Wednesday, 26 November 2025

ಸೆಳೆದುಕೊಂಡು ಹೋಗುವ ಅಧ್ಯಾತ್ಮ ಕೃತಿ


ಭಾರತೀಯ ಪರಂಪರೆಯಲ್ಲಿ ಆಧ್ಯಾತ್ಮಿಕ ಸಾಧಕರ ದೊಡ್ಡ ಪಟ್ಟಿಯೇ ಇದೆ. ಇವರ ಆಧ್ಯಾತ್ಮಿಕ ಸಾಧನೆಗಳನ್ನು ಸ್ವತಃ ಕಂಡವರು ಅನುಭವಿಸಿದವರು ಅದನ್ನು ಅಚ್ಚರಿ, ಒಂದು ಪವಾಡ ಎಂಬಂತೆ ನೋಡುತ್ತಾರೆ. ಸಾಮಾನ್ಯಜನರಂತೂ ನಮ್ಮ ಆಧ್ಯಾತ್ಮಿಕ ಸಾಧಕರನ್ನು ದೇವರೆಂದೋ ಪವಾಡ ಪುರುಷರೆಂದೋ ಕಾಣುತ್ತಾರೆ. ಆದ್ದರಿಂದ ಇಂಥವರ ಬಗ್ಗೆ ದೇಶಾದ್ಯಂತ ಹಲವು ಭಾಷೆಗಳಲ್ಲಿ ಇಂಥ ಕೃತಿಗಳು ಮತ್ತೆ ಮತ್ತೆ ಹೊರಬರುತ್ತವೆ. ಜನರಿಂದ ಗೌರವಾದರಗಳಿಗೆ ಒಳಗಾಗುತ್ತವೆ, ಇಂಥ ಕೃತಿಗಳಲ್ಲಿ ಈಚೆಗೆ ಹೊರಬಂದಿದ್ದು ಸಖರಾಯಪಟ್ಟಣದಲ್ಲಿ ಆಶ್ರಮ ಮಾಡಿಕೊಂಡಿದ್ದ ವೆಂಕಟಾಚಲರು ಅಥವಾ ಗುರುನಾಥರೆಂದು ಭಕ್ತ ಸಮುದಾಯದಲ್ಲಿ ಪರಿಚಿತರಾಗಿದ್ದ ಗುರುಗಳಾಗಿದ್ದ ಇವರ ಬಗ್ಗೆ ಅವರ ಗುರುಂಧು ಅಥವಾ ಶಿಷ್ಯರಾಗಿದ್ದ ನಾಗರಾಜ್ ಎಂಬುವವರು ಗುರುನಾಥರ ಮಹಿಮೆ ವಿವರಿಸುವ ಪಾರಾಯಣಯೋಗ್ಯವಾದ ಶ್ರೀ ಗುರುಗಾಥಾ ಎಂಬ ಕೃತಿಯನ್ನು ಜನರ ಮುಂದೆ ಇಟ್ಟಿದ್ದಾರೆ. ಇದು ಮೊದಲು ೨೦೧೭ರಲ್ಲಿ ಮುದ್ರಣವಾಗಿ ೨೦೨೨ರಲ್ಲಿ ಮತ್ತೆ ಮರುಮುದ್ರಣವಾಗಿದೆ ಅಂದರೆ ಇದನ್ನು ಭಕ್ತಗಣ ಹೇಗೆ ಸ್ವೀಕರಿಸುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ.

ನಮ್ಮ ದೇಶದಲ್ಲಿ ಆಧ್ಯಾತ್ಮಿಕ ಸಾಧಕರಿಗೆ ಬಹುದೊಡ್ಡ ಸ್ಥಾನವಿದೆ, ಅವರು ಯಾವಾಗಲೂ ಸಾಧಕರನ್ನು ಪವಾಡಪುರುಷರೆಂದೋ ದೈವೀಪುರುಷರೆಂದೋ ಸಾಮಾನ್ಯವಾಗಿ ಭಾವಿಸುತ್ತಾರೆಸದಾಕಾಲ ಅವರನ್ನು ಪೂಜನೀಯ ಭಾವದಿಂದ ಆರಾಧಿಸುತ್ತಿರುತ್ತಾರೆ ಆದ್ದರಿಂದ ಇಂಥವರನ್ನು ಕುರಿತ ಕೃತಿಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಇಂಥ ಕೃತಿಗಳಲ್ಲಿ ಹೆಸರಿಸಬೇಕಾದ ಹತ್ತು ಹಲವು ಕೃತಿಗಳಿದ್ದರೂ ಹೇಳಲೇ ಬೇಕಾದ ಕೆಲವೆಂದರೆ ಮುಕಂದೂರು ಸ್ವಾಮಿಗಳ ಬಗ್ಗೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ರಚಿಸಿದ ಯೇಗ್ದಾಗೆಲ್ಲಾ ಐತೆ, ಅನುವಾದವಾಗಿ ಬಂದ ಸ್ವಾಮಿ ರಾಮ ಅವರ ಆಧ್ಯಾತ್ಮ ಸಾಧನೆ ವಿವರಿಸುವ ಜಗತ್‌ಪ್ರಸಿದ್ಧ ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ, ರಮಣ ಮಹರ್ಷಿಗಳ ಸಾಧನೆ ಬೋಧನೆ ವಿವರಿಸುವ ಅವರ ಶಿಷ್ಯ ಕೆ ವಿ ನಾರಾಯಣನ್ ಅವರು ರಚಿಸಿದ ನಾನು ಯಾರು, ಶಿರಡಿ ಸಾಯಿಬಾಬಾ ಅವರನ್ನು ಕುರಿತ ಸಾಯಿಗುರು ಚರಿತೆ, ಶ್ರೀಪಾದ ವಲ್ಲಭರ ಗುರುಚರಿತೆ ಮೊದಲಾದವು. ದೇಶದ ಅನ್ಯಭಾಷೆಗಳಲ್ಲಿ ರಚಿತಗೊಂಡು ಅನುವಾದವಾಗಿ ಕನ್ನಡಕ್ಕೆ ಬಂದ ಇನ್ನೂ ಹಲವು ಕೃತಿಗಳಿವೆ. ಈಗ ಈ ಪಟ್ಟಿಗೆ ಸೇರಿಕೊಂಡ ಇತ್ತೀಚೆಗೆ ಒಂದೆರಡು ದಶಕಗಳ ಹಿಂದೆ ಸಮಾಧಿಸ್ತರಾದ ಭಕ್ತರಿಂದ ಗುರುನಾಥರೆಂದೂ ವೆಂಕಟಾಚಲರೆಂದೂ ಗೌರವದಿಂದ ಕರೆಯಿಸಿಕೊಂಡ ಸಸಖರಾಯಪಟ್ಟಣದಲ್ಲಿ ಆಶ್ರಮ ಹೊಂದಿದ್ದ ಗುರುನಾಥರ ಆಧ್ಯಾತ್ಮಿಕ ಸಾಧನೆ ಸಿದ್ದಿಯನ್ನು ಮನಮುಟ್ಟುವಂತೆ ಚಿತ್ರಿಸುವ ಶ್ರೀಗುರುಗಾಥಾ ಎಂಬ ಕೃತಿ. ೨೦೧೭ರಲ್ಲಿ ಮೊದಲು ಮುದ್ರಣವಾದ ಇದು ೨೦೨೨ರಲ್ಲಿ ಮರು ಮುದ್ರಣ ಕಂಡಿರುವುದು ಭಕ್ತರಿಂದ ಇದು ಪಡೆದ ಗೌರವಾದರವನ್ನು ತೋರಿಸುತ್ತದೆ, ಸಾಮಾನ್ಯವಾಗಿ ಇಂಥ ಆಧ್ಯಾತ್ಮಿಕ ಸಾಧಕರು ಮಾಡುವ ಕೆಲಸಗಳು ಜನತೆಗೆ ವಿಶೇಷವಾಗಿ ಕಾಣಿಸಿ ಅವರನ್ನು ಪವಾಡಪುರುಷರಂತೆ ನೋಡುವಂತೆ ಮಾಡುತ್ತದೆ. ಆದರೆ ಗುರುನಾಥರು ಭಕ್ತರಿಗೆ ಸರಿದಾರಿ ತೋರಿಸಲು ಕೆಲವೊಮ್ಮೆ ಇಂಥ ಪವಾಡಗಳನ್ನು ಮಾಡಿದ್ದಿದೆ, ಅವರ ದೇಹ ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ ಅವರ ಅಮರ ಚೈತನ್ಯ ಭಕ್ತರೊಂದಿಗೆ ಸದಾಕಾಲ ಇರುತ್ತದೆ ಎಂಬ ನಿದರ್ಶನಗಳು ಇಲ್ಲಿವೆ, ಭಕ್ತರು ಹೇಳುವಂತೆ ಗುರುನಾಥರು ಭಕ್ತರ ಮನಸ್ಸಿಗೆ ಸಮಾಧಾನ ಮಾಡಲು ಏಕಕಾಲಕ್ಕೆ ಸಾಕಷ್ಟು ದೂರದಲ್ಲಿರುವ ಊರುಗಳಲ್ಲಿ ಏಕಕಾಲಕ್ಕೆ ಬೇರೆ ಬೇರೆ ರೂಪಗಲ್ಲಿ ದರ್ಶನ ಕೊಟ್ಟಿದ್ದಿದೆ. ಪವಾಡ ಮಾಡಿ ಜನರನ್ನು ಮರಳು ಗೊಳಿಸಲು ಅವರು ಹೀಗೆ ಮಾಡುತ್ತಿರಲಿಲ್ಲ, ಬದಲಾಗಿ ಜನರ ಒಳಗಣ್ಣು ತೆರೆಸಲು ಹಾಗೂ ಗುರು ದೇವ ಭಾವದ ಬಗ್ಗೆ ಜನರಲ್ಲಿ ಸೂಕ್ತ ಅರಿವು ಮೂಡಿಸುವ ಉದ್ದೇಶದಿಂದ ಇಂಥ ದರ್ಶನ ಕೊಡುತ್ತಿದ್ದರೆಂದು ಕೃತಿ ಓದಿದಾಗ ಅರಿವಾಗುತ್ತದೆ. ಇಂಥ ಯಾವುದೇ ಪವಾಡ ಮಾಡದೇ ಜನರಲ್ಲಿ ಮೌನದಿಂದಲೇ ಸಂವಾದ ನಡೆಸಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ ರಮಣ ಮಹರ್ಷಿಗಳಂಥ ಗುರುಗಳೂ ಈ ನೆಲದಲ್ಲಿ ಆಗಿಹೋಗಿದ್ದಾರೆ. ಇಂಥವರನ್ನೂ ನಮ್ಮ ಜನ ಮರೆತಿಲ್ಲ, ಪವಾಡಗಳ ಮೂಲಕ ಜನರನ್ನು ಸೆಳೆಯುವ ಕಾರಣಕ್ಕಾಗಿ ಪವಾಡ ಮಾಡುತ್ತಿದ್ದ ಸಾಧಕರೂ ನಮ್ಮಲ್ಲಿ ಆಗಿಹೋಗಿದ್ದಾರೆ ಇಂಥವರಲ್ಲಿ ಪುಟ್ಟಪರ್ತಿಯ ಸಾಯಿಬಾಬಾ ಒಬ್ಬರು, ಆದರೆ ಆಧ್ಯಾತ್ಮದ ಹೆಸರಲ್ಲಿ ಕೆಲವು ಪವಾಡಗಳನ್ನು ಜಾದೂಗಾರರಂತೆ ಕಲಿತು ಜನಸಾಮಾನ್ಯರನ್ನು ಮರಳು ಮಾಡಿ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದ ಸಾಧಕರೆಂದುಕೊಂಡ ಜನರಿಗೂ ನಮ್ಮ ಸಮಾಜದಲ್ಲಿ ಕೊರತೆ ಇಲ್ಲ, ಇಂಥವರ ನಡುವೆ ಭಿನ್ನವಾಗಿ ನಿಲ್ಲುವವರು ಗುರುನಾಥರು. ಇವರ ಸರಳತೆ, ಮತ ಭೇದವಿಲ್ಲದ, ಸಮಾನತೆಯ ದೃಷ್ಟಿಕೋನ ಮೊದಲಾದವು ಆಧುನಿಕ ಸಮಾಜದಲ್ಲಿದ್ದ ಅನೇಕ ಕುರುಡು ಮನೋಭಾವವನ್ನು ಹೊಡೆದೋಡಿಸಿತು. ಅವರ ಭಕ್ತಗಣ ಕೂಡ ಸಮಾನತೆಯನ್ನು ಅನುಸರಿಸುವಂತೆ ಅವರು ಬೋಧಿಸದೇ ನಡೆದು ತೋರಿಸಿದರು ಎಂಬುದು ವಿಶೇಷ.

