Friday, 10 February 2023

ಒಂದು ಜನಪ್ರಿಯ ತಪ್ಪು ಉಲ್ಲೇಖ


ಮೊನ್ನೆ ರಾಜ್ಯಸಭೆಯಲ್ಲಿ ನಮ್ಮ ಹಿರಿಯರಾದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ರಾಷ್ಟ್ರಪತಿಗಳ ಮಾತನ್ನು ಉಲ್ಲೇಖಿಸಿ ಅವರು ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದನ್ನು ಉಲ್ಲೇಖಿಸಿದ್ದು ಖುಷಿ ಆಯಿತೆಂದು ಹೇಳಿದ್ದಾರೆ. ಹೆಗ್ಗಡೆಯವರು, ರಾಷ್ಟ್ರಪತಿಗಳು ಅಂತಲ್ಲ, ನಾವೆಲ್ಲರೂ ಹೀಗೆಯೇ ಭಾವಿಸಿದ್ದೇವೆ, ಅಥವಾ ನಮಗೆ ಹೀಗೆ ಹೇಳಿಕೊಡಲಾಗಿದೆ. ಆದರೆ ಇದು ತಪ್ಪು. ಈ ಮಾತನ್ನು ಹೇಳಿದವನು ಆಯ್ದಕ್ಕಿ ಮಾರಯ್ಯ ಎಂಬ ವಚನಕಾರ. ಆತನ ವಚನ ಹೀಗಿದೆ: ‘ಕಾಯಕದಲ್ಲಿ ನಿರತನಾದೊಡೆ ಗುರುದರ್ಶನವಾದೊಡೂ ಮರೆಯಬೇಕು ಲಿಂಗಪೂಜೆಯಾದೊಡೂ ಮರೆಯಬೇಕುಜಂಗಮ ಮುಂದೆ ನಿಂದಿದ್ದರೂ ಹಂಗ ಹರಿಯಬೇಕು ಕಾಯಕವೇ ಕೈಲಾಸವಾದ ಕಾರಣ ಅಮರ ಲಿಂಗವಿತ್ತೊಡಾದರೂ ಕಾಯಕದೊಳು’.

ವಚನಕಾರರಿಗೆ ಲಿಂಗ, ಜಂಗಮ, ಗುರು ಇವೆಲ್ಲ ಅತ್ಯಂತ ಮುಖ್ಯವಾದವು. ಆದರೆ ಮಾರಯ್ಯ ಎಲ್ಲಕ್ಕಿಂತ ಕಾಯಕವೇ ಶ್ರೇಷ್ಠ ಎಂಬ ನಿಲುವಿಗೆ ಬರುತ್ತಾನೆ. ಅವನ ವಚನದಲ್ಲಿ ಈ ಮಾತು ಸ್ಪಷ್ಟವಾಗಿದೆ.

ಬಸವಣ್ಣನವರು ಬರುವ ವೇಳೆಗೆ ವೀರಶೈವರು ಮಠ ಮಾನ್ಯಗಳ ಹೆಸರಲ್ಲಿ ಶುದ್ಧ ಸೋಮಾರಿಗಳಾಗಿ ಕೇವಲ ಉಪದೇಶ ಮಾಡಿಕೊಂಡಿದ್ದರೆಂದೂ ಅವರಿಗೆ ತಿಳಿ ಹೇಳಿ ನೀವು ಕಾಯಕದಲ್ಲಿ ತೊಡಗಬೇಕೆಂದು ಎಚ್ಚರಿಸಿದವರು ಬಸವಣ್ಣವವರೆಂದು ಹೇಳಲಾಗುತ್ತದೆ.ಹೀಗಾಗಿ ಕಾಯಕವೇ ಕೈಲಾಸ ಎಂಬುದು ಅವರ ಹೆಸರಿಗೆ ಅಂಟಿದೆ ಅನ್ನಲಾಗುತ್ತದೆ. ಆದರೆ ಬಸವಣಣವನವರ ವಚನ ಹೀಗಿದೆ- ‘ಶರಣ ನಿದ್ರೆ ಗೈದೆಡೆ ಜನ ಕಾಣಿರೋ, ಶರಣ ನಡೆದುದೇ ಪಾವನ ಕಾಣಿರೋ, ಶರಣ ನುಡಿದುದೇ ಶಿವತತ್ವ ಕಾಣಿರೋ, ಕೂಡಲ ಸಂಗಮ ಶರಣರ ಕಾಯವೇ ಕೈಲಾಸ ಕಾಣಿರೋ' (ಸಮಗ್ರ ವಚನ ಸಂಪುಟ 1, ವಚನ ಸಂಖ್ಯೆ 873).

