Wednesday, 30 April 2025

ಬಸವಣ್ಣ


ಕನ್ನಡದ ಮಹಾನ ಸಂತರಾದ ಬಸವೇಶ್ವರರ ಜಯಂತಿ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಅವರನ್ನು ಕುರಿತ ಚಿಂತನೆ, ಅವಲೋಕನ ಮಾಡುವುದು ಸಮ್ಮತ.

ನಮ್ಮ ದೇಶದಲ್ಲಿ ಎಲ್ಲರಿಗೂ ತಿಳಿದಂತೆ ಅಸಂಖ್ಯಾತ ಸಾಧಕರು ಸಂತರು ಆಗಿಹೋಗಿದ್ದಾರೆ. ನಮ್ಮ ನೆಲದ ಗುಣ ಇದು. ಕಾಲ ಕಾಲಕ್ಕೆ ಒಬ್ಬರಲ್ಲ ಒಬ್ಬರು ಸಂತರು ಕಾಣಿಸುತ್ತಲೇ ಇರುತ್ತಾರೆ. ಹನ್ನೊಂದು- ಹನ್ನೆರಡನೆಯ ಶತಮಾನದಲ್ಲಿ ಕಾಣಿಸಿದ ಮಹಾನ್ ಸಂತ ಬಸವಣ್ಣ. ಆ ಕಾಲದಲ್ಲಿ ಸಮಾಜಕ್ಕೆ ಯಾವುದನ್ನು ತಿಳಿಸಿ ತಿದ್ದಬೇಕಿತ್ತೋ ಆ ಕೆಲಸವನ್ನು ಅವರು ಮಾಡಿದರು. ಅವರ ಚಿಂತನೆಗಳು ಅಂದಿಗೆ, ಇಂದಿಗೆ ಮಾತ್ರವಲ್ಲ. ಮಾನವ ಸಮಾಜ ಇರುವವರೆಗೂ ಪ್ರಸ್ತುತವೇ ಆಗಿರುತ್ತದೆ. ಏಕೆಂದರೆ, ಸಮಾಜದಲ್ಲಿರಬಹುದಾದ ಹುಳುಕಿನ ಬಗ್ಗೆ ಅವರು ಹಾಗೆ ನಮ್ಮನ್ನು ಸದಾ ಎಚ್ಚರವಾಗಿರುವಂತೆ ಮಾಡುವ ಕಾರಣದಿಂದ.

ಬಸವಣ್ಣನವರು ಎಂದಲ್ಲ, ನಮ್ಮ ಸಮಾಜದಲ್ಲಿ ಮೂಡಿಬಂದ ಪ್ರತಿಯೊಬ್ಬ ಮಹಾತ್ಮರೂ ಹೀಗೆಯೇ, ಬುದ್ಧನಾದಿಯಾಗಿ ಎಲ್ಲ ಮಹನೀಯರೂ ಈ ಮಾತಿನಲ್ಲಿ ಬರುತ್ತಾರೆ. ನಮ್ಮ ಸಮಸ್ಯೆ ಏನೆಂದರೆ ನಾವು ಆಯಾ ಮಹಾತ್ಮರ ದಿನಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಅಂದು ಮಾತ್ರ ಅವರನ್ನು ಅವರ ಆದರ್ಶವನ್ನು ನೆನೆಯುವ ಕಾಟಾಚಾರದ ಕೆಲಸ ಮಾಡುತ್ತಿದ್ದೇವೆ, ಹೀಗೆ ಮಾಡಿ ಕೈ ತೊಳೆದುಕೊಳ್ಳುವುದನ್ನು ಪಾಶ್ಚಾತ್ಯರಿಂದ ಕಲಿತಿದ್ದೇವೆ. ಪಾಶ್ಚಾತ್ಯ ಸಮಾಜ-ಸಂಸ್ಕೃತಿ ನಮ್ಮಂತೆ ಅಲ್ಲ, ಅವರು ಅಪ್ಪ, ಅಮ್ಮ, ಅಕ್ಕ ತಂಗಿಯರಿಗೆ ಒಂದೊಂದು ದಿನವನ್ನು ಗುರುತಿಸಿ ಆಯಾ ದಿನ ಮಾತ್ರ ಅವರಿಗೆ ಕೃತಜ್ಞತೆ ಅರ್ಪಿಸಿ ನಾಳೆ ಇನ್ನೊಂದು ದಿನಕ್ಕೆ ಸಿದ್ಧರಾಗುತ್ತಾರೆ. ನಮಗೂ ಇದೇ ಚಾಳಿ ಬಂದುಬಿಟ್ಟಿದೆ. ಹೀಗಾಗಿ ಬುದ್ಧ ಪೂರ್ಣಿಮೆಯಂದು ಎಲ್ಲೆಲ್ಲೂ ಬುದ್ಧನ ಜಪ, ಆ ದಿನ ಬಸವಣ್ಣನ ನೆನಪೇ ಆಗುವುದಿಲ್ಲ. ಬಸವಣ್ಣನ ದಿನ ಶಂಕರ ರಾಮಾನುಜರ ಮಾತು ನೆನಪಾಗುವುದಿಲ್ಲ. ವಾಸ್ತವವಾಗಿ ನಮ್ಮ ಸಮಾಜ ಹಾಗೂ ಸಂಪ್ರದಾಯ ಹೀಗೆ ಇರಲಿಲ್ಲ ಎಂಬುದು ನಮ್ಮ ಗತವನ್ನು ನೋಡಿದರೆ ಅರಿವಾಗುತ್ತದೆ. ನಾವು ಬೆಳೆದುಬಂದ ರೀತಿಯನ್ನು ತಿಳಿದರೆ ಸಹಜವಾಗಿ ಅರ್ಥವಾಗುತ್ತದೆ.

ಆಧುನಿಕ ಪಾಶ್ಚಾತ್ಯ ಶಿಕ್ಷಣ ಪಡೆದ ಮೇಲೆ ನಾವು ಇಂಥ ಕೃತಕ ವಿಂಗಡಣೆ ಮಾಡಿಕೊಂಡು ಪರಸ್ಪರ ಕಚ್ಚಾಡುತ್ತಿದ್ದೇವೆ, ಸಲ್ಲದ ಗೊಂದಲ ಮಾಡಿಕೊಳ್ಳುತ್ತಿದ್ದೇವೆ, ಇದಕ್ಕೆ ಬಸವಣ್ಣನವರ ಜೀವನ ಮತ್ತು ಬೋಧನೆಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಬಸವಣ್ಣನವರು ಬಾಗೇವಾಡಿಯಲ್ಲಿ ಜನಿಸಿದರು, ಅವರ ತಂದೆ ತಾಯಿ ಯಾರು ಎಲ್ಲೆಲ್ಲಿ ಏನೇನು ಕೆಲಸ ಮಾಡಿದರು, ಅವರ ವಚನಗಳು ಏನು ಬೋಧಿಸುತ್ತವೆ ಎಂಬುದನ್ನೆಲ್ಲ ಒಂದೇ ರೀತಿಯಲ್ಲಿ ಉರು ಹೊಡೆದು ಹೇಳುತ್ತೇವೆ. ಅದು ಬದಲಾದರೆ ಅಪಾಯ ಎದುರಿಸುತ್ತೇವೆ, ಸಾಂಪ್ರದಾಯಿಕ ನಿಲುವು ಹೇಗಿದೆಯೋ ಅಷ್ಟನ್ನೇ ಅಂತೆಯೇ ಪುನರುತ್ಪತ್ತಿ ಆಗುತ್ತಿರಬೇಕೆಂದೂ ಅದರಲ್ಲಿ ವ್ಯತ್ಯಾಸವಾದರೆ ಸದರಿ ಭಾವನೆಗಳಿಗೆ ಅಪಚಾರ-ಅವಮಾನವೆಂದು ತಿಳಿದು ಅವಿವೇಕಿಗಳಂತೆ ವರ್ತಿಸುತ್ತೇವೆ. ಉದಾಹರಣೆಗೆ ವಚನ ಹಾಗೂ ಅವುಗಳ ವಿವರಣೆಯ ಬಗ್ಗೆ ಇತ್ತೀಚೆಗೆ ನಡೆದ ವಾಗ್ವಾದಗಳನ್ನು ಗಮನಿಸಿ ಹೇಳುವುದಾದರೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸಮಾಜ ಸಂಸ್ಕೃತಿಗಳ ಸ್ಥಳೀಯ ಅಧ್ಯಯನ ಪೀಠ ವಚನಗಳ ವಸ್ತುನಿಷ್ಠ ಅಧ್ಯಯನ, ಸಂಶೋಧನೆ ಕೈಗೊಂಡು ತಮ್ಮ ಅಧ್ಯಯನದ ಫಲಿತಗಳನ್ನು ಸಮಾಜದ ಮುಂದೆ ಚರ್ಚೆಗೆ ಇಟ್ಟಾಗ ಶೈಕ್ಷಣಿಕ ವಲಯ ಹಾಗೂ ಬಸವಣ್ಣನವರ ತತ್ವ ಪಾಲಕರು ಎಂದು ಹೇಳಿಕೊಳ್ಳುವ ಜನರು ಇನ್ನಿಲ್ಲದ ಗಲಭೆ ಎಬ್ಬಿಸಿ ಆ ಅಧ್ಯಯನ ಕೇಂದ್ರ ಮುಚ್ಚುವಂತೆ ಮಾಡಿ ಧನ್ಯತೆ ಸಾಧಿಸಿದೆವು ಅಂದುಕೊಂಡರು, ಆದರೆ ಸ್ವತಃ ಬಸವಣ್ಣನವರೇ ತಮ್ಮ ವಚನಗಳಲ್ಲಿ ಸುಳ್ಳು ನುಡಿಯಬಾರದು, ಸತ್ಯಕ್ಕೆ ಅಂಜಬಾರದು, ಜಂಗಮ ನಾನು ಯಾರಿಗೂ ಅಂಜುವವನಲ್ಲ ಅಂದಿರುವುದನ್ನು ಹಾಗೂ ಸ್ವತಃ ಅವರೇ ಅದುವರೆಗೆ ನಡೆದು ಬಂದಿದ್ದ ಸಂಪ್ರದಾಯ, ತಿಳಿವಳಿಕೆಯ ವಿರುದ್ಧ ನಿಂತು ಹೋರಾಡಿದರು ಎಂಬ ಸಂಗತಿಯನ್ನು ಮರೆಯುತ್ತಾರೆ. ಬಸವಣ್ಣನವರು ವಚನಗಳಲ್ಲಿ ಮುಕ್ತ ಚರ್ಚೆಗೆ ಅವಕಾಶ ಕೊಡುತ್ತಾರೆ, ಆದರೆ ಅವರ ಇಂದಿನ ಅನುಯಾಯಿಗಳು ಇದಕ್ಕೆ ಸಿದ್ಧರಿಲ್ಲ, ಬದಲಾಗಿ ಬಲಪ್ರಯೋಗಕ್ಕೆ ಮುಂದಾಗುತ್ತಾರೆ ಇದು ವಿಪರ್ಯಾಸ, ಬಸವಣ್ಣ ಎಂದಲ್ಲ, ಎಲ್ಲ ಮಹನೀಯರನ್ನೂ ನಾವು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತೇವೆ, ವೇದಿಕೆ ನೋಡಿ ಮಾತಾಡುತ್ತೇವೆ, ಎದುರಿಂದ ಚಪ್ಪಾಳೆ ಬಂದರೆ ಸಾರ್ಥಕ ಅಂದುಕೊಳ್ಳುತ್ತೇವೆ, ಆದರೆ ನಮ್ಮ ಸಂಪ್ರದಾಯ ನಮಗೆ ಇದನ್ನು ಕಲಿಸಿಲ್ಲ, ನಾವು ಇದನ್ನು ಹೊರಗಿನಿಂದ ಕಲಿತಿದ್ದೇವೆ.

ಇದು ಒಂದು ಸಂಗತಿ ಮತ್ತೊಂದು ವಿಚಾರ ಏನೆಂದರೆ ಬಸವಣ್ಣ ಹೇಳದಿರುವ ಮಾತನ್ನು ಅವರಿಗೆ ಅಂಟಿಸಿ ಸತ್ಯ ಶೋಧನೆ ಮಾಡದೇ ಸಂಭ್ರಮಿಸುವುದು. ನೋಡಿ- ಕಾಯಕವೇ ಕೈಲಾಸ ಎಂಬ ಮಾತು ನಮ್ಮ ಸಮಾಜದಲ್ಲಿ ಎಲ್ಲರಿಗೂ ಗೊತ್ತಿದೆ, ಇದನ್ನು ಹೇಳಿದವರು ಯಾರು ಅಂದರೆ ಎಲ್ಲರೂ ಬಸವಣ್ಣ ಅಂತಾರೆ ಅಂತಲೂ ಗೊತ್ತು. ಆದರೆ ಇದಕ್ಕೆ ಪ್ರತಿಯಾಗಿ ಸತ್ಯಶೋಧ ನಡೆಸಿ ಅಲ್ಲ ಈ ಮಾತು ಹೇಳಿದವರು ಆಯ್ದಕ್ಕಿ ಮಾರಯ್ಯ ಅಂದರೆ ಯಾರೂ ಒಪ್ಪಲು ಸಿದ್ಧರಿಲ್ಲ. ಸಾಲದ್ದಕ್ಕೆ ಹೀಗೆ ಹೇಳಿದವರು ಬಸವ ವಿರೋಧಿ ಎಂದು ಬಿಂಬಿಸಲಾಗುತ್ತದೆ. ಇಂಥ ಯತ್ನಗಳೇ ನಿಜವಾಗಿ ಬಸವ ತತ್ವ ವಿರೋಧಿ. ಈ ಗಾಗಲೇ ಉಲ್ಲೇಖಿಸಿದ ಅಧ್ಯಯನ ಕೇಂದ್ರ ಇಂಥ ಗಂಭೀರ ಸಂಗತಿಗಳನ್ನು ವಚನ ಹಾಗೂ ಅವುಗಳ ಸುತ್ತ ಹರಡಿಕೊಂಡಿರುವ ವಿಷಯಗಳ ಬಗ್ಗೆ ಗಂಭೀರವಾಗಿ ಶೋಧಿಸಿ ಕೊಟ್ಟ ಕುದುರೆಯನೇರಲರಿಯದೆ ಎಂಬ ಹೆಸರಲ್ಲಿ ಕೃತಿ ಪ್ರಕಟಿಸಿ ಸಾಮಾಜಿಕ ಚರ್ಚೆಗೆ ಬಿಟ್ಟರೆ ಆ ಕೇಂದ್ರದ ಶೋಧನೆಗಳ ಬಗ್ಗೆ ಗಂಭೀರ ಚರ್ಚೆಯ ಮೂಲಕ ಪ್ರತಿ ವಾದ ಮಾಡದೇ ಸಲ್ಲದ ಆರೋಪ ಹೊರೆಸಿ ಕೇಂದ್ರ ಬಾಗಿಲು ಹಾಕುವಂತೆ ಮಾಡಿದ್ದು ಬಸವಣ್ಣನವರ ತತ್ವಕ್ಕೆ ಮಾಡಿದ ಅನ್ಯಾಯವಲ್ಲದೇ ಇನ್ನೇನು?

ಇನ್ನೊಂದು ಸಂಗತಿ ಎಂದರೆ ಬಸವಣ್ಣನವರು ವೇದ ವಿರೋಧ ಆಗಿದ್ದರು ಎಂಬುದು, ಇದು ಕೂಡ ಸರಿಯಾದ ಮಾತಲ್ಲ, ಅವರು ವೇದ ಉಪನಿಷತ್ತುಗಳ ಅನೇಕಾನೇಕ ಮಾತುಗಳ ಧ್ವನಿಯನ್ನು ವಚನಗಳಲ್ಲಿ ಮರು ಪ್ರತಿಪಾದನೆ ಮಾಡುತ್ತಾರೆ ಎಂಬುದನ್ನು ಹಾಗೂ ಅವರು ಬ್ರಾಹ್ಮಣ ವಿರೋಧಿ ಕೂಡ ಅಲ್ಲ, ಎಂಬುದನ್ನು ಸದರಿ ಅಧ್ಯಯನ ಸಾಧಾರ ತೋರಿಸುವ ಯತ್ನ ಮಾಡಿದರೆ ಅದನ್ನೂ ಸೂಕ್ತ ಚರ್ಚೆಗೆ ತರದೇ ಬಾಯಿ ಮುಚ್ಚಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಯಿತು, ಇವೆಲ್ಲ ಯಾವ ರೀತಿಯಲ್ಲಿ ಬಸವಣ್ಣನವರನ್ನು ಗೌರವಿಸುವ ಕಾರ್ಯ ಎಂದು ಕೇಳುವ ಸ್ಥಿತಿಯಲ್ಲೂ ನಾವಿಲ್ಲ ಅಂದರೆ ಶತಮಾನಗಳ ಹಿಂದೆ ಬಸವಣ್ಣ ಪ್ರತಿಪಾದಿಸಲು ಹೆಣಗಾಡಿದ ಮುಕ್ತ ಸಮಾಜದ ಕಲ್ಪನೆಯಲ್ಲಿ ಎಳ್ಳಷ್ಟನ್ನೂ ನಾವು ಅರಿತಿಲ್ಲ ಎಂದೇ ಅರ್ಥ ಅನ್ನುವುದನ್ನು ಹಿಂಜರಿಕೆಯಲ್ಲೇ ಹೇಳಬೇಕಿದೆ. ನೋಡಿ, ಆಧುನಿಕ ಸಮಾಜದಲ್ಲಿ ಆಧುನಿಕ ಚಿಂತನೆಗಳ ಪ್ರಭಾವದಲ್ಲಿ ಆಧುನಿಕ ದೃಷ್ಟಿಯಿಂದ ಚರ್ಚಿಸಲಾದ ವಸವಣ್ಣ ಸಂಬಂಧಿ ಎಲ್ಲ ವಿಚಾರ ಹಾಗೂ ಚರ್ಚೆಗಳು ದಮನಕ್ಕೆ ಒಳಗಾಗಿವೆಯೇ ವಿನಾ ಆರೋಗ್ಯಕರ ಚರ್ಚೆಗೆ ಒಳಗಾಗಿಲ್ಲ. ಹಳೆಯ ಕರ್ಮಠ ರೀತಿ ನಿಲುವನ್ನೇ ಸ್ಥಾಪಿಸುವ ಕೆಲಸಗಳು ಇಲ್ಲೆಲ್ಲ ನಡೆದಿವೆ,  ಈ ಸಾಲಿನಲ್ಲಿ ಈ ಕೇಂದ್ರದ ಮೇಲಿನ ದಬ್ಬಾಳಿಕೆ ಹೊಸದು ಅಷ್ಟೇ.

ಮಾಸ್ತಿಯವರು ರಚಿಸಿದ ಚೆನ್ನ ಬಸವನಾಯಕ ಕೃತಿ, ಸಂಶೋಧಕರಾದ ಎಂ ಎಂ ಕಲ್ಬುರ್ಗಿ ಅವರ ಮಾರ್ಗ, ಪಿ ವಿ ನಾರಾಯಣ ಅವರ ಧರ್ಮಕಾರಣ ಕೃತಿ, ಎಚ್ ಎಸ್ ಶಿವ ಪ್ರಕಾಶರ ಮಹಾಚೈತ್ರ ಕೃತಿ, ಬಂಜಗೆರೆ ಜಯಪ್ರಕಾಶ ಅವರ ಆನು ದೇವಾ ಹೊರಗಣವನು ಕೃತಿಗಳು ಎಬ್ಬಿಸಿದ ವಿವಾದಗಳನ್ನು ಗಮನಿಸಿ. ಇವೆಲ್ಲ ಸಂದರ್ಭಗಳಲ್ಲೂ ಮುಕ್ತ ಚರ್ಚೆಗೆ ಬದಲಾಗಿ ಹಳೆಯ ತಥಾ ಕಥಿತ ಮಾತಿಗೆ ಬದ್ಧರಾಗುವಂತೆ ಬಲಾತ್ಕರಿಸಲಾಯಿತು. ಇದು ನಿಜಕ್ಕೂ ಬಸವಣ್ಣನವರಿಗೂ ಅವರ ತತ್ವಕ್ಕೂ ಯಾವ ರೀತಿಯಲ್ಲಿ ಗೌರವ ತರುತ್ತದೆ ಎಂಬುದನ್ನು ಯಾರೂ ತಿಳಿಸಿ ಹೇಳಲಾರರು, ಬದಲಾಗಿ ನಾವು ಬಸವಣ್ಣವನರಿಗೆ ಏನು ಮಾಡಿದ್ದೇವೆ? ಅವರ ಪ್ರತಿಮೆಗಳನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸ್ಥಾಪಿಸುತ್ತೇವೆ, ಅದಕ್ಕೆ ಏನಾದರೂ ಧಕ್ಕೆ ಆದರೆ ದೊಡ್ಡ ದೊಂಬಿ ಎಬ್ಬಿಸುತ್ತೇವೆ, ದೇಶ ಮಾತ್ರವಲ್ಲದೇ ವಿದೇಶದಲ್ಲೂ ಅವರ ಪ್ರತಿಮೆ ಸ್ಥಾಪಿಸಿ ಬೀಗುತ್ತೇವೆ, ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಪುರುಷ ಅವರೇ ಎಂದು ಹಾಡಿ ಹೊಗಳುತ್ತೇವೆ. ಈ ಮಾತುಗಳಿಗೇನಾದರೂ ಬಸವಣ್ಣನವರು ಅಂದು ಕೇಳಿದಂತೆ ಅಯ್ಯಾ ಹೇಗಯ್ಯಾ ಎಂದು ಕೇಳಿದರೆ ನಿಮ್ಮ ಸಿರ ಹಾರುವುದು ಎಂದು ಧಮಕಿ ಕೊಡುತ್ತೇವೆ. ಅಲ್ವಾ? ನಿಜಕ್ಕೂ ನಮಗೆ ಬಸವಣ್ಣನವರು ಹಾಕಿಕೊಟ್ಟ ಮಾರ್ಗ ಇದೇನಾ? ಇದು ಪರಿಶೀಲಿಸುವ ಸಂದರ್ಭ ಇದು. ಹೀಗೆ ಮಾಡಿಕೊಂಡು ನಮ್ಮ ನೈಜ ಮಾರ್ಗ ಕಂಡುಕೊಂಡರೆ ಬಸವಣ್ಣನವರಿಗೆ ಸಲ್ಲಿಸುವ ನಮನ ಅದೇ. ನಾವೆಲ್ಲ ಇಷ್ಟು ಮಾಡಿದರೆ ಸಾಕು ಅನಿಸುತ್ತದೆ. 

ನಮ್ಮ ಸಂಪ್ರದಾಯದ ಮುಖ್ಯ ಲಕ್ಷಣವೊಂದನ್ನು ಇಲ್ಲಿ ಗಮನಿಸಬೇಕು. ನಮ್ಮಲ್ಲಿ ಆಗಿಹೋದ ಎಲ್ಲ ಮಹನೀಯರೂ ಮನುಷ್ಯತ್ವದ ಸಮಾನತೆಯ ಸಾಧನೆಗೆ ಕರೆದೊಯ್ಯಲು ಶ್ರಮಿಸಿದವರೇ ವಿನಾ ಸಮಾಜದಲ್ಲಿ ಒಡಕು ಮಾಡಲು ಯತ್ನಿಸಿದವರಲ್ಲ. ಇವರ ಬೋಧನೆಗಳನ್ನು ಸೂಕ್ಮವಾಗಿ ಅರಗಿಸಿಕೊಳ್ಳದೆ, ಜಾತಿ ಸಮುದಾಯಗಳ ಹೆಸರಲ್ಲಿ ಶ್ರೇಷ್ಠತೆ ಮೆರೆಯುವುದು ಕೂಡ ನಮ್ಮ ಮೂರ್ಖತನ. ಉದಾಹರಣೆಗೆ, ಜಾತಿ ಅಸಮಾನತೆ ಎಂಬ ಮಾತುಗಳನ್ನು ಮುಂದಿಟ್ಟುಕೊಂಡ, ನಮ್ಮ ಸಮಾಜದಲ್ಲಿ ಅಸಮಾನತೆ ಇಲ್ಲವಾಗಿಸಲು, ಎಲ್ಲರಿಗೂ ಅಧ್ಯಾತ್ಮದ ಮಾರ್ಗ ತೋರಿಸಲು ಮೊದಲು ಶ್ರಮಿಸಿದವರು ಬಸವಣ್ಣ ಎಂದು ಕೂಡ ಆಗಾಗ ಹೇಳುವುದು ಸರಿಯಲ್ಲ. ಇಂದಿನ ಕಾಲದ ಗಣನೆಯಲ್ಲಿ ಬಸವಣ್ಣನವರಿಗಿಂತ ಮೊದಲು ಬಂದ ಶಂಕರ, ರಾಮಾನುಜ, ಮಧ್ವರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಅಧ್ಯಾತ್ಮಿಕ ಸಾಧನೆ ಎಲ್ಲರಿಗೂ ಸಮಾನವೆಂದು ಪ್ರತಿಪಾದಿಸಿದ್ದಾರೆ. ಜೈನ ಮುನಿಗಳೂ ಈ ಕೆಲಸ ಮಾಡಿದ್ದಾರೆ. ಇವನ್ನೆಲ್ಲ ಸಮಗ್ರವಾಗಿ, ಶಾಂತ, ಪೂರ್ವಗ್ರಹ ತಹಿತ ಮನಸ್ಥಿತಿಯಲ್ಲಿ ಗ್ರಹಿಸಿದರೆ ಮಾತ್ರ ನಮ್ಮ ಸಂಪ್ರದಾಯ ಅಥವಾ ಪರಂಪರೆಯ ಶ್ರೇಷ್ಠತೆ ನಿಜವಾಗಿ ಅರಿವಾಗುತ್ತದೆ. ನಮ್ಮ ಪರಂಪರೆಯಲ್ಲಿನ ಬಸವಣ್ಣನಂಥ ಮಹನೀಯರ ಬೋಧನೆಯ ಸೂಕ್ಮಗಳನ್ನು ಅರ್ಥ ಮಾಡಿಕೊಳ್ಳಲು ಮುಂದಾದರೆ ಈ ದಿನ ಸಾರ್ಥಕ.  



Sunday, 20 April 2025

ಮರೆಯಲಾಗದವರು


ನಾಳೆ ಏಪ್ರಿಲ್ ೨೧. ಕನ್ನಡದ ಮಹಾನ್ ಕಾದಂಬರಿಕಾರ ದಿವಂಗತ ತರಾ ಸುಬ್ಬರಾವ್ ಅವರ ಜನ್ಮದಿನ.

ಅದು ೧೯೮೦ರ ದಶಕ, ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ದಿನಗಳು, ಸಾಹಿತಿಗಳ ನೆಲೆವೀಡಾಗಿದ್ದ ಆ ಊರಿನ ಒಂದೊಂದು ಬೀದಿಯಲ್ಲೂ ಸಾಹಿತ್ಯ ಪ್ರೇಮಿ ಅಥವಾ ಸಾಹಿತಿ ಇರುತ್ತಿದ್ದರು, ಇದರಲ್ಲಿ ಕುವೆಂಪು, ತರಾಸು ಅವರಿಂದ ಹಿಡಿದು ಮಂಗಳಾ ಸತ್ಯನ್ ವರೆಗೆ ಎಲ್ಲ ಬಗೆಯವರೂ ಇದ್ದರು, ನಮಗೆ ಇವರನ್ನೆಲ್ಲ ಮಾತಾಡಿಸುವ ಚಟ. ವಾರಕ್ಕೊಂದು ಪಟ್ಟಿ ಇರುತ್ತಿತ್ತು.ಒಮ್ಮೆ ತರಾಸು ಅವರ ಭೇಟಿಗೆ ಯೋಜನೆ ಸಿದ್ಧವಾಯ್ತು, ಆದರೆ ಅವರು ವಾಸಿಸುತ್ತಿದ್ದ ಜಾಗ ತಿಳಿದಿರಲಿಲ್ಲ, ಒಮ್ಮೆ ಯಾದವಗಿರಿಯಲ್ಲಿರುತ್ತಾರೆಂದು ಗೊತ್ತಾಯಿತು, ಹೇಗೂ ಅಲ್ಲಿನ ಆಕಾಶವಾಣಿಗೆ ಎಡತಾಕುವಾಗ ಸರಿಯಾಗಿ ನೋಡಿದರಾಯ್ತೆಂದುಕೊಂಡೆ, ಆ ದಿನ ಬಂದೇ ಬಂತು. ಮೈಸೂರು ಆಕಾಶವಾಣಿ ಬಳಿ ರಾಮಕೃಷ್ಣ ಆಶ್ರಮಕ್ಕೆ ಹೋಗುವಲ್ಲಿ ಸಣ್ಣ ಇಳಿಜಾರಿನ ಬಳಿ ರಸ್ತೆ ತಿರುವಲ್ಲಿ ಮೊದಲ ಮನೆ ಅವರದಾಗಿತ್ತು. ಹೋಗಿದ್ದಾಯ್ತು. ಅಲ್ಲೇ ಆದಿನ ಭರ್ಜರಿ ಊಟ. ತಾಯಿ ಅನ್ನಪೂರ್ಣೆ ಅಂಬುಜಾ ತರಾಸು ಅವರ ಕೈರುಚಿ ನೋಡಿದ್ದಾಯ್ತು. ಆಮೇಲೆ ಅಂಥ ಎಷ್ಟೋ ಸಂದರ್ಭಗಳು. ಇಂದು ನಾಡಿನ ಖ್ಯಾತ ಪ್ರಕಾಶನ ಸಂಸ್ಥೆಯಾದ ಅಭಿನವದ ಶ್ರೀಮತಿ ಪಿ ಚಂದ್ರಿಕಾ ಅವರು ವರಸೆಯಲ್ಲಿ ತರಾಸು ಅವರ ಮೊಮ್ಮಗಳು, ಅವರ ಮೊದಲ ಪರಿಚಯ ಕೂಡ ಅಲ್ಲೇ ಆಯಿತು. ತರಾಸು ಅವರ ಮನೆ ಅಂದರೆ ಒಂದು ಪುಸ್ತಕದ ಅಂಗಡಿ ಅಥವಾ ಪ್ರಿಂಟಿಂಗ್ ಪ್ರೆಸ್ ಇದ್ದಂತೆ ಇತ್ತು, ಅಲ್ಲಿ ಇಲ್ಲಿ ಹರಡಿಬಿದ್ದ ಏನೋ ಪ್ರಿಂಟ್ ಆಗಿದ್ದ ಕಾಗದ ತುಂಡುಗಳು, ಪೇಪರ್ ಗಳು ಇತ್ಯಾದಿ, ಒಂದು ರೀತಿ ಅವೇ ರಂಗೋಲಿ ಹಾಕಿದಂತೆ ಬಿದ್ದಿರುತ್ತಿದ್ದವು. ಒಂದೆರಡು ಬಾರಿ ಮಾತ್ರ ತರಾಸು ಅವರನ್ನು ಕಂಡು ನಡುಗುತ್ತ ನಮಸ್ಕರಿಸಿ ಮಾತಾಡಿದ ನೆನಪು ಮಸುಕಾಗಿದೆ. ಆದರೆ ಅಲ್ಲಿ ಮೆದ್ದ ಅಂಬೊಡೆಯ ಘಮ ಇನ್ನೂ ಮೂಗು, ಬಾಯಲ್ಲಿದೆ. ನಾಲ್ಕು ದಶಕಗಳು ಕಳೆದರೂ ಇವೆಲ್ಲ ಹಸಿರು, ಕೆಲ ವರ್ಷಗಳ ಹಿಂದೆ ಅವರ ಮೈಸೂರು ಮನೆ ನೋಡುವ ಆಸೆ ಆಯ್ತು, ಹೋಗಿ ಹೊರಗಿಂದ ಕಂಡು ತೃಪ್ತನಾಗಿ ಬಂದಿದ್ದೆ.

ಈ ಸಾಹಿತಿಗಳೇ ಹೀಗೆ ತಮ್ಮ ನಡತೆಯಿಂದ ಸದಾ ಅಚ್ಚೊತ್ತಿದ ನೆನಪಾಗಿ ಹಸಿರಾಗಿರುತ್ತಾರೆ. ಅವರನ್ನು ನೋಡುವ ಮೊದಲೇ ಅವರ ಬಹುತೇಕ ಎಲ್ಲ ಕಾದಂಬರಿಗಳ ಓದನ್ನು ಮೈಸೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಮುಗಿಸಿದ್ದೆ, ಆಗಿನ್ನೂ ಅವರು ದುರ್ಗಾಸ್ತಮಾನ ರಚನೆಯಲ್ಲಿದ್ದರು, ಅದನ್ನು ಬಹು ನಿರೀಕ್ಷೆಯಿಂದ ಕಾದು ಮೊದಲ ದಿನವೇ ಗೀತಾ ಬುಕ್ ಹೌಸ್ ಗೆ ಹೋಗಿ ಖರೀದಿಸಿ ಓದಿ ಸಂಭ್ರಮಿಸಿದ ಕ್ಷಣ ಹಸಿಯಾಗಿದೆ, ಏನು ಮಾಡುವುದು? ನಾನಿದ್ದ ಹಾಸ್ಟೆಲ್ ನಲ್ಲಿ ಅವರ ಭಯಂಕರ ಅಭಿಮಾನಿಗಳಿದ್ದರು, ಕಾದಂಬರಿಯನ್ನು ತಂದೆ.  ಆದರೆ ನನಗೆ ಅದು ದಕ್ಕಿದ್ದು ವಾರಗಳ ಅನಂತರ, ಅಕ್ಕಪಕ್ಕದ ಕೋಣೆಯ ಮಿತ್ರರು ಕಸಿದು ಕೊಂಡು ಓದಿದ ಮೇಲೆ, ಇದೂ ಒಂಥರಾ ಖುಷಿ. ತರಾಸು ಅವರ ಎಲ್ಲ ಕೃತಿಗಳೂ ನನಗೆ ಇಷ್ಟ, ಅದರಲ್ಲೂ ಚಂದವಳ್ಳಿಯ ತೋಟ, ಅಣ್ಣಾವ್ರು ನಟಿಸಿದ್ದ ಜೀವನ ಚೈತ್ರ, ಕೊನೆಯಲ್ಲಿ ಬಂದ ದುರ್ಗಾಸ್ತಮಾನಗಳು ಜೊತೆಗೆ ಹಂಸಗೀತೆ ಬಲು ಇಷ್ಟ, ಇವುಗಳನ್ನು ಓದದ ಕನ್ನಡ ಬಲ್ಲವರು ಬಹುಶಃ ಇರಲಾರರು. ನಾವು ಆ ಎಂಬತ್ತರ ದಶಕದಲ್ಲಿ ಗ್ರಂಥಾಲಯಕ್ಕೆ ಹೋದಾಗ ಮೊದಲು ಹುಡುಕುತ್ತಿದ್ದ ಕಾದಂಬರಿಗಳಲ್ಲಿ ತರಾಸು, ಕಾರಂತ, ಭೈರಪ್ಪ ಮತ್ತು ಯಂಡಮೂರಿಯವರ ಕಾದಂಬರಿಗಳ ಅನುವಾದಗಳು ಸೇರಿದ್ದವು. ಕನ್ನಡದ ಬಗ್ಗೆ ಹುಚ್ಚು ಹಿಡಿಸಿದ ಲೇಖಕರಲ್ಲಿ ಇವರೂ ಒಬ್ಬರು. ಇಂದಿಗೂ ಕನ್ನಡ ಸಾಹಿತ್ಯ ಅವರನ್ನು ಮರೆತಿಲ್ಲ, ಅವರ ಕೃತಿ ನಾಗರಹಾವು ಸಿನಿಮಾ ಆಗಿ ಇನ್ನಿಲ್ಲದ ಜನಪ್ರಿಯತೆ ತಂದುಕೊಟ್ಟಿತು, ಅವರ ಕೃತಿಗಳು ಇಂದಿಗೂ ಮತ್ತೆ ಮತ್ತೆ ಮುದ್ರಣ ಕಾಣುತ್ತಲೇ ಇವೆ, ಅವರಂಥ ಲೇಖಕರಿಲ್ಲದ ಕಾರಣದಿಂದಲೋ ಏನೋ ಕನ್ನಡ ಸಿನಿಮಾಗಳು ಕೂಡ ಕೃಶವಾಗಿ ಹೋಗಿವೆ, ಡಬ್ಬಾ ಸಿನಿಮಾ ಕತೆಗಳು, ಚಿಲ್ಲರೆ ಹಾಸ್ಯಗಳು, ನೆನಪಲ್ಲಿ ಉಳಿಯುವ ಸಿನಿಮಾಗಳೇ ದುರ್ಲಭವಾಗಿವೆ, ಹೀಗೆ ಏಕಕಾಲಕ್ಕೆ ಕನ್ನಡ ಸಾಹಿತ್ಯಕ್ಕೂ ಸಿನಿಮ ಸಂಸ್ಕೃತಿಗೂ ಬಲ ತುಂಬಿದ ದೊಡ್ಡ ಶಕ್ತಿ ಅವರಾಗಿದ್ದರು, ಇಂಥವರ ಅಗಲಿಕೆ ನಿಜಕ್ಕೂ ಶೂನ್ಯ ಸೃಷ್ಟಿಸುತ್ತದೆ. ಇಂದು ಯಾರೇ ನಿಧನರಾದರೂ ಇವರ ಸಾವು ಶೂನ್ಯ ಸೃಷ್ಟಿಸಿದೆ, ಕ್ಷೇತ್ರ ಬಡವಾಗಿದೆ ಎಂದು ಹೇಳುವ ಮಾತು ಕ್ಲೀಷೆ ಆಗಿಬಿಟ್ಟಿದೆ. ಆದರೆ ತರಾಸು ಅವರ ಅಗಲಿಕೆಯಿಂದ ಖಾಲಿಯಾದ ಸ್ಥಾನವನ್ನು ಯಾರಾದರೂ ತುಂಬುವುದಿರಲಿ, ಆ ಬಗ್ಗೆ ಲಕ್ಷ್ಯ ಹಾಕಲೂ ಆಗಿಲ್ಲ ಎಂಬುದು ಅವರ ಹೆಚ್ಚುಗಾರಿಕೆ ತೋರಿಸುತ್ತದೆ, ಅವರನ್ನು ಮಡಿಲಲ್ಲಿ ಹಾಕಿಕೊಂಡು ಅವರ ಜನ್ಮಕ್ಕೆ ಕಾರಣವಾಗಿದ್ದ ಚಿತ್ರದುರ್ಗದ ತಳುಕಿನ ಬಗ್ಗೆ ಹೊಟ್ಟೆಕಿಚ್ಚು ಆಗುತ್ತದೆ, ನಮ್ಮಲ್ಲೂ ಇಂಥವರೊಬ್ಬರ ಜನನ ಆಗಬಾರದೇ ಅನಿಸುತ್ತದೆ, ಇಂಥವರ ಬಗ್ಗೆ ಪ್ರತಿಷ್ಠಾನ ಆಗಬೇಕೆಂಬ ಊಗು ಬಹಳ ಹಿಂದಿನಿಂದ ಸರ್ಕಾರದ ಮುಂದೆ ಇದೆ, ಈಗಲಾದರೂ ಇದು ಆಗುತ್ತದೆಯೇ ನೋಡಬೇಕಿದೆ.

   


Saturday, 19 April 2025

ಹೇಳುವವರು ಬೇಕಿತ್ತು


ಮೊನ್ನೆ ಗುರುವಾರ ಉಪ ರಾಷ್ಟ್ರಪತಿಗಳಾದ ಮಾನ್ಯ ಜಗದೀಪ್ ಧನಕರ್ ಅವರು ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪೊಂದನ್ನು ಕುರಿತು ತಾರ್ಕಿಕ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ, ಇದನ್ನು ಕುರಿತು ಪರ ವಿರೋಧ ಚರ್ಚೆಗಳಾಗುತ್ತಿವೆ. ಆದರೆ ಧನಕರ್ ಅವರು ಹೇಳಿದ್ದು ತಪ್ಪು ಎಂದು ಯಾರೂ ಹೇಳುತ್ತಿಲ್ಲ, ಕಾರಣವೇನೆಂದರೆ ಇಲ್ಲಿ ೯ನೆ ನ್ಯಾಯಾಲಯ ತನ್ನನ್ನು ಎಲ್ಲರಿಂದಲೂ ಮೇಲು ಎಂದು ಭಾವಿಸಿ ಮಾನ್ಯ ರಾಷ್ಟçಪತಿಗಳಿಗೇ ಆದೇಶ ಕೊಟ್ಟಿದೆ. ತಮಾಷೆ ಅಂದರೆ ಈ ನ್ಯಾಯಮೂರ್ತಿಗಳನ್ನು ನೇಮಿಸುವವರೇ ರಾಷ್ಟ್ರಪತಿಗಳು. ಅವರಿಗೇ ಈಗ ನ್ಯಾಯಾಲಯ ಆದೇಶ ಕೊಡುವ ಮಟ್ಟಕ್ಕೆ ತನ್ನನ್ನು ಏರಿಸಿಕೊಂಡಿದೆ. ಅಂದರೆ ರಾಷ್ಟ್ರಪತಿಗಳು ಪ್ರಶ್ನಾತೀತರು ಎಂದಲ್ಲ, ಅವರನ್ನು ಕೇಳಲು ಸಂಸತ್ತು ಇದೆ. ಮೊದಲು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿದೆ ತಿಳಿಯುವಾ - ಮುಖ್ಯವಾಗಿ ನಮ್ಮಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳಿವೆ, ಇವುಗಳಲ್ಲಿ ಒಂದರಲ್ಲಿ ಇನ್ನೊಂದು ಮೂಗು ತೂರಿಸುವಂತಿಲ್ಲ, ಆದರೆ ಅಂತಿಮ ನಿರ್ಧಾರ ಶಾಶಕಾಂಗದ್ದು, ಕಾರಣ ಅದು ಜನರಿಂದ ಆಯ್ಕೆ ಆಗಿದೆ ಎಂಬ ಕಾರಣಕ್ಕೆ ಆದರೆ ಅದಕ್ಕೂ ರೀತಿ ನೀತಿಗಳಿವೆ, ಒಂದಕ್ಕೊಂದು ಅವಲಂಬನೆಯಾಗಿ ಕೆಲಸ ಮಾಡುವಂತೆ ನಮ್ಮ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಸದ್ಯ ಈ ವಿಚಾರ ಏಕೆ ಚರ್ಚೆಗೆ ಬಂದಿದೆ ನೋಡುವಾ - ತಮಿಳುನಾಡು ಸರ್ಕಾರ ಈಚೆಗೆ ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನ ಮಾನ ಇರಬೇಕೆಂದು ಸದನದಲ್ಲಿ ಮಸೂದೆ ಮಂಡಿಸಿ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳಿಸಿತು, ಇದರ ಬಗ್ಗೆ ತೀಮರ್ಶಾನ ಕೈಗೊಳ್ಳದ ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳಿಸಿದರು, ಅದು ಅನುಮೋದನೆ ಪಡೆಯದೇ ಅಲ್ಲೇ ಉಳಿಯಿತು, ಕರ್ನಾಟಕದಲ್ಲೂ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನಿಗದಿಪಡಿಸಿ ಮಸೂದೆಯ ಅನುಮೋದನೆಗೆ ಕಳಿಸಿದ್ದು ಕೂಡ ಹೀಗೆಯೇ ಉಳಿಯಿತು, ಇಂಥ ಕಾರಣಕ್ಕೆ ಪ್ರಕರಣ ಸರ್ವೋಚ್ಚ ನ್ಯಾಯಾಲಯ ಮೆಟ್ಟಿಲು ಹತ್ತಿತು. ಅಲ್ಲಿ ನ್ಯಾಯಾಲಯ ಇಂಥ ಮಸೂದೆಗಳಿಗೆ ಗರಿಷ್ಠ ಆರು ತಿಂಗಳಲ್ಲಿ ಅನುಮೋದನೆ ಕೊಡಬೇಕು ಇಲ್ಲದಿದ್ದರೆ ಮಸೂದೆ ಸ್ವತಃ ಕಾನೂನಾಗುತ್ತದೆ ಎಂದು ರಾಷ್ಟ್ರಪತಿಗಳಿಗೆ ಕಾಲಮಿತಿ ಹಾಕಿದೆ, ಇದನ್ನು ಕುರಿತು ಉಪ ರಾಷ್ಟ್ರಪತಿಗಳು ಟೀಕೆ ಮಾಡಿದ್ದಾರೆ, ಆ ಸಂದರ್ಭದಲ್ಲಿ ಅವರು ಒಂದು ಸಂದರ್ಭವನ್ನು ಉಲ್ಲೇಖಿಸಿದ್ದಾರೆ, ಅಲ್ರೀ ನ್ಯಾಯಾಧೀಶರೇ ನೀವು ನ್ಯಾಯಾಲಯ ವ್ಯವಸ್ಥೆಯಲ್ಲಿ ಸರ್ವೋಚ್ಚರೇ ವಿನಾ ಎಲ್ಲ ವ್ಯವಸ್ಥೆಗೂ ಮೇಲಿನವರಲ್ಲ ಅಂನ್ನುತ್ತಾ, ಈಚೆಗೆ ದೆಹಲಿಯಲ್ಲಿ ನಿಮ್ಮಂಥ ನ್ಯಾಯಾಧೀಶರೊಬ್ಬರ ಮನೆಯಲ್ಲಿ ಮೋಟೆಗಟ್ಟಲೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಹಣದ ವಿಷಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ಮೇಲೆ ನೀವು ಆ ನ್ಯಾಯಾಧೀಶರನ್ನು ವರ್ಗ ಮಾಡಿ ಕೈ ತೊಳೆದುಕೊಂಡಿರಿ, ಅವರ ಮೇಲೆ ಬೇರೆ ಕಾನೂನು ಕ್ರಮವೇ ಆಗಲಿಲ್ಲ, ಆದರೆ ನೀವು ಈಗ ಶಾಸಕಾಂಗಕ್ಕೆ ಪಾಠ ಹೇಳಲು ಬಂದಿದ್ದೀರಿ ಅಂದಿದ್ದಾರೆ, ನಿಜ. ಅನೇಕ ಸಂದರ್ಭಗಳಲ್ಲಿ ನಮ್ಮ ಶಾಸಕಾಂಗಕ್ಕೆ ಸರಿಯಾಗಿ ಚಾಟಿ ಬೀಸಿ ಸರಿದಾರಿಗೆ ತರುವ ಕೆಲಸವನ್ನು ನ್ಯಾಯಾಲಯಗಳು ಮಾಡಿವೆ. ಆ ಕಾರಣಕ್ಕೆ ನ್ಯಾಯಾಲಯದ ಮೇಲೆ ಗೌರವ ಮುಮ್ಮಡಿ ಆದದ್ದೂ ನಿಜ. ಹಾಗಂತ ನ್ಯಾಯಾಲಯ ಎಲ್ಲ ಕಡೆ ಸುಪ್ರೀಮಸಿ ಮೆರೆಯಲು ಆಗದು. ನ್ಯಾಯಾಧೀಶರನ್ನೂ ಹೇಳಿ ಕೇಳುವ ವ್ಯವಸ್ಥೆ ಬೇಕಲ್ಲವೇ? ಈ ಸಂದರ್ಭದಲ್ಲಿ ಅವರು ೧೪೨ನೆಯ ವಿಧಿಯನ್ನು ಅಣುಕ್ಷಿಪಣಿಗೆ ಹೋಲಿಸಿ ದ್ದಾರೆ. ಧನಕರ್ ಅವರು ಮೊದಲು ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿದ್ದವರು ಅನಂತರ ರಾಜ್ಯಪಾಲರಾಗಿಯೂ ಕೆಲಸ ಮಡಿದವರು. ಅವರಿಗೆ ಇವೆಲ್ಲದರ ಪರಿಚಯ ಚೆನ್ನಾಗಿದೆ. ಈ ೧೪೨ ನೆಯ ವಿಧಿ ಏನು? ವಿಧಿ ೧೪೨ ರ ಪ್ರಕಾರ ನ್ಯಾಯಾಲಯ ತನ್ನ ಮುಂದೆ ಬಾಕಿ ಇರುವ ಪ್ರಕರಣ ಕುರಿತು ನ್ಯಾಯ ಒದಗಿಸಲು ಅಗತ್ಯ ಆದೇಶಗಳನ್ನು ಕೊಡಬಹುದಾಗಿದೆ ಎಂದು ಹೇಳುತ್ತದೆ. ಅಂದರೆ ನ್ಯಾಯದಾನಕ್ಕಾಗಿ ನ್ಯಾಯಾಲಯ ಅಂಥ ತೀರ್ಮಾನ ಕೈಗೊಳ್ಳುವ ವಿವೇಚನೆ ಕೈಗೊಳ್ಳುವ ಅವಕಾಶವನ್ನು ಇದು ಕೊಡುತ್ತದೆ, ಆದರೆ ಇದರ ಪರಿಣಾಮ ಕುರಿತು ಗಮನಿಸಬೇಕಾದವರು ಯಾರು? ಘನ ನ್ಯಾಯಾಲಯ ತನಗೆ ತಾನೇ ಸರ್ವೋಚ್ಚ ಅಧಿಕಾರವನ್ನು ಕೊಟ್ಟುಕೊಳ್ಳಬಹುದಾ ಎಂಬುದು ಪ್ರಶ್ನೆ. ನ್ಯಾಯ ವ್ಯವಸ್ಥೆಯಲ್ಲಿ ಜಿಲ್ಲಾ, ರಾಜ್ಯ, ದ್ವಿಸದಸ್ಯ ಇತ್ಯಾದಿ ಪೀಠಗಳಿವೆಯಲ್ಲಾ, ಹಾಗೆ ಸರ್ವೋಚ್ಚ ನ್ಯಾಯಾಲಯದಲ್ಲೂ ಪೀಠಗಳಿದ್ದು ಅಲ್ಲಿ ಬಹುಮತ ಉಳ್ಳ ಪೀಠ ವ್ಯವಸ್ಥೆ ಕೊಡುವ ತೀರ್ಪು ಅಂತಿಮವಾಗಿರುತ್ತದೆ, ಇಂಥ ನ್ಯಾಯ ವ್ಯವಸ್ಥೆಯಲ್ಲಿ ಅದು ಸರ್ವೋಚ್ಚ ಅಷ್ಟೇ. ಎಲ್ಲ ಕಡೆ ಅಲ್ಲ, ಅದನ್ನು ನಮ್ಮ ವ್ಯವಸ್ಥೆಯಲ್ಲಿ ಶಾಸಕಾಂಗ ಹಾಗೂ ರಾಷ್ಟ್ರಪತಿಗಳು ನಿಯಂತ್ರಿಸುತ್ತಾರೆ. ಈಗ ರಾಷ್ಟ್ರಪತಿಗಳನ್ನೇ ನಿಯಂತ್ರಿಸುವ ಕೆಲಸಕ್ಕೆ ಅದು ಕೈಹಾಕಿದೆ. ಇದನ್ನು ಧನಕರ್ ಪ್ರಶ್ನಿಸಿದ್ದಾರೆ, ಒಬ್ಬರು ಹೀಗೆ ಕೇಳುವವರು ಬೇಕಿತ್ತು ಬಿಡಿ. ಈಗ ಅದಾಗಿದೆ, ಸೂಕ್ತ ಚರ್ಚೆ ಆಗಬೇಕಿದೆ. ನಮ್ಮ ವ್ಯವಸ್ಥೆಯಲ್ಲಿ ಮೂರು ಅಂಗಗಳಲ್ಲಿ ಅನಗತ್ಯವಾಗಿ ಯಾವುದೂ ಯಾವುದರಲ್ಲೂ ಮೂಗು ತೂರಿಸುವಂತಿಲ್ಲ, ನ್ಯಾಯಾಂಗಕ್ಕೆ ಹೊಣೆಗಾರಿಕೆ ಅಗತ್ಯವೆಂದು ಹೇಳಿದ್ದಾರೆ, ಹೀಗಾದರೆ ಕಾರ್ಯಾಂಗವನ್ನು ಯಾರು ನಡೆಸುತ್ತಾರೆಂದು ಕೇಳಿದ್ದಾರೆ. ನ್ಯಾಯಾಲಯ ಸೂಪರ್ ಪಾರ್ಲಿಮೆಂಟ್‌ನಂತೆ ವರ್ತಿಸುತ್ತಿದೆ ಎಂದಿದ್ದಾರೆ. ಹೌದು, ನಮ್ಮ ವ್ಯವಸ್ಥೆಯಲ್ಲಿ ಸಂಸತ್ತೇ ಆತ್ಯಂತಿಕ ಅಧಿಕಾರ ಹೊಂದಿದೆ. ಅದರ ಮೇಲೆ ಯಾರೂ ಸವಾರಿ ಮಾಡಲಾಗದು. ನೆಲದ ಕಾನೂನು ತಮಗೆ ಅನ್ವಯವಾಗುವುದಿಲ್ಲ ಅನ್ನುವಂತೆ ನ್ಯಾಯಾಧೀಶರು ವರ್ತಿಸುತ್ತಿದ್ದಾರೆಂದು ಅವರು ಹೇಳಿದ್ದಾರೆ. ರಾಷ್ಟ್ರಪತಿಗಳಿಗೆ ೧೪೫ ಎ ವಿಧಿಯಡಿ ಮಾತ್ರ ನಿರ್ದೇಶನ ಕೊಡುವ ಅಧಿಕಾರವಿದೆ ಅಂದಿದ್ದಾರೆ. ಸರ್ಕಾರಗಳು ಸಂಸತ್ತು ಮತ್ತು ದೇಶದ ಜನತೆಗೆ ಬಾಧ್ಯಸ್ಥ,ಇವುಗಳ ಮೇಲೆ ನ್ಯಾಯಾಲಯ ಸವಾರಿ ಮಾಡಿದರೆ ಅದಕ್ಕೆ ಯಾರು ಬಾಧ್ಯಸ್ಥರೆಂದು ಅವರು ಪ್ರಶ್ನಿಸಿದ್ದಾರೆ, ಇದು ಚಿಂತಿಸಬೇಕಾದ ವಿಷಯ.ನಮ್ಮ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯ ಕ್ರಮವಿದೆ. ಜನರಿಂದ ಆಯ್ಕೆಯಾದ ಸರ್ಕಾರಗಳು ಸಂಸತ್ತಿಗೆ ಅಧೀನ, ಸಂಸತ್ತಿನಲ್ಲಿ ಟೀಕಾತ್ಮಕ ಪ್ರಶ್ನೆಗಳಿಗೆ ಅವಕಾಶವಿದೆ, ಇಂಥ ವ್ಯವಸ್ಥೆಯನ್ನು ನ್ಯಾಯಾಲಯ ನಿಯಂತ್ರಿಸಿದರೆ ಅದನ್ನು ಕೇಳುವವರು ಯಾರು ಎಂದು ಕೇಳಿದ್ದಾರೆ,ನ್ಯಾಯಾಲಯ ಕೊಡುವ ಇಂಥ ತೀರ್ಪುಗಳು ಸಂವೈಧಾನಿಕವಲ್ಲ ಎಂದು ಧನಕರ್ ಹೇಳಿದ್ದಾರೆ. ಆದರೆ ಕಾಂಗ್ರೆಸ್ ನ ಸುರ್ಜೇವಾಲ ರಾಜ್ಯಪಾಲರಿಗೂ ರಾಷ್ಟ್ರಪತಿಗಳಿಗೂ ಇಂಥ ನಿರ್ದೇಶನ ಕೊಡುವ ಅಗತ್ಯವಿತ್ತು ಎಂದು ಹೇಳಿದ್ದಾರೆ ಅಂತೂ ಇಂಥ ಚರ್ಚೆ ಆಗುವ ಅಗತ್ಯ ನಮ್ಮ ದೇಶದಲ್ಲಿತ್ತು, ಇದು ನಮ್ಮ ವ್ಯವಸ್ಥೆಯ ಸೌಂದರ್ಯ.




