ಇದೀಗ ದೇಶಾದ್ಯಂತ 16ನೆಯ ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಏಪ್ರಿಲ್ 17ರಂದು ಚುನಾವಣೆ ನಡೆಯಿತಾದರೂ ಸರ್ಕಾರಿ ಯಂತ್ರಗಳು ಈ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಮಾರ್ಚ್ 5ರಂದು ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ನಮ್ಮ ರಾಜ್ಯ ಸರ್ಕಾರಿ ಯಂತ್ರಗಳು ಕಾರ್ಯನಿರ್ವಹಿಸುವ ಬಗೆಯೇ ಬೇರೆಯಾಯಿತು. ಪಂಚಾಯ್ತಿಯಿಂದ ಹಿಡಿದು ಪೊಲೀಸ್ ಸ್ಟೇಶನ್, ಪುರಸಭೆ, ಮಹಾನಗರ ಪಾಲಿಕೆ, ವಿದ್ಯುತ್ ನಿಗಮ ಹೀಗೆ ಯಾವುದೇ ಕಚೇರಿಗೆ ಹೋದರೂ ಕಡತಗಳ ರಾಶಿ ರಾಶಿ! ಮೊದಲೇ ನಮ್ಮ ಸರ್ಕಾರಿ ಯಂತ್ರ ನಿಧಾನಗತಿಯಲ್ಲಿ ಕೆಲಸ ಮಾಡುತ್ತದೆ. ಇನ್ನು ಚುನಾವಣೆಯಂಥ ಕಡ್ಡಾಯ ಕರ್ತವ್ಯದ ನೆಪ ಸಿಕ್ಕರೆ ಕೇಳಬೇಕೇ?
ಈ ವಾರದ ಮೊದಲ ಭಾಗದಲ್ಲಿ ಬೆಂಗಳೂರಿನ ಎಚ್ಎಸ್ಆರ್ ಲೇಔಟಿನ ವಸತಿ ಸಂಕೀರ್ಣದಲ್ಲಿ ಸರಣಿ ಕಳ್ಳತನ ನಡೆಯಿತು. ಠಾಣೆಗೆ ದೂರು ಕೊಡಲು ಹೋದರೆ ದೂರು ಸ್ವೀಕರಿಸುವವರೇ ಇಲ್ಲ. ಅವರೆಲ್ಲರ ಗಮನ ಚುನಾವಣಾ ಕರ್ತವ್ಯದ ಮೇಲಿತ್ತು! ನೊಂದ ನಾಗರಿಕರು ಮಾಧ್ಯಮಗಳಿಗೆ ದೂರು ನೀಡಿದರು! ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಮಾಡಬೇಕಾದ ವೈದ್ಯರಿಲ್ಲ, ನರ್ಸ್ಗಳಿಲ್ಲ, ಕಾಲೇಜುಗಳಲ್ಲಿ ಪಾಠ ಮಾಡುವ ಮೇಷ್ಟ್ರುಗಳಿಲ್ಲ, ಬೀದಿ ಸ್ವಚ್ಛಗೊಳಿಸುವವರಿಲ್ಲ, ಅವರನ್ನು ಕೇಳುವವರಿಲ್ಲ. ಇವರೆಲ್ಲ ಎಲ್ಲಿ ಹೋದರು? ಉತ್ತರ: ಎಲೆಕ್ಷನ್ ಡ್ಯೂಟಿ ಸಾರ್!
ಚುನಾವಣೆ ಘೋಷಣೆ ಆದಾಗಿನಿಂದ ತಾಲ್ಲೂಕಾಫೀಸು, ಜಿಲ್ಲಾಧಿಕಾರಿ ಕಚೇರಿಯಿಂದ ಹಿಡಿದು ಎಲ್ಲ ಕಡೆ ನಿತ್ಯ ಕೆಲಸಗಳೆಲ್ಲ ಹೆಚ್ಚೂಕಡಿಮೆ ನಿಂತೇ ಹೋಗಿವೆ. ಚುನಾವಣೆ ಮುಗಿದು ಮತ್ತೆ ಕಚೇರಿ ಕೆಲಸಕ್ಕೆ ಹಾಜರಾದಾಗ ತಿಂಗಳ ಕಾಲ ಬಾಕಿ ಬಿದ್ದ ಕಡತಗಳು, ಹೊಸದಾಗಿ ಬರುವ ಅರ್ಜಿ-ಅಹವಾಲುಗಳ ರಾಶಿಯನ್ನು ಸಿಬ್ಬಂದಿ ವಿಲೇವಾರಿ ಮಾಡುವ ವೇಳೆಗೆ ಜನರ ಪಾಡು ಮತ್ತಷ್ಟು ಹದಗೆಟ್ಟಿರುತ್ತದೆ. ಮೊದಲೇ ಭ್ರಷ್ಟಾಚಾರದಲ್ಲಿ ಮುಳುಗಿದ ವ್ಯವಸ್ಥೆಯಲ್ಲಿ ಶೀಘ್ರ ಅರ್ಜಿ ವಿಲೇವಾರಿಗೆ ಮತ್ತಷ್ಟು ಭ್ರಷ್ಟತೆಗೆ ಅವಕಾಶವಾಗುತ್ತದೆ. ಜನರ ಕಲ್ಯಾಣಕ್ಕಾಗಿ ನಡೆಯುವ ಚುನಾವಣಾ ವ್ಯವಸ್ಥೆ ಅದೇ ಜನರನ್ನು ಹೇಗೆ ಕಾಡುತ್ತದೆ ನೋಡಿ.
ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ 543 ಸಂಸದರ ಆಯ್ಕೆಗೆ ದೇಶದ 81.4 ಕೋಟಿ ಜನರಿಂದ ಮತದಾನ ನಡೆಯುತ್ತಿದೆ. 9,30,000 ಮತಗಟ್ಟೆಗಳು! 9 ಹಂತದ ಚುನಾವಣೆ! ಅಂದಾಜು ಖರ್ಚು 5 ಶತಕೋಟಿ ಅಮೆರಿಕನ್ ಡಾಲರ್ ಅಂದರೆ ಸುಮಾರು 30,000 ಕೋಟಿ ರೂ. ಇದು ದೇಶದ ಸ್ಥೂಲ ಚಿತ್ರಣ. ಕರ್ನಾಟಕವನ್ನೇ ಇಟ್ಟುಕೊಂಡು ಚುನಾವಣೆಯ ಕಾರ್ಯವಿಧಾನ ಗಮನಿಸಬಹುದು. ಈ ಬಾರಿ ಇಲ್ಲಿರುವುದು 54,261 ಮತಗಟ್ಟೆಗಳು. ಇದಕ್ಕೆ ಪ್ರಿಸೈಡಿಂಗ್ ಆಫೀಸರ್ ಜೊತೆ ಮೂವರು ಅಧಿಕಾರಿಗಳಂತೆ ಒಟ್ಟು 2,17,044 ಸಿಬ್ಬಂದಿಗಳು. ಜೊತೆಗೆ ಒಬ್ಬ ಅಟೆಂಡರ್. ಇಷ್ಟೇ ಅಲ್ಲ. ಚುನಾವಣೆ ಘೋಷಣೆ ಆದಾಗಿನಿಂದ ಮತದಾರ ಪಟ್ಟಿ ಪರಿಷ್ಕರಣೆ, ಹೆಸರು ಸೇರ್ಪಡೆ, ಚುನಾವಣಾ ಅಕ್ರಮ ತಡೆ ತಂಡಗಳು, ರಿಟರ್ನಿಂಗ್, ಸಹಾಯಕ ರಿಟರ್ನಿಂಗ್ ಅಧಿಕಾರಿಗಳು ಹೀಗೆ ಸಾವಿರಾರು ಜನ ಟೊಂಕಕಟ್ಟಿ ರಜೆ, ಹೊತ್ತು ಗೊತ್ತಿನ ಪರಿವೆಯೇ ಇಲ್ಲದಂತೆ ಕೆಲಸಮಾಡಬೇಕಾಗುತ್ತದೆ. ಇಷ್ಟು ದೊಡ್ಡ ಜನತಂತ್ರ ವ್ಯವಸ್ಥೆಯಲ್ಲಿ ನ್ಯಾಯಯುತ, ಗೌಪ್ಯ, ನಿಷ್ಪಕ್ಷಪಾತ ಚುನಾವಣೆ ನಡೆಸುವುದು ಅಂದರೆ ಹುಡುಗಾಟವೇ? ಅದಿರಲಿ. ಈ ಕೆಲಸದಲ್ಲಿ ತೊಡಗಿಸಿಕೊಂಡ ಇವರೆಲ್ಲ ಯಾರು? ಈಗಾಗಲೇ ಹೇಳಿದ ಸರ್ಕಾರಿ ಕಚೇರಿಯವರು ಇಲ್ಲವೇ ಅರೆ ಸರ್ಕಾರಿ ನೌಕರರು, ಶಿಕ್ಷಕರು, ಬ್ಯಾಂಕ್, ವಿಮೆ ನೌಕಕರು ಇತ್ಯಾದಿ. ಒಟ್ಟಿನಲ್ಲಿ ಸರ್ಕಾರದ ಅಡಿಯಲ್ಲಿ ಬರುವ ಯಾವ ಕಚೇರಿಯೂ ಚುನಾವಣಾ ಕರ್ತವ್ಯದಿಂದ ಹೊರಗಿರುವುದಿಲ್ಲ. ಪರಿಣಾಮ ಆಡಳಿತ ಯಂತ್ರದ ಮೇಲೆ ಇನ್ನಷ್ಟು ಹೊರೆ. ಹೀಗೇಕೆ?
25 ಅಕ್ಟೋಬರ್ 1951 ರಿಂದ 21 ಫೆಬ್ರವರಿ 1952ರವರೆಗೆ ದೇಶದಲ್ಲಿ ಮೊದಲ ಮಹಾಚುನಾವಣೆ ನಡೆಯಿತು. ಅಂದಿನ ಸ್ಥಿತಿಯಲ್ಲಿ ಇದ್ದ ಒಂದಿಷ್ಟು ಸರ್ಕಾರಿ ನೌಕರರನ್ನು ಬಳಸಿಕೊಳ್ಳದೇ ಅನ್ಯ ಮಾರ್ಗವಿರಲಿಲ್ಲ. ದೇಶ ಇಬ್ಭಾಗವಾಗಿ ಜನ ಅತ್ತಿತ್ತ ಚದುರಿದ್ದರು. ಆಡಳಿತಾನುಭವವಿದ್ದ ಬ್ರಿಟಿಷರು ದೇಶಬಿಟ್ಟಿದ್ದರು. ಅವರಡಿ ಸೇವೆಯಲ್ಲಿದ್ದ ಹಿರಿಯ ಅಧಿಕಾರಿಗಳ ಸೇವೆಯನ್ನು ನೆಚ್ಚಿಕೊಳ್ಳುವಂತಿರಲಿಲ್ಲ. ಅನಕ್ಷರತೆ ಶೇ.80 ದಾಟಿತ್ತು. ಅಂಥ ಸಂದರ್ಭದಲ್ಲಿ ಒಂದಿಷ್ಟು ಓದಿ ಬರೆದು ಮಾಡಬಲ್ಲ, ಕಾನೂನು ಅರಿತು ವ್ಯವಸ್ಥೆ ಮುನ್ನಡೆಸಬಲ್ಲ ಸರ್ಕಾರಿ ನೌಕರರನ್ನೇ ಈ ಕೆಲಸಕ್ಕೆ ನೇಮಿಸಲಾಯಿತು. ಅಲ್ಲದೇ ನಮ್ಮ ಸರ್ಕಾರಿ ನೌಕರರು ಅಕ್ಕಪಕ್ಕದ ದೇಶದ ನೌಕರರಂತಲ್ಲ. ದೇಶ ಹಾಗೂ ವ್ಯವಸ್ಥೆಗೆ ಅವರು ನಿಷ್ಠರು. ಅವರಲ್ಲಿ ಭ್ರಷ್ಟತೆ ಇರಬಹುದು. ಆದರೆ ಎಂಥ ದುರ್ಬಲ ಸರ್ಕಾರ ಇದ್ದಾಗಲೂ ನೆರೆಯ ದೇಶಗಳಲ್ಲಾದಂತೆ ಸೇನಾಕ್ರಾಂತಿಗೆ ಅವಕಾಶಕೊಟ್ಟಿಲ್ಲ. ನಿಷ್ಪಕ್ಷಪಾತವಾಗಿ, ವಸ್ತುನಿಷ್ಠವಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಊಟ, ಕನಿಷ್ಠ ಸವಲತ್ತುಗಳ ಕೊರತೆಯಲ್ಲೂ ಚುನಾವಣಾ ಕಾರ್ಯವನ್ನು ಅವರು ಶ್ರದ್ಧೆಯಿಂದ ಮಾಡುತ್ತಾರೆಂಬುದೇನೋ ಸರಿ. ಇದೇನು ನಿತ್ಯದ ಕೆಲಸವಲ್ಲ, ಎಲ್ಲೋ ಐದು ವರ್ಷಕ್ಕೊಮ್ಮೆ ಅಥವಾ ಅಗತ್ಯಬಿದ್ದಾಗ ಮಾತ್ರ ಮಾಡುವ ಕರ್ತವ್ಯ ಎಂಬುದೂ ಸರಿ. ಆದರೆ ಅವರ ಕೆಲಸ ಬೇರೆ ಇದೆ.
ನಮ್ಮ ವ್ಯವಸ್ಥೆಯಲ್ಲಿ ಕೆಲವು ಸಂಗತಿಗಳಿವೆ. ಉದಾಹರಣೆಗೆ ವಿರೋಧ ಪಕ್ಷದವರು ಸಭಾಧ್ಯಕ್ಷರ ಎಡ ಭಾಗದಲ್ಲಿ ಕೂರುವುದು. ಆಡಳಿತದವರು ಬಲಭಾಗಕ್ಕೆ ಕೂರುವುದು. ಸೈದ್ಧಾಂತಿಕವಾಗಿ ಎಡವಾದಿಗಳಾದರೂ ಸರ್ಕಾರ ನಡೆಸುವಾಗ ಅವರು ಬಲಕ್ಕೇ ಇರಬೇಕು, ಬಲವಾದಿಗಳು ವಿರೋಧಪಕ್ಷದಲ್ಲಿದ್ದರೆ ಅವರು ಎಡಕ್ಕೇ ಇರಬೇಕು! ಯಾಕೆ ಹೀಗೆ? ಈ ಪದ್ಧತಿ ಫ್ರಾನ್ಸ್ನಲ್ಲಿತ್ತು, ಇಂಗ್ಲೆಂಡ್ ಬಂತು, ನಾವು ಅದನ್ನೇ ಚಾಚೂ ತಪ್ಪದೇ ಅಳವಡಿಸಿಕೊಂಡೆವು ಎಂಬುದು ಇದಕ್ಕೆ ಉತ್ತರ. ಹೀಗಾಗಿ ಇದೊಂದು ಸಂಪ್ರದಾಯ. ಇದು ಮೌಢ್ಯವೋ ಅಲ್ಲವೋ ಬೇರೆ ಪ್ರಶ್ನೆ. 1952ರ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರನ್ನೇ ಚುನಾವಣಾ ಕಾರ್ಯಕ್ಕೆ ಹಾಕಬೇಕಾದ ಅನಿವಾರ್ಯತೆ ಇತ್ತು. 