Wednesday, 9 April 2025

ನಾವೆಲ್ಲ ಅಲಕ್ಷಿಸಿದ ಸೃತಿ ಗ್ರಂಥ


ಈಗೀಗ ಬಹುತೇಕ ಸಂದರ್ಭಗಳಲ್ಲಿ ಮನುಸ್ಮೃತಿ ಕೃತಿಯನ್ನು ತೆಗಳುವ ಟೀಕಿಸುವ ವರದಿಗಳು ಬರುತ್ತಲೇ ಇರುತ್ತವೆ, ಆದರೆ ಯಾವುದೋ ಕಾಲದ ಮನುಸ್ಮೃತಿಯನ್ನು ಇಂದಿನ ಕಾಲಕ್ಕೆ ಎಳೆತಂದು ಚರ್ಚಿಸುವುದೇ ಹಾಸ್ಯಾಸ್ಪದ. ಏಕೆಂದರೆ ಭಾರತೀಯ ಸಂಪ್ರದಾಯದಲ್ಲಿ ಏಳು ಧರ್ಮಶಾಸ್ತ್ರಕಾರರು, ೨೦ಕ್ಕೂ ಹೆಚ್ಚು ಸ್ಮೃತಿಗಳು ಕಾಣಿಸುತ್ತವೆ, ಒಂದೊಂದು ಕಾಲಕ್ಕೆ ಒಂದೊಂದು ಸ್ಮೃತಿಯನ್ನು ಹೇಳಲಾಗಿದೆ, ನಮಗೆಲ್ಲ ತಿಳಿದಿರುವಂತೆ ಭಾರತೀಯ ಸಂಪ್ರದಾಯದಲ್ಲಿ ನಾಲ್ಕು ಮುಖ್ಯ ಯುಗಗಳಿವೆ, ಅವೆಂದರೆ ಸತ್ಯಯುಗ, ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳು ಅನ್ನಲಾಗಿದೆ, ಆದರೆ ಜನಪ್ರಿಯವಾದ ವಿಷ್ಣುಸಹಸ್ರನಾಮದಲ್ಲಿ ಕೋಟಿಯುಗಗಳ ಪ್ರಸ್ತಾಪ ಬರುತ್ತದೆ, ವಿಜ್ಞಾನಿಗಳು ಹೇಳುವಂತೆ ಈ ಭೂಮಿಗೆ ಕೋಟ್ಯಂತರ ವರ್ಷಗಳಾಗಿವೆ, ಮನುಷ್ಯನಿಗೂ ಹೆಚ್ಚೂಕಡಿಮೆ ಅಷ್ಟೇ ವರ್ಷಗಳಾಗಿವೆ, ಒಂದೊಂದು ಕಾಲಕ್ಕೆ ಒಂದೊಂದು ರೀತಿಯ  ಮನೋಧರ್ಮಕ್ಕೆ ಅನುಗುಣವಾಗಿ ಸಾಮಾಜಿಕ ರೀತಿ ನೀತಿಯನ್ನು ಹೇಳಲಾಗುತ್ತದೆ, ಹೀಗೆ ಹೇಳುವ ಕೃತಿಗಳೇ ಸ್ಮೃತಿಗ್ರಂಥಗಳು, ಈಗ ಮತ್ತೆ ಮತ್ತೆ ಚರ್ಚೆಗೆ ಒಳಗಾಗುವ ಮನುಸ್ಮೃತಿಯನ್ನು ಹೇಳಿರುವುದು ಕೃತಯುಗಕ್ಕೆ, ಕಲಿಯುಗಕ್ಕೆ ಅಲ್ಲ, ಕಲಿಯುಗಕ್ಕೆ ಪರಾಶರ ಸ್ಮೃತಿಯನ್ನು ಹೇಳಲಾಗಿದೆ. ಈ ಸ್ಮೃತಿಯಲ್ಲಿ ಮನುಸ್ಮೃತಿಯಂತೆ ಟೀಕಿಸಬಹುದಾದ ವಾಕ್ಯಗಳಿಲ್ಲ.