Friday, 18 April 2025

ರಥ ನಿರ್ಮಾಣಕ್ಕೂ ಒಂದು ಸಂಚಿಕೆ


ಇದೀಗ ದೇವಾಲಯವೊಂದರ ರಥ ನಿರ್ಮಾಣದ ಸಂದರ್ಭದಲ್ಲಿ ಕನ್ನಡದಲ್ಲಿ ಸ್ಮರಣ ಸಂಚಿಕೆಯೊಂದು ಹೊರಬಂದಿದೆ. ಇದು ಯಾಕೆ ವಿಶೇಷ ಅಂದರೆ ಕನ್ನಡದಲ್ಲಿ ಬಹುತೇಕ ಎಲ್ಲ ಸಂದರ್ಭಗಳಲ್ಲಿ, ಅದರಲ್ಲೂ ವ್ಯಕ್ತಿಗೆ ಮದುವೆ ಆದಾಗ, ಅರವತ್ತು ತುಂಬಿದಾಗ ನಿವೃತ್ತಿಯಾದಾಗ ಹೀಗೆ ಪುಸ್ತಕಗಳು ಹೊರಬಂದಿವೆ, ಅಭಿನಂದನಗ್ರಂಥಗಳಂತೂ ಲೆಕ್ಕವಿಲ್ಲದಷ್ಟು ಬಂದಿವೆ, ಆದರೆ ರಥವೊಂದಕ್ಕೆ ವಿದಾಯ ಹೇಳುವ ಕಾರಣಕ್ಕೆ ಗದರಂಥವೊಂದು ಇದೇ ಮೊದಲಬಾರಿ ಕಾಣಿಸಿದೆ. ಈ ನೆಪದಲ್ಲಿ ನಮ್ಮ ನಾಡಿನ ಭೌತಿಕ ವಿಷಯಗಳಿಗೂ ನಾವು ಕೊಡುವ ಬೆಲೆಯನ್ನು ಶಾಶ್ವತವಾಗಿ ದಾಖಲಿಸಲಾಗಿದೆ.  ಕನ್ನಡ ನಾಡಿಗೆ ಬನವಾಸಿ ಚಿರಪರಿಚಿತ ನಮ್ಮ ಬನವಾಸಿ, ಅಲ್ಲಿನ ಮಧುಕೇಶ್ವರ ಕೂಡ. ಅಲ್ಲಿನ ಕಲ್ಲಿನ ಮಂಚ ವಿಶ್ವಪ್ರಸಿದ್ಧ. ಹಾಗೆಯೇ ಪ್ರತಿವರ್ಷ ನಡೆಯುವ ಅಲ್ಲಿನ ರಥೋತ್ಸವ. ಈ ರಥೋತ್ಸವ ಸುಮಾರು ೪೦೦ ವರ್ಷಗಳಿಂದ ನಡೆಯುತ್ತಿತ್ತು,  ಆಗಿನ ಇಲ್ಲಿನ ರಾಜನಾಗಿದ್ದ ರಾಮಚಂದ್ರ ನಾಯಕನ ಕಾಲದಲ್ಲಿ ಇದು ಶುರುವಾದಾಗ ಜನರ ನೆರವಿನಿಂದ ಮತ್ತಿ ಹೊನ್ನೆ ರಂಜಲು ಇತ್ಯಾದಿ ಮರಗಳಿಂದ ಮಾಡಿಸಿದ್ದ  ದೊಡ್ಡ ರಥ ಈ ವರ್ಷದವರೆಗೂ ಮಧಕೇಶ್ವರ ಪರಿವಾರ ಹೊರುತ್ತಿತ್ತು, ಈ ಪ್ರಪಂಚದಲ್ಲಿ ಮಧುಕೇಶ್ವರನಿಗೆ ಇಲ್ಲದಿರಬಹುದು, ಆದರೆ ರಥವೂ ಸೇರಿ ಎಲ್ಲದಕ್ಕೂ ಅಂತ್ಯವಿದೆಯಲ್ಲ,  ಹಾಗೆ ಈ ರಥಕ್ಕೂ ಅಂತ್ಯ ಬಂತು. ಈ ಬಾರಿಯ ಏಪ್ರಿಲ್ ೧೨ರಂದು ನಡೆದ ರಥೋತ್ಸವ ಹಳೆಯ ರಥದ ಕೊನೆಯ ಮೆರವಣಿಗೆ. ಅದರ ಬದಲು ಈಗ ಹೊಸ ರಥ ಸಿದ್ಧವಾಗಿದೆ, ಇದನ್ನು ಶಾಸ್ತ್ರೋಕ್ತ ರೀತಿಯಲ್ಲಿ ಮಾಡಿಸಿ ಬನವಾಸಿಗೆ ಕ್ರಮದಂತೆ ತರಿಸಿಡಲಾಗಿದೆ. ಈ ಸಂಭ್ರಮದ ಸಂದರ್ಭದಲ್ಲಿ ಅಲ್ಲಿನ ಸಡಗರದ ದಾಖಲಾತಿಯ ಜೊತೆಗೆ ಬನವಾಸಿ ಕುರಿತ ಇತಿಹಾಸ ನೆನಪಿಸಿಕೊಳ್ಳುವಂತೆ ಮಹಾಸ್ಯಂದನ ಎಂಬ ಹೆಸರಿನ ಆ ರಥದ ಹೆಸರಲ್ಲಿ ಒಂದು ಸ್ಮರಣ ಸಂಚಿಕೆಯನ್ನು ಹೊರತರಲಾಗಿದೆ. ಮಹಾಸ್ಯಂದನ ಎಂಬುದು ರಥದ ಒಂದು ವಿಧ. ನಾಲ್ಕು ಚಕ್ರವಿದ್ದರೆ ಅಂಥ ಗಾಡಿಯನ್ನು ಶಕಟ, ಆರುಚಕ್ರವಿದ್ದರೆ ಸ್ಯಂದನ, ಎಂಟು ಚಕ್ರವಿದ್ದರೆ ಸುಭದ್ರವೆಂದೂ ಹತ್ತು ಚಕ್ರವಿದ್ದರೆ ಮೇರು ಎಂದು ರಥಗಳ ವಿಧಗಳಿವೆ. ಸಾಮಾನ್ಯವಾಗಿ ಈ ಪ್ರಕಾರದಲ್ಲಿಯೇ ರಥಗಳ ನಿರ್ಮಾಣವಾಗಿರುತ್ತದೆ, ಆದರೆ ನಮಗೆ ಹೊರಗಿನಿಂದ ಎರಡು ದೊಡ್ಡ ಚಕ್ರಗಳು ಮಾತ್ರ ಕಾಣಿಸುತ್ತದೆ, ಸದ್ಯ ಬನವಾಸಿಯಲ್ಲಿ ಸ್ಯಂದನ ಎಂಬ ರಥವನ್ನು ಜನತೆ ಸಿದ್ಧಪಡಿಸಿ ಮುಂದಿನ ರಥೋತ್ಸವಕ್ಕಾಗಿ ತಯಾರಿಸಿಟ್ಟಿದೆ. ಈ ಸಂದರ್ಭದಲ್ಲಿ ಹೊರತರಲಾದ ಸಂಚಿಕೆ ಮಹಾಸ್ಯಂದನ, ಇದರ ಅವಲೋಕನ ಇಲ್ಲಿದೆ. ಪ್ರಸ್ತುತ ಸಂಚಿಕೆಯನ್ನು ಮಂಗಳೂರು ಕೃಷ್ಣ ಮೂರ್ತಿಯವರು ಸಂಪಾದಿಸಿಕೊಟ್ಟಿದ್ದಾರೆ. ಇದರಲ್ಲಿ ೪೧ ವಿವಿಧ ಲೇಖನಗಳಿದ್ದು ಇದರಲ್ಲಿ ರಥದ ನಿರ್ಮಾಣ ಹೇಗಾಯಿತು, ಅದರ ಸಿದ್ಧತೆ ಹೇಗಿತ್ತು ಇತ್ಯಾದಿ ವಿವರಗಳ ಜೊತೆಗೆ ಬನವಾಸಿ ಕುರಿತ ಸಂಶೋಧನಾತ್ಮಕ ಲೇಖನಗಳೂ, ರಥೋತ್ಸವ, ಅಲ್ಲಿನ ಸಂಪ್ರದಾಯ ಇತ್ಯಾದಿ ಸಾಮಾನ್ಯ ಬರೆಹಗಳೂ ಸೇರಿವೆ. ಜೊತೆಗೆ ಸಂಭ್ರಮ ತಿಳಿಸುವ ಬಹುವರ್ಣದ ಚಿತ್ರಗಳ ಸಂಕಲನವೂ ಇದೆ. ಬಹಳ ಮುಖ್ಯವಾಗಿ ಆ ಪರಿಸರದ ಮಹನೀಯರಾದ ಗುರುಗಳಾದ ಸ್ವರ್ಣವಲ್ಲೀ ಶ್ರೀಗಳು ಹೆಜ್ಜೆ ಹೆಜ್ಜೆಗೆ ಮಾರ್ಗದರ್ಶನ ನೀಡುವುದರ ಜೊತೆಗೆ ರಥ ನಿರ್ಮಾಣಕ್ಕೆ ಆಶೀರ್ವಾದ ಪೂರ್ವಕವಾಗಿ ಶುರುವಾತಿನಲ್ಲೇ ಒಂದು ಲಕ್ಷ ರೂ ಹಣ ಕೊಟ್ಟು ದಾನಿಗಳಿಗೆ ಉತ್ತೇಜನ ನೀಡಿದ್ದಾರೆ ಇದರ ಫಲವಾಗಿ ಕೋಟ್ಯಂತರ ರೂ ಹರಿದುಬಂದು ಸಾರ್ವಜನಿಕರ ನೆರವಿನೊಂದಿಗೆ ಸುಂದರ ರಥ ನಿರ್ಮಾಣವಾಗಿದೆ, ಸುಂದರ ಸಂಚಿಕೆ ಸಿದ್ಧವಾಗಿದೆ, ನಮ್ಮ ದೇಶದಲ್ಲಿ ಲಕ್ಷಾಂತರ ಮಠ ಮಾನ್ಯಗಳು, ದೇಗುಲಗಳಿವೆ, ಇವುಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ನಿತ್ಯ ಒಂದಲ್ಲ ಒಂದು ಊರಲ್ಲಿ ಸಂಪ್ರದಾಯ, ಆಚರಣೆಗಳ ಸಂಭ್ರಮ ಇರುತ್ತದೆ, ಶುಭ ಸಂದರ್ಭಗಳಲ್ಲಿ ಲೆಕ್ಕ ವಿಲ್ಲದಷ್ಟು ಕಡೆ ರಥೋತ್ಸವಗಳು ನಡೆಯುತ್ತವೆ. ಬನವಾಸಿಯೂ ಈ ಪಟ್ಟಿಯಲ್ಲಿದೆ. ಅಲ್ಲಿನ ರಥೋತ್ಸವ ಊರ ಜನರಿಗೆ ಇನ್ನಿಲ್ಲದ ಸಂಭ್ರಮ, ಹೇಳಿ ಕೇಳಿ ಅದು ಕನ್ನಡದ ಆದ್ಯ ಕವಿ ಪಂಪನ ಊರು, ಹಾಗಾಗಿ ಇಡೀ ನಾಡಿಗೆ ಅದರ ಬಗ್ಗೆ ಹೆಮ್ಮೆ ಇದೆ. ಸರ್ಕಾರಕ್ಕೂ ಕಾಳಜಿ ಇದೆ. ಆದ್ದರಿಂದ ಸರ್ಕಾರ ಈ ರಥದ ನಿರ್ಮಾಣ ಸೇರಿ ಎಲ್ಲ ಹಂತದಲ್ಲೂ ನೆರವಾಗಿದೆ. ಈ ರಥದ ರಚನೆ  ಒಂದು ಹಳೆಯ ರಥದ ಬದಲು ಇನ್ನೊಂದು ಎಂಬಂತೆ ಕಾಟಾಚಾರಕ್ಕೆ ತಯಾರಾಗಿ ನಿಂತಿಲ್ಲ, ಅಲ್ಲೊಂದು ಭಾವನಾತ್ಮಕ ಸಂಬಂಧ ಸಾವಿರಾರು ವರ್ಷಗಳಿಂದ ರೂಪುಗೊಂಡಿದೆ, ಇವನ್ನೆಲ್ಲಸಂಚಿಕೆಯಲ್ಲಿ ದಾಖಲಿಸಲಾಗಿದೆ, ಸ್ತುತ್ಯರ್ಹ ಸಂಗತಿ ಎಂದರೆ ಈ ಸಂಚಿಕೆಯಲ್ಲಿ ತನ್ನ ಸಾವಿರಾರು ವರ್ಷಗಳ ಕಥನವನ್ನು ಆತ್ಮ ನಿವೇದನೆಯ ರೂಪದಲ್ಲಿ ರಥವೇ ಹೇಳಿಕೊಂಡಂತಿರುವ ಕಥನವಿದೆ, ಇದು ಒಂದು ಭೌತಿಕ ವಸ್ತು ನಮ್ಮೊಂದಿಗೆ ಹಲವಾರು ವರ್ಷಗಳ ಒಡನಾಟ ವಿಟ್ಟುಕೊಂಡಾಗ ಅದಕ್ಕೂ ಒಂದು ಬಗೆಯ ನಂಟು ನಮ್ಮೊಂದಿಗೆ ಬೆಳೆದಿರುತ್ತದೆ ಎಂಬುದನ್ನು ಕಾಣಿಸುತ್ತದೆ, ಬನವಾಸಿ ಕುರಿತ ಚರಿತ್ರೆ, ಅಲ್ಲಿನ ಆಚಾರ ವಿಚಾರ ಇತ್ಯಾದಿಗಳನ್ನೊಳಗೊಂಡ ಸಂಚಿಕೆ ಇದಾಗಿದೆ. ಇಂಥ ಸಂದರ್ಭದಲ್ಲಿ ಬಹುಶಃ ಮೊದಲಬಾರಿ ನಮ್ಮ ನಾಡಲ್ಲಿ ಸಂಚಿಕೆಯೊಂದು ಹೊರಬರುತ್ತಿದೆ ಎಂಬುದು ಇದರ ಹೆಚ್ಚುಗಾರಿಕೆ. ಅಲ್ಲಿನ ಸಾಂಸ್ಕೃತಿಕ ಐತಿಹಾಸಿಕ ಸಾಮಾಜಿಕ ಹೀಗೆ ಎಲ್ಲವೂ ಇರುವಂತೆ ತಯಾರಿಸಲಾದ ಈ ಸಂಚಿಕೆಯಲ್ಲಿ ವಿಶಿಷ್ಟ ಅನಿಸುವಂತೆ ಮತ್ತೇನು ಮಾಡಬಹುದಾಗಿತ್ತೆಂದು ಹೇಳಲಾಗದು. ಅಲ್ಲಿನ ಆಹಾರ ವೈವಿಧ್ಯ ಪರಂಪರೆಯ ವಿವರವೊಂದು ಇರಬೇಕಿತ್ತು ಅನಿಸಿತು. ಉಳಿದಂತೆ ಇಂಥ ಸಂದರ್ಭವನ್ನು ಹಸಿರಾಗಿಸುವ ಇಂಥ ಪ್ರಯತ್ನವೇ ಸ್ತುತ್ಯರ್ಹ. ಆದರೆ ಪ್ರಸ್ತುತ ಸಂಚಿಕೆಯಲ್ಲಿ ಬರಹಗಳಿಗೆ ಇನ್ನೂ ಹೆಚ್ಚು ಪ್ರಾಶಸ್ತಯ ಕೊಟ್ಟು ಚಿತ್ರಗಳನ್ನು ಕಡಿಮೆ ಮಾಡಬಹುದಿತ್ತು ಅನಿಸುತ್ತದೆ, ಗಮನಿಸಬೇಕಾದ ಸಂಗತಿ ಎಂದರೆ ಈ ಯತ್ನದಲ್ಲಿ ತೊಡಗಿಸಿಕೊಂಡ ಬಹುತೇಕರು ಪ್ರೀತಿ ಮತ್ತು ಶ್ರದ್ಧೆಗಳಿಂದ ಸಂಚಿಕೆಯ ಕೆಲಸ ಮಾಡಿದ್ದಾರೆಯೇ ವಿನಾ ಯಾರೊಬ್ಬರೂ ಶೈಕ್ಷಣಿಕ ಕಾರಣಕ್ಕಾಗಿ ಮಾಡಿಲ್ಲ, ಆದರೆ ಇದು ಶೈಕ್ಷಣಿಕ ಕಾರ್ಯಕ್ಕೂ ಉಪಯುಕ್ತ ಎಂಬುದನ್ನು ಗಮನಿಸಬೇಕು. ಒಟ್ಟಿನಲ್ಲಿ ಊರವರು ಸಂಭ್ರಮಿಸುವ ಕೆಲಸವೊಂದನ್ನು ಸಂಚಿಕೆಯ ಮೂಲಕ ಊರ ನಾಗರಿಕರಿಗೆ ಸಂತೋಷವಾಗುವಂತೆ ದಾಖಲಿಸುವ ಕೆಲಸ ಇಲ್ಲಿ ನಡೆದಿದೆ ಅನ್ನುವುದು ಮುಖ್ಯ. ದಾಖಲಾದ ಚಿತ್ರಗಳಲ್ಲಿ ವ್ಯಕ್ತಿಗಳದ್ದೇ ಹೆಚ್ಚಿದೆ, ಬದಲಾಗಿ ಆ ಪರಿಸರದ, ಗುಡ್ನಾಪುರ, ಅಲ್ಲಿನ ಉತ್ಖನನ, ಸಸ್ಯ ವಿಶೇಷ, ಪರಿಸರ ಇತ್ಯಾದಿ ವರ್ಣ ಚಿತ್ರಗಳಿಗೆ ಆದ್ಯತೆ ಕೊಡಬಹುದಾಗಿತ್ತು ಅನಿಸುತ್ತದೆ. ಉಳಿದಂತೆ ಸಂಚಿಕೆ ಬನವಾಸಿಯ ಕಾರಣಕ್ಕೆ ಸಂಗ್ರಹಯೋಗ್ಯವೇ ಆಗಿದೆ.


ಸಂಚಿಕೆ ವಿವರ -

ಮಹಾಸ್ಯಂದನ, ಬನವಾಸಿ ಮಧುಕೇಶ್ವರ ದೇವರ ನೂತನ ಮಹಾಸ್ಯಂದನ ರಥ ನಿರ್ಮಾಣ ಸಮಿತಿ, ೨೦೨೩, ಪುಟಗಳು ೨೧೬, ಬಹುವರ್ಣ ಸಂಚಿಕೆ. 