ವಚನ ಚಳವಳಿಯ ಕುರಿತಾಗಿ ಸಾಕಷ್ಟು ಗೊಂದಲಗಳು ಇಂದಿಗೂ ಉಳಿದಿವೆ. ಅವುಗಳಲ್ಲಿ ಒಂದು- ಕೂಡಲಸಂಗಮದಲ್ಲಿ ಕ್ರಾಂತಿಯಾದಾಗ ವಚನಗಳ ಕಟ್ಟನ್ನು ಹೊತ್ತು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೂ ಉಳವಿಗೂ ಸಾಗಿಸಲಾಯಿತು ಎಂಬ ಮಾತು. ಅವು ಏನಾದವೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನೊಂದು- ವಚನ ಸಂಪಾದನೆಯನ್ನು ಫಗು ಹಳಕಟ್ಟಿಯವರಾದಿಯಾಗಿ ಕಲ್ಬುರ್ಗಿಯವರವರೆಗೆ ಅನೇಕರು ಮಾಡಿದ್ದಾರೆ. ಆದರೆ ಒಬ್ಬರ ಸಂಗ್ರಹದಲ್ಲಿರುವ ವಚನ ಮತ್ತೊಬ್ಬರ ಸಂಗ್ರಹದಲ್ಲಿ ಒಮ್ಮೊಮ್ಮೆ ಇರುವುದಿಲ್ಲ, ಅಲ್ಲದೇ ಅಂಕಿತಗಳನ್ನು ತೆಗೆದು ಓದಿದರೆ ಯಾವ ವಚನ ಯಾರದು ಎಂದು ಹೇಳುವುದು ಕೂಡ ಕಷ್ಟ. ಕೆಲವೊಮ್ಮೆ ಅವರಿವರ ವಚನಗಳು ಕಲಸು ಮೇಲೋಗರವಾಗುವುದೂ ಇದೆ. ಸದ್ಯದ ವಚನ ಅಂಥದ್ದು, ಇದೊಂದು ಜನಪ್ರಿಯ ಸುಳ್ಳು. ಇದೇ ರೀತಿ ವೀರಶೈವ ಚಳವಳಿ ಬಸವಣ್ಣನವರಿಂದ ಶುರುವಾಯಿತು ಎಂದು ತಿಳಿದಿರುವುದು, ವೇದ ಉಪನಿಷತ್ತುಗಳನ್ನು ವಚನಕಾರರು ನಿರಾಕರಿಸಿದರು ಎಂಬುದು ಕೂಡ ಪೂರ್ತಿ ಸರಿಯಲ್ಲ. ಉಪನಿಷತ್ತುಗಳ ಅನೇಕ ಮಾತುಗಳನ್ನು ವಚನಕಾರರು ಬಳಸಿಕೊಂಡಿದ್ದಾರೆ, ದೇಹೋ ದೇವಾಲಯಪ್ರೋಕ್ತೋ ಎಂಬ ಸಾಲು ವಚನಗಳಲ್ಲಿ ‘ದೇಹವೇ ದೇಗುಲ’ ಎಂದು ಕಾಣಿಸಿಕೊಳ್ಳುತ್ತದೆ. ಇಂಥ ಸಾಕಷ್ಟು ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿಯೇ ಬಸವಣ್ಣನವರು ಕಾಯವೇ ಕಇಲಾಸ ಅಂದಿದ್ದಾರೆ. 

ಕೆಲವರ ಪ್ರಕಾರ ಕಾಯಕಕ್ಕೆ ಹೆಚ್ಚು ಮಹತ್ವ ಕೊಟ್ಟು ಅದನ್ನು ಮುನ್ನೆಲೆಗೆ ತಂದವರು ಬಸವಣ್ಣನವರಾದ ಕಾರಣ ಅವರ ಹೆಸರಿಗೆ ಈ ಸಾಲು ಸೇರಿದೆ ಅನ್ನುವುದಾಗಿದೆ, ಬಸವಣ್ಣನವರು ಬರುವ ವೇಳೆಗೆ ವೀರಶೈವರು ಮಠ ಮಾನ್ಯಗಳ ಹೆಸರಲ್ಲಿ ಶುದ್ಧ ಸೋಮಾರಿಗಳಾಗಿ ಕೇವಲ ಉಪದೇಶ ಮಾಡಿಕೊಂಡಿದ್ದರೆಂದೂ ಅವರಿಗೆ ತಿಳಿ ಹೇಳಿ ನೀವು ಕಾಯಕದಲ್ಲಿ ತೊಡಗಬೇಕೆಂದು ಎಚ್ಚರಿಸಿದವರು ಬಸವಣ್ಣವವರೆಂದು ಹೇಳಲಾಗುತ್ತದೆ. ಹೀಗಾಗಿ ಕಾಯಕವೇ ಕೈಲಾಸ ಎಂಬುದು ಅವರ ಹೆಸರಿಗೆ ಅಂಟಿದೆ ಅನ್ನಲಾಗುತ್ತದೆ. ಇರಬಹುದು. ಆದರೆ ಕಾಯಕವೇ  ಕೈಲಾಸ ಎಂಬುದು ಆಯ್ದಕ್ಕಿ ಮಾರಯ್ಯನ ಮಾತು ಎಂಬುದು ಸಿದ್ಧವಾಗಿದೆ, ಪ್ರಚಾರಕ್ಕೆ ಬಂದಿಲ್ಲ. ನಮ್ಮ ಅಜ್ಞಾನ ಇದಕ್ಕೆ ಕಾರಣ. ಇನ್ನಾದರೂ ಇಂಥ ತಪ್ಪುಗಳು ಪ್ರಚಾರವಾಗದಂತೆ ನಾವು ಎಚ್ಚರವಹಿಸಬೇಕಿದೆ. ಹಿಂದಿನವರ ಮಾತನ್ನು ಉಲ್ಲೇಖಿಸುವಾಗ ತುಸು ಎಚ್ಚರವಹಿಸುವುದು ಅಗತ್ಯ. ಅದು ನಮ್ಮ ಸಾಮಾಜಿಕ ಜವಾಬ್ದಾರಿ.


1 comment: