ಲವನ್ನು ಹೇಳಿದೆ, ಅದರ ದೃಷ್ಟಿಯಲ್ಲಿ ಎಲ್ಲೆಲ್ಲಿ ಏನು ಇರಬೇಕಿತ್ತು ಎಂದು ಸಾಧಾರ ತೋರಿಸಿದ್ದಾರೆ. ನಿಜ. ಆಧುನಿಕ ಹಿಸ್ಟರಿ ಕೆಲವು ಸಂಗತಿಗಳನ್ನು ಉದ್ದೇಶಪೂರ್ವಕ ಪಕ್ಕಕ್ಕೆ ಸರಿಸುತ್ತದೆ. ಮೈಸೂರು ಅರಸು ಮನೆತನ ಹಾಗೂ ಟಿಪ್ಪೂ ಕುರಿತ ವಿಷಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಂತೆ ರಾಕೇಶ್ ಶೆಟ್ಟರು ಅದೇ ಹಿಸ್ಟರಿಯ ಆಯುಧಗಳನ್ನು ಬಳಸಿ ಪ್ರತಿ ದಾಖಲೆ ಕೊಡುತ್ತಾರೆ, ಚರ್ಚೆ ಅಥವಾ ವಿವಾದವನ್ನು ಜೀವಂತ ಇಡುತ್ತಾರೆ. ಅಲ್ಲಿಗೆ ಆಧುನಿಕ ಹಿಸ್ಟರಿಯ ಒಂದು ದೃಷ್ಟಿ ಸಾಧಿತವಾಯಿತು. ಆಧುನಿಕ ಶಾಲೆ ಅಥವಾ ಉನ್ನತ ಶಿಕ್ಷಣ ಪಡೆದ ನಮಗೆ ಯಾರಿಗೂ ಮೈಸೂರು ರಾಜಮನೆತನ ಹಾಗೂ ಟಿಪ್ಪು ಕುರಿತು ಮಾತನಾಡುವಾ ಅಥವಾ ಓದುವಾಗ ಸೀತಾದಂಡು ಎಂಬ ಹೆಸರು ಕೇಳಿದ ಅಥವಾ ಓದಿದ ನೆನಪೇ ಇರುವುದಿಲ್ಲ, ಹೌದು ಟಿಪ್ಪು ಬಗ್ಗೆ ನಮ್ಮಿ ಪ್ರತಿವರ್ಷ ಸಾಕಷ್ಟು ಚರ್ಚೆ ಆಗುತ್ತದೆ. ಆದರೆ ಇಲ್ಲಿ ಇದೇ ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸೀತಾದಂಡಿನ ಪ್ರಸ್ತಾಪ ಬರುತ್ತದೆ. ಟಿಪ್ಪು ಕುರಿತು ಜನಪದರಲ್ಲಿ ಸಾಕಷ್ಟು ಸಂಗತಿಗಳು ಇವೆಯಾದರೂ ಆಧುನಿಕ ಹಿಸ್ಟರಿ ಅವನ್ನೆಲ್ಲ ಮಾನ್ಯ ಮಾಡುವುದಿಲ್ಲ. ನಮ್ಮ ಮೌಖಿಕ ಪರಂಪರೆಯಲ್ಲಿ ಅದಕ್ಕೆ ಸಾಕಷ್ಟು ಬೆಲೆ ಇದೆ. ಏಕೆಂದರೆ ಅದು ನಮ್ಮ ಗತ. ಬ್ರಿಟಿಷ್ ಪೂರ್ವದ ನಮ್ಮ ಚರಿತ್ರೆ. ಇದನ್ನು ಆಧಾರವಾಗಿಟ್ಟುಕೊಂಡು ಜನಪದ ತಜ್ಞ ಹನೂರು ಕೃಷ್ಣ ಮೂರ್ತಿಯವರ ಅಜ್ಞಾತನೊಬ್ಬನ ಆತ್ಮ ಚರಿತ್ರೆ ಎಂಬ ಕಾದಂಬರಿಯನ್ನೂ ರಚಿಸಿದ್ದಾರೆ. ಅದು ಆಧುನಿಕ ಹಿಸ್ಟರಿ ಆಧರಿಸಿದ್ದಲ್ಲ. ಮೌಖಿಕ ಪರಂಪರೆ ಆಧರಿಸಿದ್ದು. ಜನಸಾಮಾನ್ಯರಿಗೆ ಇದು ಹಿಡಿಸುತ್ತದೆ, ಆಪ್ತವಾಗುತ್ತದೆ, ಹಿಸ್ಟರಿಗೆ ಅಲ್ಲ. ಈ ಕೃತಿಯಲ್ಲಿ ರಾಕೇಶರು ದಾಖಲಿಸುವ ಬಹುತೇಕ ಸಂಗತಿಗಳು ಹಾಗೂ ತಿರುಮಲರಾವ್  ಮತ್ತು ನಾರಾಯಣರಾವ್, ಉರಿಗೌಡ, ಹುಲಿಗೌಡರಂಥ ಹೆಸರುಗಳು ನಮಗೆ ತೀರಾ ಅಪರಿಚಿತವಾದವು. ಇದುವರೆಗೆ ಒಂದೇ ಒಂದು ರಸ್ತೆಗೂ ಅವರ ಹೆಸರು ಇಡದಂತೆ ಆಧುನಿಕ ಹಿಸ್ಟರಿ ನೋಡಿಕೊಂಡಿದೆ. 

