ಸೂರಜ್ (ಉತ್ತರ ಭಾರತ), ಪ್ರಿನ್ಸ್ (ಕುರುಕ್ಷೇತ್ರ), ವಂದನಾ (ಉತ್ತರ ಪ್ರದೇಶ), ಆರತಿ ಚಾವ್ಡಾ (ಭಾವನಗರ್), ನವನಾಥ್ (ಗುಲ್ಬರ್ಗಾ), ಕರಿಯ (ದಾವಣಗೆರೆ), ಕಾರ್ತಿಕ್ (ಆಂಧ್ರ), ತಿಮ್ಮ (ಚಿತ್ರದುರ್ಗ), ಸಂಧ್ಯಾ (ಬಳ್ಳಾರಿ), ಸಂದೀಪ್ (ರಾಯಚೂರು), ಸೋನು (ಆಂಧ್ರ), ಏಗವ್ವ (ಬಿಜಾಪುರ) –ಇವರೆಲ್ಲ ಎರಡರಿಂದ ಹತ್ತು ವರ್ಷದ ಮಕ್ಕಳು. ಹೀಗೆ ಹೆಸರನ್ನು ಹೇಳುತ್ತ ಹೋದರೆ ಪ್ರಾಥಮಿಕ ಶಾಲೆಯೊಂದರ ಹಾಜರಿ ಪಟ್ಟಿಯಂತೆ ಕಾಣುತ್ತದೆ. ಇವರು 2001ರಿಂದ ಈಚೆಗೆ ದೇಶಾದ್ಯಂತ ಕೊಳವೆ ಬಾವಿಯ ಕಗ್ಗತ್ತಲ ನರಕ ಕಂಡವರು. ಇವರಲ್ಲಿ ಪ್ರಿನ್ಸ್, ವಂದನಾ ಮತ್ತು ಸಂಧ್ಯಾ ಎಂಬ ಮೂವರು ಮಕ್ಕಳು ಮಾತ್ರ ಬದುಕಿ ಬಂದು ಹೊಸ ಜೀವನ ಕಂಡಿದ್ದಾರೆ. ತೆರೆದ ಕೊಳವೆ ಬಾವಿಗೆ ಮಕ್ಕಳು ಆಗಾಗ ಬೀಳುತ್ತಲೇ ಇರುತ್ತಾರೆ. ಇದೀಗ ಈ ಪಟ್ಟಿಗೆ ಸೇರಿದ ಹೊಸ ಹೆಸರು ನಾಲ್ಕು ವರ್ಷದ ಪೋರಿ ವಿಜಾಪುರದ ನಾಗಠಾಣಾದ ಅಕ್ಷತಾ (2014).
ನೀರಿನ ಲಭ್ಯತೆ ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಆಳದ ಕೊಳವೆ ಬಾವಿ ತೆಗೆದಂತೆಲ್ಲ ಸುತ್ತಲಿನ ತೋಡು ಬಾವಿಗಳ ನೀರು ಕೂಡ ಇಂಗಿ ಹೋಗುತ್ತದೆ. ಆಗ ಅನಿವಾರ್ಯವಾಗಿ ತೋಡು ಬಾವಿ ಉಳ್ಳವರೂ ಕೊಳವೆ ಬಾವಿ ತೆಗೆಸುತ್ತಾರೆ. ವಿಶ್ವಬ್ಯಾಂಕ್ ಭಾರತದ ಅಂತರ್ಜಲದ ಬಗ್ಗೆ ವರದಿಯೊಂದನ್ನು ನೀಡಿ ಅಂತರ್ಜಲ ಬಳಕೆ ಪ್ರಮಾಣ ಹೀಗೇ ಇದ್ದರೆ ಇನ್ನು 15 ವರ್ಷದಲ್ಲಿ ದೇಶದ ಶೇ. 60ರಷ್ಟು ಜಲಮೂಲಗಳು ಸಂಪೂರ್ಣ ಬತ್ತಿಹೋಗಲಿವೆ ಎಂದು ಎಚ್ಚರಿಸಿದೆ. ಅಂದರೆ ಕೊಳವೆ ಬಾವಿಗಳು ಮಾತ್ರವಲ್ಲ, ಕೆರೆ ಕೊಳ್ಳಗಳು ಮಾತ್ರವಲ್ಲದೇ ನದಿ ನೀರಿನ ಮೂಲಗಳು ಕೂಡ ಬತ್ತಲಿವೆ. ಕೊಳವೆ ಬಾವಿ ತಂದಿಟ್ಟ ದೊಡ್ಡ ಅಪಾಯದಲ್ಲಿ ಇದೂ ಒಂದು.
