Friday, 5 September 2025

ಕನ್ನಡದ ಅಪರೂಪದ ಕೃತಿ


ನಮ್ಮೆಲ್ಲರ ಪ್ರೀತಿಯ ಸಿ.ಆರ್.ಸಿ. ಎಂದೇ ಖ್ಯಾತರಾದ ಪ್ರಸಿದ್ಧ ಮನೋ ವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಅಚಾನಕ್ಕಾಗಿ ಬಹು ದಿನಗಳ ಅನಂತರ ಭೇಟಿಯಾದರು, ಶಿಕ್ಷಕ ದಿನಾಚರಣೆ ಪ್ರಯುಕ್ತ ನಮ್ಮ ವಿಶ್ವವಿದ್ಯಾನಿಲಯಕ್ಕೆ ಮಕ್ಕಳ ಮಾನಸಿಕತೆಯ ಸವಾಲುಗಳನ್ನು ಕುರಿತು ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದರು, ಕಳೆದ ವರ್ಷ ಅವರಿಗೆ ಪದ್ಮ ಶ್ರೀ ಪುರಸ್ಕಾರ ಲಭಿಸಿದಾಗ ಸಂಭ್ರಮಿಸಿದ್ದೆ. ನಾನು ಕಾಲೇಜಿನಲ್ಲಿ ಓದುತ್ತಿದ್ದ ೧೯೮೦ರ ದಶಕದ ದಿನಗಳಿಂದ ನಾನು ಅವರ ಓದುಗ ಅಭಿಮಾನಿಗಳಲ್ಲಿ ಒಬ್ಬ. ಮೈಸೂರಿನ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ ಆಗಾಗ ಭೇಟಿ ನೀಡಿ ಆಯ್ದ ಪುಸ್ತಕಗಳನ್ನು ಖರೀದಿಸಿ ತರುವುದು ವಾರದ ನಿಯಮವಾಗಿತ್ತು, ಇದರಿಂದ ಅಲ್ಲಿನ ರಾಮಸ್ವಾಮಿ ಸರ್ಕಲ್ ನಲ್ಲಿದ್ದ ನವಕರ್ನಾಟಕ ಮಳಿಗೆಯ ಸಿಬ್ಬಂದಿಗಳೆಲ್ಲ ಪ್ರಿಯರಾಗಿದ್ದರು, ಅದರಲ್ಲೂ ಮ್ಯಾನೇಜರ್ ಸತ್ಯನಾರಾಯಣ ಹಾಗೂ ಸಹಾಯಕರಾಗಿದ್ದ ರಾಜು ನನಗೆ ಹೆಚ್ಚು ಪ್ರಿಯರಾಗಿದ್ದರು, ಅವರು ಹೊಸ ಪುಸ್ತಕಗಳು, ಶಬ್ದಕೋಶಗಳು ಏನೇ ಕನ್ನಡದಲ್ಲಿ ಹೊಸದೆನ್ನಿಸುವಂತೆ ಬಂದರೂ ತಪ್ಪದೇ ಮಾಹಿತಿ ಕೊಡುತ್ತಿದ್ದರು, ಅಪರೂಪದ ಕೃತಿಗಳನ್ನು ನನಗಾಗಿ ಎತ್ತಿಡುತ್ತಿದ್ದರು, ಆ ವೇಳೆಯಿಂದ ಸಿ.ಆರ್‌.ಸಿ. ನನ್ನ ಮೆಚ್ಚಿನವರು,ಅವರ ೨೮ಕ್ಕೂ ಹೆಚ್ಚು ಕನ್ನಡ ಮನೋವಿಜ್ಞಾನ ಸಂಬಂಧಿ ಕೃತಿಗಳು ನನ್ನ ಬಳಿ ಇವೆ. ಆಗಾಗ ಇವನ್ನು ತಿರುವಿಹಾಕುತ್ತೇನೆ, ಇದರಿಂದ ಎರಡು ಲಾಭ, ಒಂದು - ಅದರ ಮಾಹಿತಿ ರಿಫ್ರೆಶ್ ಆಗುತ್ತದೆ, ಎರಡು - ಅದರ ಮೇಲೆ ಕುಳಿತ ದೂಳು ಹೋಗಿ ಅದೂ ಫ್ರೆಶ್ ಆಗುತ್ತದೆ, ನನ್ನ ಬಳಿ ಇರುವ ಎಲ್ಲ ಪುಸ್ತಕಗಳನ್ನೂ ಆಗಾಗ ಇಂಥ ರಿಫ್ರೆಶ್ ಕ್ರಿಯೆಗೆ ಒಳಪಡಿಸುತ್ತೇನೆ, ಹೀಗಿರುವಾಗ, ಅವರ ಹೊಸ ಪುಸ್ತಕಗಳ ಬಗ್ಗೆ ಪತ್ರಿಕೆಯಲ್ಲಿ ಮಾಹಿತಿ ನೋಡಿ ಸುಮ್ಮನಿದ್ದೆ, ಖರೀದಿಗೆ ಅವಕಾಶವಾಗಿರಲಿಲ್ಲ, ಇದೀಗ ಅವರು ಖುದ್ದು ಭೇಟಿಯಾದಾಗ ಅವರೇ ಪ್ರೀತಿಯಿಂದ ತಾಳಿ ನಿಮಗೆ ನನ್ನ ಪುಸ್ತಕ ಕೊಡುತ್ತೇನೆಂದು ಎರಡು ಕೃತಿಗಳನ್ನು ನೀಡಿದರು, ಧನ್ಯ ಅನಿಸಿತು. ಪರಿಣಾಮವಾಗಿ ಈಗ ನನ್ನ ಮುಂದೆ ಚಿಂತೆ ಬಿಡು ಮನವೇ ಹಾಗೂ ವಿದ್ಯಾರ್ಥಿಗಳೇ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ ಎಂಬ ಕೃತಿಗಳು ವಿರಾಜಮಾನವಾಗಿವೆ, ಒಂದೊಂದಾಗಿ ತಿರುವಿ ಹಾಕುತ್ತಿದ್ದೇನೆ. ಗಾತ್ರದಲ್ಲಿ ಸಣ್ಣವು, ಆದರೆ ಬೀರುವ ಪರಿಣಾಮ ಮಾತ್ರ ಹೆಚ್ಚಿಮವು. ಹೇಳಿ ಕೇಳಿ ಅವರು ಮನಸ್ಸು ಬಲ್ಲವರು, ಹೇಗೆ ಯಾರಿಗೆ ಹೇಳಿದರೆ ಚೆನ್ನ ಎಂಬ ಪಾಂಡಿತ್ಯ ಸಿದ್ಧಿಸಿರುವವರು. ಇಲ್ಲೂ ಅದು ಸ್ಪಷ್ಟವಾಗಿದೆ. ಅವರ ಬರವಣಿಗೆ ಆಪ್ತವಾದುದು, ಅಷ್ಟಕ್ಕೂ ಅವರು ನಾಲ್ಕು ದಶಕಗಳ ವೈದ್ಯ ವೃತ್ತಿಯಲ್ಲಿ ಅನುದಿನವೂ ಮಾಡಿದ್ದು ಆಪ್ತ ಸಮಾಲೋಚನೆಯನ್ನೇ. ಇದರ ಅನುಭವ ಸಾಮಗ್ರಿ ಇಲ್ಲಿ ದಟ್ಟವಾಗಿದೆ. ಇಲ್ಲಿ ಚಿಂತೆ ಬಿಡು ಮನವೇ ಕೃತಿಯ ಅವಲೋಕನ ಮಾಡಲಾಗಿದೆ, ಈ ಪುಟ್ಟ ಕೃತಿ ಮೊದಲ ಪುಟದಿಂದಲೇ ಮನ ಸೆಳೆಯುತ್ತದೆ, ಚಂದ್ರಶೇಖರ್ ಅವರ ಬರವಣಿಗೆಯ ವಿಶೇಷವೆಂದರೆ ಅವರು ಸಮಾಜವನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸಿ ಬರೆಯುತ್ತಾರೆ, ಸುತ್ತಲಿನ ಸಮಾಜದ ವಿವರವನ್ನೇ ಕೊಡುವುದರಿಂದ ನಮ್ಮ ಮುಖವನ್ನೇ ನಾವು ನೋಡಿಕೊಳ್ಳುವುದರಿಂದ ಅದು ನಮ್ಮನ್ನು ಹಿಡಿದುಕೂರಿಸಿಕೊಳ್ಳುತ್ತದೆ, ಈ ಕೃತಿಯಲ್ಲಿ ೧೩ ಅಧ್ಯಾಯಗಳಿವೆ. ಎಲ್ಲ ಹತ್ತು ಹದಿನೈದು ಪುಟಗಳ ವ್ಯಾಪ್ತಿಯವು. ಒಂದೊಂದು ಅಧ್ಯಾಯವೂ ನಮ್ಮ ನಿತ್ಯ ಜೀವನದ ಒಂದೊಂದು ಚಿಂತೆಯನ್ನು  ಬಿಡಿಸಿಡುತ್ತದೆ. ಇದರಲ್ಲೊಂದು