Wednesday, 1 January 2025

ಜೈನ ಸಾಹಿತ್ಯ ಚರಿತ್ರೆಯ ಅಂತಿಮ ಸಂಪುಟ


ಕನ್ನಡ ಜೈನ ಸಾಹಿತ್ಯ ಚರಿತ್ರೆಯ ಸಂಪುಟಗಳನ್ನು ಹೊರತರುವ ಹುಚ್ಚು ಸಾಹಸಕ್ಕೆ ವಿದ್ವಾಂಸ ಮಿತ್ರರಾದ ಡಾ. ಪದ್ಮ ಪ್ರಸಾದ್ ಅವರು ಕೈಗೊಂಡಿದ್ದಾರೆಂಬುದು ನಿಮಗೆಲ್ಲ ಹಿಂದೆ ತಿಳಿಸಿದ್ದೆ. ಈಗ ಅವರ ಸಾಹಸ ಮುಕ್ತಾಯ ಕಂಡಿದೆ. ಒಟ್ಟೂ ಸುಮಾರು ಮೂರೂವರೆ ಸಾವಿರ ಪುಟಗಳ ವ್ಯಾಪ್ತಿಯಲ್ಲಿ ಕ್ರಿ.ಪೂ ೬ನೆಯ ಶತಮಾನದಿಂದ ೨೧ನೆಯ ಶತಮಾನದವರೆಗೆ ಅಂದರೆ ಕ್ರಿ.ಪೂ ೬- ಕ್ರಿ.ಶ. ೧೯೫೩ರವರೆಗಿನ ಕನ್ನಡ ಸಾಹಿತ್ಯದಲ್ಲಿ ಕಾಣಿಸುವ ಜೈನ ಕವಿ ಸಾಹಿತಿಗಳ ಕೃತಿ ಮತ್ತು ಕೃತಿಕಾರರ ಪರಿಚಯ ಮಾಡಿಸುವ ಅಸಾಧಾರಣ ಕೆಲಸವನ್ನು ಅವರು ಇದೀಗ ಆರನೆಯ ಸಂಪುಟದ ಮೂಲಕ ಮುಗಿಸಿಕೊಟ್ಟಿದ್ದಾರೆ. ಈ ಎಲ್ಲ ಸಂಪುಟಗಳಲ್ಲಿ ಒಟ್ಟೂ ೩೫೦ರಷ್ಟು ಬೇರೆ ಬೇರೆ ಲೇಖಕರು ಸುಮಾರು ೪೦೦ ಲೇಖನ ಬರಿದಿದ್ದಾರೆ. ಸ್ವತಃ ಸಂಪಾದಕರಾದ ಪದ್ಮ ಪ್ರಸಾದರು ಸುಮಾರು ೧೫೦ ಲೇಖನಗಳನ್ನು ಹಾಗೂ ಅಗತ್ಯ ಪೂರಕ ಮಾಹಿತಿಗಳ ಅನುಬಂಧಗಳನ್ನು ಬಹುತೇಕ ಎಲ್ಲ ಲೇಖನಗಳಿಗೆ ಪೂರಕ ಮಾಹಿತಿಗಳನ್ನು ತುಂಬಿ ಜೀವವಿದ್ದ ಸಂಶೋಧನ ಲೇಖನಗಳಿಗೆ ಜೀವಕಳೆ ತುಂಬಿ ಸಂಪಾದನೆ ಅಂದರೆ ಅವರಿವರಿಂದ ಒಂದಷ್ಟು ಲೇಖನ ಬರೆಯಿಸಿ ಅವನ್ನು ಜೋಡಿಸಿ ಪ್ರಕಟಿಸಿ ಪುಸ್ತಕ ಮಾಡಿಕೊಡುವುದಲ್ಲ, ಎಲ್ಲ ಲೇಖನಗಳಲ್ಲೂ ಸಮಗ್ರತೆ ಹಾಗೂ ಏಕರೂಪತೆ ಬರುವಂತೆ ಒಟ್ಟಂದದಲ್ಲಿ ಲೇಖನಗಳು ಇರುವಂತೆ ಮಾಡುವ ದೊಡ್ಡ ಜವಾಬ್ದಾರಿ ಸಪಾದಕರದು ಎಂಬುದನ್ನು ಮಾಡಿ ತೋರಿಸಿ ಪುಸ್ತಕ ಸಂಪಾದನೆಯಲ್ಲೂ ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ಸದ್ಯ ನನ್ನ ಮುಂದೆ ಸದರಿ ಕನ್ನಡ ಜೈನ ಸಾಹಿತ್ಯ ಚರಿತ್ರೆಯ ಆರನೆಯ ಮತ್ತು ಕೊನೆಯ ಸಂಪುಟ ಸವಾಲೆಸೆದು ಕುಳಿತಿದೆ. ಸವಾಲು ಓದುವುದಕ್ಕೆ ಅಲ್ಲ, ಬದಲಾಗಿ, ಹೆಂಗೆ ನಾವೆಲ್ಲ  (ನನ್ನ ಹಿಂದಿನ ಐವರು ಮತ್ತು ನಾನು) ಎಂದು ಕೇಳುತ್ತಿದೆ. ಇದಕ್ಕೆ ಉತ್ತರಿಸುವುದೇ ದೊಡ್ಡ ಸವಾಲಾಗಿದೆ. ಹೌದು. ಈ ಕೆಲಸವೇ ಸವಾಲಿನದು. ಇದನ್ನು ಸಮರ್ಥವಾಗಿ ಪದ್ಮಪ್ರಸಾದರು ನೆರವೇರಿಸಿಕೊಟ್ಟಿದ್ದಾರೆ. ಈ ಹಿಂದಿನ ಸಂಪುಟವೊಂದಕ್ಕೆ ಪರಿಚಯ ಬರೆಯುವಾಗ ಹೇಳಿದಂತೆಈ ಕೆಲಸ ಒಂದು ಸಂಸ್ಥೆಯೋ ಅಕಾಡೆಮಿಯೋ ಅಥವಾ ವಿಶ್ವವಿದ್ಯಾನಿಲಯವೋ ಮಾಡಬೇಕಿತ್ತು. ಆದರೆ ಇವರು ಏಕ ವ್ಯಕ್ತಿ ಕೂಡ ಪೂರಕ ಗುಣಾತ್ಮಕ ಸಹಕಾರ ದೊರೆತರೆ ಇಂಥ ಕೆಲಸ ಮಾಡಲು ಸಾಧ್ಯವಿದೆ ಎಂಬುದನ್ನು ಸಧಿಸಿ ಸಾಬೀತು ಮಾಡಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ವಲಯದ ಸಾಹಿತ್ಯ ಪ್ರಿಯರು ಹಾಗೂ ಸಂಶೋಧಕರು ಜೊತೆಗೆ ಲೇಖಕರು ಸೂಕ್ತ ಸಹಕಾರ ಕೊಟ್ಟಿದ್ದಾರೆ. ಹಂಪನಾ ಮತ್ತು ಕಮಲಾ ಹಂಪನ ಅವರಂಥ ಹಿರಿಯರು ಮುಕ್ತ ನೆರವು ಕೊಟ್ಟಿದ್ದಾರೆ ಹಿರಿಯರ ಜೊತೆಗೆ ಯುವಕರೂ ಸೇರಿದಂತೆ ಮೂರು ತಲೆಮಾರಿನ ಲೇಖಕರು ಕೈಜೋಡಿಸಿದ್ದಾರೆ. ಒಳ್ಳೆಯ ಕೆಲಸಕ್ಕೆ ಜನರ ಮುಕ್ತ ಸಹಕಾರ ಸಿಕ್ಕೇ ಸಿಗುತ್ತದೆ ಎಂಬುದನ್ನು ಈ ಕೆಲಸ ಮತ್ತೆ ಸಿದ್ಧ ಮಾಡಿದೆ. ಈ ಎಲ್ಲ ಸಂಪುಟಗಳಲ್ಲಿ ಒಟ್ಟೂ ೩೫೦ಕ್ಕೂ ಹೆಚ್ಚು ಲೇಖಕರು ೪೦೦ಕ್ಕೂ ಹೆಚ್ಚು ಲೇಖನ ಬರೆದುಕೊಟ್ಟಿದ್ದಾರೆ. ಲೇಖನ ಅಂದರೆ ಇಲ್ಲಿರುವ ಬರೆಹ ಬರೀ ಲೇಖನವಲ್ಲ, ಬದಲಾಗಿ ಸಂಶೋಧನ ಪ್ರಬಂಧಗಳು. ಇವನ್ನೆಲ್ಲ ಜೋಡಿಸಿ ಪರಸ್ಪರ  ತಾಳ ಮೇಳ ಇರುವಂತೆ ಸಂಪಾದಕರು ಶ್ರಮಪಟ್ಟು ಕೂಡಿಸಿದ್ದಾರೆ. ಇದು ಸಣ್ಣ ಕೆಲಸವಲ್ಲ. ಏಕೆಂದರೆ ಒಬ್ಬೊಬ್ಬ ಬರಹಗಾರರ ಶೈಲಿ ಒಂದೊಂದು ರೀತಿ ಇರುತ್ತದೆ. ಅಂಥದ್ರಲ್ಲಿ ಮುನ್ನೂರಕ್ಕೂ ಹೆಚ್ಚು ಲೇಖಕರ ಬರಹದಲ್ಲಿ ಏಕ ಸೂತ್ರತೆ ತರುವುದು ಸರಳವೂ ಅಲ್ಲ, ಸುಲಭವೂ ಅಲ್ಲ, ಆದರೆ ಇವರು ಇಲ್ಲಿ ಅಸಾಧ್ಯವನ್ನು ಸಾಧಿಸಿದ್ದಾರೆ. ಅದಕ್ಕಾಗಿ ಮೊದಲು ಅವರನ್ನು ಅಭಿನಂದಿಸಿ ಮುಂದೆ ಕೃತಿಯ ಕಡೆಗೆ ಹೊರಳೋಣ.

