Monday, 30 January 2023

ಕಲಿಕೆಯ ಸ್ವರೂಪ


ನನ್ನ ತರಗತಿಯಲ್ಲಿ ಏನಾದರೂ ಪ್ರಯೋಗ ನಡೆಯುತ್ತಿರುತ್ತದೆ. ಒಂದಿಷ್ಟು ಹುಡುಗ ಹುಡುಗಿಯರಿದ್ದರು. ಏನ್ರಪ್ಪಾ ನೀವೆಲ್ಲ ಹಾಸ್ಟೆಲ್ನಲ್ಲಿ ಇದ್ದೀರಾ ಇಲ್ಲಾ ಮನೆಯಿಂದ ಓಡಾಡ್ತೀರಾ ಎಂದು ಕೇಳಿದೆ. ಅರ್ಧ ಜನ ಹಾಸ್ಟೆಲ್ ಅಂದ್ರೆ ಮಿಕ್ಕವರು ಮನೆ ಅಂದ್ರು. ನಿಮ್ಮ ಕತೆ ಏನ್ರಮ್ಮಾ ಅಂದೆ. ಅವರ ಉತ್ತರವೂ ಹೆಚ್ಚೂ ಕಡಿಮೆ ಇದೇ ಇತ್ತು. ಎಲ್ಲಾದರೂ ಇರಿ. ಪ್ರಶ್ನೆ ಅದಲ್ಲ. ನಿಮ್ಮಲ್ಲಿ ಎಷ್ಟು ಜನಕ್ಕೆ ನೀವು ಸ್ವೀಕರಿಸುವ ಆಹಾರ ತಯಾರಿಸಲು ಬರುತ್ತದೆ ಹೇಳಿ ಅಂದೆ. ಉತ್ತರವಿಲ್ಲ. ಹೋಗಲಿ ಅನ್ನ ಮಾಡಲು ಎಷ್ಟು ಜನಕ್ಕೆ ಬರುತ್ತದೆ ಅಂದ್ರೆ ಅದಕ್ಕೂ ಮೌನವೇ ಉತ್ತರ. "ಮೆಸ್ ಐತೆ ಸಾ" ಅಂದ್ರು. ಈಗ ಚರ್ಚೆಗೆ ಮೆಟ್ಟಿಲು ಸಿಕ್ತು. ಹೋಗಲಿ, ಎಷ್ಟು ಜನಕ್ಕೆ ರಂಗೋಲಿ ಹಾಕಲು, ಹಾಲು ಹಿಂಡಲು ಬರುತ್ತದೆ ಎಂದು ಕೇಳಿದೆ. ಮೌನ, ಬಟ್ಟೆ ಒಗೆದುಕೊಳ್ಳಲು, ತುಪ್ಪ ಮಾಡಲು... ಎಂದು ನಿತ್ಯ ಹಳ್ಳೀ ಜೀವನದ ಒಂದೊಂದೇ ಕೆಲಸದ ಬಗ್ಗೆ ಕೇಳುತ್ತ ಹೋದೆ, ಬಹುತೇಕ ಉತ್ತರ ಮೌನವೇ ಆಗಿತ್ತು. ಎಂಎ ಓದ್ತಿದ್ದೀರಾ ಏನಾದ್ರೂ ಬರೀತೀರಾ ಅಂದ್ರೆ ಮತ್ತೆ ಮೌನ. ಮತ್ತೆ ಏನು ಕಲಿತಿದ್ದೀರಪ್ಪಾ ಇಷ್ಟು ವರ್ಷದಲ್ಲಿ ಅಂದ್ರೆ ತಲೆ ಕೆಳಗೆ ಹಾಕಿಕೊಂಡಿದ್ರು.

ಬೆಂಗಳೂರಲ್ಲಿ ಕೆಲವು ಕಲಿಕಾ ಕೇಂದ್ರಗಳಿವೆ. ಇವುಗಳ ಕೆಲಸ ವಿದೇಶಕ್ಕೆ ಹೋಗುವ ಯುವಜನತೆಗೆ ಅನ್ನ ಹೆಚ್ಚೆಂದ್ರೆ ಉಪ್ಪಿಟ್ಟು ಮಾಡಲು ಕಲಿಸುವುದು. ಇದಕ್ಕೆ 20-30 ಸಾವಿರ ತೆರಬೇಕು.ಇದು ನಮ್ಮ ಸಮಾಜದ ಕಲಿಕೆಯ ಕತೆ. ನನ್ನ ಕ್ಲಾಸು ಅಂತಲ್ಲ. ಏನೇ ಓದುತ್ತಿರಲಿ ಅವರ ಕೌಶಲದ ಬಗ್ಗೆ ಕೇಳಿ. ನಿಮಗೆ ಒಂದಿಬ್ಬರ ಹೊರತು ಬೇರೆಯವರಿಂದ ಸಿಗುವ ಉತ್ತರ ಮೌನವೇ. ನಾನೂ ಹಳ್ಳಿಯಲ್ಲೇ ಹುಟ್ಟಿ ಬೆಳೆದೆ. ಸಮಾನ್ಯವಾಗಿ ಹಳ್ಳೀ ಜನ ಆದಷ್ಟೂ ತಮ್ಮ ಕೆಲಸ ತಾವೇ ಮಾಡಿಕೊಳ್ಳಲು ಆದ್ಯತೆ ಕೊಡುವುದರಿಂದ ಅನೇಕ ಕೌಶಲಗಳು ಅವರಿಗೆ ತಿಳಿದಿರುತ್ತವೆ. ಅಲ್ಲದೆ ಅವರಿಗೆ ಬೇರೆ ದಾರಿಯೂ ಇಲ್ಲ. ಹಳ್ಳಿಗಳ ಕುಟುಂಬಗಳು ಛಿದ್ರವಾದ ಪರಿಣಮ ಏನು ಎಂಬುದು ಸ್ವಲ್ಪ ಇದರಿಂದ ತಿಳಿಯುತ್ತದೆ. ನಮ್ಮೂರಲ್ಲಿ ಒಬ್ಬ ಹುಡುಗನಿದ್ದನೆ ಹತ್ತನೇ ಕ್ಲಾಸು ಅಷ್ಟೇ ಓದಿದ್ದು. ಆದರೆ ಮನೆ ಪರಿಸರದ ಮರಳು, ಇದ್ದಿಲು ಬಳಸಿ ಒಂದು ದೊಡ್ಡ ಪಾತ್ರೆಗೆ ನಲ್ಲಿ ಕೂರಿಸಿ ಸ್ವಂತ ವಾಟರ್ ಫಿಲ್ಟರ್ ಸಿದ್ಧಮಾಡಿದ್ದ. ನೋಡಿ ಖುಷಿ ಪಟ್ಟಿದ್ದೆ. ಆತ ತನ್ನ ಮನೆಯ ವಿದ್ಯುತ್ ಕೆಲಸ, ನೀರಿನ ಪಂಪ್ ರಿಪೇರಿ ಎಲ್ಲ ಮಾಡಿಕೊಳ್ಳುತ್ತಾನೆ. ಭಲೇ. ಇದಲ್ಲವೇ ಕೌಶಲ್ಯ? ಆದರೆ ನಮ್ಮ ಆಧುನಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಏಕೆ ಹೀಗಗುತ್ತಿದ್ದಾರೆ? ನಗರದ ಆಕರ್ಷಣೆ. ಅಲ್ಲಿ ಎಲ್ಲದಕ್ಕೂ ಜನ ಸಿಕ್ತಾರೆ. ದುಡ್ಡು ಇದ್ದರೆ ಆಯ್ತು, ಅಂದ್ರೆ ಹೇಗಾದ್ರೂ ªಮಾಡಿ ದುಡ್ಡು ಮಾಡಬೇಕು. ಇಂಥ ಮನೋಭಾವದಿಂದಲೇ ಭ್ರಷ್ಟಾಚಾರ ಕೂಡ ಹೆಚ್ಚಿದೆ ಅನ್ನಬಹುದಲ್ಲ? ಇರಬಹುದು. ಕೌಶಲವಿಲ್ಲದ ಸಮಾಜ ರೂಪಿಸುವ ಶಿಕ್ಷಣ ನಮ್ಮನ್ನೆಲ್ಲ ಎಲ್ಲಿಗೆ ಒಯ್ಯುತ್ತದೆ?

ಸಂಪ್ರದಾಯ ಪರಂಪರೆಯ ಬಂಧನ ಕೆಲವು ಕೌಶಲ್ಯಗಳನ್ನು ಒತ್ತಾಯದಿಂದ ಕಲಿಯುವಂತೆ ಮಾಡುತ್ತದೆ. ಬೆಳಿಗ್ಗೆ ಎದ್ದು ರಂಗವಲ್ಲಿ ಹಾಕಬೇಕು ಅಂದ್ರೆ ಮನೆಬಾಗಿಲು ತೊಳೆದು ಬಳಿದು ಮಾಡಬೇಕು, ಪೊರಕೆ ಹಿಡಿಯಲು ಇದು ಕಲಿಸುತ್ತದೆ, ನೀರು ಸೇದಲು, ರಂಗೋಲಿ ಬಿಡಿಸಲು ಕಲಿಸುತ್ತದೆ. ಒಂದೇ ಕೆಲಸ ಎಷ್ಟೆಲ್ಲ ಕಲಿಸುತ್ತದೆ ನೋಡಿ.

ನಿಮ್ಮ ಹಳ್ಳೀ ಮನೆಯಲ್ಲಿ ಒಂದು ತೋಟ, ಕೊಟ್ಟಿಗೆಯಲ್ಲಿ ಒಂದಿಷ್ಟು ದನ ಎಮ್ಮೆ ಕರುಗಳು ಇದ್ದರೆ ನಿಮ್ಮ ಜೀವನ ಪಾಠಕ್ಕೆ ಶಾಲೆ ಕಾಲೇಜು ಬೇಕಿಲ್ಲ. ಸುಮ್ಮನೇ ನೋಡಿ- ಒಂದು ಎಮ್ಮೆ ಇದ್ದರೆ ಅದನ್ನು ಮೇಯಿಸಲು ಹೋಗಬೇಕು ಅದರ ಸುತ್ತ ಬರುವ ಹಕ್ಕಿ ಹುಳ ಹುಪ್ಪಟೆ. ಅದು ಹಕುವ ಸೆಗಣ ಒಂದೆರಡು ದಿನದಲ್ಲಿ ಏನಾಗುತ್ತದೆ ಎಂಬ ಕುತೂಹಲ, ಅದು ಕಲಿಸುವ ಪಾಠ. ಕಡಿಮೆಯೇ? ಒಮ್ಮೆ ನಮ್ಮ ಹಾಕಿದ ಸೆಗಣಿ ಕುಪ್ಪೆಯನ್ನು ನಿತ್ಯ ಅದೇನೋ ಮಹಾ ಸಂಪತ್ತು ಎಂಬಂತೆ ಗಮನಿಸುವುದು ಮಾಡುತ್ತಿದ್ದೆವು. ಅದನ್ನು ಬೆದಕುತ್ತಿದ್ದೆವು. ಆಸೆಗಣಿ ಕುಪ್ಪೆ ಕೆದಕಿದಗ ಅದರಡಿಯಲ್ಲಿ ಒಂದು ಸಣ್ಣ ಕುಳಿಯಾಗಿತ್ತು. ಅದನ್ನೂ ತಿವಿದು ಸ್ವಲ್ಪ ಅಗೆದೆವು, ಅಲ್ಲಿ ನೋಡಿದ್ರೆ ಸಣ್ಣ ಗಾತ್ರದ ಹುಳಗಳು. ಸೆಗಣಿ ಉಂಡೆಮಾಡಿಕೊಂಡು ಮೇಲಕ್ಕೂ ಕೆಳಕ್ಕೂ ತಳ್ಳುತ್ತಿದ್ದವು. ಆ ಕುಳಿಯ ಆಳದಲ್ಲಿ ಒಂದಿಷ್ಟು ಸೆಗಣಿ ಉಂಡೆಗಳು. ಕೆಲವು ಹುಳಗಳು ಅದನ್ನು ಮೆಲ್ಲುತ್ತಿದ್ದವು. ಮಳೆಗಾಲ ಬಂದಾಗ ಈ ಕುಳಿಯಲ್ಲಿದ್ದ ಹುಳಗಳು ಏನಾದವೋ ಪಾಪ ಅಂದುಕೊಂಡು ಕುಳಿಯಲ್ಲಿ ನೀರು ಹೋಗದಂತೆ ಕಾಯುವ ಪರಮ ದಡ್ಡ ಕೆಲಸ ಮಾಡಿದ್ದೆವು. ಅಲ್ಲಿ ನೋಡಿದ್ರೆ ಒಂದು ಹುಳಕ್ಕೂ ಏನೂ ಆಗಿರಲಿಲ್ಲ. ಕುಳಿಯಲ್ಲಿ ನೀರು ಇಂಗಿ ಹೋಗುತ್ತಿತ್ತು. ಅಲ್ಲಿಗೆ ಅಂತರ್ಜಲ ಕೂಡುತ್ತಿತ್ತು. ಇನ್ನು ಅಲ್ಲಿಗೆ ಬರುತ್ತಿದ್ದ ಬಗೆಬಗೆಯ ಹಕ್ಕಿಗಳು. ಕೆಲವು ಸೆಗಣಿ ಹುಳ ತಿಂದರೆ ಕೆಲವಕ್ಕೆ ಆ ಹುಳ ಲೆಕ್ಕಕ್ಕೇ ಇರುತ್ತಿರಲಿಲ್ಲ. ಎಮ್ಮೆ ಮೇಲೆ ಬಂದು ಕೂರುತ್ತಿದ್ದ ಕೀಟಗಳು ಅವುಗಳ ಆಸಕ್ತಿ ಆಗಿರುತ್ತಿತ್ತು. ಹೀಗೆ ಹಳ್ಳಿ ಜೀವನ ಅನೇಕ ತಿಳಿವಳಿಕೆ ಕೊಡುತ್ತದೆ, ಬೇಕಾದ್ದು ಒಂದೇ-ಕುತೂಹಲ. ಮತ್ತೆ ಯಾವ ಶಾಲೆಯೂ ಬೇಕಿಲ್ಲ. ಇಂಥ ತಿಳಿವಳಿಕೆಯನ್ನು ನಮ್ಮ ಆಧುನಿಕ ಶಿಕ್ಷಣ ಎಂದಾದರೂ ಕೊಡಬಲ್ಲುದೆ? ಅದರ ಸ್ವರೂಪ ಹೀಗೆ ಪ್ರಾಯೋಗಿಕತೆಯ ರೂಪ ಪಡೆಯಲು ಸಾಧ್ಯವೇ? ಈ ಪ್ರಶ್ನೆಗೆ ನನ್ನ ಉತ್ತರ ಮೌನ. ನಿಮ್ಮದು?