ಅಷ್ಟಕ್ಕೂ ಸಂಬಂಧವಿಲ್ಲದ ಗ್ರಂಥವನ್ನು ಈ ಕಾಲಕ್ಕೆ ಅನ್ವಯಿಸಿ ಚರ್ಚಿಸುವುದೇ ತಮಾಷೆ ಅನಿಸುತ್ತದೆ. ಈ ಕನಿಷ್ಠ ಸಂಗತಿ ಮನುಸ್ಮೃತಿಯನ್ನು ಕುರಿತು ಮಾತಾಡುವ ಜನರಿಗೆ ಅರಿವಿಲ್ಲ, ಆದರೂ ಪರಾಶರ ಸ್ಮೃತಿಯಲ್ಲಿ ಕೂಡ ಟೀಕಿಸಬಹುದಾದ ವಾಕ್ಯಗಳು ದೊರೆಯಬಹುದು, ಎಂದೋ ರಚಿಸಿದ ಕೃತಿ ಸಾರ್ವಕಾಲಿಕವಾಗಿ ಉಳಿಯಲು ಸಾಧ್ಯವಿಲ್ಲ, ಉದಾಹರಣೆಗೆ ಭಾರತಕ್ಕೆ ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ರೂಪಿಸಿಕೊಂಡ ಸಂವಿಧಾನವನ್ನು ೧೯೫೬ರಲ್ಲಿ ಸ್ವೀಕರಿಸಲಾಯಿತು, ಆದರೆ ಕೇವಲ ಐದಾರು ದಶಕಗಳಲ್ಲಿಯೇ ಅದನ್ನು ೧೦೬ ಬಾರಿ ತಿದ್ದುಪಡಿ ಮಾಡಲಾಗಿದೆ ಅಂದರೆ ಸಾಮಾಜಿಕ ಮನೋಧರ್ಮ ಹಾಗೂ ಪರಿಕಲ್ಪನೆಗಳು ಎಷ್ಟು ವೇಗವಾಗಿ ಬದಲಾಗುತ್ತವೆ ಎಂಬುದು ತಿಳಿಯುತ್ತದೆ, ಹೀಗಿರುವಾಗ ಸಾವಿರಾರು ವರ್ಷಗಳ ಹಿಂದೆ ರಚಿತವಾದ  ಸ್ಮೃತಿಯಲ್ಲಿ ಹೀಗಿರುವುದು ಸಹಜ. ಅಂದರೆ ಆಯಾ ಕಾಲಘಟ್ಟಕ್ಕೆ ಸರಿ ಅನಿಸುವ ಸ್ಮೃತಿಗಳನ್ನು ಹೇಳಲಾಗಿದೆ, ಅಂದಹಾಗೆ ನಾವು ಸದ್ಯ ಇರುವ ಕಾಲ ಭಾರತೀಯ ಸಂಪ್ರದಾಯದ ಪ್ರಕಾರ ಕಲಿಯುಗದಲ್ಲಿದ್ದೇವೆ, ಇದಕ್ಕೆ ನಿಜವಾಗಿ ಚರ್ಚೆ ಆಗಬೇಕಾದುದು ಮನುಸ್ಮೃತಿಯಲ್ಲ, ¨ದಲಾಗಿ ಪರಾಶರ ಸ್ಮೃತಿ. ಇಲ್ಲಿಯೂ ಮಡಿ ಮೈಲಿಗೆ ಕುರಿತ ನಿಯಮಗಳು ಇಂದು ಚರ್ಚೆಗೆ ಒಳಗಾಗಬಲ್ಲವು ಇನ್ನೂ ಇರಬಹುದು, ಪ್ರಶ್ನೆ ಏನೆಂದರೆ ಇದಾಗಲಿ, ಆದರೆ ಕೃತಯುಗಕ್ಕೆ ಹೇಳಲಾದ ಮನುಸ್ಮೃತಿಯನ್ನು ಕಲಿಯುಗದಲ್ಲಿ ಚರ್ಚೆ ಮಾಡುವುದರಲ್ಲಿ ಅರ್ಥವಿದೆಯೇ? ಸಾಮಾನ್ಯವಾಗಿ ಈ ಸ್ಮೃತಿಗ್ರಂಥಗಳು ಸಮಾಜಕ್ಕೆ ನೀತಿ ನಿಯಮ, ಧರ್ಮ ಮಾರ್ಗಗಳನ್ನು ತಿಳಿಸುತ್ತವೆ, ಯಾವುದು ಧರ್ಮ, ಯಾವುದು ಅಧರ್ಮ ಎಂದು ತಿಳಿದು ಆ ಮಾರ್ಗದಲ್ಲಿ ನಡೆದರೆ ಮನುಷ್ಯನಿಗೆ ಸುಖ ಇರುತ್ತದೆ ತಿಳಿಯಲಾಗಿದೆ. ಸಂಪ್ರದಾಯ ಹೇಳುವಂತೆ ಪ್ರಪಂಚದಲ್ಲಿ ೮೭ ಲಕ್ಷ ಜೀವಿಗಳಿದ್ದು, ಇವುಗಳಲ್ಲಿ ಮನುಷ್ಯ ಜೀವಿ ವಿಶಿಷ್ಟವೂ ಮುಖ್ಯವೂ ಆಗಿದೆ, ಇಂಥ ಮನುಷ್ಯ ಜೀವಿ ಇರಬೇಕಾದ ಹಾಗೂ ಬದುಕಬೇಕಾದ ರೀತಿಯನ್ನು ಈ ಗ್ರಂಥಗಳು ತಿಳಿಸುತ್ತವೆ. ಒಟ್ಟಿನಲ್ಲಿ ಭಾರತೀಯ ಸಂಪ್ರದಾಯ, ಪರಂಪರೆಯ ಪರಿಚಯವಿಲ್ಲದ ಒಂದಿಷ್ಟು ಜನ, ಅದರಲ್ಲೂ ವಸಾಹತುಶಾಹಿಗಳು ತಮ್ಮ ವಾದಗಳ  ಸಮರ್ಥನೆಗೆ ಅನುಕೂಲವಾಗುವಂತೆ ಭಾvರತೀಯ ಪರಂಪರೆಯಲ್ಲಿನ ಕೆಲವೇ ಕೆಲವು ಗ್ರಂಥಗಳು ಅದರಲ್ಲೂ ಅವುಗಳಲ್ಲಿನ ಕೆಲವೇ ವಾಕ್ಯಗಳನ್ನು ಮಾತ್ರ ಮತ್ತೆ ಮತ್ತೆ ಉಲ್ಲೇಖಿಸಲಾಗುತ್ತದೆ. ಉದಾಹರಣೆಗೆ ಮನುಸ್ಮೃತಿಯಲ್ಲಿಯೇ ಕೆಲವೇ ಮಾತುಗಳನ್ನು ಮಾತ್ರ ಹೇಳಲಾಗುತ್ತದೆ, ಅದರಲ್ಲಿನ ಬಹುತೇಕ ವಾಕ್ಯಗಳು ವಸಾಹತುಗಳ ವಾದಕ್ಕೆ ಪೂರಕವಾಗಿ ಬಾರದ ಕಾರಣಕ್ಕೆ ಅವುಗಳನ್ನು ಕೈಬಿಡಲಾಗುತ್ತದೆ, ಉದಾಹರಣೆಗೆ ಆ ಕೃತಿಯಲ್ಲಿನ ಸ್ತ್ರೀ ಸ್ವಾತಂತ್ರ್ಯಮರ್ಹಸಿ ಎಂಬ ಮಾತು ಹೇಳುವ ಜನ ಸ್ತ್ರೀ ಧನವನ್ನು ತೆಗೆದುಕೊಳ್ಳುವವರು ಪಾಪಿಗಳು ಹಾಗೂ ನೀಚರು ಎಂದು ಹೇಳಿರುವ ಮಾತನ್ನು ಯಾರೂ ಹೇಳುವುದಿಲ್ಲ, ಉಳಿದ ಗ್ರಂಥಗಳ ಕತೆಯೂ ಇಷ್ಟೇ. ಪ್ರಸ್ತುತ ಇಲ್ಲಿ ಪರಾಶರ ಸ್ಮೃತಿ ಕುರಿತು ಅವಲೋಕನ ಮಾಡಲಾಗಿದೆ.