ಸದರಿ ಕೃತಿ ಈ ಸರಣಿಯ ಆರನೆಯ ಮತ್ತು ಕೊನೆಯ ಸಂಪುಟವನ್ನಾಗಿ ಮಾಡಿದ್ದಾರೆ. ಯಾಕೆ ಮಾಡಿದ್ದಾರೆಂದರೆ ಅವರ ಬಳಿ ಇನ್ನೂ ಒಂದೆರಡು ಸಂಪುಟ ಮಾಡುವಷ್ಟು ಸಾಮಗ್ರಿ ಇದೆ. ವಿಟಮಿನ್ 'ಎಂ' ಕೊರತೆಯಿಂದ ತೃಪ್ತಿಯಾಗುವಷ್ಟು ಆಯಿತಲ್ಲ, ಇಷ್ಟು ಸಾಕಾಗಬಹುದೆಂದು ನಿಲ್ಲಿಸಿದ್ದಾರಷ್ಟೆ. ತಮಾಷೆ ಅಂದರೆ ಈ ಎಲ್ಲ ಸಂಪುಟಗಳ ಅನುಬಂಧ ಹಾಗೂ ಪರಾಮರ್ಶನ ಮತ್ತು ಅಡಿಟಿಪ್ಪಣಿಗಳನ್ನು ಮಾತ್ರ ಸೇರಿಸಿದರೂ ಅದೇ ಒಂದು ಪುಸ್ತಕವಾಗುತ್ತದೆ. ಸುಮ್ಮನೇ ಈ ಎಲ್ಲ ಸಂಪುಟಗಳ ಮೇಲೆ ಕಣ್ಣಾಡಿಸಿದರೆ ಸಿಗುವ ಹೈಲೈಟ್ ಏನೆಂದರೆ, ಇಲ್ಲಿ ಕನ್ನಡದ ಮೊದಲ ಜೈನ ಶಾಸನ ಕವಿಗಳ ೬ನೆಯ ಶತಮಾನದಿಂದ ಹಿಡಿದು ೨೦೨೦ರವರೆಗಿನ ೪೦೮ ಜೈನ ಲೇಖಕರ ಕೃತಿಗಳ ಪರಿಚಯ ಎಲ್ಲಿಯೂ ಯಾರಿಗೂ ಅಪಚಾರವಾಗದಂತೆ, ವಸ್ತು ನಿಷ್ಠತೆಗೆ ಭಂಗ ಬರದಂತೆ ಎಚ್ಚರ. ಒಟ್ಟೂ ಸಂಪುಟಗಳು ಆರು.ಒಟ್ಟೂ ಲೇಖನ ಬರೆದುಕೊಟ್ಟವರ ಸಂಖ್ಯೆ ಇನ್ನೂರ ಐವತ್ತಕ್ಕೂ ಹೆಚ್ಚು. ಒಟ್ಟೂ ಲೇಖನಗಳ ಸಂಖ್ಯೆ ೪೫೦. ಸ್ವತಃ ಸಂಪಾದಕರೇ ಬರೆದ ಲೇಖನಗಳ ೧೫೦ ಲೇಖನಗಳು ಮತ್ತು ಅನುಬಂಧಗಳು. ಜೊತೆಗೆ ಪೂರಕ ಮಾಹಿತಿಗಳು. ಇಲ್ಲಿರುವ ಯಾವುದೇ ಲೇಖನ ಕೇವಲ ಲೇಖನವಲ್ಲ, ಇವೆಲ್ಲ ಗಂಭೀರ ಸಂಶೋಧನ ಬರೆಹಗಳು. ೨೦ನೆಯ ಶತಮಾನದಿಂದ ಮುಂದಿನ ಜೈನ ಲೇಖಕರ ಬಗ್ಗೆ ಇದೇ ಮೊದಲ ಬಾರಿಗೆ ಒಂದೆಡೆ ಸಮಗ್ರ ಮಾಹಿತಿ ಒಂದೆಡೆ ದೊರೆಯುತ್ತಿದೆ ಹಾಗೂ ಅವರ ಬರೆಹದ ಕುರಿತು ಗಂಭೀರ ವಿಮರ್ಶೆ ದೊರೆಯುತ್ತಿದೆ. ಇದು ೨೦೨೫. ಆದರೆ ಈ ಸಂಪುಟಗಳಲ್ಲಿ ೨೦೨೦ರವರೆಗಿನ ಲೇಖಕರ ಮಾಹಿತಿ ಇದೆ. ಅಷ್ಟರ ಮಟ್ಟಿಗೆ ಇದು ಅಪ್ ಡೇಟ್ ಆಗಿದೆ.  