    


Wednesday, 25 January 2023

ಗಮಕ - ಸಾಹಿತ್ಯ ಗಮಕಗಂಧರ್ವರೊಂದಿಗಿನ ನನ್ನ ಸ್ಮರಣೆಗಳು





ಗಮಕ ಗಂಧರ್ವ, ಪದ್ಮಶ್ರೀ ಹೊಸಹಳ್ಳಿ ಕೇಶವಮೂರ್ತಿಗಳ ಮತ್ತು ನನ್ನ ಮೊದಲ ಸಮಾಗಮವೇ, ಅವರ ಗಮಕ ವಾಚನಕ್ಕೆ ವ್ಯಾಖ್ಯಾನ ನೀಡುವ ಮೂಲಕ ಆದುದು ನನ್ನ ಭಾಗ್ಯ. ಆವರೆಗೆ ಅವರ ಗಮಕವಾಚನಗಳನ್ನು ಧ್ವನಿಸುರಳಿಗಳ ಮೂಲಕ ಕೇಳಿ ಮಾರು ಹೋಗಿದ್ದ ನಾನು, ಅವರ ಕೆಲವು ಗಮಕ ಕಛೇರಿಗಳನ್ನು ದೂರದಲ್ಲಿ ಕುಳಿತು ಕೇಳಿದ್ದೆನಷ್ಟೆ.  ಆಗಿನ್ನೂ ನಾನು ವ್ಯಾಖ್ಯಾನವನ್ನು ಪ್ರಾರಂಭಿಸಿರಲಿಲ್ಲ.  ಇವರ ವಾಚನ ಕೇಳುತ್ತಲೇ ನಾನು ನನ್ನ ಪತ್ನಿಯ ವಾಚನಕ್ಕೆ ವ್ಯಾಖ್ಯಾನ ನೀಡಲು ಪ್ರಾರಂಭಿಸಿದ್ದೆ.   ಹೀಗೆ ಹತ್ತಾರು ವರ್ಷ ಕಳೆಯುತ್ತಲೇ 2000ನೇ ವರ್ಷದಲ್ಲಿ ಬೆಂಗಳೂರಿನ ಕನಕಗಿರಿ ಗಮಕ ಕಲಾ ಪರಿಷತ್ತಿನವರು ಕುಮಾರವ್ಯಾಸ ತನ್ನ ಕಾವ್ಯವನ್ನು ರಚಿಸಿದ ಗದುಗಿನ ವೀರನಾರಾಯಣನ ದೇವಸ್ಥಾನದ ಆವರಣದಲ್ಲಿಯೇ ಏರ್ಪಡಿಸಿದ್ದ ಗಮಕ ಕಲಾ ಉತ್ಸವದಲ್ಲಿನ ಮೊದಲ ಕಾರ್ಯಕ್ರಮವೇ ಪೂಜ್ಯ ಕೇಶವಮೂರ್ತಿಗಳ ವಾಚನ ಮತ್ತು ನನ್ನ ವ್ಯಾಖ್ಯಾನ.  ಇದೇ ನನಗೆ ಅವರ ಪ್ರಥಮ ಸಮೀಪದರ್ಶನ – ಎಲ್ಲ ಅರ್ಥಗಳಲ್ಲೂ !

ಅಂದಿನ ಕಾರ್ಯಕ್ರಮಕ್ಕೆ ನಿಗದಿಗೊಳಿಸಿದ್ದ ಕಾವ್ಯಭಾಗ ಕುಮಾರವ್ಯಾಸ ಭಾರತದ ಉದ್ಯೋಗಪರ್ವದ ‘ಕರ್ಣಭೇದನ’.

ಕಾರ್ಯಕ್ರಮದ ಪ್ರಾರಂಭಕ್ಕೆ ಮೊದಲೇ ನನ್ನಲ್ಲಿ ಯಾವುದೋ ಭಯವಲ್ಲದ ಭೀತಿ – ಎಂದೂ ಇಲ್ಲದ ಆತಂಕ, ಇಂತಹ ಹಿರಿಯರ ಪಕ್ಕದಲ್ಲಿ ಕುಳಿತು ವ್ಯಾಖ್ಯಾನ ಮಾಡಲು ನನಗೆ ಸಾಧ್ಯವೇ ಎಂಬ ಅಳುಕು.  ಎದುರಿಗೆ ಕುಳಿತಿರುವವರು ಭವ್ಯಾಕೃತಿಯ ಮಾರ್ಕಂಡೇಯ ಅವಧಾನಿಗಳು.  ನನ್ನ ಗಂಟಲು ಒಣಗಲು ಇನ್ನೇನು ಬೇಕು.  ಮೊದಲು ನಾಂದೀ ಪದ್ಯಗಳೊಂದಿಗೆ ಪ್ರಾರಂಭಿಸಬೇಕಾದವರು ಆ ಹಿರಿಯರು.  ಆದರೆ ಮೊದಲೇ ನೀರು ಕುಡಿದವನು ನಾನು. 

ಬಹು ನಿರೀಕ್ಷಿತ ವಾಚನ ಪ್ರಾರಂಭವಾಯಿತು.  ಸ್ವಸ್ತಿವಾಚನ, ನಾಂದೀ ಪದ್ಯಗಳನ್ನು ತಲೆದೂಗುವಂತೆ ಹಾಡಿದ ನಂತರ ನನ್ನ ಕಡೆಗೊಮ್ಮೆ ಸೌಮನಸ್ಯದ ನೋಟ ಬೀರಿ “ಸೆಣಸುವದಟರಗಂಡ ಸಮರಾಂಗಣಕತುಳ ಭೇರುಂಡನಾ ...........”

ಎಂಬ ಸೂಚನಾ ಪದ್ಯ ವಾಚಿಸಿ ನನ್ನ ವ್ಯಾಖ್ಯಾನಕ್ಕೆ ಬಿಟ್ಟರು.  ಆವರೆಗೂ ಕಾರ್ಯಕ್ರಮದ ಬಗ್ಗೆ ನನಗಿದ್ದ ವಿವಿಧ ಭಾವಾನುಭಾವಗಳು ಕ್ಷಣ ಮಾತ್ರದಲ್ಲಿ ಮರೆಯಾಗಿ, ನನ್ನ ಸಹಜವಾದ ವ್ಯಾಖ್ಯಾನ ಶೈಲಿಯ ಪ್ರಕಾಶವಾಯಿತು.  ಇನ್ನು ಮುಂದಿನದು ಅವರ ಲೀಲಾಜಾಲವಾದ, ವಿವಿಧ ರಸಾನುಭವಗಳಿಗೆ ಕಾರಣವಾಗುವ ವಿವಿಧ ರಾಗಗಳಲ್ಲಿ ಗಮಕವಾಚನ ಪ್ರಸ್ತುತಿ.  ಅದಕ್ಕೆ ನನ್ನ ಅಳುಕಿಲ್ಲದ ವ್ಯಾಖ್ಯಾನ.  ವ್ಯಾಖ್ಯಾನದ ನಂತರ ಕೆಲವು ಸಂದರ್ಭಗಳಲ್ಲಿ ಅವರು ನನ್ನನ್ನು ಶಾಂತ ಭಾವದಿಂದ ನೋಡಿ ವಾಚನ ಪ್ರಾರಂಭಿಸುತ್ತಿದ್ದ ರೀತಿ ಯಾವತ್ತೂ ಮರೆಯಲಾಗದ್ದು. 

ಈ ಕಾರ್ಯಕ್ರಮ ನನ್ನ ದೃಷ್ಟಿಯಲ್ಲಿ ಅತ್ಯಂತ ಯಶಸ್ವಿಯಾಯಿತು ಎನ್ನಲಡ್ಡಿಯಿಲ್ಲ.  ಇದರಲ್ಲಿ ಅತಿ ಹೆಚ್ಚಿನ ಪಾಲು ಶ್ರೀ ಹೆಚ್.ಆರ್.ಕೆ. ಅವರಿಗೆ ಸಲ್ಲುತ್ತದೆ.  ನಂತರದ್ದು ಸನಕಾದಿ ಜಂಗಮ ಜನಾರ್ದನರಂತಿದ್ದ ಕೇಳುಗರಲ್ಲಿ ಮೊದಲ ಸಾಲಿನಲ್ಲಿ ಆಸೀನರಾಗಿದ್ದ ವೇ. ಮಾರ್ಕಂಡೇಯ ಅವಧಾನಿಗಳದ್ದು, ಅಂತಹ ಒಬ್ಬೊಬ್ಬ ಶ್ರೋತೃಗಳು ಸಾವಿರ ಶ್ರೋತೃಗಳಿಗೆ ಸಮ.  ಕಿರಿಯರನ್ನು ಪ್ರೋತ್ಸಾಹಿಸುವ ಅವರ ರೀತಿ ಅನನ್ಯ !

ಇದಾದ ಸುಮಾರು ದಿನಗಳ ನಂತರ ಅವರೊಂದಿಗೆ ಕಾರ್ಯಕ್ರಮಕ್ಕಾಗಿ ಪ್ರಯಾಣಿಸುತ್ತಿದ್ದೆ.  ಮೊದಲ ಕಾರ್ಯಕ್ರಮ ಗದುಗಿನಲ್ಲಿ ನಡೆದುದು ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡುತ್ತಿತ್ತು.  ಅಂದು ನನಗೆ ಮುಜುಗರ ಹೋಗಿ, ಅವರೊಂದಿಗೆ ವ್ಯಾಖ್ಯಾನ ಮಾಡಿದಾಗಿನ ಧೈರ್ಯ ಎಲ್ಲಿಂದ ಬಂತು ಎಂಬ ಪ್ರಶ್ನೆ ಮೂಡಿ ಬಂತು.  ಪ್ರಯಾಣದ ಅರ್ಧದೂರ ಮನಸ್ಸು ಮಥಿಸುತ್ತಿತ್ತು.  ನಿಧಾನವಾಗಿ ಉತ್ತರ ತೇಲಿ ಬರುತ್ತಿತ್ತು.  ಅದನ್ನು ಒಂದೇ ಮಾತಿನಲ್ಲಿ ಹೇಳಬೇಕೆಂದರೆ – ಅದು ಹೆಚ್.ಆರ್.ಕೆ. ಅವರ ಗಾಯನದಲ್ಲಿನ ರಮಣೀಯವಾದ ಮಾರ್ದವತೆ. ಅದೇ ನನ್ನಲ್ಲಿ ಧೈರ್ಯವನ್ನು ತುಂಬಿದುದು.  

ಕುಮಾರವ್ಯಾಸನ ಪ್ರತಿ ವಾಕ್ಯವನ್ನು ಹಾಡುವಾಗ ಅವರು ಆ ವಾಕ್ಯಕ್ಕೆ ಭಾವಗಳನ್ನು ತುಂಬಿ ರಸೋತ್ಪತ್ತಿ ಮಾಡುವ ಕ್ರಮ, “ಭೇದವಿಲ್ಲೆಲೆ ಕರ್ಣ................” ಎಂದು ಅವರು ಹಾಡುವಾಗ ವ್ಯಾಖ್ಯಾನಕಾರರೂ ಒಳಗೊಂಡಂತೆ ಅವರಲ್ಲಿಯೇ ಸೇರಿ ಹೋಗುತ್ತಾರೆ.  ಅಂತಹ ಪ್ರಭಾವ ಅವರ ವಾಚನದ್ದು.  ನಾಂದಿ ಮತ್ತು ಸೂಚನಾ ಪದ್ಯಗಳಲ್ಲಿಯೇ ಅವರು ನನ್ನಲ್ಲಿದ್ದ ಹಿಂಜರಿಕೆಯನ್ನು ಅಟ್ಟಿಬಿಟ್ಟಿದ್ದರು.  ಆ ನಂತರದ ನಯ-ವಿನಯ, ಬಾಗು-ಬಳಕುಗಳು, ಏರು-ಇಳಿತಗಳು ಇವೆಲ್ಲವೂ ವ್ಯಾಖ್ಯಾನಕಾರರಿಗೆ, ಮುಂದೆ ಹೇಳಬೇಕಾದ ಮಾತುಗಳನ್ನು ಸೂಚಿಸಿಬಿಡುತ್ತದೆ. 

ನಾನು ಅವರ ವಾಚನಕ್ಕೆ ವ್ಯಾಖ್ಯಾನ ನೀಡಿದ ಮತ್ತೊಂದು ಸಂದರ್ಭ ನನಗೆ ಯಾವಾಗಲೂ ಸ್ಮರಣೆಗೆ ಬರುತ್ತಿರುತ್ತದೆ.  ಅದು ನಡೆದದ್ದು ಬೆಂಗಳೂರು ಬಸವನಗುಡಿಯ ಮಾಡೆಲ್ ಹೌಸ್ ಕಾಲೋನಿಯ ರಾಮ ಮಂದಿರದ ವಿಶಾಲವಾದ ಸಭಾಭವನದಲ್ಲಿ.  3 ದಿನಗಳು ನಡೆದ ಈ ಕಾರ್ಯಕ್ರಮದಲ್ಲಿ, ನಾವು ಸಮಯಕ್ಕೆ ಸರಿಯಾಗಿ ವೇದಿಕೆಗೆ ಬಂದರೆ ಕಿಕ್ಕಿರಿದು ನೆರೆದಿರುತ್ತಿದ್ದ ಸಭಾಸದರುಗಳು ಎದ್ದು ನಿಂತು ಸುದೀರ್ಘ ಕರತಾಡನದೊಂದಿಗೆ ಸ್ವಾಗತ ನೀಡುತ್ತಿದ್ದರು.  ಇದು ಸಭಾಸದರು ಶ್ರೀ ಕೇಶವಮೂರ್ತಿಗಳಿಗೆ ತೋರಿಸುತ್ತಿದ್ದ ಆದರ, ಅಭಿಮಾನ, ಗೌರವ ! ಪ್ರಾರಂಭದಲ್ಲಿಯೇ ಅಂತಹ ಉತ್ಸಾಹೀ ಶ್ರೋತೃಗಳಿದ್ದಲ್ಲಿ ಕಾರ್ಯಕ್ರಮ ಬಹುಪಾಲು ಯಶಸ್ವಿಯಾದಂತೆಯೇ.  ಕೇಶವಮೂರ್ತಿಗಳ ಬಗ್ಗೆ ಯಾವುದೇ ಊರಿನ, ಯಾವುದೇ ವೇದಿಕೆಯ, ಯಾವುದೇ ಪ್ರೇಕ್ಷಕರಿಗಾದರೂ ಒಂದೇ ರೀತಿಯ ಗೌರವಪೂರ್ವಕವಾದ ಪೂಜ್ಯಭಾವ ಆವಿರ್ಭವಿಸಲು ಅನೇಕ ಕಾರಣಗಳುಂಟೆಂಬುದನ್ನು ಅವರೊಂದಿಗಿನ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಕಂಡುಕೊಂಡಿದ್ದೇನೆ. ಜನ ಅವರ ವಾಚನದಿಂದ ಹೇಗೆ ಆಕರ್ಷಿತರಾಗಿ ಮಂತ್ರಮುಗ್ಧರಾಗುತ್ತಾರೋ, ಹಾಗೆಯೇ ಅವರ ಚಂದ್ರಮುಖ, ಲಲಾಟಭಸ್ಮ, ಕುಂಕುಮ, ಶುದ್ಧವಾದ ಶ್ವೇತವಸ್ತ್ರಗಳು, ಮುಗ್ಧ ಸ್ನಿಗ್ಧ ಮಂದಹಾಸ, ಅವರ ಶ್ರೇಷ್ಠವಾದ ನಡತೆ ಯಾರೊಬ್ಬರನ್ನೂ ನೋಯಿಸದ ಹಿರಿದಾದ ಗುಣ, ಇವುಗಳೂ ಸಹ ಒಬ್ಬ ಪರಿಪೂರ್ಣ ‘ಗಮಕಿ’ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಹೆಚ್.ಆರ್.ಕೆ. ಅವರ ಶ್ರೇಷ್ಠ ಗುಣಗಳು ಮಹಾಕವಿಯ ಮಾತನ್ನೂ ಸುಳ್ಳು ಮಾಡುತ್ತವೆ. ರನ್ನ ಹೇಳುತ್ತಾನೆ :-

ಶ್ರೀಯುತನೊಳುದಾರತೆ ವಾಕ್

ಶ್ರೀಯುತನೊಳಮತ್ಸರಮಾಗದುದಾರಂ

ಶ್ರೀಯುತನಮತ್ಸರನ್ ವಾಕ್

ಶ್ರೀಯುತನಾದೊಡೆ ಕೃತಾರ್ಥರಾಗರೆ ಕವಿಗಳ್

ಇವರು ವಾಕ್ ಶ್ರೀಯುತರಾಗಿದ್ದೂ ಸಹ ಇತರ ಗಮಕಿಗಳ ಬಗ್ಗೆ ಮತ್ಸರಿಗಳಲ್ಲ.  ಹಿರಿಯರು – ಕಿರಿಯರೆನ್ನದೆ, ಎಲ್ಲರನ್ನೂ ಪ್ರೋತ್ಸಾಹಿಸಿದರು.  ನಿರ್ವಂಚನೆಯಿಂದ ಗಮಕ ಪಾಠವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು.  ಇಂದು ಅವರ ಶಿಷ್ಯರು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಗಮಕ ಪ್ರಸಾರ ಮಾಡುತ್ತಿದ್ದಾರೆ.