ಮದುವೆ ಆದವರ ಚಿಂತೆ, ಇದರೊಳಗೆ ಮತ್ತೊಂದು ಚಿಂತೆಯೂ ಇದೆ, ಅದೇ ಮದುವೆ ಆಗದವರ ಚಿಂತೆ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಹಿರಿಯರು ನೋಡಿ ಗುಣ ನಡತೆ, ಕುಟುಂಬವನ್ನೆಲ್ಲ ಮೇಲ್ಪದರದಲ್ಲಿ ಅವಲೋಕಿಸಿ ಗಂಡು ಹೆಣ್ಣುಗಳ ಮದುವೆ ಮಾಡುತ್ತಾರೆ, ಆದರೆ ಕೂಡಿ ಬಾಲಬೇಕಾದವರು ಗಂಡು - ಹೆಣ್ಣು. ಇದಕ್ಕೆ ಅಗತ್ಯವಾದ ಶಿಕ್ಷಣವನ್ನು ನಮ್ಮ ಕುಟುಂಬವಾಗಲೀ ಸಮಾಜವಾಗಲೀ ಇಬ್ಬರಿಗೂ ನೀಡುವ ವ್ಯವಸ್ಥೆ ಇಲ್ಲ, ಜೀವನಾನುಭವದಿಂದಲೇ ಇವರು ಕಲಿತುಕೊಳ್ಳಬೇಕು, ಇದೊಂದು ಒತ್ತಡದ ಸ್ಥಿತಿ, ಇದರಲ್ಲಿ ಸಾಮಾನ್ಯವಾಗಿ ಉದ್ಭವಿಸುವ ಚಿಂತೆಗಳೆಲ್ಲ ಅನುಮಾನದವು, ಪರಸ್ಪ ನಂಬುವ ಮೊದಲು ಇಬ್ಬರಿಗೂ ಬೇರೆಯವರ ಜೊತೆ ಸಂಬಂಧವಿರಬಹುದೇ, ನಾಳೆ ಏನು ಗತಿ ಎಂಬ ಸಂಶಯ ಮೂಡುತ್ತದೆ, ಇದು ನಿಧಾನವಾಗಿ ಹೆಮ್ಮರವಾಗಿ ಸಂಸಾರವನ್ನು ನಾಶಮಾಡುತ್ತದೆ, ಇಂಥ ನೂರಾರು ನೈಜ ಅನುಮಾನಗಳು ಗಂಡ ಹೆಂಡಿರಲ್ಲಿ ಯಾವ ರೀತಿ ಇರಬಲ್ಲುದೆಂದು ಪಟ್ಟಿ ಮಾಡಿ ಪರಿಹಾರ ಕೊಡುತ್ತಾರೆ. ಇವು ಯಾವುವೂ ಕಲ್ಪಿತವಲ್ಲ, ಇದು ಹೊಸದಾಗಿ ಮದುವೆ ಆಗುವವರಿಗೆ ಕೈಪಿಡಿ, ಹಾಗೆ ನೋಡಿದರೆ ಎಲ್ಲರಿಗೂ ಮದುವೆ ಮೊದಲಬಾರಿಯೇ ಆಗುವುದು, ಅದಕ್ಕೆ ಮೊದಲು ಯಾವ ಟದರೈನಿಂಗ್ ಇರುವುದಿಲ್ಲ, ಆಮೇಲೆ ಆಗುವವು ಮರು ಮದುವೆಗಳಷ್ಟೇ, ಹೀಗಾಗಿ ಮೊದಲ ಮದುವೆಯನ್ನು ಯಶಸ್ವಿಗೊಳಿಸಿಕೊಳ್ಳುವುದು ಹೇಗೆಂದು ಇಲ್ಲಿ ಮನವರಿಕೆ ಮಾಡಿಕೊಡುತ್ತಾರೆ, ಈ ಕಾರಣದಿಂದ ಮದುವೆ ಆಗುವ ಎಲ್ಲರೂ ಇದನ್ನು ಪವಿತ್ರಗ್ರಂಥದಂತೆ ಸದಾ ಇಟ್ಟುಕೊಂಡು ಅವಲೋಕಿಸಬೇಕು, ಪಾಲಕರು, ಬಂಧುಗಳು ನವ ವಿವಾಹಿತರಿಗೆ ಉಡುಗೊರೆಯಾಗಿ ಕಡ್ಡಾಯವಾಗಿ ಕೊಡಬೇಕು, ಇಷ್ಟಾದರೆ ಈ ಕೃತಿ ಸಾರ್ಥಕ, ಅಯ್ಯೋ ಮದುವೆಗೆ ಹೋಗುತ್ತಿದ್ದೇವೆ ಏನು ಉಡುಗೊರೆ ಕೊಡುವುದು ಎಂಬ ಚಿಂತೆಯನ್ನು ಈ ಕೃತಿ ಸಮಾಜದಲ್ಲಿ ದೂರ ಮಾಡಿದೆ.