ಪ್ರಸ್ತುತ ಕೃತಿಯಲ್ಲಿ ಒಟ್ಟೂ ೫೩ ಅಧ್ಯಾಯಗಳಿದ್ದು, ಇವುಗಳನ್ನು ಮೊದಲ ಅಧ್ಯಾಯದಿಂದ ಕ್ರಮವಾಗಿಯೇ ಓದಬೇಕಾದ ಅಗತ್ಯವಿಲ್ಲ, ವಿಷಯಾನುಕ್ರಮಣಿಕೆಯಲ್ಲಿ ಓದುಗರು ತಮಗೆ ಇಷ್ಟವಾದ ಅಥವಾ ಕುತೂಹಲಕರ ಅನಿಸಿದ ಯಾವುದೇ ಅಧ್ಯಾಯವನ್ನು ಹಿಂದೆ ಮುಂದೆ ಮಾಡಿಕೊಂಡು ಓದಿ ಆನಂದಿಸಬಹುದು, ಏಕೆಂದರೆ ಇಲ್ಲಿನ ಅಧ್ಯಾಯಗಳನ್ನು ವಿಷಯಾನುಸಾರ ವಿಂಗಡಿಸಿಕೊಳ್ಳಲಾಗಿದೆ, ಹಾಗಾಗಿ ಕ್ರಮಾನುಗತ ಬೆಳವಣಿಗೆಯಾಗಲೀ ಅಧ್ಯಾಯಗಳ ಪರಸ್ಪರ ಜೋಡಣೆಯ ಅಗತ್ಯವಾಗಲೀ ಇವುಗಳಿಗೆ ಬೇಕಿಲ್ಲ. ಆದರೆ ಒಂದೊಂದು ಅಧ್ಯಾಯವೂ ಸೊಗಸಾದ ಕಾದಂಬರಿ ಅಥವಾ ಪತ್ತೇದಾರಿ ಶೈಲಿಯಲ್ಲಿ ಇರುವುದರಿಂದ ಯಾವ ಅಧ್ಯಾಯವನ್ನೂ ಯಾರೂ ಕೈಬಿಡದೇ ಓದುತ್ತಾರೆಂದು ಖಚಿತವಾಗಿ ಹೇಳಬಹುದು. ಮೊದಲ ಮೂರು ಅಧ್ಯಾಯಗಳನ್ನು ಲೇಖಕರು ಕೃತಿಯ ಶೈಲಿಯನ್ನು ಸ್ಥಾಪಿಸಲು ಪೀಠಿಕೆಯ ರೂಪದಲ್ಲಿ ಹೇಳಿದ್ದಾರೆ ಮುಂದೆ ಗುರುನಾಥರ ಜೀವನ ಸಾಧನೆಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ, ಅದರಲ್ಲೂ ಗುರುನಾಥರು ನಂಬಿ ಬಂದ ಭಕ್ತರ ಕಷ್ಟ ಕಾರ್ಪಣ್ಯವನ್ನು ಕೆಲವೊಮ್ಮೆ ಕೇಳಿ ಕೆಲವೊಮ್ಮೆ ಸ್ವತಃ ತಿಳಿದು ಪರಿಹಾರ ಕೊಡುತ್ತಿದ್ದರು, ಇವೆಲ್ಲ ಬಡವರಿಗೆ ಶ್ರೀಮಂತರಿಗೆ ಎಂಬ ಭೇದ ಇರುತ್ತಿರಲಿಲ್ಲ, ಗುರುವಿಗೆ ಎಲ್ಲ ಭಕ್ತರೂ ಒಂದೇ, ಸಮಸ್ಯೆಗಳಿಗೆ ಪರಿಹಾರ ಮಾರ್ಗ ಕೂಡ ಸಮಾನ ಎಂಬುದು ಗುರುಗಳ ಆದರ್ಶ, ಕೃತಿಯ ಅಂತ್ಯದಲ್ಲಿ ಗುರುಗಳ ಉಪದೇಶ ಸಾರದಲ್ಲಿ ಮುಖ್ಯವಾದ ೨೬ ಮಾತುಗಳನ್ನು ಕೊಡಲಾಗಿದೆ. ಪರಿಶಿಷ್ಟ ಭಾಗದಲ್ಲಿ ಇದರ ಜೊತೆಗೆ ಶ್ರೀ ದತ್ ಅವಧೂತರು ಭಕ್ತರಿಗಾಗಿ ರಚಿಸಿಕೊಟ್ಟ ೨೮೯ ಶ್ಲೋಕಗಳಲ್ಲಿ ೨೬ ಶ್ಲೋಕಗಳಿಗೆ ಮಾತ್ರ ಅರ್ಥವತ್ತಾದ ವಿವರ ಪೂರ್ಣ ಅನುವಾದ ಕೊಡಲಾಗಿದೆ, ಇದನ್ನು ಓದಿದರೆ ಸದರಿ ಲೇಖಕರು ಉಳಿದ ಶ್ಲೋಕಗಳಿಗೂ ಇಂಥ ವಿವರ ಕೊಡಬಾರದೇ ಅನಿಸುತ್ತದೆ, ಇವನ್ನು ಬಿಟ್ಟು ಅವತರಣಿಕೆಯಲ್ಲಿ ಗುರುನಾಥರು ಸಾಂಪ್ರದಾಯಿಕ ಮದುವೆಗೆ ಬದಲಾಗಿ ವಧೂವರರಲ್ಲಿ ಪರಸ್ಪರ ನಂಬಿಕೆ ಇದ್ದರೆ ಎರಡೂ ಕಡೆಯ ಪೋಷಕರಿಗೆ ಹೊರೆ ಆಗದಂತೆ ವಿಧಿವತ್ತಾಗಿ ಮದುವೆ ಮಾಡುವುದು ಹೇಗೆ, ಅದನ್ನು ಪ್ರತಿಪಾದಿಸುವ ಅಗತ್ಯ ಏಕಿದೆ ಎಂದು ಹೇಳಿದ ಮಾತುಗಳು ದಾಖಲಾಗಿವೆ, ಗುರೂಪದೇಶವಂತೂ ಆಧುನಿಕ ಪ್ರಪಂಚದಲ್ಲಿ ಈ ಮಾತುಗಳನ್ನು ಅಳವಡಿಸಿಕೊಂಸರೆ ಬೇರೆ ಯಾವ ಭಗವದ್ಗೀತೆಯ ಅಗತ್ಯವಾಗಲೀ ಧರ್ಮಗ್ರಂಥಗಳ ಅಗತ್ಯವಾಗಲೀ ಇರುವುದೇ ಇಲ್ಲ, ಅಷ್ಟೇ ಅಲ್ಲದೇ ಸಮಾಜದ ಎಲ್ಲರೂ ಈ ಮಾತುಗಳಂತೆ ನಡೆದುಕೊಂಡರೆಯಾವುದೇ ಪೊಲೀಸ್ ಠಾಣೆ, ನ್ಯಾಯಾಲಯವಾಗಲೀ ಪಂಚಾಯ್ತಿ ಕಟ್ಟೆಗಳ ಅಗತ್ಯವಾಗಲೀ ಕಾನೂನು ಶಿಕ್ಷೆಗಳ ಪ್ರಶ್ನೆಯಾಗಲೀ ಉದ್ಭವಿಸುವುದೇ ಇಲ್ಲ. ಅಷ್ಟು ಆದರ್ಶಪ್ರಾಯವಾದ ನುಡಿಗಳು ಇವಾಗಿವೆ. ಈ ದೃಷ್ಟಿಯಿಂದ ಈ ಕೃತಿಯನ್ನು ಒಮ್ಮೆ ಓದಿ ಬದಿಗೆ ಇಡುವಂಥದ್ದಲ್ಲ, ಆಗಾಗ ತಿರುವಿಹಾಕಬೇಕಾದ ಗಗ್ರಂಥ ಈ ದೃಷ್ಟಿಯಿಂದ ನಿಜಕ್ಕೂ ಇದು ಪಾರಾಯಣ ಯೋಗ್ಯವಾದ ಪುಸ್ತಕವೇ ಹೌದು. ಕೆಲವು ಸಂದರ್ಭಗಳನ್ಮು ಓದಿ ಮೆಲುಕು ಹಾಕುತ್ತಿದ್ದರೆ ಛೆ ನಾವು ಗುರುಗಳ ಕಾಲದಲ್ಲಿಯೇ ಈ ಪ್ರಪಂಚದಲ್ಲಿದ್ದರೂ ಅವರ ಕೃಪೆಗೆ ಪಾತ್ರವಾಗುವ ಭಾಗ್ಯ ಸಿಗದೇ ಹೋಯಿತಲ್ಲ ಅಂಥ ಪಾಪವನ್ನು ನಾವೇನು ಮಾಡಿದ್ದೆವೋ ಎಂಬ ಅನ್ನುವ ಪಾಪ ಪ್ರಜ್ಞೆ ಕಾಡದೇ ಇರುವುದಿಲ್ಲ, ನನ್ನ ಅದೃಷ್ಟಕ್ಕೆ ಮೈಸೂರಿನಲ್ಲಿ ನಾವು ಬಾಡಿಗೆಗೆ ಮನೆಯ ಜನ ಗುರು ಬಂಧುಗಳಾಗಿದ್ದರು. ಅವರು ಆಗಾಗ ಸಕ್ಕರೆ ಪಣ್ನಕ್ಕೆ ಹೋಗ್ತೇವೆ ಅನ್ನುತ್ತಿದ್ದರು ನಾನು ಅವರ ಬಾಯಲ್ಲಿ ಮೊದಲ ಬಾರಿಗೆ ಗುರುಗಳ ಬಗ್ಗೆ ಕೇಳಿದ್ದೆ, ಒಮ್ಮೆ ಮೈಸೂರಿನ ಖ್ಯಾತ ಅಯ್ಯಂಗಾರ್ ಮೆಸ್ ಬಲ್ಲಿ ಊಟ ಮಾಡುತ್ತಿದ್ದಾಗ ಗುರು ಭಕ್ತರೊಬ್ಬರ ಜೊತೆ ಆ ಮೆಸ್ ನ ಮೂಲುಯೊಂದರಲ್ಲಿ ಸಾಮಾನ್ಯವಾಗಿ ಅವರು ತೊಟ್ಟಿರುತ್ತಿದ್ದ ಕೆಂಪು ಬಣ್ಣದ ಟವೆಲ್ ಸುತ್ತಿಕೊಂಡು ನಿಂತಿದ್ದ ಸಂನ್ಯಾಸಿಯೊಬ್ಬರಿದ್ದರು ಆ ಮೇಲೆ ಆ ಭಕ್ತರನ್ನು ಅವರು ಯಾರೆಂದು ಕೇಳಿ ತಿಳಿದುಕೊಂಡೆ, ಅವರೇ ಗುರುನಾಥರು ಎಂದು ತಿಳಿಯಿತು, ಈಗ ಆ ಚಿತ್ರವನ್ನು ಮತ್ತೆ ಮತ್ತೆ ನೆನೆಯುತ್ತೇನೆ. ಅವರು ನಿಂತ ಭಂಗಿ ನನ್ನ ಕಣ್ಣ ಮುಂದೆ ಇಂದಿಗೂ ಅಚ್ಚೊತ್ತಿದಂತೆ ಇದೆ. ಅಷ್ಟೇ ನನ್ನ ಪಾಲಿನ ಭಾಗ್ಯ ಅಂದುಕೊಂಡು ಕೊರಗುತ್ತೇನೆ ಗುರುಗಳು ಆಗಾಗ ಭಕ್ತರಿಗೆ ಹೇಳುತ್ತಿದ್ದರಂತೆ ನಮ್ಮ ಸಂಬAಧ ಎಪ್ಪತ್ತು ಜನ್ಮದ್ದೆಂದು. ಈ ಪ್ರಕಾರ ನೋಡಿದರೆ ನನ್ನ ಮತ್ತು ಗುರುಗಳ ಸಂಬAಧ ಕ್ಕೆ ಇದೇ ಮೊದಲ ಜನ್ಮದ್ದಿರಬಹುದು, ಇನ್ನು ೫೯ ಜನ್ಮಗಳಲ್ಲಿ ಅದು ಬೆಳೆಯುತ್ತಾ ಮುಕ್ತಿ ಪಡೆಯಲು ಇನ್ನೂ ಅಷ್ಟು ಜನ್ಮ ಕಾಯಬೇಕಿದೆ ಅಂದುಕೊಂಡಾಗ ದುಃಖವಾಗುತ್ತದೆ, ಏನು ಮಾಡುವುದು, ಹೇಳುತ್ತಾರಲ್ಲ, ಯೋಗಿ ಪಡೆದದ್ದು ಯೋಗಿಗೆ, ಜೋಗಿ ಪಡೆದದ್ದು ಜೋಗಿಗೆ ಹಾಗೆ ಇದು, ಯಾರೂ ಏನೂ ಮಾಡಲಾಗದು, ನನಗೆ ಅಂದು ಹಾಗೆ ಕಾಣಿಸಿಕೊಂಡವರೇ ಗುರುನಾಥರೆಂದು ಆಗಲೇ  ಗೊತ್ತಾಗಿದ್ದರೆ ಬಹುಶಃ ಹೆಚ್ಚೆಂದರೆ ಅವರ ಪಾದಪದ್ಮಗಳಿಗೆ ಬೀಳುತ್ತಿದ್ದೆ. ಹೆಚ್ಚೆಂದರೆ ಅವರು ಏನಾದರೂ ಆದೇಶ ಮಾಡಿದ್ದರೆ ಅನುಸರಿಸುತ್ತಿದ್ದೆ, ಇನ್ನೇನೂ ಮಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ, ಬಹುಶಃ ಇದರ ಗುಟ್ಟು ಮುಂದೆ ಏನಿದೆ ಎಂಬುದು ಗುರುಗಳಿಗೆ ತಿಳಿದಿತ್ತು ಅನಿಸುತ್ತದೆ, ಆಗ ನನ್ನ ಕಾಲ ಕೂಡಿಬಂದಿಲ್ಲವೆಂದು ತಿಳಿದು ಅಷ್ಟಕ್ಕೇ ಬಿಟ್ಟು ಸುಮ್ಮನೇ ನನ್ನನ್ನು ನೋಡಿದ್ದರು ಅನಿಸುತ್ತದೆ. ಗೊತ್ತಿಲ್ಲ ಭವಿಷ್ಯದಲ್ಲಿ ಗುರುಗಳು ನನ್ನ ಪಾಲಿಗೆ ಯಾವ ಗಂಟು ಇಟ್ಟಿದ್ದಾರೋ? ಅದರಲ್ಲಿ ಏನಿದೆಯೋ? ನಾನೂ ಕಾಯುತ್ತಿದ್ದೇನೆ, ಇಲ್ಲದಿದ್ದರೆ ನನಗೆ ಆ ಕಾಲದಲ್ಲಿ ಅಷ್ಟೇ ಬಾಂಧವ್ಯ ಕೂಡಿದ್ದೇಕೆ. ಏಕೆ ಅದು ಮುಂದರಿಯಲಿಲ್ಲ? ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಈ ಎಲ್ಲ ದೃಷ್ಟಿಯಿಂದ ಈ ಕೃತಿ ಓದುಗರನ್ನು ಬಿಟ್ಟೂ ಬಿಡದೇ ತನ್ನೊಂದಿಗೆ ಸೆಳೆದುಕೊಂಡು ಹೋಗುತ್ತದೆ.

ಇದಾದ ಅನಂತರ ನೇರ ಸಂಪರ್ಕ ಪಡೆದಿದ್ದ ಗುರುಬಂಧುಗಳಿಂದ ಗುರುನಾಥರ  ಅನೇಕ ಮಹಿಮೆಗಳನ್ನು ಕಣ್ಣು ಬಾಯಿ ಬಿಟ್ಟು ಆಲಿಸಿದ್ದೇನೆ, ಇದನ್ನೆಲ್ಲ ಗಮನಿಸಿದರೆ ಗುರುಗಳ ಜೊತೆ ನನ್ನ ಬಂಧುತ್ವ ಆಗುವುದಿದೆ ಅನಿಸುತ್ತದೆ, ಕಾಲ ಕೂಡಿ ಬಂದಿಲ್ಲ, ಕಾಯ ಬೇಕಲ್ಲ, ಇವೆಲ್ಲ ಆಗುವಂಥವಲ್ಲ, ಘಟಿಸುವಂಥವು, ಈ ನಂಬಿಕೆ ನನಗಿದೆ, ಕಾಯುತ್ತಿದ್ದೇನೆ. ಆದರೆ ಅವರ ಈ ಉಪದೇಶ ಕೃತಿಗೆ ಯಾವ ಓದುಗರೂ ಕಾಯುವ ಅಗತ್ಯವಿಲ್ಲ, ೯೪೪೮೦೯೩೮೩೦ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ಮಾಹಿತಿ ಪಡೆದು ಪುಸ್ತಕ ತರಿಸಿಕೊಳ್ಳಬಹುದು, ಇದಕ್ಕೆ ತಡವಾಗುವುದಿಲ್ಲ.ಭಕ್ತರು ಇಷ್ಟು ಮಾಡಿ ಸಾಕು.


ಕೃತಿಯ ವಿವರ

ಶ್ರೀ ಗುರುಗಾಥಾ

ಲೇಖಕರು - ಅ ನಾಗರಾಜ್, ಪ್ರಕಾಶಕರು-ಪ್ರಕೃತಿ ಪ್ರಕಾಶನ, ವಿದ್ಯುತ್ ನಗರ. ಹಾಸನ. ಮೊಬೈಲ್- ೯೪೪೮೦೯೩೮೩೦/೯೬೬೩೬೩೩೯೬೮

ಮೊದಲ ಮುದ್ರಣ - ೨೦೧೭, ಎರಡನೆಯ ಮುದ್ರಣ- ೨೦೨೨

ಬೆಲೆ-ರೂ-೩೦೦



 


Tuesday, 25 November 2025

ಮನುಷ್ಯನಿಗೆ ಮುಳುವಾಗುತ್ತಿರುವ ಚಟುವಟಿಕೆಗಳು


ನಿಸರ್ಗದ ವ್ಯವಹಾರದಲ್ಲಿ ಮನುಷ್ಯ ಕೈಯಾಡಿಸಿದಷ್ಟೂ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತದೆ ಎಂಬುದಕ್ಕೆ ಈಗ ಎದುರಾಗಿರುವ ಸಮಸ್ಯೆ ತಾಜಾ ನಿದರ್ಶನ. ಇದು ವಿಚಿತ್ರವೂ ಇಂದಿನ ಜನತೆ ನಂಬಲಾಗದ ವಾಸ್ತವವೂ ಆಗಿದೆ. ಕಳೆದ ನಾಲ್ಕಾರು ದಶಕಗಳಿಂದ ನಾವೆಲ್ಲ ಜನಸಂಖ್ಯೆಯ ಹೆಚ್ಚಳ ಸಮಾಜಕ್ಕೆ ಅಪಾಯಕರ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಾ ಕೇಳುತ್ತಾ ಓದುತ್ತಾ ಬಂದಿದ್ದೇವೆ. ಆದರೆ ಇದು ಅಷ್ಟು ನಿಜವಲ್ಲ ಎಂಬುದು ಈಗ ಸಾಬೀತಾಗಿದ್ದು ಮಾತ್ರವಲ್ಲ, ಸಂಪೂರ್ಣ ನಿಯಂತ್ರಣಕ್ಕೆ ಬಂದ ಮಾನವ ಜನನ ಪ್ರಮಾಣ ಉಂಟು ಮಾಡಿರುವ ಹೊಸ ಸಮಸ್ಯೆಯಿಂದ ಬೇಸತ್ತ ಅನೇಕ ದೇಶಗಳು ತಮ್ಮ ಸಮಾಜ ಉಳಿಸಿಕೊಳ್ಳಲು ಹೆಚ್ಚು ಮಕ್ಕಳನ್ನು ಪಡೆಯುವ ದಂಪತಿಗಳಿಗೆ ಉತ್ತೇಜನ ನೀಡತೊಡಗಿವೆ.

ನಮ್ಮ ದೇಶ ಕೂಡ ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡಿದೆ. ಸಮಸ್ಯೆ ಏನು? ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಒಂದೆರಡು ದಶಕಗಳಲ್ಲಿ ದೇಶವನ್ನು ನಿರೀಕ್ಷಿತ ಅಭಿವೃದ್ಧಿಯತ್ತ ಒಯ್ಯಲು ಜನಸಂಖ್ಯೆ ಅಡ್ಡಿ ಎಂದು ಭಾವಿಸಿ ಅದನ್ನು ಎಲ್ಲ ಕಡೆ ಪ್ರಚಾರ ಮಾಡಿ ಕುಟುಂಬವೊಂದರಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವುದು ಅಪಹಾಸ್ಯಕಾರಕ ಎಂಬ ಭಾವನೆ ಹುಟ್ಟಿಸಲಾಯಿತು. ಪರಿಣಾಮವಾಗಿ ಯಾವುದೇ ಕುಟುಂಬ ತಮಗೆ ಒಂದಕ್ಕಿಂತ ಹೆಚ್ಚು ಮಕ್ಕಳಿವೆ ಎಂದು ಹೇಳಿಕೊಳ್ಳಲು ನಾಚುವಂತಾಯಿತು, ಅಕಸ್ಮಾತ್ ಮೂರನೆಯ ಮಗು ಬರಲಿದೆ ಎಂದು ತಿಳಿದರೆ ಅದನ್ನು ಗರ್ಭದಲ್ಲೇ ಚಿವುಟುವ ಪ್ರಮಾಣ ಕೂಡ ಅಧಿಕೃತವಾಗಿ ನಡೆಯತೊಡಗಿತು. ಆದರೆ ನಮ್ಮ ಪರಂಪರೆಯಲ್ಲಿ ಮನೆ ತುಂಬ ಮಕ್ಕಳಿರಲಿ ಎಂದು ಹೇಳಿಕೊಂಡು ಅನುಸರಿಸಿಕೊಂಡು ಬರಲಾಗುತ್ತಿತ್ತು. ಅದು ಸಹಜ ಎಂಬಂತೆ ಪರಿಗಣಿತವಾಗಿತ್ತು.ಆದರೆ ೧೯೬೦ರ ದಶಕದ ಅನಂತರ ಹೆಚ್ಚು ಮಕ್ಕಳನ್ನು ಹೊಂದಿದವರು ಪ್ರಾಣಿಗಳಿಗೆ ಸಮ ಎಂಬ ಭಾವನೆ ಹುಟ್ಟಿಸಲಾಯಿತು. ಜನಜಾಗೃತಿ ಉಂಟು ಮಾಡಲಾಯಿತು, ಜೊತೆಗೆ ಇದಕ್ಕೆ ಪೂರಕವಾಗಿ ಸಾಮಾಜಿಕ ಔದ್ಯೋಗಿಕ ಸಮಸ್ಯೆಗಳು ಆಡಳಿತಾತ್ಮಕ ವೈದ್ಯಕೀಯ ಸಂಗತಿಗಳು ಕೋಡಿಕೊಂಡು ಜನಸಂಖ್ಯೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿತುಸಾಲದ್ದಕ್ಕೆ ವಿಶ್ವಸಂಸ್ಥೆ ಕೂಡ ಇದಕ್ಕೆ ಕೈ ಜೋಡಿಸಿ ಯಾವ ದೇಶದಲ್ಲಿ ಜನಸಂಖ್ಯೆ ಏರುತ್ತಿದೆ ಎಂಬ ಎಚ್ಚರವನ್ನು ಕೊಡುತ್ತ ಇಂಥ ದೇಶಕ್ಕೆ ಭವಿಷ್ಯವಿಲ್ಲ ಎಂಬಂತೆ ಬಿಂಬಿಸತೊಡಗಿತು.

ಹತ್ತಾರು ದಶಕಗಳ ಹಿಂದೆ ಸಿಡುಬು, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳ ಕಾರಣದಿಂದ ಯುದ್ಧಗಳ ಕಾರಣದಿಂದ ಒಂದು ಮನೆಯಲ್ಲಿ ಜನಿಸಿದ್ದ ಹತ್ತಾರು ಮಕ್ಕಳಲ್ಲಿ ಒಂದೋ ಎರಡೋ ಮಕ್ಕಳು ಮಾತ್ರ ತಮ್ಮ ಆಯಸ್ಸಿನ ಅರ್ಧ ವಯಸ್ಸು ದಾಟುತ್ತಿದ್ದರೆ ಅದೇ ಹೆಚ್ಚಾಗಿತ್ತುಮರಣ ಪ್ರಮಾಣ ಜಾಸ್ತಿ ಇದ್ದ ಕಾರಣ ಹೆಚ್ಚು ಮಕ್ಕಳನ್ನು ಪಡೆಯಲು ಸಮಾಜ ಒಪ್ಪಿಗೆ ನೀಡಿತ್ತು. ಆದರೆ ಈಗ ವೈಜ್ಞಾನಿಕ, ವೈದ್ಯಕೀಯ ಬೆಳವಣಿಗೆಯ ಕಾರಣದಿಂದ ಸಾಂಕ್ರಾಮಿಕ ಕಾಹಿಲೆಗಳು ಹಾಗೂ ಯುದ್ಧ   ಸಮಸ್ಯೆಗಳ ಸ್ವರೂಪ ಬದಲಾಗಿ ಮರಣ ಪ್ರಮಾಣ ಕುಸಿದಿರುವುದರಿಂದ ಕಡಿಮೆ ಸಂಖ್ಯೆಯಲ್ಲಿ ಮಕ್ಕಳನ್ನು ಪಡೆಯುವುದನ್ನು ಸಮಾಜ ಅನುಮೋದಿಸಿತು ಆದರೆ ಇದರ ದುಷ್ಪರಿಣಾಮವನ್ನು ಗುರುತಿಸಲು ನಾವೆಲ್ಲ ವಿಫಲವಾದೆವು. ಈಗ ಸಮಾಜದಲ್ಲಿ ಜನಸಂಖ್ಯೆಯ ಹಂಚಿಕೆ ಹಾಗೂ ಎಲ್ಲ ವಯೋಮಾನದ ಜನತೆಯ ಲಭ್ಯತೆ ಇಲ್ಲದ ಕಾರಣ ಅದರ ಅಡ್ಡ ಪರಿಣಾಮ ಎದ್ದು ಕಾಣತೊಡಗಿದೆ. ನಮ್ಮ ದೇಶದ ಬಹಳಷ್ಟು ಹಳ್ಳಿಗಳಲ್ಲಿ ದುಡಿಯುವ ಶಕ್ತಿ ಇರುವ ಯುವ ಶಕ್ತಿ ಇಲ್ಲದೇ ಕೇವಲ ವೃದ್ಧರು ಇರುವಂತಾಗಿ ಅಲ್ಲಿ ಯಾವುದೇ ಚಟುವಟಿಕೆ ಇಲ್ಲದೇ ಹಳ್ಳಿಗಳು ನಾಶದ ಅಂಚಿಗೆ ಬಂದು ನಿಂತಿವೆ. ಮಧ್ಯವಯಸ್ಸಿನ ಜನತೆಯ ಪ್ರಮಾಣದ ಕೊರತೆಯಿಂದ ಕೈಗಾರಿಕೆಗಳು ಸಮಸ್ಯೆ ಎದುರಿಸುತ್ತಿವೆ, ಸಮಾಜದಲ್ಲಿ ಉದ್ಯೋಗ ಸ್ಥಾನಗಳು ಖಾಲಿ ಇರುವಂತಾಗಿ ನಿರೀಕ್ಷೆಯ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಕೃಷಿ ಚಟುವಟಿಕೆಗಳು ಸ್ಥಗಿತವಾಗುವ ಪರಿಸ್ಥಿತಿ ತಲುಪಿವೆ. ಊಟ ಮಾಡುವ ವೃದ್ಧರು ಮತ್ತು ಕೈಲಾಗದ ಮಕ್ಕಳ ಸಂಖ್ಯೆ ಏರುತ್ತಿದ್ದು ಸಮಾಜದ ಭವಿಷ್ಯದ ಮೇಲೆ ಕರಿ ನೆರಳು ಬೀಳುತ್ತಿದೆ. ಇದು ಆತಂಕಕಾರಿ. ಸಾಲದ್ದಕ್ಕೆ ಸಮರ್ಥ ಯುವ ಜನತೆ ಕೂಡ ಮಕ್ಕಳನ್ನು ಪಡೆಯಲು ಹಿಂದೇಟು ಹಾಕುತ್ತಿದೆ, ಇದಕ್ಕೆ ಕಾರಣ ಅವರವರ ಉದ್ಯೋಗ ಭವಿಷ್ಯ ಹಾಗೂ ಆರ್ಥಿಕ ಅಸ್ಥಿರತೆ. ಇದರ ಜೊತೆಗೆ ಭಾರತದಂಥ ದೇಶದಲ್ಲಿ ವೈದ್ಯಕೀಯ ಬೆಳವಣಿಗೆಯ ಕಾರಣದಿಂದ ಮಕ್ಕಳನ್ನು ಪಡೆಯಲು ಗಂಡು ಹೆಣ್ಣು ಇಬ್ಬರೂ ಅಗತ್ಯ ಎಂಬ ಭಾವನೆ ಅಳಿಸಿ ಹೋಗಿ ತಮ್ಮ ಸಮರ್ಥ ಅಂಡಾಣು ವೀರ್ಯಾಣುಗಳನ್ನು ಶೀತಲ ಪೆಟ್ಟಿಗೆಯಲ್ಲಿ ದಶಕಗಳ ಕಾಲ ವೈದ್ಯಕೀಯ ನಿಗ್ರಹಣೆಯಲ್ಲಿ ನೋಡಿಕೊಂಡು ಬೇಕಾದಾಗ ಅವನ್ನು ಜೋಡಿಸಿ ಮಕ್ಕಳನ್ನು ಪಡೆಯುವ ವ್ಯವಹಾರಕ್ಕೆ ನವದಂಪತಿಗಳು ಮುಂದಾಗುತ್ತಿವೆ, ಇದರಿಂದ ಸಹಜವಾಗಿರಬೇಕಿದ್ದ ಜನಸಂಖ್ಯಾ ಹಂಚಿಕೆ ಏರುಪೇರಾಗುತ್ತಿದೆ. 

ಜನಸಂಖ್ಯೆಯ ಅಸಮಹಂಚಿಕೆ ಮತ್ತು ಯುವಕರ ಅಲಭ್ಯತೆಯ ಸಮಸ್ಯೆ ಕಲೆಸಂಸ್ಕೃತಿಗಳ ಮೇಲೆಯೂ ಆಗುತ್ತಿದೆ. ಯಕ್ಷಗಾನ, ನಾಟ್ಯ ಮೊದಲಾದ ಕ್ಷೇತ್ರಗಳಿಗೆ ದೈಹಿಕ ಶಕ್ತಿಯುಳ್ಳ ಯುವ ಪ್ರತಿಭೆಗಳು ಬೇಕಾಗುತ್ತದೆ. ಆದರೆ ಅವರ ಅಲಭ್ಯತೆಯ ಕಾರಣದಿಂದ ಈ ಕ್ಷೇತ್ರಗಳು ಸೊರಗತೊಡಗಿವೆ, ಇರುವ ಬೆರಳೆಣಿಕೆಯ ಯುವ ಜನತೆ ದೈಹಿಕ ಶ್ರಮವಿಲ್ಲದ ಉದ್ಯೋಗಗಳನ್ನು ಪಡೆದು ಅಲ್ಲಿ ತುಂಬಿಕೊಳ್ಳುತ್ತಿರುವುದು ಉಳಿದ ವಲಯಗಳ ಹಿಂದುಳಿಯುವಿಕೆಗೆ ಕಾರಣವಾಗುತ್ತಿದೆ, ಇದರ ತೀವ್ರ ಪರಿಣಾಮವನ್ನು ಈಗ ಜಪಾನ್‌ನಂಥ ದೇಶಗಳು ಎದುರಿಸುತ್ತಿದ್ದು ಅಲ್ಲಿ ಸರ್ಕಾರಗಳೇ ಜನತೆಗೆ ಹೆಚ್ಚು ಮಕ್ಕಳನ್ನು ಪಡೆಯುವಂತೆ ಪ್ರೋತ್ಸಾಹಿಸುತ್ತಿದೆ. ಅಲ್ಲಿ ಒಂದೆಡೆ ಆರ್ಥಿಕ ತಾಟಸ್ಥ್ಯ ಇದ್ದರೆ ಮತ್ತೊಂದೆಡೆ ವೃದ್ಧರ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಸಾಲದ್ದಕ್ಕೆ  ವೈದ್ಯಕೀಯ ಮುನ್ನಡೆಯಿಂದ ಮರಣ ಪ್ರಮಾಣ ಕುಸಿದು ಸರಾಸರ ವಯಸ್ಸಿನ ಏರಿಕೆ ಏರಿದ್ದು ವೃದ್ಧರ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರಕ್ಕೆ ಆರ್ಥಿಕ ಒಳಹರಿವು ಇಲ್ಲದೇ ವೆಚ್ಚ ನಿಭಾಯಿಸುವುದೂ ಕಷ್ಟವಾಗಿದೆ.ಒಟ್ಟಿನಲ್ಲಿ ವೃದ್ಧರು ಮತ್ತು ಮಕ್ಕಳ ನಿವರ್ಞಹಣೆ ದೊಡ್ಡ ತಲೆ ಬಿಸಿಯಾಗಿದೆ.