ತಮಾಷೆ ಅಂದರೆ ೧೯೨೦ರ ದಶಕದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರೊ. ಹಾ ಮಾನಾಯಕರು ಕನ್ನಡ ಗ್ರಂಥ ಸೂಚಿಯನ್ನು ಮೊದಲ ಬಾರಿಗೆ ಹೊರತರುವಾಗ ಎದುರಿಸಿದ್ದ ಕಷ್ಟಗಳನ್ನು ಒಂದೆಡೆ ದಾಖಲಿಸಿದ್ದಾರೆ. ಈ ಸಂಪುಟಗಳನ್ನು ಗಮನಿಸುವಾಗ ಹಾಮಾನಾ ಅವರ ಕಷ್ಟದ ಹತ್ತುಪಟ್ಟು ಕಷ್ಟ ಮತ್ತು ಸಂಕಟ ಸದರಿ ಸಂಪಾದಕರಿಗೆ ಆಗಿರಬೇಕೆಂಬ ಭಾವನೆ ಮೂಡಿತು. ಏಕೆಂದರೆ ಹಾಮಾನಾ ಅವರ ಆ ಕಾಲದಲ್ಲಿ ಗಂಭೀರವಾಗಿ ಕನ್ನಡಕ್ಕೆ ಕೆಲಸ ಮಾಡುವ ಯುವ ಪಡೆ ಸಿದ್ಧವಾಗಿ ಅವರ ಬಳಿ ನಿಂತಿತ್ತು. ಆದರೆ ಈಗಿನ ಕನ್ನಡದ ಪರಿಸ್ಥಿತಿ ಅಯೋಮಯ. ಕನ್ನಡ ಓದಿದರೆ ಅದೇ ಅದ್ಭುತ . ಇನ್ನು ಬರೆದರೆ ಅದರಲ್ಲೂ ಸಂಶೋಧನಾತ್ಮಕ ಬರವಣಿಗೆ ಆ ದೇವರಿಗೇ ಪ್ರೀತಿ. ಇಂಥ ಸ್ಥಿತಿಯಲ್ಲಿ ಇವರು ಹಠ ಸಾಧಿಸಿರುವುದು ಹುಡುಗಾಟವಲ್ಲ, ಇವರ ಈ ಕೆಲಸಕ್ಕೆ ಕನ್ನಡ ನಾಡು ಇದಕ್ಕೇ ವಿಶಿಷ್ಟವಾದ ಗೌರವವನ್ನು ಸಲ್ಲಿಸಬೇಕಿದೆ. ಅದು ಹೇಗೆ ಯಾವ ರೀತಿ ನನಗೆ ತಿಳಿದಿಲ್ಲ, ಇಂಥ ಗೌರವ ಇವರಿಗೆ ಮಾತ್ರ ದೊರೆತು ಅಲ್ಲಿಗೇ ನಿಲ್ಲಬೇಕು ಅಥವಾ ಮತ್ತೆ ಮುಂದೊಂದು ದಿನ ಇಂಥ ಇನ್ನೊಂದು ಕೆಲಸ ಆದಾಗ ನೋಡುವ ಅನ್ನುವಂತಿರಬೇಕು. ಇಷ್ಟು ದೀರ್ಘ ಅವಧಿಯ ಜೈನ ಲೇಖಕರ ಕೃತಿ ಪರಿಚಯ, ಮೌಲ್ಯಮಾಪನ ಜೊತೆಗೆ ಅಲಭ್ಯ ಮಾಹಿತಿಗಳ ಸಂಗ್ರಹ ಕೆಲವು ವಿಷಯಗಳ ಇತ್ಯರ್ಥ ಇವೆಲ್ಲ ಕೃತಿಗೆ ಭೂಷಣಪ್ರಾಯವಾಗಿವೆ.