ಈಗ ಪುನ: ಬಸವನಗುಡಿ ಕಾರ್ಯಕ್ರಮಕ್ಕೆ ಹಿಂದಿರುಗುತ್ತೇನೆ.  ಅಂದು ಸರಣಿ ಕಾರ್ಯಕ್ರಮದ ಕಡೆಯ ದಿನ.  ಕುಮಾರವ್ಯಾಸಭಾರತದ ಕರ್ಣ ಮೋಕ್ಷದ ಪ್ರಸಂಗ.  ಪ್ರತಿ ಪದ್ಯಕ್ಕೂ ಕರತಾಡನಗಳ ವೈಭವ. ಅರ್ಜುನ, “ತೇರಿನಲಿ ಚಾಚಿದನು ಮೆಲ್ಲನೆ ಭಾರಿ ಧನುವನು, ಕೈಯ ಕಣೆಗಳನೋರೆಯಲಿ ಸೈತಿರಿಸಿ ಕಂಡನು ಮತ್ತೆ ಮುರವೈರಿ” ಎಂಬಲ್ಲಿಗೆ ಕಾರ್ಯಕ್ರಮಕ್ಕೆ ಮಧ್ಯಾಂತರ ಬಿಡುವು ನೀಡಲು ನಮಗೆ ಸೂಚಿಸಲಾಯಿತು.  ನಮಗೆ ಮೊದಲೇ ಹೇಳದೆ ಅದ್ಧೂರಿಯ ಸನ್ಮಾನ.  ಕೇಶವಮೂರ್ತಿಗಳಿಗೆ ಮೊದಲು ಮಲ್ಲಿಗೆ ಮೊಗ್ಗಿನ ಹಾರ, ಝಗಮಗಿಸುವ ಶಾಲು, ಅಂತಹುದೇ ಪೇಟ. ಅವರನ್ನು ಆ ರೂಪದಲಿ ನೋಡಿ ದಣಿಯವು ಕಣ್ಣುಗಳು ! ನನೆದವು ಕಣುಮನವೊಂದು ನಿಮಿಷದಲಿ ! ನಂತರ ನನ್ನ ಸರದಿ.  ಈ ಕಾರ್ಯಕ್ರಮದ ನಂತರ, ವಾಚನ ಪ್ರಾರಂಭವಾಗಬೇಕು.  ಅಷ್ಟರಲ್ಲಿ ಕೇಶವಮೂರ್ತಿಗಳು ಹಾರ-ಪೇಟಗಳನ್ನು ತೆಗೆಯಲು ಮುಂದಾದರು.  ಇದನ್ನು ಕಂಡ ಪ್ರಾಯೋಜಕರು ಮತ್ತು ಎಲ್ಲ ಶ್ರೋತೃಗಳೂ “ಕಾರ್ಯಕ್ರಮ ಮುಗಿಯುವವರೆಗೂ ಹಾರಗಳನ್ನು ತೆಗೆಯುವುದು ಬೇಡ” ಎಂದು ಒಕ್ಕೊರಲಿನಿಂದ ಒತ್ತಾಯ ಮಾಡಿದರು.  ಒಪ್ಪಿದ ನಾವು ಹಾಗೆಯೇ ಮುಂದುವರಿಸಿದೆವು.  ನಾನು ಮುಂದಿನ ಪದ್ಯಕ್ಕೆ ಪೂರ್ವಭಾವಿಯಾಗಿ ಎರಡು ಮಾತು ಹೇಳಿ, ಈಗ ಪೂಜ್ಯರು ಮುಂದಿನ ಪದ್ಯ ಹಾಡುತ್ತಾರೆ.  ಅದನ್ನು ಕೇಳಿ, ಹಾರದ ಬಗ್ಗೆ ನೀವೇ ತೀರ್ಮಾನಿಸಿ ಎಂದು ಹಾಸ್ಯವಾಗಿ ಹೇಳಿ “ಮೂರ್ತಿಯವರೇ ಹಾಡಿ ಹಾರವೇಕೈ..............” ಎಂದೆ.  ಅಡಕೆ ಚೂರು ಮಾಡಿ ಬಾಯಿಗೆ ಒಂದು ಚೂರನ್ನು ಹಾಕಿಕೊಳ್ಳುವ ತಯಾರಿಯಲ್ಲಿದ್ದವರಿಗೆ  ನಾನು ಹೇಳಿದ್ದು ಯಾವುದೂ ಗಮನಕ್ಕೆ ಬಂದಿರಲಿಲ್ಲ.  ನನ್ನ ಕಡೆ ನೋಡಿದರು.  ನಾನು “ಹಾರವೇಕೈ ..........” ಎಂದೆ.  ಎಂದಿನ ಉತ್ಸಾಹದಲ್ಲಿಯೇ ಅವರು ಹಾರವೇಕೈ ಎಂದು ಸುಶ್ರಾವ್ಯವಾಗಿ ಹಾಡಲು ಪ್ರಾರಂಭಿಸಿದರಷ್ಟೇ, ಶ್ರೋತೃಗಳು ಸಶಬ್ದವಾಗಿ ನಗಲು ಪ್ರಾರಂಭಿಸಿಬಿಟ್ಟರು.  ಆಗ ಅವರಿಗೆ ನಗುವಿನ ಮರ್ಮ ತಿಳಿದು ಅವರೂ ಸಹ ಗಟ್ಟಿಯಾಗಿ, ವಿಶಾಲವಾದ ಕೆಂಪು ನಗುವನ್ನು ಬೀರಿ, ಈಗಲಾದರೂ ಇದನ್ನು ತೆಗೆಯಲೇ ಎಂದರು.  ಯಾರೂ ಒಪ್ಪಲಿಲ್ಲ.  ನನ್ನ ವ್ಯಾಖ್ಯಾನದಲ್ಲಿ ಇದನ್ನು ವಿಸ್ತರಿಸಿ ಅನ್ವಯದ ತೊಡಕನ್ನು ವಿವರಿಸಿ, ಕಡೆಗೆ “ಪೂಜ್ಯ ಕೇಶವಮೂರ್ತಿಯವರು ವಿಶಾಲವಾಗಿ ನಗುವುದನ್ನು ನೀವು ತೋರಿಸಿಕೊಟ್ಟುದಕ್ಕೆ ತಮಗೆಲ್ಲರಗೂ ಧನ್ಯವಾದಗಳು ಎಂದೆ.  ಸಭೆ ಕರತಾಡನದಿಂದ ಸಂಭ್ರಮಿಸಿತು. 

ಹೀಗೆಯೇ ಪೂಜ್ಯರೊಂದಿಗೆ ಶಲ್ಯ ಸಾರಥ್ಯ, ವಿಶ್ವರೂಪ ದರ್ಶನ, ಅಕ್ಷಯ ಪಾತ್ರಾ ಪ್ರಸಂಗ ಇತ್ಯಾದಿ ಅನೇಕ ಪ್ರಸಂಗಗಳು, ರನ್ನನ ‘ಗದಾಯುದ್ಧಂ’ ಕಾವ್ಯದ ದುರ್ಯೋಧನ ವಿಲಾಪಂ’ ಎಂಬ ಭಾಗ ಮುಂತಾದ ವಾಚನಗಳಿಗೆ ವ್ಯಾಖ್ಯಾನ ಮಾಡಿದ ಧನ್ಯತೆ ನನ್ನಲ್ಲಿ ಚಿರಸ್ಥಾಯಿಯಾಗಿರುತ್ತದೆ.  ಹೀಗೆಯೇ ಪೂಜ್ಯರ ನಿವಾಸದಲ್ಲಿ ಅವರ ಪಕ್ಕದಲ್ಲೇ ಕುಳಿತು, ಅವರ ಗಮಕವಾಚನದ ಬಗ್ಗೆ ಮಾತನಾಡುವ ಸದವಕಾಶವೂ ನನಗೆ ದೊರಕಿದೆ. 

ಗದುಗಿನಲ್ಲಿ ಕುಮಾರವ್ಯಾಸನ ವಿಗ್ರಹವನ್ನು ಸ್ಥಾಪಿಸುವ ಕಾರ್ಯಕ್ರಮದಲ್ಲಿ ಕವಿಯ ನಾಂದೀ ಪದ್ಯಗಳನ್ನು ಅವರೇ ಹಾಡಬೇಕೆಂಬುದು ನಮ್ಮಗಳ ಆಶಯ.  ಸ್ವಲ್ಪ ತೊಂದರೆಯಿದ್ದರೂ ಲೆಕ್ಕಿಸದೇ, ಗದುಗಿಗೆ ಬಂದು ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

2009ರಲ್ಲಿ ಕರ್ನಾಟಕ ಸರಕಾರವು ಸ್ಥಾಪಿಸಿದ ಕುಮಾರವ್ಯಾಸ ಪ್ರಶಸ್ತಿಯು ಮೊದಲ ವರ್ಷವೇ ಹೆಚ್.ಆರ್.ಕೆ. ಅವರಿಗೆ ಬಂದುದು, ಪ್ರತಿ ಗಮಕಿಗೂ ತಮಗೇ ಬಂದಷ್ಟು ಸಂತೋಷವನ್ನುಂಟು ಮಾಡಿತು.  ಆ ಪ್ರಶಸ್ತಿ ಸಾರ್ಥಕವಾಯಿತು.  ಹಾಗೆಯೇ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ  ‘ಪದ್ಮಶ್ರೀ’ ಪ್ರಶಸ್ತಿಯು ಅವರಿಗೆ ಬಂದಾಗ ನಾಡಿಗೆ ನಾಡೇ ಸಂಭ್ರಮಿಸಿದೆ.  

ಪೂಜ್ಯ ಕೇಶವಮೂರ್ತಿಯವರೊಂದಿಗೆ ನಾನು ವ್ಯಾಖ್ಯಾನ ಮಾಡಲು ಅನೇಕರು ಕಾರಣರಾಗಿದ್ದಾರೆ.  ಕನಕಗಿರಿ ಕಲಾ ಸಂಘದ ಶ್ರೀಮತಿ ಮಾಲತಿ ಮಾಧವಾಚಾರ್, ಗಮಕ ಸಂಪದದ ರಾಜಾರಾಮಮೂರ್ತಿ, ಹೊಸಹಳ್ಳಿ ಗೋಪಾಲ್, ಹೊಸಹಳ್ಳಿ ಜಯರಾಂ ಮತ್ತು ಮನೆಯವರು, ಬಸವನಗುಡಿ ರಾಮಮಂದಿರದ ಜಗನ್ನಾಥ್ ಇವರುಗಳಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. 

ಗಮಕಸಂಪದ ಪತ್ರಿಕೆಯು 10 ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿದ ಸಂದರ್ಭದಲ್ಲಿ ಹೊಸಹಳ್ಳಿಯ ಗಮಕ ಕಲಾ ಪರಿಷತ್ತು 2015ರ ಫೆಬ್ರವರಿ ತಿಂಗಳಿನ 6 – 7 – 8 ಈ ಮೂರೂ ದಿನಗಳ ಕಾಲ ವಿಜೃಂಭಣೆಯಿಂದ ನಡೆಸಿದ ರಾಜ್ಯ ಮಟ್ಟದ “ಗಮಕ ಸಮ್ಮೇಳನ”ಕ್ಕೆ ನನ್ನನ್ನು ಮತ್ತು ನನ್ನ ಪತ್ನಿ ಶ್ರೀಮತಿ ನಿರ್ಮಲಾ ಪ್ರಸನ್ನಳನ್ನು ಆಯ್ಕೆ ಮಾಡಿದ ಸಮಿತಿಯ ಗೌರವಾಧ್ಯಕ್ಷ ಸ್ಥಾನದಲ್ಲಿ ಶ್ರೀ ಹೊಸಹಳ್ಳಿ ಕೇಶವಮೂರ್ತಿಗಳು ವಿಜಾಜಮಾನರಾಗಿದ್ದುದು ನಮ್ಮ ಸೌಭಾಗ್ಯ.  ಇದಕ್ಕಿಂತ ಹೆಚ್ಚಿನ ಸನ್ಮಾನ - ಬಿರುದುಬಾವಲಿಗಳು ಬೇಕೇ ?!  ಇದು ನಮ್ಮಿಬ್ಬರ ಗಮಕಯಾನದಲ್ಲಿ ಸ್ಮರಣೀಯ ದಿನ !  ಕಾರಣರಾದವರಿಗೆಲ್ಲರಿಗೂ ಕೃತಜ್ಞತೆಗಳು. 

ಕೇಶವಮೂರ್ತಿಯವರೊಂದಿಗಿನ ನನ್ನ ಸ್ಮರಣೀಯ ಸಂದರ್ಭಗಳನ್ನು ಬರೆಯುವುದು ಉದ್ದೇಶವಾದ್ದರಿಂದ, ಕೆಲವು ಕಡೆಗಳಲ್ಲಿ ‘ನಾನು’ ‘ನನ್ನ’ ‘ನಮ್ಮ’ ಮುಂತಾದ ‘ನಾನತ್ವ’ ಅನಿವಾರ್ಯವಾಗಿ ಬಂದಿದೆ.  ಮನ್ನಿಸಲು ಪ್ರಾರ್ಥನೆ. 