1957ರಲ್ಲಿ ಮತ್ತೆ ಅದೇ ಮಾರ್ಗ ಅನುಸರಿಸಲಾಯಿತು. ಇದೇ ರೀತಿ ಕಳೆದ 15 ಚುನಾವಣೆಗಳಲ್ಲೂ ನಡೆಯಿತು. ಮಾತ್ರವಲ್ಲ, ಸ್ಥಳೀಯ ಸಂಸ್ಥೆಗಳು, ಸಹಕಾರಿ ಸಂಘಗಳು, ಜಾತಿ ಸಂಘಟನೆಗಳು-ಹೀಗೆ ಎಲ್ಲೇ ಚುನಾವಣೆ ನಡೆಯುತ್ತದೆ ಎಂದಾದರೆ ಅದನ್ನು ಸರ್ಕಾರಿ ನೌಕರರೇ ನಡೆಸಿಕೊಡಬೇಕು ಎನ್ನುವ ಪರಿಸ್ಥಿತಿ ಸಿದ್ಧವಾಯಿತು. ಜನತಂತ್ರದ ನಮ್ಮ ದೇಶದಲ್ಲಿ ಈಗೀಗಂತೂ ಸೌರಮಂಡಲದಲ್ಲಿ ನಿತ್ಯ ಒಂದಲ್ಲ ಒಂದು ಗ್ರಹಣ ನಡೆಯುತ್ತಲೇ ಇರುವಂತೆ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಎರಡೂ ಕೈಗಳ ಎಲ್ಲ ಬೆರಳೂ ಸರಿ ಇರುವ ವ್ಯಕ್ತಿ ಹತ್ತಾರು ಸಂಘ ಸಂಸ್ಥೆಗಳ ಒಡನಾಟ ಇಟ್ಟುಕೊಂಡರೆ ಈ ಚುನಾವಣೆಯಲ್ಲಿ ಗುರುತು ಮಾಡಲು ಜಾಗವೇ ಇರದಂಥ ಸ್ಥಿತಿ ಇದೆ. ಇದೇ ಕಾರಣಕ್ಕೆ ಸಾಮಾನ್ಯವಾಗಿ ಎಡಗೈ ತೋರುಬೆರಳಿಗೆ, ಕಿರುಬೆರಳಿಗೆ ಹಾಕುತ್ತಿದ್ದ ಶಾಯಿಯನ್ನು ಈ ಚುನಾವಣೆಯಲ್ಲಿ ಎಡಗೈ ಹೆಬ್ಬೆರಳಿಗೆ ವರ್ಗಾಯಿಸಲಾಗಿದೆ! ಸಂಖ್ಯೆಯ ದೃಷ್ಟಿಯಿಂದಲೂ ಈ ಪಾಟಿ ಚುನಾವಣೆಗಳು ನಡೆಯುತ್ತ, ಅದಕ್ಕೆಲ್ಲ ಸರ್ಕಾರಿ ನೌಕರರೇ ಸಿಬ್ಬಂದಿಗಳಾದರೆ ಸರ್ಕಾರದ ಕೆಲಸವನ್ನು ದೇವರೇ ಬಂದು ಮಾಡಬೇಕಾಗುತ್ತದೆ. ಹಾಗಾದರೆ ಪರ್ಯಾಯವೇನು? - ಖಾಸಗಿ ಸಹಭಾಗಿತ್ವ.
ರಕ್ಷಣಾ ಇಲಾಖೆ, ಪೊಲೀಸ್, ಸಂಸತ್ತು, ವಿಧಾನಸಭೆಯ ಆಯ್ದ ಘಟಕಗಳನ್ನು ಬಿಟ್ಟರೆ ಎಲ್ಲ ಕಡೆಯೂ ಅನುಸರಿಸಲಾಗುತ್ತಿರುವ ಸ್ಥಾಪಿತ ಪದ್ಧತಿ ಸರ್ಕಾರಿ-ಖಾಸಗಿ ಸಹಭಾಗಿತ್ವ. ನಮ್ಮ ದೇಶದಲ್ಲಿ 2013ರ ನ್ಯಾಶನಲ್ ಸ್ಯಾಂಪಲ್ ಸರ್ವೇಯ ವರದಿಯಂತೆ ನಿರುದ್ಯೋಗಿಗಳ ಸಂಖ್ಯೆ ಸಾವಿರ ಜನಕ್ಕೆ 27. ದೇಶದಲ್ಲಿ ಕೋಟಿಗಟ್ಟಲೆ ವಿದ್ಯಾವಂತ ನಿರುದ್ಯೋಗಿಗಳಿದ್ದಾರೆ. ಇವರನ್ನು ಚುನಾವಣಾ ಕಾರ್ಯದಲ್ಲಿ ಏಕೆ ತೊಡಗಿಸಿಕೊಳ್ಳಬಾರದು? ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಚುನಾವಣಾ ಆಯೋಗ ಈ ಕೆಲಸಕ್ಕೆ ಸ್ವತಂತ್ರವಾಗಿ ನೇಮಕಾತಿ ಮಾಡಿಕೊಳ್ಳಲಾಗದು ಎಂಬುದು ಸರಿ. ಆದರೆ ಕಾರ್ಯಕ್ರಮ ಸಂಘಟಿಸುವ ಕಂಪನಿಗಳಿಗೆ ಕಾನೂನು ಪ್ರಕಾರ ಗುತ್ತಿಗೆ ನೀಡಿ ಈ ಕೆಲಸ ಮಾಡಿಸಿಕೊಳ್ಳಬಹುದು. ಪಂಚಾಯ್ತಿ ಮಟ್ಟದ ಚುನಾವಣೆಯಲ್ಲಿ ಪ್ರಯೋಗಾತ್ಮಕವಾಗಿ ಹೀಗೆ ಮಾಡಿನೋಡಬಹುದು. ಡಬ್ಬಿಗಳಿಗೆ ಬದಲಾಗಿ 1981ರಲ್ಲಿ ವಿದ್ಯುನ್ಮಾನ ಮತಯಂತ್ರ ಮೊದಲ ಬಾರಿ ಕೇರಳದಲ್ಲಿ ಬಳಕೆಯಾದಾಗಲೂ ಇದು ಸರಿಯಾಗದೇನೋ ಎಂಬ ಆತಂಕ ಜನರಲ್ಲಿತ್ತು. ಈಗ ಎಲ್ಲೂ ಡಬ್ಬಿಗಳೇ ಇಲ್ಲ! ಹೊಸದನ್ನು ಜನ ಯಾವಾಗಲೂ ಗುಮಾನಿಯಿಂದಲೇ ನೋಡುತ್ತಾರೆ. ಈ ಪ್ರಯೋಗವನ್ನೂ ಹಾಗೆಯೇ ನೋಡಬಹುದು.
ಖಾಸಗಿ ಕಂಪನಿಗಳಿಗೆ ಚುನಾವಣೆ ಗುತ್ತಿಗೆ ನೀಡುವುದು ಅಂದರೆ ಅಧಿಕಾರ ಸರ್ವಸ್ವವನ್ನೂ ಅವರಿಗೇ ವಹಿಸುವುದಲ್ಲ. ಭದ್ರತೆ, ಮುಖ್ಯ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ, ರಿಟರ್ನಿಂಗ್ ಆಫೀಸರ್ಗಳು, ಅಬ್ಸರ್ವರ್ಗಳಂಥ ಆಯಕಟ್ಟಿನ, ನಿಗಾ ಇಡುವ ಹಾಗೂ ಕ್ರಮ ತಪ್ಪಿದರೆ ಶಿಕ್ಷಿಸುವ ಅಧಿಕಾರ ಮೊದಲಾದವೆಲ್ಲ ಸರ್ಕಾರದ ಹಿರಿಯ ಅಧಿಕಾರಿಗಳ ಬಳಿಯೇ ಇರಬೇಕು. ಆದರೆ ರೂಟ್ ಆಫೀಸರ್, ಪ್ರಿಸೈಡಿಂಗ್ ಆಫೀಸರ್ ಆದಿಯಾಗಿ ಮತ್ತೆಲ್ಲ ಕೆಲಸಗಳನ್ನು ಕ್ರಮದಂತೆ ಮಾಡಿಕೊಡುವ ಕೆಲಸವನ್ನು ಕಂಪನಿಗಳಿಗೆ ನಿಯಮಾನುಸಾರ ಗುತ್ತಿಗೆ ಕೊಡಬಹುದಲ್ಲ? ಹೀಗಾದಾಗ ನಿರುದ್ಯೋಗಿಗಳಿಗೆ ಕೆಲಸ ಸಿಗುವುದರ ಜೊತೆಗೆ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯ ಎಂದಿನಂತೆ ನಡೆಯಲೂ ಅನುಕೂಲವಾಗುತ್ತದೆ.