ಇದರ ಮೊದಲ ಸಂಪುಟ ಶಾಸನ ಮತ್ತು ಸಾಹಿತ್ಯಕ್ಕೆ ಮೀಸಲಾಗಿದ್ದು ಬರು ಬರುತ್ತ ಕೊನೆಯ ಸಂಪುಟದ ವೇಳೆಗೆ ಸಿನಿಮಾ ಮಾಧ್ಯಮ ಕ್ಷೇತ್ರಗಳಲ್ಲಿ ಕೂಡ ಸಾಧನೆ ಮಾಡಿದ, ಮಾಡುತ್ತಿರುವ ವ್ಯಕ್ತಿಗಳಿಗೂ ಅವಕಾಶ ಕೊಡಲಾಗಿದ್ದು ಒಂದು ಬಗೆಯಲ್ಲಿ ಸಣ್ಣ ಪ್ರಮಾಣದ ಸಮಕಾಲೀನ ಜೈನ ವಿಶ್ವಕೋಶದ ಸ್ವರೂಪಕ್ಕೆ ತಿರುಗಿದೆ. ಒಳ್ಳೆಯದು. ಸದ್ಯ ಕರ್ನಾಟಕವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಸದರಿ ಸಂಪಾದಕರು ಕೆಲಸ ಮಾಡಿದ್ದಾರೆ. ಇದನ್ನು ಮತ್ತಷ್ಟು ವಿಸ್ತರಿಸಿ ದೇಶ ಮಟ್ಟಕ್ಕೂ ಬೆಳೆಸುವ ಸಾಧ್ಯತೆ ಇದೆ. ಇದಕ್ಕೆ ಸಾಂಸ್ಥಿಕ ಯತ್ನವೇ ಅಗತ್ಯವಾಗುತ್ತದೆ, ಈ ದೃಷ್ಟಿಯಿಂದಲೂ ಈ ಕೃತಿ ಮಾದರಿ ಹಾಕಿದೆಯೆನ್ನಬಹುದು.  ಪ್ರಸ್ತುತ ಆರನೆಯ ಸಂಪುಟದಲ್ಲಿ ೧೦೫ ಲೇಖನಗಳಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಸಣ್ಣ ಪ್ರಯತ್ನ ಮಾಡಿದವರನ್ನೂ ಲಕ್ಷ್ಯದಲ್ಲಿ ಇಟ್ಟುಕೊಳ್ಳಲಾಗಿದೆ, ಉದಾಹರಣೆಗೆ ಸುಜಾತಾ ಹಡಗಲಿ ಎಂಬವರು ಕೇವಲ ಎರಡು ಕೃತಿ ರಚಿಸಿದ್ದು ಇವರಿಗೂ ಸ್ಥಾನ ಕೊಡಲಾಗಿದೆ. ಈ ದೃಷ್ಟಿಯಿಂದ ಇದು ನಿಪ್ಷಕ್ಷಪಾತವಾಗಿ ಲೇಖಕರನ್ನು ಕಂಡಿದೆ. ಲೇಖಕರು ಆಗಿರುವುದು ಮುಖ್ಯ, ಅವರ ರಚನೆಯ ಸಂಖ್ಯೆ ಅಲ್ಲ, ಹಾಗೆಯೇ ಕೃತಿಗಳ ಮೌಲ್ಯ ಮಾಪನ ಮಾಡಲಾಗಿದೆ.  