ಪ್ರಾಥಮಿಕ ಶಾಲಾ ಪಠ್ಯದಿಂದ ಹಿಡಿದು ಉನ್ನತ ಶಿಕ್ಷಣ ಪಠ್ಯದವರೆಗೆ ಯಾರದು ಯಾವುದನ್ನು ಬೋಧಿಸಬೇಕು ಎಂಬುದನ್ನು ತೀರ್ಮಾನಿಸುವ ಶಕ್ತಿಗಳು ಲಾಬಿಗಳು ಪಾಶ್ಚಾತ್ಯ ಚಿಂತನೆಯ ಪ್ರಭಾವದಲ್ಲಿ ಮುಳುಗಿಹೋಗಿವೆ. ಯಾವುದೇ ವಿಷಯದ ಪಠ್ಯ ಸಿದ್ಧಾಂತ ಬೋಧೊಸುತ್ತದೆಯೇ ವಿನಾ ಸಾಹಿತ್ಯ ಪಠ್ಯ ಸಾಹಿತ್ಯವನ್ನಾಗಲಿ, ಇತಿಹಾಸದ ಪಠ್ಯ ಚರಿತ್ರೆಯನ್ನಾಗಲೀ ಮಕ್ಕಳಿಗೆ ಕಲಿಸುವ ಬದಲು ಒಂದು ನಿರ್ದಿಷ್ಟ ಚಿಂತನೆಗೆ ಸದಸ್ಯರನ್ನು ಸೃಷ್ಟಿಸಿಕೊಡುತ್ತದೆ. ಭಾಷೆಯ ಪಠ್ಯ ಭಾಷೆಯನ್ನು ಎಲ್ಲಿಂದ ಹೇಗೆ ಕಲಿಯಬೇಕು ಅನ್ನುವುದಕ್ಕಿಂತಲೂ ಭಾಷಿಕ ರಾಜಕಾರಣ ಹಾಗೂ ಅನ್ಯ ಭಾಷೆಗಳ ವಿರುದ್ಧ ಎತ್ತಿಕಟ್ಟುತ್ತದೆ. ಹಾಗಾಗಿ ನಮ್ಮ ಸಂಪೂರ್ಣ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಏನನ್ನು ಕಲಿಸಬೇಕಿತ್ತೋ ಅದನ್ನು ಬಿಟ್ಟು ಬೇರೆಲ್ಲವನ್ನೂ ಮಾಡಲು ಕಲಿಸುತ್ತದೆ. ಹೊರತಾಗಿ ಯಾವುದಾದರೂ ವಿಷಯದ ಜ್ಞಾನ ಬೇಕು ಅನಿಸಿದರೆ ಸ್ವಂತ ಪರಿಶ್ರಮ ಅಗತ್ಯವಾಗುತ್ತದೆ. ಅಂಥ ಅಗತ್ಯವನ್ನು ಈ ಕೃತಿ ಪೂರೈಸಲು ಶ್ರಮಿಸುತ್ತದೆ. ಹಾಗೆ ನೋಡಿದರೆ, ಮೈಸೂರನ್ನು ನೆಪವಾಗಿಟ್ಟುಕೊಂಡು ರಾಕೇಶರು ಮಾಡಿದ ಇತಿಹಾಸದ ಈ ಕೆಲಸ ನಮ್ಮ ದೇಶದ ಹಳ್ಳಿಯ ಇತಿಹಾಸದ ವಿಷಯದಲ್ಲೂ ನಡೆದು ಹೊಸದಾಗಿ ಗ್ರಾಮ ಚರಿತ್ರೆಗಳನ್ನು ರೂಪಿಸುವ ದಂಡು ಸಿದ್ಧವಾಗªಬೇಕಿದೆ. ಆಗ ಮಾತ್ರ ಪಾಶ್ಚಾತ್ಯ ರೂಪಿತ ಇತಿಹಾಸದ ಬದಲಾಗಿ ನಮಗೆ ನಮ್ಮ ಗತದ ಚಿತ್ರಣ ಲಭಿಸಲು ಸಾಧ್ಯ. ಇಂಥ ಕೆಲಸ ಎಲ್ಲ ಕಡೆ ಶುರುವಾಗಲಿ. ಇದು ನೇರ ಮಾರಾಟದಲ್ಲಿ ಮಾತ್ರವಲ್ಲದೇ ಆನ್ ಲೈನ್ ನಲ್ಲೂ ಲಭ್ಯ ಅನ್ನುವುದು ಖುಷಿಯ ಸಂಗತಿ. ಬಹುತೇಕ ಪುಸ್ತಕಗಳಂತೆ ಇದನ್ನು ಸಾಧ್ಯವಾದಷ್ಟು ಶಕ್ತಿ ಬಳಸಿ ಆದಷ್ಟು ದೂರ ಎಸೆಯುವಂಥದ್ದಲ್ಲ, ಎತ್ತಿಟ್ಟುಕೊಂಡು ಮತ್ತೆ ಮತ್ತೆ ಗಮನಿಸಬೇಕಾದ್ದು. ಇದರಿಂದ ನಮ್ಮ ಸಾಂಪ್ರದಾಯಿಕ ಜ್ಞಾನಭಂಡಾರಕ್ಕೆ ಮಾನ್ಯತೆ ದೊರೆಯುತ್ತದೆ.




ಕೃತಿ ವಿವರ: ಮುಚ್ಚಿಟ್ಟ ಕರ್ನಾಟಕ ಚರಿತ್ರೆ, ಲೇ: ರಾಕೇಶ್ ಶೆಟ್ಟಿ, 

ಪರಕಾಶಕರು - ನಿಲುಮೆ ಪ್ರಕಾಶನ, ಬೆಂಗಳೂರು, ಬೆಲೆ- ರೂ-೩೧೫.

ಪುಟಗಳು-೩೭೨


 


 

 