ಸದ್ಯ ಚೀನಾ ರಷ್ಯಾ ಮತ್ತು ಜಪಾನ್ ದೇಶಗಳು ಈ ಮೊದಲಿನ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಕಿತ್ತು ಪರ್ಯಾಯವಾಗಿ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಆರ್ಥಿಕ ಉತ್ತೇಜನ ತೆರಿಗೆ ವಿನಾಯ್ತಿ ಹಾಗೂ ವಿಶೇಷ ಸವಲತ್ತುಗಳನ್ನು ನೀಡತೊಡಗಿ ಜನಸಂಖ್ಯೆಯ ಗಾತ್ರವನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿವೆ. ಚೀನಾದಲ್ಲಿ ಹಿಂದೆ ಒಂದು ಮಗುವಿಗಿಂತ ಹೆಚ್ಚು ಮಕ್ಕಳಿದ್ದರೆ ತೀವ್ರ ಶಿಕ್ಷೆ ವಿಧಿಸುತ್ತಿದ್ದ ಸರ್ಕಾರ ಈಗ ಜನಸಂಖ್ಯೆ ಇಳಿಕೆಯ ಪರಿಣಾಮ ಎದುರಿಸಲಾಗದೇ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ವಿಶೇಷ ಸವಲತ್ತು ಕೊಡತೊಡಗಿದೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದ ಮಕ್ಕಳ ಜನನ ತಡೆದಿದ ಕಾರಣ ಅಲ್ಲಿ ಈಗ ಸಾಮಾಜಿಕ ಅಸುರಕ್ಷತೆ, ಆರ್ಥಿಕ ಅಭದ್ರತೆ, ಖರ್ಚುವೆಚ್ಚದ ಏರಿಕೆ, ಜೀವನ ನಿರ್ವಹಣೆಯ ದುರ್ಗತಿಗಳು ಕಾಣಿಸತೊಡಗಿವೆ. ಅಲ್ಲಿನ ಸೇನೆಯಲ್ಲಿ ಮುದುಕರೇ ಇರುವಂತಾಗಿದೆ. ಮಕ್ಕಳನ್ನು ಹೊಂದುವ ಶಕ್ತಿ ಮತ್ತು ಪ್ರಮಾಣ ಇಳಿದು ಸರ್ಕಾರಕ್ಕೆ ಭವಿಷ್ಯದ ಚಿಂತೆ ಕಾಡತೊಡಗಿದೆ. ಶ್ರಮಿಕ ವರ್ಗ ತೀವ್ರವಾಗಿ ಕುಸಿದಿದೆ, ಪರಿಣಾಮ ಸರ್ಕಾರಕ್ಕೆ ಆದಾಯವಿಲ್ಲದಂತಾಗಿದೆ. ಜನಸಂಖ್ಯಾ ನಿಯಮಕ್ಕೆ ಕಿವಿಗೊಡದ ಇಸ್ಲಾಂ ಧರ್ಮದ ಜನತೆ ಏರಿಕೆ ಕಂಡಿದ್ದ ಸ್ಥಳೀಯ ಮತ ಧರ್ಮಗಳ ಮೇಲೆ ಅಪಾಯದ ಗಂಟೆ ಬಾರಿಸತೊಡಗಿದೆ.ಇದರಿಂದ ಸಾಂಸ್ಕೃತಿಕ ಪರಿವರ್ತನೆ ಕಾಣಿಸತೊಡಗಿದೆ. ಸಾಲದ್ದಕ್ಕೆ ಈಚೆಗೆ ಅಬ್ಬರಿಸಿದ್ದ ಕೋವಿಡ್‌ಗೆ ಅನೇಕರು ಬಲಿಯಾಗಿ ಚಿಂತೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಹೆಚ್ಚು ಹೆಚ್ಚು ಸಾಂಪ್ರದಾಯಿಕ ಕುಟುಂಬ ಹೊಂದುವಂತೆ ಸರ್ಕಾರ ಪ್ರೇರೇಪಿಸುತ್ತಿದೆ. ಚೀನಾದಲ್ಲಿಸದ್ಯ ಇರುವ ೧.೪ ಶತಕೋಟಿ ಜನಸಂಖ್ಯೆ ೨೦೫೦ರ ವೇಳೆಗೆ ೧.೩ ಶತಕೋಟಿಗೆ ಕುಸಿಯಲಿದೆ ಅನಂತರ ಐವತ್ತು ವರ್ಷಗಳಲ್ಲಿ ೬೩೩ ದಶಲಕ್ಷಕ್ಕೆ ಕುಸಿಯಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಇದು ಚೀನಾದ ನಿದ್ರೆ ಕೆಡಿಸಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ದೇಶಕ್ಕೆ ಉಳಿಗಾಲವಿಲ್ಲವೆಂದು ಹೇಳಲಾಗುತ್ತಿದೆ. 

ನಿಸರ್ಗ ಮಾಡುವ ಕೆಲಸದಲ್ಲಿ ಮನುಷ್ಯ ಹಸ್ತಕ್ಷೇಪ ಮಾಡಿ ತನಗೆ ಗೆಲುವು ಸಿಗುತ್ತಿದೆ ಎಂದು ಭ್ರಮಿಸುತ್ತಾನೆ, ಆದರೆ ಅದರಿಂದ ಆಗುವ ದುಷ್ಪರಿಣಾಮ ಅವನ ಗಮನಕ್ಕೆ ಬರುವುದು ತಡವಾಗಿ ಇಂಥ ಅನೇಕ ಸಂದರ್ಭಗಳನ್ನು ಆತ ಸೃಷ್ಟಿಸಿಕೊಂಡಿದ್ದಾನೆ. ತನ್ನ ಜಾಣ್ಮೆ ಪ್ರದರ್ಶಿಸಲು ಆತ ನಿಸರ್ಗದಲ್ಲಿ ಪ್ರತಿಸೃಷ್ಟಿ ಎಂಬಂತೆ ರೊಬಟ್ ಎಂಬ ಪ್ರತಿ ಮಾನವನನ್ನು ಸೃಷ್ಟಿಸಿ ಅದಕ್ಕೆ ಕೃತಕ  ಯಾಂತ್ರಿಕ ಬುದ್ಧಿ ತುಂಬಿ ಮೆರೆದ, ಹತ್ತಾರು ಕಡೆ ಅದನ್ನು ಮನುಷ್ಯನಿಗೆ ಬದಲಾಗಿ ಬಳಸಿದ. ಈಗ ಆ ರೋಬಟ್‌ಗಳು ಇವನ ಕೈ ಮೀರಿ ಮನುಷ್ಯನಿಗೇ ಅಪಾಯಕಾರಿಯಾಗಿ ಬೆಳೆದಿವೆ. ಇಡೀ ಮನುಕುಲವನ್ನು ತನ್ನ ಶತ್ರುವಿನಂತೆ ರೊಬಟ್‌ಗಳು ಕಾಣತೊಡಗಿವೆ, ಸೇನೆಯಂಥ ಕಡೆ ಇರುವ ಸೈನಿಕ ರೊಬಾಟ್‌ಗಳು ಮನುಷ್ಯರ ವಿರುದ್ಧ ಶಸ್ತ್ರ ಹಿಡಿಯುತ್ತಿವೆ, ಇಡೀ ಮಾನವ ಕುಲವನ್ನು ನಾಶ ಮಾಡಲು ಹಠತೊಟ್ಟಂತೆ ಮಾಡುತ್ತಿವೆ, ಹೀಗಾದಲ್ಲಿ ಮನುಷ್ಯನ ಯಾವುದೇ ಅಸ್ತç ಶಸ್ತçಗಳಿಗೆ ಜಗ್ಗದಂತೆ ಮನುಷ್ಯನೇ ಸೃಷ್ಟಿಸಿಕೊಂಡ ರೊಬಾಟ್‌ಗಳು ಅವನ ಪಾಲಿಗೆ ಆಧುನಿಕ ಭಸ್ಮಾಸುರನಂತೆ ಆಗುತ್ತವೆ.

ಮನುಷ್ಯ ಮಾಡಿಕೊಂಡ ಆವಾಂತರ ನೋಡಿ - ಒಮ್ಮೆ ಸ್ವೇಚ್ಛೆಯಿಂದ ಅತಿಯಾಗಿ ವರ್ತಿಸಿದ, ಈಗ ಮತ್ತೆ ಸಂತಾನ ನಿಯಂತ್ರಣಕ್ಕೆ ಮುಂದಾಗಿ ಸಮಸ್ಯೆ  ಸಂಕಷ್ಟಕ್ಕೆ ಒಳಗಾಗಿದ್ದಾನೆ. ಸಾಲದ್ದಕ್ಕೆ ಕೃತಕ ಬುದ್ಧಿಮತ್ತೆಯ ರೊಬಾಟ್‌ಗಳನ್ನು ಸೃಷ್ಟಿಸಿಕೊಂಡು ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದಾನೆ. ಈ ಸವಾಲಿನಿಂದ ಹೊರಬರುವುದು ಸುಲಭವಲ್ಲ ಎಂದು ಅವನಿಗೆ ಅರಿವಾಗಿದೆ, ಆದರೆ ಮನುಷ್ಯ ಬಹಳ ಮುಂದೆ ಹೋಗಿಬಿಟ್ಟಿದ್ದಾನೆ. ಮುಂದೆ ಹೋಗುವ ದಾರಿ ಇಲ್ಲ. ಹಿಂದೆ ಬರಲಾಗದಂಥ ಇಕ್ಕಟ್ಟಿಗೆ ಸಿಲುಕಿದ್ದಾನೆ. ಇನ್ನು  ತಂತ್ರಜ್ಞಾನದ ಹೆಸರಲ್ಲಿ ಇಂಥ ತಲೆಹರಟೆ ಮಾಡುವುದನ್ನು ಬಿಟ್ಟು ನಿಸರ್ಗಕ್ಕೆ ಶರಣಾಗುವುದನ್ನು ಬಿಟ್ಟರೆ ಅವನಿಗೆ ಅನ್ಯ ಮಾರ್ಗವಿಲ್ಲ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ತನ್ನ ಬದುಕು ಹಸನು ಮಾಡಿಕೊಳ್ಳಲು ಬಳಸದೇ ಪ್ರಕೃತಿಯೊಂದಿಗೆ ಪೈಪೋಟಿ ನಡೆಸಲು ಬಳಸಿದ್ದು ಅವನ ಮೊದಲ ತಪ್ಪು. ನೈಸರ್ಗಿಕ ವಿದ್ಯಮಾನದಲ್ಲಿ ಹಸ್ತಕ್ಷೇಪ ಮಾಡದೇ ಇದ್ದಿದ್ದರೆ ಅವನಿಗೆ ಇಂಥ ಕೇಡುಗಾಲ ಬರುತ್ತಿರಲಿಲ್ಲ ಅನಿಸುತ್ತದೆ. ಇನ್ನಾದರೂ ಆತ ಪಾಠ ಕಲಿಯುವುದು ಒಳಿತು.

Sunday, 9 November 2025

ಕಬ್ಬಿನ ಬೆಲೆಯ ಸುತ್ತ


ಇದೀಗ ರಾಜ್ಯಾದ್ಯಂತ ಕಬ್ಬು ಬೆಳೆಗಾರರ ಹೋರಾಟ ಶುರುವಾಗಿ ನಾಲ್ಕಾರು ದಿನಗಳಾಗಿವೆ. ಸಕ್ಕರೆ ಫ್ಯಾಕ್ಟರಿ ಮತ್ತು ಸರ್ಕಾರ ಏನೂ ಮಾಡಲಾಗದ ಸ್ಥಿತಿಯಲ್ಲಿರುವುದೇಕೆ? ಎಲ್ಲ ಸರ್ಕಾರಗಳೂ ರೈತರ ಪರ ಇದ್ದೇವೆ ಅನ್ನುವುದಾದರೆ ರೈತರ ಬೇಡಿಕೆ ಈಡೇರಿಸಿ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಬಹುದಾಗಿತ್ತಲ್ಲ?  ಇಲ್ಲ, ಇದು ಕಗ್ಗಂಟಾಗಿದೆ, ಬಹಳ ಸಂಕೀರ್ಣ ಸಂಗತಿ ಇದು. ಅನೇಕ ಆಯಾಮಗಳಿವೆ, ಒಂದೊಂದಾಗಿ ನೋಡುವ. ತಮಾಷೆ ಅಂದರೆ ಈ ಕಬ್ಬು ಬೆಳೆಗಾರರ ಸಮಸ್ಯೆ ಕೊನೆಯಲ್ಲಿ ಬಂದು ನಿಲ್ಲುವುದು ಕೃಷ್ಣಾಷ್ಟಮಿಗೂ ಇಮಾಮ್ ಸಾಬರಿಗೂ ಇರುವ ಸಂಬಂಧದಂತೆ, ಆಟೋ ಮೊಬೈಲ್ ಇಂಡಸ್ಟ್ರಿಗೆ ಬಂದು ನಿಲ್ಲುತ್ತದೆ.