ಇನ್ನೊಂದು ಸಂಗತಿ ಎಂದರೆ ಮನಶ್ಯಾಸ್ತ್ರಜ್ಞರು ಸಮಾಜ ವಿಜ್ಞಾನಿಗಳೂ ಆಗಿರುತ್ತಾರೆ, ಈ ದೃಷ್ಟಿಯಲ್ಲಿ ಅವರು ಸಮಾಜ ಅಧ್ಯಯನಕ್ಕೆ ಬೇಕಾದ ಸಮಗ್ರಿಗಳನ್ನು ಶಿಕ್ಷಣಕ್ಷೇತ್ರಕ್ಕೆ ಒದಗಿಸುತ್ತಾರೆ, ಇಲ್ಲಿ ಇಂಥ ಹತ್ತು ಹಲವು ಸಮಾಜ ಅಧ್ಯಯನ ಸಂಗತಿಗಳಿವೆ, ಪಾಲಕರ ನಡೆ, ಮಕ್ಕಳ ವರ್ತನೆ, ಸಮಾನ್ಯರ ಪ್ರತಿಕ್ರಿಯೆ ಇತ್ಯಾದಿ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸಮಾಜ ಅಧ್ಯಯನದಲ್ಲಿ ಈಚೆಗೆ ಸಂಶೋಧನೆ ಮಾಡುವವರು ಸೂಕ್ತ ವಿಷಯ ಸಿಗದೇ ಚರ್ವಿತ ಚರ್ವಣ ಪಿ.ಎಚ್.ಡಿ. ಮಾಡುತ್ತಿದ್ದಾರೆ, ಜೊತೆಗೆ ಕನ್ನಡದಂಥ ವಿಷಯದಲ್ಲೂ ಗಮನಸೆಳೆಯುವ ವಿಷಯಗಳ ಕೊರತೆ ಕಾಣುತ್ತಿದೆ, ಆ ಈ ಕವಿ ಕೃತಿಗಳ ಒಂದು ಅಧ್ಯಯನ ಮಾಡಲಾಗುತ್ತಿದೆ. ಈ ಕೃತಿಯ ಶುರುವಾತಿನಲ್ಲಿ ಸಿಆರ್ ಸಿಯವರು ಒಂದು ವಿಷಯದ ಕಡೆಗೆ ಗಮನ ಸೆಳೆಯುತ್ತಾರೆ. ಅದೆಂದರೆ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಎಲ್ಲೆಲ್ಲಿ ಮನಸ್ಸನ್ನು ಕುರಿತ ಮಾಹಿತಿಗಳು ಚಿಂತನೆಗಳಿವೆ ಎಂಬ ಉಲ್ಲೇಖಗಳನ್ನು ಕೊಡುತ್ತಾರೆ, ಇವುಗಳಲ್ಲಿ ವಚನ ಸಹಿತ್ಯದಿಂದ ಆಧುನಿಕ ಕನ್ನಡ ಸಾಹಿತ್ಯದ ಸಲುಗಳನ್ನು ಉಲ್ಲೇಖಿಸಿದ್ದಾರೆ, ಇದೊಂದು ಕೈ ದೀವಿಗೆ. ಇದನ್ನು ಇಟ್ಟುಕೊಂಡು ಮುಂದಿನ ಅಧ್ಯಯನಕಾರರು ಕನ್ನಡದಲ್ಲಿ ಮನಸ್ಸನ್ನು ಕುರಿತ ಸಂಶೋಧನೆಗೆ ತೊಡಗಬಹುದು, ಇಂಥ ಪ್ರಯತ್ನವನ್ನು ಕನ್ನಡ ಸಹಿತ್ಯದ ಸಂಶೋಧಕರು ಇನ್ನೂ ನಡೆಸಿದಂತೆ ಕಾಣುವುದಿಲ್ಲ, ನನಗಂತೂ ಇದು ಆಕರ್ಷಕ ಅನಿಸಿದೆ. ಹೀಗೆ ಆಕಾರ ಸಣ್ಣದಾದರೂ ಗುಣದಲ್ಲಿ ಬೃಹತ್ತಾದುದು ಇದು. ಜಗತ್ತು ಈಗ ಹೊಸಹೊಸ ವಿಷಯಗಳ ಕಡೆಗೆ ಹೊರಳುತ್ತಿರುವಾಗ ಕನ್ನಡದಂಥ ವಿಷಯದ ಬಗ್ಗೆ ಹಳೆದೆಂದು ಮೂಗು ಮುರಿಯುವಾಗ ಶಿಕ್ಷಕರು, ಸಂಶೋಧಕರು ಕನ್ನಡದಲ್ಲಿರುವ ಇಂಥ ಅಮೂಲ್ಯ ಸಾಮಗ್ರಿಯನ್ನು ಆಧುನಿಕ ರೀತಿಯಲ್ಲಿ ಶೋಧಿಸಿಕೊಟ್ಟರೆ ಅದರಿಂದ ಸಂಶೋಧನೆಗೂ ಅದನ್ನು ಮಾಡಿದವರಿಗೂ ಖಂಡಿತ ಶ್ರೇಯಸ್ಸು. ಈ ನಿಟ್ಟಿನಲ್ಲಿ ಆಸಕ್ತರು ಇದನ್ನು ಗಮನಿಸಲಿ. ನಮ್ಮ ನಿತ್ಯ ಬದುಕಿನ ಚಿಂತೆಗಳಿಗೆ ಅಂತ್ಯವಿಲ್ಲ, ಹುಟ್ಟಿನಿಂದ ಸಾಯುವವರೆಗೂ ನಾವು ಒಂದಲ್ಲ ಒಂದು ಚಿಂತೆಯಲ್ಲೇ ಇರುತ್ತೇವೆ, ಓದಪ್ಪಾ ಅಂದರೆ ಆಮೇಲೆ ಏನು ಎಂಬ ಚಿಂತೆ, ಅನಂತರ ನೌಕರಿ, ಆಮೇಲೆ ಮದುವೆ, ಮಕ್ಕಳ ಚಿಂತೆ, ಸರಿಯಾಗಿ ಹುಟ್ಟುತ್ತವೋಇಲ್ಲವೂ ಹುಟ್ಟಿದರೆ ಮುಂದೆ ಅವರಿಗೇನು, ಅವರ ಮದುವೆ, ಮನೆಯ ಚಿಂತೆ ಹೀಗೆ ಸದಾ ಚಿಂತೆಯಲ್ಲೇ ಸತ್ತ ಮೇಲೆ ಸತ್ ಮೇಲೆ ಎಲ್ಲಿಗೆ ಹೋಗುತ್ತೇನೋ ಎಂಬ ಚಿಂತೆ ಒಟ್ಟಿನಲ್ಲಿ ಇದು ನಮ್ಮ ಬೆನ್ನು ಬಿಡದ ಭೂತ, ಇದಕ್ಕೆಲ್ಲ ಮನಸ್ಸೇ ಮೂಲ ಅದನ್ನು ಸರಿ ಇಟ್ಟರೆ  ಎಲ್ಲವೂ ಸುಗಮ. ಅದನ್ನೇ ಇಲ್ಲಿ ಸಿ ಆರ್ ಸಿ ತೋರಿಸಿದ್ದಾರೆ, ಸಮಾಜದಲ್ಲಿ ಎಲ್ಲರೂ ಓದಬೇಕಾದ ಕೃತಿ ಇದು. ಬೆಲೆಯೂ ಹೆಚ್ಚಿಲ್ಲ, ನ್ಯಾಯವಗಿದೆ. ಎಲ್ಲೆಂದರಲ್ಲಿ ಒಯ್ಯಲೂ ಬಹುದು. ನಮ್ಮ ಹಿರಿಯರು ಯಾವಾಗಲೂ ಹೇಳುತ್ತಾರೆ - ನಿಮ್ಮನ್ನು ನೀವು ನೋಡಿಕೊಳ್ಳಿ ಎಂದು, ನಮ್ಮನ್ನು ನಾವು ನೋಡಿಕೊಳ್ಳುವುದು ಎಂದರೆ ನಮ್ಮ ನಮ್ಮ ಮನಸ್ಸು ನೋಡಿಕೊಳ್ಳುವುದು ಎಂದರ್ಥ. ಆದರೆ ಅವ್ಯಕ್ತ ಮನಸ್ಸನ್ನು ನೋಡುವುದು ಹೇಗೆ? ಅದನ್ನು ಕೈಕಾಲು ಮುಖ ನೋಡಿಕೊಂಡಂತೆ ನೋಡಲಾಗದು, ಅದು ನಮ್ಮ ವರ್ತನೆಯ ಮೂಲಕವ್ಯಕ್ತವಾಗುತ್ತದೆ ಅಷ್ಟೇ, ಅಂದರೆ ವಿವಿಧ ಸಂದರ್ಭದಲ್ಲಿ ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅವರ ಕೃತಿಗಳು ಸರಳವಾಗಿ ತಿಳಿಸುತ್ತವೆ. ಅವರು ಕನ್ನಡದಲ್ಲಿ ಮನಶ್ಯಾಸ್ತ್ರದ ಕೃತಿಗಳನ್ನು ರಚಿಸುವವರೆಗೆ ಕನ್ನಡದಲ್ಲಿ ಬೆರಳೆಣಿಕೆಯ ಲೇಖನಗಳಿದ್ದವಷ್ಟೇ. ಪೂರ್ಣ ಪ್ರಮಾಣದಲ್ಲಿ ಕನ್ನಡದ ಮನಶ್ಯಾಸ್ತçದ ಪುಸ್ತಕಗಳು ಇರಲಿಲ್ಲ, ಆದರೆ ಈಗ ಅವರು ಉಂಟುಮಾಡಿದ ಜಾಗೃತಿಯ ಫಲವಾಗಿ ಕನ್ನಡ ಸಾಹಿತ್ಯ ಮನಶ್ಯಾಸ್ತ್ರದ ಕೃತಿಗಳ ವಿಷಯದಲ್ಲಿ ಸಮೃದ್ಧವಾಗಿದೆ. ಇದು ಅವರು ಕನ್ನಡಕ್ಕೆ ನೀಡಿದ ವಿಶೇಷ ಕೊಡುಗೆ. ಇದಕ್ಕಾಗಿ ಕನ್ನಡಿಗರು ಅವರಿಗೆ ಕೃತಜ್ಞರಾಗಿರಬೇಕು. ಕನ್ನಡಸಾಹಿತ್ಯ ಲೋಕ ಇನ್ನೂ ಕೆಲವು ಸಂಕುಚಿತ ಮನೋಧರ್ಮಗಳಿಂದ ಹೊರಬರಬೇಕಿದೆ, ಅವುಗಳಲ್ಲಿ ಒಂದೆಂದರೆ ಅಖಿಲಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತ ಬಂದು ಇಷ್ಟು ವರ್ಷಗಳಾದರೂ ಒಂದು ಬಾರಿಯೂ ಕನ್ನಡ ವಿಜ್ಞಾನ ಬರೆಹಗಾರರಿಗೆ ಇದರ ಅಧ್ಯಕ್ಷತೆಯ ಭಾಗ್ಯ ಒಲಿದು ಬಂದಿಲ್ಲ, ಸಿ.