ಈ ಸ್ಮೃತಿ ರಚಿಸಿದವರು ಹೆಸರೇ ಹೇಳುವಂತೆ ಪರಾಶರರು. ಪರಾಶರರು ವ್ಯಾಸರ ತಂದೆ, ಈ ಕೃತಿ ರಚನೆಯಾಗಿದ್ದು ಮಹಾಭಾರತ ಕಾಲದಲ್ಲೆಂದಾಯಿತು, ಅಂದರೆ ಮುಂಬರಲಿರುವ ಕಾಲಕ್ಕೆ ಮುಂಚೆಯೇ ಆ ಕಾಲದಲ್ಲಿ ಹೇಗಿರಬೇಕೆಂದು ತಿಳಿಸುವ ನಿಯಮ ತಿಳಿಸುವ ಕೃತಿ ಸಿದ್ಧವಿರುತ್ತಿತ್ತು ಅನ್ನಬಹುದು. ಅಂದರೆ ಕೃತಯುಗಕ್ಕೆ ತಿಳಿಸಲಾದ ಮನುಸ್ಮೃತಿಯನ್ನು ಸತ್ಯಯುಗದಲ್ಲಿ ರಚಿಸಲಾಗಿದೆ ಅನ್ನಬಹುದು, ಈ ಒಂದೊಂದು ಯುಗಗಳೂ ಸಾವಿರಾರು ವರ್ಷಗಳನ್ನು ಹೊಂದಿರುತ್ತವೆ ಅಂದರೆ ಮನುಸ್ಮೃತಿ ರಚನೆಯಾಗಿ ಅದೆಷ್ಟು ಸಾವಿರ ವರ್ಷಗಳಾಗಿವೆ ಊಹಿಸಿ, ಅಂಥ ಕೃತಿಯಲ್ಲಿ ದೋಷಗಳಿವೆ ಎಂದು ಈಗ ಚರ್ಚಿಸುವುದೇ ಮೂರ್ಖತನವಲ್ಲದೇ ಇನ್ನೇನು? ನಮ್ಮ ಕಲಿಯುಗಕ್ಕೆ ಹೇಳಲಾದ ಪರಾಶರ ಸ್ಮೃತಿಯಲ್ಲಿ ೨ ಅಧ್ಯಾಯಗಳಿದ್ದು ಆಚಾರ, ತಪ್ಪು ಮಾಡಿದಾಗ ಅನುಸರಿಸಬೇಕಾದ ಪ್ರಾಯಶ್ಚಿತ್ತ ಮೊದಲಾದ ವಿಚಾರಗಳಿವೆ. 