ಸಾಮಾನ್ತವಾಗಿ ಕಬ್ಬು ಅಂದರೆ ನಾವು ಬೆಲ್ಲ ಮತ್ತು ಸಕ್ಕರೆಗಳು ಮಾತ್ರ ಅದರ ಪ್ರಮುಖ ಉತ್ಪನ್ನಗಳು ಎಂದು ಭಾವಿಸುತ್ತೇವೆ. ಇಲ್ಲ. ಮುಖ್ಯವಾಗಿ ಅದರ ಸಿಪ್ಪೆ ಜೊತೆಗೆ ಬೆಲ್ಲ ಅಥವಾ ಸಕ್ಕರೆ ತಯಾರಿಸುವಾಗ ಲಭಿಸುವ ಮೊಲಾಸಿಸ್, ಕಾಕಂಬಿ ಮತ್ತು ಅದರ ಉತ್ಪನ್ನ ಸ್ಪಿರಿಟ್‌ಗಳು ಕಡಿಮೆಯವಲ್ಲ. ಕೆಳಗಿನ ಪಟ್ಟಿ ನೋಡಿದರೆ ಕಬ್ಬಿನ ನಿಜವಾದ ಬೆಲೆ ಏನೆಂದು ಅರ್ಥವಾಗುತ್ತದೆ.

ಕಬ್ಬಿನಿಂದ ಸುಮಾರು ಒಂಬತ್ತು ಬಗೆಯ ಉಪುತ್ಪನ್ನಗಳನ್ನು ಪಡೆಯಲಾಗುತ್ತದೆ. ಮುಖ್ಯ ಉತ್ಪನ್ನಗಳೆಂದರೆ ಸಕ್ಕರೆ ಮತ್ತು ಬೆಲ್ಲ.ಇವಲ್ಲದೇ ದೊರೆಯುವ ಇತರೆ ಸಾಮಗ್ರಿಗಳೂ ಬೆಲೆ ಹೊಂದಿವೆ- ಇವುಗಳಲ್ಲಿ ಮುಖ್ಯವಾಗಿ ಕೆಳಕಂಡವು ಸೇರಿವೆ -

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಇವೆಲ್ಲ ಪ್ರತಿ ಟನ್ ಕಬ್ಬಿನಿಂದ ತಯಾರಾಗುವ ಉಪ ಉತ್ಪನ್ನಗಳು, ಇದರಲ್ಲಿ ಎಲ್ಲ ಸೇರಿ ರೈತರಿಗೆ ದೊರೆಯುವುದು ಪ್ರತಿ ಟನ್ನಿಗೆ ರೂ ೩೨೦೦ ಮಾತ್ರ, ಇದರಲ್ಲೂ ರೈತರೇ ಶುಗರ್ ಫ್ಯಾಕ್ಟರಿಗೆ ಸಾಗಿಸಿದರೆ ಮಾತ್ರ ೮೦೦ ರೂ ಹೆಚ್ಚಾಗಿ ದೊರೆಯುತ್ತದೆ, ಇಲ್ಲದಿದ್ದಲ್ಲಿ ೧,೪೦೦ ರೂ ಮಾತ್ರ. ಇದರಲ್ಲೂ ಕಬ್ಬಿನ ಗುಣಮಟ್ಟ ಶೇ ೧೧ ರಷ್ಟು ಇಲ್ಲದಿದ್ದರೆ ಬೆಲೆ ಬಹಳ ಕಡಿಮೆ ಸಿಗುತ್ತದೆ. ಉಳಿದ ಹಣವನ್ನು ಕಂಪನಿ ಮತ್ತು ದಲ್ಲಾಳಿಗಳೇ ನುಂಗುತ್ತಾರೆ ಅನಿಸಬಹುದು, ಆದರೆ ವಾಸ್ತವ ಬೇರೆ ಇದೆ, ದಶಕಗಳ ಹಿಂದೆ ಸಹಕಾರಿ ಸಕ್ಕರೆ ಸಂಘಗಳಿದ್ದವು. ಅವುಗಳಲ್ಲಿ ಕರ್ನಾಟಕದಲ್ಲಿ ಕಾರಣಾಂತರಗಳಿಂದ ಬಾಗಿಲು ಹಾಕಿ ಈಗ ಉಳಿದುಕೊಂಡವು ೩೨ ಮಾತ್ರ. ಕೆಲವು ಖಾಸಗಿ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡುತ್ತವೆ, ಆದರೆ ಹೆಸರಾಂತ ಕಂಪನಿಗಳು ಹೀಗೆ ಮಾಡಲಾರವು. 

 ಭಾರತದಲ್ಲಿ ಸಕ್ಕರೆ ತಯಾರಿಸುವ ಸುಮಾರು ೫೦೦ ಕಂಪನಿಗಳಿವೆ, ದೊಡ್ಡ ಕಂಪನಿಗಳಲ್ಲಿ ಸುಮಾರು ೮೦೦ ರಿಂದ ಸಾವಿರದವರೆಗೆ ನೌಕರರಿರುತ್ತಾರೆ, ಇವರ ಸಂಬಳ ವಗೈರೆ, ಯಂತ್ರೋಪಕರಣಗಳ ಖರೀದಿ, ನಿರ್ವಹಣಾ ವೆಚ್ಚ, ಮೂಲ ಬಂಡವಾಳ ಇತ್ಯಾದಿಗಳ ಜೊತೆಗೆ   ರೈತರಿಗೆ ಕೊಡುವ ಹಣ, ಕಬ್ಬಿನ ಸಾಗಣೆ ಮತ್ತು ಕೂಲಿ ವೆಚ್ಚಗಳು ಸೇರಿ ಈಗಿರುವ ಸಕ್ಕರೆ ಮಾರುಕಟ್ಟೆ ದರದಲ್ಲಿ ಕಂಪನಿಗಳಿಗೆ ಶೇ ೧೦ರಷ್ಟೂ ಲಾಭ ದೊರೆಯುವುದಿಲ್ಲ. ನಿಜವಾಗಿ ಸರ್ಕಾರ ಎಥನಾಲ್ ಖರೀದಿ ಪ್ರಮಾಣ ಹೆಚ್ಚಿಸಿ ಕಂಪನಿಗಳಿಗೆ ಹಣ ನೀಡಿದರೆ ಕಂಪನಿಗಳು ರೈತರಿಗೂ ಹೆಚ್ಚು ಹಣಕೊಡಬಹುದು, ಆದರೆ ಸರ್ಕಾರ ಇಂಧನಗಳಿಗೆ ಬೆರೆಸುವ ಎಥನಾಲ್ ಖರೀದಿಯನ್ನು ಶೇ.೨೭ಕ್ಕೆ ಮಿತಗೊಳಿಸಿದೆ, ಅಲ್ಲದೇ ಕಂಪನಿಗಳು ಎಥನಾಲ್ ಉತ್ಪಾದನೆಯನ್ನು ಶೇ ೩೨ಕ್ಕಿಂತ ಹೆಚ್ಚು ತಯಾರಿಸುವಂತಿಲ್ಲವೆಂದು ಮಿತಗೊಳಿಸಿದೆ. ಇದರ ಪ್ರಮಾಣ ಏರಿದರೆ ಕಂಪನಿಗಳಿಗೆ ಹಣದ ಹರಿವು ವೇಗವಾಗಿ ಬಂದು ರೈತರ ಕೈಗೂ ಬೇಗ ಹಣ ಸಿಗುವಂತೆ ಮಾಡಬಹುದು. ಆದರೆ ಕಬ್ಬು ಕಟಾವು ಆಗುತ್ತಿದ್ದಂತೆ ರೈತರು ಹಣ ಬೇಕು ಅನ್ನುತ್ತಾರೆ, ಮಾರುಕಟ್ಟೆಯ ಸಕ್ಕರೆ ಬೇಡಿಕೆ ಇರುವುದೇ ಸೀಮಿತ. ಸಾಲದ್ದಕ್ಕೆ ಸಕ್ಕರೆ ಈಗ ಅಗತ್ಯ ವಸ್ತುಗಳ ಪಟ್ಟಿಯಲ್ಲಿದೆ. ಇದರ ದರವನ್ನು ಸುಮ್ಮನೇ ಏರಿಸುವಂತಿಲ್ಲ, ಲಭಿಸುವ ಎಲ್ಲ ಬಗೆಯ ಸಕ್ಕರೆಯನ್ನೂ ಗೃಹೋಪಯೋಗಿ ದರದಲ್ಲಿ ಕೊಡಲಾಗುತ್ತಿದೆ. ಇದರ ಬೆಲೆ ಕೂಡ ಪ್ರತಿ ಕಿಲೋಗೆ ೩೬-೩೭ ರೂ ಇದೆ. ಗಮನಿಸಬೇಕಾದ ಸಂಗತಿ ಎಂದರೆ ಭಾರತದಲ್ಲಿ ಲಭ್ಯವಿರುವ ಸಕ್ಕರೆಯಲ್ಲಿ ಶೇ.೬೦ರಷ್ಟು ಸಕ್ಕರೆಯನ್ನು ಕೋಕಾ ಕೋಲಾ, ಹಲ್ದಿರಾಮ್‌ನಂಥ ಕಂಪನಿಗಳು ಖರೀದಿಸುತ್ತವೆ, ನಿಜವಾಗಿ ಇಂಥ ವಾಣಿಜ್ಯ ಬಳಕೆಯ ಸಕ್ಕರೆಯ ದರವನ್ನು ಬೇರ್ಪಡಿಸಿ ಅದಕ್ಕೆ ಬೇರೆ ದರ ವಿಧಿಸಿದರೆ ಕಂಪನಿಗಳು ಚೇತರಿಸಿಕೊಳ್ಳುತ್ತವೆ, ಅಲ್ಲದೇ ಕಬ್ಬು ಕಟಾವು ಮಾಡಿ ಅದನ್ನು ಕಂಪನಿಗೆ ಸಾಗಿಸುವ ವೆಚ್ಚವನ್ನು  ಟನ್ನಿಗೆ ೮೦೦ ರೂಗೆ ನಿಗದಿಪಡಿಸಿದ್ದು ಕೂಡ ಕಂಪನಿಗಳ ಕೈ ಕಟ್ಟುತ್ತದೆ. ಏಕೆಂದರೆ ಕಬ್ಬು ಕಟಾವಿನ ಕೂಲಿ ಒಂದೇ ಇದ್ದರೂ ಸಾಗಣೆಯ ದೂರ ೧೦ ಕಿಮೀಯಿಂದ ೧೦೦ ಕಿಮೀವರೆಗೂ ಇರಬಹುದು, ಇಲ್ಲಿ ಕಂಪನಿಗಳಿಗೆ ಹೊಡೆತ ಬೀಳುತ್ತದೆ.ಇಷ್ಟಾಗಿಯೂ ಈಗ ರೈತರಿಗೆ ಪ್ರತಿ ಟನ್ನಿಗೆ ಕೊಡಲಾಗುತ್ತಿರುವ ೩೮೦೦ ರೂ ಬೆಂಬಲ ಬೆಲೆಯಿಂದ ರೈತರಿಗೆ ಹೇಳಿಕೊಳ್ಳುವ ನಷ್ಟವೇನೂ ಆಗುವುದಿಲ್ಲ, ಆದರೆ ತಮ್ಮ ಜಮೀನಿನಲ್ಲಿ ಬೆಳೆಗೆ ಸೂಕ್ತ ನೀರು ಮತ್ತು ಗೊಬ್ಬರ ದೊರೆಯುವ ಖಾತರಿಯನ್ನು ರೈತ ಕೊಡಬೇಕು, ಇಲ್ಲದಿದ್ದರೆ ಮಾತ್ರ ಆತನಿಗೆ ನಷ್ಟವಾಗುತ್ತದೆ.