Friday, 13 September 2024

ಒಂದು ಒಳ್ಳೆಯ ಕೆಲಸ


ಒಂದು ದಿನ ಫೋನ್ ರಿಂಗಣಿಸಿತು. ಯಾರೆಂದು ಕೇಳಿದರೆ ಸಾರ್ ನಾನು ಸಿದ್ದೇಶ ಅಂದಿತು ಅತ್ತಲಿನ ದನಿ. ಹಾಗೆಲ್ಲ ಕರೆ ಮಾಡುವ ಪುಣ್ಯಾತ್ಮ ಅಲ್ಲವಲ್ಲ ಅಂದುಕೊಳ್ಳುವಷ್ಟರಲ್ಲಿ ಸಾ, ಕನ್ನಡ ಸಾಹಿತ್ಯ, ಕತೆ, ಕಾದಂಬರಿ ಇತ್ಯಾದಿ ಕುರಿತ ಒಂದು ಸಂಶೋಧನ ಲೇಖನ ಕೊಡಿ ಸಾ.ಅಂದವನೇ ಫಾಂಟು, ಅಕ್ಷರ ಮಿತಿ ಇತ್ಯಾದಿ ಎಲ್ಲ ಹೇಳಿದ. ನಾನು ಒಂದು ಸಂಕಲನ ಹೊರತರುತ್ತಿದ್ದೇನೆ ಅಂದ. ಆತ ನನ್ನ ಪ್ರಿಯ ವಿದ್ಯಾರ್ಥಿ ಮಿತ್ರ. ಏನೋ ಪ್ರಯತ್ನ ಮಾಡಿ ಒಳ್ಳೆಯ ಕೆಲಸ ಮಾಡುತ್ತಿದ್ದಾನೆ ಅನಿಸಿ ಆಯ್ತಪ್ಪಾ ಒಂದು ವಾರ ಟೈಮ್ ಕೊಡು ಅಂದೆ. ಸರಿ ಸಾ ಅಂದ. ಕಳಿಸಿದೆ. ಪುಸ್ತಕ ಈಗ ಹೊರಬಂದಿದೆ. ಮೊದಲ ಬಾರಿ ಒಂದು ಪುಸ್ತಕ ಹೊರತರುವುದು ಸುಲಭವಲ್ಲ, ಹಾಗಂತ ಸಿದ್ದೇಶ ಈಗಾಗಲೇ ಅನೇಕ ಕವನ ಸಂಕಲನ ಹೊರತಂದಿದ್ದಾನೆ. ಆದರೆ ಇವನ್ನು ಪ್ರಕಟಿಸಿದವರು ಬೇರೆ. ಸುಮ್ಮನೇ ಲೇಖಕರಾಗಿ ಇನ್ನೊಬ್ಬರು ಪ್ರಕಟಪಡಿಸುವ ಪುಸ್ತಕ  ಪ್ರಕಟಮಾಡುವುದು ಕೂಡ ಸರಳವಲ್ಲ. ಅಂಥದ್ದರಲ್ಲಿ ಇಲ್ಲಿ ಸಿದ್ದೇಶ ಸ್ವತಃ ಬರೆದು, ಅನ್ಯರಿಂದ ಬರೆಸಿ ತಾನೇ ಅಚ್ಚುಹಾಕಿ ಪುಸ್ತಕ ಹೊರತರುತ್ತಿದ್ದಾನೆ ಅನಿಸಿ ಖುಷಿ ಆಯ್ತು. ಈಗ ಅದನ್ನು ಚೆನ್ನಾಗಿಯೇ ಹೊರತಂದಿದ್ದಾನೆ, ಸ್ವತಃ ಕವಿಯಾದ ಆತ ಈ ಕೃತಿಗೆ ಕಾವ್ಯಾತ್ಮಕವಾಗಿ 'ಅಳಿಲು ಬಿಳಲು' ಎಂದು ಹೆಸರಿಟ್ಟಿದ್ದಾನೆ. ಇಲ್ಲಿ ಒಟ್ಟು ಇಪ್ಪತ್ತು ಸಂಶೋಧನ ಬರೆಹಗಳಿವೆ. ಪುಸ್ತಕ ಹೊರತರುವ ಉತ್ಸಾಹದಿಂದ ಸಿದ್ದೇಶ ಇಲ್ಲಿ ಸುಮ್ಮನೇ ಒಂದಷ್ಟು ಲೇಖನಗಳನ್ನು ಗುಡ್ಡೆ ಹಾಕಿಲ್ಲ. ಇಲ್ಲಿನ ಬರೆಹಗಳಲ್ಲಿನ ವಸ್ತು ವೈವಿಧ್ಯ ಕನ್ನಡದ ಬಹು ಆಯಾಮವನ್ನು ಕನ್ನಡಿಯಲ್ಲಿ ಕಾಣಿಸುತ್ತದೆ. ಇಪ್ಪತ್ತು ಬರೆಹಗಳು ಇಪ್ಪತ್ತು ಬಗೆಯನ್ನು ಪ್ರತಿನಿಧಿಸುತ್ತವೆ. ಹಳೆಗನ್ನಡ, ಶಾಸನಗಳಿಂದ ಹಿಡಿದು ಆಧುನಿಕ ಸಾಹಿತ್ಯ , ಭಾಷಿಕ ಸಮಸ್ಯೆ, ಸವಾಲುಗಳವರೆಗೆ ಏನೆಲ್ಲ ಅಡಕಗೊಂಡಿವೆ. ಜೊತೆಗೆ ಕನ್ನಡ ಮೀಮಾಂಸೆಯ ಬಗ್ಗೆಯೂ  ಬರೆಹವಿದೆ. ಇದು ಆಸಕ್ತಿಕರ ಓದನ್ನು ಕೊಡುತ್ತದೆ. ಕನ್ನಡ ಛಂದಸ್ಸು ಮತ್ತು ಕಾವ್ಯ ಮೀಮಾಂಸೆಗಳು ಸಂಸ್ಕೃತ ಪ್ರಭಾವದಿಂದ ಹೇಗೆ ಬಿಡಿಸಿಕೊಂಡು ತಮ್ಮ ಸ್ವಂತಿಕೆ ಸ್ಥಾಪಿಸಿದವು ಎಂಬುದನ್ನು ಇದರಲ್ಲಿ ಮನಗಾಣಿಸಲಾಗಿದೆ. ಹೊಸಗನ್ನಡದಲ್ಲಿ ಈಚೆಗೆ ಇಂಥ ಚರ್ಚೆ ಶುರುವಾಗಿದೆ. ಕನ್ನಡದ್ದೇ ವ್ಯಾಕರಣ ಕಂಡುಕೊಳ್ಳುವ ಯತ್ನದ ಜೊತೆಗೆ ಕನ್ನಡ ಮೀಮಾಂಸೆ ಹಾಗೂ ಛಂದೋ ಸ್ವರೂಪವನ್ನು ಗುರುತಿಸುವ ಕೆಲಸಗಳು ನಡೆಯುತ್ತಿವೆ, ಇಂಥ ಯತ್ನಕ್ಕೆ ಪ್ರಸ್ತುತ ಬರೆಹದ ಲೇಖಕರಾದ ರವಿಕುಮಾರ್ ತಮ್ಮ ಚಿಂತನೆಯನ್ನು ಸೇರಿಸಿದ್ದಾರೆ. ಆಧುನಿಕ ಸಂದರ್ಭದಲ್ಲಿ ಕನ್ನಡ ಭಾಷೆ ಎದುರಿಸುತ್ತಿರುವ ಸವಾಲು ಹಾಗೂ ಸಮಸ್ಯೆ ಕುರಿತ ಚರ್ಚೆ ಕೂಡ ಇದರಲ್ಲಿ ಸೇರಿದೆ. ಪ್ರಸ್ತುತ ಕನ್ನಡ ಭಾಷೆಯ ಮುಂದಿರುವ ಸವಾಲುಗಳು ಇಂಥ ಒಂದು ಲೇಖನ. ಈ ಬರಹ ಕೆಲವು ತಥಾ ಕಥಿತ ವಿಯಗಳ ಕಡೆಗೆ ಗಮನ ಸೆಳೆಯುತ್ತದೆ, ಹೊಸದೇನೂ ಇಲ್ಲ, ಜೊತೆಗೆ ಭಾಷೆಯ ಉಗಮ ಹೇಗಾಯಿತೆಂಬ ಹಳೆಯ ಚರ್ಚೆಯ ಸಾರವನ್ನು ಮತ್ತೆ ಉಲ್ಲೇಖಿಸುತ್ತಾರೆ. ಬದಲಾಗಿ ಇಂದು ನೆಲ, ಜಲ ರಾಜಕಾರಣ ಇತ್ಯಾದಿ ಸಕಲ ವಿಷಯಗಳಿಗೂ ಅಂತಿಮವಾಗಿ ಭಾಷೆಯನ್ನೇ ತಂದು ಏಕೆ ಜೋಡಿಸಿ ಸಮಸ್ಯೆಯನ್ನು ಏಕೆ ಜಟಿಲಗೊಳಿಸಲಾಗುತ್ತಿದೆ ಎಂಬ ವಿಷಯದ ಚರ್ಚೆ ಮಾಡಬಹುದಿತ್ತು. ಅದಿರಲಿ ಅದು ಲೇಖಕರ ಆಸಕ್ತಿಗೆ ಬಿಟ್ಟ ವಿಷಯ. 