Saturday, 12 April 2025

ಅಗಲಿದ ಕಮಲಕ್ಕ


ಹೌದು. ನಮ್ಮೆಲ್ಲರ ಪ್ರೀತಿಯ ಹಿರಿಯ ಜೀವ ಕಮಲಕ್ಕ ನಿನ್ನೆ ನಮ್ಮೆಲ್ಲರನ್ನು ಅಗಲಿದರೆಂದು ತಿಳಿದು ಸಂಕಟವೂ ಸ್ವಲ್ಪಸಮಾಧಾನವೂ ಆಯಿತು. ಇದೇನು? ಯಾರದಾದರೂ ಸಾವಿಗೆ ಸಮಾಧಾನವೇ? ಅನ್ನಬೇಡಿ. ಸಮಾಧಾನ ಏಕೆಂದರೆ ಸುಖವಾಗಿರಬೇಕಿದ್ದ ಕೊನೆಯ ದಿನಗಳಲ್ಲಿ ಕೆಲವು ತಿಂಗಳು ಮೈ ಮುಟ್ಟಿದರೆ ಚರ್ಮ ಕಿತ್ತುಬರುವಂತೆ ಸೊರಗಿದ್ದರು, ಬಹು ಅಂಗಾಂಗ ವೈಫಲ್ಯವಾಗಿತ್ತು, ಒಬ್ಬರ ನೆರವಿಲ್ಲದೇ ಸ್ವಂತ ಕೆಲಸ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ, ಕಷ್ಟ ತಿಂದ ಜೀವ ಸಹಜ ಸಾವನ್ನು ಕಂಡು ನರಳಾಟದಿಂದ ಮುಕ್ತಿ ಪಡೆಯಿತು ಎಂಬ ಸಮಾಧಾನವಷ್ಟೇ.
ನಿಜ. ಮನುಷ್ಯ ಎಷ್ಟೇ ಕಷ್ಟಪಡಲಿ ಅವನಿಗೆ ಎಷ್ಟು ದಕ್ಕಲಿದೆಯೋ ಅಷ್ಟೇ ಸಿಗುವುದು ಎಂಬ ನಮ್ಮ ಸಂಪ್ರದಾಯದ ಕರ್ಮ ಸಿದ್ಧಾಂತ ನಿಜ ಅನಿಸುವ ಸಾಕಷ್ಟು ನಿದರ್ಶನಗಳನ್ನು ಕಂಡಿದ್ದೇನೆ. ಅದಕ್ಕೆ ಉತ್ತಮ ನಿದರ್ಶನ ನಮ್ಮ ಕಮಲಕ್ಕ. ನೀವು ಏನೇ ಅನ್ನಿ. ಕಷ್ಟಪಡುವವರಿಗೆಲ್ಲ ಸುಖ ಕಟ್ಟಿಟ್ಟ ಬುತ್ತಿ ಅನ್ನಲಾಗದು. ಕಷ್ಟಪಟ್ಟರೆ ಸುಖ ಸಿಗುವ ಛಾನ್ಸ ಜಾಸ್ತಿ ಎಂದಷ್ಟೇ ಇದರ ಅರ್ಥ. ನ್ಯಾಯದ ಹಾದಿಯಲ್ಲಿ ಬರೀ ಸುಖಕ್ಕಾಗಿ ಕಳ್ಳಹಾದಿ ಹಿಡಿಯುವವರ ಬಗ್ಗೆ ನನಗೆ ತಿಳಿದಿಲ್ಲ, ನಾನೂ ನೋಡಿದ್ದೇನೆ, ನಾನು ಸಣ್ಣವನಾಗಿದ್ದಾಗಿನಿಂದ. ಅಂದು ಜೀವ ಬಗ್ಗಿಸಿ ಎಷ್ಟು ಕಷ್ಟ ಪಡುತ್ತಿದ್ದರೋ ಅವರೆಲ್ಲ ಇನ್ನೂ ಹಾಗೆಯೇ ಇದ್ದಾರೆ, ಆದರೆ ಕೆಲವರಿಗೆ ಜೀವನ ಬದಲಾಗಿ ಸ್ವಲ್ಪ ಸುಖದ ಹಾದಿ ಕಾಣಿಸಿದೆ. ಈ ಕಮಲಕ್ಕ ಅಂಥವರಾಗಿದ್ದರು. ವಾವೆಯಲ್ಲಿ ಅವರು ನನ್ನ ಸಹೋದರಿಯ ಖಾಸಾ ಅತ್ತೆ ಅಂದ್ರೆ ನನಗೂ ಬಾವನ ಅಮ್ಮ. ಆದರೆ ನಾವೆಲ್ಲ ಅವರ ಕಾಲೆಳೆಯಲು ಕಮಲಕ್ಕ ಎಂದೇ ಪ್ರೀತಿಯಿಂದ ಕರೆಯುತ್ತಿದ್ದುದು. ಅಕ್ಕಪಕ್ಕದ ಮನೆಯವರು ಕರೆಯುತ್ತಿದ್ದಂತೆ, ಆದರೆ ಬಗೆಬಗೆಯ ೮೫ ವಸಂತಗಳನ್ನು  ಕಂಡಿದ್ದ ಅವರು ನಮ್ಮಂಥ ಎಳೆಯರು ಮಾಡುತ್ತಿದ್ದ ಕುಚೇಷ್ಟೆಗಳನ್ನು ಣ್ಣಗೆ ಹೊಟ್ಟೆಗೆ ಹಾಕಿಕೊಂಡು ನಗುಮುಖದಿಂದ ಇರುತ್ತಿದ್ದರು. ಅವರ ಬಾಲ್ಯದಿಂದಲೇ ಕಷ್ಟಗಳು ಇವರ ಹುಟ್ಟಿಗಾಗಿ ಕಾಯುತ್ತಿದ್ದವೇನೋ ಎಂಬಂತೆ ಒಂದರ ಹಿಂದೆ ಒಂದರಂತೆ ಅಮರಿಕೊಂಡವು. ಹುಟ್ಟಿದ ಕೆಲ ತಿಂಗಳಲ್ಲಿ ಅವರ ಪೋಷಕರು ಕಣ್ಣುಮುಚ್ಚಿದರು. ವಿದ್ಯೆ ಕಲಿಯಲಾಗಲಿಲ್ಲ, ಸಹೋದರರು ಜೊತೆಯಾಗಿದ್ದು ಮದುವೆ ಮಾಡಿಸಿದರು, ಗಂಡ ಸಜ್ಜನ, ಶ್ರೀಮಂತರಾಗಿರಲಿಲ್ಲ, ಹೊಟ್ಟೆಬಟ್ಟೆಗೆಕೊರತೆ ಇರದಂತೆ ಮರ್ಯಾದೆಯಿಂದ ಜೀವನ ನಡೆಸಿತ್ತಿದ್ದವರು. ಒಂದಿಷ್ಟು ಪಾಕವಿದ್ಯೆ ಕೈಗೆ ಹತ್ತಿತ್ತು. ಅದನ್ನೇ ನಂಬಿ ಹೊಸ ಜೀವನ ಕಟ್ಟಿಕೊಳ್ಳಲು ಕುಮಟಾದ ಹೆಗಡೆ ಎಂಬಲ್ಲಿಗೆ ಯಾರೋ ಹಿತೈಷಿಗಳೋ ಹಿತಶತ್ರುಗಳೋ ಹೇಳಿದ ಮಾತು ನಂಬಿ ಪಾಪದ ಗಂಡನೊಂದಿಗೆ ಹೆಜ್ಜೆ ಹಾಕಿದರು. ಅಲ್ಲಿ ಕೆಲಕಾಲ ಜೀವನ ಕಟ್ಟಿಕೊಳ್ಳುವ ವ್ಯರ್ಥ ಸಾಹಸ ಮಾಡಿ ಕೈಸುಟ್ಟುಕೊಂಡು ವಾಪಸು ಮೂಲ ನೆಲೆಗೆ ಬಂದರೆ ಇಲ್ಲಿ ಇದ್ದ ಬಿದ್ದ ಆಸ್ತಿ ದಾಯಾದಿಗಳ ಪಾಲಾಗಿತ್ತು, ಎಲ್ಲ ಕಡೆಯೂ ನಾಸ್ತಿ ನಾಸ್ತಿ. ಒಬ್ಬ ಮಗ ಜನಿಸಿದ್ದ. ಅವನನ್ನೂ ಕಟ್ಟಿಕೊಂಡು ಮತ್ತೆ ಅಲ್ಲಿ ಇಲ್ಲಿ ಜೀವ ಸವೆಸಿದರು, ಇಲ್ಲ, ಅನಂತರ ಕೆಲವು ಬಂಧುಗಳ ನೆರವಿನಿಂದ ತಾವಿರುವ ಜಾಗದಲ್ಲೇ ನಾಲ್ಕಾರು ದಶಕಗಳ ಹಿಂದೆ ಮನೆಯೂಟ ಹಾಕುವ ಕಾಯಕ ಶುರು ಮಾಡಿದರು, ಲಾಭದ ಆಸೆಗೆ ಅಲ್ಲ, ಏನಾದರೂ ಕೆಲಸ ಮಾಡಬೇಕು ಸುಮ್ಮನಿರಬಾರದೆಂಬ ಕಾರಣಕ್ಕೆ. ಆಯಿತು. ಅಚ್ಚುಕಟ್ಟಾಗಿ ಸ್ವಂತ ಮನೆಯ ಜನರಿಗೆ ಅಡುಗೆ ಮಾಡುತ್ತಿದ್ದೇನೆಂಬ ಪ್ರೀತಿಯಿಂದ ಪೇಟೆ ಕೆಲಸಕ್ಕೆ ಬಂದು ಇವರ ಮನೆಯ ಕದ ತಟ್ಟಿದವರಿಗೆಲ್ಲ ಅವರ ಕಷ್ಟ ಸುಖ ಕೇಳಿ ಹೊಟ್ಟೆ ತುಂಬ ಬಡಿಸಿ ಕಳಿಸುತ್ತಿದ್ದರು. ಅಷ್ಟರಲ್ಲಿ ನಮಗೆ ಅವರ ನೆಂಟಸ್ತನ ಬೆಳೆದಿತ್ತು. ನಾನು ಒಂದಿಷ್ಟು ಅದೂ ಇದೂ ಓದಿಕೊಂಡಿದ್ದೆ ಶಿವಕೋಟ್ಯಚಾರ್ಯನ ವಡ್ಡಾರಾಧನೆ ತಿಳಿದಿತ್ತು. ಅದರಲ್ಲಿ ಅನೇಕ ಬಾರಿ ಅಡುಗೋಲಜ್ಜಿಯ ಪ್ರಸ್ತಾಪ ಬರುತ್ತದೆ. ಯಾವುದೋ ಊರು, ಪಟ್ಟಣ, ಬಂಧು ಬಳಗವಿಲ್ಲ, ದಾರಿಹೋಕರು ಬಳಲಿ ಬೆಂಡಾಗಿ ಬಂದರೆ ಊಟವಿರಲಿ, ಒಂದು ಗುಟುಕು ನೀರು ಕೊಡುವವರು ಯಾರು? ಅಂಥ ಕೆಲಸ ಮಾಡುತ್ತಿದ್ದವಳು ಅಡುಗೂಲಜ್ಜಿ. ಇದು ಕೋಳು ಇಡುವ ಅಜ್ಜಿ ಕೂಳು ಅಂದ್ರೆ ಊಟ. ಅಡುಗೆ ಮಾಡಿ ಬಡಿಸುವವಳು ಎಂದರ್ಥ. ಸುಮ್ಮನೇ ಹೇಗೋ ಮಾಡಿದ  ಅಡುಗೆಯನ್ನು ಬಂದವರಿಗೆ ಒಟ್ಟುವುದಲ್ಲ, ಬಂದವರು ಗೌರವಾನ್ವಿತ ಅತಿಥಿಗಳು ಅವರೇ ದೇವರು ಎಂಬಂತೆ, ನಮ್ಮ ಸಂಪ್ರದಾಯದ ರೀತಿ ನೀತಿ ತಪ್ಪದಂತೆ ಊಟ ಬಡಿಸುವರು, ಅವರ ಆತಿಥ್ಯ ಕಂಡಾಗಲೆಲ್ಲ ನನಗೆ ವಡ್ಡಾರಾಧನೆಯ ಅಡುಗೂಲಜ್ಜಿಯ ನೆನಪಾಗುತ್ತಿತ್ತು. ಆಗ ಟಿವಿ ವಾಹಿನಿಗಳಿರಲಿಲ್ಲ, ದೂರದರ್ಶನ ವಿತ್ತು, ಒಂದಿಷ್ಟು ರಾಷ್ಟ್ರೀಯ ಅಂತಾರಾಷ್ಟ್ರೀಯ ಸುದ್ದಿಗಳು ಯಾವಾಗಲೋ ಬರುತ್ತಿದ್ದವು, ಆದರೆ ಕಮಲಕ್ಕನಿಗೆ ಅವರು ಇರುವಲ್ಲೇ ತಾಜಾ ತಾಜಾ ಲೋಕಲ್ ನ್ಯೂಸ್ ಬಂದು ಬೀಳುತ್ತಿದ್ದವು. ಆದರೆ ಇವನ್ನು ಅವರು ಎಂದೂ ಬಾಯಿಚಪಲ ಕ್ಕೆ ಬಳಸದೇ ಬಂದವರ ಕಷ್ಟಕ್ಕೆ ಕೊರಗಿ ಒಂದಿಷ್ಟು ಸಮಾಧಾನ ಹೇಳಿ ಯಾರಿಗೆ ಎಷ್ಟು ತಿಳಿಸಬೇಕೋ ಅಗತ್ಯವಿದ್ದರೆ ಅಷ್ಟು ಮಾಡಿ ಮರೆಯುತ್ತಿದ್ದರು, ಬೇಕಿದ್ದರೆ ಅವರು ಯಾರೋ ಏನೋ ಯಾರ ಬಗ್ಗೆಯೋ ಹೇಳಿದ ಮಾತನ್ನು ಹಣದ ಆಸೆಗೆ ಬಳಸಿಕೊಳ್ಳುವ ಇಂದಿನ ಪೀತ ಪತ್ರಿಕೆಗಳು ಮಾಡುವಂತೆ ಬಳಸಿಕೊಂಡಿದ್ದರೆ ಸಾಕಷ್ಟು ಆಸ್ತಿ ಮಾಡಬಹುದಿತ್ತು, ಏಕೆಂದರೆ ಅವರಿಗೆ ಊರಿನ ಸಾಕಷ್ಟು ಶ್ರೀಮಂತ ಕುಳಗಳ ಬಂಡವಾಳದ ಬಗ್ಗೆ ಮಾಹಿತಿ ಸಿಕ್ಕಿರುತ್ತಿತ್ತು. ಇಲ್ಲ, ಅವರೆಂದೂ ಹಾಗೆ ಮಾಡಿಲ್ಲ, ಅಲ್ಲ, ಯೋಚನೆಯನ್ನೂ ಮಾಡಲಿಲ್ಲ, ಏಕೆಂದರೆ ಅವರು ಆಧುನಿಕ ಶಿಕ್ಷಣ ಪಡೆದಿರಲಿಲ್ಲ, ಸತ್ಯಸಂಧರಾಗಿ ತಮ್ಮ ಪಾಲಿಗೆ ಬದುಕು ಎಷ್ಟು ಕೊಟ್ಟಿತೋ ಅಷ್ಟನ್ನೇ ನೆಚ್ಚಿ ಕಾಲ ಕಳೆದರು. ಕೆಲವೊಮ್ಮೆ ಪಾಪ ಇವರ ಬಳಿ ಅಡುಗೆ ಮಾಡಲು ತರಕಾರಿ ಅಕ್ಕಿಯಾದಿ ಮೂಲ ದ್ರವ್ಯಗಳೇ ಇರುತ್ತಿರಲಿಲ್ಲ, ಆದರೂ ತಾವು ತಮ್ಮೆಜಮಾನರು ಕೋಡಿಟ್ಟ ಅಲ್ಪಸ್ವಲ್ಪ ಹಣದಿಂದ ಎಷ್ದಟು ಸಾಧ್ಯವೋ ಅಷ್ಟು ಅನ್ನ, ಸಾರು ಪಲ್ಯವನ್ನಾದರೂ ಮಾಡಿಡುತ್ತಿದ್ದರು. ಯಾರಾದರೂ ತಮ್ಮನ್ನು ನಂಬಿ ಬಂದರೆ ಎಂದು. ಕಷ್ಟ ಎಷ್ಟೇ ಇರಲಿ, ಹಸಿದು ಬಂದವರನ್ನು ಹಾಗೇ ಹಿಂದೆ ಕಳಿಸಿದ ಜೀವ ಅದಾಗಿರಲಿಲ್ಲ, ಕೆಲವೊಮ್ಮೆ ತಮ್ಮ ಊಟವನ್ನೇ ಬಂದವರಿಗೆ ತೃಪ್ತಿಯಿಂದ ಬಡಿಸಿ ಕನ್ನಡದ ಪಂಢರೀಬಾಯಿ ಸಿನಿಮಾ ಪಾತ್ರದಂತೆ ಸಮಾಧಾನ ಪಟ್ಟುಕೊಂಡ ದಿನಗಳಿಗೆ ಲೆಕ್ಕವಿಲ್ಲ, ಅವರ ಬಳಿ ಬರುವ ಆಸಾಮಿಗಳಾದರೂ ಎಂಥವರು? ಇವರಾದರೋ ಊಟಕ್ಕೆ ಇಷ್ಟೆಂದು ಹಣ ನಿಗದಿ ಮಾಡಿರಲಿಲ್ಲ, ಏಕೆಂದರೆ ಅದು ಅವರ ವ್ಯವಹಾರವಾಗಿರಲಿಲ್ಲ, ಅನ್ನವನ್ನು ಮಾರಬಾರದೆಂಬ ಸಂಪ್ರದಾಯದ ಮಾತಲ್ಲಿ ನಂಬಿಕೆ ಇಟ್ಟಿದ್ದರು, ಮತ್ತೆ ಜೀವನ? ದೇವರಿದ್ದಾನೆ ಅನ್ನುತ್ತಿದ್ದರು. ಒಮ್ಮೆ ನಾನೂ ನೋಡುತ್ತಿದ್ದೆ ಮಾಡಿದ್ದ ಅಡುಗೆಯೆಲ್ಲ ಮುಗಿದು ಪಾತ್ರೆ ತಳ ಹಿಡಿದಿತ್ತು. ನಿತ್ಯ ಇದೇ ಕತೆ ಅನ್ನಿ, ಇನ್ನೇನು ತಾವು ಏನಾದರೂ ತಿನ್ನಬೇಕೆಂದು ಅವಲಕ್ಕಿ ಹುಡುಕುತ್ತಿದ್ದರು, ಅಷ್ಟರಲ್ಲಿ ಮಾಗಿಲಲ್ಲಿ ಯಾರೋ ಕಮಲ್ಲಕ್ಕಾ ಊಟ ಇದ್ಯಾ ಅಂದ್ರು, ಇವರು ಅವಲಕ್ಕಿ ಪಾತ್ರೆ ಅಲ್ಲೇಬಿಟ್ಟು ಅಯ್ಯೋ ಅಲ್ಲೇ ಯಾಕೆ ನಿಂತಿದ್ದೀರಾ ಒಳಗೆ ಬನ್ನಿ ಅನ್ನುತ್ತಾ ಬಂದವರಿಗೆ ನೀರು ಮಜ್ಜಿಗೆ ಕೊಟ್ಟು ಎಲೆ ಅಡಕೆ ಬಟ್ಟಲು ನೀಡಿ  ಸ್ವಲ್ಪ ತಾಳಿ ಇನ್ನೇನು ಅಡುಗೆ ಆಗುತ್ತದೆ ಅಂದರು, ಅನಂತರ ಅವರಿಗೆ ಅವಲಕ್ಕಿ ಉಪಾಹಾರ ಬಡಿಸುತ್ತ ಇಂದು ಹೆಚ್ಚು ಏನೂ ಮಾಡಲಿಲ್ಲ, ಕ್ಷಮಿಸಿ ಅನ್ನುವಂತೆ ಕೇಳಿದರು, ಬಂದವರು ಅಷ್ಟರಲ್ಲೇ ತೃಪ್ತಿಯಿಂದ ಉಂಡು ಏನನ್ನೂ ಕೊಡದೇ ಎದ್ದು ಹೋದರು, ನಾನು ಕಮಲಕ್ಕಾ ಅವರು ಏನೂ ಕೊಡಲಿಲ್ಲ ಅಂದೆ, ಹುಚ್ಚ ಹಂಗೆಲ್ಲ ಹೇಳಬಾರದು. ಕೊಡುವವರು ಕೊಡ್ತಾರೆ ಅಂದರು, ಇನ್ನೊಂದು ದಿನ ಹೀಗೆ ಬಂದು ಉಂಡವರು ಸುಮ್ಮನೇ ಒಂದಿಷ್ಟು ಹಣ ತೆಗೆದು ಇವರಿಗೆ ಕೊಟ್ಟು ಹೋದರು ಎಷ್ಟಂದು ಅವರೂ ಕೇಳಲಿಲ್ಲ, ಇವರೂ ಹೇಳಲಿಲ್ಲ, ನಾನು ಎರಡಕ್ಕೂ ಮೂಕ ಸಾಕ್ಷಿ ಆಗಿದ್ದೆ. ನೋಡು ಆದಿನ ಸಿಗದ್ದು ಇಂದು ಬಂತು, ದೇವರು ಹೇಗೋ ಕೊಡ್ತಾನೆಂದು ತತ್ತ್ವ ತಿಳಿಸಿದರು. ತಲೆ ಹಾಕಿದೆ. ಇಷ್ಟರಲ್ಲೇ ಜೀವನ ಸುಖ ಕಂಡ ಅವರ ಮಗ ಅರೆಕಾಲಿಕ ಅಂಚೆ ಸೇವೆಯಲ್ಲಿದ್ದು ಇನ್ನೇನು ಕಾಯಂ ಆಗುತ್ತದೆ ಅನ್ನುವಷ್ಟರಲ್ಲಿ ದಿಢೀರನೆ ಕಣ್ಣು ಮುಚ್ಚಿದ್ದ. ಈ ಸೊಸೆಯ ಜೊತೆಗೆ ಇಬ್ಬರು ಪುಟ್ಟ ಮಕ್ಕಳ ಜವಾಬ್ದಾರಿಯನ್ನೂ ಕೊಟ್ಟು ಹೋಗಿಬಿಟ್ಟ ಎಂದು ಅಲವತ್ತುಕೊಂಡರು. ದುರಂತ ಎಂದರೆ ಅವರ ಜೀವನ ಸಂಗಾತಿ ಮೊದಲೇ ಹೋಗಿದ್ದರು,  ಆದರೆ ಅವರ ಕಷ್ಟಕ್ಕೆ ಸೊಸೆ ನಿಂತಳು. ಅವಳನ್ನು ಸ್ವಂತ ಮಗಳಂತೆ ಕಂಡರು. ಪೇಟೆಗೆ ಬಂದ ಬಡವರ ಪಾಲಿಗೆ ಅನ್ನಪೂರ್ಣೆ ಆಗಿದ್ದ ಕಮಲಕ್ಕೆ ಮಕ್ಕಳಿಗೂ ಸೊಸೆಗೂ ಉತ್ತಮ ಸಂಸ್ಕಾರ ಕೊಟ್ಟರು, ಅವರ ಪುಣ್ಯ ಸ್ವಲ್ಪ ಕೈ ಹಿಡಿಯಿತು, ಮೊಮ್ಮಕ್ಕಳು ಬೆಳೆದು ಸ್ವಂತ ಜೀವನ ನಡೆಸುತ್ತ ಮದುವೆ ಆಗಿ ಮರಿ ಮಕ್ಕಳನ್ನು ಅವರ ಕೈಗೆ  ಕೊಟ್ಟರು. ಆನಂದ ಪಟ್ಟರು, ಬದುಕಿನುದ್ದಕ್ಕೂ ಏಗಿದರು, ಕೊನೆಯಲ್ಲಿ ಒಂದಿಷ್ಟು ನೆಮ್ಮದಿ ಕಂಡರು, ಆಸ್ತಿ ಮಾಡಲಿಲ್ಲ, ಅವರಾಗಲಿ ನಡು ವಯಸ್ಸಿಗೇ ವಿದಾಯ ಹೇಳಿದ ಅವರ ಮಗನಾಗಲಿ ಮಾಡಿದ ಆಸ್ತಿ ಎಂದರೆ ಜನರ ಸಂಪಾದನೆ, ಅವರ ಮಗ ತೀರಿಕೊಂಡಾಗ ಧೋ ಎಂದು ಸುರಿಯುವ ಮಲೆನಾಡಿನ ಬಿರುಮಳೆ. ಮನೆಯ ಮುಂದೆ ಕೋರಲು ಜಾಗವಿಲ್ಲ, ಆದರೆ ಹೀಗಾಯ್ತಂತೆ ಹೋದರಂತೆ ಎಂದು ಮಾತು ಕೇಳಿ ಮಳೆಯನ್ನೂ ಲೆಕ್ಕಿಸದೇ ಬಂದ ಜನರ ನೂಕು ನುಗ್ಗಲು ಕಂಡು ಗಾಬರಿ ಬಿದ್ದಿದ್ದೆ, ಸಾಲದ್ದಕ್ಕೆ ಇವರ ಅಂತಿಮ ಕಾರ್ಯಕ್ಕೆ ತನ್ನ ಕೊಡುಗೆ ಇಷ್ಟು ತನ್ನದು ಇದು ಎಂದು ಇವರ ಮನೆಯೂಟಕ್ಕೆ ದವಸಧಾನ್ಯ ಕೊಡುತ್ತಿದ್ದ ಮಾಲೀಕರು ಜಾತಿ ಮತ ಭೇದವಿಲ್ಲದೇ ಬೇಡವೆಂದರೂ ಚಂದಾ ಕೊಡುತ್ತಿದ್ದರು, ಅನ್ಯಧರ್ಮದ ಒಬ್ಬನಂತೂ ತನ್ನಿಂದ ಆಗುವುದಿಷ್ಟು ಅನ್ನುತ್ತ ನೂರು ತೆಂಗಿನ ಕಾಯಿ ಮೂಟೆ ಇಟ್ಟು ಹೋಗಿಬಿಟ್ಟಿದ್ದ. ಮನುಷ್ಯನಾಗಿ ಹುಟ್ಟಿದ್ದು ಇದೀಗ ಸಾರ್ಥಕ ಅನಿಸಿತ್ತು, ಹಣವಂತರು ಇಂದಿಗೂ ಕೆಲವೆಡೆ ಸತ್ತಾಗ ಅಳಲು ಹಣಕೊಟ್ಟು ಜನರನ್ನು ಕರೆಸುತ್ತಾರೆ, ಆದರೆ ನಿಜಕ್ಕೂ ಸಂಬಂಧವಿಲ್ಲದೆ ಬಿಕ್ಕಳಿಸುವ ಜನರನ್ನು ಅವರು ತೋರಿಸಿದ್ದರು, ಕಮಲಕ್ಕನೂ ಅಷ್ಟೇ. ಇಂಥ ಕಮಲಕ್ಕ ಕೆಲವು ವಿಚಾರಗಳನ್ನು ನಮ್ಮ ಮುಂದೆ ಚಿಂತಿಸಲು ಬಿಟ್ಟುಹೋಗಿದ್ದಾರೆ, ಅವರು ಬಾಲ್ಯದಲ್ಲಿ ಪಾಲಕರನ್ನು ಕಳೆದುಕೊಂಡರು, ಬಾಳುವ ಕಾಲದಲ್ಲಿ ಪತಿಯನ್ನು ಕಳೆದುಕೊಂಡರು, ಎಳೆಯ ಪ್ರಾಯದ ಮಗನನ್ನೂ ಕಳೆದುಕೊಂಡರು, ತಮ್ಮ ಜೊತೆಗೆ ಎಳೆಯ ಸೊಸೆಯ ವೈಧವ್ಯವನ್ನೂ ಹೊಟ್ಟೆಯಲ್ಲಿಟ್ಟುಕೊಂಡರು, ನೋಡಿ ನಮ್ಮ ಸುತ್ತಮುತ್ತಲಿನ ಸಿನಿಮಾ ಕತೆ ಕಾದಂಬರಿಗಳು ಧಾರಾವಾಹಿಗಳು ಕಮಲಕ್ಕನ ಜೀವನದಂಥ ವಿಷಯಗಳಿಗೆ ಏನು ಕಟ್ಟಿಕೊಡುತ್ತವೆ ಗಮನಿಸಿ, ಒಬ್ಬ ವಿಧವೆ ಅಂದರೆ ಹಾಗಿರಬೇಕು, ಹೀಗಿರಬೇಕು, ಗಂಡನೊAದಿಗೆ ಆಕೆಯ ಬುಕು ಮುಗಿದುಹೋಗುತ್ತದೆ ಇತ್ಯಾದಿ ಫಣಿಯಮ್ಮನಂತೆ, ಇನ್ನೂ ಕೆಲವು ಮೂಕಜ್ಜಿಯಂತೆ, ಇಂಥವರು ನಮ್ಮ ಸಮಾಜದಲ್ಲಿ ಬೇಕಾದಷ್ಟಿದ್ದಾರೆ, ಇವುಗಳನ್ನು ಕಂಡೂ ನಾವು ಮತ್ತೆ ಮತ್ತೆ ಒಬ್ಬ ವಿಧವೆ ಅಂದ್ರೆ ಹೀಗೆ ಎಂದೇ ಭಾವಿಸುತ್ತೇವೆ, ಇಲ್ಲ, ಸ್ವಂತ ಮಗನ ವಿಧವೆಗೂ ಬದುಕಿನ ಶಕ್ತಿ ತುಂಬಿ ಬಂದ ಬಾಳನ್ನು ಬಂದಂತೆ ಎದುರಿಸಿ ಅದರಲ್ಲೇ ಆನಂದ ಕಂಡು ಏನನನೋ ಹೇಳಿ ಹೋದರು. ಅವರಿಗೂ ಇನ್ನೂ ಚೆನ್ನಾದ ಬದುಕು ತನಗೆ ಇರಬೇಕಿತ್ತು ಅನಿಸಿರಬಹುದು ಆದರೆ ಅದರಲ್ಲೇ ಕೊರಗಿ ಇರುವ ಬದುಕನ್ನು ಹಾಳುಮಾಡಿಕೊಳ್ಳಲಿಲ್ಲ. ಪಾಲಿಗೆ ಬಂದ ಬದುಕಿನಲ್ಲೇ ಆನಂದ ಕಂಡರು, ಕಷ್ಟ ನಷ್ಟ ಇದ್ದೇ ಇತ್ತು ಅನ್ನಿ ಆದರೆ ಹೀಗೆ ಬದುಕನ್ನು ಸ್ವೀಕರಿಸುವ ಸಾಧ್ಯತೆ ನಮ್ಮ ಸಂಪ್ರದಾಯದಿಂದಲೇ ಅವರಿಗೆ ಸಿಕ್ಕಿದೆ, ಅವರು ಆಧುನಿಕ ಶಿಕ್ಷಣ ಪಡೆದವರಲ್ಲ, ಅತ್ರೀವಾದ ಆ ವಾದ ಈ ವಾದಗಳೆಲ್ಲ ತಿಳಿದವರಲ್ಲ, ಹೋರಾಟ ಇತ್ಯಾದಿಗಳ ಗಂಧ ಮೂಸಿದವರಲ್ಲ, ಅಂಥಾದ್ರಲ್ಲೂ ಅವರು ಎದುರಾದ ಕಷ್ಟಗಳಿಗೆ ಹೆದರಲಿಲ್ಲ, ಬಾಳಿದರು ಕಡುಕಷ್ಟಗಳನ್ನು ನುಂಗಿ ಮತ್ತೆ ಸಹಜವಾಗಿ ನಿಂತು ಬದುಕಿದರು, ಕಷ್ಟದಲ್ಲಿ ಅವರಿಗೆ ಸಮಾಧಾನ ಕೊಟ್ಟ  ವಿಷಯ ಇದು ನನ್ನ ಪ್ರಾರಬ್ಧವೋ ಮತ್ತೊಂದೋ ಕರ್ಮ ಎಂಬ ಮಾತಷ್ಟೇ ಆಗಿತ್ತು. ಇಂಥದ್ದೊಂದು ಜೀವನ ನಡೆಸುವ ಶಕ್ತಿಯನ್ನು ನಮ್ಮ ಪರಂಪರೆ ಕಲಿಸಿಕೊಡುತ್ತದಲ್ಲಾ ಅದು ನಾವು ಈ ಕಮಲಕ್ಕನ ಜೀವನದಲ್ಲಿ ಕಾಣುವ ಸಂಗತಿ, ಇಂಥ ಕಮಲಕ್ಕಂದಿರು ಸಾವಿರಾರು ಇದ್ದಾರೆ, ಇಂಥ ಜೀವನ ನಮ್ಮ ಮುಂದೆ ಇರುವುದನ್ನೂ ನಾವು ಗಣಿಸುವುದಿಲ್ಲ, ಮತ್ತೆ ಸಂಪ್ರದಾಯದ ಮಾತು ಬಂದರೆ ಅದೆಲ್ಲ ಗೊಡ್ಡುಎಂದೇ ಭಾವಿಸಿಬಿಡುತ್ತೇವೆ, ಅಲ್ಲ, ಹೀಗೂ ಇದೆ ಎಂದು ತೋರಿಸುತ್ತಾರೆ ಕಮಲಕ್ಕನಂಥ ಜೀವಗಳು. 