ಆರ್.ಸಿ. ಖಂಡಿತ ಇದಕ್ಕೆ ಅರ್ಹರು. ಮುಂದಿನ ಬಾರಿಯಾದರೂ ಕನ್ನಡ ಸಾಹಿತ್ಯ ಪರಿಷತ್ತು ಈ ಬಗ್ಗೆ ಗಮನಹರಿಸಲಿ ಎಂಬುದು ಸಾಹಿತ್ಯಪ್ರಿಯರ ಹಾರೈಕೆ. ಸಿ.ಆರ್.ಸಿ. ರವರು ಕನ್ನಡದಲ್ಲಿ ಮನಶ್ಯಾಸ್ತ್ರದ ವಿಷಯವುಳ್ಳ ಶರಪಂಜರದಂಥ ಕಾದಂಬರಿಗಳು ಬಂದಿದ್ದವಷ್ಟೇ. ಆದರೆ ಹಳಗನ್ನಡದಲ್ಲಿ ವಡ್ಡಾರಾಧನೆಯಂಥ ಕಥಾ ಸಾಹಿತ್ಯದಲ್ಲಿ ಮನೋ ಲೋಕದ ಕೆಲವು ಮಾದರಿಗಳು ದೊರೆಯುತ್ತವೆ. ತಂದೆಯೇ ಮಗಳನ್ನು ಮೋಹಿಸುವ ವಿವರ ಅದರಲ್ಲಿನ ಕಾರ್ತಿಕ ಋಷಿಯ ಕಥೆಯಂಥ ವಿವರಗಳಲ್ಲಿ ದೊರೆಯುತ್ತವೆ. ಆದರೆ ಇವುಗಳ ಅರ್ಥ ನಮಗೆ ಆಗಬೇಕೆಂದರೆ ಸಿ ರ‍್ಸಿಯಂಥಬವರ ನೆರವು ನಮಗೆ ಅತ್ಯಗತ್ಯ. ಶರೆಪಂಜರ ಜನಪ್ರಯವಾಯ್ತು.  ಆದರೆ ಅದರಲ್ಲಿನ ವಸ್ತು ಜನಕ್ಕೆ ಸರಿಯಾಗಿ ಅರ್ಥವಾಗಿದ್ದು ಸಿ.ಆರ್‌.ಸಿ. ಯವರು ಅಂಥ ಮನಸ್ಥಿತಿಯನ್ನು ಸರಳವಾಗಿ ವಿವರಿಸಿದ ಮೇಲೆ, ಆದರೆ ಆ ಸಿನಿಮಾ ಜನಪ್ರಿಯವಾದುದು ಕಲಾವಿದರ ಪ್ರತಿಭೆಯಿಂದ, ಬಿಗಿಯಾದ ಕಥೆಯಿಂದ, ನಿರ್ದೇಶನದಿಂದ, ಅದಿರಲಿ, ಸಿ.ಆರ್‌.ಸಿ ಯವರು ಮನುಷ್ಯನ ಮನಸ್ಸಿನ ಲೋಕವನ್ನು ಕನ್ನಡದಲ್ಲಿ ತೆರೆದು ತೋರಿಸಿದವರು ಸಿ.ಆರ್‌.ಸಿ. ಈ ದೃಷ್ಟಿಯಿಂದ ಅವರು ಕನ್ನಡದ ಸಿಗ್ಮಂಡ್ ಫ್ರಾಯ್ಡ್ ಅಂದರೆ ತಪ್ಪಾಗದೆನಿಸುತ್ತದೆ.