- ಡಾ|| ಎ.ವಿ. ಪ್ರಸನ್ನ

Sunday, 22 January 2023

ನಮ್ಮ ಸಮಾಜ- ಒಂದು ನೋಟ


ಇಲ್ಲಿ ನೋಡಿ- ನಮ್ಮದು ಅಂತಲ್ಲ, ತಮ್ಮದೂ ಸೇರಿದಂತೆ ಪ್ರಪಂಚದ ಎಲ್ಲ ಸಮಾಜವನ್ನೂ ಒಡೆದು ವರ್ಗೀಕರಿಸಿ ನೋಡಿದವರು ಯೂರೋಪಿಯನ್ನರು. ಒಂದು ಸಮಾಜದಲ್ಲಿ ಮೂರು ವರ್ಗಗಳಿರುತ್ತವೆ, ಅದೇ ಆದಿವಾಸಿ, ಗ್ರಾಮೀಣ ಮತ್ತು ನಾಗರಿಕ. ಇದನ್ನು ಹೇಳಿದವರು ನಾಗರಿಕ ಅಂದುಕೊಂಡ ಸಮಾಜದವರು. ಮನುಷ್ಯ ಮೊದಲು ಕಾಡಲ್ಲಿರುತ್ತಾನೆ ಅದು ಆದಿವಾಸಿ ಅಥವಾ ಸಾವೆಗರಿ ಅಲ್ಲಿ ಯಾವುದೇ ಸವಲತ್ತು ಇರುವುದಿಲ್ಲ, ಅದು ಸ್ಡಲ್ಪ ಬೆಳೆವಣಿಗೆ ಕಂಡು ಅಲ್ಪ ಸ್ಡಲ್ಪ ಬೆಳೆಯುತ್ತದೆ ಅದು ಗ್ರಾಮೀಣ ಅಥವಾ ಬಾರ್ಬರಿಕ್, ಅನಂತರ ಸಂಪೂರ್ಣ ಸೌಲಭ್ಯವುಳ್ಳ ನಾಗರಿಕ ಅಥವಾ ಸಿವಿಲ್ ಸೊಸೈಟಿ ರೂಪುಗೊಳ್ಳುತ್ತದೆ. ಆದಿವಾಸಿ ಸಮಾಜ ನಾಗರಿಕವಾಗುವುದೇ ಸಮಾಜದ ಅಂತಿಮ ಹಂತ ಎಂದು ಯೂರೋಪಿನ ಮಾನವಶಾಸ್ತ್ರಜ್ಞರು ಹೇಳುತ್ತಾರೆ. ಈಗ ಮಾದೇಶ್ವರ ಬೆಟ್ಟದ ಸೋಲಿಗರು ಸ್ಯಾವೆಗರಿಗೆ ಸೇರಿದ್ದಾರೆ, ಯಳಂದೂರು ಪರಿಸರ ಬಾರ್ಬರಿಕ್ ಮೈಸೂರು ಸಿವಿಲ್ ಎಂದು ಸ್ಥೂಲವಾಗಿ ಚಿತ್ರಿಸಿಕೊಳ್ಳಬಹುದು. ಇಂದಿಗೂ ನಮ್ಮ ಸಮಾಜವನ್ನು ಇದೇ ರೀತಿ ನೋಡಿ ವಿಶ್ಲೇಷಣೆ ಮಾಡಲಾಗುತ್ತದೆ. ಹತ್ತಾರು ವರ್ಷಗಳ ಕೆಳಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಮೇಲುಕೋಟೆಗೆ ಕ್ಷೇತ್ರಕಾರ್ಯಕ್ಕೆ ಹೋಗಿದ್ದೆ. ಎಲ್ಲ್ಲಿ ನೋಡಿದರೂ ಬರೀ ವೃದ್ಧರು ಮಾತ್ರ. ಮಕ್ಕಳು ಮರಿಗಳು, ಯುವಜನತೆಯ ಸುಳಿವೇ ಕಾಣಲಿಲ್ಲ. ಕಂಡರೂ ಅವರೆಲ್ಲ ಪ್ರವಾಸಿಗರು, ಊರವರಲ್ಲ. ಕುತೂಹಲದಿಂದ ಒಬ್ಬರನ್ನು ವಿಚಾರಿಸಿದಾಗ ಯುವಕರೆಲ್ಲ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದಾರೆ ಯಾವಾಗಲೋ ಬಂದುಹೋಗ್ತಾರೆ ಅಷ್ಟೇ ಅಂದ್ರು, ಹೌದು, ನಮ್ಮ ಊರು ಕೂಡ ಇಷ್ಟೇ. ಎಲ್ಲ ಊರುಗಳು ನಗರದತ್ತ ಮುಖ ಮಾಡಿವೆ,ವ್ಯವಸಾಯ ಯಾರಿಗೂ ಬೇಕಿಲ್ಲ, ಅದಕ್ಕೆ ನಾವು ಕೊಡುವ ಪ್ರಾಶಸ್ತö್ಯವೂ ಅಷ್ಟೇ ಅನ್ನಿ.ವಿಷಯಕ್ಕೆ ಬರೋಣ.ನಮ್ಮ ಪರಿಚಿತರೊಬ್ಬರ ಕುಟುಂದ ಎಲ್ಲರೂ ನೌಕರಿಯಲ್ಲಿದ್ದರು.

ಒಬ್ಬ ಮಗ ಕಾರಣಾಂತರದಿಂದ ಲೋಕ ತ್ಯಜಿಸಿದ. ಮತ್ತೊಬ್ಬ ವಿದೇಶಕ್ಕೆ ಹೋದ. ಗಂಡ ಸಹಜವಾಗಿ ನಿಧನರಾದರು. ಉಳಿದುಕೊಂಡ ಮಹಿಳೆ ಅಲ್ಲಿ ಇಲ್ಲಿ ನೆಂಟರ ಮನೆಯಲ್ಲಿ ದಿನದೂಡುತ್ತಾರೆ, ಗತಿ ಇಲ್ಲ ಅಂತಲ್ಲ. ಒಬ್ಬರೇ ತಮ್ಮ ಮನೆಯಲ್ಲಿ ಒಂಟಿಯಾಗಿ ಇದ್ದು ಬೇಸರವಾಗಿ ಸಂನ್ಯಾಸಿನಿಯಂತಾಗಿದ್ದಾರೆ. ಒಟ್ಟಿನಲ್ಲಿ ಕಾಡಿನಲ್ಲಿದ್ದವರು ಹಳ್ಳಿಗೂ ಹಳ್ಳಿಯವರು ಪಟ್ಟಣಕ್ಕೂ ಪಟ್ಟಣದವರು ನಗರಕ್ಕೂ ನಗರದವರು ಮಹಾನಗರಕ್ಕೂ ಅವರು ವಿದೇಶಕ್ಕೂ ವಲಸೆ ಹೋಗುವುದೇ ಮನುಷ್ಯ ಜೀವನದ ಪರಮೋದ್ದೇಶವೆಂದು ಬಗೆದು ಎಲ್ಲರೂ ಹಾಗೆಯೇ ಮಾಡುತ್ತಿದ್ದಾರೆ. ಇದರ ಪರಿಣಾಮ ನಮ್ಮ ಸಮಾಜದ ಮೇಲೆ ನೇರವಾಗಿ ಆಗುತ್ತಿದೆ. ಐದಾರು ದಶಕಗಳ ಹಿಂದೆ ಒಂದು ಕುಟುಂವೆಂದರೆ ಅಜ್ಜ ಅಜ್ಜಿಯರಿಂದ ಹಿಡಿದು ಚಿಕ್ಕಪ್ಪ ಚಿಕ್ಕಮ್ಮ, ನಾದಿನಿ ಅತ್ತಿಗೆ ಸೋದರ ಸಂಬಂಧಿಗಳು, ಮಕ್ಕಳು, ಮೊಮ್ಮಕ್ಕಳು ಮರಿಮಕ್ಕಳು ಹೀಗೆ ಎಲ್ಲರೂ  ಇರುತ್ತಿದ್ದರು ಬರುಬರುತ್ತ ಅಪ್ಪ ಅಮ್ಮ ಮತ್ತು ಅವರ ಮಗನ ಸಂಸಾರಕ್ಕೆ ಇಳಿಯಿತು, ನಿಧಾನವಾಗಿ ಗಂಡ- ಹೆಂಡತಿ ಮತ್ತವರ ಮಕ್ಕಳ ಮಟ್ಟಕ್ಕೆ ಇಳಿಯಿತು. ಆಮೇಲೆ ಗಂಡ- ಹೆಂಡತಿ ಮಟ್ಟಕ್ಕೆಕುಟುಂಬ ಬಂತು.  ಈಗಂತೂ ಗಂಡ ಈ ದೇಶ, ಹೆಂಡತಿ ವಿದೇಶ ಅಥವಾ ಉಲ್ಟಾ ಆಗಿದೆ. ಆನ್ಲೆöÊನ್ ಸಂಸಾರವಾಗಿದೆ. ಕುಟುಂಬದ ಕತೆ ಹೀಗಾದ್ರೆ ಸಮಾಜ ಏನಾಗುತ್ತದೆ ಊಹಿಸಿ, ಊಹಿಸಬೇಕು ಏಕೆ? ನಿಮ್ಮ ಸುತ್ತಲಿನ ಪರಿಸರ ಗಮನಿಸಿ ಸಮಾಜದಕತೆ ನೋಡಿ- ಅತ್ಯಾಚಾರ, ಕೊಲೆ ಸುಲಿಗೆ ಕಳ್ಳತನ ಇತ್ಯಾದಿ ಹೆಚ್ಚುತ್ತಿವೆ. ಇದರಲ್ಲಿ ಯುವಕರೇ ಹೆಚ್ಚಿದ್ದಾರೆ, ಕುಟುಂಬ ವ್ಯವಸ್ಥೆ ಛಿದ್ರವಾಗಿದ್ದೇ ಇದಕ್ಕೆ ಕಾರಣ ಎಂಬುದು ಸಮಾಜಶಾಸ್ತ್ರಜ್ಞರ ಅಭಿಪ್ರಾಯ. ಯಾರನ್ನೇ ಕೇಳಿ- ಹಿಂದಿನ ಕಾಲವೇ ಚೆನ್ನಾಗಿತ್ತು ಅಂತಾರೆ, ನಮ್ಮ ಅಜ್ಜ,ಅಪ್ಪ ಅಣ್ಣ ಎಲ್ಲರೂ ತಮ್ಮ ತಮ್ಮ ಕಾಲದ ಚೆಂದದ ಬಗ್ಗೆ ಹೇಳುತ್ತಾರೆ. ಅಂದರೆ ಇವರೆಲ್ಲರ ಕಾಲಕ್ಕೆ ತಲಾ ಇಪ್ಪತ್ತು ಮೂವತ್ತು ವರ್ಷವಾದರೂ ಕನಿಷ್ಠ ಅಂತರವಿದೆ. ರಾಮಾಯಣ ಮಹಾಭಾರತ ಕಾಲದಲ್ಲೂಕೀಚಕರಂಥ ಜನರಿದ್ದರು. ಅಂದರೆ ಇದು ಕಾಲದ ಸಮಸ್ಯೆ ಅಲ್ಲ, ಮತ್ತೇನು?ನಮ್ಮ ಸಂಪ್ರದಾಯವನ್ನು ನಾವು ಅಲಕ್ಷಿಸಿದ್ದು ಅನಿಸುತ್ತದೆ. ಒಟ್ಟು ಕುಟುಂಬದಲ್ಲಿ ಒಬ್ಬರನ್ನು ಮತ್ತೊಬ್ಬರು ಗಮನಿಸಿ ತಿದ್ದುತ್ತಿದ್ದರು, ಸಹೋದರ ಸಹೋದರಿಯರ ಬಗ್ಗೆ ಗೌರವ ಕೊಡಲಾಗುತ್ತಿತ್ತು. ಒಟ್ಟು ಸಮಾಜದ ಬಗ್ಗೆ ಅರಿವು ಉಂಟಾಗುತ್ತಿತ್ತು. ಈಗ ಯಾರನ್ನು ಯಾರೂ ಕೇಳುವ ಸ್ಥಿತಿಯಲ್ಲಿಲ್ಲ.  ನಿಮಗೇನು ಗೊತ್ತು ಎಂಬ ದಾಟಿಯಲ್ಲೇ ಎಲ್ಲರೂ ಮಾತಾಡುತ್ತೇವೆ. ಸಂಪ್ರದಾಯ ಗೌರವಿಸಿ ಅನುಸರಿಸಿದರೆ ಸಮಾಜ ಸುಂದರವಾಗಿಬಿಡುತ್ತದೆ ಎಂತಲ್ಲ. ಕನಿಷ್ಠಪಕ್ಷ ಅಪರಾಧಗಳು ಇಳಿಯುತ್ತವೆ, ಸ್ಡಲ್ಪ ಸಮಾಧಾನ ನಮಗೆಲ್ಲ ದೊರೆಯುತ್ತದೆ ಎಂಬ ಆಶಯ. ಕನಿಷ್ಠಪಕ್ಷ ಗ್ರಾಮ, ಊರುಗಳು ನೆಮ್ಮದಿ ಕಂಡು ಕುಟುಂಬದ ಹಿರಿಯರು ಸುಖವಾಗಿ ತಮ್ಮ ಕೊನೆಗಾಲ ಕಾಣಬಲ್ಲರು ಮಕ್ಕಳು ಮರಿ ಒಂದಿಷ್ಟು ಕಲಿಯಬಲ್ಲರು ಅನಿಸುತ್ತದೆ. ಎಲ್ಲೇ ನೋಡಿ ಇಂದು ಹೊಸ ಬಡಾವಣೆ ಸಿದ್ಧವಾಗುವುದಕ್ಕೂ ಮುಂಚೆ ಅಲ್ಲೊಂದು ಆಸ್ಪತ್ರ, ಹೆಂಡದಂಗಡಿ, ಪೊಲೀಸು ಠಾಣೆ ತಲೆ ಎತ್ತುತ್ತದೆ, ಜಾಗವಿದ್ದರೆ ಉದ್ಯಾನ ದೇವಾಲಯ ಇತ್ಯಾದಿ ಏಳುತ್ತವೆ, ಇಲ್ಲದಿದ್ದರೆ ಇಲ್ಲ. ಹೀಗಾದರೆ ಯಾವ ಸಮಾಜಕ್ಕೆ ಏನು ಭವಿಷ್ಯ ಹೇಳಿ.ಬೆಕ್ಕಿಗೆ ಗಂಟೆ ಕಟ್ಟುದು ಯಾರು?

  


Sunday, 15 January 2023

ಬಡವರಿರಬೇಕು, ಮಾತ್ರವಲ್ಲ, ಅವರು ಹೆಚ್ಚಬೇಕು!