1950ರಲ್ಲಿ ಭಾರತ ಚುನಾವಣಾ ಆಯೋಗ ಸ್ಥಾಪನೆಯಾಗಿ ಅನೇಕ ಚುನಾವಣೆಗಳನ್ನು ನಡೆಸಿದ್ದರೂ ಅಂಥದ್ದೊಂದು ಆಯೋಗವಿದೆ, ಅದಕ್ಕೆ ಅಪಾರ ಅಧಿಕಾರವಿದೆ ಎಂದು ದೇಶಕ್ಕೆ ತಿಳಿದಿದ್ದು 1990ರಲ್ಲಿ ದೇಶದ 10ನೆಯ ಮುಖ್ಯ ಚುನಾವಣಾ ಆಯುಕ್ತರಾಗಿ ಟಿ ಎನ್ ಶೇಷನ್ ಬಂದಮೇಲೆಯೇ. ಚುನಾವಣೆಗೆ ಒಂದು ಕ್ರಮ ಇದೆ ಎಂಬುದು ತಿಳಿದ್ದಿದ್ದೂ ಆಗಲೇ. ಅಂದಿನಿಂದ ನಡೆಯುತ್ತ ಬಂದ ಚುನಾವಣಾ ಸುಧಾರಣೆ ಇಂದಿಗೂ ನಿಂತಿಲ್ಲ. ಇದರ ಮುಂದುವರಿಕೆಯಾಗಿ ಖಾಸಗಿ ಸಹಭಾಗಿತ್ವವನ್ನು ಅಳವಡಿಸಿಕೊಂಡರೆ ಚುನಾವಣೆಯ ವೆಚ್ಚವನ್ನೂ ಇಳಿಸಬಹುದು. ಎಲ್ಲೇ ಇದ್ದರೂ ಮತ ಚಲಾಯಿಸಬಲ್ಲ ಮೊಬೈಲ್ ಅಥವಾ ಕಂಪ್ಯೂಟರೈಸ್ಡ್ ವೋಟಿಂಗ್, ಬಯೋಮೆಟ್ರಿಕ್ನಂಥ ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಶಾಯಿ ಕಾಟವನ್ನೂ ತಪ್ಪಿಸಬಹುದು, ಕಳ್ಳವೋಟನ್ನೂ ಇಲ್ಲವಾಗಿಸಬಹುದು, ಮಾನವ ಶ್ರಮವನ್ನೂ ಇಳಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮತದಾನದ ಪ್ರಮಾಣವನ್ನು ಹೆಚ್ಚಿಸಬಹುದು. ಈಗ ನಡೆದ ಚುನಾವಣಾ ಕಾರ್ಯದಲ್ಲಿ ಎರಡು ಲಕ್ಷ ಮೀರಿದ ನೌಕರರು ಬೇರೆಯವರಿಗೆ ಮತ ಹಾಕಿಸಲು ತಮ್ಮ ಮತವನ್ನು ಕಳೆದುಕೊಂಡಿದ್ದಾರೆ! ಅವರಿಗೆ ಅಂಚೆ ಮತದ ಸೌಲಭ್ಯ ಇದ್ದರೂ ಅದು ಗಣನೆಗೆ ಬರುತ್ತದೆಯೇ ಎಂಬುದು ಪ್ರಶ್ನೆ. ನಾನೂ ಮತಹಾಕಿದ್ದೇನೆ ಎಂಬ ಸಮಾಧಾನ ಅವರಿಗೆ ಇರಬಹುದು ಅಷ್ಟೆ.
ಎಲ್ಲ ಕ್ಷೇತ್ರಗಳಲ್ಲೂ ಕ್ರಾಂತಿ ಉಂಟುಮಾಡಿದ ತಂತ್ರಜ್ಞಾನದ ನೆರವನ್ನು ಚುನಾವಣಾ ವ್ಯವಸ್ಥೆಯಲ್ಲೂ ಬಳಸಿಕೊಳ್ಳಬಹುದು. ಹಳೆ ಪದ್ಧತಿಗೆ ಜೋತು ಬೀಳುವ ಮನೋಭಾವದ ಸರ್ಕಾರಿ ಯಂತ್ರ ಹಾಗೂ ನೇತಾಗಳು ಇದಕ್ಕೆ ಮನಸ್ಸು ಮಾಡಬೇಕಷ್ಟೆ.
No comments:
Post a Comment