ಇಲ್ಲಿನ ಒಂದೊಂದು ಲೇಖನವೂ ಕನ್ನಡದ ಒಂದೊಂದು ಆಯಾಮ ಕುರಿತು ಬೆಳಕು ಚೆಲ್ಲುತ್ತದೆ. ಇವನ್ನೆಲ್ಲ ಓದಿದಾಗ ಕನ್ನಡದ ಅಗಾಧತೆಯ ಕಿರು ಪರಿಚಯ ಸಿಗುತ್ತದೆ, ಇದು ಈ ಸಂಕಲನದ ಸಾರ್ಥಕತೆ. ಜೊತೆಗೆ ಇಲ್ಲಿನ ಯಾವ ಬರೆಹಕ್ಕೂ ಸಂಪಾದಕರು ತಮ್ಮ ನಿಲುವು ಧೋರಣೆಯನ್ನು ಹೇರುವ ಅಥವಾ ತಿದ್ದಿ ತೀಡುವ ಕೆಲಸ ಮಾಡಿಲ್ಲ, ಬದಲಾಗಿ ಅವಕ್ಕೆ ಆಯಾ ಲೇಖಕರೇ ಹೊಣೆ ಎಂದು ಸ್ವಾತಂತ್ರ್ಯ ಕೊಟ್ಟಿದ್ದಾರೆ. ಹೀಗಾಗಿ ವಿಷಯದಲ್ಲಿ ಮಾತ್ರವಲ್ಲದೇ ಬರೆಹದ ಶೈಲಿಯಲ್ಲೂ ವೈವಿಧ್ಯ ಉಳಿದಿದೆ. ಇಲ್ಲಿನ ಏಕಸೂತ್ರತೆ ಕನ್ನಡ ಸಾಹಿತ್ಯ ಮಾತ್ರ. ಅಲ್ಲದೇ ಸಂಪಾದಕರು ಯಾವುದೇ ಪೂರ್ವ ನಿರ್ಧರಿತ ತತ್‌ತ್ವ ಸಿದ್ಧಾಂತಕ್ಕೆ ಕಟ್ಟು ಬಿದ್ದು ಸಂಪಾದನೆಗೆ ಮುಂದಾಗಿಲ್ಲದಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಕನ್ನಡದಲ್ಲಿ ನಮಗೆಲ್ಲ ತಿಳಿದಂತೆ ಸಾಹಿತ್ಯವಿದೆಯೇ ವಿನಾ ಎಡ ಬಲ ಸಿದ್ಧಾಂತಗಳಿಗೆ ಮಾರಿಕೊಂಡ ನಿಲುವಿಲ್ಲ. ಇಲ್ಲಿ ಎಲ್ಲವೂ ಇದೆ. ಬೇಕಾದುದನ್ನು ಹುಡುಕಿಕೊಳ್ಳಬೇಕು ಅಷ್ಟೇ. ಹೀಗೆ ಇದ್ದುದನ್ನು ಮತ್ತೆ ಒಂದೆಡೆ ಕಲೆಹಾಕಿ ಕಟ್ಟಿಕೊಡುವ ಪ್ರಾಮಾಣಿಕ ಯತ್ನವನ್ನು ಮಿತ್ರ ಸಿದ್ದೇಶ ಮಾಡಿದ್ದಾನೆ. ಇದನ್ನು ಸಾಹಿತ್ಯಾಸಕ್ತರು ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡು ಅದನ್ನು ಮತ್ತಷ್ಟು ಶ್ರೀಮಂತಗೊಳಿಸಿಕೊಳ್ಳಬೇಕಾದ ಅಗತ್ಯವಿದೆ. ಅದನ್ನು ಸಿದ್ದೇಶ ಮಾಡಲಾರ. 