ಮೊದಲು ಒಂದು ಸಂಗತಿಯನ್ನು ಸ್ಪಷ್ಟಮಾಡಿಕೊಳ್ಳಬೇಕು: ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರಗಳು ಜನರ ಕಲ್ಯಾಣಕ್ಕಾಗಿವೆಯೇ ವಿನಾ ಲಾಭ ಮಾಡುವುದಕ್ಕಲ್ಲ. ಆದರೆ ಸಮಾಜಕ್ಕೆ ಲಾಭವಾಗುವಂತೆ ಮಾಡುವುದು ಅವುಗಳ ಕರ್ತವ್ಯ. ಅಂಥ ಲಾಭ ದೀರ್ಘಕಾಲಿಕವಾಗುವಂತೆ ಅದು ನೋಡಿಕೊಳ್ಳಬೇಕಾಗುತ್ತದೆ. ಸಾಧ್ಯವಾದಷ್ಟು ವರ್ಷ ಅಧಿಕಾರದಲ್ಲಿ ಇರುವ ಆಸೆಯಿಂದ ಚುನಾಯಿತ ಸರ್ಕಾರಗಳು ಜನರನ್ನು ಓಲೈಸುವ ಅಗ್ಗದ ಜನಪ್ರಿಯ ಯೋಜನೆಗಳನ್ನು ಕೈಗೊಳ್ಳುವುದರಲ್ಲೇ ಆಸಕ್ತಿ ತೋರಿಸುತ್ತವೆ. ಇಂಥ ಯೋಜನೆಗಳ ಉದ್ದೇಶವನ್ನು ಯಾರೂ ಪ್ರಶ್ನಿಸುವಂತಿರುವುದಿಲ್ಲ, ಆದರೆ ಅವುಗಳ ಜಾರಿ, ಅವು ಉಂಟುಮಾಡುವ ದೀರ್ಘಕಾಲಿಕ ಪರಿಣಾಮ ಮೊದಲಾದ ಸಂಗತಿಗಳು ಚಿಂತನಾರ್ಹ.

ಹಿಂದೆ ವಯಸ್ಕ ಶಿಕ್ಷಣ ಎಂಬ ಸಾಕ್ಷರ ಯೋಜನೆಯೊಂದಿತ್ತು. ಎಲ್ಲರನ್ನೂ ಸಾಕ್ಷರರನ್ನಾಗಿಸಲು ಸಾವಿರಾರು ಕೋಟಿ ರೂ.ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುರಿದವು. 10ನೇ ಯೋಜನೆ ಮುಕ್ತಾಯದ ವೇಳೆಗೆ ನಿಗದಿತ ಗುರಿ ತಲಪುವಂತೆ ಕಾಲಮಿತಿ ಹಾಕಿಕೊಂಡ ಈ ಯೋಜನೆ ಈಗ ತನ್ನ ಸ್ವರೂಪ ಬದಲಿಸಿಕೊಂಡು ಔಪಚಾರಿಕ ಶಿಕ್ಷಣ ದೊರಕದವರಿಗೆ ಕೌಶಲ್ಯ ಕಲಿಸತೊಡಗಿ, ಸಾಕ್ಷರರಿಗೆ ಸ್ವಾವಲಂಬನೆ ಮಾರ್ಗ ತೋರಿಸುತ್ತಿದೆ. ಇದು ನಿಜಕ್ಕೂ ಸ್ತುತ್ಯರ್ಹವಾದುದು. ಹೀಗೆ ಸದುದ್ದೇಶದ ಯೋಜನೆಯೊಂದು ಬೆಳವಣಿಗೆ ಕಾಣಬೇಕು; ಸಮಾಜವನ್ನು ಸ್ವಾಸ್ಥ್ಯದತ್ತ ಕೊಂಡೊಯ್ಯಬೇಕು. ಸರ್ಕಾರಗಳ ಬಹಳಷ್ಟು ಯೋಜನೆಗಳಲ್ಲಿ ಇಂಥ ಬೆಳವಣಿಗೆಯೇ ಇರುವುದಿಲ್ಲ.

ಎಲ್ಲರಿಗೂ ಪುಷ್ಟಿಕರ ಆಹಾರ ದೊರಕುವಂತೆ ಮಾಡುವುದು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಇರುವಂತೆ ಮಾಡುವುದು ದೇಶದ ಬಹುದೊಡ್ಡ ಸಮಸ್ಯೆಗಳಲ್ಲೊಂದು. ಆಹಾರ ಮತ್ತು ಆರೋಗ್ಯ ನೀಡುವುದು 1960ರ ದಶಕದ ವೇಳೆಗೆ ದೇಶಾದ್ಯಂತ ಜಾರಿಗೆ ಬಂದ ಪಡಿತರ ವ್ಯವಸ್ಥೆಯ ನಿಜವಾದ ಉದ್ದೇಶವಾಗಿತ್ತು. ಅಂದಿನಿಂದ ಇಂದಿನವರೆಗೆ ಈ ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಸರ್ಕಾರಗಳು ಬೇಕಾಬಿಟ್ಟಿ ಬಳಸುತ್ತ, ಬದಲಿಸುತ್ತ ಬಂದಿವೆಯೇ ವಿನಾ ನಿಜವಾದ ಲಾಭ ಏನಾಗಿದೆ ಎಂದು ಅರಿಯುವ ಗೋಜಿಗೇ ಹೋಗಿಲ್ಲ.

ಕರ್ನಾಟಕದಲ್ಲೇ ಪರಿಸ್ಥಿತಿಯನ್ನು ಗಮನಿಸಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ. ಹಿಂದಿನ ಸರ್ಕಾರ ಅಂತ್ಯೋದಯ ಯೋಜನೆಯಡಿ 3 ರೂ.ಗಳಿಗೆ ಒಂದು ಕೆಜಿ ಅಕ್ಕಿ ನೀಡುತ್ತಿದ್ದುದನ್ನು ಈ ಸರ್ಕಾರ 1.ರೂಗೆ ಒಂದು ಕೆಜಿ ಅಕ್ಕಿ ಎಂದು ಭಾಗ್ಯದ ಯೋಜನೆಯಾಗಿ ಬದಲಿಸಿಕೊಂಡಿದೆ. ಸಂಪೂರ್ಣ ಉಚಿತವಾಗಿ ಏನನ್ನೂ ನೀಡಲಾಗದ ತಾಂತ್ರಿಕ ಕಾರಣಕ್ಕೆ ಒಂದು ರೂ. ನಿಗದಿ ಮಾಡಲಾಗಿದೆ. ಬಡತನ ರೇಖೆಗಿಂತ ಕೆಳಗೆ (ಬಿಪಿಎಲ್) ಇರುವವರಿಗೆ ಆಹಾರ ನೀಡುವುದು ಈ ಯೋಜನೆಯ ಉದ್ದೇಶ. ಹೀಗೆ ಬಡತನ ರೇಖೆ ಕೆಳಗೆ ಎಷ್ಟು ಜನರಿದ್ದಾರೆ, ಈ ಸಂಖ್ಯೆ ಎಷ್ಟು ಕಾಲ ಹೀಗೆಯೇ ಇರುತ್ತದೆ, ಅಥವಾ ಇವರ ಸಂಖ್ಯೆ ಯೋಜನೆಗಳಿಂದ ಇಳಿಯುತ್ತಿದೆಯೇ, ಇವರ ಸಂಖ್ಯೆ ಇಲ್ಲವಾಗುವುದು ಯಾವಾಗ ಎಂಬ ಯಾವುದೇ ನಕಾಶೆ ಸರ್ಕಾರದ ಬಳಿ ಇಲ್ಲ!

ಪಡಿತರ ಅವ್ಯವಸ್ಥೆ ಕುರಿತು 2001ರಲ್ಲಿ ದೆಹಲಿ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಯಿತು. ಈ ಸಂಬಂಧ 2006ರಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ವಾಧ್ವಾ ಸಮಿತಿ ರಚನೆಯಾಗಿ ಅದು ಲೋಪದೋಷ ಸರಿಪಡಿಸುವ ಕೂಲಂಕಷ ವರದಿ ನೀಡಿತು. 2008ರಲ್ಲಿ ಪ್ರಕರಣ ಇತ್ಯರ್ಥಪಡಿಸುವಾಗ ಈ ವರದಿಯನ್ನು ದೇಶಾದ್ಯಂತ ಅನುಸರಿಸಲು ಕ್ರಮಕೈಗೊಳ್ಳುವಂತೆ ಘನ ನ್ಯಾಯಾಲಯ ಆದೇಶ ನೀಡಿತು. ವರದಿಯಲ್ಲಿ ಬಿಪಿಎಲ್ ಕಾರ್ಡುದಾರರನ್ನು ಸರಿಯಾಗಿ ಗುರುತಿಸುವ ಕೆಲಸ ಎಲ್ಲೂ ಆಗಿಲ್ಲ, ರಾಜಕೀಯ ಪ್ರೇರಿತ ಇಂಥ ಯೋಜನೆಯಿಂದ ಸಮಾಜದಲ್ಲಿ ಶ್ರಮ ಸಂಸ್ಕøತಿಗೆ ಉತ್ತೇಜನ ದೊರಕುವುದಿಲ್ಲ ಎಂದು ವಾಧ್ವಾ ಸಮಿತಿ ಸ್ಪಷ್ಟವಾಗಿ ಹೇಳಿದೆ. ಏನು ಮಾಡಬೇಕು ಎಂದೂ ಹೇಳಿದೆ.  

ವಾಧ್ವಾ ಸಮಿತಿ ಗುರುತಿಸಿದಂತೆ ಕರ್ನಾಟಕದಲ್ಲಿ ನ್ಯಾಯವಾಗಿ 31.29 ಲಕ್ಷ ಕಾರ್ಡುದಾರರಿರಬೇಕು. ಆದರೆ ಈ ಸಮಿತಿಗೆ ಸಿಕ್ಕ ಲೆಕ್ಕದಂತೆ 47.08 ಲಕ್ಷ ಹೆಚ್ಚುವರಿ ಕಾರ್ಡುದಾರರಿದ್ದಾರೆ. ಈ ಸಮಿತಿ ಹೇಳುವಂತೆ ಕರ್ನಾಟಕದಲ್ಲಿ ಇರುವ ಬಿಪಿಎಲ್ ಕಾರ್ಡುದಾರರ ಸಂಖ್ಯೆ 78.37 ಲಕ್ಷ. ಇದು 2006-07ರ ಲೆಕ್ಕ. 2013 ಜುಲೈ ವೇಳೆಗೆ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡುವಾಗ 87 ಲಕ್ಷ ಬಿಪಿಎಲ್ ಕಾರ್ಡುದಾರರೂ 11 ಲಕ್ಷ ಅಂತ್ಯೋದಯ ಜನರಿಗೂ ಇದರ ಉಪಯೋಗವಾಗುತ್ತದೆ ಎಂದು ಲೆಕ್ಕ ಕೊಟ್ಟಿದೆ. ಅಂದರೆ ಪ್ರತಿ ವರ್ಷ ಬಡವರ ಸಂಖ್ಯೆ ಲಕ್ಷ ಲಕ್ಷದಷ್ಟು ಹೆಚ್ಚುತ್ತಿದೆ ಎಂದರ್ಥ. ಹಾಗಾದರೆ ಬಡತನ ನಿರ್ಮೂಲನೆಗೆ ಸರ್ಕಾರಗಳು ಮಾಡುತ್ತಿರುವುದೇನು? ಯೋಜನೆಗಳಿವೆ, ಪರಿಣಾಮ ಮಾತ್ರ ಏನೂ ಇಲ್ಲ! ಯಾಕೆಂದರೆ ರಾಜಕೀಯ ಪಕ್ಷಗಳಿಗೆ ಬಡವರಿರಬೇಕು!

ನಗರ ಪ್ರದೇಶದಲ್ಲಿ ವಾರ್ಷಿಕ 17,000 ರೂ ಹಾಗೂ ಗ್ರಾಮೀಣ ಭಾಗದಲ್ಲಿ ವಾರ್ಷಿಕ 12,000 ರೂ.ಗಿಂತ ಕಡಿಮೆ ಆದಾಯ ಇರುವವರನ್ನು ಬಿಪಿಎಲ್ ಕಾರ್ಡುಪಡೆಯಲು ಅರ್ಹರೆಂದು ಗುರುತಿಸಲಾಗಿದೆ. ತಿಂಗಳಿಗೆ ಒಂದು ಅಥವಾ ಒಂದೂವರೆ ಸಾವಿರ ರೂ.ಗಳಲ್ಲಿ ಜೀವನ ಸಾಗಿಸುವ ಜನ ನಿಜಕ್ಕೂ ಎಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಲೆಕ್ಕ ಎಲ್ಲೂ ಸರಿಯಾಗಿಲ್ಲ. ಕೃಷಿ ಕೂಲಿಗಳು, ಅಸಂಘಟಿತ ವಲಯದ ಕಾರ್ಮಿಕರು, ಮೊದಲಾದವರಿಗೆ ಕನಿಷ್ಠ ನಿತ್ಯ 100 ರೂ. ಆದಾಯವನ್ನು ರಾಷ್ಟ್ರೀಯ ಸಮೀಕ್ಷಾ ಸಂಘಟನೆ (ಎನ್‍ಎಸ್‍ಎಸ್‍ಒ) ನಿಗದಿ ಮಾಡಿದೆ. ತಿಂಗಳು ಪೂರ್ತಿ, ವರ್ಷಪೂರ್ತಿ ಇವರಿಗೆ ಕೆಲಸವಿರುವುದಿಲ್ಲ ಎಂಬ ದೃಷ್ಟಿಯಿಂದ ಇವರ ಆದಾಯ ಮೇಲ್ಕಂಡ ಮಿತಿಯಲ್ಲೇ ಬರುತ್ತದೆ. ಈ ದೃಷ್ಟಿಯಿಂದ ಇವರೆಲ್ಲ ಬಿಪಿಎಲ್ ಕಾರ್ಡು ಹೊಂದಲು ಅರ್ಹರಾಗುತ್ತಾರೆ. ಇದೇನೋ ಸರಿ. ಆದರೆ ಈ ಪಟ್ಟಿಯಲ್ಲಿ ಇನ್ನು ಯಾರೆಲ್ಲ ಸೇರಿದ್ದಾರೆ, ಸೇರುತ್ತಿದ್ದಾರೆ ಎಂಬುದನ್ನೇ ಸರ್ಕಾರಗಳು ಗಮನಿಸುತ್ತಿಲ್ಲ. ಇಂಥವರ ಸಂಖ್ಯೆ ಇಷ್ಟೇ ಎಂದು ಖಚಿತವಾಗಿಬಿಟ್ಟರೆ, ಬಡತನದ ಮೂಲ ಸಮಸ್ಯೆ ನಿವಾರಣೆ ಅನಿವಾರ್ಯವಾಗುತ್ತದೆ, ಅದಕ್ಕೊಂದು ಕಾಲಮಿತಿ ಹಾಕಿಕೊಳ್ಳಬೇಕಾಗುತ್ತದೆ! ಹಾಗಾದಾಗ ಚುನಾವಣಾ ಪ್ರಣಾಳಿಕೆಯಲ್ಲಿ ಅಗ್ಗದ ಆಶ್ವಾಸನೆ ಕೊಡುವ ಅವಕಾಶಗಳು ಇಲ್ಲವಾಗುತ್ತವೆ!