ಆ ದೇವರು ನಿಜಕ್ಕೂ ಎಲ್ಲಾದರೂ ಇದ್ದ ಕಲ್ಪನೆ ಆಗಿದ್ದರೆ ಅದಕ್ಕೆ ಆರೋಪಿಸಿದ ಗುಣಗಳು ನಿಜವೇ ಆಗಿದ್ದರೆ ಕಮಲಕ್ಕ ಮತ್ತು ಅವರ ಕುಟುಂಬಕ್ಕೆ ಒಳಿತು ಮಾಡಿಯೇ ಮಾಡಬೇಕು, ದೇವರನ್ನು ಅಂಥ ಇಕ್ಕಟ್ಟಿನಲ್ಲಿ ಸಿಲುಕಿಸಿ ಈ ಲೋಕದ ವ್ಯವಹಾರ ಮುಗಿಸಿ ಆ ಜೀವ ಈಗ ಹೋಗಿದೆ. ಬಹುಶಃ ಆ ದೇವರಿಗೂ ಛೆ ಏನು ಮಾಡುವುದಪ್ಪಾ ಈಗ ಅನಿಸಿರಬೇಕು, ಇಷ್ಟು ಸಾಕಲ್ವಾ ಸಾರ್ಥಕತೆಗೆ?    

Thursday, 10 April 2025

ಪಾಸು ಫೇಲು ಬದುಕಲ್ಲ


ಇದು ನಮ್ಮ ಆಧುನಿಕ ಸಮಾಜದ ವ್ಯಂಗ್ಯ ಅಥವಾ ದುರಂತ. ನಮ್ಮ ದೇಶದಲ್ಲಿ ವರ್ಷೇ ವರ್ಷೇ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ನೋಡಿ ೨೦೨೨ರಲ್ಲಿ ನಮ್ಮ ದೇಶದಲ್ಲಿ ವಿವಿಧ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ೧೭೧,೦೦೦!. ಇದರಲ್ಲಿ ಪರೀಕ್ಷೆಯಲ್ಲಿ ನಪಾಸಾದ ಮಕ್ಕಳು ಅದರಲ್ಲೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮಕ್ಕಳ ಸಂಖ್ಯೆ ಹೆಚ್ಚಿದೆ.