ಕೃತಿಯೇನೋ ಹೊರಬಂತು. ಆದರೆ ಅದನ್ನು ಜನತೆಗೆ ತಲುಪಿಸುವ ಶಿಸ್ತು ಬದ್ಧ ಕೆಲಸ ಕೂಡ ಅಷ್ಟೇ ಮುಖ್ಯ. ಈ ಜವಾಬ್ದಾರಿಯನ್ನೂ ಸಂಪಾದಕರೇ ಹೊತ್ತಿದ್ದಾರೆ. ಇದಕ್ಕೆ ಪರ್ಯಾಯ ಹಾದಿಗಳಿವೆ. ಅದನ್ನು ಅವರು ಕಂಡುಕೊಳ್ಳುವುದು ಅಗತ್ಯ ಮಾತ್ರವಲ್ಲ, ಅನಿವಾರ್ಯ ಕೂಡ ಹೌದು. ಆಧುನಿಕ ತಂತ್ರಜ್ಞಾನಕ್ಕೆ ಕನ್ನಡ ಮುದ್ರಣ ವಿಧಾನ ತೆರೆದುಕೊಂಡು ಶತಮಾನಗಳೇ ಕಳೆದಿವೆ. ಆದರೆ ಆಧುನಿಕ ಪುಸ್ತಕ ಮಾರಾಟದ ವ್ಯವಸ್ಥೆ ಇನ್ನೂ ಅಷ್ಟಾಗಿ ಕನ್ನಡಕ್ಕೆ ಅದ್ಯಾಕೋ ಇನ್ನೂ ಒಗ್ಗಿಲ್ಲ, ಕನ್ನಡ ಪುಸ್ತಕ ಮಾರಾಟ ವ್ಯವಸ್ಥೆ ಇಂದಿಗೂ ಹಳೆಯ ನೇರ ಖರೀದಿಯ ಅಂಗಡಿ ವ್ಯವಸ್ಥೆಯಲ್ಲೇ ಇದೆ. ಇಲ್ಲ, ಇಷ್ಟು ಸಾಕಾಗುವುದಿಲ್ಲ. ಒಂದು ಕನ್ನಡ ಪುಸ್ತಕ ಹೊರ ಬರುತ್ತಿದ್ದಂತೆ ಅದು ಸಲೀಸಾಗಿ ಅಂತರ್ಜಾಲದಲ್ಲಿ ಹರಿದಾಡಬೇಕು. ಆನ್ ಲೈನ್ ಮಾರಾಟದಲ್ಲಿ ಕೂಡಲೇ ಲಭಿಸುವಂತಾಗಬೇಕು. ಪುಸ್ತಕ ಮಾರಾಟವಾಗಲಿ, ಬಿಡಲಿ ಗ್ರಂಥಾಲಯ ಖರೀದಿ ವ್ಯವಸ್ಥೆಯಿಂದ ಅದಕ್ಕೆ ಹಾಕಿದ ಬಂಡವಾಳಕ್ಕೆ ಮೋಸವಾಗುವುದಿಲ್ಲ ಎಂಬ ಧೈರ್ಯ ಪ್ರಕಾಶಕರದು. ಇದು ಬದಲಾಗಬೇಕು. ಎಲ್ಲೆಂದರಲ್ಲಿ ಅಂತರ್ಜಾಲದಲ್ಲಿ ಕನ್ನಡ ರಾರಾಜಿಸಬೇಕಾದರೆ ಕನ್ನಡ ಕೃತಿಗಳು ಆನ್ ಲೈನ್ ಮಾರಾಟದಲ್ಲಿ ಸುಲಭಕ್ಕೆ ಸಿಗುವಂತಾಗಬೇಕು. ಇದು ಯಾವಾಗ ಆಗುತ್ತದೆ ಎಂಬುದನ್ನು ನಾವೀಗ ಕಾಯಬೇಕಿದೆ.


ಸಿದ್ದೇಶನಿಂದ ಇಂಥ ಮತ್ತಷ್ಟು ಕೃತಿಗಳು ಬೆಳಕು ಕಾಣಲಿ ಎಂದು ಆಶಿಸೋಣ.

ಕೃತಿ ವಿವರ- ಅಳಿಲು ಬಿಳಲು ಸಂಶೋಧನ ಲೇಖನಗಳು, 

ದುಗ್ಗೇನಹಳ್ಳಿ ಸಿದ್ದೇಶ(ಸಂ) ಜಯಮಂಗಲಿ ಪ್ರಕಾಶನ, ಕೊರಟಗೆರೆ, ತುಮಕೂರು

ಪುಟಗಳು-೧೫೨+೫, ಬೆಲೆ-೨೦೦ ರೂ. ಐಎಸ್ ಬಿಎನ್ ಸಂಖ್ಯೆ-೯೭೮-೮೩-೩೪೯-೦೪೪೬-೫

   


Friday, 6 September 2024

ಶಿಕ್ಷಕರ ದಿನಾಚರಣೆಯ ನೆಪದಲ್ಲಿ


ನಿನ್ನೆ ಶಿಕ್ಷಕರ ದಿನಾಚರಣೆಯನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿದೆ. ಇದನ್ನು ನೆನ್ನೆಯೇ ಬರೆಯಬೇಕಿತ್ತು. ಆದರೆ ಗುರುವನ್ನು ಯಾವಾಗ ಬೇಕಾದರೂ ನೆನೆಯಬಹುದು. ಆ ನೆಪದಲ್ಲಿ ಕೆಲವು ಸಂಗತಿಗಳನ್ನು ಹೇಳಿಕೊಳ್ಳುವೆ. ಗುರು ಸಂಬಂಧ ನಮ್ಮ ದೇಶದ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ಯಾವುದೇ ವಿಷಯವಾಗಲಿ. ಓದುಬರೆಹ ಮಾತ್ರವಲ್ಲ, ಕೃಷಿ ಅಡುಗೆ ಏನೇ ಇರಲಿ, ಎಲ್ಲದಕ್ಕೂ ಗುರು ಅಗತ್ಯ ಎನ್ನುತ್ತದೆ ನಮ್ಮ ಸಂಪ್ರದಾಯ. ಕನ್ನಡದ ಶ್ರೇಷ್ಠ ವ್ಯಾಕರಣ ಗ್ರಂಥ ಕೇಶಿರಾಜನ ಶಬ್ದಮಣಿ ದರ್ಪಣವಂತೂ 'ವರ್ಣಮಾತ್ರಮಂ ಕಲಿಸಿದಾತಂ ಗುರುಂ' ಎಂದು ಇದರ ಕಲ್ಪನೆಯನ್ನು ಇನ್ನೂ ಹಿಗ್ಗಿಸುತ್ತದೆ. ಹೀಗಾಗಿ ಹುಟ್ಟಿನಿಂದ ಸಾಯುವ ತನಕ ನಾವು ಕಲಿಯುವುದು ಇರುವಂತೆ ಕಲಿಸುವವರೂ ಇರುತ್ತಾರೆ. ಕಲಿಸುವುದೆಂದರೆ ಎದುರುಬದುರು ಕುಳಿತು ಒಬ್ಬರು ಹೇಳುವುದು, ಹೇಳುವವರು ಗುರು ಎಂದೂ ಅಲ್ಲ, ಗುರು ಎದುರಿಗೆ ಇರಬೇಕು ಎಂದೂ ಇಲ್ಲ, ಏಕಲವ್ಯ, ದ್ರೋಣರ ಕಥೆ ಇದಕ್ಕೆ ಸಾಕ್ಷಿ. ಯಾರೋ ಯಾವುದೋ ಕೆಲಸವನ್ನು ಮಾಡುತ್ತಾರೆ, ಅದನ್ನು ನೋಡಿದ ನಾವು ಅದನ್ನು ಅನುಕರಿಸಿ ಮಾಡಿದಾಗ ಮೊದಲು ಆಕೆಲಸ ಮಾಡಿತೋರಿದವರು ನಮ್ಮ ಗುರು ಸಮಾನರು. ಆದರೆ ಗುರು ಶಿಷ್ಯ ಪರಂಪರೆಯ ಬಗ್ಗೆ ವಚನಕಾರರು ಹೇಳಿದಷ್ಟು ಬೇರೆ ಯಾರೂ ನಮ್ಮಲ್ಲಿ ಹೇಳಿಲ್ಲ, ಎಲ್ಲಕ್ಕಿಂತ ಶ್ರೇಷ್ಠತಮ ಎಂಬಂತೆ ಅಲ್ಲಮ ಪ್ರಭು ಹೇಳಿದ ಮಾತು ನಮ್ಮೆಲ್ಲರ ಕಣ್ಣು ತೆರೆಸುವಂತೆ ಇದೆ. ಆತ ಹೇಳುತ್ತಾನೆ-ಕೃತಯುಗದಲಿ ಶ್ರೀಗುರುವು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದೊಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ, ತ್ರೇತಾಯುಗದಲಿ ಶ್ರೀಗುರುವು ಶಿಷ್ಯಂಗೆ ಬೈದು ಬುದ್ಧಿ ಕಲಿಸಿದೊಡೆ ಆಗಲಿ ಮಹಾಪ್ರಸಾದನೆಂದೆನಯ್ಯಾ, ದ್ವಾಪರಯುಗದಲಿ ಶ್ರೀಗುರುವು ಶಿಷ್ಯಂಗೆ ಜಂಕಿಸಿ ಬುದ್ಧಿ ಕಲಿಸಿದೊಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ, ಕಲಿಯುಗದಲಿ ಶ್ರೀಗುರುವು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದೊಡೆ ಆಗಲಿ ಮಹಾಪ್ರಸಾದವೆಂದೆಬಯ್ಯಾ, ಗುಹೇಶ್ವರಾ ನಿಮ್ಮ ಕಲಿಯುಗದ ಕಟ್ಟಳೆಗೆ ಆನು ಬೆರಗಾದೆ'. ಇದು ಕೇವಲ ಯುಗದ ಮಹಿಮೆಯನ್ನು ಮಾತ್ರ ಹೇಳುತ್ತಿಲ್ಲ, ಕ್ರಮವಾಗಿ ಗುರುವಿನ ಘನತೆ ಕುಸಿದುದನ್ನೂ ಹೇಳುತ್ತದೆ.