ನಮ್ಮ ಅನ್ನಭಾಗ್ಯ ಯೋಜನೆಯನ್ನೇ ನೋಡಿ. ಚೆನ್ನಾಗಿದೆ. ಒಂದು ಕೆಜಿ ಅಕ್ಕಿ ಸಿದ್ಧವಾಗಲು (ಬಿತ್ತನೆಯಿಂದ-ಮಿಲ್‍ನಿಂದ ಹೊರಬರುವತನಕ) ಒಂದು ಅಂದಾಜಿನಂತೆ ಕನಿಷ್ಠ 20.ರೂ ತಗಲುತ್ತದೆ. ಚತ್ತೀಸ್‍ಗಡದಿಂದ 23.30 ರೂ.ಗೆ ಪ್ರತಿ ಕೆಜಿ ಖರೀದಿಸಿ 1 ರೂಗೆ ಕೆಜಿ ಅಕ್ಕಿ ನೀಡುತ್ತಿದ್ದೇವೆ. ಇದರಿಂದ ವಾರ್ಷಿಕ ಸರ್ಕಾರದ ಬೊಕ್ಕಸಕ್ಕೆ 4,200 ಕೋಟಿ ರೂ. ಹೊರೆ ಬೀಳುತ್ತಿದೆ. ರಾಜ್ಯದಲ್ಲಿರುವ 1818 ರೈಸ್‍ಮಿಲ್‍ಗಳಿಂದ ಪಡೆಯುವ ಲೆವಿ ಅಕ್ಕಿ ಪ್ರಮಾಣ ಹೆಚ್ಚಿಸಿ ಯೋಜನೆ ಮುಂದುವರೆಸುವ ಉದ್ದೇಶ ಸರ್ಕಾರದ್ದು. ಆದರೆ ಮಿಲ್ ಮಾಲೀಕರು ವಾಸ್ತವದಲ್ಲಿ ಇದು ಅಸಾಧ್ಯ ಎಂದು ಪಟ್ಟು ಹಿಡಿದಿದ್ದಾರೆ. ಜನಪ್ರಿಯ ಯೋಜನೆ ಧಿಡೀರನೆ ಜಾರಿಯಾಗಿದೆ, ವರ್ಷದ ಮಟ್ಟಿಗಾದರೂ ಅಥವಾ ಲೋಕಸಭಾ ಚುನಾವಣೆ ನಡೆಯುವವರೆಗಾದರೂ ನಡೆಸಬೇಕಲ್ಲ ಎಂಬ ಚಿಂತೆ ಸರ್ಕಾರದ್ದು. 

ಹೋಗಲಿ, ಸರ್ಕಾರದ ಉದ್ದೇಶ ಈಡೇರಿತೆ? ಇಲ್ಲ. ಅನ್ನಭಾಗ್ಯ ಸಹಾಯವಾಣಿ (1967)ಗೆ ಬರುವ ದೂರುಗಳನ್ನು ಕೇಳಿನೋಡಿ. ರಾಜ್ಯದ 20372 ನ್ಯಾಯಬೆಲೆ ಅಂಗಡಿಗಳಲ್ಲಿ ದೂರಿಲ್ಲದ ಅಂಗಡಿಯೇ ಬಹುಶಃ ಇರಲಾರದು. ಒಂದು ರೂ.ಗೆ ಅಕ್ಕಿ ಪಡೆಯುವ ಕುಟುಂಬಗಳನ್ನು ವಿಶ್ವಾಸದಿಂದ ಮಾತನಾಡಿಸಿ ನೋಡಿ. ಆಘಾತವೇ ಆಗುತ್ತದೆ. ಒಂದೇ ಮನೆಯಲ್ಲಿ ಮೂರ್ನಾಲ್ಕು ಕಾರ್ಡು ಇಟ್ಟುಕೊಂಡವರಿದ್ದಾರೆ. ಇವರಲ್ಲಿ ಒಂದು ರೂ.ಗೆ ಅಕ್ಕಿ ಪಡೆದು 45ರೂ.ಗೆ ಮಾರುವವರೇ ಹೆಚ್ಚು. ಯೋಜನೆಯಿಂದ ಉಳಿತಾಯವಾದ “ಬಡವರ” ಹಣ ಎಲ್ಲಿ ಹೋಗುತ್ತಿದೆ ಎಂಬ ಸಮೀಕ್ಷೆಯನ್ನೂ ಸರ್ಕಾರ ಮಾಡುತ್ತಿಲ್ಲ. ಒರಿಸ್ಸ, ಆಂಧ್ರ ಮತ್ತು ತಮಿಳುನಾಡುಗಳಲ್ಲೂ ಇಂಥ ಜನಪ್ರಿಯ ಯೋಜನೆಗಳಿವೆ. ಇವೆಲ್ಲವೂ ರಾಜಕೀಯ ಲಾಭದವೇ ವಿನಾ ಸಮಾಜೋಪಕಾರಿಯಲ್ಲ. ತಮಿಳುನಾಡಿನಲ್ಲಿ ಅಮ್ಮಾಕ್ಯಾಂಟೀನು, ಅಮ್ಮಾ ನೀರು, ಹೀಗೆ ಎಲ್ಲವೂ ಅಮ್ಮಮಯ. ಅಲ್ಲಿಯೂ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಬರೀ ಕ್ಯಾಂಟೀನಿನಿಂದ ನೂರಾರು ಕೋಟಿ ಹೊರೆಯಾಗುತ್ತಿದೆ.

ಇಂಥ ಜನಪ್ರಿಯ ಯೋಜನೆಗಳು ಬಡತನವನ್ನು ಎಂದು ನಿವಾರಿಸುತ್ತವೆ? ಎಂದೂ ಇಲ್ಲ. ಅನ್ನ ಕೊಟ್ಟರೆ ಹಸಿವು ಇಂಗುವುದಿಲ್ಲ, ಮತ್ತೆ ಹಸಿವಾಗುತ್ತದೆ. ಸರ್ಕಾರಗಳು ಜನರಿಗೆ ಅನ್ನ ಹುಟ್ಟಿಸಿಕೊಳ್ಳುವ ಮಾರ್ಗ ಕಾಣಿಸಬೇಕೇ ಹೊರತು ಅನ್ನವನ್ನೇ ಕೊಟ್ಟು ಸುಮ್ಮನಿರಿಸುವುದಲ್ಲ. ಒಂದು ಪಕ್ಷ ಪುಕ್ಕಟೆ ಅನ್ನ ಕೊಟ್ಟರೆ ಮತ್ತೊಂದು ಪಕ್ಷ ಮನೆ, ಹಾಸಿಗೆ, ಕಲರ್ ಟೀವಿ, ವಿದ್ಯುತ್ ಹೀಗೆ ಎಲ್ಲವನ್ನೂ ಕೊಡುತ್ತದೆ. ಹೀಗಾದರೆ ಸಮಾಜ ಶ್ರಮ ಸಂಸ್ಕøತಿಯನ್ನು ಉಳಿಸಿಕೊಳ್ಳುತ್ತದೆಯೇ? ಅನಾರೋಗ್ಯವಿದ್ದಾಗ ಮಾತ್ರ ಗ್ಲುಕೋಸು, ವಿಟಮಿನ್ ಮಾತ್ರೆ ತೆಗೆದುಕೊಳ್ಳಬೇಕೇ ಹೊರತು, ಆಹಾರ ಸ್ವೀಕರಿಸುವ ಬದಲು ಇವನ್ನೇ ಸ್ವೀಕರಿಸುತ್ತ ಇರಲಾಗುತ್ತದೆಯೇ? ಇವೆಲ್ಲ ತಾತ್ಕಾಲಿಕ ಶಮನಗಳು. ಆದರೆ ರಾಜಕೀಯ ಪಕ್ಷಗಳು ಇದನ್ನೇ ಕಾಯಂ ಮಾಡಿ ಸಮಾಜವನ್ನು ಕೆಡಿಸುತ್ತಿವೆ. ನಿರುದ್ಯೋಗ ನಿವಾರಿಸುವ, ಆಹಾರ ಬೆಲೆಯನ್ನು ನಿಯಂತ್ರಣದಲ್ಲಿರಿಸಿ, ಸ್ವಾವಲಂಬನೆ ಬೆಳೆಯುವಂತೆ ಮೂಲಸೌಕರ್ಯ ಒದಗಿಸಿ ಸಮಾಜವನ್ನು ಸಕ್ರಿಯಗೊಳಿಸುವ ಯೋಜನೆ ನೀಡುವ ಬದಲು ಸ್ಪರ್ಧಾತ್ಮಕ ರೀತಿಯಲ್ಲಿ ಅಗ್ಗದ ಯೋಜನೆ ನೀಡುತ್ತ ಸಮಾಜ ನಿಷ್ಕ್ರಿಯವಾಗುವಂತೆ ಇವು ಮಾಡುತ್ತಿರುವುದು ಮಾತ್ರ ಶೋಚನೀಯ.




ಪುಸ್ತಕ:
ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

Thursday, 5 January 2023

ಮತ್ತೊಂದು ಕನ್ನಡ ಸಾಹಿತ್ಯ ಸಮ್ಮೇಳನ

(ಇಂದಿನಿಂದ ಮೂರು ದಿನ, ಅಂದರೆ 6 ಜನವರಿ 2023 ರಿಂದ 8 ಜನವರಿ 2023ರ ವರೆಗೆ, ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ, ಹಿಂದೆ ಪ್ರಕಟಗೊಂಡಿದ್ದಈ ಲೇಖನವು ಪ್ರಸ್ತುತ ಎಂದೆನಿಸಿ ಮತ್ತೆ ಹಾಕಲಾಗಿದೆ).


"ಯೂಸ್ ಕನಡಾ ಆಸ್ ಮಚ್ ಆಸ್ ಪಾಸಿಬಲ್" ಎಂದು ಪ್ರಚಾರ ಮಾಡುವ ಅಥವಾ "ಹ್ಯಾಪಿ ಕನಡಾ ರಾಜ್ಯೋತ್ಸವ" ಎಂದು ಪರಸ್ಪರ ಹಾರೈಸಿಕೊಳ್ಳುವ ವಿಚಿತ್ರ ಕನ್ನಡ ಪರಿಸರದಲ್ಲಿ ನಾವಿದ್ದೇವೆ. ನೆರೆ ಬರಲಿ, ಬರವಿರಲಿ, ವರ್ಷಕ್ಕೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಒಂದು ಸಂಪ್ರದಾಯ ಮತ್ತು ಶಿಷ್ಟಾಚಾರ. 

ಕನ್ನಡ ಭಾಷೆ, ನಾಡು, ನುಡಿಗಳ ಸ್ಥಿತಿಗತಿ ಮತ್ತು ಭವಿಷ್ಯವನ್ನು ಕುರಿತು ವರ್ಷಕ್ಕಾದರೂ ಒಮ್ಮೆ ಗಂಭೀರ ಅವಲೋಕನ ನಡೆಸುವುದು ಈ ಸಮ್ಮೇಳನದ ಗುರಿ. ಆಶಯವೇನೋ ಚೆನ್ನಾಗಿದೆ. ಆದರೆ ಈ ಆಶಯಕ್ಕೆ ಅನುಗುಣವಾಗಿ ಇದುವರೆಗೆ ಸಮ್ಮೇಳನದ ಅಂತ್ಯದಲ್ಲಿ ಕೈಗೊಂಡ ನಿರ್ಣಯಗಳು ಎಷ್ಟರಮಟ್ಟಿಗೆ ಕಾರ್ಯಗತವಾಗಿವೆ, ಎಷ್ಟು ಬಾಕಿ ಇವೆ, ಎಷ್ಟು ನಿರ್ಣಯಗಳು ಯಾವ ಕಾಲದಿಂದ ಬೇಡಿಕೆ ಪಟ್ಟಿಯಲ್ಲಿವೆ ಇತ್ಯಾದಿಗಳ ಚರ್ಚೆಗೇ ಪ್ರತ್ಯೇಕ ಸಮ್ಮೇಳನ ನಡೆಸಬೇಕಿದೆ!

ಈ ಸಮ್ಮೇಳನಗಳನ್ನು ಹೆಮ್ಮೆಯಿಂದಲೂ ವ್ಯಂಗ್ಯದಿಂದಲೂ ಜಾತ್ರೆಗೆ ಹೋಲಿಸಲಾಗುತ್ತದೆ. ಇಲ್ಲಿರುವುದು ವೇದಿಕೆ ಮೇಲಿರುವವರು ಮತ್ತು ಕೆಳಗಿರುವವರು ಎಂಬ ಎರಡೇ ವರ್ಗ. ವೇದಿಕೆ ಮೇಲಿರುವವರು ತಾವು ಕನ್ನಡವನ್ನು ಪ್ರತಿನಿಧಿಸುತ್ತಿದ್ದೇವೆ ಎಂಬ ಧನ್ಯತೆಯನ್ನು ಅನುಭವಿಸುತ್ತಿದ್ದರೆ, ಕೆಳಗಿರುವವರು ತಮ್ಮ ಮುಗ್ಧ ಕನ್ನಡ ಪ್ರೇಮವನ್ನು ಮೆರೆಯುತ್ತ ಕುಳಿತಿರುತ್ತಾರೆ. ಊಟ ವಸತಿಯ ಗದ್ದಲ, ನೆನಪಿನ ಕಾಣಿಕೆ, ಸಾರಿಗೆ ಸೌಕರ್ಯ, ರಜೆ ಸೌಲಭ್ಯ, ಸಿಗಬೇಕಾದ ಮರ್ಯಾದೆ ತಮಗೆ ಸಿಕ್ಕಿಲ್ಲ ಇತ್ಯಾದಿ ಗಲಾಟೆಗಳೆಲ್ಲ ಸೇರಿ ನಿಜಕ್ಕೂ ಮಾರಿ ಜಾತ್ರೆಯ ವಾತಾವರಣವೇ ಅಲ್ಲಿ ನಿರ್ಮಾಣವಾಗಿರುತ್ತದೆ. ಒಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ ಕನ್ನಡಿಗರ ಮನೋಧರ್ಮ, ವರ್ತನೆ ತೋರಿಸುವ ಸಣ್ಣ ಕನ್ನಡಿ.