ಪರಾಶರ ಸ್ಮೃತಿ ಯಲ್ಲಿ ಸ್ಮೃತಿಯ ಉದ್ದೇಶ ವರ್ಣಾಶ್ರಮ ಧರ್ಮವನ್ನು ವ್ಯವಸ್ಥಿತಗೊಳಿಸುವುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಇದು ಸಮಾಜ ಸರಿಯಾಗಿ ಸಾಗಲು ನಾಲ್ಕು ರೀತಿಯ ಕೆಲಸಗಳು ಅಗತ್ಯವಾಗಿದ್ದು ಅವನ್ನು ನಡೆಸಿಕೊಂಡು ಹೋದರೆ ಮಾತ್ರ ಸಮಾಜ ಆರೋಗ್ಯಕರವಾಗಿರುತ್ತದೆ, ಆದ್ದರಿಂದ ಇವನ್ನು ಮುನ್ನಡೆಸಿಕೊಂಡುಹೋಗಬೇಕೆಂದು ಸ್ಪಷ್ಟಪಡಿಸಲಾಗಿದೆಯಾದರೂ ವರ್ಣ ಹುಟ್ಟಿನಿಂದ ಬರುವುದಲ್ಲ, ಅದೊಂದು ಅರ್ಹತೆ ಅನ್ನಲಾಗಿದೆ. ಹುಟ್ಟಿನಿಂದ ಬ್ರಾಹ್ಮಣನಾಗಿ ಬ್ರಾಹ್ಮಣ ಧರ್ಮವನ್ನು ಅನುಸರಿಸದಿದ್ದರೆ ಆತನನ್ನು ಬ್ರಾಹ್ಮಣ ಅನ್ನಲಾಗದು ಎಂದು ಹೇಳಲಾಗಿದೆ. ಶಿಸ್ತುಬದ್ಧವಾಗಿ ನಿಷ್ಠೆಯಿಂದ ತನ್ನ ಕೆಲಸ ಮಾಡುವ ಶೂದ್ರ ಇಂಥ ಬ್ರಾಹ್ಮಣನಿಗಿಂತ ಶ್ರೇಷ್ಠ ಅನ್ನಲಾಗಿದೆ, ದಾನ ಕೊಡುವಾಗ ಯಾರಿಗೆ ಹೆಚ್ಚು ಅಗತ್ಯವಿದೆಯೋ ಅವರಿಗೆ ದಾನ ಕೊಡುವುದು ಒಳಿತು ಎಂಬ ಕಿವಿ ಮಾತು ಕೂಡ ಬರುತ್ತದೆ. ದಾನವನ್ನು ಬ್ರಾಹ್ಮಣರಿಗೇ ಕೊಡಬೇಕು ಎಂದಿಲ್ಲ, ಬ್ರಾಹ್ಮಣನಾದರೂ ಆ ಧರ್ಮವನ್ನು ಅಂದರೆ ಬ್ರಾಹ್ಮಣರಿಗೆ ವಿಧಿಸಲಾದ ವಿಧಿ ನಿಷೇಧಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವವರು ಮಾತ್ರ ದಾನ ಪಡೆಯಬಹುದು ಎಂದು ತಿಳಿಸಲಾಗಿದೆ. ಈ ಸ್ಮೃತಿಯಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಆಪತ್ಕಾಲದಲ್ಲಿ ತಮಗೆ ವಿಧಿಸಲಾದ ಧರ್ಮ ಕರ್ಮದ ವ್ಯತ್ಯಯದಲ್ಲಿ ವಿನಾಯ್ತಿ ಕೊಡಲಾಗಿದೆ. ಯಾವುದೇ ಆಪತ್ತಿನ ಕಾಲದಲ್ಲಿ ಜೀವ ರಕ್ಷಣೆ ಮೊದಲು ಅನಂತರ ಧರ್ಮ ಎಂದು ಇದು ಹೇಳುತ್ತದೆ. ಧರ್ಮಕ್ಕಾಗಿ ಜೀವಕೊಡು ಎಂದು