ಇದೇಗ ಕರ್ನಾಟಕದಲ್ಲಿ ಈ ಬಾರಿಯ ಪಿಯುಸಿ ಫಲಿತಾಂಶ ಬಂದಿದ್ದು ಮರುದಿನದ ವೇಳೆಗೆ ರಾಜ್ಯಾದ್ಯಂತ ಆರು ಮಕ್ಕಳು ಆತ್ಮ ಹತ್ಯೆ ಮಾಡಿಕೊಂಡು ಸತ್ತಿವೆ. ಈಗ ಅವರು ಏನು ಸಾಧಿಸಿದಂತಾಯ್ತು? ಗೊತ್ತಿಲ್ಲ, ಇದ್ದುಸಾಧಿಸಬೇಕು ಅಂತಾರೆ. ಆದರೆ ಸಾಧಿಸುವುದು ಅಂದರೆ ಮತ್ತೆ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆಯುವುದು ಎಂದಲ್ಲ, ಸಾಯದೇ ಬದುಕಿ ಚೆನ್ನಾಗಿಬದುಕಿ ತೋರಿಸುವುದು, ಸಾವು ತಾನಾಗಿ ಬರುವವರೆಗೆ ಎಂದರ್ಥ. ನಮ್ಮ ಶಿಕ್ಷಣ ವ್ಯವಸ್ಥೆ ನಿಜಕ್ಕೂ ಗಬ್ಬೆದ್ದುಹೋಗಿದೆ. ಪ್ರತಿ ವರ್ಷ ಶಾಲಾ ಕಾಲೇಜು ಅಧ್ಯಯನಕ್ಕೆ ನಿಗದಿಪಡಿಸಿದ ಪಠ್ಯಗಳು ವಿವಾದಕ್ಕೆ ದೊಡ್ಡ ವಿವಾದಕ್ಕೆ ಕಾರಣವಾಗುತ್ತದೆ. ಇಲ್ಲಿ ವಿವಾದ ಆಗುವುದು ಕೂಡ ರಾಜಕೀಯ ನಿಲುವುಗಳ ವಿಷಯ. ಆದರೆ ಶಾಲಾ ಕಾಲೇಜು ಮಕ್ಕಳಿಗೆ ಈ ಕಲಿಕೆ ನಿಜವಾಗಿ ಜೀವನವಲ್ಲ, ಇದರಲ್ಲಿ ಪಾಸಾಗಲೀ ಫೇಲಾಗಲಿ, ವ್ಯತ್ಯಾಸವಾಗುವುದಿಲ್ಲ, ನಿಜವಾದ ಪರೀಕ್ಷೆ ಜೀವನ, ಅದು ಇನ್ನೂ ನಿಮ್ಮ ಮುಂದಿದೆ ಎಂದು ಕಲಿಸುವ ಪಾಠಗಳಿಲ್ಲ, ಈ ದೃಷ್ಟಿಯಿಂದ ಶಾಲಾ ಕಾಲೇಜು ಪಠ್ಯಗಳಲ್ಲಿ ಇಂಥ ಪರೀಕ್ಷೆಗಳಲ್ಲಿ ಫೇಲಾದ ಅಥವಾ ಶಾಲಾ ಕಾಲೇಜು ಮೆಟ್ಟಿಲು ಹತ್ತದೇ ಸಮಾಜದಲ್ಲಿ ಅಸಾಧಾರಣ ಸಾಧನೆ ಮಾಡಿದ ಜನರ ಜೀವನಕತೆಗಳನ್ನು ಪಾಠವಾಗಿ ಇಡಬೇಕು. ಬದಲಾಗಿ ನಾವು ಇಂಥ ಪರೀಕ್ಷೆಗಳೇ ಸರ್ವಸ್ವ ಅನ್ನುವಂಥ ಪಾಠವನ್ನು ಸಾಮಾಜಿಕ ಕೌಟುಂಬಿಕ ದೃಷ್ಟಿಕೋನವನ್ನು ಹುಟ್ಟಿಸುತ್ತಿದ್ದೇವೆ. ನಮ್ಮ ಶಿವರಾಮ ಕಾರಂತರು ಕಾಲೇಜು ಮೆಟ್ಟಿಲೇ ಹತ್ತಿಲ್ಲ, ಆದರೆ ಅವರ ಸಾಧಶನೆ ಅಸಾಧಾರಣ. ಇಂಥ ವ್ಯಕ್ತಿತ್ವಗಳನ್ನು ಮಕ್ಕಳಿಗೆ ಮತ್ತೆ ಮತ್ತೆ ಕೊಡಬೇಕು, ಅಯ್ಯೋ ನಾನು ಇಲ್ಲಿ ಪಾಸಾದರೆಷ್ಟು ಬಿಟ್ಟರೆಷ್ಟು ಎಂಬ ಧೋರಣೆ ಬೆಳೆಯುವಂತೆ ಮಾಡಬೇಕು. ದುರಂತವೆಂದರೆ ನಮ್ಮ ಸಾಮಾಜಿಕ ವಲಯ ಮಕ್ಕಳ ಸಹಪಾಠಿಗಳಲ್ಲಿ ಯಾರಾದರು ತಮ್ಮ ಮಕ್ಕಳಿಗಿಂತ ಒಂದು ಅಂಕ ಜಾಸ್ತಿ ಪಡೆದರೆ ಅದನ್ನು ಮತ್ತೆ ಮತ್ತೆ ಹೇಳಿ ತಮ್ಮ ಮಕ್ಕಳನ್ನು ಚುಚ್ಚಿ ಮಾತಾಡಿ ಹಿಂಸೆ ಕೊಡುತ್ತಾರೆ, ಮಕ್ಕಳ ಮನಸ್ಸು ಇದನ್ನು ಹೇಗೆ ತೆಗೆದುಕೊಳ್ಳುತ್ತದೆ ತಿಳಿಯುವುದಿಲ್ಲ, ಬದಲಾಗಿ ನೋಡಿ ಮಕ್ಕಳೇ ಈ ಶಲೆ, ಕಾಲೇಜು ಇವೆಲ್ಲ ನಿಮ್ಮ ವಯಸ್ಸಿನ ಮಕ್ಕಳನ್ನು ಒಂದೆಡೆ ಕೂಡಿ ಹಾಕಿಡುವ ತಾತ್ಕಾಲಿಕ ವ್ಯವಸ್ಥೆಗಳು ಯಾಕೆಂದರೆ ಸದಾಕಾಲ ನೀವು ಮನೆಯಲ್ಲೇ ಇರಲಾಗುವುದಿಲ್ಲ, ನಿಮ್ಮ ಹೆತ್ತವರಿಗೂ ನಿಮ್ಮನ್ನು ನೋಡುತ್ತಲೇ ಇರಲಾಗುವುದಿಲ್ಲ, ಅದಕ್ಕಾಗಿ ಇರುವ ವ್ಯವಸ್ಥೆ, ಆದರೆ ಅಲ್ಲಿಯೂ ಒಂದು ಕ್ರಮವಿರುತ್ತದೆ ಅದನ್ನು ಅನುಸರಿಸಿ, ಅದಕ್ಕಿಂತ ಹೆಚ್ಚು ಏನೂ ಇಲ್ಲ ಎಂಬ ನೈಜ ಭಾವನೆ ಮೂಡಿಸುವ ಕೆಲಸ ಆಗಬೇಕು ಬದಲಾಗಿ ನಾವು ಈ ಶಾಲಾ ಕಾಲೇಜುಗಳೇ ಸರ್ವ ಶ್ರೇಷ್ಠ, ಅಲ್ಲಿ ರ‍್ಯಾಂಕ್ ಬಂದರೆ ಜೀವನ ಸಾರ್ಥಕ ಎಂಬ ಭ್ರಮೆ ಬರಿಸುತ್ತೇವೆ, ಚೆನ್ನಾಗಿ ಮಾರ್ಕ್ಸ್ ಪಡೆಯದಿದ್ದರೆ ಅಷ್ಠೇ, ಮನೆಯಿಂದ ಹೊರಗೆ ಹಾಕ್ತೇವೆ ಎಂದು ಬೆದರಿಸಿ ಮಕ್ಕಳ ಮನಸ್ಸನ್ನು ಮೊದಲೇ ಕದಕುವ ಪಾಲಕರೂ ಬೇಕಾದಷ್ಟಿದ್ದಾರೆ, ಇವರೆಲ್ಲ ಬುದ್ಧಿ ಹೀನ ಅವಿವೇಕಿಗಳು. ಆಯ್ತಪ್ಪಾ ಒಳ್ಳೆಯ ಅಂಕ ಪಡೆದರೆ ಏನಾಗುತ್ತದೆ ಎಂದು ಪ್ರಶ್ನಿಸುವ ಮಕ್ಕಳು ನಮಗೆ ಬೇಕಿದೆ, ಈ ದರಿದ್ರ ವ್ಯವಸ್ಥೆಯಲ್ಲಿ ಕೆಲಸಕ್ಕೆ ಬರುವುದು ಅಂಕಪಟ್ಟಿ ಅಲ್ಲ, ನಿಮ್ಮ ಪ್ರತಿಭೆ ಮತ್ತು ಗಳಿಸುವ ಕೌಶಲ್ಯ. ಅದಕ್ಕೆ ಶಾಲಾ ಕಾಲೇಜು ಅನಿವಾರ್ಯ ಅಲ್ಲ, ಅವು ಕೇವಲ ಮಾರ್ಗದರ್ಶಿ ಕೇಂದರಗಳು ಎಂಬುದನ್ನು ಮಕ್ಕಳಿಗೆ ತಿಳಿಸಬೇಕಲ್ಲ, ಹೇಗೆ ಎಲ್ಲಿಂದ? ನನ್ನದೇ ಉದಾಹರಣೆ ಕೊಡುತ್ತೇನೆ, ಹೆಚ್ಚುಗಾರಿಕೆಗೆ ಅಲ್ಲ, ವಾಸ್ತವ ಕಾಣಿಸಲು. ಎಲ್ಲ ಮಕ್ಕಳಂತೆ ನಾನು ಕೂಡ ಪ್ರೌಢಶಾಲಾ ಶಿಕ್ಷಣದವರೆಗೆ ಹೆಚ್ಚು ಅಂಕ ತರಬೇಕು ಎಂಬ ಮೌಢ್ಯದಲ್ಲೇ ಬೆಳೆದೆ, ಸಾಧಾರಣ ಅಂಕ ಪಡೆದು ಬಂದೆ. ಪುಣ್ಯ ಸಾಯಲಿಲ್ಲ, ಅಂಥ ಮನಸ್ಸು ಬರಲೂ ಇಲ್ಲ, ಏನೇ ಆಗಲಿ ದೇವರಿದ್ದಾನೆಂಬ ಪಾಠ ಅಪ್ಪನಿಂದ ಬಂದಿತ್ತು, ಆಯಿತು ಅನಂತರ ಎಲ್ಲರಂತೆ ಕಾಲೇಜಿಗೆ ಹೋದೆ, ಅಲ್ಲಿಯೂ ಅಂಕ ಅಷ್ಟಕ್ಕಷ್ಟೇ, ಆಗಲೂ ಆರಾಮವಾಗಿದ್ದೆ, ಮುಂದೆ ಉನ್ನತ ವ್ಯಾಸಂಗಕ್ಕೆ ಸೇರಿದೆ, ಆಟವಾಡಿಕೊಂಡು, ಪರೀಕ್ಷೆ ಮಧ್ಯಾಹ್ನ ಅನ್ನುವಾಗ ಮಾರ್ನಿಂಗ್ ಶೋ ಸಿನಿಮಾ ನೋಡಿಕೊಂಡು ಒತ್ತಡ ಇಲ್ಲದೇ ಪರೀಕ್ಷೆ ಬರೆದು ರ‍್ಯಾಂಕ್ ಬಂದು ಎರಡು ಚಿನ್ನದ ಪದಕ ಪಡೆದೆ, ಮೂರ್ನಾಲ್ಕು ವರ್ಷ ಎಲ್ಲಿಊ ಕೆಲಸ ಸಿಗಲಿಲ್ಲ, ಸಾಯಲಿಲ್ಲ, ಅದೂ ಇದೂ ಓದುತ್ತ ಕಂಪ್ಯೂಟರ್ ಕಲಿಯುತ್ತ, ಅನುವಾದ ಮಾಡುತ್ತ ಬರೆಯುತ್ತ ಕಾಲಯಾಪನೆ ಮಾಡಿಕೊಂಡು ಸುಖವಾಗಿದ್ದೆ ಅನೇಕ ವರ್ಷ ಹೀಗೆ ಕಳೆಯಿತು. ಮೈಸೂರಲ್ಲಿ ಅರೆಕಾಲಿಕ ಕೆಲಸ ಮಾಡಿದೆ, ಅನುವಾದದಲ್ಲಿ ಕೈ ಪಳಗಿಸಿಕೊಂಡೆ, ಅಷ್ಟಿಷ್ಟು ಹಣವೂ ಆಗಾಗ ನ್ಯಾಯವಾಗಿ ಬಂತು ಕೆಲವು ಇನ್ನೂ ಬರಲಿಲ್ಲ, ಆಸೆಯನ್ನೂ ಇಟ್ಟುಕೊಂಡಿಲ್ಲ, ಆಮೇಲೆ ಉತ್ತಮ ಕೆಲಸ ಸಿಕ್ಕಿತು. ನಾನೊಬ್ಬ ಸಾಧಾರಣ ವಿದ್ಯಾರ್ಥಿ. ನನ್ನ ಶಾಲಾ ಕಾಲೇಜಿನ ಅಂಕಪಟ್ಟಿಗಳನ್ನು  ನೋಡಿದರೆ ಯಾರದರೂ ನಗ್ತಾರೆ, ಪರವಾಗಿಲ್ಲ, ನಾನು ಇಂದಿಗೂ ಚೆನ್ನಾಗಿದ್ದೇನೆ, ಆರಾಮವಾಗಿದ್ದೇನೆ, ಕಡಿಮೆ ಅಂಕ ಬಂತೆಂದು ಯಾರೂ ಸಾಯಬೇಕಿಲ್ಲ, ಯಾಕೆಂದರೆ ಅದಷ್ಟೇ ಜೀವನವಲ್ಲ, ನಮ್ಮ ಮುಂದಿನ ಜೀವನಹೇಗಿರುತ್ತದೆ ಎಂಬ ಕುತೂಹಲದಲ್ಲಿ ನ್ಯಾಯವಾಗಿ ಸತ್ಯವಾಗಿ ನಿತ್ಯ ಬದುಕು ಸಾಗಿಸುವ ಕ್ರಮ ರೂಢಿಸಿಕೊಂಡರೆ ಅಷ್ಟು ಸಾಕು. ಮಿಕ್ಕಿದ್ದನ್ನು ಜೀವನ ನೋಡಿಕೊಳ್ಳುತ್ತದೆ, ಒಳ್ಳೆಯದಾಗುತ್ತದೆ. 


Wednesday, 9 April 2025

ನಾವೆಲ್ಲ ಅಲಕ್ಷಿಸಿದ ಸೃತಿ ಗ್ರಂಥ


ಈಗೀಗ ಬಹುತೇಕ ಸಂದರ್ಭಗಳಲ್ಲಿ ಮನುಸ್ಮೃತಿ ಕೃತಿಯನ್ನು ತೆಗಳುವ ಟೀಕಿಸುವ ವರದಿಗಳು ಬರುತ್ತಲೇ ಇರುತ್ತವೆ, ಆದರೆ ಯಾವುದೋ ಕಾಲದ ಮನುಸ್ಮೃತಿಯನ್ನು ಇಂದಿನ ಕಾಲಕ್ಕೆ ಎಳೆತಂದು ಚರ್ಚಿಸುವುದೇ ಹಾಸ್ಯಾಸ್ಪದ. ಏಕೆಂದರೆ ಭಾರತೀಯ ಸಂಪ್ರದಾಯದಲ್ಲಿ ಏಳು ಧರ್ಮಶಾಸ್ತ್ರಕಾರರು, ೨೦ಕ್ಕೂ ಹೆಚ್ಚು ಸ್ಮೃತಿಗಳು ಕಾಣಿಸುತ್ತವೆ, ಒಂದೊಂದು ಕಾಲಕ್ಕೆ ಒಂದೊಂದು ಸ್ಮೃತಿಯನ್ನು ಹೇಳಲಾಗಿದೆ, ನಮಗೆಲ್ಲ ತಿಳಿದಿರುವಂತೆ ಭಾರತೀಯ ಸಂಪ್ರದಾಯದಲ್ಲಿ ನಾಲ್ಕು ಮುಖ್ಯ ಯುಗಗಳಿವೆ, ಅವೆಂದರೆ ಸತ್ಯಯುಗ, ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳು ಅನ್ನಲಾಗಿದೆ, ಆದರೆ ಜನಪ್ರಿಯವಾದ ವಿಷ್ಣುಸಹಸ್ರನಾಮದಲ್ಲಿ ಕೋಟಿಯುಗಗಳ ಪ್ರಸ್ತಾಪ ಬರುತ್ತದೆ, ವಿಜ್ಞಾನಿಗಳು ಹೇಳುವಂತೆ ಈ ಭೂಮಿಗೆ ಕೋಟ್ಯಂತರ ವರ್ಷಗಳಾಗಿವೆ, ಮನುಷ್ಯನಿಗೂ ಹೆಚ್ಚೂಕಡಿಮೆ ಅಷ್ಟೇ ವರ್ಷಗಳಾಗಿವೆ, ಒಂದೊಂದು ಕಾಲಕ್ಕೆ ಒಂದೊಂದು ರೀತಿಯ  ಮನೋಧರ್ಮಕ್ಕೆ ಅನುಗುಣವಾಗಿ ಸಾಮಾಜಿಕ ರೀತಿ ನೀತಿಯನ್ನು ಹೇಳಲಾಗುತ್ತದೆ, ಹೀಗೆ ಹೇಳುವ ಕೃತಿಗಳೇ ಸ್ಮೃತಿಗ್ರಂಥಗಳು, ಈಗ ಮತ್ತೆ ಮತ್ತೆ ಚರ್ಚೆಗೆ ಒಳಗಾಗುವ ಮನುಸ್ಮೃತಿಯನ್ನು ಹೇಳಿರುವುದು ಕೃತಯುಗಕ್ಕೆ, ಕಲಿಯುಗಕ್ಕೆ ಅಲ್ಲ, ಕಲಿಯುಗಕ್ಕೆ ಪರಾಶರ ಸ್ಮೃತಿಯನ್ನು ಹೇಳಲಾಗಿದೆ. ಈ ಸ್ಮೃತಿಯಲ್ಲಿ ಮನುಸ್ಮೃತಿಯಂತೆ ಟೀಕಿಸಬಹುದಾದ ವಾಕ್ಯಗಳಿಲ್ಲ.ಅಷ್ಟಕ್ಕೂ ಸಂಬಂಧವಿಲ್ಲದ ಗ್ರಂಥವನ್ನು ಈ ಕಾಲಕ್ಕೆ ಅನ್ವಯಿಸಿ ಚರ್ಚಿಸುವುದೇ ತಮಾಷೆ ಅನಿಸುತ್ತದೆ. ಈ ಕನಿಷ್ಠ ಸಂಗತಿ ಮನುಸ್ಮೃತಿಯನ್ನು ಕುರಿತು ಮಾತಾಡುವ ಜನರಿಗೆ ಅರಿವಿಲ್ಲ, ಆದರೂ ಪರಾಶರ ಸ್ಮೃತಿಯಲ್ಲಿ ಕೂಡ ಟೀಕಿಸಬಹುದಾದ ವಾಕ್ಯಗಳು ದೊರೆಯಬಹುದು, ಎಂದೋ ರಚಿಸಿದ ಕೃತಿ ಸಾರ್ವಕಾಲಿಕವಾಗಿ ಉಳಿಯಲು ಸಾಧ್ಯವಿಲ್ಲ, ಉದಾಹರಣೆಗೆ ಭಾರತಕ್ಕೆ ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ರೂಪಿಸಿಕೊಂಡ ಸಂವಿಧಾನವನ್ನು ೧೯೫೬ರಲ್ಲಿ ಸ್ವೀಕರಿಸಲಾಯಿತು, ಆದರೆ ಕೇವಲ ಐದಾರು ದಶಕಗಳಲ್ಲಿಯೇ ಅದನ್ನು ೧೦೬ ಬಾರಿ ತಿದ್ದುಪಡಿ ಮಾಡಲಾಗಿದೆ ಅಂದರೆ ಸಾಮಾಜಿಕ ಮನೋಧರ್ಮ ಹಾಗೂ ಪರಿಕಲ್ಪನೆಗಳು ಎಷ್ಟು ವೇಗವಾಗಿ ಬದಲಾಗುತ್ತವೆ ಎಂಬುದು ತಿಳಿಯುತ್ತದೆ, ಹೀಗಿರುವಾಗ ಸಾವಿರಾರು ವರ್ಷಗಳ ಹಿಂದೆ ರಚಿತವಾದ  ಸ್ಮೃತಿಯಲ್ಲಿ ಹೀಗಿರುವುದು ಸಹಜ. ಅಂದರೆ ಆಯಾ ಕಾಲಘಟ್ಟಕ್ಕೆ ಸರಿ ಅನಿಸುವ ಸ್ಮೃತಿಗಳನ್ನು ಹೇಳಲಾಗಿದೆ, ಅಂದಹಾಗೆ ನಾವು ಸದ್ಯ ಇರುವ ಕಾಲ ಭಾರತೀಯ ಸಂಪ್ರದಾಯದ ಪ್ರಕಾರ ಕಲಿಯುಗದಲ್ಲಿದ್ದೇವೆ, ಇದಕ್ಕೆ ನಿಜವಾಗಿ ಚರ್ಚೆ ಆಗಬೇಕಾದುದು ಮನುಸ್ಮೃತಿಯಲ್ಲ, ¨ದಲಾಗಿ ಪರಾಶರ ಸ್ಮೃತಿ. ಇಲ್ಲಿಯೂ ಮಡಿ ಮೈಲಿಗೆ ಕುರಿತ ನಿಯಮಗಳು ಇಂದು ಚರ್ಚೆಗೆ ಒಳಗಾಗಬಲ್ಲವು ಇನ್ನೂ ಇರಬಹುದು, ಪ್ರಶ್ನೆ ಏನೆಂದರೆ ಇದಾಗಲಿ, ಆದರೆ ಕೃತಯುಗಕ್ಕೆ ಹೇಳಲಾದ ಮನುಸ್ಮೃತಿಯನ್ನು ಕಲಿಯುಗದಲ್ಲಿ ಚರ್ಚೆ ಮಾಡುವುದರಲ್ಲಿ ಅರ್ಥವಿದೆಯೇ? ಸಾಮಾನ್ಯವಾಗಿ ಈ ಸ್ಮೃತಿಗ್ರಂಥಗಳು ಸಮಾಜಕ್ಕೆ ನೀತಿ ನಿಯಮ, ಧರ್ಮ ಮಾರ್ಗಗಳನ್ನು ತಿಳಿಸುತ್ತವೆ, ಯಾವುದು ಧರ್ಮ, ಯಾವುದು ಅಧರ್ಮ ಎಂದು ತಿಳಿದು ಆ ಮಾರ್ಗದಲ್ಲಿ ನಡೆದರೆ ಮನುಷ್ಯನಿಗೆ ಸುಖ ಇರುತ್ತದೆ ತಿಳಿಯಲಾಗಿದೆ. ಸಂಪ್ರದಾಯ ಹೇಳುವಂತೆ ಪ್ರಪಂಚದಲ್ಲಿ ೮೭ ಲಕ್ಷ ಜೀವಿಗಳಿದ್ದು, ಇವುಗಳಲ್ಲಿ ಮನುಷ್ಯ ಜೀವಿ ವಿಶಿಷ್ಟವೂ ಮುಖ್ಯವೂ ಆಗಿದೆ, ಇಂಥ ಮನುಷ್ಯ ಜೀವಿ ಇರಬೇಕಾದ ಹಾಗೂ ಬದುಕಬೇಕಾದ ರೀತಿಯನ್ನು ಈ ಗ್ರಂಥಗಳು ತಿಳಿಸುತ್ತವೆ. ಒಟ್ಟಿನಲ್ಲಿ ಭಾರತೀಯ ಸಂಪ್ರದಾಯ, ಪರಂಪರೆಯ ಪರಿಚಯವಿಲ್ಲದ ಒಂದಿಷ್ಟು ಜನ, ಅದರಲ್ಲೂ ವಸಾಹತುಶಾಹಿಗಳು ತಮ್ಮ ವಾದಗಳ  ಸಮರ್ಥನೆಗೆ ಅನುಕೂಲವಾಗುವಂತೆ ಭಾvರತೀಯ ಪರಂಪರೆಯಲ್ಲಿನ ಕೆಲವೇ ಕೆಲವು ಗ್ರಂಥಗಳು ಅದರಲ್ಲೂ ಅವುಗಳಲ್ಲಿನ ಕೆಲವೇ ವಾಕ್ಯಗಳನ್ನು ಮಾತ್ರ ಮತ್ತೆ ಮತ್ತೆ ಉಲ್ಲೇಖಿಸಲಾಗುತ್ತದೆ. ಉದಾಹರಣೆಗೆ ಮನುಸ್ಮೃತಿಯಲ್ಲಿಯೇ ಕೆಲವೇ ಮಾತುಗಳನ್ನು ಮಾತ್ರ ಹೇಳಲಾಗುತ್ತದೆ, ಅದರಲ್ಲಿನ ಬಹುತೇಕ ವಾಕ್ಯಗಳು ವಸಾಹತುಗಳ ವಾದಕ್ಕೆ ಪೂರಕವಾಗಿ ಬಾರದ ಕಾರಣಕ್ಕೆ ಅವುಗಳನ್ನು ಕೈಬಿಡಲಾಗುತ್ತದೆ, ಉದಾಹರಣೆಗೆ ಆ ಕೃತಿಯಲ್ಲಿನ ಸ್ತ್ರೀ ಸ್ವಾತಂತ್ರ್ಯಮರ್ಹಸಿ ಎಂಬ ಮಾತು ಹೇಳುವ ಜನ ಸ್ತ್ರೀ ಧನವನ್ನು ತೆಗೆದುಕೊಳ್ಳುವವರು ಪಾಪಿಗಳು ಹಾಗೂ ನೀಚರು ಎಂದು ಹೇಳಿರುವ ಮಾತನ್ನು ಯಾರೂ ಹೇಳುವುದಿಲ್ಲ, ಉಳಿದ ಗ್ರಂಥಗಳ ಕತೆಯೂ ಇಷ್ಟೇ. ಪ್ರಸ್ತುತ ಇಲ್ಲಿ ಪರಾಶರ ಸ್ಮೃತಿ ಕುರಿತು ಅವಲೋಕನ ಮಾಡಲಾಗಿದೆ.