ಈ ಸಮ್ಮೇಳನ ಕನ್ನಡ ಭಾಷೆಗೆ ಇರುವ ವರ್ತಮಾನದ ಸವಾಲುಗಳನ್ನು, ಸಾಧನೆಯನ್ನು ಏನಾದರೂ ಅಕ್ಷರಶಃ ಪ್ರತಿನಿಧಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಇದಕ್ಕೆ ಕಾರಣವೂ ಇದೆ. ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡ ಮೇಲೆ ಅದನ್ನು ಸರ್ಕಾರಕ್ಕೆ ಎತ್ತಿಹಾಕಿ ತಮ್ಮ ಕೆಲಸ ಮುಗಿಯಿತೆಂದು ಪರಿಷತ್ತು ಮತ್ತು ವೇದಿಕೆ ಮೇಲಿರುವವರು ಕೆಳಗೆ ಇಳಿಯುತ್ತಾರೆ. ಸರ್ಕಾರ ಆಶ್ವಾಸನೆ ಕೊಟ್ಟು ಸುಮ್ಮನಾಗುತ್ತದೆ. ಮುಂದಿನ ಸಮ್ಮೇಳನದ ಒಳ ವ್ಯವಸ್ಥೆಗಳು ಆರಂಭವಾಗುತ್ತವೆ. ಮತ್ತೆ ಮುಂದಿನ ವರ್ಷ ಇದೇ ರಾಗ, ಇದೇ ಹಾಡು. 1949ರಲ್ಲಿ ರಾಜಕಾರಣಿಗಳ ಪ್ರವೇಶ ಆರಂಭವಾದಾಗಿನಿಂದ ಸಮ್ಮೇಳನಗಳು ನಡೆಯುತ್ತಿರುವುದು, ಅಲ್ಲಿ ಕೈಗೊಂಡ ನಿರ್ಣಯಗಳ ಕತೆ ಇದೇ.

ಸಮ್ಮೇಳನಗಳ ಕತೆ ಹಾಗಿರಲಿ. ಸದ್ಯದ ಕನ್ನಡದ ನೈಜತೆಯನ್ನು ಗಮನಿಸೋಣ. ಕನ್ನಡ ಉಳಿಸಿ ಬೆಳೆಸಬೇಕಾದವರು ನಾವು. ಇಂಗ್ಲೆಂಡಿನಿಂದಲೋ ಅಮೆರಿಕ, ಜರ್ಮನಿಯಿಂದಲೋ ಅಥವಾ ಯಾರೋ ಎಲ್ಲಿಂದಲೋ ಬಂದು ಕನ್ನಡ ಉದ್ಧಾರ ಮಾಡುವುದಿಲ್ಲ. ಸಮ್ಮೇಳನದ ಸಂಭ್ರಮದ ಈ ಹೊತ್ತಿನಲ್ಲಿ ನಮ್ಮ ಕನ್ನಡ ಹೀಗಿದೆ:

ಸ್ಯಾಂಪಲ್ ಒಂದು: “ಭಾರತೀಯ ಸಂಸ್ಕøತಿ ಕನ್ನಡ ವ್ಯಾಕರಣ ಅಗ್ರಗಣ್ಯ ಸ್ಥಾನವನ್ನು ಒಳಗೊಂಡಿ ಸಾಹಿತ್ಯ ವಿಷಯವನ್ನು ಅರ್ಥವತ್ತವಾಗಿ ರಚಿಸಬೇಕದರೆ ಸಂಸ್ಕøತ ಹಲವ ಪದಗಳು ಕನ್ನಡಕ್ಕೆ ಸೇರಿಹೋಗಿವೆ. ಕನ್ನಡ ವ್ಯಾಕರಣಕೆ ದ್ವನಿ ಲಿಪಿಗಳ ಮಾರ್ಗ ನಿರ್ಣಗಳನ್ನು ತೆಗೆದುಕೊಂಡು ಹೆಳಬಹುದು. ವರ್ಗ ನಿರ್ಣಯ ತೋರಿಸಿಕೊಟ್ಟಿದ್ದಾರೆ”. ಇದು ಕನ್ನಡ ಎಂ.ಎ ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಬರೆದ ಉತ್ತರದ ಸಾಲು. 

ಸ್ಯಾಂಪಲ್ ಎರಡು: “ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಶತಕಗಳಲ್ಲಿ ವಿವರಣೆ ಮತ್ತು ವಿಶ್ಲೇಷಣೆಗೆ ಮಾತ್ರ ಸೀಮಿತವಾಗಿದ್ದ ಜಾತ್ರೆಗಳನ್ನು ಕುರಿತ ಬರವಣಿಗೆಗಳು ಇತ್ತೀಚಿನ ದಿನಗಳಲ್ಲಿ ತೀವ್ರ ಚಿಂತನೆಗೆ ಒಳಗಾಗಿರುವುದು ಪ್ರಮುಖ ಅಂಶವಾಗಿದೆ... ಇಂತಹ ಆಚರಣೆಗಳಿಗೆ ಮೂಢನಂಬಿಕೆ ಹಾಗೂ ಕಂದಾಚಾರಗಳು ಕಾರಣವಾಗಿರುತ್ತವೆ. ಇವುಗಳ ಜನಪದರ ಅಭಿವೃದ್ಧಿಗೆ ಮಾರಕವಾಗಿರುತ್ತವೆ”. ಇದು ಪಿಎಚ್.ಡಿ ಪಡೆದು ಬಹು ವರ್ಷವಾದ ಕನ್ನಡ ಸಹಪ್ರಾಧ್ಯಾಪಕರೊಬ್ಬರ ಸಂಶೋಧನ ಬರಹದ ಸಾಲು.

ಸ್ಯಾಂಪಲ್ ಮೂರು: “ಒಟ್ಟಾರೆ ಸಾವಯವ ಸಮಗ್ರೀಕರಣ ಇರುವ ಶ್ರೇಷ್ಠ ಕೃತಿಯೊಂದರಲ್ಲಿ ಭಿನ್ನತೆಗಳು ಅನೇಕವಿದ್ದರೂ ಅದರ ಕೇಂದ್ರ ಬಿಕ್ಕಟ್ಟು ಒಂದೇ ಆಗಿರುತ್ತದೆ”. ಇದು ಕನ್ನಡದ ಖ್ಯಾತ ವಿಮರ್ಶಕರೊಬ್ಬರ ಬರಹ. ಕನ್ನಡ ದಿನಪತ್ರಿಕೆಗಳಲ್ಲಿ ಭಾನುವಾರ ಪ್ರಕಟವಾಗುವ ಈಚಿನ ಸಾಹಿತ್ಯ ವಿಮರ್ಶಾ ಲೇಖನಗಳೆಲ್ಲ ಹೆಚ್ಚೂ ಕಡಿಮೆ ಇದೇ ಸ್ವರೂಪದಲ್ಲಿರುತ್ತವೆ. ಬೇಕಿದ್ದರೆ ಇವುಗಳೊಂದಿಗೆ ತವಕ, ತಲ್ಲಣ, ಅನುಸಂಧಾನ, ತುಡಿತ, ಸಂಕ್ರಮಣ, ನೆಲಮೂಲಸಂಸ್ಕೃತಿ, ಐತಿಹಾಸಿಕ ತುರ್ತು, ಸ್ತ್ರೀ ಸಂವೇದನೆ ಇತ್ಯಾದಿ ಇತ್ಯಾದಿ ಇನ್ನೂ ಭಾರವಾದ ಪದಗಳನ್ನು ಸೇರಿಸಿ ಒಟ್ಟು ಒಂದಿಷ್ಟು ವಾಕ್ಯ ಮಾಡಿಕೊಳ್ಳಬಹುದು.   

ಈ ಮೂರೂ ಮಾದರಿಗಳು ಕಪೋಲಕಲ್ಪಿತವಲ್ಲ. ಮೂಲದಿಂದ ನೇರವಾಗಿ ದಾಖಲಿಸಿದ್ದೇನೆ. ಈ ಮೂರೂ ಮಾದರಿಗಳನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ? ಕನ್ನಡದಲ್ಲೇ ಇವೆಯಾದರೂ ಇವುಗಳಿಗೆ ಅನುವಾದ ಅನಿವಾರ್ಯ! ಎಂ.ಎ, ಪಿಎಚ್.ಡಿ ಅನಂತರದ ವಿದ್ವತ್ ಬರವಣಿಗೆ-ಹೀಗೆ ಎಲ್ಲ ಹಂತದ ಕನ್ನಡವೂ ಗೊಂದಲಮಯ. ಇವು ಬೇಕೆಂತಲೇ ಆಯ್ದವಲ್ಲ. ಕೈಗೆ ತಟ್ಟನೆ ಸಿಗುವ ಬರಹಗಳ ಸಂಖ್ಯೆಯೇ ಈ ಮಟ್ಟದಲ್ಲಿದೆ.    

ಸಾವಿರದೊಂಬೈನೂರರ ಎಪ್ಪತ್ತು ಎಂಬತ್ತರ ದಶಕದವರೆಗೂ ಹೊರಬಂದ ಕನ್ನಡ ಕೃತಿಗಳು, ವಿಮರ್ಶೆಗಳಲ್ಲಿ ಇಂಥ ಅಸಂಬದ್ಧಗಳನ್ನಾಗಲೀ ಭಾರವಾದ ಅನಗತ್ಯ ಪದಗಳನ್ನಾಗಲೀ ಕಾಣುವುದು ಕಷ್ಟ. ಕುವೆಂಪು ಅವರ ದ್ರೌಪದಿಯ ಶ್ರೀಮುಡಿ, ಸರೋವರದ ಸಿರಿಗನ್ನಡಿಯಲ್ಲಿ ಮೊದಲಾದ ಅದ್ಭುತ ವಿಮರ್ಶಾ ಬರಹಗಳು ಕಾಲಾತೀತವಾಗಿ ಸೆಳೆಯುತ್ತವೆ. ಅವರ ಬರಹದಲ್ಲಿ ಕೆಲಸಕ್ಕೆ ಬಾರದ ಭಾರದ ಪದಗಳಿರುವುದೇ ಇಲ್ಲ. ಗೊರೂರರ ಕನ್ನಡದ ಲಾಲಿತ್ಯ, ಬಿಜಿಎಲ್ ಸ್ವಾಮಿಯವರ ಕನ್ನಡದ ನವಿರು, ದೇವನೂರು, ತೇಜಸ್ವಿ, ಲಂಕೇಶರು ಕನ್ನಡವನ್ನು ಒಗ್ಗಿಸಿಕೊಂಡ ರೀತಿ... ಸಾವಿರ ಸಾವಿರ ಅತ್ಯುತ್ತಮ ಭಿನ್ನ ಭಿನ್ನ ಮಾದರಿಗಳು ನಮ್ಮ ಮುಂದಿವೆ. ಅಂಥ ಮಾದರಿಗಳು ದಿಢೀರನೆ ಇಲ್ಲವಾಗುತ್ತಿರುವುದು ಹೇಗೆ?

ಇದಕ್ಕೆ ಯಾರನ್ನು ದೂರುವುದು? ಎಂಟನೆಯ ತರಗತಿವರೆಗೆ ನಪಾಸು ಮಾಡಬಾರದ ಕಾರಣ ಶಿಕ್ಷಕರು ಮಕ್ಕಳನ್ನು ಹಾಗೇ ಪಾಸು ಮಾಡಿ ಮುಂದೆ ಕಳಿಸುತ್ತಿರುತ್ತಾರೆ. ಅದ್ಹೇಗೋ ಹತ್ತನೇ ತರಗತಿಯೂ ಪಾಸಾಗುತ್ತದೆ. ಹಾಗೆಯೇ ಪಿಯುಸಿ, ಪದವಿ ಎಲ್ಲವೂ! ಈ ಯಾವ ಹಂತದಲ್ಲೂ ವಿದ್ಯಾರ್ಥಿಯೇ ಆಸಕ್ತಿಯಿಂದ ಕಲಿತರೆ ಅಥವಾ ಶ್ರದ್ಧಾವಂತ ಶಿಕ್ಷಕ ಕಲಿಸಿದರೆ ಪರವಾಗಿಲ್ಲ. ಇಲ್ಲವಾದಲ್ಲಿ ಈಗಿನಂತೆ ವಿದ್ಯಾರ್ಥಿಗಳ ಕನ್ನಡ ನೋಡಿದ ವಿವಿ ಪ್ರಾಧ್ಯಾಪಕರು ಡಿಗ್ರಿ ಅಧ್ಯಾಪಕರನ್ನೂ ಡಿಗ್ರಿ ಅಧ್ಯಾಪಕರು ಪಿಯುಸಿ ಉಪನ್ಯಾಸಕರನ್ನೂ ಪಿಯುಸಿ ಉಪನ್ಯಾಸಕರು ಪ್ರೌಢಶಾಲಾ ಶಿಕ್ಷಕರನ್ನೂ ಪ್ರೌಢಶಾಲಾ ಶಿಕ್ಷಕರು ಪ್ರಾಥಮಿಕ ಶಾಲಾ ಮೇಷ್ಟ್ರುಗಳನ್ನೂ ಪರಸ್ಪರ ದೂಷಿಸಿಕೊಳ್ಳುತ್ತ, ಕೊನೆಗೆ ಎಲ್ಲರೂ ಸೇರಿ ನಾವು ಹೇಳಿಕೊಟ್ಟರಷ್ಟೇ ಸಾಲದು ಮನೆಯಲ್ಲೂ ಪಾಲಕರು ಕಲಿಸಬೇಕು ಎನ್ನುತ್ತೇವೆ; ಪಾಲಕರು ಮಕ್ಕಳನ್ನು ನಾವು ಶಾಲೆ-ಕಾಲೇಜಿಗೆ ಕಳುಹಿಸುವುದೇಕೆ, ಮೇಷ್ಟ್ರುಗಳು ಕಲಿಸಬೇಕಪ್ಪಾ ಎನ್ನುತ್ತಾರೆ. ಹೀಗೆ ಒಟ್ಟಾರೆ ಇಡೀ ಸಮಾಜದ ವ್ಯವಸ್ಥೆಯೇ ಇದಕ್ಕೆ ಹೊಣೆಯಾಗುವಂತೆ ಮಾಡಿಬಿಟ್ಟಿದ್ದೇವೆ.

ಸಾರ್ವತ್ರಿಕವಾಗಿ ಒಪ್ಪಲಾದ ಶೈಕ್ಷಣಿಕ ಮನೋವಿಜ್ಞಾನದ ಒಂದು ಮಾತಿನಂತೆ ವ್ಯಕ್ತಿಯ ಕಲಿಕೆ ಮೊದಲ 11 ವರ್ಷಗಳಲ್ಲಿಯೇ ನಡೆಯುತ್ತದೆ. ಅನಂತರದ್ದು ಏನಿದ್ದರೂ ಅದರ ವಿಸ್ತರಣೆ ಮಾತ್ರ. ಕನ್ನಡದ ಸೌಧ ಸಮರ್ಪಕವಾಗಿಯೂ ಸುಂದರವಾಗಿಯೂ ಇರಬೇಕಾದರೆ ಭದ್ರ ಬುನಾದಿ ಅಗತ್ಯ. ನಮ್ಮ ಶೈಕ್ಷಣಿಕ ವ್ಯವಸ್ಥೆಯ ಬುನಾದಿಯೇ ಅಳ್ಳಕ ಎಂಬುದನ್ನು ಇಂದಿನ ಕನ್ನಡದ ಮಾದರಿಗಳು ಮತ್ತೆ ಮತ್ತೆ ಎತ್ತಿ ತೋರಿಸುತ್ತಿವೆ. ಸದ್ಯ ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಜನರನ್ನೂ ಅಂಥ ಪರಿಸ್ಥಿತಿಯನ್ನೂ ಉಳಿಸಿಕೊಂಡರೆ ಸಾಕು ಎಂಬ ಸ್ಥಿತಿಗೆ ಕನ್ನಡದ ಖ್ಯಾತ ಚಿಂತಕರೇ ಬಂದುಬಿಟ್ಟಿದ್ದಾರೆ. ಇಂಥ ಸಮಯದಲ್ಲಿ ಸಮ್ಮೇಳನಗಳು ಇದನ್ನು ರಿಪೇರಿ ಮಾಡಬಲ್ಲವೇ? ಗೊತ್ತಿಲ್ಲ. 






ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

Wednesday, 4 January 2023

ನಮ್ಮ ಪರಂಪರೆಯ ಪಾಠವನ್ನು ಮನಗಾಣಿಸಿದ ಸಿದ್ಧೇಶ್ವರರು


ಇದೀಗ ನಮ್ಮಿಂದ ವಿಜಯಪುರದ ಸ್ವಾಮಿ ಸಿದ್ಧೇಶ್ವರರು ಕಣ್ಮರೆ ಆಗಿದ್ದಾರೆ, ಆದರೆ ಅವರು ಜೀವಿಸಿದ ರೀತಿ ಶಾಶ್ವತವಾಗಿರುತ್ತದೆ. ಏಕೆಂದರೆ ಅವರ ಜೀವನದ ಪರಿ ನಮ್ಮ ಪರಂಪರೆಯ ಕೊಡುಗೆ. ಅದು ಶತಮಾನಗಳಿಂದ ಬೆಳೆದು ಬಂದದ್ದು.

ನಮ್ಮ ಪರಂಪರೆಯಲ್ಲಿ ಸ್ವಾಮೀಜಿಗಳಿಗೆ ಪ್ರತ್ಯೇಕ ರೀತಿ ನೀತಿಯನ್ನು ಹೇಳಿದ್ದರೂ ಸಾಮಾನ್ಯ ಜನ ಕೂಡ ಹಾಗೆ ಜೀವಿಸಬಹುದು. ಹೀಗೆ ಬದುಕಿದವರಿಗೆ, ಜೀವಿಸುತ್ತಿರುವವರಿಗೆ ಕೊರತೆ ಏನೂ ಇಲ್ಲ. ಮಠ ಮಾನ್ಯಗಳಿಲ್ಲದೇ ಯಾವುದೇ ಸಂಸ್ಥಾನದ ಪೀಠಾಧಿಪತಿ ಆಗದೇ ಮಹಾನ್ ಸಾಧುಗಳಾಗಿ ಜೀವಿಸಿದ ಅವಧೂತ ಪರಂಪರೆ ನಮ್ಮಲ್ಲಿ ಬಹು ದೊಡ್ಡದು. ಚಂದ್ರಶೇಖರ ಭಾರತಿ ಸ್ವಾಮಿಗಳು, ಶ್ರೀಧರ ಸ್ವಾಮಿಗಳು, ಮುಕಂದೂರು ಸ್ವಾಮಿಗಳು, ವೆಂಕಟಾಚಲರು ಮೊದಲಾದವರು ಇಂಥ ಪರಂಪರೆಗೆ ಸೇರಿದ್ದಾರೆ.  ಸಿದ್ಧೇಶ್ವರರು ಅಂಥವರು. ಇವರೆಲ್ಲ ಪವಾಡ ಮಾಡಬೇಕು ಅಂದವರಲ್ಲ, ಕೆಲವರು ಮಾಡಿದ್ದಾರೆ, ಬದುಕೇ ಒಂದು ಪವಾಡ ಎಂದು ಬಗೆದವರು ಇವರು. ಅವಧೂತರು ತಮ್ಮ ಸುತ್ತಲಿನ ಜೀವ ಜಂತುಗಳಿಂದ ಬದುಕು ಕಟ್ಟಿಕೊಳ್ಳುತ್ತಾರೆ, ಸಿಕ್ಕ ಆಹಾರ ಸೇವಿಸುವುದನ್ನು ಹೆಬ್ಬಾವಿನಿಂದಲೂ ನಿದ್ರೆಯನ್ನು ಕೋಳಿಯಿಂದಲೂ ಬಂಧು ಬಳಗ ನೋಡುವುದನ್ನು ಕಾಗೆಯಿಂದಲೂ ಹೀಗೆ ಇಪ್ಪತ್ನಾಲ್ಕು ಜೀವಿಗಳನ್ನು  ನೋಡಿ ಅವಧೂತರು ಕಲಿಯುತ್ತಾರೆ ಅನ್ನಲಾಗಿದೆ. ಹೀಗೆ ಬದುಕುವ ಯಾರಾದರೂ ನಿಜ ಸಂನ್ಯಾಸಿ ಜೀವನ ನಡೆಸಬಹುದು. ಇದಕ್ಕೆ ಮಠ ಮಾನ್ಯಗಳು ಬೇಕಿಲ್ಲ. ದೇಹದ ಕನಿಷ್ಠ ಅವಶ್ಯಕತೆಗಳನ್ನು ಮಾತ್ರ ಕನಿಷ್ಠ ರೀತಿಯಲ್ಲಿ ಪೂರೈಸಿಕೊಳ್ಳುವುದು ಇದರ ಆದರ್ಶ. ಹೀಗೆ ಮಾಡಿದಾಗ ನಿಸರ್ಗಕ್ಕೆ ಯಾವುದೇ ಆಪತ್ತು ಬರುವುದಿಲ್ಲ, ಮಹಾತ್ಮ ಗಾಂಧಿಯವರು ಹೇಳಿದ್ದು ಬದುಕಿದ್ದು ಹೀಗೆಯೇ.

ನಮಗೆ ದೊರಕುವ ಈಚಿನ ನಿದರ್ಶನ ಸಿದ್ಧೇಶ್ವರರದು. ಅವರಿಗೆ ಜಾತಿ ಧರ್ಮಗಳ ಭೇದ ಇರಲಿಲ್ಲ. ಅವರ ಸರಳ ಪ್ರವಚನದಲ್ಲಿ ಜೀವನ ಸೂತ್ರಗಳು ಅಡಗಿರುತ್ತಿದ್ದವು, ಇವು ಎಲ್ಲ ಮನುಷ್ಯರಿಗೂ ಅಗತ್ಯವಾದ್ದರಿಂದ ಅವರಿಗೆ ಎಲ್ಲ ವರ್ಗದ ಭಕ್ತರಿದ್ದರು. ವಿಜಾಪುರ ಸುತ್ತುಮುತ್ತಲಿನ ಅಪಾರ ಸಂಖ್ಯೆಯ ಇಸ್ಲಾಂ ಮತೀಯ ಭಕ್ತರು ಅವರ ಅಭಿಮಾನಿಗಳಾಗಿದ್ದರು ಅವರನ್ನು ಆದರ್ಶವಾಗಿ ಇಟ್ಟುಕೊಂಡಿದ್ದರು ಅನ್ನುವುದೇ ಇದನ್ನು ಹೇಳುತ್ತದೆ, ಇದು ನಮ್ಮ ಪರಂಪರೆಯ ಹೆಗ್ಗಳಿಕೆ, ಪ್ರಪಂಚದ ಬೇರೆಲ್ಲಾದರೂ ಇಂಥ ಸಂಭವನೀಯತೆ ಸಾಧ್ಯವೇ ಎಂಬುದು ಇನ್ನು ಮೇಲೆ ಸಾಬೀತಾಗಬೇಕು. ಮಾತ್ರವಲ್ಲ, ಅವರ ಅಂತ್ಯ ಸಂಸ್ಕಾರಕ್ಕೆ ಅನೇಕ ಪಂಥಗಳ ಮುಖಂಡರು, ಸ್ವಾಮೀಜಿಗಳು ಖುದ್ದು ಹಾಜರಿದ್ದರು ಅನ್ನುವುದು ಇನ್ನೂ ವಿಶೇಷ. ಹೀಗೆ ಒಂದು ನಿರ್ದಿಷ್ಟ ಪಂಥದ ಸ್ವಾಮೀಜಿಯೊಬ್ಬರು ಸಮಾಧಿಸ್ಥರಾದಾಗ  ಮತ್ತೊಂದು ಪಂಥದ ಮುಖಂಡರು ಅವರ ಅಂತ್ಯ ಕ್ರಿಯೆಯಲ್ಲಿ ಖುದ್ದು ಪಾಲ್ಗೊಳ್ಳುವುದು ಹಿಂದೂ ಸಂಪ್ರದಾಯದಲ್ಲಿಯೂ ವಿಶೇಷವೇ. ಅಲ್ಲದೇ ಸ್ವತಃ ವೀರಶೈವ ಅನುಯಾಯಿಗಳಾಗಿದ್ದುಕೊಂಡು ತಮ್ಮ ದೇಹದ ಅಂತ್ಯ ಸಂಸ್ಕಾರ ಅಗ್ನಿದಹನದಮೂಲಕ ಆಗಬೇಕು ಎಂದು ಅವರು ಬಯಸಿದ್ದು ಕೂಡ ವಿಶೇಷ ಅನಿಸುತ್ತದೆ, ಅವರ ಇಂಥ ಬದುಕಿನ ಗ್ರಹಿಕೆಯೇ ಅವರನ್ನು ಯಾವುದಕ್ಕೂ ಅಂಟಿಕೊಳ್ಳದ ಅವಧೂತರನ್ನಾಗಿ ಮಾಡಿದ್ದು ಅನಿಸುತ್ತದೆ. ಎಲ್ಲಿ ಯಾವುದು ಒಳ್ಳೆಯದಿದೆಯೋ ಅದನ್ನು ಯಾವುದೇ ಶಂಕೆ ಇಲ್ಲದೇ ಸ್ವೀಕರಿಸುವುದು, ಗೌರವಿಸುವುದನ್ನು ಕಲಿತರೆ ನೀವು ಅರ್ಧ ಅವಧೂತರಾದಂತೆ. ಅದನ್ನೇ ಕರಗತಮಾಡಿಕೊಂಡರೆನೀವು ಪೂರ್ಣವಾದಂತೆ. ಒಟ್ಟಿನಲ್ಲಿ ನಿಮ್ಮ ಸುತ್ತಲಿನ ಜಗತ್ತನ್ನು  ಗೌರವಿಸುವುದೇ ನಿಜ ಬದುಕು. ಅವಧೂತರೆಲ್ಲ ಕಲಿಸುವುದು ಇದನ್ನು. ಇಷ್ಟಾದರೆ ಜೀವನದಲ್ಲಿ ಶಾಂತಿ ಸಮಾಧಾನಗಳು ತಾನಾಗಿ ನೆಲೆಸುತ್ತವೆ. ಇನ್ನೇನು ಬೇಕು ನಮಗೆ? ಇದನ್ನು ತೋರಿಸಿಕೊಟ್ಟ ಇನ್ನೊಂದು ಜೀವ ಸಿದ್ಧೇಶ್ವರರು. ಪರಂಪರೆಯ ಇಂಥ ಕೊಂಡಿ ಕಳಚದಂತೆ ಆಗಾಗ ಮಹಾಪುರುಷರು ಜನ್ಮ ತಾಳುತ್ತಾರೆ. ಇದು ಪರಂಪರೆಯ ಶಕ್ತಿ. ರಮಣಮಹರ್ಷಿಗಳ ತರುವಾಯ ೨೦ನೆಯ ಶತಮಾನ ಕಂಡ ಅಪರೂಪದ ಸರಳ ಜೀವಗಳಲ್ಲಿ ಇವರೂ ಒಬ್ಬರು.

ಇಂದಿನ ಅರ್ಥಹೀನ ಸ್ಪರ್ಧೇ ಪೈಪೋಟಿಯ ಜೀವನದಲ್ಲಿ ಸಿದ್ಧೇಶ್ವರರು ಬಾಳಿದ ರೀತಿ ವಿಚಿತ್ರ ಅನಿಸಬಹುದು. ಆದರೆ ಮನುಷ್ಯ ಜೀವನವೇ ಇಷ್ಟು. ಇದು ಅರಿವಾಗುವಷ್ಟರಲ್ಲಿ ನಮ್ಮ ಬದುಕು ಮುಕ್ತಾಯವಾಗಿರುತ್ತದೆ. ಇದು ವ್ಯಂಗ್ಯ. ಇಂದಿನ ಜೀವನದಲ್ಲಿ ಏನಿದ್ದರೂ ಒಬ್ಬರನ್ನೊಬ್ಬರು ತಳ್ಳಿ ಮುಂದೆ ಓಡುತ್ತಿರಬೇಕು ಎಲ್ಲದರಲ್ಲೂ ತಾನೇ ಮೊದಲು ಎಂದು ಸಾಧಿಸಿಕೊಳ್ಳಬೇಕು. ಏಕೆ ಎಂದು ನಮಗೆ ನಾವೇ ಕೇಳಿಕೊಂಡರೆ ಖಂಡಿತ ಉತ್ತರ ಸಿಗುವುದಿಲ್ಲ. ಅಷ್ಟಕ್ಕೂ ನಮ್ಮ ಸಂಪ್ರದಾಯ ಕಲಿಸುವುದೇನು? ಶಾಂತಿ, ಸಹಬಾಳ್ವೆ. ಪರಸ್ಪರ ಸ್ಪರ್ಧೇಯಲ್ಲಿ ಇದು ಸಾಧ್ಯವೇ? ಇಲ್ಲ ಅನಿಸುತ್ತದೆ. ಮತ್ತೆ ನಾವ್ಯಾಕೆ ಈ ಮಾರ್ಗದಲ್ಲಿ ಇನ್ನೂ ಸಾಗುತ್ತಿದ್ದೇವೆ? ಪಾಶ್ಚಾತ್ಯರ ಅನುಕರಣೆ ಮತ್ತು ಅದೇಜೀವನ ಎಂದು ತಿಳಿದುದು ಇದಕ್ಕೆ ಕಾರಣ ಅನಿಸುತ್ತದೆ. ಆದರೆ ಜೀವನವನ್ನು ಎಗ್ಗಿಲ್ಲದೇ ಸಾಗಿಸಿ ಗೊತ್ತು ಗುರಿ ಇಲ್ಲದೇ ನಿತ್ಯ ಸಾಯುವ ಸಾವಿರಾರು ಜನರ ಮಧ್ಯೆ ಸಿದ್ಧೇಶ್ವರರು ಏಕೆ ಭಿನ್ನವಾಗಿ ನಿಲ್ಲುತ್ತಾರೆ ಎಂದು ಯೋಚಿಸಿದರೆ ನಮಗೆ ತೃಪ್ತಿಯಾಗುವ ಉತ್ತರ ಸಿಗಬಹುದು. ಅವರು ನಮಗೆ ಹೇಳಿಹೋದ ಕೊನೆಯ ಮತ್ತು ಶ್ರೇಷ್ಠ ಪ್ರವಚನ ಇದೇ.