ಹೇಳುವುದಿಲ್ಲ, ಜೀವನ್ ಭದ್ರಾಣಿ ಪಶ್ಯತಿ ಎಂಬುದಕ್ಕೆ ಇದು ಸಮರ್ಥನೆ ಕೊಡುತ್ತದೆ. ರೋಗಿಗಳು, ಮಕ್ಕಳು ಮತ್ತು ಮಹಿಳೆಗೆ ಅನೇಕ ವಿನಾಯ್ತಿಗಳನ್ನು ಇದು ಕೊಡುತ್ತದೆ. ಇನ್ನೊಂದು ಮುಖ್ಯ ಸಂಗತಿ ಎಂದರೆ ಇದು ಆಹಾರದಲ್ಲಿ ಭೇದ ಮಾಡದೇ ಆಹಾರವನ್ನು ಹಾಳು ಮಾಡಬಾರದೆಂದು ಹೇಳುತ್ತದೆ. ಅಜ್ಞಾನದಿಂದ ಮನುಷ್ಯರು ಮಾಡುವ ಯಾವುದೇ ಬಗೆಯ ತಪ್ಪುಗಳಿಗೆ ಸರಳ ಪರಿಹಾರವನ್ನು ಪ್ರಾಯಶ್ಚಿತ್ತ ರೂಪಗಳಲ್ಲಿ ಹೇಳಲಾಗಿದ್ದು ಬಹುತೇಕ ಇಂಥ ಸಂಗತಿಗಳು ದುಬಾರಿಯಲ್ಲದ ವಿಧಾನಗಳನ್ನು ಸ್ವತಃ ಮಾಡಿಕೊಳ್ಳಬಹುದಾದ ರೀತಿಯಲ್ಲಿವೆ. ಅಲ್ಲದೇ ಆರೋಗ್ಯದ ದೃಷ್ಟಿಯಿಂದ ಪರಿಹಾರ ಹೇಳಲಾಗಿದೆ ಎಂಬುದು ಸೂಕ್ಷ್ಮವಾಗಿ ಗಮನಿಸಿದಾಗ ಅರಿವಾಗುತ್ತದೆ.ಹೀಗೆ ಸಮಕಾಲೀನ ಯೋಚನೆಗಳಿಗೆ ಸಮೀಪ ಅನಿಸುವ ವಿಚಾರಗಳು ಇದರಲ್ಲಿ ಸಾಕಷ್ಟಿವೆ. ಯಾವುದೇ ಜೀವಿಯನ್ನಾಗಲಿ ವೃಥಾ ಹಿಂಸಿಸಬಾರದು, ಪೀಡಿಸಬಾರದೆಂಬ ಸಮಕಾಲೀನ ಮಾನವೀಯ ಮೌಲ್ಯವನ್ನು ತಿಳಿಸುತಯೀ ಯುಗದ ಮನುಷ್ಯರ ಬಗ್ಗೆ ಕೆಲವು ಮಾತುಗಳನ್ನು ಸ್ಪಷ್ಟಮಾಡಲಾಗಿದೆ. ಇವುಗಳಲ್ಲಿ ಒಂದು ಮಾತು ಹೀಗಿದೆ- ಕಲಿಯುಗದ ಮನುಷ್ಯರು ಉಳಿದ ಯುಗಕ್ಕಿಂತ ಅಲ್ಪಾಯುಷಿಗಳು.ಶಾರೀರಿಕವಾಗಿ, ಮಾನಸಿಕವಾಗಿ ದುರ್ಬಲರು, ಕೃತಯುಗದಲ್ಲಿ ಮಾನವನ ಆಯಸ್ಸು ೪೦೦ ವರ್ಷವಾದರೆ ಕಲಿಯುಗದಲ್ಲಿ ಇದು ೧೦೦ ವರ್ಷ ಅನ್ನಲಾಗಿದೆ, ಇದು ನಿಜ. ನಮ್ಮಲ್ಲಿ ಯಾರಾದರೂ ನೂರು ವರ್ಷ ಪೂರೈಸಿದ್ದರೆ ಅದು ಸಂಭ್ರಮದ ಸಂಗತಿ.ಕಯುಗದಲ್ಲಿ ಪ್ರಾಣ ಅನ್ನಗತ. ಅಂದರೆ ಆಹಾರ ಬದ್ಧ ಅನ್ನಲಾಗಿದೆ. ಬ್ರಾಹ್ಮಣರು ಉದರ ನಿರ್ವಹಣೆಗೆ ಕೃಷಿ ಮಾಡಬಹುದೆಂದೂ ಹಸುಗಳನ್ನು ಸಾಕಬಹುದೆಂದು ಹೇಳುತ್ತದೆ. ಉಳಿದ ಬಹುತೇಕ ಸ್ಮೃತಿಗಳಂತೆ ಬ್ರಾಹ್ಮಣರಿಗೆ ಕೃಷಿ ನಿಷೇಧ ಎಂದು ಹೇಳುವುದಿಲ್ಲ.ಬಹುಶಃ ಈ ಮಾತನ್ನು ಅನುಸರಿಸಿಯೇ ಹವ್ಯಕ, ಸಂಕೇತಿ ಹೊಯ್ಸಳ ಕರ್ನಾಟಕ ಮೊದಲಾದ ಬ್ರಾಹ್ಮಣ ಪಂಗಡಗಳು ಇಂದಿಗೂ ಕೃಷಿ ಹಾಗೂ ಪಶುಸಾಕಣೆ ಮಾಡುತ್ತಿವೆ. ಇಂಥ ಹಲವು ಆದರ್ಶದ ದಾರಿಗಳು ಇದರಲ್ಲಿವೆ. ಈ ಕೃತಿಯಲ್ಲಿನ ಇನ್ನೊಂದು ಮುಖ್ಯ ಸಂಗತಿ ಎಂದರೆ ಪ್ರಾಯಶ್ಚಿತ್ತ ಪ್ರಕರಣ. ಮುಖ್ಯವಾಗಿ ಯಾವುದೇ ಸಂದರ್ಭದಲ್ಲಿ ಸ್ತ್ರೀಯನ್ನು ದೋಷಿಸಬಾರದೆಂದು ಈ ಸ್ಮೃತಿ ತಿಳಿಸುತ್ತದೆ. ವ್ಯಕ್ತಿ ತನಗೆ ಯಾವ ರೀತಿಯ ಜೀವನ ಸರಿಹೊಂದುತ್ತದೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದೆಂದು ಹೇಳುವ ಇದು ಒಮ್ಮೆ ಅಂಥ ಆಯ್ಕೆ ಆದಮೇಲೆ ಆಯಾ ಕ್ರಮಕ್ಕೆ ನಿಷ್ಠವಾಗಿರಬೇಕೆಂಬ ಮಾತನ್ನೂ ಹೇಳುತ್ತದೆ.ಅಂದರೆ ವ್ಯಕ್ತಿಗೆ ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿಯನ್ನೂ ವಿಧಿಸುತ್ತದೆ. ಜೊತೆಗೆ ರಾಜನಾದವನು ಜನರು ಸೋಮಾರಿಗಳಾಗುವ ದಾರಿಯನ್ನು ತೋರಿಸಬಾರದೆಂದು ಹೇಳುತ್ತದೆ. ವ್ಯಕ್ತಿಯ ವರ್ತನೆಗೆ ಹೆಚ್ಚು ಒತ್ತು ಕೊಡುವ ಇದು ಎಲ್ಲ ಸಂದರ್ಭಗಳಲ್ಲೂ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಳ್ಳುತ್ತದೆ.  ಇಂಥ ಹತ್ತಾರು ವಿಶಿಷ್ಟವೆನಿಸುವ ಮಾತು ಮತ್ತು ನಿರ್ದೇಶನಗಳಿರುವ ಈ ಸ್ಮೃತಿಯನ್ನು ಗಂಭೀರವಾಗಿ ಚರ್ಚಿಸುವ ಅಗತ್ಯ ಈ ಕಾಲದಲ್ಲಿ ಹೆಚ್ಚಾಗಿದೆ. 


ಕೃತಿ ವಿವರ:

ಪರಾಶರ ಸ್ಮೃತಿ, ಚಕ್ರಕೋಡಿ ಈಶ್ವರ ಶಾಸ್ತ್ರಿ (ಸಂ)

ಸಮಾಜ ಪುಸ್ತಕಾಲಯ, ಧಾರವಾಡ, ೨೦೨೧, ಬೆಲೆ-೧೨೦ ರೂ.  

  


No comments:

Post a Comment