ಇದನ್ನು ಗಮನಿಸುವಾಗ, ನಮ್ಮ ದೇಶದ ವೈವಿಧ್ಯ ಹಾಗೂ ವೈಶಿಷ್ಟ್ಯ ಕಣ್ಣೆದುರು ಬರುತ್ತದೆ. ಯಾವುದೋ ಮೂಲೆಯಲ್ಲಿ ಕುಳಿತು ತಮ್ಮ ಪಾಡಿಗೆ ತಾವು ರಚನಾತ್ಮಕ ಕೆಲಸ ಮಾಡುತ್ತಿರುವ ಜನರನ್ನು ಹೀಗೆ ಗುರುತಿಸುವುದೇ ಮೊದಲನೆಯ ದೊಡ್ಡ ಕೆಲಸ. ಅದು ಇಲ್ಲಿ ಸಾಧ್ಯವಾಗಿದೆ. ನಮ್ಮ ದೇಶದಲ್ಲಿ ಜನಸಂಖ್ಯೆಯ ದೃಷ್ಟಿಯಿಂದ ಅಲ್ಪ ಸಂಖ್ಯಾತರಾಗಿದ್ದು ದೇಶದ ಯಾವುದೇ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರ ಪಟ್ಟಿಯನ್ನು ತೆಗೆದರೆ ಅದರಲ್ಲಿ ಒಬ್ಬರಾದರೂ ಜೈನ ಸಾಧಕರು ಸಿಗುತ್ತಾರೆ. ಈ ರೀತಿ ರಚನಾತ್ಮಕ ಕಾರ್ಯದಲ್ಲಿ ಅವರು ದೇಶಕ್ಕಾಗಿ, ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ. ಸದಯ ಈ ಸಂಪುಟಗಳು ಸಾಹಿತ್ಯಕ್ಕ ಆದ್ಯತೆ ಕೊಟ್ಟಿದ್ದರಿಂದ ಅದೇ ಇದರ ಚೌಕಟ್ಟಾಗಿದೆ. ಇದು ಅಗತ್ಯ. ಆದರೆ ಇದಕ್ಕೂ ಒಬ್ಬ ವ್ಯಕ್ತಿ ಪಡಬೇಕಾದ ಶ್ರಮ ಅನೂಹ್ಯ. ಪದ್ಮ ಪ್ರಸಾದರಂಥ ಶ್ರದ್ಧಾವಂತರಿಗೂ ಹಠವಾದಿಗೂ ಇದು ಸಾಧ್ಯವಷ್ಟೆ. ಏನೇ ಆಗಲಿ ಇಂಥದ್ದೊಂದು ಕೆಲಸದ ಮೂಲಕ ಇಡೀ ದೇಶದಲ್ಲಿ ಸೃಜನಶೀಲ ಕೆಲಸಕ್ಕೆ  ಒಂದು ಮಾದರಿ  ಹಾಕಿಕೊಟ್ಟಿದ್ದಾರೆ. ಇಂಥ ಕೆಲಸ ದೇಶದಲ್ಲಿ ಈ ಪ್ರಮಾಣದಲ್ಲಿ ಆಗಿರುವುದು ಇದೇ ಮೊದಲು, ಬೇರೆ ಯಾವ ಭಾಷೆಯಲ್ಲೂ ಇಂಥ ಕೆಲಸವಾಗಿರುವಂತೆ ಕಾಣಿಸದ ಕಾರಣಕ್ಕೆ ಇದು ಮಾದರಿ. ಮುಂದೆ ಅನ್ಯರೂ ಇದನ್ನು ಅನುಸರಿಸಬಹುದು. ಸಂತೋಷ. ಈ ನಿಟ್ಟಿನಲ್ಲಿ ಇದು ದೇಶಕ್ಕೆ ಕನ್ನಡದ ಕೊಡುಗೆಯಾಗಲಿ. ಒಟ್ಟಿನಲ್ಲಿ ಸಮುದಾಯವೊಂದು ಸೃಜನಶೀಲವಾಗಿ ತೊಡಗಿಸಿಕೊಂಡರೆ ದೇಶಕ್ಕೂ ಸಮಾಜಕ್ಕೂ ಎಂಥ ಉಪಯುಕ್ತ ಕೊಡುಗೆ ಕೊಡಬಹುದು ಎಂಬುದು ಕೇವಲ ಸಾಹಿತ್ಯವೊಂದರ ಮೂಲಕ ಇಲ್ಲಿ ತೆರೆದುಕೊಂಡಿದೆ. ಇಂಥದ್ದೊಂದು ಕೆಲಸದ ಮೂಲಕ ಸಣ್ಣಗಾತ್ರದ ಸಮುದಾಯ ಸಮಾಜಕ್ಕೆ ಕೊಡಮಾಡಿದ ಕೊಡುಗೆಯನ್ನು ಕಣ್ಣೆದುರು ಇಟ್ಟ ಪದ್ಮ ಪ್ರಸಾದರನ್ನು ನಾವೆಲ್ಲ ಮುಕ್ತ ಮನಸ್ಸಿನಿಂದ ಅಭಿನಂದಿಸಬೇಕಿದೆ. ಮಾತಿನಲ್ಲಿ ಅಲ್ಲ, ಪ್ರಸ್ತುತ ಸಂಪುಟಗಳನ್ನು ಓದಿ ವಿಮರ್ಶಿಸುವ, ಇತರರಿಗೆ ಅದರ ಮಹತ್ವ ತಿಳಿಸುವ ಮೂಲಕ. ಅಂಥ ಕೆಲಸ ಎಲ್ಲ ಕಡೆ ನಡೆಯಲಿ ಎಂದಷ್ಟೇ ಬಯಸಬಹುದು.


ಪ್ರತಿಗಳಿಗೆ ಸಂಪರ್ಕ ಹಾಗೂ ಕೃತಿ ವಿವರ- ಕನ್ನಡ ಜೈನ ಸಾಹಿತ್ಯ ಚರಿತ್ರೆ, ಸಂಪುಟ -೬,

ಬೆಲೆ- ರೂ.೭೫೦ ಪುಟಗಳು- ೭೩೬

ಸಂಪಾದಕರು ಮತ್ತು ಪ್ರಕಾಶಕರು- ಎಸ್ ಪಿ ಪದ್ಮ ಪ್ರಸಾದ್, ಗೋಕುಲ ಬಡಾವಣೆ, ತುಮಕೂರು, ಮೊಬೈಲ್-೯೪೪೮೭೬೮ ೫೬೭

 

       

 

     


2 comments:

  1. ಧನ್ಯವಾದ ಗಳು ಡಾ.ಶ್ರೀಪಾದ ಭಟ್.

    ReplyDelete
    Replies
    1. ನಿಮ್ಮ ಸಾಹಸಕ್ಕೆ ನನ್ನ ಸಣ್ಣ ಧನ್ಯವಾದ ಸರ್

      Delete