ಇದಕ್ಕೆ ಕಂಪನಿ ಹೊಣೆ ಅಲ್ಲ, ಇಂಥ ನಿರೀಕ್ಷೆ ಕೂಡ ಸರಿಯಲ್ಲ, ಕಬ್ಬು ಬೆಳೆಯ ವಿಷಯದಲ್ಲಿ ಜಮೀನು ಮತ್ತು ಅದರ ಸೂಕ್ತ ನಿರ್ವಹಣೆ ಬಿಟ್ಟರೆ ಭೂಮಿಗೆ ಬೀಜ ಬಿತ್ತುವುದರಿಂದ ಕಟಾವಿನವರೆಗೆ ಎಲ್ಲ ಜವಾಬ್ದಾರಿ ಕಂಪನಿಯದಾಗಿರುತ್ತದೆ, ಕಬ್ಬು ಬೆಳೆಯುವ ಮುನ್ನ ಕಂಪನಿ ರೈತನೊಂದಿಗೆ ಒಪ್ಪಂದ ಮಾಡಿಕೊಳ್ಳುವುದರಿಂದ ಬೆಳೆಗೆ ಮಾರುಕಟ್ಟೆಯ ಚಿಂತೆ ರೈತನಿಗೆ ಇರುವುದಿಲ್ಲ,

ಕರ್ನಾಟಕದಲ್ಲಿ ಸಕ್ಕರೆ ðಯಾಕ್ಟರಿಯಿಂದ ವಿದ್ಯುತ್ ಖರೀದಿಸುವ ದರ ಪ್ರತಿ ಯೂನಿಟ್‌ಗೆ ೨ರೂ ೭೦ ಪೈಸೆಯಿಂದ ೩ ರೂ ವರೆಗೆ ಇದೆ. ಚ್ಯೂಯಿಂಗ್ ಗಮ್ ಬಿಳಿಕಾಗದ, ಗೊಬ್ಬರ ಇತ್ಯಾದಿಗಳೆಲ್ಲ ಕಬ್ಬಿನ ಉಪ ಉತ್ಪನ್ನಗಳು ಮೌಲ್ಯವರ್ಧಿತ ಉತ್ಪನ್ನಗಳು ಇವುಗಳ ಬೆಲೆಗೂ ಫ್ಯಾಕ್ಟರಿ ಲಾಭಕ್ಕೂ ಸಂಬಂಧವಿಲ್ಲ, ಮೊಲಾಸಿಸ್ ಅನ್ನು ಮುಖ್ಯವಾಗಿ ಆಲ್ಕೊಹಾಲ್ ತಯಾರಿಕೆಗೆ ಬಳಸಲಾಗುತ್ತದೆ, ಇದರ ಮೂಲ ಸ್ಪಿರಿಟ್ ಇದನ್ನು ಮಾತ್ರ ಸಕ್ಕರೆ ಫ್ಯಾಕ್ಟರಿ ಲೀಟರಿಗೆ ೨೦೦ ರಿಂದ ೩೦೦ ರೂಗೆ ಮಾರುತ್ತವೆ, ಅನಂತರ ಅವುಗಳಿಗೆ ಯಾವ ರೂಪದಲ್ಲಿ ಎಷ್ಟು ಬೆಲೆಗೆ ಮಾರಿದರೂ ಅದಕ್ಕೂ ಫ್ಯಾಕ್ಟರಿಗೂ ಸಂಬಂಧವಿಲ್ಲ.

ಆದ್ದರಿಂದ ಸದ್ಯ ರೈತರು ಬೆಲೆ ಏರಿಕೆಗೆ ಮಾಡುತ್ತಿರುವ ಪ್ರತಿಭಟನೆಯ ಮೂಲ ಕಾರಣ ಎಲ್ಲಿದೆ ಎಂದು ಮೊದಲು ಅರಿಯಬೇಕಿದೆ. ನಿಜವಾಗಿ ಕಂಪನಿಗಳಿಗೆ ಅಡೆತಡೆ ಇಲ್ಲದ ಸರಳ ಹಣದ ಹರಿವು ಬಂದರೆ ಕಂಪನಿಗೂ ನಷ್ಟವಿರುವುದಿಲ್ಲ, ರೈತನಿಗೂ ಹೆಚ್ಚು ಹಣ ಸಕಾಲಕ್ಕೆ ದೊರೆಯುತ್ತದೆ, ಈಗ ನೋಡಿ- ನಮ್ಮ ದೇಶದಲ್ಲಿ ವಾಹನ ಇಂಧನಗಳಿಗೆ ಎಥನಾಲ್ ಬಳಸುವ ಬ್ರೆಜಿಲ್ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ, ನಿಜವಾಗಿ ಪ್ರಪಂಚದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶ ಅದು, ಅಲ್ಲಿಯೇ ಸಹಜ ಇಂಧನದ ಜೊತೆಗೆ ಎಥನಾಲ್ ಮಿಶ್ರಮಾಡಿ ಬಳಸುವ ಪ್ರಮಾಣ ಶೇ. ೩೭ ರಷ್ಟಿದೆ, ನಮ್ಮ ದೇಶದಲ್ಲಿ ಇದು ಶೇ೨೭ರಷ್ಟಿದೆ, ಅಲ್ಲದೇಕಂಪನಿಗಳಿಗೆ ಕೂಡಲೇ ಲಾಭ ತರುವ ಎಥನಾಲ್ ಉತ್ಪಾದನೆಗೆ ಮಿತಿ ಹೇರಿದ್ದು ಹಣದ ಹರವಿಗೆ ಅಡ್ಡಿ ಮಾಡುತ್ತಿದೆ, ಇದರಿಂದ ತಾವುಖರೀದಿಸಿದ ಕಬ್ಬಿಗೆ ರೈತರಿಗೆ ಹಣಕೊಡುವ ಅನಿವಾರ್ಯತೆಗೆ ಸಿಲುಕುವ ಕಂಪನಿಗಳು ಬ್ಯಾಂಕ್‌ಗಳಿಂದ ಕೋಟ್ಯಂತರ ರೂ ಸಾಲ ಮಾಡಿ. ಈ ಹಣ ಅಲ್ಪ ಬೇಡಿಕೆಯ ಮಾರುಕಟ್ಟೆಯಿಂದ ಕೇವಲ ಸಕ್ಕರೆ ಮಾತ್ರ ಮಾರಾಟವಾಗಿ ಅದರ ಹಣ ಬರುವವರೆಗೆ ಬ್ಯಾಂಕಿಗೆ ಕಟ್ಟಬೇಕಾದ ಬಡ್ಡಿದರ  ನೌಕರರ ವೇತನ, ಸಾಗಣೆ, ತೆರಿಗೆ,ನಿರ್ವಹಣೆಇತ್ಯಾದಿ ಖರ್ಚುಗಳನ್ನು ಲೆಕ್ಕ ಹಾಕಿದರೆ ಕಂಪನಿಗಳಿಗೆ ದೊರೆಯುವ ಲಾಭ  ಹೇಳಿಕೊಳ್ಳುವಂಥದ್ದಲ್ಲ. ಈ ಸಮಸ್ಯೆಯ ಇನ್ನೊಂದು ಮುಖ್ಯ ವಿಷಯವೆಂದರೆ ಎಥನಾಲ್ ತಯಾರಿಗೆ ಹೇರಿರುವ ನಿರ್ಬಂಧ. ಇದಕ್ಕೆ ಅಂತಾರಾಷ್ಟ್ರೀಯ ತೈಲ ಒಕ್ಕೂಟಗಳ ಲಾಬಿಯಿಂದ ಹಿಡಿದು, ಅಂತಾರಾಷ್ಟ್ರೀಯ ಪರಿಸರ ರಕ್ಷಣೆಯ ಮಾಲಿನ್ಯ ನಿಯಂತ್ರಣ ವಿಶ್ವಸಂಸ್ಥೆಯ ಮಾಲಿನ್ಯ ಮಿತಿ ಪ್ರಮಾಣ ಹಾಗೂ ವಾಹನ ತಯಾರಿಕಾ ಘಟಕಗಳ ಲಾಬಿಯವರೆಗೆ ಏನೆಲ್ಲ ವಿಷಯ ತಳಕುಹಾಕಿಕೊಂಡಿದೆ, ಜಾಗತಿಕ ಮಾಲಿನ್ಯ ನಿಯಂತ್ರಣ ಮುಂದುವರೆದ ದೇಶಗಳಿಗೂ ಭಾರತದಂಥ ಮುಂದುವರೆಯುತ್ತಿರುವ ದೇಶಗಳಿಗೂ ವ್ಯತ್ಯಾಸವಿದೆ, ಈ ಎಲ್ಲ ಕಾರಣಗಳಿಂದ ಕಬ್ಬಿನ ಬೆಂಬಲ ಬೆಲೆ ಹೆಚ್ಚಿಸುವುದು ಅಷ್ಟು ಸುಲಭವಲ್ಲ, ಅಲ್ಲದೇ ರಾಜ್ಯದಿಂದ ರಾಜ್ಯಕ್ಕೆ ಇದು ಬೇರೆಯಾಗುತ್ತದೆ, ಕರ್ನಾಟಕಕ್ಕಿಂತ ಮಹಾರಾಷ್ಟ್ರದಲ್ಲಿ ಹೆಚ್ಚಿದೆ, ಕರ್ನಾಟಕದಲ್ಲಿ ಟನ್ನಿಗೆ ೩೫೦೦ ಇದ್ದರೆ ಮಹಾರಾಷ್ಟ್ರದಲ್ಲಿ ಹೆಚ್ಚಿದೆ. ಇದಕ್ಕೆ ಕಾರಣ ಅಲ್ಲಿ ರುವ ಮರುಪಾವತಿ ಪ್ರಮಾಣ ಹೆಚ್ಚಿದೆ. 

ಕರ್ನಾಟಕದಲ್ಲಿ ಕಳೆದ ಹತ್ತು ವರ್ಷಗಳಿಂದ ಈ ಬೆಂಬಲ ಬೆಲೆ ಹತ್ತು ಪೈಸೆಯಷ್ಟೂ ಏರಿಲ್ಲ ಎಂಬುದು ನಿಜ, ಜೊತೆಗೆ ಮದ್ಯದ ಬೆಲೆ ಹತ್ತು ವರ್ಷಗಳಲ್ಲಿ ವಿಪರೀತ ಏರಿರುವುದೂ ನಿಜ, ಜೊತೆಗೆ ಉಳಿದ ಸಾಮಗ್ರಿಗಳ ಬೆಲೆಯೂ ಏರಿದೆ, ಆದರೆ ಈ ಏರಿಕೆಯ ಲಾಭ ಯಾವ ಕಂಪನಿಗೂ ದೊರೆತಿಲ್ಲ. 

ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ವಿಚಾರ ಮಾಡಿದರೆ ಸದ್ಯ ಕಬ್ಬಿಗೆ ಒಂದು ರೂ ನಷ್ಟು ದರ ಏರಿಸುವುದು ಎಷ್ಟು ಸಮಸ್ಯೆಯ ಸಂಗತಿ ಎಂಬುದು ಅರಿವಾಗುತ್ತದೆ.




 


Sunday, 2 November 2025

ಸಾರ್ಥಕ ರಾಜ್ಯೋತ್ಸವ ಹೇಗೆ?