ಗುರುವಿನ ಘನತೆ ಕುಸಿಯಲು ಕೇವಲ ಶಿಷ್ಯ ಅಥವಾ ಸಮಾಜ ಮಾತ್ರ ಕಾರಣವಲ್ಲ, ಮುಖ್ಯವಾಗಿ ಸ್ವತಃ ಗುರು ಅಥವಾ ನಾವಿಂದು ಕರೆಯುವ ಶಿಕ್ಷಕ ಕೂಡ ಹೆಚ್ಚು ಕಾರಣ. ಇದಕ್ಕೆ ನಿತ್ಯ ನಿದರ್ಶನಗಳು ನಮ್ಮ ಸುತ್ತ ದೊರೆಯುತ್ತವೆ. ಇಂದು ಶಿಕ್ಷಕರು ಮಾಡದ ಅನಾಚಾರವಿಲ್ಲ, ಶಿಕ್ಷಕನಿಗೇ ಇಲ್ಲಸ ಆಚಾರ ಬೇರೆಯವರಿಗೆ ಹೇಳಲು ಇನ್ನೆಲ್ಲಿ?  ಆದರೆ ಕೆಲವು ಗುರುಗಳು ಇರುತ್ತಾರೆ ಅವರು ಹೇಳುವಂತೆ 'ನಾನು ಹೇಳಿದ್ದನ್ನು ಮಾಡು, ಮಾಡಿದ್ದನ್ನಲ್ಲ', ಎಂಬಂತೆ ಇರುತ್ತದೆ. ಅವರು ಮಾಡುವುದೇ ಬೇರೆ, ಹೇಳುವುದೇ ಬೇರೆ, ಎರಡಕ್ಕೂ ಸಂಬಂಧ ಇರಬೇಕಿಲ್ಲ ಎಂಬುದು ಅಂಥವರ ತರ್ಕ. ಆದರೆ ಕಲಿಕೆ ಕೇಳಿದ್ದು, ನೋಡಿದ್ದು ಮಾಡಿದ್ದರಿಂದ ಬರುತ್ತದೆ ಅಂದಾಗ, ಇವುಗಳ ಮಧ್ಯೆ ನೇರ ಸಂಬಂಧವಿದೆ ಎಂದು ತಿಳಿಯುತ್ತದೆ. ಎಂತೆಂಥ ಶಿಕ್ಷಕರಿದ್ದಾರೆ, ಅಸಹ್ಯವಾಗಬೇಕು, ತಮ್ಮ ಬಳಿ ಕಲಿಯಲು ಬಂದ ಹೆಣ್ಣು ಮಕ್ಕಳ ಮೇಲೆ  ಲೈಂಗಿಕ ದೌರ್ಜನ್ಯ ಎಸಗುವುದು, ಮೋಸ ಮಾಡುವುದು, ವಂಚಿಸುವುದು ಇತ್ಯಾದಿ. ಇವರೆಲ್ಲ ಅಕಸ್ಮಾತ್ ಶಿಕ್ಷಕ ಹುದ್ದೆಗೆ ಬಂದವರು, ಅದು ಅವರ ಮೊದಲ ಹಾಗೂ ಅಂತಿಮ ಆಯ್ಕೆ ಆಗಬೇಕಿಲ್ಲ. ಆರಾಮವಾಗಿ ಇರಬಹುದೆಂಬ ಕಾರಣಕ್ಕೆ ಬಹುತೇಕರು ಶಿಕ್ಷಕ ಹುದ್ದೆಗೆ ಬಂದು ಕೂರುತ್ತಾರೆ. ನನ್ನ ಪರಿಚಯಸ್ಥರೊಬ್ಬರಿದ್ದರು, ಅವರು ಬಸ್ ಚಾಲಕ, ಲಿಡ್ಕರ್ ಚಪ್ಪಲಿ ಅಂಗಡಿಯಿಂದ ಹಿಡಿದು ಸಿಕ್ಕಸಿಕ್ಕ ಹುದ್ದೆಗಳಿಗೆ ಯತ್ನಿಸಿ ಕೊನೆಗೆ ಶಿಕ್ಷಕ ಹುದ್ದೆಗೆ ಅರ್ಜಿಸಲ್ಲಿಸಿ ಆಯ್ಕೆ ಆಗಿ ಸುಖವಾಗಿದ್ದಾರೆ. ಒಟ್ಟಿನಲ್ಲಿ ಯಾವುದಾದರೂ ಸರಿ. ಸರ್ಕಾರದ ಕಾಯಂ ವೇತನ ಸುಖವಾಗಿ ಬರುವ ಯಾವುದಾದರೂ ವೃತ್ತಿ ಸರಿ ಅನ್ನುವವರು ಶಿಕ್ಷಕರಾದರೆ ಅಂಥವರಿಂದ ಸಮಾಜ ಏನು ನಿರೀಕ್ಷಿಸಬಹುದು? ದುರಂತಕ್ಕೆ ನಮ್ಮ ಇಂದಿನ ಸಮಾಜದಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ಹಂತದವರೆಗೆ ಇಂಥವರೇ ಹೆಚ್ಚಿದ್ದಾರೆ. ಶಿಕ್ಷಕರು ಮಾದರಿಯಾಗಿರಬೇಕು ಎಂಬುದು ಮಾದರಿ ಅಥವಾ ಆದರ್ಶದ ಮಾತೇ ಆಗುತ್ತಿದೆ. 

ಆದರೆ ಇದರಿಂದ ನಾವು ನಿರಾಶರಾಗಬೇಕಿಲ್ಲ, ನಮ್ಮ ನಡುವೆ ಇಂದಿನ ಕಾಲದಲ್ಲೂ ಆದರ್ಶ ಬಿತ್ತಿಹೋದ ಬಿತ್ತುತ್ತಿರುವ ಶಿಕ್ಷಕರಿದ್ದಾರೆ. ಹಿರಿಯರ ನಿದರ್ಶನ ನೋಡುವುದಾದರೆ ಟಿ ಎಸ್  ವೆಂಕಣ್ಣಯ್ಯ ಹಾಗೂ ಅವರ ಸಹೋದರ ಟಿ ಎಸ್ ಶ್ಯಾಮರಾವ್ ಅವರ ಬದುಕನ್ನು ನೋಡಬಹುದು. ಅವರು ತಮ್ಮ ಪ್ರಾಮಾಣಿಕ ಸಂಪಾದನೆಯ ಬಹುಪಾಲನ್ನು ವಿದ್ಯಾರ್ಥಿಗಳ ಊಟೋಪಚಾರಕ್ಕೆ ಮೀಸಲಿಡುತ್ತಿದ್ದರು. ಕನ್ನಡದ ಶ್ರೇಷ್ಠ ಸಾಹಿತಿ ಕುವೆಂಪು ಅವರಿಗೆ ಎಲ್ಲ ರೀತಿಯಲ್ಲೂ ಆಸರೆ ಆದವರು ವೆಂಕಣ್ಣಯ್ಯನವರು. ಶ್ಯಾಮರಾಯರು ನವೋದಯ ಕಾಲದ ಹಳೆ ಮೈಸೂರು ಪ್ರದೇಶದ ಎಲ್ಲ ಸಾಹಿತಿಗಳಿಗೂ ಉಪಚರಿಸಿದವರು. ಈಗಲೂ ಇಂಥ ಮಾದರಿಗಳಿವೆ. ಇವರೆಲ್ಲ ನಾಡಿನಾದ್ಯಂತ ಹರಡಿದ್ದಾರೆ. ಆದರೆ ಚಂದಿರ ಎಷ್ಟೇ ಚೆನ್ನಾಗಿ ಹೊಳೆಯಲಿ ಅವನ ಮೇಲೆ ಇರುವ ಸಣ್ಣ ಕಪ್ಪು ಚುಕ್ಕೆ ಎದ್ದು ಕಾಣುವಂತೆ ಶಿಕ್ಷಕ ವೃತ್ತಿಯಲ್ಲಾಗುವ ಸಣ್ಣ ದೋಷವೂ ಬೃಹತ್ತಾಗಿ ಕಾಣುತ್ತದೆ. ಏಕೆಂದರೆ ಅದರ ಪರಿಣಾಮ ಅಂಥದ್ದು. ನಮ್ಮ ಸಮಾಜದಲ್ಲಿ ಸಾವಿರಾರು ವೃತ್ತಿಗಳಿವೆಯಾದರೂ ಅವರನ್ನೆಲ್ಲ ಮೂಲತಃ ರೂಪಿಸುವವರು ಶಿಕ್ಷಕರೇ ಆಗಿದ್ದಾರೆ, ಹಾಗಾಗಿ ಶಿಕ್ಷಕರ ಸ್ಥಾನಕ್ಕೆ ಅಷ್ಟು ಮಹತ್ವ. ಅನ್ಯ ವೃತ್ತಿಗೆ ಜವಾಬ್ದಾರಿ ಇಲ್ಲವೆಂದಲ್ಲ, ಆದರೆ ಅನ್ಯ ವೃತ್ತಿಗಳು ಆಯಾ ನಿರ್ದಿಷ್ಟ ಸಂದರ್ಭಕ್ಕೆ ಸಂಬಂಧಿಸಿವೆ. ಒಬ್ಬ ದರ್ಜಿ ಕೆಟ್ಟದಾಗಿ ಬಟ್ಟೆ ಹೊಲಿದರೆ ಆ ಬಟ್ಟೆ ಮಾತ್ರ ಕೆಡುತ್ತದೆ, ಒಬ್ಬ ವಕೀಲ ತನ್ನ ವಾದದಲ್ಲಿ ಸೋತರೆ ಆ ಪ್ರಕರಣ ಸೋಲುತ್ತದೆ, ವೈದ್ಯನ ಕೆಟ್ಟ ಚಿಕಿತ್ಸೆಯಿಂದ ಆ ರೋಗಿಯೊಬ್ಬನ ಮೇಲೆ ಮಾತ್ರ ಪರಿಣಾಮವಾಗುತ್ತದೆ. ಆದರೆ ಶಿಕ್ಷಕ ಕೆಟ್ಟದಾಗಿ ಪಾಠ ಮಾಡಿದರೆ ಅದು ನೂರಾರು ಮಕ್ಕಳನ್ನು ಜೊತೆಗೆ ತಲೆಮಾರುಗಳನ್ನೂ ಕೆಡಿಸುತ್ತದೆ. ಆದ್ದರಿಂದಲೇ ಶಿಕ್ಷಕರನ್ನು ದೇಶಟ್ಟುವವರು ಎಂದು ಕರೆಯುವುದು. ದೇಶ ಕಟ್ಟಲು ರೈತನಾದಿಯಾಗಿ ಎಲ್ಲರೂ ಅನಿವಾರ್ಯ, ಆದರೆ ಗುರುವಿನ ಸ್ಥಾನ ಇವೆಲ್ಲಕ್ಕಿಂತ ದೊಡ್ಡದೆಂದು ಹಿರಿಯರು ಹೇಳುತ್ತಾರೆ. ತಾಯಿ ನಮ್ಮೆಲ್ಲರಿಗೂ ಮೊದಲ ಗುರು. ಆಕೆ ನಡೆಯುವ, ಉಣ್ಣುವ, ಇತ್ಯಾದಿ ಮನುಷ್ಯನ ಅಗತ್ಯದ ಎಲ್ಲ ಮೊದಲುಗಳನ್ನೂ ಮೊದಲು ಕಲಿಸುತ್ತಾಳೆ. ಹಾಗಾಗಿ ತಾಯಿ ತಾನೆ ಮೊದಲ ಗುರು? ಅನ್ನುವುದು. ಇದರಲ್ಲಿ ಅಪ್ಪನ ಪಾಲೂ ಇದೆ. ಇಲ್ಲಿ ತಾಯಿ ಅಂದರೆ ಪೋಷಕರು. ಒಬ್ಬ ಗುರು ಅನೇಕ ತಲೆಮಾರುಗಳವರೆಗೆ ಇರಬಲ್ಲ, ನಮ್ಮ ಮುತ್ತಜ್ಜ ಹೇಳುತ್ತಿದ್ದ, ಅವನ ಅಜ್ಜನಿಗೆ ಒಬ್ಬರು ಗುರುಗಳಿದ್ದರಂತೆ ಎಂದು ವ್ಯಕ್ತಿಯೊಬ್ಬ ತನ್ನ ಮೊಮ್ಮಕ್ಕಳಿಗೆ ಹೇಳಬಹುದು. ಆ ಮೊಮ್ಮಗು ಇದನ್ನು ತನ್ನ ಮೊಮ್ಮಕ್ಕಳಿಗೆ ದಾಟಿಸಬಹುದು. ಇಂಥ ಸಾಧ್ಯತೆ ಬೇರೆ ವೃತ್ತಿಗಳಲ್ಲಿ ಕಷ್ಟ. ಶಿಕ್ಷಕರಾದವರ ಅನುಭವಗಳು ತಮಾಷೆಯಾಗಿರುತ್ತವೆ. ನನ್ನದೇ ಸಣ್ಣ ಉದಾಹರಣೆ ಕೊಡುತ್ತೇನೆ. ನಾಲ್ಕಾರು ವರ್ಷಗಳ ಹಿಂದೆ ಬೆಂಗಳೂರಿನ ಮೆಟ್ರೋದಲ್ಲಾದ ಘಟನೆ, ಜನರಿಂದ ರೈಲು ತುಂಬಿತ್ತು. ನಿಲ್ಲಲೂ ಜಾಗವಿಲ್ಲ. ಅಂಥಾದ್ರಲ್ಲಿ ಅಲ್ಲೆಲ್ಲೋ ಮೂಲೆಯಲ್ಲಿದ್ದ ವ್ಯಕ್ತಿಯೊಬ್ಬ ಎದ್ದು ತಾನು ಕುಳಿತಿದ್ದ ಸ್ಥಳವನ್ನು ಕರೆದು ಕೊಟ್ಟ ಮುಜುಗರದಿಂದ ಪಡೆದು ಯಾಕಪ್ಪಾ ಎಂದು ಕೇಳಿದೆ. ಸಾರ್ ನೀವು ೧೯೯೦ರಲ್ಲಿ ನನಗೆ ಮೈಸೂರಲ್ಲಿ ಮೇಷ್ಟ್ರಾಗಿದ್ದೀರಿ, ನಾನು ಈಗ ಇಂಥ ವೃತ್ತಿ ಮಾಡುತ್ತಿದ್ದೇನೆ ಎಂದೆಲ್ಲ ಹೇಳಿಕೊಂಡ. ಸಾರ್ಥಕ ಅನಿಸಿತು. ಮತ್ತೊಮ್ಮೆ ಹುಡುಗನೊಬ್ಬ ಹುಡುಗಿಯೊಂದಿಗೆ ಮಾಲ್ ಒಂದರಲ್ಲಿ ಅಲ್ಲಿ ಇಲ್ಲಿ ನುಸುಳುತ್ತ ಕರೆದೊಯ್ಯುತ್ತಿದ್ದ. ಅಕಸ್ಮಾತ್ ಎದುರು ಬಂದ. ನಾಚಿ ನೀರಾದ. ಏನಪ್ಪ ಅಂದೆ. ಸರ್ ನೀವು ನನ್ನ ಮೇಷ್ಟಾçಗಿದ್ದಿರಿ ಎಲ್ಲಿ ಯಾವಾಗ ಅಂತೆಲ್ಲ ಒಂದೇ ಉಸುರಿಗೆ ಒದರಿದ. ಸರ್ ಅದು ಇವರು ನನ್ನ ಕಸಿನ್ ಅಂದ. ಆಯ್ತು ಏನೀಗ ಅಂದೆ. ಅವರಿಬ್ಬರು ಪ್ರೇಮಿಗಳು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿತ್ತು. ಆದರೆ  ಆತ ನನ್ನ ಮುಂದೆ ಹೀಗೇಕೆ ಮಾಡಿದ? ನನ್ನ ಬದಲು ಒಬ್ಬ ದರ್ಜಿ ಅಥವಾ ವೈದ್ಯ ಇದ್ದಿದ್ದರೆ ಆತ ಹೀಗೆ ಮಾಡುತ್ತಿದ್ದನೇ ? ಇಂಥ ¸ವೇಶಗಳು ಗುರು ಎಲ್ಲೆಲ್ಲಿ ಹೇಗೆಲ್ಲ ಜಾಗ ಪಡೆಯುತ್ತಾನೆ ಎಂದು ಹೇಳುತ್ತವೆ. ಒಬ್ಬೊಬ್ಬ ಶಿಕ್ಷಕನಲ್ಲೂ ಇಂಥ ಸಾವಿರ ನಿದರ್ಶನಗಳಿರಲು ಸಾಕು. ಇಂಥ ಗುರುಸ್ಥಾನ ಪಡೆದವರು ಒಂದರ್ಥದಲ್ಲಿ ಧನ್ಯರು. ಅವರಿಗೆಲ್ಲ ಸಾವಿರ ಸಾವಿರ ನಮನಗಳು.