ಜನರಿಗೆ ಸುಲಭವಾಗಿ ನೀರು ಕುಡಿಸುವುದಕ್ಕೂ ಮತಬೇಟೆಗೂ ನೇರ ಸಂಬಂಧವಿದೆ. ಈಗಂತೂ ಸಂಸತ್ನಿಂದ ಹಿಡಿದು ನಗರ ಸಭೆ, ಪಂಚಾಯ್ತಿವರೆಗೆ ಒಂದಲ್ಲ ಒಂದು ಚುನಾವಣೆ ಆಗಾಗ ನಡೆಯುತ್ತಲೇ ಇರುವುದರಿಂದ ಕೊಳವೆಬಾವಿ ತೋಡಿಸಿ ನೀರಿನ ವ್ಯವಸ್ಥೆ ತೋರಿಸಿ ಜನರನ್ನು ಸುಲಭವಾಗಿ ಮರುಳುಗೊಳಿಸುವ ಯತ್ನ ನಡೆಯುತ್ತಲೇ ಇರುತ್ತದೆ. 2009ರ ಸಂಸತ್ ಚುನಾವಣೆಗೆ ಮುನ್ನ ಆಂಧ್ರದ ಪ್ರಕಾಶಂ ಜಿಲ್ಲೆಯ ಒಂದೇ ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಯಿತು!
ಕೊಳವೆ ಬಾವಿಯಿಂದ ಭೂಗರ್ಭದಲ್ಲಿ ಅಡಗಿದ ನೀರನ್ನು ಸುಲಭವಾಗಿ ಎತ್ತಬಹುದು, ಆದರೆ ಮರುಪೂರಣದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಭೂಮಿಯಲ್ಲಿ ನೀರು ಬೇಕಾದಷ್ಟಿದೆ, ಅದು ಖಾಲಿಯಾಗುವುದೇ ಇಲ್ಲ, ಆದರೂ ಮತ್ತೆ ತಾನಾಗಿ ಅಲ್ಲಿ ನೀರು ತುಂಬಿಕೊಳ್ಳುವುದೇ ನಿಸರ್ಗದ ಕ್ರಮ ಎಂಬ ಭ್ರಮೆ ಸಾರ್ವತ್ರಿಕವಾಗಿದೆ.