ಈ ಸ್ಮೃತಿ ರಚಿಸಿದವರು ಹೆಸರೇ ಹೇಳುವಂತೆ ಪರಾಶರರು. ಪರಾಶರರು ವ್ಯಾಸರ ತಂದೆ, ಈ ಕೃತಿ ರಚನೆಯಾಗಿದ್ದು ಮಹಾಭಾರತ ಕಾಲದಲ್ಲೆಂದಾಯಿತು, ಅಂದರೆ ಮುಂಬರಲಿರುವ ಕಾಲಕ್ಕೆ ಮುಂಚೆಯೇ ಆ ಕಾಲದಲ್ಲಿ ಹೇಗಿರಬೇಕೆಂದು ತಿಳಿಸುವ ನಿಯಮ ತಿಳಿಸುವ ಕೃತಿ ಸಿದ್ಧವಿರುತ್ತಿತ್ತು ಅನ್ನಬಹುದು. ಅಂದರೆ ಕೃತಯುಗಕ್ಕೆ ತಿಳಿಸಲಾದ ಮನುಸ್ಮೃತಿಯನ್ನು ಸತ್ಯಯುಗದಲ್ಲಿ ರಚಿಸಲಾಗಿದೆ ಅನ್ನಬಹುದು, ಈ ಒಂದೊಂದು ಯುಗಗಳೂ ಸಾವಿರಾರು ವರ್ಷಗಳನ್ನು ಹೊಂದಿರುತ್ತವೆ ಅಂದರೆ ಮನುಸ್ಮೃತಿ ರಚನೆಯಾಗಿ ಅದೆಷ್ಟು ಸಾವಿರ ವರ್ಷಗಳಾಗಿವೆ ಊಹಿಸಿ, ಅಂಥ ಕೃತಿಯಲ್ಲಿ ದೋಷಗಳಿವೆ ಎಂದು ಈಗ ಚರ್ಚಿಸುವುದೇ ಮೂರ್ಖತನವಲ್ಲದೇ ಇನ್ನೇನು? ನಮ್ಮ ಕಲಿಯುಗಕ್ಕೆ ಹೇಳಲಾದ ಪರಾಶರ ಸ್ಮೃತಿಯಲ್ಲಿ ೨ ಅಧ್ಯಾಯಗಳಿದ್ದು ಆಚಾರ, ತಪ್ಪು ಮಾಡಿದಾಗ ಅನುಸರಿಸಬೇಕಾದ ಪ್ರಾಯಶ್ಚಿತ್ತ ಮೊದಲಾದ ವಿಚಾರಗಳಿವೆ. 

ಪರಾಶರ ಸ್ಮೃತಿ ಯಲ್ಲಿ ಸ್ಮೃತಿಯ ಉದ್ದೇಶ ವರ್ಣಾಶ್ರಮ ಧರ್ಮವನ್ನು ವ್ಯವಸ್ಥಿತಗೊಳಿಸುವುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಇದು ಸಮಾಜ ಸರಿಯಾಗಿ ಸಾಗಲು ನಾಲ್ಕು ರೀತಿಯ ಕೆಲಸಗಳು ಅಗತ್ಯವಾಗಿದ್ದು ಅವನ್ನು ನಡೆಸಿಕೊಂಡು ಹೋದರೆ ಮಾತ್ರ ಸಮಾಜ ಆರೋಗ್ಯಕರವಾಗಿರುತ್ತದೆ, ಆದ್ದರಿಂದ ಇವನ್ನು ಮುನ್ನಡೆಸಿಕೊಂಡುಹೋಗಬೇಕೆಂದು ಸ್ಪಷ್ಟಪಡಿಸಲಾಗಿದೆಯಾದರೂ ವರ್ಣ ಹುಟ್ಟಿನಿಂದ ಬರುವುದಲ್ಲ, ಅದೊಂದು ಅರ್ಹತೆ ಅನ್ನಲಾಗಿದೆ. ಹುಟ್ಟಿನಿಂದ ಬ್ರಾಹ್ಮಣನಾಗಿ ಬ್ರಾಹ್ಮಣ ಧರ್ಮವನ್ನು ಅನುಸರಿಸದಿದ್ದರೆ ಆತನನ್ನು ಬ್ರಾಹ್ಮಣ ಅನ್ನಲಾಗದು ಎಂದು ಹೇಳಲಾಗಿದೆ. ಶಿಸ್ತುಬದ್ಧವಾಗಿ ನಿಷ್ಠೆಯಿಂದ ತನ್ನ ಕೆಲಸ ಮಾಡುವ ಶೂದ್ರ ಇಂಥ ಬ್ರಾಹ್ಮಣನಿಗಿಂತ ಶ್ರೇಷ್ಠ ಅನ್ನಲಾಗಿದೆ, ದಾನ ಕೊಡುವಾಗ ಯಾರಿಗೆ ಹೆಚ್ಚು ಅಗತ್ಯವಿದೆಯೋ ಅವರಿಗೆ ದಾನ ಕೊಡುವುದು ಒಳಿತು ಎಂಬ ಕಿವಿ ಮಾತು ಕೂಡ ಬರುತ್ತದೆ. ದಾನವನ್ನು ಬ್ರಾಹ್ಮಣರಿಗೇ ಕೊಡಬೇಕು ಎಂದಿಲ್ಲ, ಬ್ರಾಹ್ಮಣನಾದರೂ ಆ ಧರ್ಮವನ್ನು ಅಂದರೆ ಬ್ರಾಹ್ಮಣರಿಗೆ ವಿಧಿಸಲಾದ ವಿಧಿ ನಿಷೇಧಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವವರು ಮಾತ್ರ ದಾನ ಪಡೆಯಬಹುದು ಎಂದು ತಿಳಿಸಲಾಗಿದೆ. ಈ ಸ್ಮೃತಿಯಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಆಪತ್ಕಾಲದಲ್ಲಿ ತಮಗೆ ವಿಧಿಸಲಾದ ಧರ್ಮ ಕರ್ಮದ ವ್ಯತ್ಯಯದಲ್ಲಿ ವಿನಾಯ್ತಿ ಕೊಡಲಾಗಿದೆ. ಯಾವುದೇ ಆಪತ್ತಿನ ಕಾಲದಲ್ಲಿ ಜೀವ ರಕ್ಷಣೆ ಮೊದಲು ಅನಂತರ ಧರ್ಮ ಎಂದು ಇದು ಹೇಳುತ್ತದೆ. ಧರ್ಮಕ್ಕಾಗಿ ಜೀವಕೊಡು ಎಂದು ಹೇಳುವುದಿಲ್ಲ, ಜೀವನ್ ಭದ್ರಾಣಿ ಪಶ್ಯತಿ ಎಂಬುದಕ್ಕೆ ಇದು ಸಮರ್ಥನೆ ಕೊಡುತ್ತದೆ. ರೋಗಿಗಳು, ಮಕ್ಕಳು ಮತ್ತು ಮಹಿಳೆಗೆ ಅನೇಕ ವಿನಾಯ್ತಿಗಳನ್ನು ಇದು ಕೊಡುತ್ತದೆ. ಇನ್ನೊಂದು ಮುಖ್ಯ ಸಂಗತಿ ಎಂದರೆ ಇದು ಆಹಾರದಲ್ಲಿ ಭೇದ ಮಾಡದೇ ಆಹಾರವನ್ನು ಹಾಳು ಮಾಡಬಾರದೆಂದು ಹೇಳುತ್ತದೆ. ಅಜ್ಞಾನದಿಂದ ಮನುಷ್ಯರು ಮಾಡುವ ಯಾವುದೇ ಬಗೆಯ ತಪ್ಪುಗಳಿಗೆ ಸರಳ ಪರಿಹಾರವನ್ನು ಪ್ರಾಯಶ್ಚಿತ್ತ ರೂಪಗಳಲ್ಲಿ ಹೇಳಲಾಗಿದ್ದು ಬಹುತೇಕ ಇಂಥ ಸಂಗತಿಗಳು ದುಬಾರಿಯಲ್ಲದ ವಿಧಾನಗಳನ್ನು ಸ್ವತಃ ಮಾಡಿಕೊಳ್ಳಬಹುದಾದ ರೀತಿಯಲ್ಲಿವೆ. ಅಲ್ಲದೇ ಆರೋಗ್ಯದ ದೃಷ್ಟಿಯಿಂದ ಪರಿಹಾರ ಹೇಳಲಾಗಿದೆ ಎಂಬುದು ಸೂಕ್ಷ್ಮವಾಗಿ ಗಮನಿಸಿದಾಗ ಅರಿವಾಗುತ್ತದೆ.ಹೀಗೆ ಸಮಕಾಲೀನ ಯೋಚನೆಗಳಿಗೆ ಸಮೀಪ ಅನಿಸುವ ವಿಚಾರಗಳು ಇದರಲ್ಲಿ ಸಾಕಷ್ಟಿವೆ. ಯಾವುದೇ ಜೀವಿಯನ್ನಾಗಲಿ ವೃಥಾ ಹಿಂಸಿಸಬಾರದು, ಪೀಡಿಸಬಾರದೆಂಬ ಸಮಕಾಲೀನ ಮಾನವೀಯ ಮೌಲ್ಯವನ್ನು ತಿಳಿಸುತಯೀ ಯುಗದ ಮನುಷ್ಯರ ಬಗ್ಗೆ ಕೆಲವು ಮಾತುಗಳನ್ನು ಸ್ಪಷ್ಟಮಾಡಲಾಗಿದೆ. ಇವುಗಳಲ್ಲಿ ಒಂದು ಮಾತು ಹೀಗಿದೆ- ಕಲಿಯುಗದ ಮನುಷ್ಯರು ಉಳಿದ ಯುಗಕ್ಕಿಂತ ಅಲ್ಪಾಯುಷಿಗಳು.ಶಾರೀರಿಕವಾಗಿ, ಮಾನಸಿಕವಾಗಿ ದುರ್ಬಲರು, ಕೃತಯುಗದಲ್ಲಿ ಮಾನವನ ಆಯಸ್ಸು ೪೦೦ ವರ್ಷವಾದರೆ ಕಲಿಯುಗದಲ್ಲಿ ಇದು ೧೦೦ ವರ್ಷ ಅನ್ನಲಾಗಿದೆ, ಇದು ನಿಜ. ನಮ್ಮಲ್ಲಿ ಯಾರಾದರೂ ನೂರು ವರ್ಷ ಪೂರೈಸಿದ್ದರೆ ಅದು ಸಂಭ್ರಮದ ಸಂಗತಿ.ಕಯುಗದಲ್ಲಿ ಪ್ರಾಣ ಅನ್ನಗತ. ಅಂದರೆ ಆಹಾರ ಬದ್ಧ ಅನ್ನಲಾಗಿದೆ. ಬ್ರಾಹ್ಮಣರು ಉದರ ನಿರ್ವಹಣೆಗೆ ಕೃಷಿ ಮಾಡಬಹುದೆಂದೂ ಹಸುಗಳನ್ನು ಸಾಕಬಹುದೆಂದು ಹೇಳುತ್ತದೆ. ಉಳಿದ ಬಹುತೇಕ ಸ್ಮೃತಿಗಳಂತೆ ಬ್ರಾಹ್ಮಣರಿಗೆ ಕೃಷಿ ನಿಷೇಧ ಎಂದು ಹೇಳುವುದಿಲ್ಲ.ಬಹುಶಃ ಈ ಮಾತನ್ನು ಅನುಸರಿಸಿಯೇ ಹವ್ಯಕ, ಸಂಕೇತಿ ಹೊಯ್ಸಳ ಕರ್ನಾಟಕ ಮೊದಲಾದ ಬ್ರಾಹ್ಮಣ ಪಂಗಡಗಳು ಇಂದಿಗೂ ಕೃಷಿ ಹಾಗೂ ಪಶುಸಾಕಣೆ ಮಾಡುತ್ತಿವೆ. ಇಂಥ ಹಲವು ಆದರ್ಶದ ದಾರಿಗಳು ಇದರಲ್ಲಿವೆ. ಈ ಕೃತಿಯಲ್ಲಿನ ಇನ್ನೊಂದು ಮುಖ್ಯ ಸಂಗತಿ ಎಂದರೆ ಪ್ರಾಯಶ್ಚಿತ್ತ ಪ್ರಕರಣ. ಮುಖ್ಯವಾಗಿ ಯಾವುದೇ ಸಂದರ್ಭದಲ್ಲಿ ಸ್ತ್ರೀಯನ್ನು ದೋಷಿಸಬಾರದೆಂದು ಈ ಸ್ಮೃತಿ ತಿಳಿಸುತ್ತದೆ. ವ್ಯಕ್ತಿ ತನಗೆ ಯಾವ ರೀತಿಯ ಜೀವನ ಸರಿಹೊಂದುತ್ತದೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದೆಂದು ಹೇಳುವ ಇದು ಒಮ್ಮೆ ಅಂಥ ಆಯ್ಕೆ ಆದಮೇಲೆ ಆಯಾ ಕ್ರಮಕ್ಕೆ ನಿಷ್ಠವಾಗಿರಬೇಕೆಂಬ ಮಾತನ್ನೂ ಹೇಳುತ್ತದೆ.ಅಂದರೆ ವ್ಯಕ್ತಿಗೆ ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿಯನ್ನೂ ವಿಧಿಸುತ್ತದೆ. ಜೊತೆಗೆ ರಾಜನಾದವನು ಜನರು ಸೋಮಾರಿಗಳಾಗುವ ದಾರಿಯನ್ನು ತೋರಿಸಬಾರದೆಂದು ಹೇಳುತ್ತದೆ. ವ್ಯಕ್ತಿಯ ವರ್ತನೆಗೆ ಹೆಚ್ಚು ಒತ್ತು ಕೊಡುವ ಇದು ಎಲ್ಲ ಸಂದರ್ಭಗಳಲ್ಲೂ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಳ್ಳುತ್ತದೆ.  ಇಂಥ ಹತ್ತಾರು ವಿಶಿಷ್ಟವೆನಿಸುವ ಮಾತು ಮತ್ತು ನಿರ್ದೇಶನಗಳಿರುವ ಈ ಸ್ಮೃತಿಯನ್ನು ಗಂಭೀರವಾಗಿ ಚರ್ಚಿಸುವ ಅಗತ್ಯ ಈ ಕಾಲದಲ್ಲಿ ಹೆಚ್ಚಾಗಿದೆ. 


ಕೃತಿ ವಿವರ:

ಪರಾಶರ ಸ್ಮೃತಿ, ಚಕ್ರಕೋಡಿ ಈಶ್ವರ ಶಾಸ್ತ್ರಿ (ಸಂ)

ಸಮಾಜ ಪುಸ್ತಕಾಲಯ, ಧಾರವಾಡ, ೨೦೨೧, ಬೆಲೆ-೧೨೦ ರೂ.