ಇದೀಗ ಎಲ್ಲೆಡೆ ೬೯ ನೆಯ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಸಾಮಾನ್ಯವಾಗಿ ಈ ಉತ್ಸವವನ್ನು ನವೆಂಬರ್ ತಿಂಗಳಾದ್ಯಂತ ಆಚರಿಸಲಾಗುತ್ತದೆ. ಇದಕ್ಕಾಗಿ ಕನಿಷ್ಠ ಎರಡು ತಿಂಗಳಿನಿಂದ ಸ್ಥಳೀಯರು ಮತ್ತು ಅನ್ಯರಾಜ್ಯದವರಿಂದ ಹಣ ವಸೂಲಿ ಮಾಡಲಾಗುತ್ತದೆ. ಸದಥಳೀಯರು ಇದನ್ನು ಪ್ರಶ್ನಿಸಿ ಹಣ ಕೊಡಲು ನಿರಾಕರಿಸಿದರೆ ಅಂಥವರನ್ನು ಕನ್ನಡ ವಿರೋಧಿಗಳೆಂದು ಭಾವಿಸಲಾಗುತ್ತದೆ. ಅನ್ಯಭಾಷಿಕರು ವಿರೋಧಿಸಿದರೆ ಅವರು ಪಕ್ಕಾ ಕನ್ನಡ ವಿರೋಧಿಗಳೆನಿಸಿಕೊಳ್ಳುವುದಷ್ಟೇ ಅಲ್ಲದೇ ಸಂಘದವರು ಕೇಳಿದಷ್ಟು ಹಣ ಕೊಡಬೇಕಾಗುತ್ತದೆ. ಕೆಲವೊಮ್ಮೆ ಏಟುಗಳನ್ನೂ ತಿನ್ನಬೇಕಾಗುತ್ತದೆ.

ಆಯಿತು, ಇಷ್ಟಕ್ಕೂ ಹೀಗೆ ಸಂಗ್ರಹಿಸಿದ ಹಣದಿಂದ ಮಾಡುವುದಾದರೂ ಏನು? ಕೆಲವು ಕನ್ನಡ ಮೇಷ್ಟ್ರುಗಳನ್ನು ಕರೆಸಿ ಕನ್ನಡದ ಬಗ್ಗೆ ಭಾಷಣ ಮಾಡಿಸುವುದು, ಹೆಚ್ಚೆಂದರೆ ಆರ್ಕೆ ಸ್ಟ್ರಾ ಏರ್ಪಡಿಸುವುದು, ಹಾರ ತುರಾಯಿಗಳನ್ನು ಪರಸ್ಪರ ಬದಲಾಯಿಸಿಕೊಳ್ಳುವುದು, ಹೊಗಳುವುದು, ಒಂದಿಷ್ಟು ಪಾರ್ಟಿ ಮಾಡಿ ಸಿಕ್ಕ ಹಣವನ್ನು ಕನ್ನಡದ ಹೆಸರಲ್ಲಿ ಖಾಲಿ ಮಾಡುವುದು. ಈಗೀಗ ಕೆಲವು ಕಡೆ ಹಾಸ್ಯ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ, ಆರ್ಕೆಸ್ಟ್ರಾದಲ್ಲಿ ಒಂದಿಷ್ಟು ಸಿನಿಮಾ ಹಾಡು, ಕುಣಿತ ಮಾಡಿಸಲಾಗುತ್ತದೆ. ಆದರೆ ಇಂಥ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಭಾವನಾತ್ಮಕ ಭಾಷಣಗಳಿರುತ್ತವೆ, ಕನ್ನಡದ ಬಗ್ಗೆ ಅದರ ಪ್ರಾಚೀನತೆ, ಗತ ವೈಭವಗಳ ಬಗ್ಗೆ ಹೊಗಳಿಕೆಗಳೇ ಇರುತ್ತವೆ, ಎಲ್ಲಿಯೂ ಸದ್ಯದ ಪ್ರಾಯೋಗಿಕ ಕೆಲಸಗಳ ಬಗ್ಗೆ, ಜರೂರಾಗಿ ಆಗಬೇಕಾದ  ಕನ್ನಡದ ಕೆಲಸಗಳ ಬಗ್ಗೆ ಕಟುವಾದ ವಿಮರ್ಶೆ ಇರುವುದಿಲ್ಲ. ಇಂಥ ಕಾರ್ಯಗಳಿಂದ ಕನ್ನಡಕ್ಕೆ ಏನಾದರೂ ಪ್ರಯೋಜನವಿದೆಯಾ? ಹಾಗೆ ನೋಡಿದರೆ ಕರ್ನಾಟಕದಲ್ಲಿ ನಾಡಿನ ನೆಲ, ಜಲ ಮತ್ತು ಭಾಷೆ ರಕ್ಷಿಸಲೆಂದೇ ಸಾವಿರಕ್ಕೂ ಮಿಕ್ಕಿದ ಸಂಘ ಸಂಸ್ಥೆಗಳಿವೆ, ಇವೆಲ್ಲವೂ ರಾಜ್ಯೋತ್ಸದ ಹೆಸರಲ್ಲಿ ಮಾಡುವುದು ಇದೇ ಕೆಲಸ.

ಬದಲಾಗಿ ಇವು ಗುಣಾತ್ಮಕವಾಗಿ ನಾಡು ನುಡಿಯ ರಕ್ಷಣೆಗೆ ಮಾಡಬೇಕಾದುದೇನು? ಸದ್ಯ ನಮ್ಮ ನಾಡಿನ ಜಲ ಮತ್ತು ಪರಿಸರ ಅಪಾಯದಲ್ಲಿವೆ, ಇವುಗಳ ರಕ್ಷಣೆ ಮೊದಲು ಆಗಬೇಕಿದೆ. ಪ್ರತೀ ಊರಲ್ಲಿರುವ ಸಂಘಗಳು ತಮ್ಮ ಸ್ಥಳದಲ್ಲಿರಬಹುದಾದ ಕೆರೆ ಕಟ್ಟೆಗಳನ್ನು ಪತ್ತೆ ಹಚ್ಚಿ ಮುಂದಿನ ರಾಜ್ಯೋತ್ಸವದ ವೇಳೆಗೆ ಶುದ್ಧವಾದ ಅವನ್ನು ನಾಡಿಗೆ ಅರ್ಪಿಸುವ ಕೆಲಸವಾಗಬೇಕು, ಇದರಿಂದ ಜಲವೂ ಪರಿಸರವೂ ರಕ್ಷಣೆಯಾಗುತ್ತದೆ, ಇಂಥಕೆಲಸ ಮಾಡುವುದಾದರೆ ಸಾರ್ವಜನಿಕರು ಮುಂದೆ ಬಂದು ದಾನ ಮಾಡುತ್ತಾರೆ, ಉದಾಹರಣೆಗೆ ಬೆಂಗಳೂರಲ್ಲಿ ನಾಲ್ಕಾರು ದಶಕಗಳ ಹಿಂದಿನವೆರೆಗೂ ವೃಷಭಾವತಿ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ಎಂಬ ನದಿಗಳು ಜೀವಂತವಾಗಿದ್ದವು, ಇವುಗಳಿಂದ  ಸುವರ್ಣಾವತಿಯಂಥ ಮೂರ್ನಾಲ್ಕು ಉಪ ನದಿಗಳೂ ಸಾವಿರಾರು ಕೆರೆಗಳೂ ಸಮೃದ್ಧವಾಗಿದ್ದವು. ಇದರಿಂದ ಬೆಂಗಳೂರಿನ ಪರಿಸರ ಅತ್ಯಂತ ಶುದ್ಧವಾಗಿತ್ತೆಂದು ತಿಳಿದುಬರುತ್ತದೆ. ನಾಗರಿಕತೆ ಬೆಳೆದಂತೆ ಇವೆಲ್ಲ ನಾಪತ್ತೆ ಆದವು ಈಗ ಬೆಂಗಳೂರಿನಲ್ಲಿ ಒಂದಾದರೂ ಜೀವಂತ ನದಿ ಇತ್ತೆಂದು ನಂಬುವುದೇ ಕಷ್ಟ. ಆದರೆ ಸರ್ಕಾರ ಮನಸ್ಸು ಮಾಡಿದರೆ ಇವುಗಳನ್ನು ಇಥವಾ ಒಂದನ್ನಾದರೂ ಮತ್ತೆ ಸಜೀವಗೊಳಿಸಲು ಸಾಧ್ಯವಿದೆ. ಇಂಥ ಕೆಲಸವನ್ನು ಕನ್ನಡ ಪರ ಸಂಘಗಳು ಕೈಗೆತ್ತಿಕೊಂಡು ಅದರಲ್ಲಿ ಸಫಲವಾದರೆ ಅದಕ್ಕಿಂತ ಶ್ರೇಷ್ಠ ಕನ್ನಡದ ಕೆಲಸ ಬೇರೆ ಇರಲಾರದು.

ಇಂಥದೊಂದು ಕೆಲಸ ಮಾಡಬೇಕೆಂದು ಮೊದಲು ಆಯಾ ಸಂಘ ಸಂಸ್ಥೆಗೆ ಅನ್ನಿಸಬೇಕು, ಸಂಘ ಸಂಸ್ಥೆಗಳು ಮುಂದಾದರೆ ಇದು ಕಷ್ಟದ ಕೆಲಸವಲ್ಲ, ಇಂಥ ಕೆಲಸವೊಂದು ಈಗಾಗಲೇ ಮುಂಬೈನಲ್ಲಿ ಸಾಧ್ಯವಾಗಿದೆ, ನಮ್ಮ ವೃಷಭಾವತಿಯಂತೆ ಅಲ್ಲಿನ ಕಾಮಾ ಎಂಬ ನದಿಯನ್ನು ಸಾಯಿಸಲಾಗಿತ್ತು, ಅದರಿಂದ ಮಂಬೈ ಮಹಾನಗರ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಕೆಲವು ಸಂಘಗಳು ಈ ನದಿಯನ್ನು ಈಗ ಪುನರುಜ್ಜೀವನಗೊಳಿಸಿ ಅಲ್ಲಿನ ಪರಿಸರವನ್ನು ಜೀವ ಸಂಕುಲವನ್ನು ಮತ್ತೆ ಬೆಳೆಸುತ್ತಿದ್ದಾರೆ, ಇದನ್ನು ಮಾದರಿಯಾಗಿಟ್ಟುಕೊಂಡು ನಾವೂ ಇಂಥ ಕೆಲಸಕ್ಕೆ ಮುಂದಾಗಬಹುದು. ನಮ್ಮ ಯಾವುದಾದರೂ ಸಂಸ್ಥೆ ಇಂಥ ಒಂದು ಕೆಲಸಕ್ಕೆ ಮುಂದಾಗಲಿ ಇದು ರಾಜ್ಯೋತ್ಸವದ ನಿಜವಾದ ಆಚರಣೆ, ಹೀಗೆ ಪ್ರತೀ ರಾಜ್ಯೋತ್ಸವ ಆಚರಿಸಿದರೆ ಅದು ಸಾರ್ಥಕ. ಇಷ್ಟು ವರ್ಷ ಆಚರಿಸಲಾದ ರಾಜ್ಯೋತ್ಸವ ಆಚರಣೆಗಳಲ್ಲಿ ಯಾವುದಾದರೂ ಒಂದು ವರ್ಷದ ಆಚರಣೆ ಹೀಗೆ ನೆನಪಿಡುವ ಆಚರಣೆ ನಡೆದಿದೆಯಾ? ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಾರಾದರೂ ಅದನ್ನು ನೆನಪಿರುವ ರಾಜ್ಯೋತ್ಸವ  ಅನ್ನಬಹುದಷ್ಟೇ. ಆದರೆ ಇಂಥ ಆಚರಣೆ ನಾಡಿಗೆ ಏನನ್ನು ಕೊಡುತ್ತದೆ? ಮೊದಲು ರಾಜ್ಯಮಟ್ಟಕ್ಕಿದ್ದ ರಾಜ್ಯೋತ್ಸವ ಪ್ರಶಸ್ತಿಗಳು ಈಗ ಜಿಲ್ಲಾ ಮಟ್ಟಕ್ಕೂ ಬಂದು ರಾಜ್ಯೋತ್ಸವ ಪ್ರಶಸ್ತಿ ಎಂಬ ಹೆಗ್ಗಳಿಕೆ ಪಡೆದಿವೆ ಈ ಪ್ರಶಸ್ತಿ ಇನ್ನು ಮೇಲೆ ತಾಲ್ಲೂಕು, ಹೋಬಳಿ ಮಟ್ಟಕ್ಕೂ ಬರಬಹುದು.