ನೀರಿಗೆ ಯಾವಾಗಲೂ ತತ್ವಾರ ಇರುವ ಬಯಲುಸೀಮೆಯಲ್ಲಿ ಕೊಳವೆ ಬಾವಿ ಇಲ್ಲದ ಮನೆಯಾಗಲೀ ಜಮೀನಾಗಲೀ ಇಲ್ಲವೇ ಇಲ್ಲ. ಒಂದೊಂದು ಜಮೀನಿನಲ್ಲಿ ಮೂರಕ್ಕೂ ಹೆಚ್ಚು ಕೊಳವೆ ಬಾವಿಗಳಿರುವುದೂ ಸಾಮಾನ್ಯ. ಇಲ್ಲೆಲ್ಲ ಐದುನೂರರಿಂದ ಸಾವಿರ ಅಡಿ ಆಳದ ಕೊಳವೆ ಬಾವಿಗಳಿಗೆ ಕೊರತೆಯೇ ಇಲ್ಲ. ಆದರೇನು ನೀರಿರುವ ಬಾವಿಗಳೇ ಅಪರೂಪ! ನೀರು ಬತ್ತಿದ ಕೂಡಲೇ ಮತ್ತೊಂದು ಕೊಳವೆ ಬಾವಿ ತೆಗೆಸುವುದು! ಹೀಗಾಗಿ ಸುತ್ತ ಮುತ್ತಲ ತೋಡು ಬಾವಿಗಳು ಬತ್ತಿಹೋಗಿವೆ, ಮಳೆ ನೀರು ಹಿಡಿದಿಡುತ್ತಿದ್ದ ಕೆರೆ ಕಟ್ಟೆಗಳು ಕೂಡ ಒಣಗಿವೆ. ಅಂತರ್ಜಲವನ್ನೆಲ್ಲ ಹೀರಿದ ಕಾರಣ ನೆಲದ ಹಸನು ಕನಸಾಗಿಬಿಟ್ಟಿದೆ. ಈ ಕುರಿತು ಕನಿಷ್ಠ ನೀತಿ ರೂಪಿಸಬೇಕಿದ್ದ ಸರ್ಕಾರ ಕೊಳವೆ ಬಾವಿ ನಿಯಂತ್ರಿಸುವ ಬದಲು ಸಬ್ಸಿಡಿ ನೀಡಿ ಮತ್ತಷ್ಟು ಬಾವಿ ಕೊರೆಯಲು ಉತ್ತೇಜನ ನೀಡಿತು! ಹಾಗೆ ನೋಡಿದರೆ ಕೇಂದ್ರಸರ್ಕಾರದಲ್ಲಿ ಕೊಳವೆಬಾವಿಗೆ ಪ್ರಾಧಿಕಾರವೊಂದಿದೆ. ಕೊಳವೆಬಾವಿ ನೀರನ್ನು ಕುಡಿಯುವ ಉದ್ದೇಶಕ್ಕಲ್ಲದೇ ಬೇರೆ ಯಾವುದೇ ಚಟುವಟಿಕೆಗೆ ಬಳಸಕೂಡದು, ಕೆರೆ ಕಟ್ಟೆಗಳ ಬಳಿ ಕೊಳವೆಬಾವಿ ತೋಡುವಂತಿಲ್ಲ ಇತ್ಯಾದಿ ನಿಯಮಗಳೂ ಇವೆ. ಆದರೆ ಇದನ್ನೆಲ್ಲ ಪಾಲಿಸುವವರು ಯಾರು? ಸಮಾಜ ಮತ್ತು ಸರ್ಕಾರಗಳೆರಡೂ ದೂರದೃಷ್ಟಿ ಕಳೆದುಕೊಂಡ ಸಂದರ್ಭದಲ್ಲಿ ದಾರಿ ತೋರಬೇಕಾದ ಶಿಕ್ಷಣ ಸಂಸ್ಥೆಗಳು ನಿದ್ರೆ ಮಾಡುತ್ತಿದ್ದರೆ ಮುಂದಿನ ತಲೆಮಾರುಗಳು ಎಂಥ ಸಂಕಟ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಕೊಳವೆ ಬಾವಿಯೇ ನಿದರ್ಶನ.
ಸುಲಭದಲ್ಲಿ ನೀರು ಕಾಣುವ ಕೊಳವೆ ಬಾವಿ ಮಾರ್ಗ ಈಗ ಬೇರೆ ಬಗೆಯಲ್ಲಿ ಸಮಾಜಕ್ಕೆ ಪಾಠ ಹೇಳಿಕೊಡುತ್ತಿದೆ. ನೂರಾರು ಅಡಿ ಕೊರೆಸಿದ ಕೊಳವೆ ಬಾವಿ ಎರಡು ಮೂರು ವರ್ಷದಲ್ಲಿ ಬತ್ತಿಹೋಗುತ್ತದೆ. ಕೇವಲ ಎರಡು ದಶಕದ ಹಿಂದೆ ಯಾರಾದರೂ ಕುಡಿಯುವ ನೀರನ್ನು ಮಾರುತ್ತಾರೆ ಎಂದರೆ ಅಪಹಾಸ್ಯ ಮಾಡುತ್ತಿದ್ದ ಜನ ಈಗ ಒಂದು ಲೀಟರ್ ಶುದ್ಧ ಕುಡಿಯುವ ನೀರಿಗೆ ಇಪ್ಪತ್ತು ರೂ. ತೆರುತ್ತಿದ್ದಾರೆ! ಆದರೂ ಪರಿಸ್ಥಿತಿ ಏಕೆ ಹೀಗಾಗಿದೆ ಎಂದು ಚಿಂತಿಸುವ ವ್ಯವಧಾನ ಮಾತ್ರ ಕಾಣುತ್ತಿಲ್ಲ.
ಯಾರೋ ಮಾಡಿದ ತಪ್ಪಿಗೆ ಅಮಾಯಕ ಮಕ್ಕಳು ಸಾಯುವುದು ಕೊಲೆಯಲ್ಲದೇ ಬೇರೆಯಲ್ಲ. ಕೊಳವೆ ಬಾವಿಯನ್ನು ಪಾಳು ಬೀಳುವಂತೆ ಮಾಡುವ ಅದರ ಮಾಲೀಕ ಮತ್ತು ಬಾವಿಯ ಗುತಿಗೆದಾರ ಇಬ್ಬರೂ ಇದರಲ್ಲಿ ಅಪರಾಧಿಗಳೇ. ಆದರೆ ಸಮರ್ಪಕ ಕಾನೂನು ಇಲ್ಲದ ಕಾರಣ ಇವರನ್ನು ಏನೂ ಮಾಡಲಾಗದು.
2007ರಲ್ಲಿ ಕಾರ್ತಿಕ್ ಎಂಬ ಆರು ವರ್ಷದ ಬಾಲಕನೊಬ್ಬ ಆಂಧ್ರದ ಪ್ರಕಾಶಂ ಜಿಲ್ಲೆಯ ಬೊಟ್ಲಗುಡೂರ್ನ ಹಳ್ಳಿಯಲ್ಲಿ ಪಾಳು ಕೊಳವೆ ಬಾವಿಗೆ ಬಿದ್ದ. ಸತತ 48ಗಂಟೆಗಳಿಗೂ ಹೆಚ್ಚು ಕಾಲ ಆತನ ರಕ್ಷಣಾ ಕಾರ್ಯ ನಡೆಯಿತು. ಆತ ಶವವಾಗಿ ಸಿಕ್ಕ. ಅಂದಿನ ಮುಖ್ಯಮಂತ್ರಿ ವೈಎಸ್ಆರ್ ರೆಡ್ಡಿ ಜಮೀನಿನ ಮಾಲೀಕ ಮತ್ತು ಕೊಳವೆ ಬಾವಿ ಗುತ್ತಿಗೆದಾರರ ಮೇಲೆ ಐಪಿಸಿ ಸೆಕ್ಷನ್ 304(ಎ)ರ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿ ತಲಾ 2 ಲಕ್ಷ ರೂ. ದಂಡ ಕಟ್ಟುವಂತೆ ನಿರ್ದೇಶನ ನೀಡಿದ್ದರು. ನಂತರ ಆರೋಪಿಗಳಿಬ್ಬರೂ ದಂಡ ಕಟ್ಟಿ ಜಾಮೀನು ಪಡೆದು ಆರಾಮವಾಗಿ ಹೊರಬಂದರು.
ಕೊಳವೆ ಬಾವಿ ಕಾನೂನೇ ಅಳ್ಳಕವಾಗಿದೆ. ನಮ್ಮಲ್ಲೂ ರಾಯಚೂರಿನ ಸಂದೀಪ್ ಕೊಳವೆ ಬಾವಿಯಲ್ಲಿ ಬಿದ್ದು ಮೃತನಾದಾಗ ಆತನ ಸಂಬಂಧಿಗಳು ಜಮೀನು ಮಾಲೀಕ ಗೋಪಾಲ ಮತ್ತು ಬಾವಿ ಗುತ್ತಿಗೆದಾರರಿಬ್ಬರ ಮೇಲೂ ಪ್ರಕರಣ ದಾಖಲಿಸಿದ್ದರು. ಕೆಲ ದಿನಗಳಲ್ಲಿ ಇಬ್ಬರೂ ಜಾಮೀನು ಪಡೆದು ಹೊರಬಂದುದು ಮಾತ್ರವಲ್ಲ, ಶಿಕ್ಷೆಯಿಂದಲೂ ಬಚಾವಾದರು.
ಪಾಳುಬಿದ್ದ ಕೊಳವೆ ಬಾವಿಗಳನ್ನು ಮುಚ್ಚಲು ಏನು ಕಷ್ಟ ಎಂದು ಸರ್ವೋಚ್ಚ ನ್ಯಾಯಾಲಯ 2009ರ ಫೆಬ್ರವರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಟುವಾಗಿ ಪ್ರಶ್ನಿಸಿತ್ತು. ಎರಡೂ ಸರ್ಕಾರಗಳು ಇದಕ್ಕೆ ಇನ್ನೂ ಉತ್ತರ ಹುಡುಕುತ್ತಲೇ ಇವೆ. ಇಂಥ ಬಾವಿಗಳನ್ನು ಮುಚ್ಚುವುದಿರಲಿ, ದೇಶ-ರಾಜ್ಯಗಳ ಮಟ್ಟ ಹೋಗಲಿ, ಕಸಬಾ ಮಟ್ಟದಲ್ಲಿ ಕೂಡ ಎಲ್ಲೆಲ್ಲಿ ಎಷ್ಟೆಷ್ಟು ಕೊಳವೆ ಬಾವಿಗಳಿವೆ ಎಂಬ ಲೆಕ್ಕವೇ ಯಾವ ಸರ್ಕಾರದ ಬಳಿಯೂ ಇಲ್ಲ! ಮಕ್ಕಳು ಬಿದ್ದು ಸುದ್ದಿಯಾದಾಗಲೇ ಅಲ್ಲೊಂದು ಪಾಳು ಕೊಳವೆ ಬಾವಿ ಇದೆ ಎಂದು ಗೊತ್ತಾಗುವುದು! ಇದು ನಮ್ಮ ಸರ್ಕಾರದ ಆಡಳಿತ ವೈಖರಿ.
2001ರಿಂದ ಕೊಳವೆ ಬಾವಿಗಳ ಆವಾಂತರ ಇಷ್ಟೆಲ್ಲ ನಡೆಯತೊಡಗಿದ ಮೇಲೆ ಸರ್ಕಾರಗಳು ಜನರ ಒತ್ತಡಕ್ಕೆ ಮಣಿದು ಕೊಳವೆ ಬಾವಿಗಳ ಅಂದಾಜು ಲೆಕ್ಕ ಮಾಡುವಂತೆ ತಹಸೀಲ್ದಾರ್, ಗ್ರಾಮ ಲೆಕ್ಕಿಗರಿಗೆ ಸೂಚಿಸಿತ್ತು. 2005ರಲ್ಲಿ ಸರ್ಕಾರೇತರ ಸಂಸ್ಥೆಯೊಂದು ಮೈಸೂರಿನಲ್ಲಿ ಇಂಥ ಲೆಕ್ಕಾಚಾರ ಮಾಡಿತು. ಅದರ ಪ್ರಕಾರ ಮೈಸೂರು ಸುತ್ತ ಅಂದಾಜು 12000 ಕೊಳವೆ ಬಾವಿಗಳು ನಿರ್ಗತಿಕವಾಗಿ ಬಿದ್ದಿವೆಯಂತೆ. ನೀರಿನ ಕೊರತೆ ಅಷ್ಟಾಗಿರದ ಮೈಸೂರಲ್ಲೇ ಕೊಳವೆ ಬಾವಿ ಈ ಪ್ರಮಾಣದಲ್ಲಿದ್ದರೆ ಇನ್ನು ವರ್ಷದ ಹತ್ತು ತಿಂಗಳ ಕಾಲ ಹರಿಯುವ ನೀರನ್ನೇ ಕಾಣದ ಬಯಲುಸೀಮೆಯ ತುಮಕೂರು, ರಾಯಚೂರು, ಗುಲ್ಬರ್ಗಾ, ಬಳ್ಳಾರಿ, ವಿಜಾಪುರ, ದಾವಣಗೆರೆ, ಕೊಪ್ಪಳದಂಥ ಜಿಲ್ಲೆಗಳಲ್ಲಿ ಒಟ್ಟು ಲಕ್ಷಕ್ಕೂ ಹೆಚ್ಚು ಪಾಳು ಕೊಳವೆ ಬಾವಿಗಳರಲು ಸಾಕು.
ಕೊಳವೆ ಬಾವಿಗಳನ್ನು ತೆಗೆಸುವುದರಿಂದ ಭೂಮಿಗೂ ಜನರಿಗೂ ಮುಂದಿನ ತಲೆಮಾರಿಗೂ ಕಷ್ಟ ಕಟ್ಟಿಟ್ಟದ್ದು ಎಂಬುದು ಈಗ ಅರಿವಾದ ಸಂಗತಿ. ಅಲ್ಪ ಲಾಭದ ಇಂಥ ಹಾಳು ಬಿದ್ದ ಬಾವಿಗಳಿಗೆ ಮುಚ್ಚಳ ಹಾಕಲು ಇರುವ ಸಮಸ್ಯೆಯಾದರೂ ಏನು?
ಕಾಂಕ್ರೀಟ್ ಮುಚ್ಚಳಕ್ಕೆ ತಗಲುವ ವೆಚ್ಚ ಹೆಚ್ಚೆಂದರೆ 300ರೂ. ಬಾವಿ ತೆಗೆದಾಗ ಅದರಲ್ಲಿ ಗುತ್ತಿಗೆದಾರರು ಕೇಸಿಂಗ್ ಪೈಪ್ ಹಾಕುತ್ತಾರೆ. ಕನಿಷ್ಠ ಪಕ್ಷ ಅದಿದ್ದರೂ ಮಕ್ಕಳು ಸುಲಭವಾಗಿ ಬಾವಿಗೆ ಬೀಳುವುದಿಲ್ಲ. ಆದರೆ ನೀರು ಬತ್ತುವುದನ್ನೇ ಕಾಯುತ್ತ ಕೂರುವ ಗುತ್ತಿಗೆದಾರರು ಕೇಸಿಂಗ್ ಪೈಪ್ ತೆಗೆದು ಮತ್ತೊಂದು ಬಾವಿಗೆ ಹಾಕುತ್ತಾರೆ. ಕೇಸಿಂಗ್ ಪೈಪು ತಲಾ 4000-5000 ರೂ. ಬೆಲೆ ಬಾಳುತ್ತದೆ. ಬತ್ತಿದ ಬಾವಿಯ ಹಳೆಯ ಪೈಪನ್ನೇ ಹೊಸ ಬಾವಿಗೆ ಅಳವಡಿಸುವ ಗುತ್ತಿಗೆದಾರರು ಹೊಸ ಲೆಕ್ಕದ ಜೊತೆಗೆ ಯಾವುದೋ ಮಕ್ಕಳ ಹಣೆಬರಹವನ್ನೂ ಬರೆಯುತ್ತಾರೆ.
ಹಾಳು ಬಿದ್ದ ಕೊಳವೆ ಬಾವಿಗಳನ್ನು ಕಂಡ ಜನ ಅದನ್ನು ಮುಚ್ಚಿಸುವ ಉಸಾಬರಿ ನಮಗೇಕೆ ಎಂದು ಓಡಾಡುತ್ತಿರುತ್ತಾರೆ. ಈ ಮನೋಧರ್ಮ ಇರುವವರೆಗೂ ಅಕ್ಷತಾಳ ಬಲಿ ಇದಕ್ಕೆ ಖಂಡಿತ ಕೊನೆಯಾಗದು.
ಪುಸ್ತಕ:

No comments:
Post a Comment