ಸಿ.ಆರ್.ಸಿ. ಅವರು ತಮ್ಮ ವೃತ್ತಿ ಜೀವನದಲ್ಲಿ ಎಷ್ಟು ನಿಷ್ಠರೆಂದರೆ ನಿರಂತರವಾಗಿ ಅವರು ಮನೋ ವಿಜ್ಞಾನ ಕುರಿತು ಜನಸಾಮಾನ್ಯರಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರಲ್ಲಿ  ಅನೇಕ ರೀತಿಯಲ್ಲಿ ದಶಕಗಳಿಂದ ಜಾಗೃತಿ ಮೂಡಿಸುತ್ತಿದ್ದಾರೆ, ಪ್ರಖ್ಯಾತ ನಿಮಾನ್ಸ್ ಸಂಸ್ಥೆಯಲ್ಲಿ ನಾಲ್ಕು ದಶಕಗಳ ಕಾಲ ವೈದ್ಯರಾಗಿ ದುಡಿದು ನಿವೃತ್ತರಾದರೂ ಬರೆಯುವ, ಜಾಗೃತಿ ಮೂಡಿಸುವ ಪ್ರವೃತ್ತಿಗೆ ನಿವೃತ್ತಿ ಹೇಳಿಲ್ಲ, ಇದು ಖುಷಿಯ ಸಂಗತಿ. ಈ ದೃಷ್ಟಿಯಿಂದ ಅವರು ಕನ್ನಡಕ್ಕೆ ನೀಡುತ್ತಿರುವ ಕೊಡುಗೆ ಅಪೂರ್ವವಾದುದು. ಅವರು ಕನ್ನಡಕ್ಕೆ ದೊರಕಿದ ಅನರ್ಘ್ಯ ರತ್ನ. ಅವರು ಹೀಗೆಯೇ ತಮ್ಮ ಕನ್ನಡ ಸಾಹಿತ್ಯ ದೇವಿಯ ಕೈಂಕರ್ಯ ಸದಾಕಾಲ ಮಾಡುತ್ತಿರಲಿ, ನಾವೆಲ್ಲ ಅವುಗಳನ್ನು ಓದಿ ಸವಿಯುತ್ತಿರೋಣ. ಜೇಬಿಗೂ ಕೈಗೂ ಭಾರವೆನಿಸದ ಇಂಥ ಕೃತಿಗಳು ಯಾವುದೇ ಮನೆಗೆ ಶೋಭೆಕೊಡುತ್ತವೆ. ಕನ್ನಡದ ಎಲ್ಲರ ಮನೆಯಲ್ಲಿರಬೇಕಾದ ಕೃತಿ ಇದು. ನಿಮ್ಮಿಂದ ಏನಾಗುತ್ತದೋ ಬಿಡುತ್ತದೋ ಈ ಕೃತಿಯನ್ನು ಕೊಂಡು ಓದಿ, ಅಷ್ಟು ಸಾಕು.


ಕೃತಿ ವಿವರ -

ಚಿಂತೆ ಬಿಡು ಮನವೇಲೇ- ಡಾ. ಸಿ.ಆರ್. ಚಂದ್ರಶೇಖರ್

ಪ್ರಕಾಶಕರು- ಕರ್ನಾಟಕ ಹವ್ಯಾಸಿ ಆಪ್ತಸಮಾಲೋಚಕರ ವೇದಿಕೆ

ಬೆಂಗಳೂರು-, ಮೊದಲ ಮುದ್ರಣ- ೨೦೨೫, ಪುಟಗಳು-೮೮, ಬೆಲೆ- ೯೦ ರೂ.

ಸಂಪರ್ಕ- ೦೮೦- ೨೬೪೮೨೯೨೯

 

 

  




 

     


No comments:

Post a Comment